Saturday, May 23, 2009

ಕಪಿಲಾಪುರದ ಕಥೆ



(ಆತ್ಮೀಯರೇ...ನನಗೆ ಬಹಳ ದಿನಗಳಿಂದ ಕಾಡಿಸುತ್ತಿದ್ದ ಒಂದು ವಿ.ವಿ. ಉಪಕುಲಪತಿ ನೇಮಕಾತಿಯ ಹಗರಣವೊಂದನ್ನು ಬಿಂಬಿಸಲು ಭೇತಾಳನ ಕಥೆಯನ್ನು ಆರಿಸಿಕೊಂಡೆ ಪ್ರಸ್ತಾವನಾ ಮಾಧ್ಯಮವಾಗಿ, ನಿಮ್ಮ ಟಿಕೆ ಟಿಪ್ಪಣಿಗಳಿಗೆ ತುಂಬು ಮನಸ್ಸಿನ ಸ್ವಾಗತ)

ಮಹಾನಗರ, ಅಸೆಂಬ್ಲಿ, ಪಾರ್ಲಿಮೆಂಟ್ ಹೀಗೆ ಎಲ್ಲಾ ಚುನಾವಣೇಲೂ ಹಿಗ್ಗಾ ಮುಗ್ಗಾ ಸೋತರೂ ಮತ್ತೆ ಬೈ ಎಲೆಕ್ಷನಿಗೆ ನಿಲ್ಲುವ ಸಾಹಸಮಾಡುವ ಪುಢಾರಿಯಂತೆ ಹಠಬಿಡದ ಶತವಿಕ್ರಮ ಸುಡುಗಾಡಿನ ಬಳಿಯ ಬಿಕೋ ಎನ್ನುವ ಧೂಳುತುಂಬಿದ ಬೀಡಲಿ ಒಂಟಿ ಭೂತದಂತೆ ನಿಂತಿದ್ದ ಮುಳ್ಳುಜಾಲಿ ಮರಕ್ಕೆ ನೇತುಬಿದ್ದಿದ್ದ ಭೇತಾಳನನ್ನು ಹೆಗಲಿಗೇರಿಸಿ ಕ್ರೆಮೆಟೋರಿಯಂನ ವಾಹನದ ಕಡೆ ನಡೆಯುತಿರಲು... ಮಹತ್ವದ ಮೀಟಿಂಗ್ ನಡೆಯುವಾಗ ಎಲ್ಲರನ್ನೂ ಡಿಸ್ಟರ್ಬ್ ಮಾಡುವ ಮೊಬೈಲ್ ರಿಂಗ್ ಟೋನಿನಂತೆ..ನಿರ್ಜೀವ ನಿಶ್ಶಬ್ದವಾಗಿದ್ದ ಭೇತಾಳ ಮಾತನಾಡತೊಡಗಿತು...
"ಎಲೈ ... ಕುರ್ಚಿಸಿಗಲೆಂದು ಆ ಪಕ್ಷದಿಂದ ಈ ಪಕ್ಷ, ಈ ಪಕ್ಷದಿಂದ ಉ ಪಕ್ಷಕ್ಕೆ ನೆಗೆಯುವ ಪುಢಾರಿಯಂತೆ ಏನೂ ನನ್ನಿಂದ ನಿನಗೆ ಸಿಗುವುದು ಆಸಾಧ್ಯವೆಂದು ತಿಳಿದರೂ ನನ್ನ ಬೆನ್ನ ಹಿಂದೆ ಬಿದ್ದಿರುವ ನಿನ್ನ ಸಣಕಲು ದೇಹಕ್ಕೆ ನನ್ನಹೆಣ ಭಾರದ ತೂಕದ ಅರಿವಾಗದಂತೆ ಕಥೆಯೊಂದನ್ನು ಹೇಲುತ್ತೇನೆ ಕೇಳು" ಎಂದಿತು
"ಕಪಿಲಾಪುರದ ಕಪಿಲಭಾಷೆ ಅಭಿವೃದ್ಧಿ, ಭಾಷೆಯ ಬೆಳವಣಿಗೆ ಮತ್ತು ಸಂಶೋಧನೆಗೆಂದೇ ಮೀಸಲಾಗಿದ್ದ ಕಂಪಲಾ ವಿಶ್ವವಿದ್ಯಾನಿಲಯ ಅದರ ಉಪಕುಲಪತಿ ಕಸ್ತೂರಮ್ಮ ತಮ್ಮ ಅಧಿಕಾರಾವಧಿಯಲ್ಲಿ ವಿಶ್ವ ವಿದ್ಯಾಲಯಕ್ಕೆ ಅಮೋಘ ಯಶಸ್ಸು ಮತ್ತು ಹೆಸರನ್ನು ತಂದುಕೊಟ್ಟರು. ಅವರ ಕಾರ್ಯಾವಧಿ ಮುಗಿಯಲು ಆ ಸ್ಥಾನಕ್ಕೆ ಕಂಪಲಾಪುರದ ಪ್ರತಿಭಾನ್ವಿತ ಪ್ರೊ.ನೀಲಾಂಬಿಕೆ ಮತ್ತು ಬತ್ತೊಬ್ಬ ನಾಡಿನ ಪ್ರತಿಭೆ ಡಾ. ಕುಸುಮಕ್ಕ ಬಹು ಚರ್ಚಿತ ಹೆಸರುಗಳಾಗತೊಡಗಿದವು. ಆದರೆ ಕಪಿಲಾಪುರದ ಮು.ಮಂ. ಕನಕಪ್ಪ ಮತ್ತು ಉ.ಮು.ಮಂ. ತಮ್ಮ ಜಾತಿಯವಳೆಂದು ನೀಲಾಂಬಿಕೆಯ ಹೆಸರು ಸೂಚಿಸಿದರೆ ಪಕ್ಷದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ಮುಖಂಡ ತಮ್ಮ ಜಾತಿಗೆ ಸೇರಿದ ಕುಸುಮಕ್ಕನನ್ನೇ ಆ ಸ್ಥಾನಕ್ಕೆ ನಿಯೋಜಿಸಬೇಕೆಂದು ಪಟ್ಟು ಹಿಡಿದುಕುಂತರು. ವಿಷಯವನ್ನು ನಿಷ್ಪಕ್ಷವಾಗಿ ವಿಚಾರಿಸಿ ತಮಗೆನೆಸಿದಂತೆ ನಿರ್ಧಾರ ತೆಗೆದುಕೊಳ್ಳಬಹುದೆಂದು ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿದ್ದ ಸರ್ಕಾರ ಕುಲಪತಿಗಳಿಗೆ ತನ್ನ ಇಂಗಿತವನ್ನು ಸೂಚಿಸಿತು. ಹಾಗೆ ನೋಡಿದರೆ ಇದು ಕುಲಪತಿಯವರ ಸ್ವತಂತ್ರ ಕಾರ್ಯವ್ಯಾಪ್ತಿಯ ವಿಷಯವಾದರೂ ಸರ್ಕಾರದ "ಇಂಗಿತ" ವೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಕಪಿಲಾಪುರದ ಅಲಿಖಿತ ನಿಯಮ. ಹೀಗಾಗಿ ಈಗ ಕುಲಪತಿಗಳಿಗೆ ತಮ್ಮ ಮನಸೇಚ್ಛೆ ಉಪ ಕುಲಪತಿಯನ್ನು ಆರಿಸುವ ಚಾನ್ಸ್ ಸಿಕ್ಕಿದ್ದು..ವೈದ್ಯ ಹೇಳಿದ್ದು ಹಾಲು-ಅನ್ನ ರೋಗಿ ಬಯಸಿದ್ದು ಹಾಲು-ಅನ್ನ ಎನ್ನುವಂತಾಯಿತು. ಸಿಕ್ಕ ಅವಕಾಶವನ್ನು ಚನ್ನಾಗಿಯೇ ಉಪಯೋಗಿಸಿಕೊಂಡ ಪಕ್ಕದ ಪ್ರಾಂತ ಇಂಪಲಾಪುರದವನಾದ ಕುಲಪತಿ ತನ್ನಜಾತಿಯ ಇಂಪು ಭಾಷೆಯ ಪಂಡಿತೆ ಇಂಪಲಾಪುರದ ಪ್ರೊ. ಸಂಪೂರ್ಣೇಶ್ವರಿಯನ್ನು ನೇಮಿಸಿಯೇ ಬಿಟ್ಟರು.
ವಿಷಯ ಕಪಿಲಾಪುರದ ಗಲ್ಲಿ-ಗಲ್ಲಿಗಳಲ್ಲಿ ಗುಲ್ಲೆಬ್ಬಿಸಿ ಕಪಿಲಭಾಷಾ ಜಾಗರಣಾ ಸಮಿತಿ ಹೋರಾಟಕ್ಕಿಳಿದು ಸರ್ಕಾರಕ್ಕೆ ಇರಿಸು-ಮುರಿಸಿಗೆ ಕಾರಣವಾಗತೊಡಗಿತು. ಚಳುವಳಿಯ ತೀವ್ರತೆ ಹೆಚ್ಚಾಗಿ, ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ವಿಚಾರಣೆಗೆ ಬಂದೇ ಬಿಡ್ತು..ನ್ಯಾಯಾಲಯ ಕಪಿಲ ಭಾಷಾ ವಿ.ವಿ.ಗೆ ಇಂಪು ಭಾಷೆಯ ಪ್ರೊಫೆಸರ್ ನೇಮಕಕ್ಕೆ ಆಕ್ಷೇಪಣೆ ಎತ್ತಿಹಿಡಿದು, ಸರ್ಕಾರದ ಕ್ರಮವನ್ನು ಅನೂರ್ಜಿತಗೊಳಿಸಿ, ಕಪಿಲಾಪುರದ ಅರ್ಹ ಪ್ರತಿಭಾವಂತರ ಪಟ್ಟಿಯೋದನ್ನು ಮಾಡಿ ಸರ್ಕಾರಕ್ಕೆ ಸೂಚಿಸಬೇಕೆಂದು ಆ ಕಾರ್ಯಕ್ಕೆಂದು ಆಯೋಗವೊಂದನ್ನು ರಚಿಸಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿ ಅದುವರೆಗೂ ಪೂರ್ವ ಉಪ ಕುಲಪತಿಯವರೇ ಮುಂದುವರೆಯಿವಂತೆ ತೀರ್ಪುಕೊಟ್ಟಿತು".
"ಎಲೈ ಶತ ವಿಕ್ರಮನೇ ನನಗೆ ಕೆಲವು ಸಂದೇಹಗಳಿವೆ...ಮೊದಲನೆಯದಾಗಿ - ಮು.ಮಂ., ಉ.ಮು.ಮಂ., ವಿ.ಪ.ನಾಯಕ ಇವರು ಪರಸ್ಪರ ಲೇವಾದೇವಿಯ (ಎಲ್ಲ ವಿಷಯಗಳಲ್ಲಿ ಮಾಡುವಂತೆ) ಅಧಾರದ ಮೇಲೆ ಯಾರನ್ನಾದರೂ ತಾವೇ ಆರಿಸಬಹುದಿತ್ತಲ್ಲ ಹಾಗೇಕೆ ಮಾಡಲಿಲ್ಲ..? ಎರಡನೇ ಸಂದೇಹ ..ಕುಲಪತಿ ತನ್ನ ಆದೇಶವನ್ನು ಯಾರಾದರೂ ಪ್ರಶ್ನಿಸಬಹುದು ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಉಪಯೋಗಿಸಲಿಲ್ಲವೇಕೆ?....ನಿನ್ನ ಮುತ್ತಾತಂದಿರಂತೇ..ನನ್ನ ಈ ಸಂದೇಹಗಳನ್ನು ತಿಳಿದೂ ಪರಿಹರಿಸದೇ ಹೋದರೆ ನಿನ್ನ ತಲೆ ತಾಲಿಬಾನ್ ಗಳು ಅಂಧ- ಧರ್ಮಾನುಕರಣೆ ಎಂಬ ಸುಳ್ಳು ನೆಪಗಳ ಹೆಸರಿನಲ್ಲಿ ವಿನಾಕಾರಣ ಅಮಾಯಕರ ಹತ್ಯೆಗೆ ಉಪಯೋಗಿಸುವ ಚೀನಾದ ಬಾಂಬಿನಂತೆ ಸಿಡಿದು ಹೋದೀತು, ಎಚ್ಚರಿಕೆ" ಎಂದು ತನ್ನ ಕೊರೆತವನ್ನು ಮುಗಿಸಿತ್ತು ಭೇತಾಳ.
"ಹೇ ತಾಳವಿಲ್ಲದ ಭೇತಾಳನೇ, ನನ್ನ ಇಷ್ಟಾಯಿಷ್ಟದ ಪರಿವೆಯೇ ಇಲ್ಲದೇ lecture ಕೊರೆಯುವ ಪ್ರೊಫೆಸರುಗಳಂತೆ ನಿನ್ನ ತಲೆಬುಡವಿಲ್ಲದ ಕಥೆ ಹೇಳಿ ..ಎಷ್ಟೇ ಮನವಿ ಮಾಡಿಕೊಂಡರೂ ಅರ್ಥವಾಗದೇ ಸಭಾ ಭವನದಲ್ಲೇ ಕಿರಿಚಾಡುವ ವಿರೋಧ ಪಕ್ಷದವರಂತೆ ಅರ್ಥವಿಲ್ಲದ ಮತ್ತು ವಿವೇಚನಾ ವಿಹೀನ ಪ್ರಶ್ನೆಯನ್ನು ಕೇಳಿದ್ದೀಯೆ,,ಪರವಾಗಿಲ್ಲ..ನನ್ನ ಉತ್ತರ ಕೇಳು...
ಮು.ಮಂ., ಉ.ಮು.ಮಂ. ಅಥವಾ ವಿ.ಪ.ನಾಯಕ ಇವರುಗಳಿಗೆ ಇದ್ದದ್ದು ಕಡೆಯ ವರ್ಷ ಹಾಗಾಗಿ..ಮುಂದೆ ಚುನಾಯಿತರಾಗಿ ಬರುವರೋ ಇಲ್ಲವೋ ಎಂಬುದು ಅವರಿಗೇ ಅನುಮಾನವಾಗಿತ್ತು.ಈ ಅಂಶ ನಿನ್ನ ಮಿದುಳಿಲ್ಲದ ಬುರುಡೆಗೆ ಹೇಗೆ ಹತ್ತೀತು..?.ಹೀಗಿರುವಾಗ ತಮ್ಮ ಆಯ್ಕೆಯನ್ನು ಮುಂದಿಟ್ಟಿದ್ದರು.
ಇನ್ನು ನಿನ್ನ ಎರಡನೇ ಸಂದೇಹ ಮೊದಲನೆಯದಕ್ಕಿಂತ ಮೂರ್ಖ ಸಂದೇಹ...ಏಕೆಂದರೆ..ಕಪಿಲಾಪುರದವರು ತಮ್ಮ ನೆಲದಲ್ಲಿ ಇಂಪಲಾಪುರ, ಟೆಂಪಲಾಪುರ ಅಲ್ಲದೇ ಮಂಪಲಾಪುರದವರನ್ನು ಬೇರೂರಲು ಬಿಟ್ಟಿದ್ದರು..ಹೀಗಿರುವಾಗ ಯಾವುದೇ ಪ್ರತಿರೋಧ ಇರುವುದಿಲ್ಲವೆಂದು ಕುಲಪತಿ ಅತಿ ಜಾಣತನ ತೋರಿದ್ದ..."
"ಭಲೇ ಶತವಿಕ್ರಮ ನಿನ್ನ ಬುದ್ಧಿವಂತಿಕೆ ಮೆಚ್ಚುವಂತಹುದು...ಆದರೆ ನೀನು ಮೌನ ಮುರಿದೆ..."
ಎನ್ನುತ್ತಾ ಕರ್ಕಶವಾಗಿ ಊಳಿಡುತ್ತಾ ನಾಯಿಯರೂಪ ಧರಿಸಿ ಶತವಿಕ್ರಮನ ಹೆಗಲಿಂದ ಜಾರಿ ಓಡಿ ಮತ್ತೆ ಜಾಲಿಮರದ ಕೊಂಬೆಗೆ ನೇತಾಡತೊಡಗಿತು.

(ಚಿತ್ರ: ಭೇತಾಳನ ಕಥೆಗಳು ಚಂದಮಾಮ ಪತ್ರಿಕೆ, ಅಂತರ್ಜಾಲ ಕೃಪೆ)