Saturday, July 20, 2019

ಕೆಲವು ಹಾಯ್ಕುಗಳು...ಒಂದು ಕವನ

ಸ್ನೇಹ


ಎರಡು ಎಳೆ
ಮಧ್ಯದಲಿ ಇಹುದು
ಅದುವೇ ಸ್ನೇಹ

ಕಮಟು ನಾತ
ಹೆಚ್ಚಾಯಿತಂದ್ರೆ ಗೋತ
ರೋಗಕ್ಕೆ ಸ್ನೇಹ

ಸಂಪದ ಪದ
ಸಂಪನ್ನರಿರುವೆಡೆ
ಒಂಥರಾ ಸ್ನೇಹ

ನಾನು ಕಬ್ಬಿಣ
ಅವಳೋ ಆಯಸ್ಕಾಂತ
ನಮ್ಮದೂ ಸ್ನೇಹ

ಅಪ್ಪ ಮಗಳು
ತಂದೆ ತಾಯಿ ಮಕ್ಕಳು
ಹೀಗಿದೆ ಸ್ನೇಹ

ಬಿಸಿಲ ಬಸಿರು

ಬೇಸಿಗೆಯಲಿದೆ ಬೇಗೆ
ಅದು ಹೇಳಿ ಹೇಗೆ?
ಹೊತ್ತಿಸಿ ನೋಡು
ಒಣ ತೆಂಗಿನ ಸೋಗೆ.

ಬಿಸಿಲ ಬಸಿರೊಳಗೆ
ಉಸುರಿನಲಿದೆ ಬೇಗೆ
ಹಸಿರೆಲೆಯ ಹಾದಿ
ತಂಪು ಇಂಪಾದ ಗಾದಿ.

ಕಣ ಕಣಜಕೆ ಕಾಳು
ಧಣಿ ದಣಿದವನ ಬಾಳು
ಎಸರೆಸರಲಿ ಕನಸು
ಹನಿ ಹನಿದರೆ ನನಸು.

ಮಣ್ಣಲಿ ಅಡಕವಾಗಿದೆ
ಕಣ್ಣರಳಿಸುವ ಮಣ
ಹಣವೆನೆ ಬಾಯ್ಬಿಡುವುದು
ಹೂತಿಟ್ಟ ಸುಟ್ಟ ಹೆಣ.

ಬಾಯ್ಬಿಟ್ಟಿದೆ ಬಿರಿದ ನೆಲ
ಜಲಬಿಂದುವಿನಾಸೆಯಲಿ
ಬಿರಿದ ಒಡಲು ಬಾಳೆ ಮೀನು
ಮೋಡ ಕರಗಿ ಹನಿಯಲಿ.

ಕತ್ತೆ ಮೆರವಣಿಗೆಯಲಿ
ಕಪ್ಪೆರಾಯನು ದಿಬ್ಬಣ
ಮಳೆರಾಯನನು ಕೂಗಿ
ಕರೆಯುತಿದೆ ಓಣಿ ಬಣ.

Sunday, June 30, 2019

ಮಾಗಿ


ವಿಷಯ: ಮಾಗಿ
ಮಾಗಿ ಅಂದಕ್ಷಣ – ಚಳಿ ನೆನಪಾಗುತ್ತೆ, ಚಳಿಗಾಲದ ಕುವೈತಿನಲ್ಲಿ ಇತ್ತೀಚೆಗೆ ಕಂಡ ಅನುಭವಿಸಿದ ಕಡುಚಳಿ ಬಗ್ಗೆಯಾದರೂ ಬರೆಯಬಹುದಲ್ವಾ? ಸಂಪದ ಸಂಪನ್ನರಲ್ಲಿ ಯಾಕೋ ಯೋಚನಾ ಲಹರಿಯೂ ಚಳಿಗೆ ನಡುಗಿತ್ತು,ವಿಷಯ ತಿಳಿದೊಡನೆ.
ಇರಲಿ
ಮಾಗಿ – ಮ,ನ. ಜವರಯ್ಯನವರ ಕಾದಂಬರಿ - ರಾಜ್ಯ ಸಾಹಿತ್ಯ ಆಕಾಡಮಿ ಪ್ರಶಸ್ತಿ ಪಡೆದ ಕೃತಿ.
ಮಾಗಿ – ಹಾಡೇ ಇದೆಯಲ್ಲಾ – ಮಾಗಿಯ ಚಳಿಯಲ್ಲಿ ಈ ಬಿಸಿಯೇಕೋ
ಸಂಕ್ರಮಣ ಬಂತೆಂದರೆ ಮಾಗಿ ತನ್ನ ಗಂಟು ಮೂಟೆ ಕಟ್ಟಬೇಕಾದ್ದೇ ಎನ್ನುವುದು ನಾಡಿನಲ್ಲಿ ಎಲ್ಲರ ಅಂಬೋಣ. ಆದರೆ ಇಲ್ಲಿ ಮರಳುನಾಡಿನಲ್ಲಿ ಮಾಗಿ ನಮ್ಮನ್ನು ಮಾಗಿಸುತ್ತಿದೆ ಚಳಿಯಲ್ಲಿ ಎಂದರೆ ತಪ್ಪಿಲ್ಲ. ಹೊರಗಡೆ ಬೆಚ್ಚಡಕ್ಕೆ ಹೀಟರ್ (ಈಗ ಕುವೈತ್ ಮಂತ್ರಾಲಯ ಇದಕ್ಕೆ ತಡೆಯಾಜ್ಞೆ ತಂದಿದೆಯಂತೆ), ಮಧ್ಯೆ ಕಂಬಳಿ, ರಜಾಯಿ, ಬ್ಲಾಂಕೆಟ್ ಇತ್ಯಾದಿ..ಅದಕ್ಕಿಂತ ಸ್ವಲ್ಪ ಒಳಗೆ -ಸ್ವೆಟರ್..ಬೆವರೊಸರುಗ. ತಲೆಗೆ ಮಂಗನಟೋಪಿ, ಇನ್ನೂ ಒಳಗಿನ ಮಾತೆಂದರೆ..ಬೇಡ ಬಿಡಿ..ಅದನ್ನ ಅನುಭವಿಸಬೇಕು, ಹೇಳುವ ಬರೆಯುವ ಮಾತಲ್ಲ.
ಬೆಳಗ್ಗೆ ಏಳುವುದು ಅನಿವಾರ್ಯ ಎಂದಾಗ ಮಾಗಿಯನ್ನ ಚನ್ನಾಗಿ ಬೈತೀವಿ, ಇಲ್ಲವೆಂದಾಗ ಅಹಾ..ಬೆಚ್ಚಗೆ ಹೊದ್ದು ಮಲಗ್ತೀವಿ. ಮಕ್ಕಳನ್ನು ಎಬ್ಬಿಸುವುದೂ ಯಾವ ಅಶ್ವಮೇಧಕ್ಕಿಂತ ಕಡಿಮೆ ಸಾಧನೆಯಲ್ಲ. ರಜೆಯಿದ್ದರಂತೂ..ಜಪ್ಪಯ್ಯ ಅಂದ್ರ ಏಳೊಲ್ಲ...ತಿಂಡಿ ಸಮಯ ಮುಗಿದು ಊಟದ ಸಮಯಕ್ಕೆ ಎದ್ದರೆ ಪುಣ್ಯ.
ನಿಜಕ್ಕೂ ಅಡುಗೆಮನೆ ಜವಾಬ್ದಾರಿ ಹೊತ್ತ ಹೆಣ್ಣುಮಕ್ಕಳ ಸಾಹಸವನ್ನು ಒಪ್ಪಲೇಬೇಕು. ಅಷ್ಟುಬೆಳಗ್ಗೆ ನೀರಿಗೆ ಕೈ ಯಿಡುವುದು ಬೆಂಕಿಗೆ ಕೈಯಿಡುವುದಕ್ಕಿಂತ ಅಪಾಯಕಾರಿ, ಸುಟ್ಟೇಹೋಗುತ್ತೆ ಕೈ...ಉಸುಸುಸುಸು..ಅಂತ ಉಸುರೇ ಹೋಗುವಂತೆ ಆಗುತ್ತೆ. ಇದನ್ನ ನಾನು ಅನುಭವಿಸಿದ್ದರಿಂದ ಹೇಳ್ತಾ ಇದ್ದೇನೆ, ಪುಣ್ಯಕ್ಕೆ ನೀರಿನ ಹೀಟರ್ ಒಂದು ಬಕೆಟ್ ನೀರನ್ನು ಹೊರಬಿಟ್ಟಮೇಲೆ “ನಾನೂ ಇದ್ದೇನೆ, ಚಳಿಗೆ ನಡುಗುವವನಲ್ಲ” ಎನ್ನುವಂತೆ ಬಿಸಿನೀರನ್ನು ನಲ್ಲಿಯ ಮೂಲಕ ತಳ್ಳಿದ ಮೇಲೆ ಸ್ವಲ್ಪ ಉಸಿರಾಟ ಹದ್ದುಬಸ್ತಿಗೆ ಬರುತ್ತೆ.
ಸ್ನಾನಕ್ಕೆ ಹೋದರೆ ನನ್ನವಳು ಏನ್ರೀ ಅಷ್ಟು ಹೊತ್ತಿಂದ ಸದ್ದೇ ಇಲ್ಲ..ಬರೀ ನೀರು ಹೋಗುವ ಸದ್ದು..?? ಓಹ್..ಇನ್ನೂ ಬೆಚ್ಚಗಿನ ನೀರು ಬರ್ಲಿಲ್ವಾ..? ಅಂತ ತನ್ನ ಪ್ರಶ್ನೆಗೆ ತಾನೇ ಉತ್ತರ ಕೊಟ್ಕೊತಾಳೆ. ನಾನು ಆವಾಗಾವಾಗ ಶವರ್ ಜಲಪಾತಕ್ಕೆ ಕೈಯಿಡಲೋ ಬೇಡವೋ ಎನ್ನುತ್ತಾ ಕೈಯಿಟ್ಟು,, ಇದು ಚಳಿನೀರಿನ ಬಿಸಿಯೋ, ಬಿಸಿನೀರಿನ ಬಿಸಿಯೋ ಎನ್ನುವ ಗೊಂದಕ್ಕೆ ಬೀಳುವಂತೆ ಮಾಡಿದಾಗ ಹಿಂಜರಿಕೆಯಿಂದಲೇ ಮತ್ತೆ ಕೈಯಿಟ್ಟರೆ ಹಬೆಯಾಡುವ ನೀರು..ಅಂದಹಾಗೆ ಅತಿ ತಣ್ಣನೆಯ ನೀರೂ ಹಬೆಯಾಡುತ್ತೆ... ಮಾಗಿ ..ಇಲ್ಲೂ ಮೋಸ ಮಾಡುತ್ತೆ ನಮಗೆ..ಬಿಸಿನೋ ತಣ್ಣನೆ ನೀರೋ ನೀನೇ ನೋಡ್ಕೋ ಅಂತ..
ಅಂತೂ ಚಳಿಗಾಲ ನಮ್ಮ ದಿನನಿತ್ಯದ ಬದುಕನ್ನು ಮಾಗಿಸುತ್ತೆ, ಬಾಗಿಸುತ್ತೆ, ಬಳಕಿಸುತ್ತೆ ನಡುಗಿಸುತ್ತೆ..ಅಂದರೆ ತಪ್ಪಿಲ್ಲ. ಏನಂತೀರಿ?

ಕೆಲವು ಪದಕಟ್ಟು ಕವಗಳು
ಮಾಗಿಯು ಬಂತಲ್ಲ ಏನು ಮಾಡಲಿ?
ಮಡಿಲಿನ ಮಗುವನ್ನು ಬೆಚ್ಚಗಿಡಬೇಕು
ಬಡತನಕೆ ಇಲ್ಲ ಬೆಚ್ಚನೆ ಮನೆಸೂರು
ಮರೆಸುವುದೆಲ್ಲ ತಾಯ ಮಡಿಲು

ಮಾಡಲು ಕೆಲವಿಲ್ಲ ಚಳಿಗಾಲ
ಗಳಿಕೆಯಲಿ ಬರಲಿದೆ ಬರಗಾಲ
ಬರಿಗಾಲಲಿ ಹೇಗೆ ನಾ ನಡೆಯಲಿ?
ನಡುವಲಿ ಹೊಳೆಯ ಶೀತಲಜಲ

ಶೈಲಜೆಯ ನಲ್ಲಿಯ ನೀರು ಶೀತಲ
ಶಾಂತಲೆಗೆ ಸಿಗುವುದು ಬಿಸಿಜಲ
ಬಿಜಲಿಯ ಬಿಲ್ಲು ಅವಳಿಗೆ ಕೋಮಲ
ಕಾಲಮರೆಸುವುದು ಮಾಗಿಯ ಫಲ

Friday, April 5, 2019

ನೆಪ...ಬ್ಲಾಗ್ ಬರಹಕ್ಕೂ ನೆಪ ಬೇಕಾಯ್ತು...

ನೆಪ ಕುಂಟುತ್ತಾ?
(ಬ್ಲಾಗ್ ಬರಹಕ್ಕೂ ನೆಪ ಬೇಕಾಯ್ತು...ಧನ್ಯವಾದ ಬದರಿ)

Image result for Village teacher
ಶಾಲೆಯ ಮನೆ ಕೆಲಸ ಅಥವಾ ಹೋಮ್ ವರ್ಕ್ ಎಂದರೆ ನನಗೇನೂ ಬಹುಶಃ ಯಾರಿಗೂ ಇಷ್ಟವಾಗುತ್ತಿರಲಿಲ್ಲವೇನೋ..ಇದೇ ಕಾರಣವಾಗಿತ್ತು..ಹಲವು ಸಲ ಹುಣಿಸೆ ಬರ್ಲಿನಲ್ಲಿ (ಗಣಿತದ ಮೇಷ್ಟ್ರು) ಅಥವಾ ಮುಖ್ಯೋಪಾದ್ಯಾಯ (ಇಂಗ್ಲೀಷ್ ಟೀಚರು) ರ “ರೂಲರ್ ದೊಣ್ಣೆಯ” ಪೆಟ್ಟು ತಿಂದಿದ್ದೆ. ನಾನೇ ಅಲ್ಲ ಹಲವರು ತಿನ್ನುತ್ತಿದ್ದುದೇ ನನಗೂ ಸಮಾಧಾನದ ಅಂಶ ಆಗಿತ್ತು. ಹಾಗೆ ನೋಡಿದರೆ ಶಾಲೆಯಲ್ಲಿ ಏಟು ತಿಂದದ್ದು ಕಡಿಮೆಯೇ ಏಕೆಂದರೆ ಬಹುಪಾಲು “ಹೋಮ್ ವರ್ಕ್” ಶಾಲೆಯಲ್ಲೇ ಮುಗಿಸಿಬಿಡುತ್ತಿದ್ದೆ. ಅಪ್ಪಿ ತಪ್ಪಿ ಆಗಲಿಲ್ಲವೆಂದರೆ ಅದು ಮನೆಗೆ ಬಂದಮೇಲೆ ಆಗುವುದಂತೂ ಎಷ್ಟು ಶತ ಸಿದ್ಧವಾಗುತ್ತಿತ್ತೋ ಅಷ್ಟೇ ಶತ ಸಿದ್ಧ.. ಬರ್ಲು ಅಥವಾ ರೂಲರ್ ನ ಅಂಗೈ ಮೇಲೆ ನರ್ತನ..ಜೊತೆಗೆ ನಮ್ಮದೂ ಆಗ್ತಿತ್ತು…ಛಟೀರ್ ಅಂತ ಒಂದು ಬರ್ಲಿನ ಪೆಟ್ಟು ಸಾಕಲ್ವೇ.. ಇನ್ನು ರೂಲರ್ ನಿಧಾನಕ್ಕೇ..ಗೆಣೆಮೇಲೆ ಬೀಳುತ್ತಿದ್ದುದು.., ಆದರೆ ನೋವು ಮಾತ್ರ ಅಪಾರ.
          ಇದೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ… ಆಗ ಗುರುಗಳು ಗುರ್ರಾಯಿಸಿ ಜೋರಾಗಿ ಹೊಡೀತಾ “ನೆಪ” ಹೇಳ್ತೀಯಾ ಭಡವಾ ಎನ್ನುತ್ತಿದ್ದಾಗ.. ಈ “ನೆಪ” ಪದ ಏಟಿನ ಜೊತೆ ಅವಿನಾಭಾವ ಸಂಬಂಧ ಹೇಗೆ ಹೊಂದಿದೆ ಎನ್ನುವ ನೆನಪಾಗಿ. ಆ ನೆನಪು ಬರಲೂ ಕಾರಣವಿದೆ.. ಫೇಸ್ಬುಕ್ ಅಂದ್ರೆ ಏನೋ ಒಂದು ಗೀಳು ಎನ್ನುವುದು ನಿಜವಾದರೂ ಈ ಸಾಮಾಜಿಕ ಜಾಲತಾಣ ಎಷ್ಟೋ ಹಳೆಯ ಸಂಬಂಧಗಳಿಗೆ ಹೊಸ ಜಾಡುಕೊಟ್ಟಾಗ ಅನಿಸುವುದು…”ಧನ್ಯವಾದ ಫೇಸ್ಬುಕ್”. ನೆನ್ನೆ ಹೀಗೆಯೇ ಸ್ನೇಹಿತನೊಬ್ಬನ ಮೂಲಕ ನನ್ನ ಪ್ರಾಥಮಿಕ ಶಾಲಾ ಗಣಿತದ ಮೇಷ್ಟ್ರ ಅಚಾನಕ್ ಸಂದೇಶ ಬಂದಿತ್ತು. ಚನ್ನಪ್ಪ ಮಾಸ್ತ್ರ ಹೆಸರಷ್ಟೇ “ಹುಣಿಸೆ ಬರ್ಲೂ” ಪರಿಚಿತವಾಗಿತ್ತು ನಮ್ಮಲ್ಲಿ ಹಲವರಿಗೆ. ಅವರ ನೆನಪಿನೊಡನೆಯೇ ನೆನಪಿಗೆ ಬಂದಿದ್ದು “ಮನೆಕೆಲ್ಸ ಮಾಡಿಕೊಂಡು ಬರ್ದೇ ನೆಪ ಹೇಳ್ತೀಯಾ ಭಡವಾ” ಎನ್ನುತ್ತಾ ಅವಡುಗಚ್ಚಿ ಬರ್ಲಿನ ಮಧ್ಯದಲ್ಲಿ ಹಿಡಿತದ ಅವರ ಅಂಗೈ ಮೇಲೆ ನಡೆಸುತ್ತಿದ್ದ ಬರ್ಲು ನರ್ತನ. ನೆಪ ಎನ್ನುವ ಪದವೂ ನಮಗೆ ಒಂಥರಾ ಇಂಗ್ಲೀಷ್ ಪದದಂತೆಯೇ ಇತ್ತು…
ಈ ಪದವನ್ನು ಈ ದಿನ ವ್ಯುತ್ಪತ್ತಿಗಾಗಿ ಹುಡುಕಿದೆ “ಬರಹ ಅಂತರ್ಜಾಲ ನಿಘಂಟಿನಲ್ಲಿ”… ಅರೆ..ಏನಾಶ್ಚರ್ಯ …. ಹೀಗೆ ಬಂತು ಉತ್ತರ…
"ನೆಪ"
ಹುಡುಕು.........
ಸಿಗ್ತಿಲ್ಲ.....!!
(ನೆಪವೂ ಸಿಗ್ಲಿಲ್ಲ..ಹಹಹ)
ನಮ್ಮ ಚನ್ನಪ್ಪ ಮಾಷ್ಟ್ರಾಗಿದ್ದಿದ್ರೆ…”ನೆಪ ಹೇಳ್ತಿಯಾ ಭಡವಾ” ಅಂತ ಕೋ ಬೋರ್ಡಿನ ಮೇಲೆಯೇ ಬರ್ಲಿನ ನರ್ತನ ಮಾಡಿಸುತ್ತಿದ್ದರೋ ಏನೋ… !!
ಸಂಕ್ಷಿಪ್ತ ಕನ್ನಡ ನಿಘಂಟನ್ನು ನೋಡಿದೆ: ಅದರಲ್ಲಿ ನೆಪ ಮತ್ತು ನೆವ ಎರಡಕ್ಕೂ ಸಮಾನ ಅರ್ಥವಿತ್ತು. ನೆಪ= ಕಾರಣ, ಹೇತು (ಬರ್ಲಿನ ನರ್ತನ ಜೋರಾದರೆ ಅಂಗೈ ಮುಂದೆ ಮಾಡಿದವ ಇದನ್ನೂ ಮಾಡಿಕೊಳ್ಳುತ್ತಿದ್ದ…ಹಹಹ), ನಿಮಿತ್ತ, ಉದ್ದೇಶಪೂರ್ವಕವಾದ ನಟನೆ, ಯುಕ್ತಿ, ಕಪಟ, ಸಬೂಬು, ದೋಷಾರೋಪಣೆ, ಹೋಲಿಕೆ, ಸಾಮ್ಯ, ವಿಧ, ರೀತಿ, ಇತ್ಯಾದಿ.
ನಮಗೆ ಸಾಮಾನ್ಯ ಅರ್ಥ ಎನಿಸುವುದು- ಸರಿಯಾದ ಕಾರಣ ಕೊಡದೇ ಯಾವುದೋ ಒಂದು ಕೆಲಸ ಮಾಡದೇ ಏನೋ ಒಂದು ಕಾರಣ ಕೊಡುವುದು.
ಯಾಕೋ ಶಾಲೆಗೆ ಲೇಟು? – ಸೈಕಲ್ ಪಂಚರ್ ಆಗೋಯ್ತು ಸಾ; ಅಪ್ಪ ತ್ವಾಟಕ್ಕೆ ಕಳ್ಸಿದ್ದ ಸಾ, ಅಮ್ಮ ಅಪ್ಪಂಗೆ ಬುತ್ತಿ ಕೊಟ್ ಹೋಗು ಸಾಲೆಗೆ ಅಂದ್ರು ಸಾ… ನಮ್ದೂ ಕೆ ಅಮ್ಮೀದು ತಬೀಯತ್ ಖರಾಬ್ ಆಗಿತ್ತು ಸಾ…ಹೀಗೆ…
ನೆಪ – ಏಕೆ ಕೊಡುತ್ತೇವೆ ಅಥವಾ ಹೇಳುತ್ತೇವೆ?
ನಮ್ಮ ಯಾವುದೋ ಒಂದು ಕಾರ್ಯ ಲೋಪವನ್ನು ಸಮರ್ಥಿಸಿಕೊಳ್ಳುವುದು..
ನಮ್ಮ ಶಾಲೆಯಲ್ಲಿ.. ಶಾನುಭೋಗರ ಮಗ ಬಹಳ ಜಾಣ. ಅವನೊಮ್ಮೆ ಹೋಮ್ ವರ್ಕ್ ಮಾಡಿರಲಿಲ್ಲ. ಚನ್ನಪ್ಪನವ್ರಿಗೆ ಪರಮಾಶ್ಚರ್ಯ. ಆದರೆ ಶಿಸ್ತು ಅಂದ್ರೆ ಎಲ್ಲರಿಗೂ ಒಂದೇ..ಅಲ್ವಾ? ಸರಿ.. ಯಾಕೋ ವಾಸು ಹೋಮ್ ವರ್ಕ್ ಮಾಡಿಲ್ಲ ..ಎಂದಾಗ ..ವಾಸು ಶಾಂತನಾಗಿ.. ಕಣ್ಣು ಮುಚ್ಚಿಕೊಂಡು ಅಂಗೈ ಮುಂದೆ ಮಾಡಿದಾಗ..
ಚನ್ನಪ್ಪ ಮೇಷ್ಟ್ರು: ಯಾಕೋ..ಅಂತ ಕೇಳಿದ್ರೆ “ಏಟೇ ಕೊಡಿ ಅಂತೀಯಲ್ಲಾ” ಯಾಕೆ ಹೇಳು..
ವಾಸು: ಸರ್ ಆಡೋಕೆ ಹೋಗಿ ಮನೆ ಬಂದು ತಡವಾಯ್ತು.. ಅಪ್ಪ..”ಅವನಿಗೆ ಊಟ ಹಾಕ್ಬೇಡ..ಆಡೋಕೆ ಹೋಗಿ ಈಗ ಬಂದಿದ್ದಾನೆ, ಹಸ್ವೆ ಆದರೆ ಬುದ್ಧಿ ಬರುತ್ತೆ” ಅಂತ ಅಮ್ಮನಿಗೆ ಹೇಳಿ ನಾನು ಉಪವಾಸ ಮಲ್ಗೋಹಾಗೆ ಮಾಡಿದ್ರು…
ಮೇಷ್ಟ್ರು: ಛೇ ಪಾಪ.. (ಅವರ ಕೋಪ ಎಲ್ಲಿ ಹೋಗಿತ್ತೋ)..ಮತ್ತೆ ಉಪವಾಸ ಮಲಗಿದ್ಯಾ?
ವಾಸು: ಃಊಂ ಸಾ..ಆದರೆ ಅಮ್ಮ ..ಅಪ್ಪ ಮಲಗಿದ್ಮೇಲೆ ನಾಲ್ಕು ಕೈ ತುತ್ತು ಹಾಕಿ ಮಲಗಿಸಿದ್ಳು..ಹಾಗಾಗಿ ಹೋಮ್ ವರ್ಕ್ ಮಾಡೋಕೆ ಆಗಲಿಲ್ಲ.. ಎಂದ
“ಹೋಗಲಿ ಬಿಡು ನಾಳೆ ಮಾಡ್ಕೊಂಡ್ ಬಾ” ಅಂತ ಸುಮ್ಮನೆ ತಾಗಿಸಿದ ಹಾಗೆ ಮಾಡಿ ಬಿಟ್ಟು ಬಿಟ್ಟರು..
ಮಾಮೂಲಿನಂತೆ ಏಟು ತಿನ್ನುತ್ತಿದ್ದ ಎಂಕ್ಟ ಮಾತ್ರ ನೆಪ ಹೇಳೋದು ಮರೆಯೋನಲ್ಲ.. ಏಟು..ತಪ್ಪ್ತಾನೂ ಇರ್ಲಿಲ್ಲ. ಮುಂದಿನ ದಿನ..ಎದ್ದು ನಿಂತವನೇ ಏನೂ ಹೇಳದೇ ಕೈ ಮುಂದುಮಾಡಿದ..
ಚನ್ನಪ್ಪ ಮೇಷ್ಟ್ರು..”ಅರೆ ಇವನಾ ಯಾಕೆ ಮಾಡಲಿಲ್ಲ ಹೇಳೋ ಅಂತ ಹೇಳಿದ್ದಕ್ಕೆ”
ಎಂಕ್ಟ “ವಾಸು ನ ಪ್ಲೇಟ್ ಪ್ಲೇ ಮಾಡಿದ” ಇನ್ನೂ ಪೂರ್ತಿ ಹೇಳಿರ್ಲಿಲ್ಲ…
“ಛಟೀರ್” ಅಂತ ಹುಣ್ಸೆ ಬರ್ಲು ಎರಡು ಸಲ ಅವನ ಅಂಗೈ ಮೇಲೆ ಡ್ಯಾನ್ಸ್ ಮಾಡ್ತು..ಎಂಕ್ಟಾನೂ ಡ್ಯಾನ್ಸ್ ಮಾಡ್ದ ಅನ್ನಿ…ಉಸ್ಸ್…ಉಸ್ಸ್.. ಅಂತ…!!
ಏಟು ಕೊಡ್ತಾ ಮೇಷ್ಟ್ರು ಹೇಳಿದ್ದು..”ಭಡವಾ ಕುಂಟು ನೆಪ ಹೇಳ್ತೀಯಾ”
ತಕಳಪ್ಪಾ…ನೆಪ ಕುಂಟೋಕೂ ಸಾಧ್ಯಾನಾ…??

ಈಗ ನೀವು ಹೇಳಿ… “ನೆಪ ಅಂದ್ರೇನು… ಕುಂಟುನೆಪ ಅಂದ್ರೇನು..?”