Saturday, November 21, 2009

ನಂಗೊತ್ತಿಲ್ಲ ಮಗು


ಅಪ್ಪಾ..
ಏನು ಮಗು?
ನಮ್ಮ ನಾಡು ನಮಗೆ ಮುಖ್ಯ ಅಲ್ಲ್ವಪ್ಪಾ?
ಹೌದು ಕನ್ನಡ ನಾಡು -ಗಂಧದ ಬೀಡು ಅನ್ನೋಲ್ಲ್ವೇ?
ಮತ್ತೆ ದೇಶಭಕ್ತಿ ತೋರ್ಸಿದ್ರೆ ತಪ್ಪಾಗುತ್ತ?
ನಾಡು ಕನ್ನಡಿಗರದು-ದೇಶ ಎಲ್ಲರದ್ದು ತಪ್ಪೆಲ್ಲಿ??
ಮತ್ತೆ ಸಚಿನ್ ಮಾಡಿದ್ದು ತಪ್ಪಂತೆ,
ನಂಗೊತ್ತಿಲ್ಲ ಮಗು

ಅಪ್ಪಾ
ಹೇಳಪ್ಪ..ಏನು?
ಮದ್ಯ ಸರಾಯಿ ಕೆಟ್ಟದಲ್ಲವಾ?
ಹೌದು..ಅದೊಂದು ದುಶ್ಚಟ
ಮನೆ-ಮಠ ಅಷ್ಟೇ ಯಾಕೆ
ಪ್ರಾಣಾನೇ ಹೋದೀತು ಬಿದ್ರೆ ಚಟಕ್ಕೆ
ಮತ್ತೆ ಈಗ ಸರ್ಕಾದವರೇ ಮದ್ಯ
ಮಾರೋ ಸಾವಿರಾರು ಅಂಗಡಿ ತೆರೀತಿದಾರೆ
ಅದು ಅಬ್ಕಾರಿ ಇಲಾಖೆ ಯೋಜನೆ
ಮತ್ತೆ..ಮಕ್ಕಳ ಸ್ಕೂಲುಗಳೇ ಇಲ್ಲ
ಕೆಲವು ಕಡೆ ಅಂತಾರಲ್ಲಾ ಇದು
ಶಿಕ್ಷಣ ಇಲಾಕೆಯ ಯೋಜನೇಲಿಲ್ವಾ?
ನಂಗೊತ್ತಿಲ್ಲ ಮಗು

ಅಪ್ಪಾ,
ಇನ್ನೂ ಎನೋ ನಿನ್ನ ತರಲೆ
ಕೊಲೆ ಸುಲಿಗೆ ಮಾಡೋರನ್ನ ನಮ್ಮ ಪೋಲೀಸ್ರು
ಬಹಳ ಚಾಕ ಚಕ್ಯತೆಯಿಂದ ಹಿಡೀತಿದ್ದಾರೆ
ಹೌದು ಮಗು ನಮ್ಮವರು ದಕ್ಷರು
ಮತ್ತೆ ಮಂಗಳೂರಿನಲ್ಲೊಬ್ಬ ಕೇಡಿ
೨೦-೩೦ ಮದ್ವೆ ಆಗಿ, ಅವ್ರನ್ನ ಕೊಲೆನೂ ಮಾಡ್ದ
ಹೌದು ಮಗ..ಐದಾರು ವರ್ಷದಿಂದ
ನಡೆಸ್ದ ತನ್ನ ಧಂಧೆ ಅಂತ ಟೀವೀ ವಾರ್ತೆ ಬಂದಿತ್ತಲ್ಲ
ಮತ್ತೆ ಅಷ್ಟರವರೆಗೂ ದಕ್ಷತೆ ಮೇಯೋಕೆ ಹೋಗಿತ್ತಾ?
ನಂಗೊತ್ತಿಲ್ಲ ಮಗು