Sunday, December 22, 2013

ಚಿಂತನೆ


ಚಿಂತನೆ 

 ಮಿದುಳ ಬಳ್ಳಿ ಆಳಕಿಳಿದರೆ ಸಾಕು 

ಗೋಳ ನೀ ಕೆದಕುವುದು ಏಕೆ?

ಇಲ್ಲವೇ ಹಸಿ ನೆನಪುಗಳು ಹುಸಿಯಾಗಿ 

ಹೊತ್ತು ತಂದೆ ಮತ್ತೆ ಹಸಿರಾಗಲೇಕೆ ?

 

ಕಳೆದ ದಿನ ರಾತ್ರಿಗಳು ಲೆಕ್ಕವಿಲ್ಲ

ನೆನಪು ಮಾಸದ ಕನಸಿಗೆ ಪುಕ್ಕವಿಲ್ಲ 

ಹಾರಲದು ಹವಣಿಸಲು ದೇಹ ತೂಕ

ಹಾಡುತಿವೆ ಹಕ್ಕಿಗಳು ಸ್ವರ ಹೊರಡುತ್ತಿಲ್ಲ 

 

ಸ್ವಚ್ಛಂದ ಇದ್ದಾಗ ಇಚ್ಛೆಯಾ ಹಣ್ಣು

ಪಂಜರದಿ ಕೂಡಿಟ್ಟು ಕೊಟ್ಟಿದ್ದು ಹುಣ್ಣು 

ಮರಗಿಡವ ಬೋಳಿಸಿಹೆ ಏಕಯ್ಯಾ ಹೀಗೆ?

ನಿನ್ನಂತೆ ಜೀವಿಗಳು ಕುರುಡಾಯ್ತೆ ಕಣ್ಣು?

 

ಆ ಜಲ, ನೆಲ, ಬೆಟ್ಟ, ಆಕಾಶ ಗುಡ್ಡ

ಕೊಟ್ಟರು ನಿನ ಪೂರ್ವಜರು ನೀನಾದೆ ದಡ್ಡ

ಕೆಡಿಸಿ, ಕಡಿಸಿ, ಗಣಿಗಾಣಿಸಿ ಕುಲಗೆಡಿಸಿ

ಸ್ವಾರ್ಥ ಸಾಧನೆಗೆ ಬಿದ್ದೆ ಮಾಡಿಕೊಂಡೆ ದುಡ್ಡ

 

ಮರೆತೆ, ನಿನ್ನದೂ ಇದೆ ಸಂತಾನ ಇಲ್ಲಿ

ಕೊಡುವೆಯಾ ಕೊಳವೆಗಳು ಬತ್ತಿ ಹೋದ ನಲ್ಲಿ?

ಸಮಯವಿದೆ ಎಚ್ಚೆತ್ತುಕೋ ಓ ಮನುಜ
ಇಲ್ಲವಾದರೆ ಇರದು ನಿನಗೆ ಉಳಿಗಾಲವಿಲ್ಲಿ  

Friday, November 22, 2013

ಕನ(ನ)ಸಾದೀತು

Source: deviantART

ಕನ(ನ)ಸಾದೀತು
ನನ್ನ ಕನಸ ನೀ ಹಾಡಬೇಡ
ನಾ ಹಾಡುವುದು ಕನಸಾದೀತು
ನನ್ನ ನಿದ್ದೆಯಲಿ ನೀ ಬರಬೇಡ
ರೆಪ್ಪೆ ಮುಚ್ಚುವುದೂ ಕನಸಾದೀತು

ನನ್ನ ನೆನಪಿನಲಿ ನೀನಿರಬೇಡ
ಸ್ಮೃತಿ ಮಿದುಳಿನ ಕನಸಾದೀತು
ನಾಲಿಗೆ ಅಂಚಲಿ ನಲಿಯಬೇಡ
ಮಾತು ಗಂಟಲಿಗೆ ಕನಸಾದೀತು

ನನ್ನ ಲೇಖನಿ ಅಂಚಿಗೆ ಬರಬೇಡ
ಶಾಯಿಗೆ ಅಕ್ಷರವೇ ಕನಸಾದೀತು
ಕಾಮನಬಿಲ್ಲ ಬಣ್ಣ ನೀನಾಗಬೇಡ
ಮಳೆಯ ಹನಿಯೂ ಕನಸಾದೀತು

ಆಶ್ವಾಸನೆಗೆ ನೆಪ ನೀನಾಗಬೇಡ
ಶ್ವಾನಕೂ ನಿಯ್ಯತ್ತೇ ಕನಸಾದೀತು
ಐದು ವರ್ಷಕ್ಕೊಮ್ಮೆ ನೀ ಬರಬೇಡ
ನನ್ನಾಯ್ಕೆ ನನಗೇ ಕನಸಾದೀತು

ದೇವರಾಗಿ ನನ್ನಲಿ ನೀನಾಗಬೇಡ
ಧರ್ಮದ ಅಸ್ತಿತ್ವವೇ ಕನಸಾದೀತು
ಭೂಮಿಲೇ ಸ್ವರ್ಗ ನೀಹುಟ್ಟಿಸಬೇಡ
ನರಕದ ಕಲ್ಪನೆಯೂ ಕನಸಾದೀತು

ನನ್ನನು ನಾನಾಗಲು ಬಿಡುವೆಯಾ?
ನನ್ನಲಿ ನನಗೇ ನಂಬಿಕೆ ಬರಲು
ಉಸಿರಾಡುವ ತನಕ ಹಸಿರಾಗಿರುವೆ
ಸಾರ್ಥಕ ಮನುಜನ್ಮ ನನಸಾದೀತು

Saturday, October 26, 2013

ನೀಲಿಗನ-ಧರತಿ

http://bhava-manthana.blogspot.com/2013/10/blog-post.html
ಚಿತ್ರ: ಹಮ್ ರಾಜ್ (1967), ಗಾಯಕ: ಮಹೇಂದ್ರ ಕಪೂರ್

ನೀಲಿಗನ-ಧರತಿ
ಹೇ, ನೀಲಿಗಗನದ ಅಡಿ
ಧರತಿಯ ಪ್ರೀತಿ ಗಡಿ
ಹೀಗೆಯೇ ಜಗದಿ
ಬೆಳಗಾಗೋ ತರದಿ
ಸಂಜೆಯವರೆಗೂ ನಡೆ
II ಹೇ ನೀಲಿಗಗನದ ಅಡಿ II
ಇಬ್ಬನಿ ಮುತ್ತು
ಸುಮಗಳ ಸುತ್ತೂ
ಎರಡಕ್ಕೂ ಆಸೆ ಭಿಡೆ..
II ಹೇ ನೀಲಿಗಗನದ ಅಡಿ II
ಬಳಕುವ ಲತೆಯೂ
ಕುಲುಕುವ ಕಥೆಯೂ
ಹಾದಿಗೆ ಹರಡಿ ಜಡೆ....
II ಹೇ ನೀಲಿಗಗನದ ಅಡಿ II
ಝರಿಯಾ ಈ ನೀರು
ನದಿಯನು ಸೇರಿ
ಸಾಗರದಾ ಕಡೆಗೆ..

II ಹೇ ನೀಲಿಗಗನದ ಅಡಿ II

Saturday, October 19, 2013

ಶ್ರಾವಣ-ಕಾರಣ

ಮತ್ತೊಂದು..ಹಿಂದಿ ಕರವೋಕೆ ಪ್ರಿಯರಿಗಾಗಿ 1967 ರ "ಮಿಲನ್" ಚಿತ್ರದ ಮುಕೇಶ್ ಮತ್ತು ಲತಾ ಮಂಗೇಶ್ಕರ್ ಗೀತೆ
ಸಾವನ್ ಕಾ ಮಹಿನಾ ಪವನ್ ಕರೆ ಸೋರ್.... 



ಶ್ರಾವಣ-ಕಾರಣ
***********
ಆತ: ಶ್ರಾವಣ ಮಾಸ ನೋಡು
sವನ ಬಲು ಗೋರ
ಆಕೆ: ಶ್ರಾವಣ ಮಾಸ ನೋಡು
sವನ ಬಲು ಘೋರ
ಆತ: sವನ ಬಲು ಗೋರ...
ಆಕೆ: sವನ ಬಲು ಘೋರ
ಆತ: ಅರೆ ಬಾಬ ಘೋರ ಅಲ್ಲ ಗೋರ.. ಗೋರ...ಗೋರ
ಆಕೆ: sವನ ಬಲು ಗೋರ
ಆತ: ಹಾಂ.... ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆಕೆ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆತ: ರಾಮಾ ಯಾಕಪ್ಪಾ ಹೀಗೆ
        ಗಾಳಿ ಬೀಸುತಿರುವೆ
ಆಕೆ: ಹಡಗ ನೀನು ನಡೆಸು ಗೆಳೆಯಾ
        ಮಾತು ನಿನಗೆ ತರವೆ..
ಆತ: ರಾಮಾ ಯಾಕಪ್ಪಾ ಹೀಗೆ
        ಗಾಳಿ ಬೀಸುತಿರುವೆ
ಆಕೆ: ಹಡಗ ನೀನು ನಡೆಸು ಗೆಳೆಯಾ
        ಮಾತು ನಿನಗೆ ತರವೆ..
ಆತ: ಓಯ್,.ಮೋಡ ಚದುರಿ ಹೋಗೆ
ಬಾನೆಲ್ಲಾ ಚಲ್ಲಿತು ಶಾಯಿ
        ಗಾಳಿಗೆ ಹಾರಾಡಿದರೆ
        ನಿನ್ನ ಸೆರಗೇ ದೋಣಿಗೆ ಹಾಯಿ
ಆಕೆ: ಓ.ಓಓ
ಆಕೆ, ಆತ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆಕೆ: ನೀನೇ ನನ್ನಯಾ ದಡವು
        ದಾಟಿ ಬರಲಿ ಹೇಗೆ
ಆತ: ದಾಟಲೇಕೆ ಹುಡುಗಿ ನೀನು
        ಪ್ರೀತಿ ಗುಣವೇ ಹಾಗೆ
ಆಕೆ: ನೀನೇ ನನ್ನಯಾ ದಡವು
        ದಾಟಿ ಬರಲಿ ಹೇಗೆ
ಆತ: ದಾಟಲೇಕೆ ಹುಡುಗಿ ನೀನು
        ಪ್ರೀತಿ ಗುಣವೇ ಹಾಗೆ
ಆಕೆ: ನಿನ್ನ ಕಣ್ಣೇ ನದಿಯೂ
        ಇಲ್ಲಿ ಮುಳುಗಿದರೇನು ಹಾನಿ
ನಿನ್ನನೇ ನೋಡುತಲಿದ್ದರೆ
ಮಾತು ಹೊರಡದೇ ನಾನು ಮೌನಿ
ಆತ: ಓ ಓ ಓ..
ಆಕೆ, ಆತ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆಕೆ: ಸಖ ನೀನು ದೂರ ಹೋಗಿ
        ಸುಖ ಕಿತ್ತು ಕೊಂಡೆ
        ಅಂದಿನ ನಿನ್ನಯ ಮಾತ
ಎದೆಯಲಿಟ್ಟುಕೊಂಡೆ            II 2 II
ನಿನ್ನಯನೆನಪಲೇ ನನ್ನ
ರಾತ್ರಿ ಹಗಲು ಒಂದೇ
        ಬಂದುಬಿಡು ನೀ ಬೇಗ
        ಒಂದಾಗುವ ನಾವು ಅಂದೇ.
ಆಕೆ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ

ಕಂಡಂತೆ ಮೋಡ ಮಯೂರ

Friday, September 13, 2013

ಅಖಿಯೋಂಕೆ ಝರೋಕೋಂಸೆ....

ಸ್ನೇಹಿತರೇ, ನಲ್ಮೆಯ ಬ್ಲಾಗ್ ಗೆಳೆಯ ಮತ್ತು ಮುಖಪುಸ್ತಕ ಸಹ ಓದುಗ ಶ್ರೀಕಾಂತ್ ಮಂಜುನಾಥ್ ಎಸೆದ ಒಂದು ಸವಾಲನ್ನು ಸ್ವೀಕರಿಸಿ "ಅಖಿಯೋಂಕೆ ಝರೋಕೋಂಸೆ" ಗೀತೆಯೊಂದರ ಭಾವಾನುವಾದ (ಲಯಕ್ಕೆ ತಕ್ಕಹಾಗೆ) ಪ್ರಯತ್ನಿಸಿದ್ದೇನೆ. ದಯವಿಟ್ಟು ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. 


ಕಣ್ಣ ಕುಡಿನೋಟದಿ....

ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ
ಬಲು ದೂರ ನೀ ಕಂಡೆ, ಬಲು ದೂರಾ ನಾನಿನ ಕಂಡೆ [೨]
ಕಣ್ಣ ಮುಚ್ಚಿದೆ ಕ್ಷಣ ಹೀಗೇ, ಒಮ್ಮೆ ಮನದಲೇ ನಿನ ನೆನೆದೇ
ನೀನು ಮನಸಲೇ ನಗುತಿದ್ದೆ, ಮನ ಮುದಗೊಂಡು ನಗುತಿದ್ದೆ [೨]
                   ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}

ಒಂದು ಮನವಿತ್ತು ನನ್ನಾ ಬಳಿಯಲಿ, ಈಗ ಕಾಣದೇ ಹೋಗುತಿದೆ
ಪಡೆದೇ ನಿನ್ನ ಹಾಯೇ ನನ್ನ , ಈ ಮನವೂ ಸೋಲುತಿದೆ [೨]
ನಿನ್ನ ಭರವಸೆ ಆಸೆಯಲಿ, ಕುಂತೆ ನನ್ನನೇ ನಾ ಮರೆತು
ಹೀಗೇ ಕಳೆದು ಹೋಗಲಿ, ನಮ್ಮ ಆಯಸ್ಸು ಜತೆ ಜತೆಗೆ.. [೨]
                    ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}

ಬದುಕಿರುವೆ ನಿನ್ನಾ ನೋಡಿಯೇ, ಸತ್ತರೂ ನಿನ್ನಿದುರೇ
ನೀನೆಲ್ಲಿಯೋ ನಾನಲ್ಲಿಯೇ ಜಗವನೇ ಕಂಡಿರುವೆ [೨]
ಹಗಲಿರುಳೂ ಪೂಜಿಸುವೇ, ನಿನ್ನ ಒಳಿತನೇ ನಾ ಬಯಸಿ
ಎಂದೂ ನಮ್ಮ ಈ ನಂಬಿಕೆಯಾ, ಸುಮ ಬಾಡದೇ ಅರಳಲಿ [೨]
                   ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}

ಎಂದಿನಿಂದ ನಿನ್ನ ಒಲವಿನ ಬಣ್ಣದೀ ಮಿಂದಿರುವೆ
ಎದ್ದೇ ಇದ್ದು ಮಲಗೇ ಇದ್ದೆ ನಿದ್ದೆಯಲೂ ಎಚ್ಚರದಿ [೨]
ನನ್ನ ಪ್ರೀತಿಯ ಕನಸುಗಳ, ಯಾರಾದರೂ ಕದಿಯುವರೇ
ಮನ ಯೋಚಿಸಿ ಭಯವಾಯ್ತು, ಹೀಗೇ ಯೋಚಿಸಿ ದಿಗಿಲಾಯ್ತು[೨]
                   ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}

Wednesday, September 4, 2013

ಹಳ್ಳಿ-ದಿಲ್ಲಿ





ಹಳ್ಳಿ-ದಿಲ್ಲಿ

ಹಳ್ಳಿಯಲೀಗ
ಆ ಕಸುವಿಲ್ಲ
ಬಾವಿ ಕಟ್ಟೆಯೇ
ಬತ್ತಿದೆ, ನೀರಿಲ್ಲ..
ನೀರಿಗೆ ಬರುವ
ನೀರೆಯರ ಆ
ಮನ ಮೋಹಕ
ಸಾಲುಗಳಿಲ್ಲ..
ಗಿಲ್ಲಿಗೆ ಸಿಗುವ
ಮಣ್ಕೊಡವಿಲ್ಲ
ಕೊಡವಲು ಧೂಳಿಲ್ಲ
ಚಾವಡಿಗಳಿಲ್ಲ
ಕಳ್ಳಿ ಬೇಲಿಗಳಿಲ್ಲ
ಕದ್ದೋಡಲು
ಹಿತ್ತಲ ಸೀಬೆಯಿಲ್ಲ
ಕಿತ್ತಳೆ ಮಾವಿಲ್ಲ
ಚಡ್ಡಿಗಳಿಲ್ಲ
ಜೋಬಿಗೆ ಅಂಟು
ಜಾಮೂನು ನಂಟು
ಬೆಲ್ಲದ ಜಿಗಟಿಲ್ಲ
ಬೀದಿ ಜಗುಲಿಗಳಿಲ್ಲ
ಓಣಿ ಗುಂಟಗಳಿಲ್ಲ
ಕೆಸರಾಗುವ
ಎರಚಾಡುವ
ಎಮ್ಮೆಗಳಿಲ್ಲ
ಹೆಮ್ಮೆ ತೋಟಗಳಿಲ್ಲ
ಭಜನೆ ಜಾಗಟೆಯಿಲ್ಲ
ಮಂಡ್ರಾಯನೆತ್ತೋ
ಗೊಣ್ಣೆಸಿರ್ಕನಿಲ್ಲ
ಎಲ್ಲರೊಂದಾಗಿ
ಈದ್-ಗಣೇಶನೆತ್ತುವ
ಸಾಬಿ-ತುರ್ಕನಿಲ್ಲ
ಹರ್ಕು ಕೇರಿಯಿಲ್ಲ
ಮುರ್ಕು ಮೋರಿಯಿಲ್ಲ
ತಿರುಕನಿಲ್ಲ
ಶಾನುಭೋಗ
ತೋಟಿ-ತಳವಾರ
ಗೌಡ-ಗೌಡ್ತಿಯರ
ಗರಿ ಗರಿ ದೌಲತ್ತಿಲ್ಲ
ನವಮಿ ರಥವಿಲ್ಲ
ಬಾಬಯ್ಯನ
ಅಬ್ಬರವಿಲ್ಲ.....
ಏನೆಲ್ಲಾ ಇತ್ತು..!!
ಈಗ ಏನೇನೂ ಇಲ್ಲ
ಕೋಟಿಗೆ ಮಾರಿದ
ತೋಟಿ ತನ್ನೆಲವ
ಅಲ್ಲೇ ನಿರ್ಮಿತ
ಫ್ಯಾಕ್ಟರಿಯಲಿ
ದಿನಗೂಲಿಯಲ್ಲಾ...!!
ಕೆರೆಬತ್ತಿ ಅಲ್ಲೇ
ಅಗರ ಬತ್ತಿ
ಉತ್ಪತ್ತಿ, ತ್ಯಾಜ್ಯ
ಬಣ್ಣದ ಕೆಸರ ಕುಂಟೆ
ಕೇರಿ ಹೈಕಳು
ಸಂಜೆಯಾದರೆ
ಒಪ್ಪೊತ್ತು ತಿಂದು
ಮೂರೊತ್ತು ಕುಡ್ದು
ತೂರಾಡುವರಲ್ಲಾ..!!
ಕಾಲ್ ಸೆಂಟರ್ಗೆ 
ಹುಡ್ಗೀರ ದಂಡು
ಸೊಂಟಕೆ ವ್ಯಾನಿಟಿ
ಕೊಡವೇನು..?
ಸೊಂಟವೇ ಇಲ್ಲಾ..
ಅಕ್ಕಂದಿರೀಗ 
ಶೋಕಿ ಆಂಟಿಯರು
ಕಿಟ್ಟಿ ಪಾರ್ಟಿಗಂಟಿ
ಸೋಬಾನೆ ಗೀಗಿ
ಟೀವಿಗೆ ಮೀಸಲು
ನವಮಿ ನಾಟಕ
ಬಯಲಾಟ ಮೋಹಕ
ಉಳಿದಿಲ್ಲ ಈಗ ಇಲ್ಲಿ..
ಅದಕೇ ಏನೋ..
ಮಳೆಯೂ ಅತಿಥಿ
ಬಂದು ಹೋಗುತ್ತೆ
ಬಂದದ್ದೂ ಮರೆಯುತ್ತೆ
ಹಸಿರು ಗದ್ದೆ-ಹೊಲ?
ಅವರೇ ಕೇಳ್ತಾರೆ
ಏನಿವುಗಳೆಲ್ಲಾ??
ಹಳ್ಳಿ- ಹಳ್ಳಿ-ಹಳ್ಳಿ
ಎಲ್ಲಿವೆ ಎಲ್ಲಾ ಆಗಿವೆ
ದಿಲ್ಲಿ ದಿಲ್ಲಿ ದಿಲ್ಲಿ




Saturday, July 27, 2013

ಕೂಗಿ ಕರೆದರೇ..ಓ ಎನ್ನುವ ಸಹೃದಯಿಗಳಿಗೆ ನಮನ.......

ಕೂಗಿ ಕರೆದರೇ..ಓ ಎನ್ನುವ ಸಹೃದಯಿಗಳಿಗೆ ನಮನ.......
ಇಲ್ಲಿ ಒಂದು ಮಾತು ಹೇಳಲೇ ಬೇಕು.
ನನ್ನ ಬ್ಯಾಗ್ ಎತ್ತಿಹೋದ ಮಹರಾಯನ ಕೃಶಕಾಯ ಮನಸಿನಿಂದ ಸ್ವಲ್ಪ ಮಾಸಿಹೋಗಲು ಕಾರಣವಾದದ್ದು... ಎಲ್ಲ ಕಡೆಯಿಂದ ಓ-ಗೊಟ್ಟ ಮಿತ್ರ ವೃಂದ, ಹೋಟೆಲ್ ರಿಸಪ್ಶನಿಸ್ಟ್, ಕುವೈತಿನಿಂದಲೇ ನಮ್ಮ ಆಫೀಸಿನಲ್ಲಿ ಎಲ್ಲಾ ಸಾಧ್ಯ ಸಹಾಯಕ್ಕೆ ದಾವಂತ ನೆಡೆಸಿದ ಮಿತ್ರ ಡಾ.ವಿನೋದ್. ಇನ್ನೊಂದು ಸ್ವಾರಸ್ಯ ಸಂಗತಿ ಈ ನನ್ನ ನಲ್ಮೆಯ ಡಾ.ವಿನೋದ್, ಡಾ. ಮಿಸಸ್ ವನಿತಾ ವಿನೋದ್ ನಡುವೆ ನನ್ನ ವಿಷಯವಾಗಿ...ನಡೆದದ್ದು.
ಆಂಟ್ವೆರ್ಪ್ ಪೋಲೀಸ್ ದೂರು ನೀಡಿ, ಅಲ್ಲಿಂದ ಹೋಟೆಲಿಗೆ ಬಂದು ಸ್ವಲ್ಪ ಸುಧಾರಿಸಿಕೊಂಡಾಗ ನೆನಪಾದದ್ದು ಕುವೈತ್ ಗೆ ಹೇಗೆ ಹೋಗುವುದು?? ಎನ್ನುವ ವಿಷಯ. ವಿಷಯ ತಿಳಿದಿರಲಿ ಎಂದು ನನ್ನ ಗ್ಯಾಲಕ್ಸಿ ತೆರೆದೆ. ಹೋಟಲ್ ನ ವೈ ಫೈ ಉಪಯೋಗಕ್ಕೆ ಬಂತು, ಫೇಸ್ಬುಕ್ ಓಪನ್ ಮಾಡಿದೆ, ವನಿತಾ ಆನ್ ಲೈನ್..!!! ಮುಳುಗುವನಿಗೆ ಹುಲ್ಲುಕಡ್ಡಿ ಸಾಕಂತೆ...!!! ಸರಿ ಒಂದು ಮೆಸೇಜ್ ಹಾಕಿದೆ ಚಾಟಲ್ಲಿ...
”ವನಿತಾ ನನ್ನ ಲ್ಯಾಪ್ ಟಾಪ್ ಮತ್ತು ಪಾಸ್ಫೋರ್ಟ್ ಇದ್ದ ಬ್ಯಾಗ್ ಕಳುವಾಗಿದೆ” ಅಂತ...
ನಂಬಲಿಲ್ಲ ಮೊದಲಿಗೆ ವನಿತಾ... ಹೌದಾ ಸರ್..!! ನಿಜವಾ..??  ಸದ್ಯಕ್ಕೆ ಆಗ್ಲೇ ಕೇಳಿದ್ದರಿಂದ..
“ಹೌದಮ್ಮಾ ತಾಯಿ, ಕಳುವಾಗಿದೆ...ನಾನೇ.. ಇದು ಹ್ಯಾಕ್ಡ್ ಮೆಸೇಜ್ ಅಲ್ಲ...ವಿನೋದ್ ಗೆ ಒಂದು ಫೋನ್ ಮಾಡಿ ಹೇಳು, ನಮ್ಮ ಹೈಯರ್ ಆಫೀಸರ್ಸ್ ಗೆ ಏನಾದರೂ ಹೆಲ್ಪ್ ಮಾಡೋಕೆ ಆಗುತ್ತಾ ಅನ್ನೋದನ್ನ ವಿಚಾರಿಸಲಿ”
FACEBOOK ಜಿಂದಾಬಾದ್

ಕಾಡ್ಗಿಚ್ಚಿನ ಹಾಗೆ ಸುದ್ದಿ ಕುವೈತಲ್ಲಿ...ನಮ್ಮ ಮಿತ್ರ ವೃಂದದಲ್ಲಿ ಸಂಚಲನ...
ಮಹೇಶ್ ಮತ್ತು ಸುಗುಣಾ...ಫೋನೇ ಮಾಡ್ಬಿಟ್ರು....
“ಸರ್ ನಮ್ಮಿಂದ ಏನಾದರೂ ಸಹಾಯ ಬೇಕಾದ್ರೆ...ಮರೀಬೇಡಿ...”
ವಿನೋದ ಸಹಾ ಮೊದಲಿಗೆ ನಂಬಲಿಲ್ಲವಂತೆ...
ಅಯ್ಯೋ ಇದು ಹ್ಯಾಕ್ ಆದ ಅಕೌಂಟ್ ಮೂಲಕ ಹಣ ಕೀಳೋಕೆ ಮಾಡೋ ತಂತ್ರ..
ಅಂತ..ಆದರೆ ವನಿತಾ..”ಇಲ್ಲಾ ಮುನ್ನಾ...ಆಜಾದ್ ಸರ್ ಮತ್ತೆ ಆನ್ ಲೈನ್ ಕಂಫರ್ಮ್ ಮಾಡಿದ್ದಾರೆ...(ಇಷ್ಟಕ್ಕೂ ಅವರು ಹಣ ಕೇಳ್ಲಿಲ್ಲ ಅಲ್ವಾ...ಅಂದಿರಬೇಕು) ವಿನೋದ್ ಕನ್ವಿನ್ಸ್ ಆಗಿ...ಅಲ್ಲಿ ಆಫೀಸಲ್ಲಿ ಎಲ್ಲರ ಸಂಪರ್ಕ ಶುರು ಮಾಡಿ ಆಗಿತ್ತು...ಆಗಾಗ್ಗೆ ನನಗೆ ಅಪ್ಡೇಟ್ ಮೆಸೇಜ್ ಸಹಾ...
ಇತ್ತ 11 ನೇ ತಾರೀಖು (10ಕ್ಕೆ ಸಂಜೆ ಅರ್ಜಿ ಗುಜ್ರಾಯಿಸಿ ಆಗಿತ್ತು) ಬೆಳಿಗ್ಗೆ ನನಗೆ ಮೊದಲ ಆದ್ಯತೆ ಕೊಟ್ಟ ಸೌಜನ್ಯ ಅಜಯ್ ಅಗರ್ವಾಲ್ ದು. ಸುಮಾರು ೪-೫ ಸಲ ಕುವೈತ್ ಭಾರತೀಯ ದೂತಾವಾಸಕ್ಕೆಫೋನಾಯಿಸಿದ್ದರು ನನ್ನ ಇತ್ತೀಚಿನ ಕುವೈತ್ ನಲ್ಲಿ ಇಶ್ಯೂ ಆದ ಪಾಸ್ಪೋರ್ಟ್ ಬಗ್ಗೆ ನಿಗದಿ ಪಡಿಸಿಕೊಳ್ಳಲು....ಊಂಹೂಂ... ಅಗಲೇ 11.00 ಗಂಟೆ..ಆಗಿತ್ತು..ಆದರೆ ನನಗೆ ಅಜಯ್ ರ ಆತ್ಮ ವಿಶ್ವಾಸ ಕಂಡು ಆತಂಕ ಮೂಡಲಿಲ್ಲ.
ಹೊರ ಬಂದು ಅಜಯ್ ರವರು ಆಜಾದ್ ಜೀ ನೋ ರೆಸ್ಪಾನ್ಸ್... ಫ್ರಂ ಕುವೈತ್ ಬಟ್ ಐ ವಿಲ್ ಕಾಲ್ ಎಗೈನ್ ಅಂಡ್ ಎಗೈನ್,,, ಅಂತ ಮುಖ್ಯ ಕಚೇರಿ ಕಡೆ ಹೊರಟರು...ಅಷ್ಟರಲ್ಲಿ ಕುವೈತಿಂದ ವಿನೋದ್ ಫೋನ್...
“ನಾನು ಇಲ್ಲಿ ಯಾರಿಗಾದರೂ ಕೇಳ್ತೇನೆ ಎಂಬಾಸಿಯಿಂದ ಅಲ್ಲಿಗೆ ಮೆಸೇಜ್ ಕಳ್ಸೋಕೆ ಟ್ರೈ ಮಾಡ್ತೀನಿ” ಅಂತ.
“ನೋಡು, ಟ್ರೈ ಮಾಡು.. ಆದರೆ ಅಜಯವ್ರು ಎರಡು ಗಂಟೆಯೊಳಗೆ ನನಗೆ ಪಾಸ್ಪೋರ್ಟ್ ಕೊಡ್ತೇನೆ ಅಂದಿದ್ದಾರೆ... ನೀನು ಅಲ್ಲಿಂದ ನನ್ನ ಪಾಸ್ಪೋರ್ಟ್ ಕಾಪಿ ಫ್ಯಾಕ್ಸ್ ಮಾಡಿದ್ದು ಅವರಿಗೆ ತಲುಪಿದೆ.” ಎಂದೆ
15 ನಿಮಿಷದ ನಂತರ ಒಳಬಂದ ಅಜಯ್
“ಡಾ. ಆಜಾದ್ ಒಂದು ನಿಮಿಷ ಕಣ್ಮುಚ್ಚಿ ಅಲ್ಲಾಹ್ ನ ಸ್ಮರಿಸಿ...ಈ ನನ್ನ ಕೈಲಿರೋ ಲಕೋಟೆಯಲ್ಲಿರೋ ದಾಖಲೆ ನಿಮಗೆ ಅನುಕೂಲ ಮಾಡಲಿ” ಎಂದು ಆಗ ತಾನೇ ಆಂಟ್ವೆರ್ಪ್ ಸೆಂಟ್ರಲ್ ಸ್ಟೇಶನ್ ನಿಂದ ಬಂದಿದ್ದ ಲಕೋಟೆ ಒಡೆದು ಹೊರತೆಗೆದದ್ದು
’ಪಾಸ್ಪೋರ್ಟ್..!!!!!”
ಓಪನ್ ಮಾಡಿದ್ರೆ....”ಛೇ... ಯಾರೋ ಲೀಸಾ ಜಾರ್ಜ್ ಅಂತೆ...”
ನನ್ನ ಹಾಗೇ ಆಂಟ್ವೆರ್ಪ್ ನಲ್ಲಿ ಕಳೆದು ಕೊಂಡಿದ್ದ ಲೀಸಾ ಜಾರ್ಜ್ ರ ಪಾಸ್ಪೋರ್ಟ್..!!!
“ಲಕ್ ನಿಮ್ಮದಾಗ್ಲಿಲ್ಲ... .. ಬಟ್ ಡೋಂಟ್ ವರಿ ಆಪ್ಕೆ ದೋಸ್ತ್ ಕೆ ಫ್ಯಾಕ್ಸ್ ಕೆ ಬೇಸಿಸ್ ಪರ್ ಮೆರೆ ಡಿಸ್ಕ್ರೀಶನ್ ಪರ್ ಆಪ್ಕೋ ದೋಪಹರ್ ದೋ ಕೆ ಅಂದರ್ ಪಾಸ್ಪೋರ್ಟ್ ದೂಂಗಾ...” ಎಂದರು ಖಚಿತವಾಗಿ..ತಮ್ಮ ಕೋಣೆಗೆ ಹೋಗುತ್ತಾ.
ಹತ್ತು ನಿಮಿಷದ ನಂತರ ಹೊರ ಬಂದು..
“ಕುವೈತ್ ನಿಂದ ಕಂಫ್ಹರ್ಮೇಶನ್ ಬಂತು ಆಜಾದ್..ಈಗ ೧೨.೩೦, ನಿಮಗೆ ಆದಷ್ಟು ಬೇಗ ಪಾಸ್ಪೋರ್ಟ್ ಕೊಡ್ತೇನೆ...ನಿಮ್ಮ ಡೀಟೈಲ್ಸ್ ಎಲ್ಲಾ ಸರಿಯಾಗಿದೆಯಾ ಮತ್ತೊಮ್ಮೆ ಚೆಕ್ ಮಾಡಿ... ಎಂಟ್ರಿ ಆದಮೇಲೆ ಕರೆಕ್ಟ್ ಮಾಡೋಕೆ ಕಷ್ಟ ಆಗುತ್ತೆ” ಎಂದರು.
ಅಷ್ಟರಲ್ಲಿ ಕುವೈತಿಂದ ವಿನೋದ್ ಫೋನು..!!
“ಸರ್ ಮಹೇಶ್ ಈಗ ಎಂಬಾಸಿಗೆ ಹೊರಟಿದ್ದಾರೆ ಅವರ ಸ್ನೇಹಿತನಿಗೆ ತಿಳಿದವರು ಅಲ್ಲಿದ್ದಾರಂತೆ ಅವರು ಫೋನ್ ಮಾಡಿಸ್ತಾರಂತೆ” ಎಂದಾಗ... “ಆಹಾ ಏನಿದು ? ಕೆಲವೊಮ್ಮೆ ಏನೂ ಆಗೊಲ್ಲ ಎನಿಸುವ ಹತಾಶೆ!! ಮರುಕ್ಷಣ ಎಲ್ಲೆಡೆಯಿಂದ ಎಲ್ಲಾ ಆಗುತ್ತೆ ಎನ್ನುವ ಸಾಂತ್ವನ.. ಭರವಸೆ...!!!!” ಬದುಕು ಇದೇ ಅಲ್ಲವೇ.. ಅನಿಸಿತು.
ಸರಿಯಾಗಿ ಮದ್ಯಾನ್ಹ ಒಂದು ಗಂಟೆಗೆ ಅಜಯ್ ರವರು ಹೊರಬಂದು ನನ್ನ ಕೈ ಕುಲುಕಿ
“ ಹಿಯರ್ ಈಸ್ ಯುವರ್ ಪಾಸ್ಪೋರ್ಟ್ ಡಾ.ಆಜಾದ್, ಐ ಹ್ಯಾವ್ ಡನ್ ವಾಟ್ ಐ ಪ್ರಾಮಿಸ್ಡ್ ಯೂ..., ಗುಡ್ ಲಕ್..ನೌ ಯು ಕ್ಯಾನ್ ಟ್ರಾವೆಲ್..ಐ ಡೋಂಟ್ ನೋ ಇಫ್ ಯು ಕೆನ್ ಗೋ ಟು ಕುವೈತ್...ಬಟ್ ಕೆನ್ ಶ್ಯೂರ್ಲಿ ಗೋ ಟು ಇಂಡಿಯಾ..ಅವರ್ ಮದರ್ ಲ್ಯಾಂಡ್..., ಬಟ್ ಐ ಥಿಂಕ್ ಅಂಡ್ ಫೀಲ್ ಯು ವಿಲ್ ಕ್ಯಾಚ್ ಕುವೈತ್ ಫ್ಲೈಟ್” ಎಂದರು.
ನನ್ನ ಕಣ್ಣಂಚಲಿ ನೀರು ತುಳುಕಿಯೂ ತುಳಿಕದಂತೆಆಯಿತು... ಅಜಯ್ ರ ಎರಡೂ ಕೈ ಹಿಡಿದು ಧನ್ಯವಾದ ಅರ್ಪಿಸಿದೆ... ಎಲ್ಲಾ ಸಿಬ್ಬಂದಿಗೆ ನನ್ನ ಧನ್ಯವಾದ ಹೇಳಿ..ಕುವೈತ್ ಎಂಬಾಸಿ ಗೆ ಹೋಗಿ ನನ್ನ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿದೆ.
ಟ್ಯಾಕ್ಸಿ ಹಿಡಿದು ಅಲ್ಲಿಂದ ೭-೮ ಕಿ ಮೀ ದೂರದಲ್ಲಿದ್ದ ಕುವೈತ್ ಎಂಬಾಸಿ ಇನ್ ಬೆಲ್ಜಿಯಂ ಕಚೇರಿಗೆ ಹೊರಟೆ.. ಮತ್ತೆ ವಿನೋದ್ ಫೋನ್...ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಸಲ್ವಾ ಎಂಬ ವಿಜ್ಞಾನಿ(ನಿ) (ನಗಬೇಡಿ ಈ ಪದ ಪ್ರಯೋಗ ಪದಾರ್ಥ ಚಿಂತಾಮಣಿಗೆ ಹಾಕಿ ಚಿಂತೆಯಾಗಲಿ...ಹೆಣ್ಣು ವಿಜ್ಞಾನಿಗೆ ಏನಂತಾರೆ..?? ಅಂತ) ಕುವೈತ್ ಎಂಬಾಸಿಗೆ ಒಂದು ಪತ್ರ ಫ್ಯಾಕ್ಸ್ ರವಾನಿಸಿದ್ದೇನೆ ಅಂತ.
ಅಲ್ಲಿ, ಎಂಬಾಸಿ ಬಳಿ... ಜನವೇ ಇಲ್ಲ...ಬೋರ್ಡ್ ನೋಡಿದೆ...1.0 ಕ್ಕೆ ಕ್ಲೋಸ್..!!! ಸರಿ ಧೈರ್ಯಗೆಡಲಿಲ್ಲ ಫೋನ್ ಮಾಡಿದೆ. ಪುಣ್ಯಕ್ಕೆ ನಮ್ಮ ಸಂಸ್ಥೆಯ ಹಿರಿಯ ಅಧಿಕಾರಿ ಈ ಮೊದಲೇ ಮಾತನಾಡಿದ್ದ ಎಂಬಾಸಿ ಅಧಿಕಾರಿ ಫೋನ್ ಎತ್ತಿಕೊಂಡರು..
“ಹೌದು, ಡಾ ಸಮೀರ್ ಮಾತನಾಡಿದ್ದಾರೆ, ಆದರೆ ಈಗ ನಾವೇನೂ ಮಾಡಲಾಗದು, ಕುವೈತ್ ರೆಸಿಡೆನ್ಸಿ ಸ್ಟಾಂಪ್ ಮಾಡಲು ಅಲ್ಲಿಂದ ಮಂತ್ರಾಲಯದ ಪತ್ರ ಬೇಕು, ಅದಕ್ಕೆ ಈ ದಿನ ಸಮಯ ಮೀರಿದೆ, ನಾಳೆ (ಶುಕ್ರವಾರ) ನಾಡಿದ್ದು ಅಲ್ಲಿ ರಜೆ ಹಾಗಾಗಿ ಕಡೇ ಪಕ್ಷ ಮೂರು ದಿನ ನೀವು ಇಲ್ಲಿ ಉಳಿಯಬೇಕಾಗುತ್ತೆ.” ಎಂದರು.
“ಸರ್ ನಾನು ಕುವೈತ್ ಹೋಗಲು ಸಾಧ್ಯವೇ ಇಲ್ಲವೇ ?” ಎಂದೆ.
“ನಿಮ್ಮ ಹತ್ರ ಯಾವ ಯಾವ ದಾಖಲೆ ಇದೆ? “ ಎಂದು ಕೇಳಿದರು
“ನನ್ನ ಬಳಿ ಕುವೈತ್ ಸಿವಿಲ್ ಐಡಿ ಮತ್ತು ಡ್ರೈವಿಂಗ್ ಲೈಸೆನ್ಸ್ ಇದೆ” ಎಂದೆ.
“ಓಹ್...ದೆನ್ ನಥಿಂಗ್ ಟು ವರಿ, ಟೇಕ್ ಇಟ್ ಫ್ರಂ ಮಿ, ಯು ಕೆನ್ ಟ್ರಾವೆಲ್ ಟು ಕುವೈತ್,..ಜಸ್ಟ್ ಗೋ ಅಂಡ್ ಬೋರ್ಡ್ ದಿ ಪ್ಲೇನ್” ಎಂದರು
ಮನಸು ನಿರಾಳ ಆಯ್ತು.. ಈ ದಿಶೆಯಲ್ಲಿ ನಾನೂ ಯೋಚಿಸಿದ್ದೆ, ಸಿವಿಲ್ ಐಡಿ ಬಹಳ ಶಕ್ತಿಯುತ ದಾಖಲೆ.. ಬಹುಶಃ ನನಗೆ ಸಾಧ್ಯವಾಗಬಹುದು ಎಂದು, ಅಧಿಕಾರಿಯ ಮಾತಿನಿಂದ ನಿಶ್ಚಿಂತನಾಗಿ ಹೋಟೆಲಿಂದ ಲಗೇಜ್ ತೆಗೆದುಕೊಂಡು ಏರ್ ಪೋರ್ಟ್ ಗೆ ಹೊರಟೆ. ಏರ್ ಪೋರ್ಟ್ ನಲ್ಲಿ ತುಕಿಶ್ ಏರ್ ನ ಚೆಕ್ ಇನ್ ನಲ್ಲಿ ನನ್ನ ಟಿಕೆಟ್ ಮತ್ತು ಪಾಸ್ಪೋರ್ಟ್ ಕಳೆದು ಹೋಗಿದೆ, ಆದರೆ ಹೊಸ ಪಾಸ್ಪೋರ್ಟ್ ಇಶ್ಯೂ ಆಗಿದೆ ಎಂದು ಅದನ್ನು ತೋರಿಸಿದೆ. ನಿಮ್ಮ ರೆಸಿಡೆನ್ಸಿಗೆ ಪ್ರೂಫ್ ಏನು ಎಂದರು..ಸಿವಿಲ್ ಐಡಿ ಇದೆ ಎಂದು ತೋರಿಸಿದೆ..ಓಕೆ ಎಂದು ಟಿಕೆಟ್ ಮತ್ತು ಬೋರ್ಡಿಂಗ್ ಪಾಸ್ ಕೊಟ್ಟರು ಚೆಕ್ ಇನ್ ಮಾಡಿ. ಇಮಿಗ್ರೇಶನ್ ನಲ್ಲಿ ಕೌಂಟರ್ ಆಫೀಸರ್ ಗೆ ಸ್ವಲ್ಪ ಗೊಂದಲ ಆಯ್ತು, ಹಿರಿಯ ಅಧಿಕಾರಿ ಬಂದು ನನ್ನ ತಮ್ಮ ದಾಖಲೆ ಕೊಠಡಿಗೆ ಕರೆದೊಯ್ದು ಅಲ್ಲಿ ಪರಿಶೀಲನೆ ಮಾಡಿ ನಿಮ್ಮನ್ನು ಡಿಪಾರ್ಚರ್ ಗೇಟ್ ಗೆ ನಾನೇ ಬಿಡ್ತೇನೆ ಎಕೆಂದರೆ ಇನ್ನು ಹದಿನೈದು ನಿಮಿಷ ಮಾತ್ರ ಇದೆ ಡಿಪಾರ್ಚರ್ ಗೆ, ಗೇಟ್ ಕ್ಲೋಸ್ ಆಗ್ಬಾರ್ದು ಎಂದರು...ಇಲ್ಲೂ ಸಮಾಧಾನದ ಭರವಸೆಯ ಸಾಂತ್ವನ...!!!
ಎರಡೇ ನಿಮಿಷದಲ್ಲಿ ಪರೀಶೀಲನೆ ಮಾಡಿ, ನೇರ ಗೇಟ್ ಗೆ ಕರೆದೊಯ್ದು ಬಿಟ್ಟರು, ಇನ್ನೇನು ಗೇಟ್ ಕ್ಲೋಸ್ ಆಗುವುದರಲ್ಲಿತ್ತು.
ನಿರಾಳವಾಗಿ, ಆಫೋಸರ್ ಗೆ ಧನ್ಯವಾದ ಹೇಳಿ ವಿಮಾನ ಏರಿ..ನನ್ನ ಸೀಟ್ ನ ಮೇಲಿನ ಲಗೇಜ್ ಬಾಕ್ಸಲ್ಲಿ ಲಗೇಜ್ ಇಟ್ಟು ಕೂತೆ.. ಟರ್ಕಿಶ್ ವಿಮಾನ ಹೊರಡಲು ೧೫ ನಿಮಿಷ ಇತ್ತು.
(ಚಿತ್ರ: ಅಂತರ್ಜಾಲ ಕೃಪೆ)
“ಎಕ್ಸ್ ಕ್ಯೂಸ್ ಮಿ” ಮಧುರ ಹೆಣ್ಣಿನ ದನಿ...!! ತಲೆಯೆತ್ತಿ ನೋಡಿದೆ.. ಬಿಳಿಯ ಹೆಣ್ಣು ಸುಮಾರು ೩೦-೩೫ ರ ಆಸುಪಾಸಿನ ಆಕೆ ಕಿಟಕಿ ಬಳಿಯ ಸೀಟ್ ತೋರಿಸಿ ಅದು ನನ್ನ ಸೀಟ್ ಎನ್ನುವಂತೆ ಕಣ್ಸನ್ನೆ ಮಾಡಿದಾಗ ಎದ್ದು ಆಕೆಗೆ ಕುಳಿತುಕೊಳ್ಲಲು ಅನುವು ಮಾಡಿಕೊಟ್ಟೆ. ಪರಂಗಿಯರು ಸೋಶಿಯಲ್ ಎನ್ನುವುದು..ಕುಳಿತ ಎರಡೇ ನಿಮಿಷದಲ್ಲಿ ಆಕೆ ಮಾತು ಕತೆಗೆ ಪ್ರಾರಂಭಿಸಿದ್ದರಿಂದ ಖಚಿತವಾಯ್ತು....
“ಸೀಮ್ಸ್, ಯೂ ಆಲ್ಸೋ ಕೇಮ್ ಅಟ್ ದಿ ಲಾಸ್ಟ್ ಮೊಮೆಂಟ್” ಎಂದಳು...
“ಯೆಸ್...ಮೀನ್ಸ್..ಯೂ ಟೂ...??”  ಐ ಹ್ಯಾಡ್ ಲಿಟ್ಲ್ ಪ್ರಾಬ್ಲಂ ವಿಥ್ ಮೈ ಪಾಸ್ಪೋರ್ಟ್..”ಎಂದೆ.
ಓಹ್...ಈಸ್ ಇಟ್....?? ಫಾರ್ ಮೀ ಟೂ..., ಐಯಾಮ್ ಬೇಸಿಕಲಿ ಫ್ರಂ ಕಜಾಕಿಸ್ತಾನ್ (ಫಾರ್ಮರ್ ರಶ್ಯನ್ ಸ್ಟೇಟ್), ಬಟ್ ಹ್ಯಾವಿಂಗ್ ಎ ಸ್ಮಾಲ್ ಬ್ಯುಸಿನೆಸ್ ಇನ್ ಬ್ರುಸೆಲ್ಸ್..., ಮೈ ವ್ಯಾಲೆಟ್ ವಿಥ್ ಪಾಸ್ಪೋರ್ಟ್, ಕ್ಯಾಶ್ ಅಂಡ್ ಮೈ ಕ್ರೆಡಿಟ್ ಕಾರ್ಡ್ಸ್ ವಾಸ್ ಸ್ನ್ಯಾಚ್ಡ್ ಇನ್ ಎ ಬಸ್ ಸ್ಟಾಪ್ ಇನ್ ಬ್ರಸಲ್ಸ್” ಎಂದಳು..

ವಾಟ್..!!!?? ಯೂ ಟೂ ಲಾಸ್ಟ್ ಯುವರ್ ಪಾಸ್ಪೋರ್ಟ್...!!!!!!??? ಎಂದೆ....

Friday, July 19, 2013

ಕರ್ ಭಲಾ ತೋ ಹೋ ಭಲಾ....


ಸುಮಾರಾಗೇ ಇಂಗ್ಲೀಷ್ ಬಲ್ಲ ಪೋಲೀಸ್ ಠಾಣಾಧಿಕಾರಿ ತನ್ನ ಚೇಂಬರಿನಲ್ಲಿ ನನ್ನನ್ನು ಸಾವಕಾಶವಾಗಿ ಕುಳಿತುಕೊಳ್ಳಲು ಹೇಳಿ ಬರೆಯಲಾರಂಭಿಸಿದ... ನನ್ನನ್ನು ವಿವರಣೆ ಕೇಳುತ್ತಾ...
“ಹೇಳಿ...ಹೇಗಾಯ್ತು ಎಲ್ಲಾ.....” ನಾನು ವಿವರಣೆ ಕೊಡಲಾರಂಭಿಸಿದೆ.
“ನಾನು ಡಾ. ಆಜಾದ್ ಅಂತ, ಭಾರತೀಯ ಮೂಲದವನು ಈಗ ಕುವೈತಲ್ಲಿ ವಿಜ್ಞಾನಿಯಾಗಿ ಕೆಲ್ಸ ಮಾಡುತ್ತಿದ್ದೇನೆ....”
......!! ಸ್ವಲ್ಪ ಮಟ್ಟಿಗೆ ಕಾಟಾಚಾರ ಎದ್ದು ಕಾಣುತ್ತಿದ್ದ ಆತನ ವರ್ತನೆಯಲ್ಲಿ ನನ್ನ ಮಾತು ಕೇಳಿ ಗಂಭೀರತೆ ಮನೆ ಮಾಡಿತು ಎನಿಸುತ್ತೆ... ಆತನೆಂದ..
“ಓಹ್..!! ಹೌದೇ..?? ಸರಿ ಹೇಳಿ” ಆಸಕ್ತಿ ತೋರುತ್ತಾ ..
“ಇಲ್ಲಿ ಆಂಟ್ವೆರ್ಪ್ ಯೂನಿವರ್ಸಿಟಿಲಿ ಬಯೋಟೆಕ್ ಕಾನ್ಫರೆನ್ಸಿಗೆ ಬಂದೆ, ಈ ದಿನ ಗೆಂಟ್ ಯೂನಿವರ್ಸಿಟಿಯ ನನ್ನ ಸ್ನೇಹಿತನೊಬ್ಬ ನನ್ನು ನೋಡಲು ಹೊರಟು ಟಿಕೆಟ್ ತೆಗೆದುಕೊಂಡು ಇಲ್ಲಿಗೆ ಬಂದೆ, ತಿಂಡಿ ತಿನ್ನುವಾಗ ಒಬ್ಬನನ್ನು ಟ್ರೈನ್ ಬಗ್ಗೆ ಖಚಿತಪಡಿಸಿಕೊಳ್ಳಲು ಕೇಳಿದೆ, ಆತ ಹೌದು ಇದೇ ಟ್ರೈನು ಎಂದು ಎರಡನೇ ಪ್ಲಾಟ್ ಫಾರ್ಮ್ ನ ಟ್ರೈನನ್ನು ತೋರಿದ, ನಾನೂ ವೇಳಾಪಟ್ಟಿಯಲ್ಲಿ ಸಮಯ ಖಚಿತಪಡಿಸಿಕೊಂಡೆ. ತಿಂಡಿ ತಿಂದು ಇನ್ನೇನು ೮-೧೦ ನಿಮಿಷದಲ್ಲಿ ಟ್ರೈನು ಹೊರಡುತ್ತೆ ಎನ್ನುವಾಗ ನೀರಿನ ಬಾಟಲ್ ಕೊಂಡು ಕೆಲ ಫೋಟೋ ತೆಗೆದು ಹೆಗಲಿಗೆ ನನ್ನ ಲ್ಯಾಪ್ ಟಾಪ್ ಬ್ಯಾಗ್, ಕ್ಯಾಮರಾ ಬ್ಯಾಗ್ ಮತ್ತು ಕಾನ್ಫರೆನ್ಸ್ ಬ್ಯಾಗ್ ಏರಿಸಿ, ಛಾಯಾಗ್ರಹಣ ಮಾಡುತ್ತಿದ್ದರಿಂದ ಕೊರಳಲ್ಲಿ ಕ್ಯಾಮರಾ ತೂಗಿ ಬಿಟ್ಟು, ನನ್ನ ಲಗೇಜ್ ಬ್ಯಾಗಿನ ಟ್ರಾಲಿ ಹ್ಯಾಂದಲ್ ಹಿಡಿದು ಬ್ಯಾಗ್ ಅನ್ನು ಉರುಳಿಸಿಕೊಂಡು ಟ್ರೈನಿನ ನಾಲ್ಕನೇ ಡಬ್ಬಕ್ಕೆ ಹತ್ತಿದೆ. ಹತ್ತುವುದಕ್ಕೆ ಮುಂಚೆ ಟ್ರಾಲಿ ಹ್ಯಾಂಡಲನ್ನು ತಳ್ಳಿ ಒಳ ಸೇರಿಸಿ, ಮೇಲಿನ ಹಿಡಿಯನ್ನು ಹಿಡಿದು ಟ್ರೈನಿನ ಬಾಗಿಲ ಮೆಟ್ಟಿಲು ಹತ್ತಿದೆ. ಇನ್ನೇನು ಒಳಗೆ ಲಗ್ಗೇಜ್ ಬ್ಯಾಗ್ ಇಡಬೇಕು ಎನ್ನುವಾಗ ಹ್ಯಾಂಡಲ್ ಕಿತ್ತು ಕೈಗೆ ಬಂತು (ವಿಮಾನ ಲಗ್ಗೇಜ್ ಸಾಗಣೆ ವ್ಯವಸ್ಥೆಯ ಕೃಪೆ ಅದು ಒಡೆದಿತ್ತು). ಸರಿ, ಲ್ಯಾಪ್ ಟಾಪ್, ಕ್ಯಾಮರಾ ಬ್ಯಾಗ್ ಮತ್ತು ಕಾನ್ಫರೆನ್ಸ್ ಬ್ಯಾಗ್ ಅನ್ನು ಸೀಟಿನ ಮೇಲಿಟ್ಟು ಲಗೇಜ್ ತೆಗೆಯೋಣ ಎಂದು ನಾಲ್ಕನೇ ಸಾಲಿನ ಸೀಟೊಂದರಲ್ಲಿ ಅವುಗಳನ್ನು ಇಟ್ಟು ಬ್ಯಾಗ್ ತರಲು ಬಂದೆ. ಬ್ಯಾಗ್ ತೆಗೆದುಕೊಳ್ಳುವಾಗ ಸ್ಟೇಶನ್ ನ  ಮೊದಲ ಮತ್ತು ಎರಡನೇ ಪ್ಲಾಟ್ ಫಾರಂ ನ ಪ್ರವೇಶ ದ್ವಾರದ ದೃಶ್ಯ ಮೋಹಕವಾಗಿ ಕಂಡಿತು ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಬ್ಯಾಗ್ ತಳ್ಳಿಕೊಂಡು ಒಳಬಂದು ಲಗೇಜ್ ಸ್ಟಾಂಡಲ್ಲಿ ಬ್ಯಾಗ್ ಇಟ್ಟು ನನ್ನ ಸೀಟಿನತ್ತ ನೊಡ್ತೇನೆ... ಲ್ಯಾಪ್ ಟಾಪ್ ಬ್ಯಾಗ್ ಮಿಸ್ಸಿಂಗು...!!!! ಗಾಬರಿಯಲ್ಲಿ ಅಲ್ಲಿಂದ ಮುಂದಕ್ಕೆ ಎರಡನೇ ಸೀಟಲ್ಲಿದ್ದ ಪ್ರಯಾಣಿಕನನ್ನು ನಾನು ಇಲ್ಲಿಟ್ಟಿದ್ದ ಬ್ಯಾಗ್ ಕಾಣ್ತಿಲ್ಲ...ನೀವು...... ಎನ್ನುತ್ತಿರುವಂತೆಯೇ..ಆತ ನಾನು ಈ ಮುಂಚೆ ಟ್ರೈನ್ ಬಗ್ಗೆ ವಿಚಾರಿಸಿದಾತನೇ ಎಂದು ಮನದಟ್ಟಾಯಿತು, ಆತ ..ಹಿ ಹಿ..ಟುಕ್ ದಟ್..ಹಿ ರಾನ್ ಔಟ್ (ಅವನು ತಗೊಂಡು ಓಡಿ ಹೋದ) ಎಂದು ಮುಂದಿನ ಬಾಗಿಲು ತೋರಿದ.. ನನಗೆ ಕೋಪ ನೆತ್ತಿಗೇರಿತು.. ಯೂ ಬ್ಲಡಿ...ಹಿಡಿಯೋಕೆ ಆಗ್ತಿರ್ಲಿಲ್ವಾ ಅವನ್ನ... ನೋಡ್ಕೊಂಡು ಕೂತಿದ್ದೀಯಾ..?? ವೈ ಯು ಡಿಡ್ ನಾಟ್ ಶೌಟ್..ಅಂಡ್ ಕಾಲ್ ಮಿ.... ಅಂತ ರೇಗಿದೆ....”
ಮಧ್ಯೆ ಬಾಯಿ ಹಾಕಿದ ಅಧಿಕಾರಿ...
ನೀನು ಇಂಗ್ಲೀಷಲ್ಲಿ ಅವನ್ನ ಕೇಳಿದೆಯಾ...??
ಅರೆ ..ಹೌದಲ್ಲಾ ..!! ಆಗ ನೆನಪಾಯಿತು ನನಗೆ ನನ್ನ ಗಾಬರಿಯಲ್ಲಿ ಬೇಗ ಬಂದಿದ್ದು ಕನ್ನಡ ಬಾಯಿಗೆ... ’ಯೂ ಬ್ಲಡಿ...ಹಿಡಿಯೋಕೆ ಆಗ್ತಿರ್ಲಿಲ್ವಾ ಅವನ್ನ... ನೋಡ್ಕೊಂಡು ಕೂತಿದ್ದೀಯಾ..?  ಅಂದಿದ್ದೆ.... ಕನ್ನಡದಲ್ಲಿ....!!!!!
ನಾನು...
“ಯಾ ಯಾ... ಇನ್ ಇಂಗ್ಲೀಷ್ .” ಎಂದೆ
ಗೊತ್ತಿಲ್ಲ, ಸುಳ್ಳು ಯಾಕೆ ಹೇಳಿದೆ..?? ಅಥವಾ ಕನ್ನಡ ಎಂದಿದ್ದರೆ ಇಂಗ್ಲೀಷೇ ಸರಿಯಾಗಿ ಬಾರದ ಅವನು...’ಇದು ಯಾವ ಭಾಷೆ??’ ಎಂದೆಲ್ಲಾ ಸುಮ್ಮನೆ ಕಾಲಹರಣವಾಗುತ್ತೆ ಎಂದೋ.....ಅಂತೂ ಆತ
“ಓಕೆ...ದೆನ್ ವಾಟ್ ಹ್ಯಾಪನ್ಡ್...”(ಮತ್ತೇನಾಯಿತು) ಎಂದ
“ ನಾನು ಕೆಳಕ್ಕೆ ಓಡಿದೆ, ರೈಲ್ವೇ ಗಾರ್ಡ್ ನನ್ನ ಏನಾಯ್ತು ಅಂತ ಕೇಳಿ ಅವನೂ ಸಹಾಯಕ್ಕೆ ಬಂದ, ನೀನು ಆ ಕಡೆಯಿಂದ ಕೆಳಗಿಳಿದು ಬಾ, ನಾನು ಈ ಕಡೆಯಿಂದ ಬರ್ತೇನೆ ಎಂದ, ಕೆಳಗಿಳಿದು ನೋಡಿದ್ರೆ ಸುಮಾರು ಏಳೆಂಟು ಹೊರ ಬಾಗಿಲುಗಳಿವೆ, ತೋಚಲಿಲ್ಲ, ಯಾವುದರ ಮೂಲಕ ಹೋದ ಎಂದು.. ಅಲ್ಲೇ ಬೆಂಚಿನ ಮೇಲೆ ಹತ್ತು ಸೆಕೆಂಡ್ ಕೂತೆ... ಅಲ್ಲಿವರೆಗೆ ಏನಾಗುತ್ತಿದೆ ಎನ್ನುವ ಪರಿವೆಯೇ ನನಗಿರಲಿಲ್ಲ ಎಲ್ಲಾ ತನ್ನಷ್ಟಕ್ಕೆ ಆಗ್ತಿತ್ತು. ಅಲ್ಲಿ ಕೂತ ಮೇಲೆ ಯೋಚನೆ ಸ್ಥಿಮಿತಕ್ಕೆ ಬಂತು... ತಕ್ಷಣ ನೆನಪಾಗಿದ್ದು ಟ್ರೈನ್ ಹೊರಡಲು ಒಂದೆರಡು ನಿಮಿಷ ಇರಬಹುದು ಎಂದು ಹಿಂದೆಯೇ ನೆನಪಾದದ್ದು ಟ್ರೈನಲ್ಲಿರುವ ನನ್ನ ಲಗ್ಗೇಜ್ ಬ್ಯಾಗ್ ಮತ್ತಿತರ ಬ್ಯಾಗ್.....ಕ್ಯಾಮರಾ ಕೊರಳಲ್ಲೇ ಇತ್ತು..!!!!
ಮೇಲೆ ಬಂದೆ, ಗಾರ್ಡ್ ’ನಿಮ್ಮ ಲಗೇಜ್ ತೆಗೆದುಕೊಳ್ಳಿ, ಪೋಲಿಸ್ ಗೆ ತಿಳಿಸಿ ರಿಪೋರ್ಟ್ ತೆಗೆದುಕೊಳ್ಳಿ ನಿಮ್ಮ ಬೇರೆ ಪಾಸ್ಪೋರ್ಟ್ ಮಾಡಿಸಲು ಅನುಕೂಲ ಆಗಬಹುದು ಎಂದ. ಟ್ರೈನಿಗೆ ಹೋಗಿ ಲಗ್ಗೇಜ್ ಮತ್ತಿತರ ಬ್ಯಾಗ್ ತೆಗೆದುಕೊಂಡು ನಿಮ್ಮಲ್ಲಿಗೆ ಬಂದೆ.....”
ಅಂದು ಸುದೀರ್ಘ ವಿವರಣೆ ನೀಡಿದೆ...
ಪೋಲೀಸ್ ಕೇಳಿದ -“ನೀವು ಕಳ್ಳನ್ನ ನೋಡಿದ್ರಾ ? ಹೇಗಿದ್ದ ಅವ??”
“ಹೌದು ನಾನು ಬಾಗಿಲಿಂದ ಇಳಿದಾಗ ಅವನು ಮೆಟ್ಟಿಲಿಳಿಯಲು ಓಡುತ್ತಿದ್ದ ಕಂಕುಳಲ್ಲಿ ನನ್ನ ಬ್ಯಾಗ್ ಇತ್ತು, ನನ್ನ ಕೂಗಾಟದಿಂದ ವನ ವೇಗ ಹೆಚ್ಚಾಯ್ತು, ಸಪೂರ ದೇಹ, ನುಸುಗಪ್ಪು ಕೋಟು ಹಾಕಿದ್ದ ಕಡು ಬೂದು ಬಣ್ಣದ (ಇರಬಹುದು) ಪ್ಯಾಂಟ್ ಹಾಕಿದ್ದ, ಸುಮಾರು ೪೦ ರ ಆಸುಪಾಸಿನ ವಯಸ್ಸಿರಬಹುದು.” ಎಂದೆ.
ನನ್ನನ್ನು ದಿಟ್ಟಿಸಿ ನೋಡಿದ ಅಧಿಕಾರಿ ನಿಜಕ್ಕೂ ನಿಮ್ಮ ಬ್ಯಾಗ್ ಕಳುವಾಗಿದೆಯೇ ಎಂದ...??
ನನಗೆ ಆಶ್ಚರ್ಯ ಮತ್ತು ಕೋಪ ಒಟ್ಟಿಗೆ ಬಂತು... ಆದರೆ ತಕ್ಷಣ ಏಕಿರಬಹುದು ಎಂದು ಊಹಿಸಿದೆ...
ನಿಜಕ್ಕೂ ಆ ಎರಡು ನಿಮಿಷ ಬಿಟ್ಟರೆ ಗಾಬರಿ ಇರಲಿಲ್ಲ ನನ್ನ ಮುಖದಲ್ಲಿ. ಬೆಂಚಿನ ಮೇಲೆ ಕುಂತು ಮೇಲೆ ಬಂದಮೇಲೆ ನನಗೆ ಮುಂದೇನು ಮಾಡಬಹುದು ಎಂಬುದರ ಲೆಕ್ಕಾಚಾರ ತಲೆಯಲ್ಲಿ ಓಡುತ್ತಿತ್ತು...ಹಾಗಾಗಿ ಶಾಂತ ಕಂಡ ನನ್ನನ್ನು ನೋಡಿ ಆತನಿಗೆ ಹಾಗನ್ನಿಸಿರಬೇಕು..ಎಂದುಕೊಂಡು... ಆತನ ಮುಖ ನೋಡಿದೆ.. ಆತನೇ ಹೇಳಿದ
“ಸಾಮಾನ್ಯವಾಗಿ ಅಮೂಲ್ಯ ವಸ್ತು ಕಳಕೊಂಡವರು ದಿಕ್ಕು ತೋಚದೇ ಕುಳಿತುಕೊಳ್ಳುತ್ತಾರೆ..ನೀವು ಹೀಗೆ ಕೂಲ್ ಆಗಿರುವುದರಿಂದ ಹಾಗೆ ಕೇಳಿದೆ, ಕ್ಷಮಿಸಿ” ಎನ್ನುತ್ತಾ...
“ಬಂದೆ ಇರಿ, ಎಲ್ಲಾ ರಿಪೋರ್ಟ್ ಮಾಡಿದ್ದೇನೆ ನಿಮ್ಮ ವಿವರ ತುಂಬಬೇಕಷ್ಟೇ” ಎಂದು ಇನ್ನೊಂದು ಕೊಠಡಿಗೆ ಹೋದ...
ನಾನು ನನ್ನ ಲಗೇಜ್ ಬ್ಯಾಗನ್ನೊಮ್ಮೆ ಬಿಚ್ಚಿ ನೋಡಿಕೊಂಡೆ...ಒಂದು ವೇಳೆ ಪಾಸ್ ಪೋರ್ಟ್ ಮತ್ತು ಟಿಕೆಟ್ ಇದರಲ್ಲಿದೆಯಾ ?? ಎಂದು ಆಶಾಭಾವದೊಂದಿಗೆ... ಊಹೂಂ.... ಖಾಲಿ ಮೇಲಿನ ಪೌಚ್ ಅಣಕಿಸಿತು ನನ್ನ, ಯಾಕಂದ್ರೆ ಅಲ್ಲಿಯೇ ಇದ್ದ ಟಿಕೆಟ್, ಪಾಸ್ ಪೋರ್ಟ್ ಮತ್ತು ಇನ್ಶೂರೆನ್ಸ್ ದಾಖಲೆಗಳ ಕವರನ್ನು ಹೋಟೆಲಿಂದ ಹೊರಡುವಾಗ ಲ್ಯಾಪ್ ಟಾಪ್ ಬ್ಯಾಗಿಗೆ ಹಾಕಿದ್ದೆ....!!!!
೫ ನಿಮಿಷದ ನಂತರ ಅಧಿಕಾರಿ ಎರಡು ಹಾಳೆಗಳ ರಿಪೋರ್ಟ್ ನೊಂದಿಗೆ ಹಾಜರಾದ. ನನ್ನ ಹೆಸರು, ಪಾಸ್ಪೋರ್ಟ್ ನಂಬರ್, ಲ್ಯಾಪ್ ಟಾಪ್ ಬ್ರಾಂಡ್ ಎಲ್ಲಾ ವಿವರ ಪೆನ್ನಿನ ಮೂಲಕ ಅದರಲ್ಲಿ ನಮೂದಿಸಿ ನನಗೆ ಸಹಿ ಮಾಡಲು ಹೇಳಿ ಸಹಿ ಮಾಡಿಸಿಕೊಂಡು ತನ್ನ ಸಹಿ ಹಾಕಿ ಸೀಲ್ ಒತ್ತಿ, ಒಂದು ಪ್ರತಿ ತನ್ನ ಬಳಿ ಇಟ್ಟುಕೊಂಡು ಮೂಲ ನನಗೆ ಕೊಟ್ಟು... ಸಾರಿ ಫಾರ್ ದಿ ಅನ್ ಫಾರ್ಚುನೇಟ್ (ನಿಮಗೆ ಘಟಿಸಿದ ಈ ದುರದೃಷ್ಟಕರ ಘಟನೆಗೆ ನನ್ನ ವಿಷಾದವಿದೆ) ಎಂದು ಹೇಳಿ..ಗುಡ್ ಲಕ್ ಹೇಳಿ, ಬ್ರಸೆಲ್ಸ್ ಭಾರತೀಯ ರಾಯಭಾರಿ ಕಛೇರಿಯ ವಿಳಾಸ ಕೊಟ್ಟು ಪಾಸ್ಪೋರ್ಟ್ ಗೆ ಪ್ರಯತ್ನಿಸಿ ಎಂದು ಹೇಳಿ ಬೀಳ್ಕೊಟ್ಟ.
ಪಾಸ್ಪೋರ್ಟ್ ಪ್ರತಿಗಳೂ ಅದೇ ಬ್ಯಾಗಿನಲ್ಲಿದ್ದವು, ಹೋಟೆಲಿನ ನೆನಪಾಯ್ತು, ಬಹುಶಃ ಅವರು ನನ್ನ ಪಾಸ್ಪೋರ್ಟ್ ಪ್ರತಿ ಇಟ್ಟಿರಬಹುದಾ..?? ಇನ್ನೊಂದು ಆಸೆ ಕಿರಣ...!!!!
ಹೋಟೆಲ್ ಗೆ ಬಂದೆ (ಸ್ಟೇಶನ್ ಪಕ್ಕದಲ್ಲೇ ಇದ್ದಿದ್ದರಿಂದ, ಎರಡೇ ನಿಮಿಷದಲ್ಲಿ ಅಲ್ಲಿಗೆ ಬಂದೆ).
ಸ್ವಾಗತಕಟ್ಟೆ (ರಿಸೆಪ್ಶನ್ ಕೌಂಟರ್ನ ಚನ್ನಾಗಿ ಇಂಗ್ಲೀಷ್ ಬಲ್ಲವಳು ಮತ್ತು ಸಂಭಾವಿತ ನಡೆ ನುಡಿಯ) ಹುಡುಗಿ
“ಯೆಸ್ ಸರ್ ಏನಾಯ್ತು” ಎಂದಳು
ಎಲ್ಲಾ ವಿವರಿಸಿದೆ, ಓಹ್ ಮೈ ಗಾಡ್ ಎಂದು ತನ್ನ ಅನುಕಂಪ ತೋರಿ..ಪ್ಲೀಸ್ ಹ್ಯಾವ್ ಸೀಟ್ ಅಂತ ನನ್ನ ಕುಳ್ಳಿರಿಸಿ.. ವಾಟ್ ವುಡ್ ಯು ಲೈಕ್ ಟು ಹ್ಯಾವ್ (ಏನು ತಗೋತೀರಿ), ಕಾಫಿ, ಟೀ, ಜ್ಯೂಸ್..ಎಂದಳು
ದಾಕ್ಷಿಣ್ಯ..ಸಂಕೋಚ ತೋರದೇ “ಜ್ಯೂಸ್” ಎಂದೆ
ಜ್ಯೂಸ್ ಕೊಟ್ಟಳು ಕುಡಿಯುತ್ತಾ, ನಿಮ್ಮಲ್ಲಿ ನನ್ನ ಪಾಸ್ಪೋರ್ಟ್ ಕಾಪಿ ಇದೆಯೇ ಎಂದೆ
ಇಲ್ಲ ವೀಸಾ ಪುಟ ಮಾತ್ರ ತಗೋತೀವಿ ಅದರ ಪ್ರತಿ ಒಂದೆರಡು ಕೊಡುತ್ತೇನೆ ಎಂದು, ಎರಡು ಪ್ರತಿ ಮಾಡಿಕೊಟ್ಟು..ಮತ್ತೇನಾದರೂ ಸಹಾಯ ಬೇಕಿದ್ದರೆ ತಿಳಿಸಿ ಎಂದಳು...
ಆಕೆಗೆ ಧನ್ಯವಾದ ಹೇಳಿ, ಬ್ರಸಲ್ಸ್ ಭಾರತೀಯ ಎಂಬಸಿ ಗೆ ಫೋನ್ ಮಾಡಲಾಗುತ್ತದೆಯೇ..?? ಎನ್ನುತ್ತಿರುವಂತೆಯೇ..
ಫೋನಾಯಿಸುತ್ತಾ.. ನಂಬರ್ ಹೇಳಿ ಎಂದಳು..
ಎಂತಹ..ವಿಲೋಮಗಳು..ವಿಪರೀತಗಳು...!!! ನನಗೆ ಆಶ್ಚರ್ಯ ಎನಿಸಿತು.. ಎಲ್ಲಾ ದಿಕ್ಕೆಡುವಿಕೆಗೆ ದೂಡಿದ ನಿರ್ದಯಿ ಕಳ್ಳ ಒಂದೆಡೆ, ನನಗೆ ಮಾರ್ಗ (ಗೊತ್ತಿಲ್ಲ) ತೋರಿ ರೈಲಿಬ ಬಗ್ಗೆ ಹೇಳಿಯೂ ಕಳ್ಳನನ್ನು ಕಂಡೂ ಸುಮ್ಮನಿದ್ದ ಸಹಪ್ರಯಾಣಿಕ ಇನ್ನೊಂದೆಡೆ, ತನ್ನ ಕೈಲಾದ ಸಹಾಯ ಮಾಡಿದ ರೈಲ್ವೇ ಗಾರ್ಡ್, ಸೌಹಾರ್ದವಾಗಿ ವರ್ತಿಸಿದ ಪೋಲೀಸ್ ಅಧಿಕಾರಿ, ಬಲು ಸಂಭಾವಿತ ನಡೆ ತೋರಿ ಸಹಕರಿಸಿದ ಹೋಟೆಲ್ ರಿಸೆಪ್ಶನಿಷ್ಟ್ ಮಗದೊಂದೆಡೆ..!!! ಎಂತಹ ವಿಚಿತ್ರ?? ಏನು ತಿರುವುಗಳು...??? ವಿಧಿ, ಜೀವನ ಎಂದರೆ ಇದೇ...!!!
ರಿಸೆಪ್ಶನಿಷ್ಟ್ ನಿಂದ ಎಂಬಸಿಯ ವಿವರ ಪಡೆದು ಮತ್ತೆ ಅದೇ ಸ್ಟೇಷನ್ನಿಗೆ ಬಂದೆ... ಟಿಕೆಟ್ ಗೆ ಹೋದಾಗ ನನ್ನ ಮುಖ ಕಂಡು ಮುಂಗಟ್ಟಿನ (ಕೌಂಟರಿನ) ವ್ಯಕ್ತಿ.. ಹುಬ್ಬೇರಿಸಿದ... “ಏಕೆ ಗೆಂಟ್ ಗೆ ಹೋಗಲಿಲ್ಲವಾ ಎನ್ನುವಂತೆ...
ಆತ ಕೇಳುವುದಕ್ಕೆ ಮುಂಚೆಯೇ ಸ್ಥೂಲವಾಗಿ ವಿವರಿಸಿ, ಗೆಂಟ್ ಟಿಕೆಟ್ ವಾಪಸ್ ಪಡೆದು ಬ್ರಸೆಲ್ಸ್ ಟಿಕೆಟ್ ಕೊಡುವಿರಾ ಎಂದಾಗ... ನೋ ಪ್ರಾಬ್ಲಂ... ಅದೇ ಟಿಕೆಟ್ ಮೌಲ್ಯದ್ದೇ ಬ್ರಸಲ್ಸ್ ಟಿಕೆಟ್ ಎಂದು ನನ್ನ ಟಿಕೆಟ್ ಪಡೆದು ಬ್ರಸೆಲ್ಸ್ ಟಿಕೆಟ್ ಕೊಟ್ಟು “ಗುಡ್ ಲಕ್” ಎಂದು ಶುಭಕೋರಿದ... !!! ಹೀಗೂ ಇರ್ತಾರೆ..ಎನಿಸಿತು, ಬಹುಶಃ ನಕಾರಾತ್ಮಕ ಛಾಪು ಕಡಿಮೆಯಾಗತೊಡಗಿತ್ತು ಮನದಲ್ಲಿ ಬೆಲ್ಜಿಯಂ ಬಗ್ಗೆ.
ಪುಣ್ಯಕ್ಕೆ ಈ ಸಲದ ಟ್ರೈನ್ ಕೆಳಗಿನ ಪ್ಲಾಟ್ ಫಾರಂ...!!! ಟ್ರೈನಿಗಾಗಿ ಕಾದೆ, ಐದು ನಿಮಿಷದಲ್ಲಿ ಟ್ರೈನ್ ಬಂತು, ಹತ್ತಿ ಕುಳಿತೆ... ಒಂದು ಬ್ಯಾಗ್ ಕಡಿಮೆ ಆಗಿತ್ತು ...!!! ಹಾಗಾಗಿ ಎಣಿಕೆ ತಪ್ಪಲಿಲ್ಲ....
೪೦ ನಿಮಿಶದಲ್ಲಿ ಬ್ರಸೆಲ್ಸ್ ಸೆಂಟ್ರಲ್ ನಲ್ಲಿಳಿದೆ.


ಆ ವೇಳೆಗೆ ಸಂಜೆಯ ನಾಲ್ಕು ಗಂಟೆಗೆ ಐದು ನಿಮಿಷ ಬಾಕಿ. ತಡ ಮಾದದೇ ಟ್ಯಾಕ್ಸಿ ಹಿಡಿದು ಅಡ್ರೆಸ್ ತೋರಿಸಿದೆ, ೧೨ ಯೂರೋ ತೆಗೆದುಕೊಂಡು ಭಾರತೀಯ ಎಂಬಾಸಿ ಬಳಿ ಇಳಿಸಿದ. ೪೫-೫೦ ಕಿಮೀ ಗೆ ೭ ಯೂರೋ, ಎರಡು ಕಿಮೀ ದೂರದ ಭಾರತೀಯ ಎಂಬಾಸಿಗೆ ೧೨ ಯೂರೋ..!!! ವಾಹ್ ಬೆಲ್ಜಿಯಂ ಟ್ಯಾಕ್ಸಿಯೇ...!!!
ನಾಲ್ಕಕ್ಕೆ ಎಂಬಸಿ ಬಾಗಿಲು ತೆರೆಯಿತು, ದೇಶದ ಹತ್ತಾರು ಮಂದಿ, ಹಿಂದಿ ಇಂಗ್ಲೀಷ್ ಪರಿಚಿತ ಮಾತುಗಳು...!! ಅಬ್ಬಾ...!!!
ಒಳಗಡೆ ಹೋಗಿ ನನ್ನ ಸರದಿಗಾಗಿ ೫ ನಿಮಿಷ ಕಾದೆ. ಮುಂಗಟ್ಟೆಯ ಮಹಿಳೆ (ಬಹುಶಃ ದಕ್ಷಿಣ ಭಾರತದವಳು ಎನಿಸುತ್ತೆ) ಸಾವಕಾಶವಾಗಿ ನನ್ನ ಅಹ್ವಾಲು ಕೇಳಿ ಕೆಲವು ಫಾರ್ಮ್ ಕೊಟ್ಟು ತುಂಬಲು ಹೇಳಿದಳು. ಈ ದಿನದ ವಹಿವಾಟು ಮುಗಿದೆ, ಯಾವುದಕ್ಕೂ ಈ ದಿನ ನೀವು ಅರ್ಜಿ ಸಲ್ಲಿಸಿ ನಾಳೆ ಬೆಳಿಗ್ಗೆ ನಿಮಗೆ ನಮ್ಮ ಕೈಲಾದ ಎಲ್ಲಾ ಸಹಾಯ ಮಾಡುತ್ತೇವೆ ಎಂದು ನನ್ನ ಧೈರ್ಯ ಹೆಚ್ಚಿದಳು. ನಮ್ಮ ಸಾಹೇಬ್ರು ಅಜಯ್ ಅಗರ್ವಾಲ್ ಅಂತ ಅವರನ್ನು ಭೇಟಿ ಮಾಡಿ ಹೇಳಿ ಎಮ್ದೂ ಸಲಹೆ ಕೊಟ್ಟಳು...!!! ಕಳ್ಳ, ಕಳ್ಳನ ಸಹಾಯಕ ಈ ಇಬ್ಬರನ್ನು ಬಿಟ್ಟರೆ...!!!??? ನೆನಪಿಸಿಕೊಂಡು ಮುಗುಳ್ನಕ್ಕೆ, ಏನು? ಏನಾಯ್ತು ಎಂದು ಕೇಳಿದಳು ಆಕೆ...ಕುತೂಹಲದಿಂದ... ಏನಿಲ್ಲ .. ಕಳ್ಳನ ಬಗ್ಗೆ ಯೋಚಿಸಿ ನಗು ಬಂತು ಎಂದೆ... ಈಗ ಆಕೆಯ ಮುಖದಲ್ಲಿ ಆಶ್ಚರ್ಯ ಮತ್ತು ಸಂಶಯ ಸಹಾ ಕಂಡಿತು...ಬಹುಶಃ ಪೋಲೀಸ್ ಅಧಿಕಾರಿಯ ಮನಸ್ಥಿತಿಯೇ ಇಲ್ಲಿಯೂ...!!!!



ಸ್ವಲ್ಪ ಸಮಯದಲ್ಲಿ, ಸರ್... ಸಾಹೇಬ್ರು ಕರೀತಿದ್ದಾರೆ..ಬನ್ನಿ ಎಂದು ಒಳ ಕರೆದಳು. ಒಳ ಹೋದೆ, ಸುಮಾರು ೩೦-೩೨ ವಯಸಿನ ನೀಟಾಗಿ ಬಾಚಿದ ಗೋಧಿ ಮೈಬಣ್ಣದ ೫.೫-೫.೬ ಅಡಿ ಎತ್ತರದ ಮತ್ತು ಸೌಮ್ಯ ಎನಿಸುವ ಮುಖಭಾವದ ಅಧಿಕಾರಿ ಪ್ಲೀಸ್ ಕಮ್ ಇನ್ ಎಂದಾಗ... ನನ್ನ ಆತನ ಬಗ್ಗೆ ಏಕೋ ಒಳ್ಳೆಯ ಮನುಷ್ಯ ಎನಿಸಿತ್ತು.
“ಹೇಳಿ..ಏನಾಯ್ತು... “
ಪೂರ್ತಿ ಕಥೆಯನ್ನು ವಿವರಿಸಿದೆ... ನನ್ನ ಆಶ್ಚರ್ಯಕ್ಕೆ ಆತ ಚಕಿತಗೊಳ್ಲಲಿಲ್ಲ...
“ಡೋಂಟ್ ವರಿ, ಇಂತಹ ಕೇಸುಗಳು ನನಗೆ ವಾರಕ್ಕೆ ಎರಡು ಮೂರಾದ್ರೂ ಸಿಗುತ್ತವೆ” ಎಂದ
ಆತನ ಮಾತು, ಏನೇ ಆಗಬೇಕಿದ್ದರೂ ಒಳ್ಲೆಯ ದಿಶೆಯಲ್ಲೇ ಆಗುತ್ತೆ ಎನ್ನುವ ಭರವಸೆ ಮೂಡತೊಡಗಿತು. ನನ್ನ ಹಿನ್ನೆಲೆ ಮತ್ತು ನನ್ನ ಗೊಂದಲಗಳ ಬಗ್ಗೆ ಹೇಳಿದಾಗ ನನ್ನ ಸ್ಥೈರ್ಯ ಹೆಚ್ಚಿಸುವ ಆತನ ಮಾತು ಇನ್ನೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ.
“ಲುಕ್ ಡಾಕ್ಟರ್ ಆಜಾದ್, ಮೈಂ ಆಪ್ಕೆ ಲಿಯೇ ಜೋ ಭೀ ಬನ್ ಪಡೆಗಾ ಕರೇಂಗೆ, ಟೇಕ್ ಇಟ್ ಫ್ರಂ ಮಿ, ಯೂ ವಿಲ್ ಟ್ರಾವೆಲ್ ಅಸ್ ಪರ್ ಯುವರ್ ಶೆಡ್ಯೂಲ್, ಕಲ್ ಆಪ್ ಸುಬಹ್ ೯.೩೦ ಕೊ ಆಜಾಯಿಯೆ, ಕ್ಯೂ ಜೋ ಭೀ ಹೋ, ಆಪ್ಕಾ ಕೇಸ್ ಪ್ರಯಾರಿಟಿ ಮೆ ಲೇಂಗೆ, ಕುವೈತ್ ಸೆ ಆಪ್ಕೆ ಪಾಸ್ಪೋರ್ಟ್ ಕೆ ಬಾರೆ ಮೆ ಕಂಫ್ಹರ್ಮೇಶನ್ ಮಿಲ್ತೇ ಹೀ ಆಪ್ಕೋ ದೋ ಸಾಲ್ ಕೆ ವ್ಯಾಲಿಡಿಟಿ ಕೆ ಸಾಥ್ ಪಾಸ್ಪೋರ್ಟ್ ಇಶ್ಯೂ ಕರ್ ಕೆ ದೇಂಗೆ”
ನನಗೆ ಈಗಂತೂ ನನ್ನ ಹಣೆಬರಹ ಮತ್ತು ಸಿಗುತ್ತಿದ್ದ ಉತ್ತಮ ಸಹಕಾರೀ ವ್ಯಕ್ತಿತ್ವಗಳ ಕಾರಣ ಭರವಸೆ ಮೂದತೊಡಗಿತ್ತು... ನನ್ನ ಆತಂಕ ಉಳಿದಿದ್ದು..ಒಂದೇ....ಪಾಸ್ಪೋರ್ಟ್ ಸಿಗುತ್ತೆ ಆದರೆ ಕುವೈತಿಗೆ ಪ್ರವೇಶ ಹೇಗೆ...?? ಒಂದು ಕಪ್ಪು ಮೋಡದ ರಜತರೇಖೆ (silver lining in a dark cloud) ಎಂದರೆ ನನ್ನಲ್ಲಿ ಕ್ಷೇಮವಾಗಿದ್ದ ಎಲ್ಲಾ ಕ್ರೆಡಿಟ್ ಕಾರ್ಡ್ಗಳು, ಕುವೈತ್ ನ ಸಿವಿಲ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಎಲ್ಲ ಹೃದಯವಂತರು ತುಂಬಿದ್ದ ಭರವಸೆ.

ಒಳಿತನ್ನು ಎದುರುನೋಡಬೇಕಿದ್ದರೆ ಒಳಿತು ಮಾಡುವ ಮನೋಭಾವ ಮೊದಲಿರಬೇಕು....!! ನನ್ನಮ್ಮ ಹೇಳುತ್ತಿದ್ದ ಮಾತುಗಳು ನೆನಪಾದವು. “ಕರ್ ಭಲಾ ತೋ ಹೋ ಭಲಾ”