Wednesday, February 1, 2012

ಸಹಾಯ ಮಾಡೋದು ಕೆಲವೊಮ್ಮೆ..???!! ಆದ್ರೂ ಪರ್ವಾಗಿಲ್ಲ.. ಲೇಖನದ ಮುಂದುವರೆದ ಭಾಗ........................(ಈ ಹಿಂದೆ)....

http://bhava-manthana.blogspot.com/



ಲೇಖನದ ಮುಂದುವರೆದ ಭಾಗ........................(ಈ ಹಿಂದೆ)......
ಮತ್ತೆ ಆತ ಪರ್ಸ್ ಚೆಕ್ ಮಾಡಿದ... “no no U only have taken….U gave me back the empty purse… return my tickets…” (ಇಲ್ಲ ಇಲ್ಲ ನೀನೇ ತೆಗೆದುಕೊಂಡಿದ್ದೀಯಾ!! ಕೊಡು ನನ್ನ ಟಿಕೆಟ್, ನನಗೆ ಖಾಲಿ ಪರ್ಸ್ ಕೊಟ್ಟಿದ್ದೀಯಾ).ನನಗೆ ಏನು ಹೇಳಬೇಕೋ ತೋಚದಾಯಿತು... ಅವನು, ಅವನ ಹೆಂಡತಿ ..ನಾನೇ ಟಿಕೆಟ್ ಕದ್ದಿದ್ದೀನಿ ಅನ್ನೋ ತರಹ ವರ್ತಿಸೋಕೆ ಪ್ರಾರಂಭಿಸಿ.. ನೀನು ಇಲ್ಲೇ ಕೂತ್ಕೋ ಅಂತ ಅಲ್ಲೇ ಕೂರುಸ್ಕೊಂಡ್ರು.. ಅವರ ಮಕ್ಕಳಿಬ್ಬರೂ ಅಮ್ಮನ ಹತ್ತಿರ ಪಿಸುಗುಡ್ತಾ ಇದ್ರು... “ಅಮ್ಮಾ ಪಾಪ ಅವರು ನಮ್ಮ ಪರ್ಸ್ ತಗೊಂಡ್ ಬಂದು ಕೊಟ್ಟಿದ್ದಾರೆ..ಅಂತಹುದರಲ್ಲಿ ಅವರು ಏಕೆ ಕದಿಯುತ್ತಾರೆ..?” ಎನ್ನುವಂತೆ ಹೇಳಿರಬೇಕು...ಅವರಮ್ಮ ’ನೀವು ಸುಮ್ಮನಿರಿ ಯಾರು ಎಂಥವರು ಹೇಳೋಕೆ ಆಗೊಲ್ಲ...’ ಎಂದವಳು ಗಂಡನ ಕಿವಿಯಲ್ಲಿ ಏನೋ ಕಿವಿಯಲ್ಲಿ ಪಿಸುಗುಟ್ಟಿದಳು...
............................................................................................

ಮುಂದುವರೆದ ಭಾಗ ...........

ಬಂಗಾಲಿ ಮಹಾಶಯ ನನ್ನ ಬಳಿ ಬಂದು ಕೂತ...” mister, If U want I will give you 50 rupess, please give my tickets back…” (ನಿನಗೆ ಬೇಕಾದ್ರೆ ಐವತ್ತು ರೂಪಾಯಿ ಕೊಡ್ತೇನೆ..ನನ್ನ ಟಿಕೆಟ್ ಕೊಟ್ಟುಬಿಡು) ನನಗೆ ಪಿತ್ತ ನೆತ್ತಿಗೇರಿತ್ತು.. “ what..? !! see, I gave you the purse, I didn’t open even, what was there, and what was not there, I don’t know…, do what ever U want.. one should not help any body these days” (ಏನು? ನೋಡ್ರಿ, ನಿಮ್ಮ ಪರ್ಸಲ್ಲಿ ಏನಿತ್ತೋ ಏನಿಲ್ವೋ ನಾನು ನೋಡಿಲ್ಲ ನಿಮಗೆ ತಂದು ಕೊಟ್ಟಿದ್ದೇನೆ, ನಿಮಗೆ ಬೇಕಾದ್ದು ಮಾಡಿಕೊಳ್ಳಿ... ಈ ಕಾಲದಲ್ಲಿ ಒಬ್ಬರಿಗೆ ಸಹಾಯ ಮಾಡೋದೂ ತಪ್ಪೇ..??!!) ಎಂದು ಹೊರಡಲು ಹೋದರೆ... ಆತ ಮತ್ತು ಆಕೆ ನನ್ನ ಕೈ ಹಿಡಿದು ಅಲ್ಲೇ ಕುಳ್ಳಿರಿಸಿದರು... ಆತ.. ಕೋಪ, ಬೆವರು.. ಉದ್ವಿಗ್ನತೆಯಿಂದ... “No, U cant go,,, let the TTE come, I report to the next station police…, yes..yes…”  ಎಂದವನೇ ನನ್ನ ಕೈ ಹಿಡಿದುಕೊಂಡ... ಅಷ್ಟರಲ್ಲಿ ಅಕ್ಕ ಪಕ್ಕದವರು...

“ಅಲ್ಲ ಸ್ವಾಮಿ ಅವರು ಪರ್ಸ್ ತಂದುಕೊಟ್ಟಿದ್ದಾರೆ ಅಂದರೆ ಅದ್ರಲ್ಲಿಂದ ಬರೀ ಟಿಕೆಟ್ ತಗೊಂಡು ಏನು ಮಾಡ್ತಾರೆ? ಅಲ್ಲದೇ ಅವರೂ ನಮ್ಮ ತರಹ ಕಲ್ಕತ್ತಾಗೆ ಬರ್ತಿರೋರು..., ಹಾಗೆ ಮಾಡ್ಬೇಕಾಗಿದ್ರೆ ನಿಮ್ಮ ಪರ್ಸ್ ಯಾಕೆ ವಾಪಸ್ ಕೊಡ್ತಿದ್ರು...??” ಎಂದರು ಹಿಂದಿಯಲ್ಲಿ.

ಅದಕ್ಕೆ ಆ ಬಂಗಾಲಿ ತನ್ನ ಅರ್ಧಂಬರ್ಧ ಹಿಂದಿಯಲ್ಲಿ “ ಇಲ್ಲ ಭೈ ಸಾಬ್ ಇವ್ರದ್ದೆಲ್ಲಾ ಒಂದು ರಾಕೆಟ್ ಇರುತ್ತೆ... ಟಿಕೆಟ್ ಎತ್ತಿ ತನ್ನ ಗುಂಪಿನವರಿಗೆ ಕೊಟ್ಟಿರ್ತಾನೆ... ಆಮೇಲೆ ಹಣ ಹಂಚ್ಕೋತಾರೆ ಕ್ಯಾನ್ಸಲ್ ಮಾಡ್ಸಿ...” ಅಂತೆಲ್ಲಾ ಅರ್ಥವಿಲ್ಲದೇ ಬಡಬಡಾಯಿಸುತ್ತ ಕುಳಿತ. ನಾನು ಕೇಳಿದೆ...”ಅಲ್ಲಾರೀ ನಿಮ್ಮ ಹಣ ಸರಿಯಿದೆ ತಾನೇ..?? ಮುಟ್ಟಿದ್ದೀನಾ..? ಟಿಕೆಟ್ ತಗೊಂಡು ನಾನೇನ್ಮಾಡ್ಲಿ??” ಎಂದೆ. ಕೋಪದಿಂದ..ಅವ.. “ಇದ್ರಲ್ಲಿ ಕೇವಲ ೧೦೦ ರೂಪಾಯಿ ಇದ್ದಿದ್ದು..ಅದು ಇದೆ... ಆದ್ರೆ ನಾಲ್ಕು ಟಿಕೆಟ್ ನೀನು ಬ್ಲಾಕಲ್ಲಿ ಮಾರಿದ್ರೆ ೨೫೦-೩೦೦ ಆದ್ರೂ ಸಿಗುತ್ತೆ...” ಎಂದ....
ಜಿಗುಪ್ಸೆ..ಎನಿಸಿತು..“ಸರಿ TTE ಬರ್ಲಿ...,  ಅಲ್ಲಾರೀ ನಿಮ್ಮ ರಿಸರ್ವೇಶನ್ ಟಿಕೆಟ್ ನಾನು ಹೇಗೆ ಮಾರೋಕಾಗುತ್ತೆ...?” ಎಂದೆ ಅಸಹನೆಯಿಂದ. 
ಅದಕ್ಕವನು.. "ನನ್ನದು ಲೋಕಲ್ ಸ್ಟೇಶನ್ ಟಿಕೆಟ್..(Quota) ಕೋಟಾದು.. ಅದನ್ನ ಮಾರೋದು ಸುಲಭ ನಿಮಗೆ.... ನನಗೆ ಗೊತ್ತಾಗೊಲ್ವಾ..?? ಎಂದ ಕೋಪದಿಂದ...
ಆ ವೇಳೆಗಾಗಲೇ ಸುಮಾರು ಒಂದು ಘಂಟೆ ಸಮಯ ಕಳೆದಿತ್ತು..., ನನ್ನ ಆರ್ ಎ.ಸಿ ಕನ್ನಡಿಗ ದೋಸ್ತಿಂದು ಆ ವೇಳೆಗೆ ಬರ್ತ್ ಕಂಫರ್ಮ್ ಆಗಿತ್ತು.. ನನ್ನ ಸೂಟ್ ಕೇಸ್ ಜೊತೆ ತನ್ನದನ್ನೂ ಎತ್ತಿಕೊಂಡು ಬಂದವರೇ..
"ಏನ್ಸಾರ್ ನೀವು ಇಲ್ಲಿ ಆರಾಮಗಿ ಕೂತಿದ್ದೀರಿ... ಇಲ್ಲೇನಾ ಸೀಟು ನಿಮ್ಮದು..?" ಎನ್ನುತ್ತಾ.. ನನ್ನ ಬಳಿ ಜಾಗ ಮಾಡಿಕೊಂಡು ಕುಳಿತುಕೊಳ್ಳುವ ವೇಳೆಗೆ ಪರಿಸ್ಥಿತಿ ಟೆನ್ಸ್ ಅನ್ನಿಸಿರಬೇಕು..
“ಏನ್ಸಾರ್..? ಏನಾಯ್ತು...??” ಎಂದರು... ನಾನು ಎಲ್ಲಾ ವಿವರಿಸಿದೆ.... ಅವರ ಪಿತ್ತ ನೆತ್ತಿಗೇರಿತು..
Oh!! mister… leave his hand…,  he gave you the purse…that is his mistake!!… but now I am telling you l… he did not give you the purse…  infact he doesn’t know who you are…, got it..!!” ಎಂದವರೇ ನನ್ನ ಕೈ ಬಿಡಿಸಿಕೊಂಡು 
"ಬನ್ನಿ ಸರ್ ನೀವು ಏನ್ಮಾಡ್ತಾನೋ ಮಾಡ್ಕೊಳ್ಳಲಿ.." ಎನ್ನುತ್ತ ನನ್ನ ಎಬ್ಬಿಸಿದರು. ನೋಡಲು ಕಟ್ಟುಮಸ್ತಾಗಿದ್ದರು ನನ್ನ ಮಿತ್ರ.. ಅವರ ಜೋರಿಗೆ ಬಂಗಾಲಿ ಥಂಡಾ..!!! ನಾವಿಬ್ಬರೂ ಹೋಗುವಾಗ  ಬಂಗಾಲಿ ಅವನ ಹೆಂಡತಿ ಬೈಯ್ಯೋಕೆ ಶುರು ಹಚ್ಕೊಂಡಿದ್ರು...  ಟ್ರೈನ್ ಮಿತ್ರನಿಗೂ ನನ್ನ ಕೂಪೆಯಲ್ಲಿಯೇ ಬರ್ತ್ ಸಿಕ್ಕುತ್ತು. ಅಲ್ಲಿಂದ ಎರಡನೇ ಕೂಪೆ ನಮ್ಮದಾಗಿದ್ದರಿಂದ ಅವರ ಬೈಗುಳ ಕೇಳಿಸುತ್ತಿತ್ತು.
“ಬಿಡಿ ಸರ್ ನೀವು ತಲೆ ಕೆಡಿಸ್ಕೋಬೇಡಿ..ಎಲ್ಲೋ ಮಿಸ್ ಪ್ಲೇಸ್ ಮಾಡಿರ್ತಾನೆ...ಬಡ್ಡಿ ಮಗ.. ಈಗ ನೀವು ಸಿಕ್ರಿ ತಪ್ಪು ಹೊರಸ್ತಾ ಇದ್ದಾನೆ... ಏನಿದೆ ಪ್ರೂಫು ನೀವು ಪರ್ಸು ಕೊಟ್ರಿ ಅವನಿಗೆ ಅಂತ...ಹೇಳ್ಲಿ...” ಅಲ್ಲಿದ್ದ ಸುಮಾರು ಸಹ ಪ್ರಯಾಣಿಕರೂ ನಮ್ಮ ಬೆಂಬಲಕ್ಕೆ ನಿಂತರು...  "ಹೌದು ಸರ್ ಬಿಡಿ, ನೀವೇ ಕೊಟ್ರಿ ಅಂತ ಯಾರೂ ಹೇಳೊಲ್ಲ..ಅವ್ರೇ ಹೇಳ್ಕೊಳ್ಲಲಿ.." ಎಂದರು.. ಆಗ್ಲೇ ಗೊತ್ತಾಗಿದ್ದು ಸುಮಾರು ಐದಾರು ಕನ್ನಡಿಗರು ಕಲ್ಕತ್ತಾಗೆ ಹೊರಟಿದ್ದ ಸಹಪ್ರಯಾಣಿಕರು ಅಂತ. ನನಗೆ ಧೈರ್ಯ ಬಂದಿತ್ತು. ....
ನಾವೂ ಮರೆತಂತೆ..ಇದ್ವಿ.. ಮಾತು ಕತೆಗೆ ಶುರುಮಾಡ್ಕೊಂಡು ಉಭಯ ಪರಿಚಯಕ್ಕೆ ಪ್ರಾರಂಭಿಸಿದೆವು. ಒಂದರ್ಧ ಘಂಟೆ ಅಲ್ಲಿಂದ ಬಡಬಡಿಕೆ ಕೇಳಿ ಬರ್ತಿತ್ತು... ನಂತರ ಶಾಂತವಾಯ್ತು...
“ಸುಸ್ತಾಯ್ತು ಅಂತ ಕಾಣುತ್ತೆ ಬಯ್ಕೊಂಡು... ಬಿಡಿ... ಸರ್” ಎಂದರು ನನ್ನ ಸ್ನೇಹಿತ..ನನ್ನ ಗಮನ ಇನ್ನೂ ಆ ಕಡೆಯಿಂದ ಹೊರಬಂದಿಲ್ಲವೆಂದು ತಿಳಿದು.
೧೦-೧೫ ನಿಮಿಷದ ನಂತರ TTE ಬಂದರು. ನಮ್ಮ ಟಿಕೆಟ್ ನೋಡಿ ಬರ್ತ್ ಕಂಫರ್ಮ್ ಸ್ಲಿಪ್ ಗೆ ಸೈನ್ ಹಾಕಿದ್ರು. ನನಗೆ ಕುತೂಹಲ...  ’ಸರ್.. ಅಲ್ಲಿ ಎರಡು ಮೂರು ಕೂಪೆ ಆಚೆ ಬಂಗಾಲಿ ಫ್ಯಾಮಿಲಿ ಇದೆಯಲ್ಲಾ.. ಅವರದ್ದು ಟಿಕೆಟ್ ಕಳೆದು ಹೋಗಿದೆ ಅಂತಿದ್ರು... !!??’ ಎಂದು ಇಂಗ್ಲೀಷಲ್ಲಿ ನಾನು ಕೇಳುವಾಗ ನನ್ನ ಆ ಮಿತ್ರ ಮೆತ್ತಗೆ 
“ಬಿಡಿ ಸರ್ ನೀವು, ಅವರ ಪಾಡು ಅವ್ರದ್ದು.. ಸೌಜನ್ಯ ಇಲ್ಲದವರ ಬಗ್ಗೆ ನಮಗ್ಯಾಕೆ ಕಾಳಜಿ?” ಎಂದರು.
“ಅಯ್ಯೋ ಅವರಾ... ?? “ ಎಂದರು TTE… “ಅರೆ.. ನೀವು ಕನ್ನಡದವರಾ?”
ನನಗೆ ಆಶ್ಚರ್ಯ ಮತ್ತು ಸಂತೋಷ ಎರಡೂ....ಸದ್ಯ ನನಗೆ ಗಂಡಾಂತರ ಬರೊಲ್ಲ ...ಅಂತ ಸಮಾಧಾನ ..!! ನನ್ನ ಸ್ನೇಹಿತನ ಮುಖ ನೋಡಿದ..ಅವರೂ ಮುಗುಳ್ನಕ್ಕರು...
TTE ಹೇಳಿದರು “ಹೌದು ಸರ್ ನಾನು ಮೈಸೂರಿನವನು..ನೀವು ಕಲ್ಕತ್ತಾಗಾ...?? ಹಾಂ..ಅದಹಾಗೆ..ಅವರ ಬಗ್ಗೆ ಕೇಳಿದ್ರಲ್ಲಾ...ಅವರೊಂದು ಗಡಿಬಿಡಿ ಮನುಷ್ಯ..... ಇಲ್ಲೇ ವಿಜಯವಾಡದ ಹತ್ತಿರದ ಲೋಕಲ್ ಸ್ಟೇಶನ್ ಬುಕ್ಕಿಂಗ್ ಅವ್ರದ್ದು... ಕೊರಮಂಡಲ್ ಅಲ್ಲಿ ಸ್ಟಾಪಿಲ್ಲ...ಅದಕ್ಕೆ ಕೋಟಾ ಮೇಲೆ ಟಿಕೆಟ್ ಅಲ್ಲೇ ಮಾಡ್ಸಿ ವಿಜವಾಡದಲ್ಲಿ ಬೋರ್ಡ್ ಮಾಡಿದ್ದಾರೆ... ಅವರ ಜೊತೆ ಬಂದಿದ್ದ ಸ್ನೇಹಿತರಿಗೆ ಪ್ಲಾಟ್ ಫಾರ್ಮ್ ಟಿಕೆಟ್ ಕೊಡೋ ಬದ್ಲು...ಇವರ ಟಿಕೆಟ್ ಕೊಟ್ಟಿದ್ದಾರೆ... ಆಮೇಲೆ.. ಗೇಟ್ ಕೀಪರ್ ನನ್ನ ಕರೆದು ಅವರ ಟಿಕೆಟ್ ಕೊಟ್ಟ...ಕೇಳಿದ್ದಕ್ಕೆ... ಮಂಕಾಗಿ ಕೂತ..ನಾನೇ ವಿಷಯ ತಿಳ್ಸಿ ಚಕ್ ಮಾಡಿ ಬಂದೆ...” ಎಂದರು... ನನಗೆ ತಲೆಮೇಲಿನ ಭಾರ ಇಳಿದಷ್ಟೇ ನಿರಾಳ ಆಯ್ತು.. ಅಷ್ಟರಲ್ಲಿ ಅಲ್ಲಿಗೆ ಬಂದ ಬಂಗಾಲಿ ಮಹಾಶಯ ಬಂದವನೇ ನನ್ನ ಕೈ ಹಿಡಿದು... ಭೈ ಸಾಬ್... “I am very very sorry… the mistake was mine… I troubled U…” (ನನ್ನ ಕ್ಷಮಿಸಿ..ತಪ್ಪು ನನ್ನದೇ..ನಿಮಗೆ ತೊಂದರೆ ಕೊಟ್ಟೆ) ಎನ್ನುತ್ತಾ ಸಾರಿ ಸಾರಿ ಅಂತ ಸಾರಿ ಸಾರಿ ಹೇಳುವಾಗ ನನಗೆ ಮುಜುಗರ ಅನ್ನಿಸ್ತು...  “Its Ok…its OK “ ಎಂದೆ.
ಆನಂತರ ಸರದಿಯ ಮೇಲೆ ಬಂಗಾಲಿಯ ಹೆಂಡತಿ, ಮಕ್ಕಳು ಬಂದು ಕ್ಷಮೆ ಕೇಳಿದ್ದು... ವಿಶಾಖಪಟ್ನಂ ನಲ್ಲಿ ’ರೊಸೊಗೊಲಾ’ ತಂದುಕೊಟ್ಟಿದ್ದು ಅಗ್ಗಾಗೆ ಚಹಾ ಕಳುಹಿಸಿದ್ದು ಬೇರೆ ವಿಷಯ...!!!

Thursday, January 26, 2012



ಜೈ ಭಾರತಾಂಬೆ


ಕೇಸರಿಯ ಶೌರ್ಯವದು,
ಹಸಿರುಟ್ಟ ಹರಿತವದು
ಶಾಂತಿಯಾ ಮಂತ್ರವದು,
ನಡುನೆಡೆವ ಚಕ್ರವದು
ಜೈ ಜೈ ಜೈ ಭಾರತಾಂಬೆ

ಇಲ್ಲುಂಟು ಏನಿಲ್ಲ
ಎಲ್ಲುಂಟು ಏಕಿಲ್ಲ
ನೀರುಂಟು ಇಂಗಿಲ್ಲ
ದಾಹವಿದು ಸತ್ತಿಲ್ಲ
ಜೈ ಜೈ ಜೈ ಭಾರತಾಂಬೆ

ದೇಶವಿದು ಸಿರಿವಂತ
ಸಾವ್ರಾರು ಹಣವಂತ
ಸುಡುವರು ಜೀವಂತ
ಬಡವರದು ಧಾವಂತ
ಜೈ ಜೈ ಜೈ ಭಾರತಾಂಬೆ

ಕಿತ್ತಿಲ್ಲಿ ತಿನ್ನುವವರು
ಹತ್ತಿಲ್ಲಿ ಉರಿಸುವವರು
ಸಾಲದಲಿ ಬೆಳೆವವರು
ಆದರಿಲ್ಲೆಲ್ಲ ಉಳ್ಳವರು
ಜೈ ಜೈ ಜೈ ಭಾರತಾಂಬೆ

ಖಾಕಿಲಿ ನಿಯ್ಯತ್ತೇ ಖಾಲಿ
ಕಾವಿಲಿ ಭಕ್ತಿಯದು ಜೋಲಿ
ಖಾದಿಯಲಿ ಗಾಂಧಿಗೇ ಗೋಲಿ
ಹೊಲವನ್ನೇ ಮೇಯುವುದು ಬೇಲಿ
ಜೈ ಜೈ ಜೈ ಭಾರತಾಂಬೆ

ಉಗ್ರಾಣದಿ ತುಂಬಿ ಹೆಗ್ಗಣ
ಗ್ರಾಮದಲ್ಲೀಗಿಲ್ಲ ದಿಬ್ಬಣ
ಗಣಿನೆಲವ ಮಾರಿ ಕಬ್ಬಿಣ
ರಾಜಕಾರಣಿಯದೀಗ ರಿಂಗಣ
ಜೈ ಜೈ ಜೈ ಭಾರತಾಂಬೆ

ಹೀಗಿದ್ದೂ ದಿಕ್ಕೆಡದಂತೆ ಹರಸು
ಹಿಗ್ಗಿದೆಯ ಕುಗ್ಗದಂತೆ ಬೆಳೆಸು
ಹಸಿರುಸಿರಾಡುವಂತೆ ಉಳಿಸು
ಪ್ರತಿ ರಕ್ತದಲಿ ದೇಶಪ್ರೇಮವ ಬೆರೆಸು
ಜೈ ಜೈ ಜೈ ಭಾರತಾಂಬೆ

Friday, January 20, 2012


ಕಾರ್ಟೂನ್ ಕೃಪೆ: ಕ್ಲಿಪ್ ಆರ್ಟ್.ಕಾಂ (ಅಂತರ್ಜಾಲ)

ಎಸ್ರೇ ಇಲ್ದೋರ್ಪಾಡು
ನನ್ನ ಸ್ನೇ-ಹಿತ ಹೇಳ್ದ
“ಬರೀ ಮಗಾ ನೀನೂ ಕವನಾನ”
ನಾನೂ ಗೀಚ್ದೆ, ಬಿಸಾಕ್ದೆ,
ಗೀಚ್ದೆ ಮಗ್ಚಾಕ್ದೆ, ಕಡೆಗೆ....
“ಸೂಪರ್ ಕಣೋ ಅಂದ ಸ್ನೇ-ಹಿತ”
ಕಳ್ಸು “ಸಂಪದ”ಕ್ಕೆ
ಮೆಲ್ಲಗೆ ’ಮಲ್ಲಿಗೆ’ಗೆ
ಇಲ್ಲ ’ಮಯೂರ’ ಕ್ಕೆ ಅಂದ.
ಕಳಿಸ್ದೆ...ಕಾದೆ..ಕಾದೆ..ಶಬರಿ
ಕಾದ್ಕೊಂಡ್ ಮುದ್ಕಿ ಆದಂಗೆ..
ವಿಶಾದಾನೂ ಇಲ್ಲ..
ಭೇಷ್ವಾದ ನೂ ಇಲ್ಲ...
ಆಮೇಲೇ ಯಾರೋ ಹೇಳಿದ್ರು,
ಓಗ್ಲಿ ಬಿಡೋ ಅವು ಸೇರಿರ್ತಾವೆ-ಕ.ಬು.
ನನ್ನ ಸ್ನೇ-ಹಿತ ಮತ್ತೆ ಹೇಳ್ದ
“ನಿಜಕ್ಕೂ ಚನ್ನಾಗಿ ಬರೀತಿಯ
ಕಳ್ಸು ಇನ್ನೂ ಒಂದಷ್ಟು”
ಬರ್ದೆ, ಕಳಿಸ್ದೆ, ಅವ್ಗಳದೂ ಅದೇ ಪಾಡು
ಸೇರಿದ್ವು ಅವ್ಗಳ ಪೂರ್ವಿಕರಂಗೆ
ನಮ್ಮಂಥವರ ಕವನ ಸೇರೋ ಕಸದ ಗೂಡು.
ಮತ್ತೆ ಹೇಳ್ದ ಸ್ನೇ-ಹಿತ
ಅದ್ಕೆ ನಾನಂದೆ
ಲೋ ನಿಮ್ಮಂಥೋರ್ಗೆ ಲಕ್ಕು
ನಮ್ಮಂತೋರು ಅಳಬೇಕು ಬಿಕ್ಕು
ಕವನ, ಕಥೆ ಎಲ್ಲಾ ಪ್ರಕ್ಟ ಆಗ್ತವೆ
ಏನಾದ್ರೂ ಬರೆದ್ರೆ ನೀವ್ಗಳು
ನಾವರ್ಕಂಡ್ ಬರ್ದ್ರೂ ಕ.ಬು ಸೇರ್ತವೆ
ಏನೇಳ್ಳಿ..ಬುಡು ಇದ್ ನಮ್ಗೋಳು.
ಮತ್ತೆ ಏಳ್ದ ಸ್ನೇ-ಹಿತ..
ಇವ್ನ್ಯಾಕೊ ಬಿಡಂಗಿಲ್ಲ ಅಂತ
ನಾನೇ ಎಲ್ಲಾ ಕವ್ನಾ ಸೇರ್ಸಿ
ಪ್ರಕ್ಟ ಮಾಡ್ಸೇಬಿಟ್ಟೆ ನಂದೇ ಆದ
ಒಂದು ಕವನ ಸಂಕಲ್ನಾ..
ಯತ್ವಾಸ ಒಂದೇಯಾ,,,
ಅವಾಗ್ಕೂ...ಈವಾಕ್ಕೂ..
ಬಿಡ್ಬಿಡ್ಯಾಗೋಗ್ತಿದ್ವು ಕ.ಬು. ಆವಾಗ
ಒಗ್ಗಟ್ಟಾಗಿ ಪುಸ್ತ್ಕಾಗಿ
ಜೊತ್-ಜೊತ್ಯಾಗವೆ ಕ.ಬು.ಲಿ ಈವಾಗ 

Wednesday, December 21, 2011

ಚಿತ್ರ: ಹಿಂದೂಸ್ತಾನ್ ಟೈಮ್ಸ್ (Fotos: Hindustan Times)

ಗೊತ್ತಿಲ್ಲ ಮಗು... ಆದರೆ ಬರುತ್ತೆ ಆ ದಿನ...

ತಾತಾ ಭಾರತದ ನಾಗರೀಕತೆ ಅದ್ವಿತೀಯ ಅಂತೆ
ಹೌದು ಪುಟ್ಟಿ
ನಮ್ಮ ರಾಜ ಮಹರಾಜರು ಪ್ರಜಾಹಿತಚಿಂತಕರಾಗಿದ್ದರಂತೆ
ಹೌದು ಪುಟ್ಟಿ ಕೆಲವರು ಹೆಚ್ಚು ಮತ್ತೆ ಕೆಲವರು ಕಡಿಮೆ
ಆದರೆ ಈಗಿನ ನಮ್ಮ ಆಳುವವರು ಯಾಕಜ್ಜಾ ತುಂಬಾ ಹೆಚ್ಚು ಕಮ್ಮಿ..
ನನಗೆ ಗೊತ್ತಿಲ್ಲ ಮಗು... ಅದಕ್ಕೇ ನಾನು ಕೂತೀನಿ....

ಅಜ್ಜಾ..
ಹೇಳು ಪುಟ್ಟೀ..
ಭ್ರಷ್ಠಾಚಾರ ನಿನಗೊಬ್ಬನಿಗೇ ಕೆಟ್ಟದ್ದು ಯಾಕೆ?
ಇಲ್ಲಾ ಪುಟ್ಟಿ..ನಿನಗೂ ಕೆಟ್ಟದ್ದೇ ಅಲ್ವಾ ಅದಕ್ಕೇ..
ಇಲ್ಲಿ ಕುಂತಿರೋರೆಲ್ಲರಿಗೂ ಕೆಟ್ಟದ್ದು ಅದಕ್ಕೇ..
ಬರಲು ಆಗದೆ, ದಿನದ ಹೊಟ್ಟೆಪಾಡಿಗೆ ಹೋಗುವವರಿಗೂ
ಕಡೆಗೆ ನಿನ್ನಪ್ಪ ನಿನ್ನ ಅಣ್ಣನ ಕೆಲ್ಸಕ್ಕೆ ಲಂಚ ಕೊಡ್ಲಿಲ್ವಾ ಅದಕ್ಕೇ..
ಎಲ್ಲಾರಿಗೂ ಕೆಟ್ಟದ್ದೇ.....
ಮತ್ತೆ ಮಂತ್ರಿಗಳಿಗೆ ಅಧಿಕಾರಿಗಳಿಗೆ ..??
ನನಗೆ ಗೊತ್ತಿಲ್ಲ ಮಗೂ.. ಅದಕ್ಕೇ ಕೂತೀನಿ..

ನಂಗೊಂದ್ ಮಾತ್ ಹೇಳಜ್ಜಾ
ಏನ್ ಪುಟ್ಟಿ.?
ನಮ್ಮ ಆಳೋರನ್ನ ನಾವು ಆರಿಸೋದಲ್ವಾ?
ಹೌದು ಪುಟ್ಟಿ ನಿಜ ನಿನ್ ಮಾತು..
ಮತ್ತೆ ಅವರು ನಾವು ಹೇಳೋದನ್ನ..ಮತ್ತೆ
ನಮಗೆ ಒಳ್ಳೆದಾಗೊದನ್ನ ಮಾಡ್ಬೇಕಲ್ವಾ,,?
ಹೌದು ನೂರಕ್ಕೆ ನೂರು ನಿಜ ಪುಟ್ಟಕ್ಕ...
ಮತ್ತೆ ಕೋಟ್ಯಾಂತರ ಜನದ ಒಳಿತ್ಗೆ...
ಭ್ರಷ್ಠಾಚಾರ ತಡೆಗೆ ಕಾನೂನು ಮಾಡೋಕೆ ಮೀನ ಮೇಷ ಯಾಕೆ..?
ಗೊತ್ತಿಲ್ಲ ನನ್ ಕಂದಾ... ಅದಕ್ಕೆ ಕೂತೀನಿ..
ನಿನ್ನನ್ನೂ ಕೂರ್ಸೀನಿ.. ಎಷ್ಟೋ ಕೋಟ್ಯಾಂತರ ಜನ್ರನ್ನ ಕೂರ್ಸೀನಿ...
ಒಂದೇ ನಿರೀಕ್ಷೆಲಿ..... ಬರುತ್ತೆ ಆ ದಿನ ಅಂತ....

Saturday, December 10, 2011

ಭಾವ ಕಲಕಿದ ಛಾಯಾಚಿತ್ತಾರ ಮತ್ತೊಂದು.....

Foto: Prakash Hegde

ಓಹ್..ನಿನ್ನ ನೋಡಿದರೆ...!!!

ಹಳ್ಳಿಯ ಕೆರೆ,
ಹುಲ್ಲಿನ ಹೊರೆ,
ಕೆರೆಸೇರು ತೊರೆ
ಎಲ್ಲಾ ನೆನಪಾಗುತ್ತೆ.
ಸ್ನೇಹಿತ ಅಮ್ಮನ ವ್ಯಥೆ
ಕೆರೆಹೊಕ್ಕ ಎಮ್ಮೆ ಕಥೆ
ಹೂಳೆತ್ತೋ ಕಂಬಾರ
ಮೀನಕದ್ದೋಡಿದ ಚೋರ
ಚಿತ್ರ ಹಾದು ಹೋಗುತ್ತೆ.

ಓಹ್ ನಿನ್ನ ನೋಡಿದರೆ....!!!
ಚೇರ್ಮನ್ನರ ಭೂಕಬಳಿಕೆ
ಮರೆಯಾದ ಕೃಷಿಗಳಿಕೆ
ಬತ್ತಿ ಮಾಯವಾದ ತೊರೆ
ಗುಳೇ ಹೊರಟ ರೈತ ನೆರೆ

ತಲೆ ಎತ್ತುವ ಮಹಲುಗಳು
ರೆಸಾರ್ಟ್ ರಾಜಕೀಯಗಳು
ಅಲ್ಲಿಯೇ ಕೂಲಿಯಾದ ರೈತಗಳು
ಎಲ್ಲಾ ಎಲ್ಲಾ ನೆನಪಾಗುತ್ತೆ...
ಕಣ್ಣೆವೆ ಹೀಗೇ ಅನಾಯಾಸ
ಒರಸಿಕೊಂಡರೂ ನಿಲ್ಲದೇ
ಮತ್ತೆ ಮತ್ತೆ ತೇವವಾಗುತ್ತೆ.

Saturday, December 3, 2011

ಹೀಗೂ ಒಮ್ಮೆ ಎಡವಟ್ಟಾಗೋದ್ರೆ ಆಶ್ಚರ್ಯ ಇಲ್ಲ


ಹೀಗೂ ಒಮ್ಮೆ ಎಡವಟ್ಟಾಗೋದ್ರೆ ಆಶ್ಚರ್ಯ ಇಲ್ಲ

(foto: Emirates web site)

ಬಹಳ ಅಲ್ಪಾವಧಿಯ ತಾಯ್ನಾಡ ಪ್ರವಾಸಕ್ಕೆ ತುರಾತುರಿಯಲ್ಲಿ ನಿರ್ಧರಿಸಲು ಕಾರಣಗಳು ಹಲವಾರಾಗಿದ್ದವು. ಮಂಗಳೂರಿನಲ್ಲಿ ನಡೆಯಲಿದ್ದ ಏಶಿಯಾ ಮಟ್ಟದ ಮತ್ಸ್ಯಾರೋಗ್ಯ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಅಪ್ಪ-ಅಮ್ಮ ಹಾಗೂ ನೆಂಟರನ್ನು ಮತ್ತು ಸ್ನೇಹಿತರನ್ನು ನೋಡುವ ಸ್ವಾರ್ಥವೂ ಇತ್ತು. ಅಲ್ಲದೇ ಬೆಂಗಳೂರು ಮಾಯಾನಗರಿಯಲ್ಲಿ ಹೊಸದಾಗಿ ಕಟ್ಟಲು ಪ್ರಾರಂಭಿಸಿರುವ ಮನೆಯ ಪ್ರಸ್ತುತ ಸ್ಥಿತಿಯನ್ನು ನಿರೀಕ್ಷಿಸುವುದೂ ಸೇರಿತ್ತು. ಕುವೈತಿನಲ್ಲಿ ನಮ್ಮ ಕನ್ನಡ ಕೂಟದ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅದೇ ದಿನ ಅಂದರೆ ಡಿಸೆಂಬರ್ ೧೮ರ ಮಧ್ಯರಾತ್ರಿ ಮನೆಯಿಂದ ಹೊರಟು, ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೇರಬೇಕಿತ್ತು. ಬೇಗ ಕಾರ್ಯಕ್ರಮದಿಂದ ಬಂದು ಬಟ್ಟೆ ಬರೆ (ಒಂದು ವಾರದ ಪ್ರವಾಸಕ್ಕೆ ಬೇಕಾಗುವ ಹಾಗೆ) ಪ್ಯಾಕ್ ಮಾಡಿ ತಯಾರಾಗೋದು ಕಷ್ಟವಾಗಲಾರದೆಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟೆ. ಕಾರ್ಯಕ್ರಮನಂತರ ಊಟಕ್ಕೂ ನಿಲ್ಲದೇ ಮನೆಗೆ ವಾಪಸ್ಸಾಗಿ ಸೂಟ್ ಕೇಸ್ ರೆಡಿ ಮಾಡಿ ೧.೩೦ ಕ್ಕೆ ಮನೆಯಿಂದ ಏರ್ಪೋರ್ಟಿಗೆ ಹೊರಟೆ. ಚೆಕ್ ಇನ್ ಶಾಸ್ತ್ರ ಮುಗಿಸಿ ಸ್ವಲ್ಪ ಪೇಟ್-ಪೂಜೆಗೆ ಡಿಪಾರ್ಚರ್ ಟರ್ಮಿನಲ್ ನಲ್ಲಿದ್ದ ಫಾಸ್ಟ್ ಫುಡ್ ಕೌಂಟರಲ್ಲಿ ಬರ್ಗರ್ ತಿಂದು ಕಾಫಿ ಕುಡಿದು ಡಿಪಾರ್ಚರ್ ಗೆ ಬಂದಾಗ ಆಗಲೇ ಬೋರ್ಡಿಂಗ್ ಪ್ರಾರಂಭವಾಗಿತ್ತು. ಹಿಂದಿನ ರಾತ್ರಿಯೂ ಮಲಗಿದ್ದು ತಡವಾಗಿದ್ದರಿಂದ ನಿದ್ದೆ ಕಾರಣ ಕಣ್ಣೆವೆ ಭಾರವಾಗಿದ್ದವು. ವಿಮಾನ ಹತ್ತಿ ಸೀಟಲ್ಲಿ ಕುಳಿತು ಬೆಲ್ಟ್ ಬಿಗಿದು ಮಲಗೋ ತಯಾರಿ ಮಾಡೋಕೆ ಮುಂಚೆಯೇ ನಿದ್ದೆ ಬಂದಿತ್ತು.., ನಾನು ನಿದ್ದೆ ಮಾಡಿದೆ ಅನ್ನೋದಕ್ಕಿಂತಾ ನಿದ್ದೆ ನನ್ನ ಆವರಿಸಿತ್ತು ಎನ್ನಬಹುದು.
      
ವಿಮಾನ ನೆಲಬಿಟ್ಟೇಳುವ (ಟೇಕ್ ಆಫ್) ಸಮಯವಾಗಿತ್ತೆನಿಸುತ್ತದೆ, ನನ್ನ ಅಕ್ಕ ಪಕ್ಕ ಸ್ವಲ್ಪ ಗಲಿಬಿಲಿ ಆಗ್ತಿದ್ದದ್ದು ಭಾಸವಾದ್ರೂ ಕಣ್ಣು ತೆರೆಯಲಿಲ್ಲ.
“ಎಕ್ಸ್ ಕ್ಯೂಸ್ ಮಿ, ಆರ್ ಯೂ ಮಿ. ಸಾಹಬ್ (ಕ್ಷಮಿಸಿ ನೀವಾ ಮಿಸ್ಟರ್ ಸಾಹೇಬ್)?”
ಕಿವಿಯಲ್ಲಿ ಕೋಗಿಲೆ ಉಲಿದ ಭಾಸವಾಯ್ತು...ಕಣ್ಣು ತಂತಾನೆ ತೆರೆಯಿತು, ಸುಂದರ ಗಗನ ಸಖಿ ನನ್ನ ಮುಂದೆ!!,
ಸಾವರಿಸಿಕೊಂಡು...
“ಎಸ್, ಐ ಯಾಮ್ ಆಜಾದ್ ಇಸ್ಮಾಯಿಲ್ ಸಾಹೇಬ್” (ಹೌದು ನಾನೇ ಆಜಾದ್ ಇಸ್ಮಾಯಿಲ್ ಸಾಹೇಬ್) ಎಂದೆ...ಅಕಸ್ಮಾತ್ ಆಕೆ ಬೇರೆ ಸಾಹೆಬ್ ಬಗ್ಗೆ ಕೇಳ್ತಿದ್ರೆ ಅಂತ ಅನುಮಾನ ಬಂದು.
“ಡೂ ಯೂ ನೋ ಹಿಂದಿ.. ಆಪ್ ದಕ್ಕನಿ ಹಿಂದಿ ಜಾನ್ತೇ ಹೋ??” (ನಿಮಗೆ ಹಿಂದಿ, ದಕ್ಕನಿ ಹಿಂದಿ ಬರುತ್ತಾ?)
ಎಂದು ಕೇಳಿದಳು ಸಖಿ.
“ಹಾಂ ಜಾನ್ತಾ ಹೂಂ, ಕ್ಯೂ ಕ್ಯಾ ಬಾತ್ ಹೈ?”
ನಿದ್ದೆ ಹಾರಲಾರಂಬಿಸಿತ್ತು. ಕುತೂಹಲದಿಂದ ಕೇಳಿದೆ ನಾನು.
“ಜಸ್ಟ್ ಎ ಲಿಟ್ಲ್ ಹೆಲ್ಪ್ ಸರ್.ಥೋಡಾ ಆಪ್ ಮದದ್ ಕರೇಂಗೆ..??” ಸುಂದರಿಯ ಕೋರಿಕೆಗೆ ’ಇಲ್ಲ’ ಎನ್ನೋದು ಹೇಗೆ..??
“ಎಸ್ ಟೆಲ್ ಮಿ, ಕಹಿಯೇ ಕ್ಯಾ ಕರ್ನಾ ಹೈ?” ಎಂದೆ.
“ದೇರ್ ಇಸ್ ಒನ್ ಲೇಡಿ, ಸೀಮ್ಸ್ ಟು ಬಿ ಫ್ರಂ ಹೈದರಾಬಾದ್, ಥೋಡಾ ಉಸ್ ಸೆ ಬಾತ್ ಕರೇಂಗೆ..? ಕ್ಯಾ ತಕಲೀಫ್ ಹೈ ಉಸ್ಕೋ ಪೂಛಿಯೇ...ಮೆರಿ ಹಿಂದಿ ಒಹ್ ಸಮಝ್ ನಹೀಂ ಪಾ ರಹೀ ಹೈ” (ಅಲ್ಲೊಬ್ಬ ಹೆಂಗಸಿದ್ದಾಳೆ, ಬಹುಶಃ ಹೈದರಾಬಾದಿನವಳಿರಬೇಕು, ನನ್ನ ಹಿಂದಿ ಅವಳಿಗೆ ಅರ್ಥವಾಗ್ತಿಲ್ಲ ಅನ್ಸುತ್ತೆ).. ಎಂದಳು ಸುಂದರಿ.
ಅಲ್ಲಿಗಾಗ್ಲೇ ವಿಮಾನ ಗಗನದ ತನ್ನ ಪ್ರಯಾಣದ ಎತ್ತರ ತಲುಪಿತ್ತು. ಸೀಟ್ ಬೆಲ್ಟ್ ಸೈನ್ ತೆಗೆಯಲಾಗಿತ್ತು. ನಾನು ನನ್ನ ಸೀಟ್ ಬೆಲ್ಟ್ ತೆಗೆದು ಗಗನ ಸಖಿಯ ಹಿಂದೆ ಹೋದೆ. ನಾಲ್ಕೈದು ಹಿಂದಿನ ಸಾಲಿನ ಸೀಟಿನಲ್ಲಿ ಕಣ್ಣುಮುಚ್ಚಿ ಮಲಗಿದ್ದ ಸುಮಾರು ೩೨-೩೫ ವರ್ಷದ ಹೆಂಗಸನ್ನು ಆ ಗಗನ ಸಖಿ ಎಬ್ಬಿಸುತ್ತಾ...
“ಮೇಡಂ...ಬೋಲಿಯೇ..ಆಪ್ ಕೋ ಕ್ಯಾ ತಕಲೀಫ್ ಹೈ..???” (ನಿಮಗೇನು ತೊಂದರೆ ಹೇಳಿ)
ಎನ್ನುತ್ತಾ ನನ್ನ ಕಡೆ ತಿರುಗಿ,
“ಆಸ್ಕ್ ಹರ್ ವಾಟ್ ಈಸ್ ದಿ ಪ್ರಾಬ್ಲಂ, ಎಹ್ ಔರತ್ ಏಕ್ ಜಗಹ್ ಬೈಟ್ ನಹೀಂ ರಹೀ, ಇಧರ್ಸೆ ಉಧರ್ ಜಾತಿ ಹೈ, ಕಹೀಂ ಖಾಲಿ ಜಗಹ್ ಮೆ ಬೈಟ್ತೀ ಹೈ ಫಿರ್ ಖಡೀ ಹೋ ಜಾತೀ ಹೈ...ಟೇಕ್ ಆಫ್ ಪರ್ ಭೀ ಬಹುತ್ ಪರೇಶಾನ್ ಕರ್ ದಿಯಾ ಇಸ್ನೆ” (ಕೇಳಿ ಈಕೆಯನ್ನ ಏನು ಸಮಸ್ಯೆ ಇವಳದ್ದು, ವಿಮಾನ ನೆಲ ಬಿಟ್ಟೇಳುವಾಗಲೂ ಆ ಕಡೆ ಈ ಕಡೆ ಓಡಾಡುತ್ತ ಒಂದೆಡೆ ಕೂರದೇ ನಮ್ಮನ್ನು ಗೋಳು ಹುಯ್ಕೋತಾ ಇದ್ದಾಳೆ) ಎಂದಳು.
ಆ ಮಹಿಳೆಯನ್ನು “ ಸುನಿಯೇ,..ಕ್ಯಾ ತಕಲೀಫ್ ಹೈ ಆಪ್ಕೋ..ಹಲೋ...ಹಲೋ...”
ಅರಬಿಯಲ್ಲಿ ಬಡಬಡಿಸಿದಳು ..”ಅನಾ ಅನಾ ಕುಮಾರಿ...ಆನಾ ಸಾಫಿರ್ ಹೈದ್ರಾಬಾದ್...” (ನಾನು ನಾನು ಕುಮಾರಿ..ನಾನು ಹೈದರಾಬಾದಿಗೆ ಹೋಗ್ತಿದ್ದೇನೆ)... ಇಷ್ಟು ಹೇಳಿ ಮತ್ತೆ ಕಣ್ಣು ಮುಚ್ಚಿದಳು.
ಅಷ್ಟರಲ್ಲಿ ಇನ್ನೂ ಮೂವರು ಗಗನ ಸಖಿಯರು ಜಮಾಯಿಸಿದರು. ಎಲ್ಲರೂ..
”ಪ್ಲೀಸ್ ಆಸ್ಕ್ ಹರ್ ಟು ಟೇಕ್ ಸಮ್ ಥಿಂಗ್, ಜ್ಯೂಸ್ ಆರ್ ಸಮ್ ಬ್ರೆಡ್...ಸೀಮ್ಸ್ ಶಿ ಈಸ್ ವೀಕ್..” (ಕೇಳಿ ಆಕೆನ ಏನಾದ್ರೂ ತಿನ್ತಾಳಾ ಅಥವಾ ಜ್ಯೂಸ್, ಇಲ್ಲ ಬೆಡ್.. ತುಂಬಾ ನಿಶ್ಯಕ್ತಳಾಗಿದ್ದಾಳೆ..) ಎನ್ನುತ್ತಾ ತಮ್ಮ ಕಾಳಜಿ ತೋರಿದರು ಅಸಹಾಯಕಾರಾಗಿ ನನ್ನತ್ತ ನೋಡಿ.
ನನಗೆ ಆ ಮಹಿಳೆ ಆಂಧ್ರದ ಹಳ್ಳಿಯೊಂದರ ಮಹಿಳೆ ಎನ್ನಿಸತೊಡಗಿತು. ಬಹುಶಃ ತೆಲುಗಲ್ಲಿ ಕೇಳಿದ್ರೆ ಸಹಾಯಕವಾಗಬಹುದು ಎನಿಸಿ...
“ಏಮ್ಮಾ...ಕುಮಾರಿ...ಏಮೈನಾ ತಿಂಟಾವಾ..? ಜ್ಯೂಸ್ ತಾಗು ಶಕ್ತಿ ಲೇದು ನೀಕು...ಕೊಂಚಂ ಶಕ್ತಿ ವಸ್ತೂಂದಿ..” (ಏನಾದ್ರೂ ತಿನ್ನು ಅಥವಾ ಜ್ಯೂಸ್ ಕುಡಿ, ಶಕ್ತಿ ಇಲ್ಲ ನಿನ್ನಲ್ಲಿ ಶಕ್ತಿ ಬರುತ್ತೆ)
ಇಷ್ಟು ಕೇಳಿದ್ದೆ...!!! ಇಷ್ಟಗಳ ಕಣ್ಣು ಬಿಟ್ಟ “ಕುಮಾರಿ”...
“ನೂವು ಇಕ್ಕಡೇ ನಾ ಪಕ್ಕ ಕುಚ್ಚೋ...ಈಳ್ಳು ನನ್ನೆಕ್ಕೆಡೋ ತೀಸ್ಕೆಳ್ತಾರು...ನೇನು ಹೈದರಾಬಾದುಕ್ಕೆಳ್ಳಾಲಿ..” (ನೀನು ಇಲ್ಲೇ ನನ್ನ ಪಕ್ಕ ಕೂತ್ಕೋ ಇವರು ನನ್ನ ಎಲ್ಲೋ ತಗೊಂಡು ಹೋಗ್ತಿದ್ದಾರೆ, ನಾನು ಹೈದರಾಬಾದಿಗೆ ಹೋಗಬೇಕು) ಎನ್ನುತ್ತಾ ನನ್ನ ಕೈ ಹಿಡಿದೆಳೆದು ತನ್ನ ಪಕ್ಕದ ಖಾಲಿ ಸೀಟಿನಲ್ಲಿ ಕೂರಿಸಿದಳು... ನನಗೆ ಮುಜುಗರ, ಆದ್ರೆ ಆಕೆಯ ಸ್ಥಿತಿ ನೋಡಿ ಅಯ್ಯೋ ಎನಿಸಿತು, ಕೈಗಳು ತಣ್ಣಗಿದ್ದು ನವಿರು ನಡುಕ ಇದ್ದು ಭಯಗೊಂಡಿದ್ದಾಳೆನ್ನುವುದು ಗೊತ್ತಾಯಿತು. ಕೂತೆ, ಏನಾದ್ರೂ ಕುಡಿ ಅಥವಾ ತಿನ್ನು ಎನ್ನುತ್ತಾ ಗಗನ ಸಖಿಯರು ಕೊಟ್ಟ ಜ್ಯೂಸನ್ನು ಕುಡಿಯಲು ಹೇಳಿದೆ..ತಿನ್ನಲು ಕೊಟ್ಟ ಬ್ರೆಡ್-ಬನ್ ತಿನ್ನಲು ಹೇಳಿದೆ...ಎರಡನ್ನೂ ಸ್ವಲ್ಪ ಸ್ವಲ್ಪ ಸವಿದು ಮತ್ತೆ ಬಡಬಡಿಕೆ ಪ್ರಾರಂಭಿಸಿ,
“ನಾನು ಹೋಗಬೇಕು..ಎಲ್ಲಿಗೆ ನನ್ನ ಕರ್ಕೊಂಡು ಹೋಗ್ತಿರೋದು..ನನ್ನ ಕೊಲ್ಲಬೇಡಿ..” ಎಂದೆಲ್ಲಾ ಗೊಣಗಿದಾಗ ನನಗೆ ನಿಜಕ್ಕೂ ಗಾಬರಿ ಆಯಿತು. ಇವಳು ಮತಿಗೆಟ್ಟವಳಾ ಹೇಗೆ..? !!! ಅಲ್ಲಿ ಆಗಲೇ ಗಗನ ಸಖಿಯರು, ಕ್ಯಾಬಿನ್ ಚೀಫ್ ಸಹಾ ಬಂದಾಯ್ತು... ಅವಳನ್ನು ಏಳಲು ಬಿಡಬೇಡಿ...ದಯಮಾಡಿ ಅವಳನ್ನು ಏನಾದ್ರೂ ತಿನ್ನಲು ಹೇಳಿ... ದುಬಾಯ್ ವರೆಗೂ ಸಂಭಾಳಿಸಿ, ನಿಮ್ಮ ಮಾತು ಕೇಳ್ತಿದ್ದಾಳೆ..ಒಂದೇ ಇಷ್ಟು ಹೊತ್ತು ಕೂತಿದ್ದೇ ಹೆಚ್ಚು...ಎಂದು ನನ್ನ ರಿಕ್ವೆಸ್ಟ್ ಮಾಡಿಕೊಂಡರು...
ಅವಳೋ,....
ನೀನು ಎಲ್ಲೂ ಹೋಗಬೇಡ ಇಲ್ಲೇ ಕೂತ್ಕೋ..ನನ್ನ ಹೈದರಾಬಾದಿಗೆ ಬಿಟ್ಟು ಹೋಗು...ಎಲ್ಲಿ ಹೋಗಬೇಕೋ ನೀನು ನನಗೆ ಗೊತ್ತಿಲ್ಲ...ಇವರು ನನ್ನ ಸಾಯಿಸ್ತಾರೆ... ಎನ್ನುತ್ತ ಬಡಬಡಿಸೋದು ನಡೆದೇ ಇತ್ತು, ನನ್ನ ಹೆಗಲಿಗೆ ತಲೆ ಇಟ್ಟು ಮಲಗಲು ನನ್ನ ಕೊಸರುವಿಕೆಯ ಮಧ್ಯೆಯೂ ಪ್ರಯತ್ನಿಸಿದಳು...ಗಗನ ಸಖಿಯರು
“ಪ್ಲೀಸ್ ಸರ್ ಲೆಟ್ ಹರ್ ಸ್ಲೀಪ್, ಇಫ್ ಶಿ ಟೇಕ್ಸ್ ಸಮ್ ರೆಸ್ಟ್ ಇಟ್ ವಿಲ್ ಬಿ ಗುಡ್ ವಿ ವಿಲ್ ಬಿ ಇನ್ ದುಬಾಇ ಬೈ ದೆನ್” (ಸರ್ ಆಕೆಯನ್ನು ಮಲಗಲು ಬಿಡಿ ಸ್ವಲ್ಪ ರೆಸ್ಟ್ ತಗೊಳ್ಳಲಿ..ಅಷ್ತರಲ್ಲಿ ದುಬೈ ತಲುಪುತ್ತೇವೆ.).. ನನ್ನ ಪೀಕಲಾಟ ಹೆಚ್ಚಾಗಿತ್ತು. ನನ್ನ ನಿದ್ದೆ ಎಲ್ಲಿಗೆ ಹಾರಿ ಹೋಯ್ತೋ...!!!!
ಅಷ್ಟರಲ್ಲಿ ಗಗನ ಸಖಿ (ಹಿಂದಿಯವಳು) ದುಬ್ಬೈ ಗ್ರೌಂಡ್ ಸಂಪರ್ಕ ಮಾಡಿ ವಿಮಾನ ನಿಲ್ದಾಣದ ಕ್ಲಿನಿಕ್ ನ ಸಹಾಯ ಕೇಳಿದಳು. ಪರಿಚಾರಕರನ್ನು ಕಳುಹಿಸಿ ತೆಲುಗು ಬರುವವರ ವ್ಯವಸ್ಥೆ ಮಾಡಿ ಆಕೆಯ ಪ್ರಾಥಮಿಲ ವೈದ್ಯಕೀಯ ಪರೀಕ್ಷೆ ಮಾಡಿ ಹೈದರಾಬಾದ್ ವಿಮಾನ ಹತ್ತಿಸುವ ಏರ್ಪಾಡು ಮಾಡಬೇಕೆಂದು ಕೋರಿಕೆ ಕಳುಹಿಸಿದಳು. ನಂತರ ನನಗೆ... ಸರ್ ಈಕೆ ನಿಮ್ಮ ಮಾತೇ ಕೇಳೋದು ಇವಳನ್ನು ಕ್ಲಿನಿಕವರೆಗೂ ತಲುಪಿಸಿ ನೀವು ಬೆಂಗಳೂರು ವಿಮಾನ ಹತ್ತಿ, ದಯಮಾಡಿ ಇಷ್ಟು ಸಹಾಯ ಮಾಡಿ, ಎಂದಳು ಇಂಗ್ಲೀಷಲ್ಲಿ. ನಾನು ಇಲ್ಲ ಎನ್ನುವ ಮನಸಾಗದೇ ಆಗಲಿ ಎಂದೆ.
ದುಬೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಗಗನ ಸಖಿಯರು ಆಕೆಯನ್ನು...
“ ಅಬ್ ಆಪ್ ಇಧರ್ ಉತರ್ ಜಾವೋ ಬಾದ್ ಮೆ ಹೈದರಾಬದ್ ಕಾ ಪ್ಲೈನ್ ಹಮಾರಾ  ಸ್ಟಾಫ್ ಚಢಾಯೆಗಾ, ಆಪ್ಕೋ ಥೋಡಾ ತಾಖತ್ ಕೆ ಲಿಯೆ ಕ್ಲಿನಿಕ್ ಮೆ ಕುಚ್ ದವಾ ದೇಂಗೆ ಬಾದ್ ಮೆ ಆಪ್ ಕೋ ಹೈದರಾಬಾದ್ ಪ್ಲೈನ್ ಮೆ ಬಿಠಾಯೇಂಗೆ” (ಈಗ ಇಲ್ಲಿ ಇಳಿಯಿರಿ, ಆಮೇಲೆ ನಿಮ್ಮನ್ನು ಹೈದರಾಬದ್ ಪ್ಲೈನ್ ಗೆ ಹತ್ತಲು ನಮ್ಮ ಸಿಬ್ಬಮ್ದಿ ಸಹಾಯ ಮಾಡುತ್ತೆ, ಸ್ವಲ್ಪ ಶಕ್ತಿಗಾಗಿ ಕ್ಲಿನಿಕಲ್ಲಿ ಔಷಧಿ ಕೊಡ್ತಾರೆ)
ಆಕೆಯನ್ನು
“ಕುಮಾರಿ ..ಇಕ್ಕಡ ದಿಗಿ ಹೈದರಾಬಾದ್ ಪ್ಲೈನ್ ಎಕ್ಕಾಲಿ ..ದಿಗು..ನೀಕು ಕ್ಲಿನಿಕ್ ಲೊ ಶಕ್ತಿ ಕೋಸಂ ಮಂದು ಇಸ್ತಾರು” (ಕುಮಾರಿ ನೀನು ಇಲ್ಲಿ ಇಳಿ ಮತ್ತೆ ಹೈದರಾಬಾದ್ ಪ್ಲೈನ್ ಹತ್ತಿಸ್ತಾರೆ, ನಿನಗೆ ಶಕ್ತಿಗಾಗಿ ಕ್ಲಿನಿಕ್ಕಲ್ಲಿ ಸ್ವಲ್ಪ ಅಷಧಿ ಕೊಡ್ತಾರೆ.) ಎನ್ನುತ್ತಾ ಹೊರನೆಡೆಸಿಕೊಂಡು ಬಂದೆ. ಹೊರನಡೆದು ಬಂದು ವಿಮಾನ ನಿಲ್ದಾಣ ಕ್ಕೆ ಬರುತ್ತಿದ್ದವಳು...
“ಎಕ್ಕಡಿಕಿ ಪಿಲಿಸ್ಕೆಳ್ತಾ ಉನ್ನಾರು ಈಳ್ಳು..... ನೇನು ಹೈದರಾಬಾದ್ ತಪ್ಪಾ ಎಕ್ಕಡೂ ದಿಗನು” (ಎಲ್ಲಿಗೆ ಕರೆದೊಯ್ತಾ ಇದ್ದರೆ ಇವರು..? ನಾನು ಹೈದರಾಬಾದ್ ಅಲ್ಲದೇ ಬೇರೆಲ್ಲೂ ಇಳಿಯೊಲ್ಲ)..
ಎನ್ನುತ್ತಾ ಅಳುತ್ತಾ ವಾಪಸ್ ವಿಮಾನದೊಳಕ್ಕೆ ಹೋಗಲಾರಂಭಿಸಿದಳು.. ಅಲ್ಲಿಗೆ ಬಂದ ನಿಲ್ದಾಣದ ಪರಿಚಾರಕರು ಅವಳನ್ನು ಬಲವಂತವಾಗಿ ಏರ್ಪೋರ್ಟ್ ಓಪನ್ ಕಾರಲ್ಲಿ ಕುಳ್ಳಿರಿಸಲು ಪ್ರಯತ್ನಿಸಿದಾಗ ನಾನೂ ಬರಬೇಕು ಅಂತ ಒತ್ತಾಯ ಮಾಡುತ್ತಾ ನನ್ನ ಕೈಯನ್ನು ಬಲವಾಗಿ ಹಿಡಿದುಕೊಂಡಳು.. . ನಾನೂ ಕುಳಿತುಕೊಂಡು ಅವಳನ್ನು ಕ್ಲಿನಿಕ್ ಗೆ ತಲುಪಿಸುವ ಒತ್ತಾಯ ಮಾಡಿದರು ನಿಲ್ದಾಣ ಪರಿಚಾರಕರು. ಸರಿ!! ವಿಧಿಯಿರಲಿಲ್ಲ. ನಾನೂ ಕೂತೆ, ಇವಳು ಅಳಲಾರಂಭಿಸಿದಳು...ನನ್ನ ಗಂಡನ ಬಳಿಗೆ ನನ್ನ ಕರೆದುಕೊಂಡು ಹೋಗಿ...ನನ್ನ ಕೊಲ್ಲ ಬೇಡಿ...ಎಂದೆಲ್ಲಾ ಬಡಬಡಿಸತೊಡಗಿದಳು. ಓಪನ್ ಕಾರಲ್ಲಿದ್ದ ನನಗೋ ಮುಜುಗರ, ಎಲ್ಲಾ ನನ್ನನ್ನು ಮತ್ತು ಅಳುತ್ತಿದ್ದ ಕುಮಾರಿಯನ್ನು ನೋಡಿ..ಇವನೇನೋ ಮಾಡಿದ್ದಾನೆ ..! ಪಾಪ ಅಳ್ತಾ ಇದ್ದಾಳೆ...ಅದಕ್ಕೇ ಪೋಲೀಸ್ ಇವನನ್ನ ಎಳೆದು ಕೊಂಡು ಹೋಗ್ತಿದ್ದಾರೆ...!!! ಎನ್ನುವಂತೆ ನನ್ನ ಯಾವುದೋ ಖೈದಿನ ನೋಡೋ ತರಹ  ಎಲ್ಲಾ ನೋಡ್ತಾ ಇದ್ದದ್ದು ಗಮನಕ್ಕೆ ಬಂತು...ಮೆತ್ತಗೆ ಅವಳಿಗೆ..ಅಳಬೇಡ ಎಂದಷ್ಟೂ ಅವಳ ಅಳು ಜಾಸ್ತಿ ಆಗಿತ್ತು. ಅಲ್ಲಿ ಪರಿಚಾರಕ ಬದಲಿ ಪೋಲಿಸ್ ಪೇದೆಗಳು ಇನ್ನೊಂದು ತೆರೆದ ಕಾರಿನಲ್ಲಿ ಬರ್ತಿದ್ದದ್ದು ನನಗೆ ನಂತರವೇ ಗೊತ್ತಾಗಿದ್ದು. ನಂತರ ಪೇಚಿಗೆ ಅದೂ ಒಂದು ಕಾರಣವಾಗಿತ್ತು.
ಕ್ಲಿನಿಕ್ ಗೆ ತಲುಪಿದ ಮೇಲೆ ನರ್ಸ್ ಮತ್ತು ಅರಬಿ ಲೇಡಿ ಡಾಕ್ಟರ್ ಆಕೆಯನ್ನು ಸಮಾಧಾನಿಸುವಾಗ ಪೋಲಿಸ್ ಅಲ್ಲೇ ಇದ್ದರೇನೋ, ಸ್ವಲ್ಪ ಸಮಯದ ನಂತರ ಹೊರಗಡೆ ಕುಳಿತಿದ್ದ ನನ್ನನ್ನು ಪೋಲೀಸರು ನೀವು ಈದಿನ ಇಲ್ಲೆ ಇರಬೇಕಾಗುತ್ತೆ, ಆಕೆ ನೀವು ತೊಂದರೆ ಕೊಡ್ತಿದ್ದೀರ ಅಂತ ಹೇಳ್ತಿದ್ದಾಳೆ... ಎಂದಾಗ ನನ್ನ ಧೈರ್ಯವೇ ಉಡುಗಿಹೋಗಿತ್ತು.. ಸಾವರಿಸಿಕೊಂಡು ನಡೆದ ಕಥೆ ವಿವರಿಸಿದೆ, ಪೋಲೀಸರಿಗೆ ಸಮಾಧಾನವಾದಂತೆ ಕಾಣ್ಲಿಲ್ಲ. ನನ್ನ ಕುಳಿತುಕೊಳ್ಳಲು ಹೇಳಿದರು. ಆ ಹೊತ್ತಿಗೆ ಬೆಳಿಗ್ಗೆ ೧೦ ಘಂಟೆ ಆಗುತ್ತಿತ್ತು. ನನ್ನ ಬೆಂಗಳೂರ ವಿಮಾನ ೧.೫೦ ಕ್ಕೆ ಇದ್ದಿದ್ರಿಂದ ನನ್ನ ಆತಂಕ ಜಾಸ್ತಿಯಾಯಿತು. ಕುಮಾರಿ ತನ್ನ ಅರ್ಧಂಬರ್ಧ ಅರಬಿ ಪಾಂಡಿತ್ಯ ಮೆರೆದಿದ್ದೇ ಇದಕ್ಕೆ ಕಾರಣವಾಗಿತ್ತು. ಅಷ್ಟರಲ್ಲಿ ಉತ್ತರಭಾರತದವರಾದ ಕ್ಲಿನಿಕ್ ಡಾಕ್ಟರ್ ಮತ್ತು ಅದೇ ವಿಮಾನ (ಹಿಂದಿ) ಗಗನ ಸಖಿ ಬಂದು ವಿವರಣೆ ಕೊಟ್ಟಕಾರಣ, ಪೋಲೀಸರು ನನ್ನಲ್ಲಿ ಕ್ಷಮೆ ಕೋರಿ ನನ್ನನ್ನು ಹೋಗುವಂತೆ ಹೇಳಿದಾಗ..ಬದುಕಿದೆಯಾ ಬಡಜೀವವೇ ಎನಿಸಿ ಡಿಪಾರ್ಚರ್ ಟರ್ಮಿನಲ್ನತ್ತ ದೌಡಾಯಿಸಿದೆ.
ಬೆಂಗಳೂರಿನ ವಿಮಾನ ಹತ್ತಿ ಕುಳಿತು ವಿಮಾನ ದುಬೈ ಬಿಟ್ಟಾಗ ಒಂದು ಉದ್ದನೆಯ ನಿಟ್ಟುಸಿರು ಬಿಟ್ಟೆ... ಅಬ್ಬಾ ...ಎಡವಟ್ಟು ಅಂದ್ರೆ ಹೀಗೂನಾ...? ಅನ್ನಿಸಿ ಮೈ ಝುಂ ಎಂದಿತು.   

Sunday, November 6, 2011

ಈದ್ ಅಲ್- ಅದ್ಹಾ


ಮುಸ್ಲಿಂ ಜನಾಂಗದ ಹಿರಿ ಹಬ್ಬ: ಈದ್ ಅಲ್- ಅದ್ಹಾ 

ಇಸ್ಲಾಮ್ ಪಂಚಾಂಗ ಚಂದ್ರಮಾನ ಮೂಲದ್ದಾಗಿದ್ದು ಗ್ರಿಗರಿಯನ್ ಅಥವಾ ಸೂರ್ಯಮಾನ ಪಂಚಾಂಗದಿಂದ ಸ್ವಲ್ಪ ವಿಭಿನ್ನ. ಅಂದರೆ ಪ್ರತಿವರ್ಷ ಸುಮಾರು ೧೨ ದಿನದ ವ್ಯತ್ಯಯ ಕಂಡು ಬರುತ್ತದೆ. ಸೌರ್ಯಮಾನದಲ್ಲಿ ಒಂದು ವರ್ಷಕ್ಕೆ ೩೬೫.೨೫ ದಿನ ಆಗಿರುವ ಕಾರಣ ಅದನ್ನು ೩೬೫ ದಿನಕ್ಕೆ ಸೀಮಿತಗೊಳಿಸಿ, ನಾಲ್ಕನೇ ವರ್ಷದಲ್ಲಿ ಹೆಚ್ಚುವರಿ ೦.೨೫ ದಿನಗಳನ್ನು ಸೇರಿಸಿ ಒಂದು ದಿನ ಅಧಿಕಮಾಡಿ, ಅದನ್ನು ಫೆಬ್ರವರಿ (ಅತಿ ಕಡಿಮೆ ದಿನ ಇರುವ ತಿಂಗಳು) ಗೆ ಸೇರಿಸಿ ಅಧಿಕ ಮಾಸ (ಅಧಿಕ ವರ್ಷ) ಮಾಡಲಾಗುತ್ತೆ. ಆದರೆ ಇಸ್ಲಾಂ ಪ್ರಕಾರ ೩೫೪ ಅಥವಾ ೩೫೫ ದಿನಗಳ ವರ್ಷ, ಹಾಗಾಗಿ ೧೦-೧೨ ದಿನದ ವ್ಯತ್ಯಯ ಬರುತ್ತದೆ. ಇಂತಹ ಚಂದ್ರಮಾನ ಪಂಚಾಂಗದ ಜಿಲ್-ಹಜ್ (ಹನ್ನೆರಡನೇ) ತಿಂಗಳ ೧೦ ನೇ ದಿವಸ ಮತ್ತು ಹಜ್-ಪವಿತ್ರ ಯಾತ್ರೆಯ ಕಡೆಯ ದಿವಸ ಈದ್ ಅಲ್ ಅಧ್ಹಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಿರಿ ಹಬ್ಬ ಎನ್ನಲಾಗುತ್ತದೆ. ಈ ಹಬ್ಬದ ವಿಶೇಷತೆಯೆಂದರೆ ಹಜ್ ಯಾತ್ರೆ ಮಾಡುವುದು, ಇದನ್ನು ಆಚರಿಸಲು ಸಾಧ್ಯವಾಗದವರು ಅದೇ ಕ್ರಿಯೆಯ ಪ್ರತಿರೂಪದಂತೆ ಈದ್-ಪ್ರಾರ್ಥನೆ ಜೊತೆಗೆ ಮಾಂಸ ದಾನ (ಖುರ್ಬಾನಿ) ನೀಡುವುದು ನಡೆಯುತ್ತದೆ. ಈ ಹಬ್ಬಕ್ಕೆ ಸುಮಾರು ನಾಲ್ಕು ಸಾವಿರ ವರ್ಷದ ಹಿನ್ನೆಲೆಯಿದೆ. 


ಇಬ್ರಾಹಿಂ (ಅಬ್ರಹಾಂ) ಇಂದಿನ ಸೌದಿ ಅರೇಬಿಯಾದ ಮೆಕ್ಕಾ ಬಳಿ ವಾಸವಾಗಿದ್ದ ಒಬ್ಬ ದೈವ ಭಕ್ತ. ಆತನಿಗೆ ಹಾಜರಾ (ಈಗಿನ ಈಜಿಪ್ತ್ ದೇಶದವಳು) ಎಂಬಾಕೆ ಹೆಂಡತಿ. ಇವರ ಒಬ್ಬನೇ ಮಗ ಇಸ್ಮಾಯಿಲ್. ಇವರ ಜೀವನದಲ್ಲಿ ದೈವ ಭಕ್ತರಿಗೆ ಸಾಮಾನ್ಯ ಎನ್ನುವಂತಹ ಸತ್ವ ಪರೀಕ್ಷೆಗಳು ಬಹಳ ಆದವು. ಅವುಗಳಲ್ಲಿ ಒಂದರ ಪ್ರಕಾರ ಇಬ್ರಾಹಿಮರಿಗೆ ತನ್ನ ಹೆಂಡತಿ ಮಕ್ಕಳನ್ನು ಮರಳು ಬೆಂಗಾಡಿನಲ್ಲಿ ಬಿಡುವ ದೈವಾಣತಿಯಾಗುತ್ತದೆ. ಅವರನ್ನು ಬಿಡಲು ನಿರ್ಧರಿಸಿದಾಗ ಅವರಿಗೆ ಮೋಹ ಮಾಯೆಯ ಜಾಲಕ್ಕೆ ಸಿಕ್ಕಿಸಲು ದಾನವ (ಸೈತಾನ್) ಪ್ರಯತ್ನಿಸಿತ್ತಾನೆ, ಅವನನ್ನು ಹಿಮ್ಮೆಟ್ಟಿಸುವ ಇಬ್ರಾಹಿಮರ ಕ್ರಿಯೆಯನ್ನು ಪ್ರತಿನಿಧಿಸುವುದೇ ಈಗಿನ “ಹಜ್” ಯಾತ್ರೆಯಲ್ಲಿ ಯಾತ್ರಾರ್ಥಿಗಳು ಸಣ್ಣ ಕಲ್ಲು ಹೊಡೆಯುವ ಪ್ರಚಲನೆಯಲ್ಲಿರುವ ಶಾಸ್ತ್ರ. ಆ ನಂತರ ಇಬ್ರಾಹಿಮರು ಹೆಂಡತಿ ಮತ್ತು ಹಸುಗೂಸು ಇಸ್ಮಾಯಿಲರನ್ನು ಬೆಂಗಾಡಲ್ಲಿ (ಈಗಿರುವ ಕಾಬಾ ಸ್ಥಾನದಲ್ಲಿ) ಬಿಟ್ಟು ಹೊರಟು ಹೋಗುತ್ತಾರೆ. ಹೆಂಡತಿಯು ತನ್ನವರಿಗೆ ದೈವಾಣತಿಯಾಗಿದೆಯೆಂದು ತಿಳಿದು ಸುಮ್ಮನಾಗುತ್ತಾಳೆ. ಮಗುವಿಗೆ ನೀರಡಿಕೆಯಾಗಿ ದಾಹದಿಂದ ವಿಲವಿಲಿಸುವಾಗ ತಾಯಿ “ಹಾಜರಾ” ಮಗುವಿನ ಸುತ್ತ ಮುತ್ತ ಏಳೆಂಟು ಬಾರಿ ನೀರಿಗಾಗಿ ಸುತ್ತಿ ಪರದಾಡುತ್ತಾಳೆ, ನಂತರ ಮಗುವನ್ನು ಒಂದೆಡೆ ಬಿಟ್ಟು ಪಕ್ಕದಲ್ಲಿದ್ದ “ಸಫಾ” ಮತ್ತು “ಮರ್ವಾ” ಗುಡ್ಡಗಳನ್ನು ದಿಕ್ಕುಕಾಣದೇ ಹತಾಶಳಾಗಿ ನೀರಿಗಾಗಿ ಏಳು ಬಾರಿ ಹತ್ತಿಳಿಯುತ್ತಾಳೆ. ಆಗ ದೈವಾನುಗ್ರಹವಾಗಿ ಮಗು ಒದ್ದಾಟದಲ್ಲಿ ಕಾಲು ಬಡಿದಾಗ ಅದರ ಪಾದದ ಬಳಿ ಸಿಹಿ ನೀರಿನ ಚಿಲುಮೆ ಉಕ್ಕುತ್ತದೆ. ಅದೇ ಈಗಿನ “ಜಮ್ ಜಮ್” ಪವಿತ್ರ ನೀರಿನ ಕೊಳ.  ಈ ಘಟನೆಯಿಂದ ಪ್ರೇರಿತವಾದುದೇ ಈಗ ಮಾಡುವ “ಹಜ್ ಯಾತ್ರಾ ಪರಿಕ್ರಮ (ತವಾಫ್)”. ಮತ್ತೆ ತಾಯಿ-ಮಗು ಇಬ್ರಾಹಿಮರ ಪುನಃ ಮಿಲನವಾಗುತ್ತದೆ. ಹೀಗೇ ಇರುವಾಗ ಇಸ್ಮಾಯಿಲ್ ಸುಮಾರು ೧೩ ವರ್ಷದ ಬಾಲಕನಾಗಿರುವಾಗ ಸತ್ವ ಪರೀಕ್ಷೆಯ ಮಹತ್ವಪೂರ್ಣ ಘಟ್ಟ ಬರುತ್ತದೆ. ಪ್ರತಿ ರಾತ್ರಿ ಪದೇ ಪದೇ ಇಬ್ರಾಹಿಂ ತನ್ನ ಮಗ ಇಸ್ಮಾಯಿಲರನ್ನು ದೇವಾಣತಿಯ ಪ್ರಕಾರ ಬಲಿ ಕೊಡುವ ಕನಸು ಬೀಳುತ್ತದೆ. ಇದನ್ನು ದೇವರ ಇಚ್ಛೆಯೆಂದರಿತ ಇಬ್ರಾಹಿಂ ತನ್ನ ಮಗನಿಗೆ ವಿಷಯ ತಿಳಿಸುತ್ತಾರೆ, ಇಸ್ಮಾಯಿಲ್ ತಂದೆಗೆ ತಕ್ಕ ಮಗನಾಗಿದ್ದು “ಅಪ್ಪ ದೇವರ ಇಚ್ಛೆಯಂತೆ ನೀವು ನಡೆದುಕೊಳ್ಳಿ ನನ್ನ ಅಭ್ಯಂತರವಿಲ್ಲ” ಎನ್ನುತ್ತಾನೆ, ಇಬ್ರಾಹಿಂ ತನ್ನ ಮಗನ ಕೊರಳನ್ನು ಕಡಿಯಲು ಪ್ರಯತ್ನಿಸಿದಾಗ ಕತ್ತಿ ಮಾಯವಾಗಿ ದೇವರ ಅನುಗ್ರಹವಾಗುತ್ತದೆ. ಈ ಅಪ್ರತಿಮ ಬಲಿದಾನದ ಪ್ರತೀಕವೇ ಕುರಿ, ಒಂಟೆ, ದನ ಇತ್ಯಾದಿಯ ಬಲಿದಾನ ಅಥವಾ ಖುರ್ಬಾನಿ ನೀಡುವ ಪರಂಪರೆ. “ಜಮ್-ಜಮ್” ಚಿಲುಮೆಯ ಬಳಿಯ ಸ್ಥಾನವನ್ನು ದೈವಾನುಗ್ರವಾದ ಸ್ಥಾನವೆಂದು ಪರಿಗಣಿಸಿ ಅಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ ಸನ್ಮಂಗಳವಾಗುತ್ತದೆಂಬ ಪ್ರತೀತಿಯ ಹಿನ್ನೆಲೆಯಲ್ಲಿ “ಹಜ್” ಯಾತ್ರೆಯ ಸಂಪ್ರದಾಯ ಪ್ರಾರಂಭವಾಯಿತು. ಈ ಜಾಗದಲ್ಲಿ ಘನಾಕೃತಿಯ ಕೇಂದ್ರ ಗೃಹವನ್ನು ಕಟ್ಟಲಾಯಿತು, ಅಲ್ಲಿ ಕಪ್ಪು ಕಲ್ಲು- ಅಥವಾ “ಹಜ್ರ್ ಅಲ್ ಅಸ್ವದ್” ಒಂದೆಡೆ ಪ್ರತಿಷ್ಠಾಪಿಸಿ ಪರಿಕ್ರಮದ ಪ್ರಾರಂಭಕ್ಕೆ ಒಂದು ಗುರುತಾಗಿ ಇಡಲಾಯಿತು, ಆ ಕಾರಣಕ್ಕೆ ಕಪ್ಪು ಕಲ್ಲಿಗೆ ಒಂದು ಮಹತ್ವ ದೊರೆಯಿತು. ಇದನ್ನೂ ಮುಸ್ಲಿಮರು ಆರಾಧಿಸುತ್ತಾರೆನ್ನುವ ತಪ್ಪು ಕಲ್ಪನೆ ಹಲವರಲ್ಲಿದೆ, ಆದರೆ ಇದು ಕೇವಲ ಪರಿಕ್ರಮದ ಗುರುತಾಗಿ ಅಂದು ಇಟ್ಟ ಕಲ್ಲಾಗಿದೆ. ಅಂದು “ಹಾಜರಾ” ಮಗುವಿನ ನೀರಿಗಾಗಿ ಏಳು ಬಾರಿ “ಸಫಾ” ಮತ್ತು “ಮರ್ವಾ” ಗುಡ್ಡಗಳನ್ನು ಹತ್ತಿ ಇಳಿದ ಕಾರಣ ಈಗಲೂ ಯಾತ್ರಾರ್ಥಿಗಳು ಸಫಾ ಮರ್ವಾ ಮಧ್ಯೆ ಏಳುಬಾರಿ ಪರಿಕ್ರಮಿಸುವುದು ಕಡ್ಡಾಯ. 
ಚಿತ್ರ ಪವಿತ್ರ ಕಾಬಾ (ಮಕ್ಕಾ ಪಟ್ಟಣ) (ಕೃಪೆ: ಅಂತರ್ಜಾಲ)

ಎಲ್ಲ ಧರ್ಮಗಳ ಸಾರ ಒಂದೇ, ಒಬ್ಬ ಸಕಲಮಾನ್ಯನು ಅರಾಧ್ಯನೂ ಇರುವನು ಅವನ ನಾಮ ಹಲವಿರಬಹುದು, ಅವನು ನಮ್ಮಲ್ಲಿನ ಒಳ್ಳೆತನವನ್ನು ಒರೆಹಚ್ಚುತ್ತಾನೆ, ನಮ್ಮ ಬಲಹೀನತೆಯನ್ನು ತೊಡೆಯಲು ಪ್ರಯತ್ನಿಸುತ್ತಾನೆ, ಅದಕ್ಕೆ ದೈವಾನುಗ್ರಹವಾದವರು, ಪ್ರವಾದಿಗಳೂ ಹೊರತಲ್ಲ. ತಮ್ಮ ಮಕ್ಕಳನ್ನು ಬಲಿಕೊಟ್ಟ ಸತ್ವ ಪರೀಕ್ಷೆಯ ಘಟನೆಗಳ ಪುರಾಣ ಕಥೆಗಳೂ ಹಿಂದೂ ಧರ್ಮದಲ್ಲಿ ಹಲವಾರಿವೆ. ಖುರ್ಬಾನಿ  ತಮ್ಮಲ್ಲಿನ ಅಮೂಲ್ಯವನ್ನು ಹೇಗೆ ಸಮಾಜದ ಒಳಿತಿಗೆ ಧಾರೆಯೆರೆಯುವ ನಿಸ್ವಾರ್ಥತೆಯನ್ನು ಕಲಿಸುತ್ತದೆಯೋ ಹಾಗೆಯೇ “ಹಜ್” ಯಾತ್ರೆ ಧರ್ಮಾವಲಂಬಿಗಳಲ್ಲಿ ದೇವರ ಮೇಲಿನ ವಿಶ್ವಾಸ ಮತ್ತು ಭಕ್ತಿಗೆ ಪೂರಕವಾಗಿ ಸಮನ್ವಯತೆ ಮತ್ತು ಮಾನವತೆಯನ್ನು ಕಾಯ್ದುಕೊಳ್ಳಬೇಕಾದ ಪರಂಪರೆಯಾಗಬೇಕಿದೆ.