Wednesday, February 2, 2011

ಬೇಲಿ, ಮಾಲಿ ಮತ್ತು ಹೊಲ
ಶತವಿಕ್ರಮನ ತಲೆ ಗಿರ್ ಎನ್ನುತ್ತಿತ್ತು. ಕಪಿಲಾಪುರದ ರಾಜಕತೆ ಆರಾಜಕತೆಯಾಗುತ್ತಿದೆ... ತಾನು  ತನ್ನ  ತಾತನ  ಚಕ್ರಾಧಿಪತ್ಯದ  ಕಾಲದ ಸುವರ್ಣ ಯುಗದ ಬಗ್ಗೆ ಕೇಳಿದ್ದ, ತಂದೆ ಕಾಲದ ಉನ್ನತ ಪ್ರಜಾಪಾಲನೆಯ ಬಗ್ಗೆ ಓದಿದ್ದ..ತಾನೂ ಎಲ್ಲ ಮೆಚ್ಚುವ ಹಾಗೆ ರಾಜ್ಯಭಾರ ಮಾಡಿದ್ದ. ಈ ರಾಜ ವಂಶಕ್ಕೆ ವರವಾಗಿದ್ದ ದೀರ್ಘಾಯುಷ್ಯ ಶತವಿಕ್ರಮನನ್ನು ಕಾಡತೊಡಗಿತ್ತು. ಭೇತಾಳನ ವಶಪಡಿಸಿಕೊಂಡು ಅವನ ನಾಮಾವಶೇಷ ಅಳಿಸಿದರೆ ಮಾತ್ರ ಆತನ ಕುಲಕ್ಕೆ ಮುಕ್ತಿಯ ಸಾಧ್ಯತೆಯಿತ್ತು ಹಾಗಾಗಿ ಜಹಗೀರು ಮತ್ತು ಸ್ವಾಯತ್ತತೆ ಪಡೆದು ಈ ಆಧಿನಿಕ ಯುಗದಲ್ಲೂ ಭೇತಾಳನನ್ನು ಸೋಲಿಸುವುದರಲ್ಲೇ ಕಾಲ ಕಳೆಯುತ್ತಿದ್ದ. ಇಲ್ಲಿ ಇವರಿಬ್ಬರ ಮಧ್ಯದ ಈ ಕಿತ್ತಾಟ ಕೇವಲ ಅವರಿಬ್ಬರಿಗೆ ಮತ್ತು ಅದರ ರನ್ನಿಂಗ್ ಕಾಮೆಂಟರಿ ಕೊಡುವ ನನಗೆ ಮಾತ್ರ ಸಾಧ್ಯ.
ಏನು...?? ಮಹಾಭಾರತದ ಆಗುಹೋಗುಗಳನ್ನು ದೃತರಾಷ್ಟ್ರನಿಗೆ ಸಂಜಯನು ಹೇಳುತ್ತಿದ್ದ ರೀತಿನೇ..ಎಂದಿರಾ...?? ಹೌದು. ಇದಕ್ಕೆ ಕಾರಣವೂ ಇಲ್ಲದಿಲ್ಲ, ತ್ರಿವಿಕ್ರಮನ ಕಾಲದಿಂದ ಈ ಕಥೆಗಳನ್ನು ಹೇಳುತ್ತಿದ್ದ ಕಾರಣ ನನಗೂ ಒಂದು ರೀತಿಯ ಶಾಪವೇ ತಟ್ಟಿತ್ತು ಅಂದು. ಸಾವಿರಾರು ಬಾರಿ ಜನ್ಮತಾಳಿ ಈ ಶೃಂಖಲೆಯ ಪ್ರತಿಕೊಂಡಿಯ ವಿವರ ಪ್ರಜಾಜನಕ್ಕೆ ತಲುಪಿಸುವ ಹೊಣೆಗಾರಿಕೆ ನನ್ನದಾಗಿದೆ...ಅದಕ್ಕೇ ಇದೆಲ್ಲಾ ಅನಿವಾರ್ಯ,,..

ಏನು.. ?? “ಹರಿಕಥೆ ಬೇಡ ..ನಮ್ಮ ಎಮ್ಮೆಲ್ಲೆ, ಮಂತ್ರಿ, ಮು.ಮಂತ್ರಿಗಳ ತರಹ ಪ್ರಜಾಪಾಲನೆ ಮತ್ತು ಸಮಾಜ ಕಲ್ಯಾಣ ಬಿಟ್ಟು ಮತ್ತೆಲ್ಲ ಕಲ್ಯಾಣಕಾರ್ಯ ಮಾಡೋಹಾಗೆ ..ನೀನು ಮಾಡಬೇಡ”
ಅಂತೀರಾ.... ಸರಿ ಸರಿ...ಸಾರಿ ರೀ.


ಕಥೆಗೆ ಬರ್ತೀನಿ. ಎಂದಿನಂತೆ ಶತ ವಿಕ್ರಮ ತನ್ನ ಕಂಪ್ಯೂಟರ್ ನ ಗೂಗಲ್ ನಲ್ಲಿ ’ಭೇತಾಳ’ ಅಂತ ಹಾಕಿ ಹುಡುಕಿದ್ರೆ.. ಎಲ್ಲಾ ತನ್ನದೇ ಹಳೇ ವಿಫಲ ಕಥೆಯ ಸರ್ಚ್ ರಿಸಲ್ಟ್ ಬರ್ತಿದ್ದನ್ನೇ ನೋಡಿ ಬೇಸರಗೊಂಡು...”ಛೇ” ಎನ್ನುತ್ತಾ ಹಾಗೇ ಕೀಲಿ ಮಣೆಯನ್ನ ತಬಲ ಎಂದುಕೊಂಡು ಬಡಿದ.. ಅರೆ..!! ಏನಿದು??!! ಗೂಗಲ್ ಸ್ಕಾಲರ್ ಓಪನ್ ಆಗಿ...ಭೇತಾಳನ ಹೊಸ ಅಡ್ಡಾ-ದ ವಿವರ ಸಿಕ್ಕೇಬಿಡ್ತು.... ಭೇತಾಳ ಶತವಿಕ್ರಮನ ಕೈಗೆ ಸಿಗಲೇಬಾರದು ಎಂದು ಉಚ್ಛಾಟಿತ ನಿರ್ದಲೀಯ ಎಮ್ಮೆಲ್ಲೆಗಳ ಶಾಶಕಭವನದ ಅಪಾರ್ಟ್ ಮೆಂಟಿನ ಫ್ಯಾನಿಗೆ ನೇತಾಡುತ್ತಾ ಇತ್ತು. ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋತರಹ ಮತ್ತೆ ತನ್ನನ್ನು ಫ್ಯಾನಿಂದ ಬಿಡಿಸಿ ಕೆಳಗಿಳಿಸಿ ಕ್ರಿಮೆಟೋರಿಯಂ ನತ್ತ ನಡೆದ ಶತ ವಿಕ್ರಮನ ಶ್ರಮಕ್ಕೆ ನಗುತ್ತಾ...ಹೇಳಿತು.


ಅಯ್ಯಾ ಶತವಿಕ್ರಮ ಕಪಿಲಾಪುರದ ಕಥೆಯಲ್ಲಾ ನಿನಗೆ ತಿಳಿದದ್ದೇ... ಇಲ್ಲಿಯ ರಾಜ ಚಿವಿಂಗ್ಗಮ್ ಹಾಕಿ ಮೆತ್ತಿಸಿಕೊಂಡಂತೆ ನೂರಾರು ಆರೋಪಗಳು ಬಂದರೂ ತನ್ನ ಕುರ್ಚಿಗೆ ಅಂಟಿರುವುದು ನೋಡಿದರೆ ಉದಾತ್ತ ವಿಚಾರಗಳ ಅತಿ ಸೌಮ್ಯ ಮತ್ತು ಅತಿ ಚಾಣಾಕ್ಷ ಭರತದೊರೆ ಬದದ್ದೂರ್ ಶಾಸ್ತ್ರಿಯ ನೆನಪಾಗುತ್ತದೆ. ಅಂತಹ ಮೌಲ್ಯಾಧಾರಿತ ರಾಜಕಾರಣದ ಧುರೀಣರನ್ನು ಕೊಟ್ಟ ಭರತ ಭೂಮಿ ಇಂದು ಏಕೆ ಹೀಗೆ ತನ್ನ ಜನತೆಯ ರಕ್ತ ಹೀರುವ ರಕ್ತ ಪೀಪಾಸು ರಾಜಕೀಯ ಅರಾಜಕಾರಣಿಗಳನ್ನು ನೀಡುತ್ತಿದೆ..? ಎನ್ನುವುದು ಅರ್ಥವಾಗುತ್ತಿಲ್ಲ. ನಮ್ಮ ಕಪಿಲಾಪುರವನ್ನೇ ತೆಗೆದುಕೋ ಇಲ್ಲಿನ ನಮ್ಮ ರಾಜ್ಯ ಯಜಮಾನನನ್ನು ನೋಡಿ ಹುಡುಗರೂ ತಮ್ಮ ಹಾಡುಗಳನ್ನು ಬದಲಾಯಿಸಿ... “ಥರ..ಥರ..ಥರ...ಥರ..ನಿಂಥರ ಇಲ್ಲಿ ಯಾರೂ ಇಲ್ಲ ಕಣ್ರೀ ನಿಮ್ ಥರ”
ಅಂತ ಹಾಡ್ತಿದ್ದಾರೆ. ಕೊಲೆ ಸುಲಿಗೆ ದರೋಡೆ ಕಳ್ಳರು ರಾತ್ರಿಹೊತ್ತು ಮತ್ತು ನಮ್ಮ ರಾಜಕಾರಣಿಗಳು ಹಾಡ ಹಗಲೇ ಎಲ್ಲರಿಗೆ ಕಾಣುವಂತೆ ಕೋಟ್ಯಾಂತರ ದೋಚುತ್ತಿದ್ದಾರೆ. ಇನ್ನು ವ್ಯವಸ್ಥೆಯ ವ್ಯವಸ್ಥಾಪಕ ಎಲ್ಲ ನಿಗ್ರಹಿಸುವ ಭರದಲ್ಲಿ ತನ್ನ ಬಾಲದ ಕೆರೆತವನ್ನು ತಾನೇ ಕಚ್ಚಿ ನಿವಾರಿಸಿಕೊಳ್ಳಲು ಗಿರ ಗಿರ ಸುತ್ತುವ ನಾಯಿಯಂತೆ ಸುತ್ತುತ್ತಾ ಬಸವಳಿಯುತ್ತಿದ್ದಾನೆ. ತನ್ನ ಬಾಲಕ್ಕೇ ರಕ್ಷಣೆ ಇಲ್ಲ ರಕ್ಷಣೆ ಕೊಡಿ ಅಂತ ಪೇಚು ಪೇಚಾಗಿ ಪೇಚಾಡುತ್ತಿದ್ದಾನೆ. ಇವುಗಳ ಪರಿವಾರವೇನು...? ಇದನ್ನು ತಿಳಿದೂ ಹೇಳದೇ ಹೋದರೆ ಪ್ರತಿಪಕ್ಷದಿಂದ ಆಡಳಿತಪಕ್ಷಕ್ಕೆ ಬಂದು ಆಳುವವನ ಪಕ್ಕೆ ಸದಾಚುಚ್ಚುವ ಮುಳ್ಳಿನಂತೆ ನಿನ್ನನ್ನು ಪದೇ ಪದೇ ಚುಚ್ಚುತ್ತೇನೆ...ಇಂತಹ ಸಾಮಾನ್ಯ ಸಮಸ್ಯೆಗಳ ಉತ್ತರ ನೀಡದೇ ಇದ್ದರೆ ಸಮಸ್ಯೆಗಳ ಸಾಗರವೇ ಆದ ಈ ಭೇತಾಳನನ್ನು ನಿರ್ನಾಮ ಮಾಡುವ ಕನಸನ್ನು ಬಿಟ್ಟುಬಿಡು.
ಎಂದಿತು.


ಇದಕ್ಕೆ ಶತ ವಿಕ್ರಮ..
”ಎಲೈ ಭೇತಾಳ..ತಾಳತಪ್ಪಿ ಹಾಡುವುದು ನಿನ್ನ ಜಾಯಮಾನವೇ ಬಿಡು, ಮೌಲ್ಯಗಳು ದಿನೇ ದಿನೇ ಹದಗೆಟ್ಟಿರುವುದು ಕಾಲದ ಮಹಿಮೆ..ಆಗ ಶಾಸ್ತ್ರಿ ಈಗ ಹೆಸರಿಗಾದರೂ ಒಬ್ಬರು ಅಟಲರು ಇಲ್ಲವೇ?? ಅದಿರಲಿ... ಸಮಸ್ಯೆಗಳು ಸ್ವಯಂ ಚುನಾಯಿತ ಎನ್ನುವುದು ನಿನ್ನ ಮಿದುಳಿಲ್ಲದ ಬುರುಡೆಗೆ ಹೇಗೆ ತಿಳಿದೀತು...? ವ್ಯವಸ್ಥೆಯನ್ನು ದೂರುವುದೇ ಸ್ವಭಾವವಾಗಿರುವ ಬುದ್ಧಿಜೀವಿಗಳು, ರಾಜಕಾರಣಿಗಳನ್ನು ಸದಾ ದೂರುವ ಜನ-ಮತದಾರರು ಆರಿಸುವುದು ಯಾರನ್ನು.?? ಅಥವಾ ಬುದ್ಧಿಜೀವಿಗಳು ತಾವೇ ಮಹಾ ಬುದ್ಧಿವಂತರೆಂದು ಮತಹಾಕದೇ ಇರುವುದರಿಂದ ಬೆಳೆಯುವುದು ಇಂಥ ಗೋಸುಂಬೆಗಳೇ..ಅಲ್ಲವೇ..? ? ಐದು ವರ್ಷಕ್ಕೊಮ್ಮೆ ಚುನಾಯಿಸುವ ಹಕ್ಕು ಸಿಕ್ಕಾಗ ಸಮರ್ಥರನ್ನು ಆರಿಸುವ ಮತ್ತು ಮತ ಚಲಾವಣೆ ಮಾತ್ರವಲ್ಲ ಅದಕ್ಕೆ ಲಾಯಕ್ಕಾದ ಪ್ರಜಾ ಪ್ರತಿನಿಧಿಗಳನ್ನು ಮುಂದೆ ತರುವುದೇ ಮತದಾರನ ಕರ್ತವ್ಯ...ಬದಲಾವಣೆ ಅವನಿಂದಲೇ ಸಾಧ್ಯ.... ಅಮೂಲಾಗ್ರ ಬುದ್ಧಿಮಂಥನ ಕ್ರಾಂತಿಯೇ ಆಗಬೇಕು.. ಆಗಲೇ ನಿಜವಾಗಿಯೂ ಸಿರಿವಂತನಾಡು .. ಸುಭಿಕ್ಷ ದೇಶ ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗುವುದು ನಾಡು ಎಲ್ಲರಿಗೂ ಗೋಚರಿಸುವುದು”
ಎಂದ ಕೂಡಲೇ....


“ಹಹಹಹಹ...ನೀನು ಮೌನ ಮುರಿದೆ...ಇಗೋ ನಾನು ಹೊರಟೆ” ಎಂದು ಹಾರುತ್ತಾ ಭೇತಾಳ ಮತ್ತೊಂದು ನೇತಾಡುವ ಜಾಗವನ್ನು ಅರಸಿ ಮಾಯವಾಯಿತು.