Tuesday, July 28, 2009

ಗುಂಗಲ್ಲಿ ನುಂಗಣ್ಣ ಹೇಳಿದ್ದೇನು????

(ವೆಬ್ ನ ಚಿತ್ರಕ್ಕೆ ಬಬಲ್ ಶೀರ್ಷಿಕೆ ಕನ್ನಡೀಕರಿಸಿ ಕೊಟ್ಟಿದ್ದೇನೆ)


ನಮಸ್ಕಾರ ...ನಾನು ನುಂಗಣ್ಣ...ಗೊತ್ತಾಗ್ಲಿಲ್ವ...?? ನಿಮ್ಮನೇಲಿದ್ದೇ..ನೀವು ಕೊಟ್ಟ್ರೂ ಕೊಡದೇ ಇದ್ರೂ ..ನನ್ಗೆ ಬೇಕಾದಷ್ಟೇನು ತಲೆಮಾರುಗಳಿಗೆ ಆಗೊಸ್ಟನ್ನ ಗುಡ್ಡೆ ಹಾಕ್ತಾ ನುಂಗ್ತಾ ಇದ್ದೀನಿ...??!! ಗೊಅತ್ತಾಗ್ಲಿಲ್ಲ್ವ?? ಅಲ್ರೀ ..ಏನೋ ಒಂದ್ಸ್ವಲ್ಪ ತಿಂದಿದ್ದಕ್ಕೆ ಗುಂಜಣ್ನನ್ನ ತಿಂದ..ತಿಂದ..ಅಂತ ಗೋಳಾಡ್ಸಿದ್ರಿ..ಪತ್ರಿಕೇಲಿ ಬರೆಸಿದ್ರಿ..?? ಅದ್ಯಾರೋ ಲೋಕಕ್ಕೇ ಆಯುಕ್ತರಂತೆ...(ಮನೇಲಿ ಮಂಚದಲ್ಲಿ ವರ್ಷಗಳಿಂದ ಸೇರ್ಕೋಂಡು ಸ್ವಲ್ಪ..ಸ್ವಲ್ಪ..ತಿಳಿದೂ.ಏನೋ ಬಿಡು ಹೋಗ್ಲಿ ಅಂತ ಅನ್ಕೊಳ್ಳೋಹಾಗೆ ರಕ್ತ ಕುಡೀತಿರೋ ತಿಗಣೇನೇ ಏನೂ ಮಾಡಾಕಾಗ್ದೇ ಇರೋರು ಎಂಥ ಲೋಕಕ್ಕೆ..ಎಂಥ ಆಯುಕ್ತರು...!!!???) ಅವರನ್ನ ಬಿಟ್ಟು ಆಯ್ಕಂಡ್ ತಿನ್ನೋ ಕೋಳೀ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ..ಪಾಪ...ಗುಂಜಣ್ನ..ಎನೋ ವ್ಯವಸ್ಥೆಗೆ ಕಟ್ಟುಬಿದ್ದು..ಬೇಕಂತಲೋ...ಬೇಡ ಅಂತಲೋ..ಏನೋ ...ಸ್ವಲ್ಪ ತಿಂದದ್ದಕ್ಕೆ..ಇದ್ದ ಬದ್ದ ಮಾನ ಹೋಯ್ತು..ಅಂತ ಅಷ್ಟು ವರ್ಷ ಕೆಲಸ ಮಾಡ್ತಿದ್ದ ಕಛೇರಿಯಲ್ಲೇ ಹಗ್ಗಕ್ಕೆ ಕೊರಳ್ಕೊಟ್ಟು ಜೋತು ಬಿದ್ದ....ನಿಮಗೆ ತಾಕತ್ತಿದ್ದರೆ ನಮ್ಮಂಥ ನುಂಗಣ್ನಗಳ ಮೇಲೆ ಬಿಡ್ರಿ ನಿಮ್ಮ ಬ್ರಹ್ಮಾಸ್ತ್ರ..??!! ಅದ್ಕ್ಕೂ ತಾಕತ್ತು ..ಕಿಮ್ಮತ್ತು...ದಿಲ್ಲು...ದಮ್ಮು ಎಲ್ಲ ಬೇಕು. ಅಷ್ಟೆಲ್ಲಾ ಯಾಕೆ...ಐದು ವರ್ಷಕ್ಕೊಂದಾವರ್ತಿ ನಿಮ್ಮ ಹತ್ರ ಬಂದು..ಗೆದ್ದರೆ ನಿಮ್ಮ ಮಗನಿಗೆ ಆ ಕೆಲಸ ಕೊಡಿಸುತ್ತೀವಿ...ನಿಮ್ಮ ತಮ್ಮನಿಗೆ ಏಜೆನ್ಸಿ ಕೊಡಿಸ್ತೀವಿ..ನಿಮ್ಮ ಅಕ್ರಮ ಸೈಟನ್ನ ಸಕ್ರಮ ಮಾಡ್ತೀವಿ ಅಂತ ಬಂದು ನಿಮ್ಮ ಓಟು ಗಿಟ್ಟಿಸ್ಕೊಂಡು..ಮೆರೆಯೋ ಮಿನಿಸ್ಟ್ರು ಅವರಿಗೆ ಸಪೋರ್ಟ್ ಕೊಡೋ ಬಿಜಿನೆಸ್ ಟೈಕೂನುಗಳು..ಅವರಿಗೆ ಕುಮ್ಮಕ್ಕು ಕೊಡೋ ಆಫೀಸರುಗಳು..ಇವ್ರಿಗೆ ಎಂದಾದ್ರೂ ತಿಂದ ತಿಂದ ಅಂತ ಹೇಳಿದ್ದೀರಾ..?? ಗುಂಜಣ್ಣನ್ನ ಯಾಕ್ರೀ ಹೇಳ್ತೀರಾ..ತಿಂದ..ಗುಡ್ದೆ ಹಾಕ್ದ ಅಂತ..?? ಅವನೇನ್ರೀ ಗುಡ್ಡೆ ಹಾಕ್ದ..?? ಅಸಲು ಗುಡ್ಡೆ ಅಂದ್ರೆ ಏನು ಅಂತ್ಲೇ ಗೊತ್ತಿಲ್ಲ ಅವನಿಗೆ.
ನಾನು ಹೇಳ್ತೀನಿ ಕೇಳಿ...ಹಣ ಇದೆ ಅಂತ ರೈತ ಬೆಳೆದದ್ದನ್ನ ಆರು ಕಾಸಿಂದು ಮೂರ್ಕಾಸಿಗೆ ಕೊಂಡ್ಕೊಂಡು, ಅದ್ದಕ್ಕೆ ಕುಮ್ಮಕ್ಕು ಕೊಡೋಕೆ ಫುಡ್ ಇನ್ಸ್ ಪೆಕ್ಟರಿಗೆ ತಿನ್ಸಿ, ದೊಡ್ಡ ದೊಡ್ಡ ಗೋಡೌನು ಕಟ್ಸಿ ಅದನ್ನ ಕಟ್ಟೋದಕ್ಕೆ ಕಾರ್ಪೊರೇಶನ್ ಅಧಿಕಾರಿಗಳಿಗೆ ತಿನ್ಸಿ, ಸವಲತ್ತು ಅಂತ ವಿದ್ಯುತ್ ಇಲಾಖೆ ಆಫೀಸರಿಗೆ ತಿನ್ಸಿ, ಲಕ್ಷ ಲಕ್ಷ ಟನ್ ದವಸ ಗೋದಾಮುಗಳಲ್ಲಿ ತುಂಬಿಟ್ಟು..ಕೃತಕ ಅಭಾವ ಸೃಷ್ಠಿಸಿ ಒಪ್ಪೊತ್ತಿನ ಊಟಕ್ಕೇ ಪರದಾಡೋ ಎಷ್ಟೋ ಬಡವರು ಹಸಿವಿಂದ ಸಾಯೋ ಸ್ಥಿತಿಗೆ ತರ್ತಾರಲ್ಲ...ಭಾರಿ ಕಳ್ಳ ವರ್ತಕರು ಅವ್ರು ನಿಜವಾದ ನುಂಗಣ್ಣಗಳು...
ಸಾವಿರಾರು ವಾಹನ ಓಡಾಡೋ ಸೇತುವೆಗಳು, ಬೆಳೆಗೆ ಹನಿಸೋ- ದಾಹ ತಣಿಸೋ ನೀರು ಹರಿಸೋ ಕಾಲುವೆಗಳು, ಸಾರ್ವಜನಿಕ ಕಟ್ಟಡಗಳು, ರಸ್ತೆಗಳು ಹೀಗೆ ಎಲ್ಲದರಲ್ಲೂ ಗೋಲ್ ಮಾಲ್ ಮಾಡಿ ಗುಡ್ಡೆ ಹಾಕೋ ದೊಡ್ಡ ದೊಡ್ಡ ಖದೀಮ ಕಂಟ್ರ‍ಾಕ್ಟರುಗಳು ..ಅವ್ರು ನಿಜವಾದ ನುಂಗಣ್ಣಗಳು.
ಮಕ್ಕಳ ಊಟದಲ್ಲಿ ಅಕ್ರಮ, ರೋಗಿಗೆ ಕೊಡೋ ಔಷದಿಯಲ್ಲಿ ಕಲಬೆರಕೆ, ಸ್ವಾತಂತ್ರ್ಯ ಹೋರಾಟಗಾರರ. ವಯೋವೃದ್ಧರ ಮಾಶಾಸನದಲ್ಲಿ ಗೋಲ್ ಮಾಲ್, ಕಿಡ್ನಿ ಕದ್ದು ಮಾರೋ ಕಾಂಡ, ಹೆಣ್ಣುಮಕ್ಕಳ ಮಾರಾಟ, ಹೆಣ್ಣಿನ ಅಸಹಯಾಕತೆಯನ್ನ ಕ್ಯಾಶ್ ಮಾಡಿಕೊಳ್ಳೋ ಬಿಚೌಲಿಗಳ ಬಾಸುಗಳು ಇವ್ರು ನಿಜವಾದ ನುಂಗಣ್ಣಗಳು......
ಇವ್ರೆಲ್ಲರಿಗೆ...ಸುಪ್ರೀಂ..ನಾನು...ಸರ್ಕಾರದ ಭಾಗವಾಗಿದ್ದು ನಾನು ಮಾಡಿದ್ದೇ ಶಾಸನ, ನಾನು ಹೇಳಿದ್ದೇ ವೇದ ವಾಕ್ಯ...ನಿಮ್ಮ ಕೈಗೆ ಬಿಲ್ಲು ಕೊಡೋನೂ ನಾನೆ, ಬ್ರಹ್ಮಾಸ್ತ್ರ ದಯಪಾಲಿಸೋನೂ ನಾನೇ..ಇವೆಲ್ಲವುಗಳ ಸೂತ್ರ ನನ್ನ ಕೈಲಿ..ಒಂದು ಬಾರಿ ನಿಮ್ಮ ಭಿಕ್ಷೆ ಪಡೆದರೆ..ಐದು ವರ್ಷ ನನ್ನ ನೀವಲ್ಲ ...ನಿಮ್ಮಪ್ಪ ಅಲ್ಲ ..ಆ ಬ್ರಹ್ಮ ಬಂದ್ರೂ ಅಲುಗಾಡಿಸೋಕಾಗಲ್ಲ...
ಅಂಥ ಪರಮ ಮಹಾ ನುಂಗಣ್ಣ ...ನಾನು. ಗೊತ್ತಾಯ್ತೇ..??
ಈಗ್ಲೂ ಸಮಯ ಇದೆ ಎಚ್ಚೆತ್ತುಕೋ..... ಮನುಷ್ಯ ಸ್ವಭಾವ ಸದಭಿರುಚಿ ಸಂಸ್ಕಾರವಂತ ಆಗಿದ್ದು ನಿಜಕಾಳಜಿ ಮಾನವತೆಯಿದ್ದರೆ ಅವನಿಗೆ ಅಂಜಿಕೆಯಿರುತ್ತೆ..ಒಳಗೊಂದು ಹೊರಗೊಂದು ಇರದವರು ನಂಬಿಕಾರ್ಹರು. ವಿವೇಚನೆಯಿಂದ ಮತ ಯಾಚಿಸುವವರ ಮತ್ತು ಮತಕ್ಕಾಗಿ ಅಂಗಲಾಚುವವರ ನಡುವಿನ ಅಂತರ ತಿಳಿದುಕೋ.....ಯಾಕೆ ಗೊತ್ತೆ.?? ಹಾಗೊಮ್ಮೆ ನಿನ್ನ ಚುನಾಯಿತ ದೂರ್ಥನಾಗಿದ್ದು ಗೆದ್ದರೆ...ನಿನ್ನ ಮೇಲೆ ಸವಾರಿ ಮಾಡ್ತಾನೆ...ಅದೇ ನಿನ್ನ ಆಯ್ಕೆ ಅರ್ಹ ಅಭ್ಯರ್ಥಿ ಗೆಲುವಿಗೆ ಕಾರಣವಾದರೆ ನಿನ್ನ ಅಭಿಲಾಶೆಗಳ ಸವಾರಿ ನೀನು ಮಾಡಬಹುದು.

Thursday, July 23, 2009

ಬ್ಲಾಗಾಯಣ

ಈ- ಮೈಲು, ವೆಬ್ಬು, ಗಬ್ಬು..ಅಂತೆಲ್ಲಾ ಅನ್ನೋರಿಗೆ..ಬ್ಲಾಗು ಅನ್ನೋ ಇನ್ನೊಂದು ವ್ಯವಸ್ಥೆ ಇದೆ ಅನ್ಸಿದ್ದು..ಅಥ್ವಾ ನೋಡಿದ್ದು..ಆ ನಂತರ ಅದರ ದಾಸರಾಗಿದ್ದು ..ಈಗ ಚರಿತ್ರೆ ಆಗ್ತಾ ಇದೆ.
ಪಿ.ಬಿ.ಎಸ್ ರಿಗೆ ಈಗ ಹಳೇ ಹಾಡು ಹಾಡೋಕೆ ಹೇಳಿದ್ರೆ...
"ಬ್ಲಾಗೊಂದ ತೋರ್ಸುವೇ
ಪುಟಾಣಿ ಮಕ್ಕಳೇ..ಬ್ಲಾಗಿದ್ದು ತನಗೆ
ಬ್ಲಾಗಾಗದ್ದು ಪರರಿಗೆ" ಅಂತಿದ್ರೋ..ಏನೋ..!!
ಬ್ಲಾಗಿದ್ದಿದ್ರೆ..ಸೀತೆ ಸ್ವಯಂವರದ ಅನೌನ್ಸ್ ಮೆಂಟು ಪ್ರೆಸಿಡೆಂಟ್ ಜನಕ್ಸ್ ಬ್ಲಾಗಿಸ್ತಿದ್ದ್ರೋ ಏನೋ..??
ಬ್ಲಾಗುಗಳ ಇಂಟರಾಕ್ಷನ್ ಫಾಲೋಗಳ ಮೂಲಕ ದುರ್ಯೋಧನ್ಸ್ ಪಾಂಡವ್ಸ್ ನ ಫ್ಯಾಂನ್ಸಿಡ್ರೆಸ್ನಲ್ಲೇ ಪರ್ಮನೆಂಟಾಗಿ ಇರೋ ಹಂಗೆ ಮಾಡ್ತಿದ್ದನೋ ಏನೋ..?
ಬ್ಲಾಗು ಅನ್ನೋದು..ಈಗ್ಗೂ ನನ್ ತಲೇಗೆ ಸರಿಯಾಗಿ ಹೋಗಿಲ್ಲ, ಯಾರ್ಯಾರೋ ಬ್ಲಾಗ್ ಮಾಡ್ತಾರೆ ಅಂತ ನಾನೂ ಬ್ಲಾಗನ್ನ ಕೂಡಿ, ಕಳೆದು, ಗುಣಿಸಿ ಈಗ ಬ್ಲಾಗಿಸ್ತಿದ್ದೀನಿ.
ಅಜ್ಜಿ ಮಕ್ಕಳಿಗೆ ಕಥೆ ಹೇಳೋವಾಗ..."ಒಂದಾನೊಂದು ಬ್ಲಾಗ್ ರಾಜ್ಯದಲ್ಲಿ ಒಬ್ಬ ಬ್ಲಾಗ್ ರಾಜ, ಇಬ್ಬರು ಬ್ಲಾಗ್ ರಾಣಿಯರಿದ್ದರು. ಅವರಿಗೆ ..." ಅಂತೆಲ್ಲಾ ಹೇಳೋ ಕಾಲ ದೂರಾ ಏನಿಲ್ಲ.
ನಮ್ಮ ಹಳ್ಳಿ ಗಮಾರ ದೋಸ್ತು (ಪಿ.ಯು.ಸಿ ಲೇ ಸುಸ್ತಾಗಿದ್ದಾನೆ) ಮೊನ್ನೆ ವರೆಗೂ ಕಂಪ್ಯೂಟರು, ಇ-ಮೈಲ್ ಏನೂ ಗೊತ್ತಿಲ್ಲದೇ ಇದ್ದವನು...ಮೊನ್ನೆ ಬ್ಲಾಗಿನ ಬಗ್ಗೆ ಏನು ಹೇಳ್ದ ಗೊತ್ತೇ..?
“ಈವಾಗ ಈ ಬ್ಲಾಗು ಎಷ್ಟೊಂದು ಪಾಪುಲರ್ ಆಗ್ತಾ ಐತೆ ಅಂದ್ರೆ...ರಾಜಕಾರಣಿಗಳು..ತಮ್ಮ ಚುನಾವಣಾ ಪ್ರಚಾರಾನ ಬ್ಲಾಗಿಸೋಕೆ ಶುರು ಹಚ್ಚೌವ್ರೆ, ನಮ್ಮ ಚುನಾವಣಾಧಿಕಾರಿ ತಾನೂ ಏನ್ ಕಡಿಮೆ ಇಲ್ಲ ಅನ್ನೋ ಹಂಗೆ ರಾಜ್ಕಾರ್ಣಿಗಳ
ಬ್ಲಾಗನ್ನ ಬ್ಯಾನ್ ಮಾಡಿ ತಿಳಿಸೋಕೆ ಅಂತ್ಲೇ ಇನ್ನೊಂದು ಬ್ಲಾಗು ಸುರು ಹಚ್ಚೇಬಿಟ್ಟವ್ರೆ”.
ನಮ್ಮ ಪೂರ್ವ ರಾಷ್ಟ್ರಪತಿಗಳು (ಕಲಾಂ ಸಾಹೇಬ್ರು) ಬ್ಲಾಗ್ ಮಾಡಿಯೇ ಸ್ಕೂಲ್ ಮಕ್ಕಳಲ್ಲಿ ದೇಶಾಭಿಮಾನ, ದೇಶದ ಬಗ್ಗೆ ಸಾಮಾನ್ಯ ಅರಿವಳಿಕೆ (general awareness) ತರೋದಕ್ಕೆ ಪ್ರಯತ್ನಿಸಿದ್ದು ಎಲ್ಲಾ ತಿಳಿದಿರೋದೇ..
ಅಮಿತಾಬ್ ಬಚ್ಚನ್ ತನ್ನ ಬ್ಲಾಗ್ ಮೂಲಕ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾದದ್ದು ನೋಡಿದ್ರೆ ಬೆಳೀತಿರೋ ಬ್ಲಾಗಾಭಿಮಾನ, ಬ್ಲಾಗಪಾರಂಗತಿ, ಇತ್ಯಾದಿ ಬಗ್ಗೆ ಯೋಚಿಸ್ಬೇಕಾಗುತ್ತೆ.
ಕೆಲಸದ application ನಲ್ಲಿ ಈಗ ಇ-ಮೈಲ್ ಅಡ್ರೆಸ್ ಜೊತೆಗೆ ಬ್ಲಾಗ್ ಅಡ್ರೆಸ್ ಸಹಾ ಕೇಳುವ ಸಮಯಾನೂ ಬಂದಿದೆ. Interview ನಲ್ಲಿ can you show your blog posting items on your laptop...?? ಅಂತ ಕೇಳ್ಬಾರ್ದಲ್ಲವೇ..?? ಅದಕ್ಕೇ..ಈವರೆಗೂ ಯಾವುದೇ ಬ್ಲಾಗ್ open ಮಾಡ್ದೇ ಇದ್ರೆ ತಕ್ಷಣ ಮಾಡೀ ಈ ಕೆಲಸ...ಅದ್ರಲ್ಲೂ ನೌಕರಿ ಹುಡುಕೋ ಭಾವೀ ನೌಕರರು.
ಮತ್ತೆ ಮದ್ವೆ ಹುಡ್ಗೀರನ್ನ ನೋಡೋಕೆ ಹೋಗೋ ಗಂಡುಗಳು ನಿಮ್ಮದು ಅಂತ ಯಾವುದಾದರೂ ಬ್ಲಾಗ್ ಇದೆಯಾ..?? ಅಂತ ಕೇಳಿಬಿಟ್ಟರೆ,,..?? ಅಪ್ಪ ಕೊಡೋ ಕಾರು, ಹತ್ತು ಲಕ್ಷ ರಕಂ ಎಲ್ಲ ಹೋಗಿ ಅಪ್ಪ-ಅಮ್ಮನ ಮರ್ಯಾದೆ ಜಖಂ ಆಗೋದಿಲ್ಲವೇ..??

ಟ್ಯೂಶನ್ ಪರಿಪಾಠ ಬೆಳೆಸಿಕೊಳ್ತಾ ಇರೋ ಟೀಚರ್ಗಳಿಗೆ ಬ್ಲಾಗಿನ ಮೂಲಕ ಸರ್ಕಾರದ, ಆಡಳಿತ ಮಂಡಳಿಯ ಕಣ್ಣಿಗೆ ಮಣ್ಣೆರೆಚೋದು ಸುಲಭ ಆಗ್ತಾ ಇದೆ. ಜೋಡಿಗಳು ಮೈಲ್ ಗಳ ಮೂಲಕ ಪರಸ್ಪರ ವಿಷಯ ವಿನಿಮಯ ಮಾಡ್ಕೋತಾ ಇದ್ದದ್ದು ಹೋಗಿ ಈವಾಗ...ಬ್ಲಾಗುಗಳನ್ನ ಸೃಷ್ಠಿಸಿಕೊಂಡು ತಮ್ಮ ಕೆಲಸಾನ ಇನ್ನೂ ಪರಿಣಾಮಕಾರಿ ಮಾಡ್ಕೋತಾ ಇದ್ದಾರೆ. ಹಾಂ..ಹಾಂ..ಖಾಸಗಿ ವಿಷಯಕ್ಕೆ.. ಇ-ಮೈಲ್ ಇದ್ದದ್ದೇ..?? ಬ್ಲಾಗು ಪಬ್ಲಿಕ್ ಅಲ್ವೇ...!!!!

ಸಾಹಿತ್ಯ ಕ್ಷೇತ್ರದಲ್ಲಿ ಬ್ಲಾಗಾಯಣದ ಪರಿಣಾಮ ಬಹಳವಾಗಿಯೇ ಆಗಿದೆ ಎಂದರೆ ತಪ್ಪಿಲ್ಲ. ಕವಿಗಳು ತಮ್ಮ ಕವನಗಳನ್ನ, ಲೇಖನಗಳನ್ನ ಬ್ಲಾಗಿನ ಮೂಲಕ ಪರಿಚಯಿಸುತ್ತಿದ್ದಾರೆ. ಕನ್ನಡದವರು ತಮ್ಮ ಇ-ಸಿರಿವಂತಿಕೆಯನ್ನು ಇಲ್ಲೂ ಮೆರೆದಿದ್ದಾರೆ...ಯುವಕವಿ ಬ್ಲಾಗ್ ಸ್ಪಾಟ್ ಡಾಟ್ ಕಾಂ, ಚುಟುಕು ಬ್ಲಾಗ್ ಸ್ಪಾಟ್ ಡಾಟ್ ಕಾಂ, ವ್ಯಂಗ್ಯ ಬ್ಲಾಗ್ ಸ್ಪಾಟ್ ಡಾಟ್ ಕಾಂ, ಹೀಗೆ..ಹಲವಾರು..ಬ್ಲಾಗುಗಳು....
ಇದು ಒಂದು ಹಿತಕರ ಬೆಳವಣಿಗೆಯೇ ಸರಿ. ಇದೇ ತರಹ ವಿಷಯ ವಿನಿಮಯಕ್ಕೂ ತಮ್ಮಲ್ಲಿನ ಶೇಖರಿತ ಮಾಹಿತಿಗಳನ್ನು ವಿನಿಮಯಿಸಿಕೊಳ್ಳಲು ಬ್ಲಾಗ್ ಬಹಳ ಸಹಕಾರಿಯಾಗುತ್ತಿದೆ.
ಬ್ಲಾಗೆಂಬ ಮಹತ್ವಪೂರ್ಣ ಮಾಧ್ಯಮವನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಮತ್ತು ಅರೋಗ್ಯಕರ ಸಮಾಜದ ಬೆಳವಣಿಗೆಗೆ ಪ್ರಯೋಗಿಸಬೇಕು.

Saturday, July 18, 2009

ಕೆಲವು ಚುಟುಕಗಳು

ಕನಸು
ಕಣ್ಣು
ಮುಚ್ಚಿದಾಗ
ಕಾಣುವುದು

ಹೆಂಡತಿ
ತಾಳಿಕಟ್ಟಿದವಗೆ
ತಾಯಿ
ಇಳಿವಯಸ್ಸಿನಲ್ಲಿ

ಕವಿ
ಕಂಡರೂ
ಕಾಣದ್ದನ್ನು
ವಿವರಿಸಿದವ

ಕಣ್ಣೀರು
ನೋವಿಗೂ
ನಲಿವಿಗೂ
ಒಂದೇ ಉತ್ತರ

ತುಂಟಾಟ
ವಯಸ್ಸರಿಯದೇ
ಎಲ್ಲರೂ ಆಡುವ
ಆಟ

ರಾಜಕಾರಣಿ
ರೊಟ್ಟಿ ಜಗಳದಲ್ಲಿ
ಬೆಕ್ಕುಗಳಿಗೆ
ರೊಟ್ಟಿ ಹಂಚಿದವ

ಈಗಿನ ಮಕ್ಕಳು
ಬಾಲ್ಯದಲಿ- ಬೇಡಿ ಕಾಡುವರು
ಯವ್ವನದಲಿ - ಕಾಡಿ ಬೇಡುವರು
ಮದುವೆ ಮಕ್ಕಳಾದರೆ - ಕಾಡಿ ಕಾಡುವರು
ವೃದ್ಧಾಶ್ರಮಕೆ ಓಡಿಸುವರು

ಲಂಚ
ಕೊಂಚ
ಇನ್ನೂ ಕೊಂಚ
ಎಂದು ತಿಂದ
LUNCHಉ

Wednesday, July 15, 2009

ಗೊತ್ತಿಲ್ಲ ಮಗು

ಅಪ್ಪಾ..
ಏನು ಮಗು..?
ನಾನು.. ರಾಮು.. ಗೆಳೆಯರಾದ್ರೆ
ಏನಪ್ಪ ತಪ್ಪು...??
ಯಾರು ಹೇಳಿದ್ರು ತಪ್ಪು ಅಂತ..?
ಗೆ.. ಎಳೆಯರಾದ್ರೆ ತಪ್ಪಿಲ್ಲ
ಗೆ.. ಬೆಳೆದಮೇಲೆ ಸರಿಯಲ್ಲ..??
ಅದೇ ಗೇ...ಒಳ್ಳೆಯದಲ್ಲ
ನಮ್ಮ ಸಂಸ್ಕೃತಿ ಕಲಿಸಿದ್ದಲ್ಲ ಅಂತಾರಲ್ಲ?
ನಂಗೊತ್ತಿಲ್ಲ ಮಗು...


ಅಪ್ಪಾ...
ಹೇಳು ಮಗು
ಕೋಟಿ ಕೋಟಿ ಅಂತ ಅಕ್ರಮ ಆಸ್ತಿ
ಲೋಕಾಯುಕ್ತರು ಹಿಡೀತಿದಾರಲ್ಲ..?
ಇದೆಲ್ಲಾ ಲಂಚದ ಹಣಾ..ಆಸ್ತೀನೇ..??
ಹೌದಪ್ಪ ಅದಕ್ಕೇ ಅವರನ್ನ ಹಿಡಿಯೋದು..
ಮತ್ತೆ ಅವರಿಗೆ ಶಿಕ್ಷೆ ನಮಗೆ ಕೊಡೋಕೆ ಆಗೊಲ್ಲ
ಅಂತಾರಲ್ಲಾ ..ಮತ್ತೆ ಯಾರು..ಸರ್ಕಾರ ಕೊಡುತ್ತಾ..??

ಹೌದು ಮಗು ಸರ್ಕಾರಾನೇ ಕೊಡ್ಬೇಕು..
ಮತ್ತೇ..ಅಕ್ರಮ ಸಕ್ರಮ ಮಾಡ್ತೀವಿ ಅಂತಾರಲ್ಲ ಮಂತ್ರಿಗಳು...??
ನಂಗೊತ್ತಿಲ್ಲ ಮಗು.

Friday, July 10, 2009

ಭೇತಾಳನೊಂದಿಗೆ....ಸ್ಪಷ್ಠನೆ...(ಪೂರಕ)

ನನಗೆ ಖುಷಿ ತಂದ ಪ್ರತಿಕ್ರಿಯೆ ಎಸ್ಸೆಸ್ಕೇಯವರದು
.....ನಾನು ಬರೆದುದು ಬಹುಷಃ ಸ್ಪಷ್ಠವಾಗಿಲ್ಲ ಎನ್ನುವುದು ಇದರಿಂದ ಅರ್ಥವಾಯಿತು...ಅದಕ್ಕಾಗಿ ಈ ಪೂರಕ ಬ್ಲಾಗ್ ಪೋಸ್ಟ್ ಮಾಡುತ್ತಿದ್ದೇನೆ

ಭೇತಾಳ ಒಂದು ಮನೋಧರ್ಮದ ಸಂಕೇತವಾಗಿ..ಇಲ್ಲಿ ಪ್ರಯೋಗವಾಗಿದೆ...ಇದು ಒಂದು ನಕಾರಾತ್ಮಕ ಮನೋಧರ್ಮ, ವಿನಾಶಕಾರೀ ಮನೋಧರ್ಮ ಎನ್ನಬಹುದು. ಅಂದರೆ ಅದಕ್ಕೆ ಯಾವುದೇ ಗೊತ್ತಾದ ಪಂಗಡ, ಜಾತಿ, ಧರ್ಮ, ದೇಶ ಇತ್ಯಾದಿಗಳ ಬೇಧ ಭಾವವಿರುವುದಿಲ್ಲ, ಈ ಭೇತಾಳವನ್ನು ನಿಗ್ರಹಿಸುವುದು ವ್ಯಕ್ತಿಗೆ ಎಷ್ಟು ಅಗತ್ಯವೋ ಅಷ್ಟೇ ಅನಿವಾರ್ಯ ಜನಾಂಗಕ್ಕೆ, ಪಂಗಡಕ್ಕೆ, ಜಾತಿಗೆ, ಧರ್ಮಕ್ಕೆ, ನಾಡಿಗೆ, ದೇಶಕ್ಕೆ...ಇದೆಲ್ಲ ಮಾನವ ಧರ್ಮದ ಉಳಿವಿಗೆ...
ಈ ರೀತಿಯ ವಿಶ್ಲೇಷಣಾ ಪ್ರತಿಕ್ರಿಯೆಗಳು ನಮ್ಮ ಬ್ಲಾಗನ್ನು ಮತ್ತು ನಮ್ಮ ಪ್ರಸ್ತಾವನಾ ಶೈಲಿಯನ್ನೂ ಸುಧಾರಣೆ ಮಾಡುತ್ತೆ...,
ಧನ್ಯವಾದಗಳು ಎಸ್ಸೆಸ್ಕೇ...

ಭೇತಾಳನೊಂದಿಗೆ ಒಂದು ಸಂಭಾಷಣೆ



ಶತವಿಕ್ರಮ- ಭೇತಾಳರ ನನ್ನ ಅಸಂಬದ್ಧ ಪ್ರಲಾಪಗಳನ್ನು...ಸದ್ಯಕ್ಕೆ ನಿಲ್ಲಿಸುವ ಯೋಜನೆಯಂತೂ ಇಲ್ಲ, ಹಾಂ...!!! ಬೋರ್..ಆದ್ರೂ..ನನ್ನ ಸಹವಾಸ ಮಾಡಿದ್ದಕ್ಕೆ ಸಹಿಸ್ಕೋಬೇಕು ನೀವು...ಯಾಕೆ..?? ಸಹಿಸ್ಕೊಂಡು..ನಿಮ್ಮ ಕವನಗಳು, ಕಥೆಗಳು, ವ್ಯಥೆಗಳಿಗೆ ಬ್ಲಾಗುಗಳಿಗೆ ಸ್ಪಂದಿಸೊಲ್ಲವೇ..?? ನಾನೂ..????!!!
ತಲಹಟೆ ಸಾಕು....ಮುಂದಕ್ಕೆ ಬರಿ ಅಂತೀರಾ..?? ಏನು?...ಏನೋ ಬಹಳ ಬರಿಯೋನ ತರಹ ಬೊಗಳೆ ಬಿಟ್ಕೋತೀಯಲ್ಲಾ..?? ವಿಕ್ರಮನ ಸಂತತಿ ಶತ ಆದ್ರೂ...ಭೇತಾಳ ಹ್ಯಾಗೇ..ಬರೀ ಭೇತಾಳ, ಶತಭೇತಾಳ, ಸಹಸ್ರ ಭೇತಾಳ, ಇತ್ಯಾದಿ ಯಾಕಲ್ಲ..?? .. ಅಂತಿದ್ದೀರಾ..?? ..ರೀ ಸ್ವಾಮಿ...ಬೊಗಳೆ ಈವಾಗ ನಿಮ್ಮದೋ...ನನ್ನದೋ..ಹೇಳಿ..???
ಅಲ್ರೀ...ಪಾಪಿ ಚಿರಾಯು ...ಅಂತ ಪುರಾಣಗಳ ಕಾಲದಿಂದಲೇ ಹೇಳಿದ್ದಾರಲ್ಲವೇ...??!! ಓಕೆ..ಓಕೆ... ಕಾಲೆಳೆಯೋದು ಸಾಕು ಅಂದ್ರಾ..??? ಸರಿ ವಿಷಯಕ್ಕೆ ಬರೋಣ...

ನಮ್ಮ ಶತ ವಿಕ್ರಮ ಮುಳ್ಳಿನಜಾಲಿ ಮರಕ್ಕೆ..ಮುಳ್ಳು ಚುಚ್ಚುತಾಯಿದ್ರೂ ಚುಚ್ಚಿಸ್ಕೊಂಡೇ ನೇತಾಡ್ತ ಜೋತು ಬಿದ್ದಿದ್ದ ಭೇತಾಳನ್ನ ಇಳಿಸಿ ಹೆಗಲಿಗೇರಿಸಿ ಶವದವ್ಯಾನಿನ ಕಡೆ ಹೊರಟಾಗ..ಐದು ವರ್ಷ ಸಂಸದನಾಗಿ, ವಿಧಾನ ಸಭಾ ಸದಸ್ಯನಾಗಿ..ಸದನದಲ್ಲಿ ತನ್ನ ಕೆಲಸ ಏನೂ ಇಲ್ಲ ಅನ್ನೋ ತರಹ ಗಡದ್ದಾಗಿ ನಿದ್ದೆ ಮಾಡಿ..ಚುನಾವಣೆ ಹತ್ರ ಬಂದಹಾಗೆ...ತಲೆ ಬುಡ ಇಲ್ಲದ ತನಗೇ ತಿಳಿಯದ ವಿಷಯಗಳ ಮೇಲೆ ಪ್ರಶ್ನೆ ಕೇಳೋ ಸದಸ್ಯನಂತೆ...ಸುಮ್ಮನೆ ಹೆಣದಂತಿದ್ದ ಭೇತಾಳ ಮಾತನಾಡತೊಡಗಿದಾಗ...
ಲೋ...ನಿನ್ನ..ಕಥೆ ಕೇಳೀ..ಕೇಳೀ..ತಲೆ ಶೂಲ ಆಗಿ ನನ್ನ ದೇಹಾನೆಲ್ಲ ಚುಚ್ಚುತ್ತೆ...ಅದನ್ನ ಬಿಡು...ನಿನ್ನ ಜೊತೆ..ಸ್ವಲ್ಪ ಲೋಕಾಭಿರಾಮ ಮಾತಾಡ್ತೇನೆ...ಆಯ್ತಾ..?? ಎಂದ ಶತ ವಿಕ್ರಮ ಎಂದಿನಂತೆ ಕಥೆ-ಗಿಥೆ ಎನ್ನುವ ಭೇತಾಳನನ್ನು ತಡಿಯುತ್ತಾ...
ಸರಿ ಹೇಳು ಅದೇನು ಹೇಳೀಯೋ...
ಎಂದಿತು ಭೇತಾಳ
ಅಲ್ಲ..ನಿಮ್ಮ ಭೇತಾಳ ಲೋಕದಲ್ಲಿ...ಮಳೆ ಇಲ್ಲ್ದಿದ್ರೆ ಏನ್ಮಾಡ್ತೀರಿ...??
ತಲೆಇಲ್ದೇ ಹರಟ್ತಿರೋನು..ನೀನು ಈಗ..!!. ಅಲ್ಲ, ಶತವಿಕ್ರಮ...ಮಳೆಇಲ್ದಿದ್ರೆ..ನೀವು..ಮಾನವರು ತಲೆಕೆಡಿಸಿಕೊಳ್ಳೋದು...ನಮ್ಗೆ ಯಾಕೆ ಬೇಕು...ಮಳೆ? ಸತ್ತ ಮನುಜ, ಪ್ರಾಣಿಗಳನ್ನು ತಿನ್ನುತ್ತಾ...ರಕ್ತ ಕುಡಿಯೋ ನಮ್ಮ ಜನಕ್ಕೆ ನಿಮ್ಮಂಥ ತಾಪತ್ರಯ ಇಲ್ಲ. ನಿಮ್ಮ ಒಂದು ಜನಾಂಗದವರ ಮೇಲೆ ಮತ್ತೊಂದು ಜನಾಂಗದವರನ್ನ ಎತ್ತಿ ಕಟ್ತೀವಿ...ಒಬ್ಬರೊನ್ನಬ್ಬರು ಹೊಡ್ದು ಸಾಯ್ಸೋ ಹಾಗೆ ಮಾಡ್ತೀವಿ...ಮಕ್ಕಳು ಮರಿ ಅಂತ ಭೇದ ಇಲ್ಲ ನಮಗೆ...ಒಟ್ಟಿನಲ್ಲಿ ಮಾನವ ನಾಶ ಆಗ್ಬೇಕು...ಮಾನವೀಯತೆ ನಾಶ ಆಗ್ಬೇಕು...
ಮತ್ತೆ...ನಿಮಗೆ ನಮ್ಮ ಹಾಗೆ ನಿಮಗೆ ಸಾವು..ಅಥವಾ ಆ ತರಹ ಏನೂ ಇರಲ್ವಾ...?
ನೋಡಿದ್ಯಾ ಮತ್ತೆ..??!! ನಿಮ್ಮ ಪೂರ್ವಜರ ಬುದ್ಧಿವಂತಿಕೆಯಲ್ಲಿ...ಹತ್ತನೇ ಒಂದು ಪಾಲೂ ನಿನ್ನಲ್ಲಿಲ್ಲ ನೋಡು...ಅದ್ಕೇ ಅಲ್ವೇ ನಮ್ಮಂಥ ಭೇತಾಳಗಳು ನಿಮ್ಮಲ್ಲೇ ಇದ್ದು ನಿಮ್ಮ-ನಿಮ್ಮಲ್ಲೇ ಜಗಳ ತಂದಿಟ್ಟು ನಿಮ್ಮ ಸಂತತೀನೇ ನಾಶ ಮಾಡ್ತಿದ್ದರೂ ಅರ್ಥ ಆಗ್ತಾ ಇಲ್ಲ ನಿಮಗೆ.....ಹೂಂ...ಸರಿ ಬಿಡು..., ನಮಗೆ ಸಾವು ಇಲ್ಲ...!!! ನಿಮ್ಮ ಸಾವು ನಮಗೆ ಇನ್ನಷ್ಟು ಆಯಸ್ಸನ್ನ ಕೊಡುತ್ತೆ...ನಾವೆಲ್ಲಿರ್ತೇವೆ ಅಂತ ನಿಮಗೆ ತಿಳಿಯೊಲ್ಲ...ಆ ತರಹ ತಿಳ್ಕೋಂಡೋರಿದ್ರೆ...ಅವರ ಬಗ್ಗೆ ನಿಮ್ಮಲ್ಲಿ ಅನುಮಾನಗಳು ಬರೋಹಾಗೇ ನಿಮ್ಮ ಬುದ್ಧಿಯನ್ನ ಆವರಿಸ್ಕೋತೀವಿ...ಹೀಗೆ..ನಮಗೆ ಸಾವು ಅನ್ನೋದೇ ಇರೋಲ್ಲ... ಇನ್ನು ಒಂದು ಜನಾಂಗ ಬುದ್ಧಿವಂತರಾಗಿದ್ರೆ ಅವ್ರಲ್ಲೇ ಕೆಲವರ ತಲೆ ಕೆಡೋ ಹಾಗೆ ಮಾಡಿ ಇನ್ನೊಂದು ಜನಾಂಗದ ವಿರುದ್ಧ ಎತ್ತಿ ಕಟ್ತೀವಿ...ಆ ಜನಾಂಗಲ್ಲೇ ಕ್ಯಾನ್ಸರ್ ಉದ್ಭವ ಮಾಡ್ತೀವಿ...ಮೊದಲೇ ಎಚ್ಚೆತ್ಕೊಂಡ್ರೆ ಸರಿ...ಇಲ್ಲ ಅಂದ್ರೆ ಅದನ್ನ ಇನ್ನೂ ಹರಡ್ತೀವಿ...ಇಡೀ ಜನಾಂಗ ಮಾನವ ಕುಲದ ಶತೃ ಅನ್ನೋ ತರಹ ಎಲ್ಲವನ್ನ ಬದಲಾಯಿಸ್ತೀವಿ... ಹಾಗೂ ಒಂದ್ವೇಳೆ ಎರಡೂ ಜನಾಂಗ ಚೇತರ್ಸಿಕೊಂಡ್ರೆ ಮೂರನೇದಕ್ಕೆ ಹೋಗ್ತೀವಿ...ನಮಗೆ ಸೀಮೆಗಳು.,,ಎಲ್ಲೆಗಳು, ಮೇರೆಗಳು ಇರೊಲ್ಲ..
ಎಲ್ಲ ಜನಾಂಗಗಳೂ ಸರಿಯಾದರೆ...ಆ ದೇಶ ಬಿಟ್ಟು ಇನ್ನೊಂದಕ್ಕೆ ಹೋಗಿ ಅದನ್ನ ಚನ್ನಾಗಿರೋ ದೇಶದ ವಿರುದ್ಧ ಮಸಲತ್ತು ಮಾಡೋ ಹಾಗೆ ಮಾಡ್ತೀವಿ...ಒಂದು ಕಾಲದಲ್ಲಿ...ಶಕ್ತಿ ಆಗಿದ್ದ ರಷ್ಯಾ ಈಗೇನಾಗಿದೆ..?? ತಾನೇ ಅಂತ ಬೀಗ್ತಾ ಇದ್ದ ಸದ್ದಾಮ್ ಕಥೆ ಏನಾಯ್ತು?? ಎತ್ತರಕ್ಕೆ..ಇನ್ನೂ ಎತ್ತರಕ್ಕೆ ಅಂತಾ ಇದ್ದ ಅಮೇರಿಕ್ಕನ್ನರ ಗರ್ವ ಮುರಿಯೋಕೆ ಉನ್ನತ ಕಟ್ಟಡಗಳೆರಡನ್ನೂ ಕ್ಷಣಮಾತ್ರದಲ್ಲಿ ಧ್ವಂಸಮಾಡಲಿಲ್ವೇ..??? ಹಹಹ....
ತುಂಬಾ ವಿಕಾರವಾಗಿ ನಕ್ಕಿತು..ಭೇತಾಳ
ಏ..ನಿಲ್ಸೋ..ನಿನ್ನ ಸ್ವಯಂ ಶಂಖ....ಏನಾಯ್ತು..ಕಟ್ಟಡ ಉರುಳ್ಸಿದ್ರಿ...ಆದ್ರೆ ನೀವು ನಾಶ ಆದ್ರಾ...ನಿಮ್ಮ ಕುಲದವರನ್ನ ಪ್ರಪಂಚ ಗುರ್ತಿಸ್ತಾ..???
ನಿನ್ನ ತಲೆ...ಅದೇ..ತಪ್ಪು ನಿನ್ನದು...ನಾವೆಲ್ಲಿ ನಾಶ ಆದ್ವಿ..ನಿಮ್ಮ ಮನುಷ್ಯಾನೇ ನಾಶ ಆಗಿದ್ದು...ನಾವು ನಮ್ಮ ಕೆಲಸ ಮುಗಿದ ತಕ್ಷಣ..ಆ ದೇಹ ಬಿಟ್ವಿ ಇನ್ನೊಂದಕ್ಕೆ ಸೇರ್ಕೊಂಡ್ವಿ...ಪ್ರಭಾಕರ, ವೀರಪ್ಪನ್, ಕಸಬ್ ಸ್ನೇಹಿತರು..ಎಲ್ಲ ಸತ್ತರು...ಆದ್ರೆ ನಾವು...!!! ಪೆದ್ದ...ಬದ್ಕೇ ಇದ್ದೀವಿ...ನಿಮ್ಮ ಮಧ್ಯದಲ್ಲೇ ಇದ್ದೀವಿ....ಹಹಹ...ಹಹಹ...ಹಿ..ಹಿ..ಹಿ..
ಎನ್ನುತ್ತಾ,,,ಕರ್ಕಷವಾಗಿ ಕೂಗುತ್ತಾ ...ಇನ್ನು ಇವನ ಮಾತು ಕೇಳಿದ್ರೆ..ನಮ್ಮ ಬುಡಕ್ಕೇ ತರ್ತಾನೆ ನೀರು...ಅದರಲ್ಲೂ ಈ ವಿಕ್ರಮ ವಂಶದಿಂದ ಸ್ವಲ್ಪ ದೂರಾನೇ ಇರ್ಬೇಕು...ಎಂದುಕೊಳ್ಳುತ್ತಾ ...ಶತವಿಕ್ರಮನ ಭುಜಬಿಟ್ಟು...ಹಾರಿ...ಜಾಲಿಮರದಕಡೆಗೆ ಹೊರಟಿತು.
ಈ ಭೇತಾಳಕ್ಕೆ ಇದರ ವಂಶಕ್ಕೆ ಒಂದು ಗತಿ ಕಾಣಿಸ್ಲೇ ಬೇಕು..ಇಲ್ಲ ಅಂದ್ರೆ ನಮ್ಮ ಮನುವಂಶಕ್ಕೆ ಉಳಿಗಾಲ ಇಲ್ಲ ..ಎಂದುಕೊಂಡ ಶತ ವಿಕ್ರಮ ಮತ್ತೆ ಜಾಲಿ ಮರದೆಡೆಗೆ ಹೆಜ್ಜೆ ಹಾಕಿದ.

Tuesday, July 7, 2009

ನನ್ನವರು


(ವೆಬ್ ಚಿತ್ರ)
ನನ್ನ ಕಣ್ಣಲ್ಲಿ ಉಕ್ಕಿರಲಿಲ್ಲ
ಇನ್ನೂ ನೀರು...
ಕಕ್ಕುಲತೆಯಿಂದ ಅಮ್ಮನೆಂದಳು
ಯಾಕೆ ಕಂದ..? ಏನುಬಿತ್ತು
ಕಣ್ಣಿಗೆ ಕಣ ಚೂರು..??
ತನ್ನ ಸೆರಗನ್ನು ಬಾಯಿಗಿಟ್ಟು
ಕಾವುಕೊಟ್ಟು ನನ್ನ ಕಣ್ಣಿಗೆ
ಒತ್ತಿ ಹಿತವಾಗಿ ಸವರಿದಳು
ಕಣ್ಣಗಲಿಸಿ ಊದಿದಳು...!!
ತಣ್ಣೀರಲಿ ತೊಳೆಯಲೇ ಎಂದೆಲ್ಲಾ
ಹುಲುಬಿದಳು..ತನ್ನ ಕಣ್ಣಿಗೇ
ಎನೋ ಬಿದ್ದಂತೆ
ನನ್ನ ಕಣ್ಣು
ತೇವವಾಗುವುದಕ್ಕೆ ಮೊದಲೇ
ಹನಿಗೂಡಿತ್ತು ಅವಳ ಕಣ್ಣು.
ಅವಳು ಮಮತೆಯ ಮಾತೆ.
ಅಪ್ಪ
ಕಂಡ ಇದನೆಲ್ಲ...
ಏನು ಮಾಡ್ಕೊಂಡ್ಯೋ..?
ಗಮನ ಇಟ್ಟು ಕೆಲ್ಸಮಾಡು
ಎಷ್ಟು ಸರ್ತಿ ಹೇಳಿಲ್ಲ ನಿನಗೆ??
ಸ್ವಲ್ಪ ನೀರು ಚಿಮುಕಿಸಿ
ಕನ್ನಡಿ ಒರೆಸೋದು ಬಿಟ್ಟು
ಊದಿದರೆ ಕಣ ಚೂರು
ಬರದೇ ಇರುತ್ಯೇ ಕಣ್ಣೀರು..?
ಏನು, ಹೇಗೆ ಯಾವಾಗ
ಮಾಡಬೇಕೆಂದು ಬದುಕ
ಕಲಿಸುವನೀತ
ನನ್ನ ಜನ್ಮದಾತ.
ಅಣ್ಣನೆಂದ
ಆತ್ರ ಇವನಿಗೆ, ನಾನೆಲ್ಲಿ
ಮೊದಲು ಕನ್ನಡಿ ತಗೋತೀನೋಂತ
ಯಾವುದನ್ನೂ ಸರಿಯಾಗಿ
ಮಾಡೊಲ್ಲಾಂತಾನೆ..
ಕೊಡು ನಾನು ಒರೆಸ್ಕೊಡ್ತೀನಿ
ಬಯ್ದು ಕಾಳಜಿ-ಪ್ರೀತಿ ತೋರಿಸಿದ್ದ
ನನ್ನ ಅಗ್ರಜ.
ಯಾಕೋ ಅಣ್ಣ
ನನ್ಗೆ ಹೇಳಿದ್ರೆ ಒರೆಸ್ಕೊಡ್ತಿರ್ಲಿಲ್ಲವೇ?
ಅಮ್ಮ ಬಿಡಮ್ಮ, ನಾನ್ನೋಡ್ತೀನಿ
ಅಣ್ಣನ ಕಣ್ಣಿಗೆ ನೀರ್ ಹಾಕ್ತೀನಿ..
ಅಂತಾಳೆ ಪ್ರೀತಿಯ ತಂಗಿ
ಮನೆಯಲ್ಲಿ ಎಲ್ಲರೂ ಪ್ರೀತಿಸುವವರೇ
ಆದರೆ ಒಬ್ಬೊಬ್ಬರದೂ
ಒಂದೊಂದು ತೆರನಾದ ಭಂಗಿ

Friday, July 3, 2009

ಕನಸಲ್ಲೇ ಇರಲು ಬಿಡಿ



ಅನ್ನಕೆ ಬೇಕಾದ ಮಾಡೋದಕೆ ನಾವು
ಚಿನ್ನ ತೆಗೆಯೋದಕ್ಕೆ ನಾವು
ಕನ್ನ ಕೊರ್ದು ಬಾಚ್ಕೊಂಡು
ದರ್ಬಾರು ಮಾಡೋಕೆ ನೀವು

ಅಕ್ಷರ ಕಲಿಸೋರು ನಾವು
ಮತ್ಸರ ಉಡುಗಿಸೋರು ನಾವು
ನಮ್ಮ ಶತೃಗಳ ಜೊತೆ ವ್ಯವಹಾರ
ಮಾಡಿ ಮಜಾ ಮಾಡೋಕೆ ನೀವು

ಕರೆಂಟಿಲ್ಲದ ಮನೇಲಿ ನಾವು
ಬಂಜರಲ್ಲಿ ಬೆಳಿಯೋಕೂ ನಾವು
ಓದೋಮಕ್ಕಳಿಗೆ ದೀಪಾನೂ ಕೊಡ್ದೋರು..
ಕತ್ತಲಲ್ಲಿ ಪರ್ದಾಡೋರು ನಾವು
ಸಾವ್ರಾರು ದೀಪಾನ ಹಗಲಲ್ಲೂ
ಮನೇ ತುಂಬ ಉರಿಸೋರು ನೀವು

ನೂರು ಜನ ತಿನ್ನೋದನ್ನ ಚಲ್ಲಾಡಿ
ತಿಂದೂ ತಿನ್ನದಹಾಗೆ ಒಬ್ಬರೇ ತಿಂತೀರ
ಒಬ್ಬರು ಚಲ್ಲಾಡಿ ತಿನ್ನೋದು ಕೊಡಿ
ಹತ್ತು ಬಡವ್ರ ಹೊಟ್ಟೆ ತುಂಬುತ್ತೆ
ಅನ್ನೋದನ್ನ ಯಾಕೆ ಮರೀತೀರಾ?
ಸಾವ್ರ ದೀಪ..ಒಂದೇ ಮನೆ
ಒಂದೊಂದಾದ್ರೂ ದೀಪ ಸಾವ್ರ ಮನೆ
ಬೆಳ್ಗುತ್ತೆ.. ಬೆಳ್ಯುತ್ತೆ ಇಷ್ಟಾದರೂ ಕಲೀತೀರಾ..?

ಇದ್ದೋರು ಇಲ್ದೋರ್ಗೆ ಕೊಡೋದು ಕಲಿತ್ರೆ
ಇದ್ದೋರು-ಇಲ್ದೋರು ಅನ್ನೋ ಭೇದ ಇರುತ್ತಾ?
ಕುರ್ಚೀಲಿ ಕೂತು ದರ್ಬಾರ ಮಾಡೋರು
ಗುಡ್ಲಲ್ಲಿರೋರ ಸುಖ-ದುಃಖ ಅರಿತರೆ
ಹೊಟ್ಟೇಗಿಲ್ದೆ ಸಾಯೋರು, ಬಟ್ಟೇ ಇಲ್ದೇ ಬೇಯೋರು....,
ಓಹ್..ಹೀಂಗೂ ನನ್ ಕನಸು ನನಸಾಗ್ತದಾ,,??
ಹಗಲ್ಗನಸು ಅಲ್ಲ ಇದು ಎದ್ದು ನೋಡು ನನಸು....!!
ಅಂತ ಯಾರಾದರೂ ನನ್ನ ಎಚ್ಚರಿಸೋ ಕಾಲ ಬರುತ್ತಾ???
ಹಾಗೊಂದು ವೇಳೆ ..ಇಲ್ಲ ಅಂದ್ರೆ....
ನನ್ನನ್ನ ನನ್ನ ಕನಸಲ್ಲೇ ವಿಹರಿಸಲು ಬಿಡಿ.