Monday, January 11, 2010

ಕಥೆ ದಾಸರದು...ಕಂಬಳಿ ಯಾರದ್ದೋ??!!




ಬೇಸಿಗೆಯ ಬೇಗೆ ಮತ್ತು ಮೇವಿನ ಕೊರತೆಯಿಂದ ಎಲುಬು ಬಿಟ್ಟುಕೊಂಡು ಸೊರಗುವ ರೈತನ ರಾಸುಗಳಂತೆ ಸೊರಗಿದ್ದರೂ ಚುಚ್ಚುವವುದನು ಬಿಡೆವು ಎನ್ನುವ ರಾಜಕಾರಣಿಯಂತೆ ಮುಳ್ಳುಗಳಿಂದ ಕೂಡಿದ ಜಾಲಿ ಮರದ ಕೊಂಬೆಗೆ ನೇತುಬಿದ್ದಿದ್ದ ಭೇತಾಳನನ್ನು ಹೆಗಲಿಗೇರಿಸಿ, ಪ್ರತಿ ಬಾರಿಯೂ ದಾಳಿ ಮಾಡಿ ಲಂಚಕೋರ ಅಧಿಕಾರಿ ಕುಳಗಳ ಅಕ್ರಮ ಆಸ್ತಿಯ ಪತ್ತೆ ಮಾಡಿ, ಅವರ ಬಣ್ಣ ಬಯಲುಮಾಡಿ, ಸರಕಾರಕ್ಕೆ ಅವರನ್ನು ಶಿಕ್ಷಿಸಲು ಬಿಟ್ಟು, ಮತ್ತೊಂದು ದಾಳಿಗೆ ಅಣಿಯಾಗುವ ಲೋಕಾಯುಕ್ತರಂತೆ ಈ ಬಾರಿಯೂ ಶತವಿಕ್ರಮ ಕ್ರಿಮೆಟೋರಿಯಂ ವಾಹನದ ಕಡೆ ಹೆಜ್ಜೆ ಹಾಕಿದನು.
ಐದು ವರ್ಷ ಸಂಸತ್ತಿನಲ್ಲಿ ನಿದ್ದೆಮಾಡಿ ಚುನಾವಣೆ ಸಮಯದಲ್ಲಿ ಬಾಯಿಗೆ ಬಂದದ್ದೆ ಪ್ರಶ್ನೆ ಎನ್ನುವಂತೆ ಅಧಿವೇಶನದಲ್ಲಿ ಪ್ರಶ್ನೆ ಮಾಡಿ ಗುಲ್ಲೆಬ್ಬಿಸುವ ಸಂಸದನಂತೆ ಈ ವರೆಗೂ ಸುಮ್ಮನಿದ್ದ ಶವದೊಳಗಿನ ಭೇತಾಳ ಮಾತನಾಡತೊಡಗಿತು "ಅಲ್ಲಯ್ಯ ಶತವಿಕ್ರಮ.. ಮುಗಿಯದ ಫಲವನ್ನೀಯದ ಆಶ್ವಾಸನೆಗಳನ್ನೇ ನಂಬಿ ಪ್ರತಿ ಬಾರಿಯೂ ಅದೇ ಸಂಸದನನ್ನು ಆರಿಸಿ ಕಳುಹಿಸುವ ಸಂಸತ್ ಚುನಾವಣಾ ಕ್ಷೇತ್ರದ ಮದಾರನಂತೆ ನಿನ್ನ ಈ ಪ್ರಯತ್ನದ ಹಾದಿಯ ಶ್ರಮ ಅರಿವಾಗದಂತೆ ತುತ್ತೂರಿ ನಗರದ ಹರಿಕಥೆ ಹೇಳುತ್ತೇನೆ ಕೇಳು..." ಎಂದು ತನ್ನ ತುತ್ತೂರಿಯನ್ನು ಊದಲು ಪ್ರಾರಂಬಿಸಿತು.
"ಬಹಳ ಶ್ರಮ ಪಟ್ಟು ಸ್ವಯಂವರದಲ್ಲಿ ಹುಡುಗಿಯನ್ನ ಗೆದ್ದು ಬಂದ್ರೂ ತನಗೇ ಪೂರ್ಣವಾಗಿ ಹೆಂಡತಿಯಾಗದವಳನ್ನು ಪೂರ್ಣ ಪಡೆಯಲು ಪರದಾಡುವ ಪಡ್ಡೆ ಯುವರಾಜನಂತೆ, ನಮ್ಮ ಎಡಬಿಡಂಗಿ ಗೌಡ, ..ಅದೇನಯ್ಯ.. ತುತ್ತುರಿನಗರದ ಮಾಜಿ ಉಪ-ಮೇಯೋ-ರ, ಗುಡದಹಳ್ಳಿ-ಎಂಕಣ್ಣ, ಮೇಯೋ-ರ ವರದನಿಗೆ ಕೊಟ್ಟಿದ್ದ ತನ್ನ ಬೆಂಬಲಾನ ವಾಪಾಸ್ ತಗಂಡ..., ಅವನು ವಾಪಸ ತಗಂಡ ಅನ್ನೋದಕ್ಕಿಂತಾ... ಅ ತರಹದ ವಾತಾವರಣದ ಸೃಷ್ಟಿ ಆಯ್ತು. ಸರಿ, ಚುನಾವಣೇನೂ ಆಯಿತು.., ಗೌಡನ ಕರ್ಜುರದ ಗುರ್ತಿಗೆ ಪೂರ್ಣ ಬಹುಮತ ಸಿಗಲಿಲ್ಲ. ಇನ್ನೊಂದು ಕಡೆ ಪ್ರತಿ ಬಾರಿಯಂತೆ ಈ ಬಾರಿಯೂ ಗೆದ್ದ ..ಸಾರಾಯಿ ಕಂಟ್ರಾಕ್ಟರ್ ದಾರಾಕಡ್ಡಿ (ಅವನು ಮೊದಲು ಮೊಹಲ್ಲ ಮೊಹಲ್ಲ ಸುತ್ತಿ ದಾರ, ಕಡ್ಡಿ ,ಗಾಳಿಪಟ ಮಾರ್ತ ಇದ್ನಂತೆ ಅದಕ್ಕೇ ಅವನ ನಿಜ ಹೆಸರೇ ಯಾರಿಗೂ ಗೊತ್ತಿಲ್ಲ) ಮೊರೆಹೋದ ಎಂಕಣ್ಣ, ಲಕ್ಷಾಂತರ ಪಾಕೆಟ್ ಮಾರಿ ಕೊಟ್ಯಂತರ ಮಾಡಿದ್ದ ದಾರಾಕಡ್ಡಿಗೆ ಐದಾರು ಕರ್ಪೋರೇಟರುಗಳನ್ನ ಕೊಳ್ಳೋದು ಕಷ್ಟ ಆಗಲಿಲ್ಲ. ಸರಿ ಗದ್ದುಗೆ ಮೇಲೆ ಕುಂತೇ ಬಿಟ್ಟ ಗೌಡ, ಎಂಕಣ್ಣ ಅಂದ್ರೆ ಬಿಂಕಣ್ಣ ಅನ್ನೋತರಹ ರಾಜ್ಯ-ಭಾರ ನೆಡೀತು. ಅವನ ಅದೃಷ್ಟ ನೆಟ್ಟಗಿರಲಿಲ್ಲ, ಎಂಡ ಕುಡ್ದು ಸಾಯೋ ಬಡಪಾಯಿಗಳು ಜಾಸ್ತಿ ಆದರು. ಹೆಣ್ಣುಮಕ್ಕಳು ಬೀದಿಗಿಳಿದರು. ತನ್ನ ನೆಚ್ಚಿನ ಕಾರ್ಪೊರೇಟರ್ ಮೇರಿ ಬಡವರ ಪರ ವಹಿಸಿದಳು. ಕಳ್ಳಭಟ್ಟಿಗೆ ಕತ್ರಿ ಬಿತ್ತು. ಪುರಸಭೆ ಕಾನೂನು ಜಾರಿ ಮಾಡ್ತು. ಸಣ್ಣಗೆ ಅಧಿಕಾರ ವಲಯದಲ್ಲಿ ಹೊಗೆ ಶುರುವಾಯ್ತು..ಎಂಕಣ್ಣನ ನಿಜವಾದ ದುರ್ದೆಸೆ ಪ್ರಾರಂಭವೋ ಎನ್ನುವ ಹಾಗೆ ಯಾವತ್ತೂ ಇಲ್ಲದ ಮಳೆ ಬಂತು...ಜನ ದಿಕ್ಕಾಪಾಲು..!!?? ಅದೇನೋ ಯಾಕೋ ಎಂಕಣ್ಣನ ಬಿಂಕನೂ ಕೆಡ್ತು, ಇತ್ತ ಕೆಂಡಾಮಂಡಲ ಆಗಿದ್ದ ದಾರಾಕಡ್ಡಿ. ಎಂಕಣ್ಣನ್ನ ಎತ್ತದೆ ಹೋದ್ರೆ ನಾನು ಬಿಡ್ತೀನಿ ಅಂತ ಕಡ್ಡಿ ಎರಡು ತುಂಡು ಮಾಡಿದ, ಹಂಗೆ ಕುಂತುಬಿಟ್ಟ ದಾರಾಕಡ್ಡಿ!!. ಇಬ್ಬರ ಜಗಳದಲ್ಲಿ ಬಡವಾಗಿದ್ದು- ತುತ್ತೂರಿ ನಗರದ ಜನ!! ಸೂರಿಲ್ಲ-ಊರಿಲ್ಲ ಅನ್ನೋಹಾಗಾಗಿತ್ತು ಅವರ ಕಥೆ. ದೊಡ್ಡೋರು ಬಂದರು ಎಂಕಣ್ಣಂಗೆ ಸುಂಕ ಕಟ್ಟಬೇಕಾಯ್ತು.. ಹೆಂಗೋ ತೇಪೆ ಬಿತ್ತು. ಇವಾಗ ರಾಜ್ಯ- ಇನ್ನೂ ಭಾರವಾಗೇ ನಡೆದಿದೆ..."
ಅಲ್ಲಿಗೆ ಸುಮ್ಮನಾಯಿತು ಭೇತಾಳ..
"ಏನಯ್ಯಾ ಭೇತಾಳ ಅಷ್ಟೇನಾ ಪುಂಗಿ ನಿನ್ನದು ?"
ಎಂದ ಶತವಿಕ್ರಮ..
"ನನ್ನ ಪ್ರಶ್ನೇನ ಕೇಳು.."
ಹೇಳ್ತು ಭೇತಾಳ.
"ಮುಂದೆ ಮಳೆ ಆಗೋಲ್ಲ ಅನ್ನೋದು ಏನು ಗ್ಯಾರಂಟಿ? ತುತ್ತೂರಿ ನಗರದ ಮಾನವಂತ ಹೆಣ್ಣು ಮಕ್ಕಳ ಗಂಡಂದಿರು ಸಾರಾಯಿ ಕುಡ್ದು ಹಾಳಾಗ್ತಾರೆ ಅಂತ ಎಂಕಣ್ಣಂಗೆ ಹೇಳಿ ..ಸಾರಾಯಿ ಧಂಧೆ ನಿಲ್ಸೋಲ್ಲ ಅಂತ ಏನು ಗ್ಯಾರಂಟಿ? ಒಂದುವೇಳೆ ಹಂಗಾದ್ರೆ .....ಎಂಕಣ್ಣ ಕು0ತಿರೋ ಕಂಬಳಿ ನಂದು ಅಂತ ದಾರಾಕಡ್ಡಿ ಕೆಂಪು ಬಾವುಟ ಹಾರ್ಸೊಲ್ಲ ಅಂತ ಏನು ಗ್ಯಾರಂಟಿ? ಅವನು ಕುಂತಿರೋ ಕಂಬಳಿನಾ ಎಳಿಯೋಲ್ಲ ಅನ್ನೋದು ಏನು ಗ್ಯಾರಂಟಿ"

"ಅದಕ್ಕೇ ಹೇಳೋದು....ಬುರುಡೆ ಒಳಗಡೆ ಏನಾದ್ರೂ ಇರಬೇಕು ಅಂತ....,!! ಅಲ್ಲಯ್ಯ ಭೇತಾಳ ಇಷ್ಟೊಂದು ಕಂಡೀಶನ್ನುಗಳ ಮೇಲೆ ಕಂಬಳಿ ಹಾಸ್ಕೊಂಡು ಕುಂತ್ರೆ ಎಂಕಣ್ಣನ ಬಿಂಕಕ್ಕೆ ನಾನ್ಯಾಕೆ ಗ್ಯಾರಂಟಿ ಕೊಡಲಿ..?? ಇದನ್ನು ತುತ್ತೂರಿ ಜನತೆ ಹೇಳ್ಬೇಕು. ಅವರೇ ನಿರ್ಧರಿಸಬೇಕು...ತಮ್ಮ ನಾಯಕ ಹೇಗಿರಬೇಕು? ಅಂತ...ದೂರದ ಯೋಚನೆಮಾಡಿ, ತರ್ಕಿಸಿ ಚುನಾಯಿಸೋ ಬುದ್ಧಿವಂತಿಕೆ ತೋರಬೇಕು, ಬುದ್ಧಿವಂತರು ಅನಿಸಿಕೊಂಡವರು ದಡ್ಡರಿಗಿಂತಾ ತೀರಾ ದಡ್ಡರಂತೆ ವರ್ತಿಸಿ ಓಟೇ ಹಾಕದೆ ಇರೋದನ್ನು ಬಿಡಬೇಕು.., ಆಗಲೇ ಏನಾದ್ರು ಸಾಧ್ಯ"
ಇನ್ನೂ ಶತವಿಕ್ರಮನ ಮಾತು ಮುಗಿದಿರಲಿಲ್ಲ... ಸಭೇಲಿ ಪ್ರಸ್ತಾಪದ ಮಂಡನೆಗೆ ಮುಂಚೆಯೇ ಸಭೆಯನ್ನ ಬಿಡೋ ಸಭಾಸದರಂತೆ...ಶತವಿಕ್ರಮನ ಹೆಗಲಿಂದ ಮಾಯವಾಗಿ ಕಾರ್ಪೋರೇಶನ್ ಪಕ್ಕದ ಸಣಕಲು ಮರಕ್ಕೆ ಜೋತು ಬೀಳಲು ಹೊರಟಿತು ..ಭೇತಾಳ.