Monday, October 1, 2018

ಒಬ್ಬ ಸಾಲದು -ಬೇಕು ನೂರಾರು



ಒಬ್ಬ ಸಾಲದು -ಬೇಕು ನೂರಾರು

ಬಂದೆ ನೀನಂದು ಒಬ್ಬನೇ, ಅರ್ಧಶತಕೋಟಿಯಿಂದ
ಕೆಂಪುಮುಖಗಳು ಕಪ್ಪಿಟ್ಟವುಗಳ ಮಧ್ಯೆ ಸೂತ್ರಧಾರಿ
ಭರತ ಮಾತೆಯ ಮಕ್ಕಳ ಸಂಸಾರ ಬೆಳೆದಿರಲಿಲ್ಲ,
ನಮ್ಮದೇ ಮನೆಯಲಿ ಅನ್ನವನುಣ್ಣಲು ಇರಲಿಲ್ಲ ದಾರಿ.
ನಮ್ಮಂತೆಯೇ ರಕುತ,ಮಾಂಸ, ಎಲುಬು ಹಂದರ
ಕದಿವ, ಉಣ್ಣುವ ಹೊಗೆಯಾಟದಾಸೆ ನಿನನೂ ಬಿಡಲಿಲ್ಲ
ಬಾಲ್ಯದಿ ಬಲಿತೆ ಬುದ್ಧಿಯ ಕಲಿತೆ ದಾರಿ ತೋರಲು
ನಿನಗೆ ರಂಭಳಂಥ ಆಯಾ ತಾಯಿ-ಗುರು ಸಿಕ್ಕಳಲ್ಲ.
ಸತ್ಯ ಧರ್ಮ, ನ್ಯಾಯ ನೀತಿಗಳೇ ಮೊದಲಕ್ಕರಗಳು
ಈಶ್ವರ ಅಲ್ಲಾ ವೈಷ್ಣವ ಜನತೋ, ನಂಬಿದೆ ಮನುಧರ್ಮ
ಬರಡುನಾಡಲಿ ಬಿತ್ತಿದೆ ಅಸಹಕಾರದ ವಜ್ರಾದಪಿ ಮಂತ್ರ
ಜಡಗಟ್ಟಿದ ಭರತಭೂಮಿಗೂ ಕೊಟ್ಟೆ ಹೋರಾಟದ ಮರ್ಮ
          ಬಿಡಿಸಿ ದಾಸ್ಯಸಂಕೋಲೆ, ತಾಯಿಗೆ ವಿಜಯಮಾಲೆ
          ಬೆಳೆಸಲೋಸುಗ ದೇಶ, ನೀಡಿ ಮರ್ಕಟಗಳಿಗೆ ಮತ
          ಕಾರ್ಕೋಟಕವ ಬೆಳೆದರು ನಿನ್ನೆತ್ತರ ಹರಿಸಿ ನಿನ್ನವರೇ
          ಸ್ವಾರ್ಥಸಾಧನೆಗೆ ಮತ, ಮಾರಿಕೊಳ್ಳಲು ದೇಶದ ಹಿತ
ಈಗ ಮೀರಿದೆ ಮೂರರ್ಧ ಶತಕೋಟಿ ಜನಸಂಖ್ಯೆ
ಒಬ್ಬ ಮೋಹನದಾಸ ಸಾಲದು ಬರಬೇಕು ನೂರಾರು
ಸರ್ವಧರ್ಮ ಸೋದರಭಾವ ಬಿತ್ತಬೇಕಿದೆ ಬರಡಲ್ಲಿ
ನಾಡು-ನುಡಿ, ದೇಶ-ಪ್ರೇಮ ನಳನಳಿಸುವ ಮುಂಗಾರು

Saturday, August 25, 2018

ನಮ್ಮೂರಿನ ಬೀದಿಗೆ ಅರ್ಪಿತ..ಕವಿತೆ
*****************************
ಉದಯಗಳೆಷ್ಟೋ ಕಳೆದವಿಲ್ಲಿ
"ಶುಭೋದಯ"ಗಳ ಹಂಗಿಲ್ಲದೇ
ಓಣಿ ಬೀದಿಗಳ, ಮಣ್ಣು ಕೆಸರುಗಳ
ಅಣ್ಣ ತಮ್ಮ ಅಕ್ತಂಗೀರ ಒಡನಾಡಿ
ಮಂದಹಾಸಗಳೇ ಹಾರೈಕೆಗಳಾಗ
ಹಬ್ಬಹರಿಗಳ ಸಹಭೋಜನಗಳಲಿ
ರಂಜಾ಼ನಿಗೆ ರಂಜಿಸಿ, ದೀಪಾವಳಿ
ಗಣೇಶೋತ್ಸವಗಳಲಿ ಉಲ್ಲಸಿಸಿ
ಇರಲಿಲ್ಲ ಗೋಡೆಗಳು ನಡುವೆ
ಪರಸ್ಪರ ಬಾಂಧವ್ಯಗಳಾಗ ಒಡವೆ
ಯಾರಿಟ್ಟರೋ ಮೆಲ್ಲನೆ ಬೆಂಕಿ..
ಮನಗಳ ನಡುವೆಯ ಕಿಡಿಯನು
ಸದಾ ಉಜ್ವಲಿಸೋ ತುಪ್ಪವ ನೂಕಿ
ಬರಬೇಕಿದೆ ಹೊರ ಹೊರಟು ಇಂದು
ನವ ಸಂತತಿಯ ಮನಬೆಳಗೋ ಬಂಧು
ಮಾನವಪ್ರೀತಿ ನಿರಂತರ ಹರಿವನದಿ
ಹರಿವುದು ಅಡ್ಡತೊಡೆದು ಬೇರೆಬದಿ
ಶಾಶ್ವತವಲ್ಲ ಅಡೆತಡೆಗಳು, ನಮ್ಮಲಿ
ಮಾಯವಾಗದೇ ಇದ್ದರೆ ಅಪರೂಪದ
ಒಳ ಮಾನವತೆಯ ಆತ್ಮೀಯ ಉಲಿ.

Friday, August 10, 2018

ಬ್ಲಾಗುವನದ ಖಳರು- ಫೇಸ್ಬುಕ್ಕಣ್ಣ ಮತ್ತು ವಾಟ್ಸಪ್ಪನ್



ಶತವಿಕ್ರಮನ ವಿಕ್ರಮಗಳು ಕ್ರಮಿಸುವ ದೂರಗಳು ಈಗ ಗೋಜಲು ಗೋಜಲು! ಆದರೂ ಛಲವೆಂದರೆ ವಿಕ್ರಮನದೇ, ಎರಡು ಮಾತಿಲ್ಲ. ಎಲ್ಲರಂತೆ ಫೇಸ್ಬುಕ್ಕಣ್ಣ, ವಾಟ್ಸಪ್ಪನ್ ಗಳು ನೀಡುವ ಗೋಳು ಛಲದಂಕಮಲ್ಲನನ್ನೂ ಬಿಡಲಿಲ್ಲ... ಎಷ್ಟೋ ಸಮಯದ ನಂತರ ಅವನ ಛಲ ಮತ್ತೆ ಗರಿಗೆದರಿತು. ಹೊರಟೇಬಿಟ್ಟ...ಬ್ಲಾಗ್ ವನದ ಖೂಳರನ್ನು ಹತ್ತಿಕ್ಕಲು.
ಮತ್ತದೇ ಸಮಸ್ಯೆ, ಮೊದಲಿಗೆ ಎಲ್ಲಿಯೋ ನೇತು ಬಿದ್ದಿರುವ ಭೇತಾಳನ ಹುಡುಕಿ ಅವನಿಗೊಂದು ಗತಿಕಾಣಿಸಿದರೇನೇ ಈ ಫೇಸ್ಬುಕ್ಕಣ್ಣ, ವಾಟ್ಸಪ್ಪನ್ ಗಳನ್ನು ಹುಡುಕಲು ಸಾಧ್ಯ. ಅದೇನೋ ಹೇಳ್ತಾರಲ್ಲ.. ’ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ’ ಅಂತ. ಹಾಗೆ.
ಒಮ್ಮೆ ಫಲಪುಷ್ಪ ಹೆಮ್ಮರಗಳಿಂದ ನಳನಳಿಸುತ್ತಿದ್ದ ಬ್ಲಾಗ್ ವನಕ್ಕೆ ಹೊಕ್ಕ ಶತವಿಕ್ರಮನಿಗೆ ಹೆಜ್ಜೆ ಹೆಜ್ಜೆಗೆ ಲೈಕ್ ಮುಳ್ಳುಗಳು, ವಾಟ್ಸಪ್ಪನ್ ಸಮೂಹ ಪೊದೆಗಳು, ಕಾಮೆಂಟೆಂಬ ಕುರುಚುಲುಗಳು...ಅಪರೂಪಕ್ಕೆ ದೂರ ದೂರಕ್ಕೆ ಕಾಣುವ ಸುಗಂಧಿತ "ಪದಾರ್ಥ ಚಿಂತಾಮಣಿ, ವಾಗರ್ಥ, ಕಾಜಾಣ, 3-K, ಕೃಷಿಲೋಕ, ಸ್ನೇಹಲೋಕ"ಗಳು...ಗಬ್ಬೆಬ್ಬಿಸುವ ಆ ಕುಲಗೆಡುತ್ತಿದ್ದ ಬ್ಲಾಗ್ ವನದ ಗತವೈಭವಕ್ಕೆ ಸಾಕ್ಷಿಯಾಗಿ ನಿಂತದ್ದು ಸ್ವಲ್ಪಮಟ್ಟಿಗೆ ಅವನ ಚಿಂತೆಗ ಮರಳುಗಾಡಿನ ಓಯಸಿಸ್ ಆಗಿದ್ದು ನಿಜ. ಆದರೂ ಫೂರ್ತಿ ಕುಲಗೆಟ್ಟಿಲ್ಲ ಎನ್ನಲು ಬ್ಲಾಗ್ ವನದ ಕೆಲ ಪರಿಚಿತ ಮುಖದ ಆಲದ ಮರಗಳು ಇನ್ನೂ ತಮ್ಮ ಛಾಪನ್ನುಇಟ್ಟುಕೊಂಡಿರುವುದನ್ನು ಕಂಡು ಶತವಿಕ್ರಮನ ಛಲಕ್ಕೆ ಬಲ ಬಂತು. ಹೀಗೇ ಹುಡುಕುತ್ತಾ ಹೊರಟವನಿಗೆ ..ಒಂದು ಫೇಸ್ಬುಕ್ಕಣ್ಣನ  ಕಾಮೆಂಟ್ ಗಳ ಪೊದೆಯಲ್ಲಿ... ಯಾರದೋ ಸಂಬಂಧಪಡದವರ ರಾಜಕೀಯ, ಧರ್ಮಗಳ ಮನೋಭಾವಗಳನ್ನು ಕೆರಳಿಸುವ ಪೋಸ್ಟ್ ಗೆ ಕಾಮೆಂಟುಗಳೆಂಬ ಮುಳ್ಳುಗಳಲ್ಲಿ ತನ್ನನ್ನು ಹುದುಗಿಸಿಕೊಂಡು...ಅನಾಮಧೇಯ "ಫೇಕ್ ಐಡಿ" ಯೊಂದಿಗೆ ಇದ್ದ ಭೇತಾಳ ಹದ್ದಿನ ಕಣ್ಣಿನ ಶತವಿಕ್ರಮನ ಕಣ್ಣಿಗೆ ಬಿದ್ದ...
ಸರಿ ಪೊದೆಗಳನ್ನು ಕಡಿದು, ಭೇತಾಳನನ್ನು ಬಿಡಿಸಿ ಹೆಗಲಿಗೇರಿಸಿ ನಡೆಯತೊಡಗಿದ.
ಮೊದಲೇ ಫೇಸ್ಬುಕ್ಕಣ್ಣ, ವಾಟ್ಸಪ್ಪನ್ ಗಳ ತಾಲೀಮಿನಲ್ಲಿ ಪಳಗಿದ್ದ ಭೇತಾಳನಿಗೆ ಹೇಳಬೇಕೇ..? ಪಲುಕತೊಡಗಿದ.
"ಮೂರ್ಖ ಶತವಿಕ್ರಮನೇ..  ಅಧರ್ಮಗಳ, ಅನ್ಯಾಯಗಳ ಅಕ್ರಮಗಳ ಸುತ್ತ ಬೆಳೆಯುವ ವನದಲ್ಲಿ ಸೃಜನಸಿರಿಯ ಬ್ಲಾಗ್ ವನವ ಹುಡುಕಲು ಬಂದಿರುವೆಯಲ್ಲಾ ನಿನ್ನ ಬುದ್ಧಿಗೆ ಏನು ಹೇಳಲಿ...ಸರಿಬಿಡು, ನಿನ್ನ ಛಲ ನೀನು ಬಿಡಲೊಲ್ಲೆ, ನನ್ನ ಪರಾಕು ನಾನು ಬಿಡೆ...ಎಂದಿನಂತೆ ನಾನು ಕಥೆ ಗಿತೆ ಹೇಳುವುದಿಲ್ಲ... ಒಂದು ಪ್ರಶ್ನೆ ಕೇಳುವೆ...ಅದಕ್ಕೆ ನಿನ್ನ ಸಮಾಧಾನ ಹೇಳು" ಎಂದಿತು.
ಈಗ ತಾನೇ ನನ್ನ ಫ್ರೆಂಡಿನ ಬೇರೊಬ್ಬ ಫ್ರೆಂಡ್ ನ  ಪೋಸ್ಟ್ ಗೆ ಯಾರೋ ಅವನ ಫ್ರೆಂಡ್ ಅಲ್ಲದವ ಕಾಮೆಂಟು ಹಾಕಿ ನನ್ನ ಹಾಗೆ ಕಿಚ್ಚು ಹಚ್ಚಿದ್ದಾನೆ, ಅದು ಯಾವ ಪೋಸ್ಟ್...?
ಶತವಿಕ್ರಮನೆಂದ, ಎಲವೋ ತಲೆಯಲ್ಲಿ ಬುರುಡೆಮಾತ್ರ ನಿನಗೆ ಬುದ್ಧಿ ಎಲ್ಲಿಂದ ಬರಬೇಕು..? ನಿಮ್ಮಂಥ ಖೂಳರನ್ನು ಹತ್ತಿಕ್ಕಲು ಬ್ಲಾಗ್ ವನವನ್ನು ಸುತ್ತಿರುವ ನನಗೆ ನಿನ್ನ ಪ್ರಶ್ನೆ ನೀರುಕುಡಿದಂತೆ.
ಆ ಪ್ರಶ್ನೆ ಖಂಡಿತಾ ಯಾವುದೋ ರಾಜಕೀಯ ಹಿತಾಸಕ್ತಿಯ ಇತರ ಧಾರ್ಮಿಕ ನೆಲೆಯ ನಂಬಿಕೆಗೆ ಸವಾಲಾಗುವ ಅಂಚೆಯಾಗಿರಬೇಕು... ನೀನು ಬೇರೆ..ಸೃಜನಾತಕ ಸಮಾಜಪರ ಅಪರೂಪದ ಮರಗಳಲ್ಲಿ ಕಂಡುಬರಲು ಹೇಗೆ ಸಾಧ್ಯ,,,??  ಎಂದ
ಹಿಹಿಹಿ...ನೋಡಿದೆಯಾ ಮೌನ ಮುರಿದೆ..ನಿನ್ನ ಉತ್ತರ ಸರಿಯಾದರೂ .. ನನ್ನದೇ ಸರಿ ಎನ್ನುವ ಫೇಸ್ಬುಕ್ ನ ಕೆಲ ಅಕೌಂಟುಗಳಂತೆ ನಾನೂ ಇದನ್ನು ಒಪ್ಪದೇ ಇದೋ ಹೊರಟೆ... ಅಲ್ಲೊಂದು ಅತ್ಯಾಚಾರದ ಪೋಸ್ಟ್ ಕಾಣ್ತಿದೆ....ಹಚ್ಚಿಡಲು ಒಳ್ಳೆಯ ಅವಕಾಶ ಎನ್ನುತ್ತಾ....ಮತ್ತೆ ಯಾವುದೋ ..ಕಾಮೆಂಟುಗಳ ಪೊದೆಯಲ್ಲಿ ಅಡಗಿ..ಕಾಮೆಂಟನ್ನು ಗೀಚತೊಡಗಿತು.
ಛೇ.. ಇಂತಹ ಫೇಸ್ಬುಕ್ಕಣ್ಣ...ವಾಟ್ಸಪ್ಪನ್ ಖೂಳರನ್ನು ಹೇಗಪ್ಪಾ ತಹಬದಿಗೆ ತರುವುದು..? ಇವುಗಳ ಮೇಲೆ ಹಿಡಿತ ಹೆಚ್ಚಿಸಲು ಸರ್ಕಾರ ಏನೋ ಕಾನೂನನ್ನು ಮಾಡುತ್ತಿದೆ ಎಂಬ ಸುದ್ದಿ ಕೇಳಿದೆ...ಅದಾದರೂ ಬಂದೀತೆಂಬ ನಂಬಿಕೆ ನನಗಿಲ್ಲ...ಆದರೂ ...ಕಛೇರಿ, ಶಾಲೆ ಮುಂತಾದವುಗಳ ಕೆಲಸದ ವೇಳೆಯಾದರೂ ಅವುಗಳನ್ನು ನಿಷ್ಕ್ರಿಯಗೊಳಿಸಿದರೆ... ಕವಿಗಳಾದರೂ ಈ ಅಣ್ಣಗಳ ಹಿಡಿತದಿಂದ ಹೊರಬಂದು ಬ್ಲಾಗ್ ವನಕ್ಕಾಗಿ ತಮ್ಮ ಕೊಡುಗೆ ನೀಡುವರೇನೋ ಆಗ ನನ್ನ ಶ್ರಮ ಸಾರ್ಥಕವಾದೀತು..ಎನ್ನುತ್ತಾ ಸ್ವಲ್ಪ ಪದಸುಮಗಳ ಘಮವನ್ನಾದರೂ ಪಡೆಯೋಣ ಎನ್ನುತ್ತಾ ಶತವಿಕ್ರಮ..ಪದಾರ್ಥ ಚಿಂತಾಮಣಿಯೆಂಬ ಹೂವನಕ್ಕೆ ಕಾಲಿಟ್ಟ.
"

Monday, May 7, 2018

ಫರಕ್


Foto: Pinterest.com

ಫರಕ್

ಸಲಾಂ ಅಲೇಕುಮ್
ವಾಲೆಕುಂ ಅಸ್ಸಲಾಮ್ ವ ರಹ್ಮತುಲ್ಲಾಹಿ ವ ಬರಕಾತುಹು
ಒಳಗಡೆ ನನ್ನ ರೂಮಿನಲ್ಲಿ ಕಾದಂಬರಿಯೊಂದನ್ನು ಓದುತ್ತಾ ಕೂತಿದ್ದ ನನಗೆ ಅಬ್ಬಾ ಜಾನ್ ರು ಮನೆಗೆ ಬಂದವರ ಸಲಾಂ (ಶುಭ ಕೋರಿಕೆ) ಗೆ ಪ್ರತಿ ಸಲಾಂ ಕೋರಿದ್ದು ಕೇಳಿಸಿತು. ಅಷ್ಟರಲ್ಲಿ ಚಿಕ್ಕಪ್ಪನೂ ಅವರ ಮಾತಿಗೆ ದನಿಗೂಡಿಸಿದ್ದೂ ಕೇಳಿಸಿತುಅಷ್ಟರಲ್ಲಿ ಸೋದರಮಾವನೂ ಎಲ್ಲಿಂದಲೋ ಬಂದವನು ಬಂದವರಿಗೆ ಸಲಾಂ ಮಾಡಿದಾಗ ಎಲ್ಲವೂ ಯೋಜಿತ ಎನಿಸಿದ್ದು ಹೌದು..  ಅದೂ ಮಾವ ಬಂದ ಎಂದರೆ ನನ್ನ ಮದುವೆ ಬಗ್ಗೆಯೇ ಎಂದು ನನಗೆ ಖಾತರಿಯಾಯ್ತು.
ನೆಪಕ್ಕೆ ಪುಸ್ತಕ ಕೈಯಲ್ಲಿ. ಕಿವಿ ಮಾತ್ರ ಸಲ್ಲಾದಲ್ಲಿ ನಡೆಯುತ್ತಿದ್ದ ಸಲ್ಲಾಪದತ್ತಲೇ ಎನ್ನುವುದನ್ನು ಸ್ವಲ್ಪ ಮಾತ್ರ ತೆರೆದಿದ್ದ ನನ್ನ ಕೋಣೆಯ ಬಾಗಿಲನ್ನು ಇನ್ನೂ ಹೆಚ್ಚು ತೆರೆಯಲು ಮುಂದಾದ ನನ್ನ ಕಾಲೇ ಸೂಚಿಸಿತ್ತು.
ಮಾವ ಏನು ಓದಿದ್ದಾಳೆ ಮಗಳು..ಖಾನ್ಸಾಬ್ ?
ನನ್ನ ಕಿವಿ ನೆಟ್ಟಗಾಯಿತುಕಾಲು ಮತ್ತೆ ತನ್ನ ಚೇಷ್ಟೆ ಮುಂದುವರೆಸಿತ್ತುಬಾಗಿಲು ಪೂರ್ತಿ ತೆರೆದಿರಲಿಲ್ಲವಲ್ಲಾ..?
ಬಂದವರು.. ಖಾನ್ಸಾಬ್ ಎಂದದ್ದು ಮಾತ್ರ ಗೊತ್ತಾಯ್ತು.. ಯಾವ ಖಾನ್ ಸಾಬ..?? ಶಾರೂಕ್ಕಾ? ಅಮೀರಾ..?? ಸಲ್ಮಾನಾ..???
ಎಮ್ ಎಸ್ಸಿ ಮಾಡಿದ್ದಾಳೆ, ಪಿಎಚ್ಡಿ ಮಾಡಬೇಕು ಅಂತ ಹೇಳ್ತಿದ್ಳುಮದ್ವೆ ಮಾಡ್ಕೊ..ಗಂಡ ಮುಂದಕ್ಕೆ ಓದ್ಸಿದ್ರೆ ಓದು ಅಂದೆ….”
ಖಾನ್ಸಾಬ್ರು ಹೇಳಿದ್ದು ಕೇಳಿ ನನ್ನ ಆಸಕ್ತಿ ಹೆಚ್ಚಾಯ್ತು
ನನ್ನ ಅಬ್ಬು ದನಿ ಕೇಳಿಸ್ತು.. “ಇವನಿಗೂ ಹುಡುಗಿ science ಓದಿರೋಳು ಆದರೆ ಒಳ್ಳೇದು ಅಂತ ಇವನ ಅಮ್ಮಿಜಾನ್ ಹೇಳ್ತಿದ್ಳು” …
ಅರೆ..ಹೌದಾ..? ನಾನು ಹೇಳಿದ್ದನ್ನ ಅಮ್ಮೀಜಾನ್..ಅಬ್ಬೂ ಕಿವಿಗೆ ಹಾಕೇ ಬಿಟ್ಟಿದ್ದಾಳಾ..?? ಡಾಕ್ಟ್ರಾದ್ರೂ ಅಮ್ಮಿಜಾನ್ ಅಬ್ಬೂ ಗೆ ಬಹಳ ವಿಧೇಯಳು…, ಒಂದು ರೀತಿಲಿ ಅಬ್ಬೂ ನ ಬಹಳವಾಗಿ ಬೆಳೆದ ಬ್ಯುಸಿನೆಸ್ ಅದರಿಂದ ಅಬ್ಬೂಗೆ ಇದ್ದ ವರ್ಚಸ್ಸೇ ಇದಕ್ಕೆ ಕಾರಣ..
ಚಿಕ್ಕಪ್ಪ ಮದುವೆ ಆದಮೇಲೆ ಇವನ ಲ್ಯಾಬಲ್ಲೇ ರೀಸರ್ಚ್ ಮಾಡ್ತಾ ಪಿ.ಎಚ್.ಡಿ ಮಾಡ್ತಾಳೆ ಬಿಡಿ.., ಅಲ್ವಾ ಭಾಭಿಜಾನ್…?
ಚಿಕ್ಕಪ್ಪ ಅಷ್ಟರಲ್ಲಿ ಕ್ಲಿನಿಕ್ ನಿಂದ ಮನೆಗೆ ಬಂದ ಅಮ್ಮಿನ ಕೇಳಿದ
ಅಮ್ಮಿ ಹೌದು.. ಅಂದಹಾಗೆ ಹುಡುಗಿ ಫೊಟೋ ಇದೆಯಾ..?
ಖಾನ್ ಸಾಬ್: ಕಳುಹಿಸಿ ಕೊಡುವೆ ಬೆಹೆನ್ ಜೀ... ಒಮ್ಮೆ ನೀವೆಲ್ಲಾ ಬನ್ನಿ.. ನಮ್ಮ ಮನೆಗೆ ಹುಡುಗಿನ ನೋಡೋ ರಿವಾಜ್ ಆಗಿಬಿಡಲಿ..
ಅಮ್ಮಿ: ಆಗಲಿ ..ಭಾನುವಾರ ಬರ್ತೇವೆ ನಾವು ೬-೭ ಜನ...ಅಲ್ವಾ ಭಯ್ಯಾ..??
ಮಾಮ: ಹೌದು... ಅಂದಹಾಗೆ .. ಕಾಲೇಜ್ ಪಕ್ಕ.. ದೊಡ್ಡ ಕಾಂಪೌಂಡ್ ಇರೋ ಮನೆನೇ ಅಲ್ವಾ..? ನಿಮ್ಮದು.
ಖಾನ್ ಸಾಬ್: ಹೌದು, ಅದೇ... ಬನ್ನಿ... ಆದರೆ ಮಾಫ್ ಮಾಡ್ಬೇಕು ಹುಡುಗನ್ನ ಕರ್ಕೊಂಡ್ ಬರ್ಬೇಡಿ... ಮೊದಲೇ ಹುಡುಗನಿಗೆ ಹುಡ್ಗಿನ ತೋರ್ಸೋ ರಸಂ ನಮ್ಮಲ್ಲಿಲ್ಲ...ಮದ್ವೆ ನಿಶ್ಚಯ ಆದ್ಮೇಲೆ ಒಮ್ಮೆ ಹುಡುಗನ್ನ ಕರ್ಕೊಂಡು ಬನ್ನಿ... ತೊಂದರೆ ಇಲ್ಲ...
“ಥತ್ ಇವ್ನಾ... ಎಂಥಾ ಮಾವನೋ ಇವ್ನು...? ಅನ್ನಿಸ್ತು .. ಪರ್ವಾಗಿಲ್ಲ ಬಿಡು..ಅಡ್ರೆಸ್ ಗೊತ್ತಾಯ್ತಲ್ಲ.. ನಾನೇ ಹೆಂಗೋ ನೋಡ್ತೀನಿ ಹಡ್ಗೀನ..” ಅಂದ್ಕೊಂಡು ಬೇಸರ ಆದರೂ ಸುಮ್ಮನ್ನಾದೆ.
ಒಂದು ದಿನ ಎಲ್ಲಾ ಹೋಗಿ ನೋಡ್ಕೊಂಡ್ ಬಂದ್ರು...ಹುಡುಗೀನ..
ಆಮೇಲೆ ಮದ್ವೆ ನಿಶ್ಚಯಕ್ಕೆ ಅಂತ ಮಾತ್ನಾಡ್ಕೊಳ್ಳೋವಾಗ ..ಮಾವ ಕೇಳ್ದ.. ಮುನೀರ್..ನಿನಗೆ ಹುಡ್ಗಿನ ಮೊದ್ಲೇ ನೋಡ್ಬೇಕು ಅಂತ ಅನ್ಸೊಲ್ವೇನೋ..? ಕೀಟಲೆ ಮಾಡ್ತಾ..
ಮಾಮ್.. ನಾನು ಆಗಲೇ ಅವಳ ಫೋಟೋ ತಕ್ಕೊಂಡಾಯ್ತು... ಅಂದೆ ಕಣ್ಣು ಮಿಟಕಿಸ್ತಾ,,
ಭಲೆ ಪಾಕಡಾ ಕಣೊ ನೀನು..ಅಂತ ಗುದ್ದುತ್ತಾ ಮಾವ ಅಂದ..
ಮುಂದಿನ ಭಾನುವಾರ ಖುದ್ದಾಗಿ ನೋಡುವೆಯಂತೆ ಬಿಡು ಅಂದ...
ಭಾನುವಾರ ಎಲ್ಲಾ ಹೋದ್ವಿ, ಶಾಸ್ತ್ರ ಎಲ್ಲಾ ಮುಗೀತು, ಮದ್ವೆ ನಿಶ್ಚಯ ಆಯ್ತು.. ಅಮ್ಮಿ ಅಂದ್ಳು...
“ಮುನೀರ್ ಬೇಟಾ, ಹುಡುಗೀನ ನೋಡಬೇಕಂತೆ ..ಕರೆಸ್ತೀರಾ ..?”
ಹುಡುಗಿ ಮಾವ ಇರ್ಬೇಕು.. ಹುಡುಗೀನ ಕರ್ಕೊಂಡ್ ಬಂದ...
ಮಾವ ಅಂದ – ನೋಡೋ ಮುನೀರಾ ಹುಡ್ಗೀನ... ಹುಡ್ಗಿ ಥರ ಕತ್ತು ಬಗ್ಗಿಸ್ಕೊಂಡ್ ಯಾಕೆ ಕೂತಿದ್ದೀಯಾ...ಅಂತ ಹತ್ತಿರ ಬಂದು ಕಿವೀಲಿ..ನೋಡೋ..ಫೋಟೋದಲ್ಲಿ ನೋಡೋಕೂ..ಖುದ್ದಾಗಿ ನೋಡೋಕೂ..ಫರಕ್ ಇದೆ ಅಂದ
ನಿಧಾನಕ್ಕೆ ಕತ್ತೆತ್ತಿ ನೋಡಿದೆ...ಕ್ಷಣಕ್ಕೆ ದಂಗಾದೆ...
ಮಾವ ನನ್ನ ಗಮನಿಸ್ತಾನೇ ಇದ್ದ...
ಖಾನ್ ಸಾಬ್ ಅಂದ್ರು ..ಆಯ್ತು... ಮದುವೆ ದಿನ ನಿಮಗೆ ನಮಗೆ ಅನುಕೂಲ ಆಗೋಹಾಗೆ ಇಟ್ಕೊಳ್ಳೋಣ...ಅಂದ್ರು ..ಎಲ್ಲಾ ಏನೇನೋ ಮಾತನಾಡ್ತಿದ್ರು... ನನಗೆ ಗೊಂದಲ...
ನಾವು ಹೊರಟು ನಿಂತ್ವಿ... ಮಾವ ಮೊದಲೇ ಹೊರಗೆ ಬಂದಿದ್ದ ನನ್ನ ಹತ್ತಿರ ಬಂದು..”ಹೇಳ್ಲಿಲ್ವಾ ಖುದ್ದಾಗಿ ನೋಡೋಕೂ ಫೋಟೋಲಿ ನೋಡೋಕೂ ಫರಕ್ ಇರುತ್ತೆ ಅಂತ.. ಹುಡ್ಗಿ ಸೊಗ್ಸಾಗಿದ್ದಾಳಲ್ಲೋ...ಯಾಕೆ ಒಂಥರಾ ಮಾಡಿದೆ ನೀನು..?
ನಾನು: ಮಾಮ್ ಆದರೆ ಫೋಟೋಗೂ ಖುದ್ದಾಗಿ ನೋಡಿದ್ದಕ್ಕೂ ತುಂಬಾ ವ್ಯತ್ಯಾಸ ಇದೆ... ಚನ್ನಾಗೇ ಇದ್ದಾಳೆ..ಆದರೆ..ಫೋಟೋ.... ?..ಅಂದಹಾಗೆ ಖಾನ್ಸಾಹೇಬ್ರಿಗೆ ಒಬ್ಬಳೇ ತಾನೇ ಮಗಳು ಇರುವುದು?
ಮಾವ: ಹೌದು ಒಬ್ಬಳೇ...ಯಾಕೆ..?
ನಾನು ಕದ್ದು ಮುಚ್ಚಿ ತೆಗೆದಿದ್ದ ಹುಡುಗಿ ಫೋಟೋನ...ತೋರಿಸಿದೆ....
ಮಾವ..ಬಿದ್ದು ಬಿದ್ದು ನಗತೊಡಗಿದ...ಸದ್ಯಕ್ಕೆ ..ಅಮ್ಮಿ ಅಬ್ಬೂ ಎಲ್ಲಾ ಕಾರಿನೊಳಕ್ಕೆ ಕೂತು ಹೊರಟಿದ್ರು... ನಿನ್ನ ಮಾಮನೂ ನೀನೂ ನಿಮ್ಮ ಕಾರಲ್ಲಿ ಬನ್ನಿ ಅಂತ ಹೇಳ್ತಾ..
ನಾನಂದೆ....”ಮಾಮ್ ಯಾಕೆ ನಗ್ತೀಯಾ?”
ಈ ಫೋಟೋದಲ್ಲಿರೋ ಹುಡ್ಗಿ ಬೇಕಾ...? ಹಂಗಾದರೆ..ಮತ್ತೆ ಖಾನ್ ಸಾಬ್ರನ್ನ ಕೇಳಬೇಕು ಅಂದ..ನಗ್ತಾ...?
ಮಾಮ್ ..ನಗು ನಿಲ್ಸಿ ಹೇಳ್ತಿಯಾ ಏನ್ ವಿಷ್ಯಾ..ಅಂತ...ಅಂದ ಸ್ವಲ್ಪ ಬೇಜಾರಿಂದ...
“ಲೋ..ಮುನೀರ....ಫೋಟೋದಲ್ಲಿರೋದು... ಖಾನ್ಸಾಹೇಬರ ಎರಡನೇ ಹೆಂಡತಿ” ಅಂದ ಮತ್ತೆ ನಗ್ತಾ...
ಈಗ ನನಗೂ ನಗು ತಡೆಯಲಾಗದೇ...ಮಾಮನ ಜೊತೆ ನಗ್ತಾ ಅಂದೆ...
“ಸದ್ಯ ಮೊದಲೇ ಗೊತ್ತಾಯ್ತು...ಇಲ್ಲಾಂತಿದ್ದಿದ್ರೆ.. ಮದ್ವೆ ಆದ್ಮೇಲೆ...ಅತ್ತೆ ಮನೆಲಿ ಎಡವಟ್ ಆಗ್ತಿತ್ತು...”