ಚಿಂತನೆ
ಮಿದುಳ ಬಳ್ಳಿ ಆಳಕಿಳಿದರೆ ಸಾಕು
ಗೋಳ ನೀ ಕೆದಕುವುದು ಏಕೆ?
ಇಲ್ಲವೇ ಹಸಿ ನೆನಪುಗಳು ಹುಸಿಯಾಗಿ
ಹೊತ್ತು ತಂದೆ ಮತ್ತೆ ಹಸಿರಾಗಲೇಕೆ ?
ಕಳೆದ ದಿನ ರಾತ್ರಿಗಳು ಲೆಕ್ಕವಿಲ್ಲ
ನೆನಪು ಮಾಸದ ಕನಸಿಗೆ ಪುಕ್ಕವಿಲ್ಲ
ಹಾರಲದು ಹವಣಿಸಲು ದೇಹ ತೂಕ
ಹಾಡುತಿವೆ ಹಕ್ಕಿಗಳು ಸ್ವರ ಹೊರಡುತ್ತಿಲ್ಲ
ಸ್ವಚ್ಛಂದ ಇದ್ದಾಗ ಇಚ್ಛೆಯಾ ಹಣ್ಣು
ಪಂಜರದಿ ಕೂಡಿಟ್ಟು ಕೊಟ್ಟಿದ್ದು ಹುಣ್ಣು
ಮರಗಿಡವ ಬೋಳಿಸಿಹೆ ಏಕಯ್ಯಾ ಹೀಗೆ?
ನಿನ್ನಂತೆ ಜೀವಿಗಳು ಕುರುಡಾಯ್ತೆ ಕಣ್ಣು?
ಆ ಜಲ, ನೆಲ, ಬೆಟ್ಟ, ಆಕಾಶ ಗುಡ್ಡ
ಕೊಟ್ಟರು ನಿನ ಪೂರ್ವಜರು ನೀನಾದೆ ದಡ್ಡ
ಕೆಡಿಸಿ, ಕಡಿಸಿ, ಗಣಿಗಾಣಿಸಿ
ಕುಲಗೆಡಿಸಿ
ಸ್ವಾರ್ಥ ಸಾಧನೆಗೆ ಬಿದ್ದೆ ಮಾಡಿಕೊಂಡೆ ದುಡ್ಡ
ಮರೆತೆ, ನಿನ್ನದೂ ಇದೆ ಸಂತಾನ ಇಲ್ಲಿ
ಕೊಡುವೆಯಾ ಕೊಳವೆಗಳು ಬತ್ತಿ ಹೋದ ನಲ್ಲಿ?
ಸಮಯವಿದೆ ಎಚ್ಚೆತ್ತುಕೋ ಓ ಮನುಜ
ಇಲ್ಲವಾದರೆ ಇರದು ನಿನಗೆ ಉಳಿಗಾಲವಿಲ್ಲಿ