Saturday, November 14, 2009

ಬ್ಲಾಗು- ಹೀಗೂ ಒಂದು ಎಡವಟ್ಟು



ಸುಮ್ನಿದ್ದವ್ನಿಗೆ ಬ್ಲಾಗ್ರೋಗ ಹತ್ಬಿಡ್ತು
ದಿನಾ ಒಂದಷ್ಟು ಓದ್ತಿದ್ದೆ ಈಗದು ಎಕ್ಕುಡ್ತು
ಹುಡ್ಗೀ ಹೆಸರ್ನಾಗೆ ಬ್ಲಾಗ್ಮಾಡೋಕೆ ಸುರುಹಚ್ದೆ
ಹುಡ್ಗೀರ್ಸ್ನೇಹ ಆಗ್ತಾದಂದ್ರೆ ಹುಡುಗರ್ದೇ ಧಂದೆ

ಒಬ್ಬ ಬರ್ದ ನಿಮ್ ಬರಹ ಮೆಚ್ದೆ ಮೈಲ್ ಐಡಿ ಕೊಡಿ
ನಿಮ್ಜೊತೆ ಮಾತ್ನಾಡೋದೈತೆ ಒಂದ್ಡೇಟು ಕೊಡಿ
ಅವ್ನಿಗ್ ಹೆಂಗೇಳ್ಳಿ ನಿನ್ನಂಗೇ ನಾನೂ ಉಡುಗ್ನೇಯ
ಕಾಮೆಂಟ್ಮಾಡೋರ್ ಕಮ್ಮಿ ಅಗ್ತಾರ್ ಅಂಗೇಯ

ಒಬ್ಳು ಬರದ್ಳು ನನ್ ಕಷ್ಟ ನಿಂತಾವ ಹೇಳ್ಬೇಕು ಅಂತಿವ್ನಿ
ಬ್ಲಾಗ್ ಮಡೋ ಒಬ್ಬ್ ಮುದ್ಕಂಗೆ ಹೆದ್ರ್ ಕೊಂಡು ಕುಂತಿವ್ನಿ
ನನ್ ಕಷ್ಟ ಅವ್ಳಿಗೇನು ಗೊತ್ತು ಆದ್ರೂ ..ಯೋಳ್ದೆ ಕಳ್ಸು ವಿವ್ರಾನ
ಅವ್ಳು ನಾನ್ ಕೊಟ್ ಮೈಲ್ ಐಡಿಗೆ ಕಳ್ಸ್ ಬಿಟ್ಳು
ವೆಬ್ನಾಗೆ ಮುಳ್ಗಿ ಹುಡ್ಗೀ ಒಬ್ಳಿಗೆ ನನ್ ಫ್ರೆಂಡು ಬರೆದಿದ್ದ ಪತ್ರಾನ

ಮುದ್ಕಪ್ಪ ಒಬ್ಬ ಬರ್ದ, ನಿಮ್ ಬರಹ ನೋಡಿದ್ರಿ
ಭಾಳ ಅನುಭೋವಸ್ತ್ರು ನೀವ್ ಅನ್ನೋದು ಕಾಣ್ತದ್ರಿ
ನಂಗೂ ಹೇಂತೀಹೋಗಿ ಹತ್ತ್ ವರ್ಷ ಆಗೈತ್ರೀ
ಜೊತ್ ಜೊತ್ಯಾಗೇ ಇನ್ಮುಂದಿ ಬ್ಲಾಗ್ಮಾಡೋಣು ಏನಂತೀರಿ?

ಯಪ್ಪೋ ನನ್ಗೋ ಸುಸ್ತಾಯ್ತು ಈ ಪಾಟಿ ಎಡ್ಬಿಡಂಗಿ ಆಗಿ
ಅದ್ಕೆ ಮುಂದಿನ ಪೋಸ್ಟ್ನಾಗೆ ಬರ್ದೆ ನಾನ್ ಗಂಡು ಬ್ಲಾಗಿ
ಬರ್ತಿದ್ವು ಪ್ರತಿಪೋಸ್ಟ್ಗೂ ೫೦-೬೦ ಕಾಮೆಂಟ್ಸು ಆವಾಗ
ನಾಲ್ಕೈದು ವಾರ ಆಯ್ತು ಒಟ್ಟು ಐದೋ-ಆರೋ ಈವಾಗ


ಮುಚ್ಚಿಟ್ಟೆ ಮೊಸರು, ಬೆಣ್ಣೆ ತುಪ್ಪ ಅನ್ನೋರ್ಗೆನೂ ಕಮ್ಮಿಇಲ್ಲ
ತೆರೆದಿಟ್ಟೆ ಒಮ್ಮೆ ಮಜ್ಜಿಗೆ ಹುಳಿ ಹತ್ರ ಸುಳಿಯೋರೇ ಕಾಣ್ತಿಲ್ಲ
ಈವತ್ನ ಜೀವ್ನಾನೆ ಹೀಂಗೆ, ಇದ್ದದ್ದು ಇದ್ದಾಂಗೆ ಯೋಳೋಂಗಿಲ್ಲ
ಕದ್ದೋ ಮುಚ್ಚೊ ಹೊಲಸಾದ್ರೂ ಅಮೃತ ಅಂತಾರೆ ಎಲ್ಲ

50 comments:

  1. ಸೂಪರ್ ಇದೆ ಸರ್.....
    ಆಡು ಭಾಷೆನಲ್ಲಿ ಸಕ್ಕತಾಗಿದೆ....
    ವಾಸ್ತವವನ್ನು ಚೆನ್ನಾಗಿ ಹೇಳಿದ್ದೀರ....

    ReplyDelete
  2. ಮೊದಮೊದಲ್ಮೂಡಿದ ಅನಿಸಿಕೆ ನಿಮ್ಮದು...
    ಆಡು ಭಾಷೇಲಿ ಕವನ ಬರಿಯೋದು ಎಷ್ಟು ಕಷ್ಟ ಅನ್ನೋದು ಬರೆದಮೇಲೆ ಗೊತ್ತಗುತ್ತೆ, ಜಿ.ಪಿ.ಆರ್ ಇದ್ರಲ್ಲಿ ಸಿದ್ಧಹಸ್ತರಾಗಿದ್ದರು ಮತ್ತು ಅವರ ಕವನಗಳು ಬಹು ಜನಪ್ರಿಯವೂ ಆಗಿದ್ದವು.
    ಒಮ್ದು ಪ್ರಯತ್ನ ಅಷ್ಟೇ, ಅದೂ ಬ್ಲಾಗ್ ಲೋಕದ ಬಗ್ಗೆ...

    ReplyDelete
  3. ಹಹಹ... ಸಕತ್ ಆಗಿದೆ...

    ReplyDelete
  4. ತುಂಬಾ ಚೆನ್ನಾಗಿದೆ....

    ReplyDelete
  5. ಅಜಾದ ಸರ್,
    ಬೀಸಿದ ಚಾಟಿ ಜೋರಾಗಿದೆ..... ಅದೂ ಶುದ್ದ ಆಡುಭಾಷೆಯಲ್ಲಿ..... ಅಭಿನಂದನೆಗಳು ಸರ್..... ಕುವೈತ್ ಕನ್ನಡ ಹಬ್ಬದ ಬಗ್ಗೆ ಲೇಖನ ಬರತ್ತೆ ಅಂತ ಕಾಯ್ತಾ ಇದ್ದೆ..... ನೋಡಿದ್ರೆ ಸಕತ್ ಕಿಕ್ ಕೊಡೊ ಕವನ.... ಅಭಿನಂದನೆಗಳು ಸರ್..... ಬ್ಲಾಗ್ ಲೋಕದ ನಿಜಲೋಕ ತೆರೆದಿದ್ದೀರಿ.....

    ReplyDelete
  6. ಹಿಂಗೇನಪ್ಪಾ ವಿಷ್ಯಾ, ಆಜಾದ?
    ಕವನ ಭಾರೀ ಮಜಾ ಅದ!

    ReplyDelete
  7. ತುಂಬ ಚೆನ್ನಾಗಿ ಬರೆದಿದ್ದೀರ... ಓದಕ್ಕೆ ಇಷ್ಟು ಕಷ್ಟ ಆಗ್ತಾ ಇರಬೇಕಾದ್ರೆ,,, ಇನ್ನು ನೀವು ಪದಗಳನ್ನು ಸೇರಿಸಿ ಬರೆಯುವಾಗ ಅದರ ಕಷ್ಟ ಗೊತ್ತಾಗುತ್ತೆ....
    Guru

    ReplyDelete
  8. This comment has been removed by the author.

    ReplyDelete
  9. ದಿಲೀಪ್, ನೆಟ್-ಲೋಕದಲ್ಲಿ ಇಂಥ ಹಲವಾರು ವೈವಿಧ್ಯಗಳು ಎಡವಟ್ಟುಗಳು ಕೇಳಿದ್ದೇನೆ..ಅದ್ರಲ್ಲಿ ಒಂದು ಸಣ್ಣ ತುಣುಕನ್ನ ಪ್ರಸ್ತುತಪಡಿಸಿದ್ದು ಇಲ್ಲಿ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  10. ಚೇತನಾ, ನಿಮ್ಮ ಆಕಾಶಬುಟ್ಟಿಯೊಳಕ್ಕೆ ಇಣುಕಲಾಗಲಿಲ್ಲ ..ಬರುತ್ತೇನೆ...ಹಹಹ...ಇದು ಒಂದು ಸಣ್ನ ಶಾಕ್ ನೆಟ್ ಬಗ್ಗೆ ...ಧನ್ಯವಾದ

    ReplyDelete
  11. ದಿನಕರ್, ನಾನು ಮೃದುಮನಸು ಮತ್ತು ಸವಿಗನಸು ಮೂವರಲ್ಲೊಬ್ಬರು ಖಂಡಿತಾ ನಮ್ಮ ಅವಿಸ್ಮರಣಿಯ ರಜತ ಮಹೋತ್ಸವದ ಬಗ್ಗೆ ಬ್ಲಾಗ್ ಪೋಸ್ಟ್ ಮಾಡ್ತೇವೆ..ನಿರೀಕ್ಷಿಸಿ...ಇದು ಒಂದು ಕೊಸರು ಅಷ್ಟೇ...

    ReplyDelete
  12. ಸುನಾಥ್ ಸರ್, ಓಫ್..ಏನ್ ಪಂಚ್ ಸರ್ ನಿಮ್ದು....ಸೌ ಸುನಾರ್ ಕಿ...ಏಕ್ ಲೊಹಾರ್ ಕಿ...ಜೈ ಹೋ....ಹಹಹ....

    ReplyDelete
  13. ಗುರು, ನಿಮ್ಮ ಪೋಸ್ಟ್ ಒಂಥರಾ ಛಾಪು ತಂದರೆ ನಂದೂ ಒಂಥರಾ ಹಾಗೇನೇ...!!! ಹಹಹ...ಥ್ಯಾಂಕ್ಸ್...

    ReplyDelete
  14. ಹೌದೌದು ಬ್ಲಾಗ ಲೋಕದಲ್ಲಿ ಹೀಗೆ ಬಹಳ ಎಡವಟ್ಟುಗಳು ಆಗುತ್ತವೆ... ನನಗನಿಸುತ್ತದೆ ಕವನ ನಿಮ್ಮ ಸ್ವಅನುಭವ ಅಂತ, ಜಲನಯನ ಅಂತ ಹೆಸರು ಮೊದಲು ನೋಡಿದಾಗ ಹುಡುಗಿಯೇ ಅಂತ ಯಾರಾದರೂ ಅಂದುಕೊಳ್ಳುತ್ತಾರೆ :) ಪ್ರೊಫೈಲಗೆ ಬಂದಾಗಲೇ ಗೊತ್ತಾಗೋದು ಅಜಾದ್ ಸರ್ ಅಂತ.

    ReplyDelete
  15. ಆಜಾದ್ ಸಾರ್
    ಓದೋದಕ್ಕೆ ತುಂಬಾ ತ್ರಾಸ್ ಆಯ್ತು
    ಓದಿ ಅರ್ಥ ಮಾಡ್ಕೊಳ್ತಿದ್ದಂತೆ ನಗು ಬರಾಕತ್ತಿತು
    ರತ್ನನ ಪದಗಳು ಓದಿದ ಗೆಪ್ಪಿ ಬರಾಕತ್ತೈತೆ
    ಬೋ ಪಸಂದಾಗಿದೆ

    ReplyDelete
  16. ಅಝಾದಣ್ಣ,
    ಬಾರಿ ಮಸ್ತಿ ವಿಚಾರನೇ ಎಲ್ಲರಮುಂದ್ದೀಟ್ಟೀರಿ, ಬಾರಿ ಖುಷಿ ಜೊತೆಗೆ ಎಚ್ಚರಿಕೆಯನ್ನು ನೀಡುತ್ತಲಿದೆ. ತುಂಬ ಇಷ್ಟ ಆಯ್ತು ಕವನ

    ReplyDelete
  17. ಕವನ ಭೋ ಮಜಾಅದರೇ, :)
    ಮಸ್ತ್ ಮಸ್ತ್...

    ReplyDelete
  18. ಪ್ರಭು, ಯಾಕ್ರೀ ನೊಂದ ಜೀವಕ್ಕೆ ಮತ್ತೆ ನೋವ್ಕೊಡ್ತೀರಿ....ಹಹಹ...
    ಹೌದು..ಒಂದು ನನಗೆ ಕಾಮೆಂಟ್ ಬಂದಿತ್ತು...ಜಲನಯನ ಮೇಡಂ ನಾನೂ ಒಬ್ಬ ಪರಿಸರ ಅಂದ್ರೆ ಕಾಳಜೀ ಇರೋನು, ನಿಮ್ಮ ಜೊತೆ ಇನ್ನೂ ವಿಚಾರ ಹಂಚ್ಕೋ ಬಹುದೇ...ಅಂತ....ಅದಕ್ಕೆ ನಾನು...ಹಲೋ ಸ್ವಾಮಿ ನನ್ನ ಪ್ರೊಫೈಲ್ ನೋಡಿ ನಿಮ್ಮ ಕನ್ಫ್ಯೂಶನ್ ದೂರ ಆಗುತ್ತೆ ಹಾಗೇ ನನ್ನ ಮೈಲ್ ಲಿಂಕೂ ಸಿಗುತ್ತೆ...ಆಮೇಲೆ ನಿಮಗೆ ಮೈಲ್ ಮಾಡ್ಬೇಕು ಅನ್ಸಿದ್ರೆ ಬರೀರಿ...ಅಂತ.....ಹಹಹ...ಅಲ್ಲಿಗೆ ಮುಗೀತು ವ್ಯವಹಾರ ಅಂತ ಬೇರೆ ಹೇಳ್ಬೇಕಿಲ್ಲ್ವಲ್ಲ...

    ReplyDelete
  19. ರೂಪಾವ್ರೇ, ಧನ್ಯವಾದ ಜಲನಯದ ಕಡೆ ಬಂದ್ರಲ್ಲಾ...ಅಬ್ಬ...ಒಂದು ಕಾಮೆಂಟು ಬಹಳ ದಿನದಿಂದ ಬರ್ತಾನೇ ಇಲ್ವಲ್ಲ...ಬಹುಶಃ ಪ್ರೊಫೈಲ್ ನೋಡಿರಬೇಕು...!!! ಅಂದ್ಕೋಂಡೆ...ಥ್ಯಾಂಕ್ಸ್...ಹಹಹ

    ReplyDelete
  20. ಮನಸಿನಲ್ಲಿ ಎಚ್ಚರ ..ಬರವಣಿಗೆಯಲ್ಲಿ ಅಚ್ಚರಿ ಇರಬೇಕು..ಇರಬೇಕು..
    ನಿಮ್ಮ ಮಾತಿಗೆ ಒಪ್ಪಿಗೆ...ನಂದು, ಮನಸು ಮೇಡಂ.
    ಯಾಕಂದ್ರೆ...ಚಾಟ್ ಅವಾಂತ್ರಗಳು ಬಹಳಾ ಅಂತೆ...ಮೊನ್ನೆ ನ್ಯೂಸ್ ನಲ್ಲೂ ಇತ್ತಲ್ಲ...

    ReplyDelete
  21. ಅನ್ವೇಷಿಯವರ ಮೊದಲ ಹೆಜ್ಜೆ ಜಲನಯನದ ಕಡೆ ಅಂದ್ಕೋತೀನಿ...ನನಗೆ ಗ್ರಾಮ್ಯಭಾಷೆಯಲ್ಲಿ ಏನೋ ಸಾಮೀಪ್ಯ ಅನ್ಸುತ್ತೆ..ಅದ್ಕೇಯ ಒಂದಂಗೇ ಬುಟ್ಟಿವ್ನಿ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  22. ಬ್ಲಾಗ್ರೋಗಕ್ಕೆ ಮದ್ದು ಇಲ್ರಿ. ಸಕತ್ ಸಕತ್ ಸೂಪರ್ ಸೂಪರ್ ಆಗಿ ಇದೆ. ತುಂಬಾ ದಿನದ ನಂತರ ಈ ತರಹದ ಕವನ ಓದಿದ್ದು...
    ನಿಮ್ಮವ,
    ರಾಘು.

    ReplyDelete
  23. ಬ್ಲಾಗ್ ಗಳಲ್ಲಿ ಹೀಗೂ ಇದೆಯೇ.........!!!

    ReplyDelete
  24. ರಾಘು, ನಿಮ್ಮ ಆತ್ಮೀಯತೆಗೆ ಮತ್ತು ಪ್ರಾಮಾಣಿಕ ಅನಿಸಿಕೆಗೆ ನನ್ನಿ..
    ನಿಜ ನನಗೆ ಹಲವು ನನ್ನ ಸ್ನೇಹಿತರು ಹೇಳಿದ ಮಾತು ಈ ಬ್ಲಾಗ್ ಪೋಸ್ಟ್ ಮಾಡೋದಕ್ಕೆ ಕಾರಣ..ಅದರ್ಲ್ಲೂ ನನ್ನ ಸ್ನೇಹಿತನೊಬ್ಬನಿಗೆ ನನ್ನ research article ಒಂದನ್ನ ಕೆಲವು ಪೂರಕ ಅಂಶಗಳನ್ನ ಹಾಕಿ ಕಳಿಸೋ ಮಾರಾಯಾ ಅಂದ್ರೆ ಎರಡು ವಾರ ಆದ್ರೂ ಕಳಿಸಿರಲಿಲ್ಲ..ಯಾಕೋ ಪುಣ್ಯಾತ್ಮ ಹೀಗ್ಮಾಡ್ತೀ..ನೀನೇ ಲೇಟು ಮಾಡಿದ್ರೆ ಜರ್ನಲ್ ನವರು ಇನ್ನೂ ಟೈಮ್ ತಗೋತಾರೆ..ಅಂದಿದಕ್ಕೆ..ಸಾರಿ ಗುರು..ಒಂದು ಇಂಪಾರ್ಟೆಂಟ್ ಬ್ಲಾಗ್ ಪೋಸ್ಟ್ ಹಾಕೋದಿಕ್ಕೆ ಮಾಹಿತಿ ಕಲೆ ಹಾಕ್ತಿದ್ದೆ ಅದ್ಕೇ ಲೇಟು..ಅದನ್ನು ಪೋಸ್ಟ್ ಮಾಡ್ತೀನಿ ಓದಿ ಕಾಮೆಂಟ್ಸು ಅನ್ನೋದೇ...??

    ReplyDelete
  25. ಸುಪರಾಗೈತೆ ನಿಮ್ಮ ಬ್ಲಾಗ್ರೋಗದ ಕವನ
    ಓದ್ತಾ ಓದ್ತಾ ಅ೦ಗೇ ಮೆಚ್ದೆ ನಿಮ್ ಭಾಷೆನಾ

    ReplyDelete
  26. ಚಿತ್ರಾ, ನೀವು ತೇಜಸ್ವಿನಿ ಬ್ಲಾಗ್ ಪೋಸ್ಟ್ ನೋಡ್ಲಿಲ್ಲ ಅಂತ ಕಾಣುತ್ತೆ...ವಿಕೃತ ಮನಸ್ಸಿಗೆ ವಯಸ್ಸಿನ ಸಿಮೆಯಿರುವುದಿಲ್ಲವಂತೆ..ಈ ಎಚ್ಚರಿಕೆಯನ್ನೂ ಅವರು ತಮ್ಮ ಬ್ಲಾಗ್ ನಲ್ಲಿ ಕೊಟ್ಟಿದ್ದರು..ಯಾವುದಕ್ಕೂ ಅದೆನೋ ಹೇಳ್ತಾರಲ್ಲ..."ನಮ್ಹುಶಾರೀಲಿ ನಾವಿರ್ಬೇಕಾಯ್ತದೆ"...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  27. ಪರಾಂಜಪೆಯವೇ, ನಿಮ್ಮ ಅನಿಸಿಕೆಯನ್ನ ನನ್ನ ೨೦೧೨ ಭಾರತೀಯ ವೇದಗಳ ವಿಚಾರದಲ್ಲಿ ನಿರೀಕ್ಷಿಸಿದ್ದೆ...any way..ನೋಡಿ ಈಗಲೂ ತಿಳಿಸಿ..
    ಹಾಂ..ಬ್ಲಾಗ್ ಅನ್ನೋದು ನಮ್ಮ ಮನಸ್ಸನ್ನ ಬಿಚ್ಚಿಡೋ ಮಾಧ್ಯಮ ..ನನ್ನ ಅನಿಸಿಕೆ (ನನ್ನ ಅನುಭವ) ಇದರಿಂದ ನಮ್ಮ ತಿಳುವಳಿಕೆಯ ವ್ಯಾಪ್ತಿಯೂ ಮತ್ತು ನಮ್ಮ ಬರವಣಿಗೆಯ ತೀಕ್ಷ್ಣತೆಯೂ ಹೆಚ್ಚುತ್ತೆ ಅನ್ನೋದು...

    ReplyDelete
  28. higga muggga.. sakkattagi baarisiddiri.

    aadu bhaasheya olleya prayoga. :)

    kushi ayithu.

    ReplyDelete
  29. ಗೌತಮ್ ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆ....ನಿಮ್ಮ ಬ್ಲಾಗಿಲ್ಲವಾ..? ನಾನು ನಿಮ್ಮ ಐಕಾನ್ ಕ್ಲಿಕ್ ಮಾಡ್ದೆ ಏನೂ ಸಿಗ್ಲಿಲ್ಲ...ಲಿಂಕು..

    ReplyDelete
  30. ಬಾಲು..ನಿಮ್ಮ ಮಾತಿಗೆ ತಲೆಬಾಗ್ಲೇ..?? ಎಲ್ಲಾರ್ಬರ್ಯೋ ಸ್ಟೈಲ್ನಲ್ಲಾದ್ರೆ ಏನ್ಮಜಾ? ಅಲ್ವಾ..ನಮ್ದೇ ಒಂದ್ಥರಾ ಆಗ್ಬೇಕು...ಅಲ್ವಾ?

    ReplyDelete
  31. This comment has been removed by the author.

    ReplyDelete
  32. ಸ್ನೇಹಿತರೇ, ಜಲನಯದಲ್ಲಿ ನಿಮ್ಮ ಪ್ರತಿಕ್ರಿಯೆ ನೋಂದಾಯಿಸಲು ಸಾಧ್ಯವಾಗುತ್ತಿದೆಯೇ..ಇಲ್ಲವೇ..ತಿಳಿಸಿ. ಯಾರಿಗಾದರೂ error ಬರ್ತಿದ್ರೆ ತಿಳಿಸಿ.
    ಆಜಾದ್

    ReplyDelete
  33. ಆಝಾದ್ ಅವರೆ,

    ನನ್ನ ಕಹಿ ಅನುಭವವನ್ನು ಮತ್ತೆ ನೆನಪಿಸಿತು ನಿಮ್ಮ ಈ ಕವನ. ಆಡು ಭಾಷೆಯಲ್ಲಿದ್ದು ಹೆಚ್ಚು ಪ್ರಭಾವಶಾಲಿ ಎನಿಸುತ್ತದೆ. ಈ ಕವನವನ್ನು ಆ ಮನುಷ್ಯನಿಗೆ(ನನ್ನ ಎಚ್ಚರಿಗೆ...! ಪೋಸ್ಟನಲ್ಲಿ ಬರುವ ಅಸ್ವಸ್ಥಮನಸಿನವನಿಗೆ) ಕಳುಹಿಸಬೇಕೆಂದೆನಿಸಿತ್ತದೆ. ಬ್ಲಾಗ್ ಲೋಕದೊಳಗಿನ ಕೊಳಕನ್ನು ಎತ್ತಿ ಕಾಣಿಸುತ್ತದೆ.

    @ ಚುಕ್ಕಿ ಚಿತ್ತಾರ ಅವರೆ ಎಂಥವರೂ ಎಲ್ಲಿ ಬೇಕಿದ್ದರೂ ಇರುತ್ತಾರೆ. ಇಂಥವರೂ ಬ್ಲಾಗ್ ಲೋಕಕ್ಕೆ ಬಂದಾಗಿದೆ. ಈ ವಿಚಿತ್ರ ಜೀವಿಗಳ ಪತ್ತೆ ಹಚ್ಚುವುದು ಬಲು ಕಷ್ಟ. ಯಾವುದಕ್ಕೂ ಎಚ್ಚರಿಕೆ..!!!

    ReplyDelete
  34. ನನಗೆ ಒಂದ್ಸೊಲ್ಪ ..ಇದೇನು ..? ಅನ್ನಿಸ್ತು..ತೇಜಸ್ವಿನಿಯವರು ನನ್ನ ಬ್ಲಾಗ್ ಗೆ ಪ್ರತಿಕ್ರಿಯೆ ಮಾಡೋಕೆ ಆಗ್ತಿಲ್ಲ ಅಂದಾಗ..ಈಗ ಅವರ ಪ್ರತಿಕ್ರಿಯೇನೇ ಬಂದಿದ್ದು ನೋಡಿ ಸಧ್ಯ ..ಸರಿಹೋಯ್ತಲ್ಲ ...ನಿರಾಳ..
    ಹೌದು ತೇಜಸ್ವಿನಿಯವರೇ...ನೀವೇ ನೋಡ್ತೊದ್ದೀರಿ..ಒಬ್ಬ ಮಂಗಳೂರಿನವ ೨೦-೩೦ ಮದ್ವೆ ಮಾಡ್ಕೊಂಡು ಕೊಲೆಗಳನ್ನ ಮಾಡಿ ರಾಜಾರೋಷವಾಗಿ ಮೆರೆದ ಅಂದ್ರೆ...ಭೌತಿಕ ಎದ್ದು ಕಾಣುವ ಕ್ರೂರಿಗಳನ್ನೇ ನಿಯಂತ್ರಿಸ/ತಡೆಯಲಾರದ ನಮ್ಮ ವ್ಯವಸ್ಥೆಗೆ..ಇಂತಹ ಅಂತ (ರ್ಲಜ್ಜ) ರ್ಜಾಲ ಕ್ರಿಯೆ ಪಾತಕಕ್ಕೆ ಹೇಗೆ ಕಡಿವಾಣ??

    ReplyDelete
  35. Jalanayana nimma halli bhaashe kavana channagide..odoke swalpa..kashta..aste..

    ReplyDelete
  36. ಮೇಘ, ಧನ್ಯವಾದ ನನ್ನ ಗೂಡಿಗೆ ಬಂದು ನಿಮ್ಮ ಅನಿಸಿಕೆಯನ್ನು ನಮೂದಿಸಿದ್ದಕ್ಕೆ...

    ReplyDelete
  37. ಆಝಾದ್ ಸರ್ ತುಂಬಾ ಚೆನ್ನಾಗಿದೆ ನನಗಂತು ಇಷ್ಟವಾಯಿತು....
    ಇದು ಇಂದಿನ ಕಂಪ್ಯುಟರ್ ಯುಗದಲ್ಲಿ ನಿಜವೂ ಹೌದಲ್ಲ.....
    ಆರ್ಕುಟ್ ನಲ್ಲಂತೂ ಫೇಕ್ ಐಡಿ ಗಳನ್ನು ನೋಡಿ ನೋಡಿ ಬೇಜಾರಾಗಿ ಬಿಟ್ಟಿದೆ.

    ಗುರು.

    ReplyDelete
  38. ಗುರು, ಜಲನಯನಕ್ಕೆ ಬಂದಿರಿ ನಿಮ್ಮ ನಿಸಿಕೆಯನ್ನು ಕಾಮೆಂಟಿಸಿಸ್ದಿರಿ, ಧನ್ಯವಾದ. ನಾನು ಮೊದಲಿಗೆ ಪೋಸ್ಟ್ ಮಾಡಿದಾಗ್ ಜಲನಯನದಲ್ಲಿ..ಒಬ್ಬ ಸ್ನೇಹಿತ ಇದೇನೋ ಹುಡ್ಗಿ ಹೆಸರು ಇಟ್ಟಿದ್ದೀಯಾ? ಅಂದ..ಆಗ್ಲೆ ನನಗೆ ಅನ್ಸಿದ್ದು ಹೌದಲ್ಲ..!! ಅದ್ರೆ ನನ್ನ ದೃಷ್ಟಿ ಇದ್ದದ್ದು..ನನ್ನ ವಿದ್ಯಾ ಹಿನ್ನೆಲೆಯತ್ತ...ನಾನು ಮೀನು-ಮತ್ತಿತರ ಜಲಜೀವಿಗಳನ್ನು ಅಭ್ಯಸಿಸಿದವ..ಹಾಗಾಗಿ ಜಲಕ್ಕೆ-ನಯನ ಅಂದರೆ ಜಲಜೀವಿ..ಹೀಗೆ...ಆದ್ರೂ ಹೆಸರು ಚನ್ನಾಗಿದೆ ಅಂತ ಹಲವಾರು ನನ್ನ ಸಹಪಾಠಿಗಳು ಹೇಳಿದ್ದರಿಂದ ಹಾಗೇ ಬಿಟ್ಟೆ ನಂತರವೇ ಗೊತ್ತಾದದ್ದು ಹೀಗೂ ಒಂದು ವ್ಯವಸ್ಥಿತ ಸಂಚಿದೆ ಅಂತ..ಅದ್ರಲ್ಲೂ ತೇಜಸ್ವಿನಿಯವರ ಬ್ಲಾಗಲ್ಲಿ ಬಂದ ಲೇಖನವನ್ನ ನೋಡಿದ ಮೇಲೆ. ಧನ್ಯವಾದ ನಿಮ್ಮ ಆಗಮನಕ್ಕೆ

    ReplyDelete
  39. ಬಹಳ ಚೆನ್ನಾಗಿದೆ ಸರ್, ಇದು ಬ್ಲಾಗಲೋಕದ ವಾಸ್ತವ. ಕವನ ಆಡು ಭಾಷೆಯಲ್ಲಿ ಬಹಳ ರಂಜಿಸುತ್ತದೆ.

    ReplyDelete
  40. "ಹುಡ್ಗೀರ್ಸ್ನೇಹ ಆಗ್ತಾದಂದ್ರೆ ಹುಡುಗರ್ದೇ ಧಂದೆ"
    ತಗಳ್ಳಿ, ಗುಂಪಿಗೆ ಮತ್ತೊಬ್ಬ ಹುಡುಗ ಸೇರ್ಕಂಡ :)

    ReplyDelete
  41. ಭಾರದ್ವಾಜ್, ನಿಮ್ಮ ಬರೋಣದಿಂದ ನನ್ನ ಗೂಡು ಪಾವನವಾಯಿತು. ನಿಮ್ಮ ಅನಿಸಿಕೆ ಮತ್ತು ಪ್ರೋತ್ಸಾಹಾನೇ ಅಲ್ವಾ ನಮ್ಮ ಮುಂದುವರೆಯೋದಕ್ಕೆ ಪ್ರೇರಣೆ.

    ReplyDelete
  42. ಆನಂದ್ರೇ ಸ್ವಾಗತ ನಿಮಗೆ ನನ್ನ ಜಲನಯನಕ್ಕೆ...
    ನಿಮ್ಮಾತ್ನಾಗೆ ಆ ಪಾಟಿ ಸತ್ವ್ ಐತೆ..ಹುಡೀರ್ಗಿರು ... ಬರ್ತಾರಂದ್ರೆ..ಹುಡುಗ್ರೇ ತುಂಬೋದ್ರೇ..ಏನ್ ಮಾಡಾಕಾಯ್ತದೆ

    ReplyDelete
  43. ಬ್ಲಾಗ್ ಲೋಕದಲ್ಲಿ ಇಷ್ಟೊ೦ದು ಎಡವಟ್ಟುಗಳು ಆಗುತ್ತೇನು? ಜಲನಯನ ಸರ್.... ನಿಮ್ಮ ಕವನದ ಭಾಷೆ ತು೦ಬಾ ಚೆನ್ನಾಗಿದೆ....

    ReplyDelete
  44. ಸುಧೇಶ್, ಧನ್ಯವಾದ..ಎದವಟ್ಟುಗಳು ಎಲ್ಲಿ ಆಗೊಲ್ಲ..? ನೋಡು-ನೋಡುತ್ತಿರುವಾಗಲೇ ಆಗುತ್ತೆ...ಎಡ್ಡಿ ಎಡವಟ್ಟು ...ಹೇಗೆ?...
    ಹೌದು ಬ್ಲೊಗ್ ಲೋಕದ ಮಹಾನ್ ಎಡವಟ್ಟು ಹೇಗಾಯ್ತು ಅಂತ ತೇಜಸ್ವಿನಿಯವರು ಒಂದು ಲೇಖನದ ಮೂಲಕ ನಮಗೆಲ್ಲಾ ತಿಳಿಸಿದ್ರು.

    ReplyDelete
  45. nimma bhaasheyallina sogadu thumbaane chennagide sir...

    ReplyDelete
  46. Eesh, nimma protsaahakke dhanyavaadagalu, tappugalannu gurutisidare...hinjarike illade tilisi...ade..belyoke saadhana...
    thanks

    ReplyDelete
  47. ಹಹ್ಹಹ್ಹ ! ಭಲೇ ಮಜವಾಗಿದೆ. ಛೇ ! ನೀವು ವುಡ್ಗಿ ಅಲ್ವಾ ಅಂಗಾರೆ ?

    ReplyDelete
  48. ಸಪ್ತ ವರ್ಣರವರೇ, ನಿಮ್ಮ ರಂಗು ಬೇರಂಗಾಯ್ತಾ ನಾನು ಹುಡ್ಗಿ ಅಲ್ಲ ಅಂತ ಗೊತ್ತಾಗಿ...??!! ಹುಡ್ಗಿ ಆಗಿದ್ರೂ..ಐವತ್ತರ ಹುಡುಗೀ ಬಗ್ಗೆ ಯಾರಿಗೆ ಆಸಕ್ತಿ ಇರ್ತಿತ್ತು ಅಂತೀರಾ...ಹಹಹ
    ಬಹಳ ಧನ್ಯವಾದ ನನ್ನ ಬ್ಲೊಗ್ ಗೆ ಬಂದಿರಿ ಪ್ರತಿಕ್ರಿಯಿಸಿದಿರಿ...ಬರುತ್ತಿರಿ...(ಹುಡ್ಗಿ ಅಲ್ಲ ..ಮತ್ತೆ,...confusion ಬೇಡ..!!)

    ReplyDelete
  49. ನನ್ನ ಎಲ್ಲ ಬ್ಲಾಗ್ ಮಿತ್ರರಿಗೆ...ನನ್ನ ಹೃದಯಾಂತರಾಳದ ಧನ್ಯವಾದಗಳು...ಬಹುಶಃ ಎಲ್ಲರೂ ನನಗೆ ವೈಯಕ್ತಿಕ ಮಿಂಚೆ ಕಳುಹಿಸಿ ಹುಟ್ಟು ಹಬ್ಬ (ಅಂತಹುದೇನೂ ನಾನು ಆಚರಿಸುವುದಿಲ್ಲ ವಾದರೂ) ಕ್ಕೆ ಶುಭ ಕೋರಿದ್ದೀರಿ...ಬರುತ್ತಿರಿ ಅವಾ-ಗಮನ ಕ್ರಿಯೆ-ಪ್ರತಿಕ್ರಿಯೆ ನಡೆದಿರಲಿ....ನಮಸ್ತೆ.

    ReplyDelete