Saturday, August 25, 2018

ನಮ್ಮೂರಿನ ಬೀದಿಗೆ ಅರ್ಪಿತ..ಕವಿತೆ
*****************************
ಉದಯಗಳೆಷ್ಟೋ ಕಳೆದವಿಲ್ಲಿ
"ಶುಭೋದಯ"ಗಳ ಹಂಗಿಲ್ಲದೇ
ಓಣಿ ಬೀದಿಗಳ, ಮಣ್ಣು ಕೆಸರುಗಳ
ಅಣ್ಣ ತಮ್ಮ ಅಕ್ತಂಗೀರ ಒಡನಾಡಿ
ಮಂದಹಾಸಗಳೇ ಹಾರೈಕೆಗಳಾಗ
ಹಬ್ಬಹರಿಗಳ ಸಹಭೋಜನಗಳಲಿ
ರಂಜಾ಼ನಿಗೆ ರಂಜಿಸಿ, ದೀಪಾವಳಿ
ಗಣೇಶೋತ್ಸವಗಳಲಿ ಉಲ್ಲಸಿಸಿ
ಇರಲಿಲ್ಲ ಗೋಡೆಗಳು ನಡುವೆ
ಪರಸ್ಪರ ಬಾಂಧವ್ಯಗಳಾಗ ಒಡವೆ
ಯಾರಿಟ್ಟರೋ ಮೆಲ್ಲನೆ ಬೆಂಕಿ..
ಮನಗಳ ನಡುವೆಯ ಕಿಡಿಯನು
ಸದಾ ಉಜ್ವಲಿಸೋ ತುಪ್ಪವ ನೂಕಿ
ಬರಬೇಕಿದೆ ಹೊರ ಹೊರಟು ಇಂದು
ನವ ಸಂತತಿಯ ಮನಬೆಳಗೋ ಬಂಧು
ಮಾನವಪ್ರೀತಿ ನಿರಂತರ ಹರಿವನದಿ
ಹರಿವುದು ಅಡ್ಡತೊಡೆದು ಬೇರೆಬದಿ
ಶಾಶ್ವತವಲ್ಲ ಅಡೆತಡೆಗಳು, ನಮ್ಮಲಿ
ಮಾಯವಾಗದೇ ಇದ್ದರೆ ಅಪರೂಪದ
ಒಳ ಮಾನವತೆಯ ಆತ್ಮೀಯ ಉಲಿ.

1 comment:

  1. ಮೂರು ಆಯಾಮಗಳಲ್ಲಿ ಈ ಕಿರಿ ಕವನದ ವಿಶ್ಲೇಷಣೆ ಮಾಡಬಹುದು ಜನಾಬ್:

    ಮೊದಲಿಗೆ, ನೆಲವಾಗಿಲು ನೆಪದಲ್ಲಿ ನಮ್ಮ ನಮ್ಮ ಊರುಗಳಿಗೆ ಟೈಂ ಮಿಷನ್‌ನಲ್ಲಿ ಕೂಡಿಸಿ ನಮ್ಮ ಬಾಲ್ಯವನ್ನು ಮರುಕಳಿಸುವಂತೆ ಮಾಡಿದ ನಿಮಗೆ ಶರಣು.

    ಎರಡನೆಯದಾಗಿ, ಮಾನವೀಯ ಆತ್ಮೀಯ ಸಂಬಂಧಗಳು ಮತ ಜಾತಿ ಉಪಜಾತಿಗಳ ಆಚೆಗೂ ಕಟ್ಟಿಕೊಳ್ಳಬೇಕು ಎಂದು ತೋರಿಸಿಕೊಟ್ಟು ಮಾರ್ಗವನ್ನು ಹಾಕಿಕೊಟ್ಟ ಶ್ರೇಯಸ್ಸು ಕವಿ ಮನಸ್ಸಿನದು.

    ಮೂರನೆಯದಾಗಿ, ಊರು ಬಿಟ್ಟ ಮೇಲೆ ಊರನ್ನೇ ಮರೆತ ಮೆಟ್ಟಿಲು ಮುರುಕರಿಗೆ ಹೀಗೂ ಕಪೋಳ ಮೋಕ್ಷ ಮಾಡಿದ ಪರಿ.

    ಒಟ್ಟಾರೆ, ನೆಚ್ಚಿಗೆಯಾದ ಹೂರಣ...

    ReplyDelete