Tuesday, May 19, 2009

ಬಿಟಿಎಸ್-ಬಸ್ಸಿನಲ್ಲೊಮ್ಮೆ

ಸ್ನೇಹಿತರೇ,
ನನ್ನ ಭಾವ ಮಂಥನ ಬ್ಲಾಗಿನಲ್ಲಿ ಇದನ್ನ ಪೋಸ್ಟ್ ಮಾಡಿದ್ದೆ...ನನಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ, ಅರ್ಥವಾಗಲಿಲ್ಲ...ನನ್ನ ಲೇಖನದಲ್ಲಿ ಉಲ್ಲೇಖಿಸಿದ ವಿಷಯದ ಸಾಕ್ಷಾತ್ಕಾರ ಆಯ್ತೇ..??! ಒಂದು ಕ್ಷಣ ಚಿಂತೆ, ಮತ್ತೊಂದು ದಿನ ಆತಂಕ, ಹೀಗೇ..ಮುಂದುವರಿದು..ನನಗೆ ಏನೇನೋ ಅನುಮಾನಗಳು...ಮನಸ್ಸು ಒಪ್ಪಲಿಲ್ಲ..
ಈಗ ನನಗೆ ಕಾರಣ ಅರ್ಥವಾಗುತ್ತಿದೆ..ನನ್ನ ಈ ಬ್ಲಾಗನ್ನು ನೋಡಿದವರು ಬಹುಶಃ ಭಾವಮಂಥನವನ್ನು ನೋಡಿರಲಿಕ್ಕಿಲ್ಲ ..ಅಥ್ವಾ ನೋಡಿದ್ದರೂ...ಹಿಂದಕ್ಕೆ ಹೋಗಿರಲಿಕ್ಕಿಲ್ಲ ಅಂತ...ಅಥವಾ
ಹಾಗಂತ ಸಮಾಧಾನ ಮಾಡ್ಕೊಂಡು..ಇಲ್ಲಿ ಅದನ್ನೇ ಮತ್ತೆ ..ಗುಜರಾಯಿಸ್ತಾ ಇದ್ದೇನೆ...ಓದಿ..ಪ್ರತಿಕ್ರಿಯೆ ನೀಡಿದರೆ..ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಕನ್ನಡ ಪದಗಳನ್ನು ಕೇಳಿದಷ್ಟೇ ಆನಂದ ಆಗುತ್ತೆ ನನಗೆ....


ಬಹಳ ವರ್ಷಗಳ ನಂತರ ಬಿ.T.ಎಸ್ ನಲ್ಲಿ ಪ್ರಯಾಣ ಮಾಡೋ ಅವಕಾಶ ಕೂಡಿಬಂದಿತ್ತು. ಹಾಗೇ..ಈ ವರೆಗೆ ನನ್ನ ಸ್ನೇಹಿತರು ಹೇಳಿತ್ತಿದ್ದುದು ಅಕ್ಷರಶಃ ಸತ್ಯ ಅನ್ನೋದನ್ನು ತಿಳಿಯೋ ಅವಕಾಶ ಸಹಾ ಸಿಕ್ಕಿತ್ತು.
ಹತ್ತು ವರ್ಷಗಳಿಂದ ದೇಶದ ಪೂರ್ವೋತ್ತರ ಪ್ರಾಂತ್ಯದಲ್ಲಿ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದು ಈಗ ಒಂದು ವಾರದ ಹಿಂದೆ ಮದ್ರಾಸಿಗೆ ವರ್ಗವಾಗಿತ್ತು. ಆ ದಿವಸ ನನ್ನ ಸ್ಕೂಟರ್ ನನ್ನ ಗೆಳೆಯನೊಬ್ಬ ಕೆಲಸನಿಮಿತ್ತ ತೆಗೆದುಕೊಂಡು ಹೋಗಿದ್ದ, ಹಾಗಾಗಿ ಬಿ.ಟಿ.ಎಸ್ ನಲ್ಲಿ ಪ್ರಯಾಣಿಸುವ ಸದವಕಾಶ. ಸರಿ ಮೆಜೆಸ್ಟಿಕ್ಕಿಗೆ ಬಸ್ ಹತ್ತಿದೆ. ವಿಲ್ಸನ್ ಗಾರ್ಡನ್ ಬಳಿ ಬಂದಾಗ ಕಂಡಕ್ಟರಿಗೆ "ಮೆಜೆಸ್ಟಿಕ್" ಅಂತ ಹೇಳಿ ಹತ್ತರ ನೋಟು ಕೊಟ್ಟೆ. ಚಿಲ್ಲರೆ ಜೊತೆ ಟಿಕೆಟ್ ಕೊಟ್ಟರು ಕಂಡಕ್ಟರ್. ನನ್ನ ಮುಂದೆ ನಿಂತಿದ್ದ ಸಹ ಪ್ರಯಾಣಿಕನಿಗೆ ಕೇಳಿದೆ.."ಹಲೋ ಸರ್..ಈ ಬಸ್ಸು ಮಾರ್ಕೆಟ್ ಮಾರ್ಗ ಹೋಗುತ್ತಾ?"...ಆತ ಪಿಳಿ ಪಿಳಿ ಕಣ್ಣು ಬಿಟ್ಟ..ಬಹುಶಃ ಸರಿಯಾಗಿ ಕೇಳ್ಸಿರಲಿಕ್ಕಿಲ್ಲ ಅಂತ ಮತ್ತೆ ಕೇಳಿದೆ, ಮತ್ತದೇ ನಿರ್ಲಿಪ್ತ ಭಾವ...ಮತ್ತೆ..ಇಂಗ್ಲೀಷಿನಲ್ಲಿ ಕೇಳಿದೆ...ತಕ್ಷಣ.."ಯಾ..ಯಾ..ದಿಸ್ ಗೋಸ್ ವಯ ಮಾರ್ಕೆಟ್ ..ಬಟ್ ಯು ನೋ..ಐ ಡೋನ್ಟ್ ನೋ ಕನ್ನಡ" ಎಂದ..ನನಗೆ ಸ್ವಲ್ಪ ರೇಗಿತು..ಅಲ್ಲ ಇಂಗ್ಲೀಷಿನಲ್ಲಿ ಉತ್ತರ ಕೊಟ್ಟ..ಸರಿ..ಆದರೆ ನನಗೆ ಕನ್ನಡ ಬರೋದಿಲ್ಲ ಅಂತ..ರಾಜಾ ರೋಷವಾಗಿ ಅದೇ ಒಂದು qualification ಅನ್ನೋ ತರಹ ಹೇಳ್ತಿದ್ದಾನಲ್ಲ ಅಂತ. "ಮತ್ತೇನು ನೀವು ಇಂಗ್ಲೀಷಿನವರೇ...??" ಕೇಳಿದೆ..."pardon me..??" ನಾನು ಕೇಳಿದ ರೀತಿ ಮತ್ತು ನನ್ನ ಧಾಟಿಯಿಂದ ಅವನಿಗೆ ಅರ್ಥವಾದ್ರೂ ಆಗದವನಂತೆ..ಏನು ಹೇಳಿದ್ರಿ..? ಅನ್ನೋ ತರಹ ಕೇಳಿದ...ನನಗೂ ನನ್ನ ವರ್ತನೆ ಸರಿಯಿಲ್ಲ ಎನ್ನಿಸಿ.."I mean are you from north India..?" ಎಂದೆ. "ನೋ ಐಯಾಮ ಫ್ರಂ ಆಂಧ್ರ" ಎಂದ. "ಓ ಹಾಗೋ...ಎಷ್ಟು ವರ್ಷ ಆಯ್ತು ನೀವು ಬೆಂಗಳೂರಿಗೆ ಬಂದು..?" ಎಂದೆ. ಮತ್ತೆ ಪಿಳಿ..ಪಿಳಿ..ನಾನು ಮತ್ತೆ.."how long you are in Bangalore..?" ಅಂತ ಇಂಗ್ಲಾಂತರಿಸಿದೆ...ಅದಕ್ಕೆ ಆ ಮಹಾಶಯ.." last six years" ಎಂದ. "ಮತ್ತೆ ಅಲ್ಪ ಸ್ವಲ್ಪ ಕನ್ನಡ ಕಲಿತಿರಬೇಕಲ್ವಾ..?"..ಅವ ನನ್ನ ಮುಖ ನೋಡ್ದಾಗ ನನ್ನ ತಪ್ಪಿನ ಅರಿವಾಗಿ.."by now you must have learnt a little bit of Kannada.." ಎಂದೆ. " no..I dont feel it is necessary..every one here speaks English or Hindi" ಎಂದ. "ಎಲಾ ಇವನ..!! ಕನ್ನಡ ನಾಡಿನಲ್ಲಿ ಕನ್ನಡ ಕಲಿಯೋ ಅವಶ್ಯಕತೆ ಇಲ್ಲ ಅಂತ ಎಷ್ಟು ಧೀಟಾಗಿ ಹೇಳ್ತಾ ಇದ್ದಾನೆ..?"...ಎನ್ನಿಸಿ ನಾನು ಇನ್ನೇನೋ ಕೇಳೋ ಮೊದಲೇ..ಅವನ ಪಕ್ಕದಲ್ಲಿದ್ದಾತ (ಅವನ ಸ್ನೇಹಿತ ಅಂತ ಕಾಣುತ್ತೆ) .."ಇತನಿಕೇಮಂಟ ಮನಮು ಕನ್ನಡಂಲೋ ಮಾಟಲಾಡಲೇದನಿ ಕೋಪಮಾ..?"..ಅಂದ...ನನಗೆ ಪಿತ್ತ ನೆತ್ತಿಗೇರಿತ್ತು..."ಕಾದಂಡಿ..ಕರ್ನಾಟಕಮುಲೋ ವಾಸಿಂಚಿ..ಇಕ್ಕಡ ಉದ್ಯೋಗಂ ಚೇಸೇ ಮೀಕು..ಕನ್ನಡಂ ನೇರ್ಚುಕೋವಾಲಿ ಅನಿ ಅನಿಪಿಂಚಲೇದ..?" (ಆಲ್ರೀ..ಕರ್ನಾಟಕದಲ್ಲಿ ವಾಸಿಸಿ ಇಲ್ಲಿ ಉದ್ಯೋಗದಲ್ಲಿರೋ ನಿಮಗೆ ಕನ್ನಡ ಕಲಿಯಬೇಕು ಎನಿಸಿಲ್ಲವೇ..?) ಎಂದೆ. ನನ್ನ ತೆಲಗನ್ನು ಕೇಳಿ ಆತ ದಂಗಾದ ಅಂತ ಕಾಣುತ್ತೆ.." ಮೀಕು ಇಂತ ಬಾಗಾ ತೆಲುಗು ವಸ್ತುಂದೇ,,?? (ನಿಮಗೆ ಇಷ್ಟು ಚನ್ನಾಗಿ ತೆಲುಗು ಬರುತ್ತದಲ್ಲಾ)" ಅಂತ ಹುಬ್ಬೇರಿಸಿದ. ನಾನು ಕನ್ನಡದಲ್ಲೇ "ನಿಮ್ಮ ವಿಜಯವಾಡ ದಲ್ಲಿ ಕೆಲಸದ ಮೇಲೆ ಆರು ತಿಂಗಳು ಇರಬೇಕಾದಾಗ ಕಲಿತಿದ್ದೆ" ಎಂದೆ. ಅವನಿಗೆ ಆಶ್ಚರ್ಯ ವೆಂಬತೆ ಈ ಗ ನಾನು ಹೇಳಿದ್ದು ಅರ್ಥವಾಗಿತ್ತು. ನಮ್ಮ ಮಾತು ಆಲಿಸುತ್ತಿದ್ದ ಇನ್ನೊಬ್ಬ ಹಿರಿಯ ವಯಸ್ಸಿನವರು.."ಅದೇ ಸಾರ್ ನಾವು ಕನ್ನಡಿಗರು ಮಾಡೋ ತಪ್ಪು...ನಾವು ಬೇರೆಡೆ ಹೋದಾಗ ಅಲ್ಲಿನವರ ಜೊತೆ ವ್ಯವಹರಿಸಬೇಕಲ್ಲಾ ಅಂತ ಅವರ ಭಾಷೇನ ಕಲೀತೀವಿ..ಅದೇ ನಮ್ಮ ನಾಡಗೆ ಬರುವ ಬೇರೆ ಭಾಷಿಗರಿಗೆ ಆ ಭಾವನೆ ಬರುವಂತೆ ಮಾಡುವುದರಲ್ಲಿ ವಿಫಲರಾಗುತ್ತೇವೆ...ಈಗ ನಿಮ್ಮನ್ನೇ ತೆಗೆದುಕೊಳ್ಳಿ ...ಆತನಿಗೆ ಬರಲಿಲ್ಲ ಅಂತ ತೆಲಗಲ್ಲಿ ಸಂಭಾಷಿಸಿದಿರಿ...ಇವರಿಗೆ ಕನ್ನಡದ ಅವಶ್ಯಕತೆ ಎಲ್ಲಿ ಬರಬೇಕು ಹೇಳಿ ?..ಹೀಗೇನೇ ನಾವು ಪಂಚಭಾಷಿಗಳಾಗುತ್ತೇವೆ...ಬಹುತೇಕ ಕನ್ನಡಿಗರಿಗೆ ಹೊರಗಿನವನ ಜೊತೆ ಆಗಂತುಕ ಭಾಷೆಯಲ್ಲಿ ಮಾತನಾಡಿಸಿದರೆ ಆತ ಖುಷಿಪಡುತ್ತಾನೆ ಅಂತ ಅವರ ಭಾಷೆಯಲ್ಲೇ ವ್ಯವಹರಿಸುತ್ತೇವೆ, ಕನ್ನಡಿಗರೆಲ್ಲಾ ಹೀಗೇನೇ ಎಂದುಕೊಳ್ಳುವ ಹೊರಗಿನವರೂ ಇಲ್ಲಿಗೆ ಬರುವುದಕ್ಕೆ, ನೆಲಸುವುದಕ್ಕೆ, ವ್ಯವಹರಿಸುವುದಕ್ಕೆ ಹಿಂಜರಿಕೆಯಿರುವುದಿಲ್ಲ ಇದು ಒಂದು ರೀತಿ ಅಂತ್ಯ-ಹೀನ ವರ್ತುಲವಾಗುತ್ತೆ ..ಆ ವರ್ತುಲದಲ್ಲಿ ಕಳೆದು ಹೋಗುವುದು ಕನ್ನಡ...!!! ಇಂತಹ ವಾತಾವರಣದಲ್ಲಿ ಇಲ್ಲದಂತಾಗುವುದು ಕನ್ನಡಿಗರು...!! ಈ ದಿನ ಬೆಂಗಳೂರಿನಲ್ಲಿ ಕನ್ನಡಿಗರು ಶೇ. ೫೦-೬೦ ಮಾತ್ರ, ಅದರಲ್ಲಿ ಕನ್ನಡದಲ್ಲಿ ವ್ಯವಹರಿಸುವುದು ಶೇ. ೪೦-೫೦ ಮಾತ್ರ. ಯಾತಕ್ಕೆ ಹೇಳಿ..? ನಿಮ್ಮಂತಹ ಕನ್ನಡಿಗರೂ ವ್ಯವಹಾರದಲ್ಲಿ, ತಮ್ಮ ಮುಂದಿರುವವನಿಗೆ ಅನುಕೂಲವಾಗಲಿ ಅಂತ ಇತರ ಭಾಷೆನೇ ಬಳಸೋದರಿಂದ.. ಹಾಗಂತ ನಾವು ಕೆಲವು ಇತರ ಭಾಷಿಗರ ತರಹ ದುರಭಿಮಾನಿಗಳಗಬೇಕು ಎನ್ನುತ್ತಿಲ್ಲ.. ಆದರೆ ನಮ್ಮ ಭಾಷೆಯನ್ನು ಇತರರ ಮನಸೊಪ್ಪುವ ರೀತಿ ಅವರಿಗೆ ತೊಂದರೆಯಾಗದಂತೆ ಬೆಳೆಸುವುದರಲ್ಲಿ ತಪ್ಪೇನಿದೆ..? ನಾವು ಇತರ ದೇಶಕ್ಕೆ ಹೋದರೆ ಅಲ್ಲಿ ಅವರ ಭಾಷೆಯ ಪ್ರಾಥಮಿಕ ಹಂತದ ಪರಿಣಿತಿಯನ್ನು ಹೊಂದಬೇಕಂತೆ...ಇಲ್ಲಿ ..ಕಡೇ ಪಕ್ಷ ಕನ್ನಡದಲ್ಲಿ ಸಂಭಾಷಿಸಿದರೆ ಏನು ತಪ್ಪು..? ನಮ್ಮಲ್ಲೇ ಹುಳುಕಿದ್ದು..ಸರ್ಕಾರ..ಮತ್ತು ಇತರ ಭಾಷಿಗರನ್ನು ದೂರುವುದು ನಮಗೆ ಸಲ್ಲದು. ಕನ್ನಡಿಗರು ತಮ್ಮ ತಮ್ಮಲ್ಲಿಯೇ ಕನ್ನಡದಲ್ಲಿ ಮಾತನಾಡಿಕೊಳ್ಳುವರೇ..ಎಂದು ನನಗೆ ಸಂಶಯವಾಗುತ್ತದೆ..ಇನ್ನು ಬೇರೆಯವರನ್ನು ದೂರುವುದು ಸರಿಯಲ್ಲ.." ಹಿರಿಯರ ಈ ಸುದಿರ್ಘ ವಿಮರ್ಷೆ ಹಲವರಿಗೆ ಹಿಡಿಸಿತು..ಚಪ್ಪಾಳೆ ಸದ್ದು ಕೇಳಿ..ಅರೆರೆ..ಅಂದರೆ ಸುಮಾರು ಇಲ್ಲಿರುವ ಎಲ್ಲರಿಗೂ ಕನ್ನಡ ಬರುತ್ತೆ...ಮತ್ತೆ...ನಾನು ನನ್ನ ಸಹ ಪ್ರಯಾಣಿಕನೊಡನೆ ಮಾತನಾಡುವಾಗ ಇವರೆಲ್ಲ ಸುಮ್ಮನೆ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರಲ್ಲಾ..? ಅರ್ಥವಾಗಲಿಲ್ಲ!!!..ಏಕೆ ಕನ್ನಡಿಗರಿಗೆ ಈ ಕೀಳರಿಮೆ...ಎಂದು ಇವರಲ್ಲಿ ಭಾಷಾಭಿಮಾನ ಜಾಗೃತಗೊಳ್ಳುವುದು? ಕೆಲವೊಮ್ಮೆ ಪರಸ್ಪರ ಕನ್ನಡದವರೇ ಎಂದು ಗೊತ್ತಿದ್ದರೂ..ಬೇರೆಯವರ ಎದುರಲ್ಲಿ..ಮೂರನೇ ಭಾಷೆಯಲ್ಲಿ ವ್ಯವಹರಿಸುವುದಕ್ಕೆ ಕನ್ನಡಿಗರ ಈ ಕೀಳರಿಮೆ ಅಥವಾ ಸಂಕೋಚವೇ ಕಾರಣ ಎನ್ನಿಸುತ್ತದೆ. ನಮ್ಮನಮ್ಮಲ್ಲಿ ಹೆಮ್ಮೆಯಿಂದ ಕನ್ನಡದಲ್ಲಿ ವ್ಯವಹರಿಸುವ ಮೊದಲ ಪಾಠವನ್ನು ಕನ್ನಡಿಗರು ಮನನ ಮಾಡಿಕೊಳ್ಳಬೇಕು, ಇತರರೊಡನೆ ಮೊದಲಿಗೆ ಕನ್ನಡದಲ್ಲಿ ವ್ಯವಹರಿಸಿ, ಯಾರಿಗೆ ಗೊತ್ತು ಮುಂದಿರುವವರಿಗೆ ಕನ್ನಡ ಬರಬಹುದೇನೋ?..ಎಲ್ಲರೂ ಇದನ್ನು ಪರಿಪಾಲಿಸಿದರೆ ಬಹುಶಃ ಬೇರೆಭಾಷಿಗರು ಕನ್ನಡ ಕಲಿಯಲು ಮುಂದಾಗಬಹುದು..ಭಾಷೆ ಬೆಳೆಯುವುದು ಹೀಗೆ....

10 comments:

  1. ನಿಮ್ಮ ಅನುಭವ, ಬರಹದಲ್ಲಿ ಮೂಡಿದ ಬಗೆ, ಭಾಷೆ ಬಗ್ಗೆ ನಿಮಗಿರುವ ಕಾಳಜಿ ಎಲ್ಲವೂ ಚೆನ್ನಾಗಿ ಮೂಡಿ ಬ೦ದಿದೆ. ಇಲ್ಲಿ ತಪ್ಪು ನಮ್ಮದೇ. ನಾನು ಇ೦ತಹ ಅನೇಕ ಅನುಭವಗಳನ್ನು ಹೇಳಬಲ್ಲೆ, ಉತ್ತರಭಾರತದಿ೦ದ ಬ೦ದು ಇಲ್ಲಿ ಜಿಲೇಬಿ ಮಾರುವವ ನೊಬ್ಬ ಕನ್ನಡ ಕಲಿತಿರುತ್ತಾನೆ, ಆದರೆ ನಾವೇ ಬೇಕೆ೦ದೇ ಅವನಲ್ಲಿಗೆ ಹೋಗಿ, ದಸ್ ರುಪಯೇ ಕಾ ಜಲೇಬಿ ದೇನಾ ಅ೦ತ ಮಾತನಾ ಡಿಸುತ್ತೇವೆ. ನಿಮ್ಮ ಬರಹದ ಆಶಯ ಚೆನ್ನಾಗಿದೆ.

    ReplyDelete
  2. ಅಜಾದ್ ಸರ್,
    ನೀವು ಈ ಬರಹ ಮೂದಲೇ ಬಿತ್ತರಿಸಿದ್ದು ನನಗೆ ತಿಳಿದಿರಲಿಲ್ಲ ಕ್ಷಮಿಸಿ... ನೀವು ಅಂದು ಮಾಡಿದ ಕೆಲಸ ನಿಜಕ್ಕೊ ಮೆಚ್ಚಲೇ ಬೇಕು ಇದೆ ರೀತಿ ಒಬ್ಬರಿಂದೊಬ್ಬರು ಕೈಜೋಡಿಸಿದರೆ ಕನ್ನಡದ ಬಾವುಟ ಆಗಸದೆತ್ತರಕ್ಕೆ ಏರುವುದರಲ್ಲಿ ಸಂಶಯವೇ ಇಲ್ಲ...
    ನಿಮಗೆ ತಿಳಿದಹಾಗೆ ಇಲ್ಲು ಎಷ್ಟೋ ಜನ ಕನ್ನಡ ಬಾರದೆ ಆಂಗ್ಲಕ್ಕೆ ಮರುಳಾಗಿದ್ದಾರೆ... ನಾವು ಕನ್ನಡಿಗರೇ ಹೀಗಾದರೆ ಹೇಗೆ ಅಲ್ಪಸ್ವಲ್ಪ ಬದಲಾವಣೆಯನ್ನು ನಾವುಗಳು ತಿಳಿದವರೇ ಮಾಡಬೇಕಿದೆ.
    ನನ್ನ ಆಫೀಸಿನಲ್ಲಿ ಈಜಿಪ್ಟ್ ನವರಿಗೆ ಕನ್ನಡದ ಕೆಲವು ಮಾತು ಕಲಿಸಿದ್ದೇನೆ.... ದಿನ ಬೆಳ್ಳಿಗ್ಗೆ ನನಗೆ ಕನ್ನಡದಲ್ಲೇ ಶುಭಾಶಯ ತಿಳಿಸುತ್ತಾರೆ.
    ವಂದನೆಗಳು

    ReplyDelete
  3. ಆಜಾದ್ ಸರ್,

    ಕನ್ನಡ ಬಗೆಗಿನ ಕಾಳಜಿ ನಿಮ್ಮ ಬರಹದಲ್ಲಿ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ...ಮತ್ತೆ ಅದಕ್ಕಿಂತ ಸೊಗಸು ಎನಿಸಿದ್ದು ನೀವು ಬಸ್ಸಿನಲ್ಲಿ ನಡೆದ ಘಟನೆಯನ್ನು ಹಾಗೇ ಬರೆದಿರುವುದು. ಎಷ್ಟೇ ಅದರೂ ಅನುಭವಕ್ಕಿಂತ ಮಿಗಿಲಾದದ್ದು ಏನಿದೆ ಸರ್...

    ಧನ್ಯವಾದಗಳು.

    ReplyDelete
  4. ಪರಾಂಜಪೆಯವರ ಜಿಲೇಬಿವಾಲಾ, ಮನಸುರವರ ಕಛೇರಿಯ ಈಜಿಪ್ತ್ ನ ಕನ್ನಡ ಪ್ರೇಮಿ, ಹೀಗೆ..ನಮ್ಮ ಕೈಲಾದ ಕನ್ನಡಸೇವೆ ಕನ್ನಡೇತರರಲ್ಲಿ ನಮ್ಮ ಭಾಷೆಯ ಬಗ್ಗೆ ಒಲವು ಮೂಡುತ್ತದೆ, ಅದೇ ವೇಳೆ ನಮ್ಮವರ ಯೋಚನೆ ಮತ್ತು ಕ್ರಿಯೆಯ ಮೇಲೆ ಕುಳಿತಿರುವ ಧೂಳನ್ನೂ ಕೊಡವಬೇಕಾಗಿದೆ. ಶಿವು ಇನ್ನೊಂದು ಆತಂಕಕಾರಿ ಅಂಶ ಅಂದ್ರೆ..ಬೆಂಗಳೂರಿನ ಬೆಂ.ನ.ಸಾ ಬಸ್ಸುಗಳಲ್ಲಿ ಕನ್ನಡಶಬ್ದಗಳು ಅಪರೂಪವಾಗುತ್ತಿವೆ ಎನ್ನುವುದು..ಕನ್ನಡಿಗರೇ..ಬೇರೆ ಭಾಷೆಯಲ್ಲಿ ವ್ಯವಹರಿಸಿದರೆ..ಏನೂ ಮಾಡಲಿಕ್ಕಾಗದು..
    ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  5. ನಮ್ಮಲ್ಲಿ ಭಾಷಾಭಿಮಾನಕ್ಕಿಂತ ಭಾಷಾಂಧರೇ ಜಾಸ್ತಿಯಾಗಿಬಿಟ್ಟಿದ್ದಾರೆ ಸರ್..ಏನು ಮಾಡೋದು? ಕಾಳಜಿ ಪ್ರತಿಯೊಬ್ರರಲ್ಲೂ ಇರುತ್ತೆ..ಆದರೆ ಪಾಲಿಸೋರು ಬೆರಳಣಿಕೆಯಷ್ಟು ಮಂದಿ. ಇತ್ತೀಚೆಗೆ ನಮ್ಮ ಊರಿಂದ ಬಂದ ಅಣ್ಣ ಜೊತೆ ಬಸ್ಸಲ್ಲಿ ಹೋಗುತ್ತಿರಬೇಕಾದ್ರೆ ಅಚ್ಚ ಕನ್ನಡ ಬರೋ ನಿರ್ವಾಹಕನೊಬ್ಬ ಅಣ್ನ ಜೊತೆ ಹಿಂದಿಯಲ್ಲಿ ಕ್ಯಾತೆ ತೆಗೆದ..ಅಣ್ಣನನ್ನು ಪಕ್ಕಕ್ಕೆ ನಿಲ್ಲಿಸಿ ನೆಟ್ಟಗೆ ಕನ್ನಡದಲ್ಲಿ ಮಾತಾಡು ಅಂತ ಹಿಗ್ಗಾ-ಮುಗ್ಗಾ ಜಾಡಿಸಿಬಿಟ್ಟಿದ್ದೀನಿ. ಇವರಿಗೇನು ಕನ್ನಡ ಮಾತಾಡೋಕೆ ನಾಚಿಕೆನಾ? ಊರೆಲ್ಲಿ ಅಂತ ಕೇಳಿದ್ರೆ ದಾವಣಗೆರೆ ಅಂತಾನೆ..ಆ ಭೂಪ! ಚೆನ್ನಾಗಿದೆ ನಿಮ್ಮ ಬರಹ..
    -ಧರಿತ್ರಿ

    ReplyDelete
  6. ಧರಿತ್ರಿ, ಹೇಗೆ ವ್ಯಾಖ್ಯಾನಿಸಿದರೂ...ಮಾತು ಬಂದು ನಿಲ್ಲೋದು ನಮ್ಮಲ್ಲಿಗೇ...ನಿಜವಾಗಿಯೂ ನಮ್ಮವರಲ್ಲಿ ತೋರಿಕೆ ಅಭಿಮಾನ ಹೆಚ್ಚಾಗುತ್ತಿದೆ..ನಿಜಕಾಳಜಿ, ನಡೆದು-ನುಡಿ (ನುಡಿದು-ನಡೆಗಿಂತ) ಬರಬೇಕು. ಕನ್ನಡದ ಅಸ್ತಿತ್ವವನ್ನು ಎತ್ತಿಹಿಡಿಯುವ ಮತ್ತು ಇತರ ಭಾಷಿಗರನ್ನು ಆಕರ್ಷಿಸುವ ಕಾರ್ಯ ನಡೆಯಬೇಕಿದೆ. ಉದಾ. ಅಂತರರಾಜ್ಯ ಸಾರಿಗೆ ಬಿಡಿ ನಮ್ಮ ಆಂತರಿಕ ಸಾರಿಗೆ ವ್ಯವಸ್ಥೆಯಲ್ಲೂ ಕನ್ನಡದ ಛಾಪೇ ಇಲ್ಲದಂತಾಗಿದೆ...ಕನ್ನಡಪರ ಚಿಂತನೆ ಕೇವಲ ...ನವಂ-ಬರ ಆಗಿದೆ..ಬೇರೆ ಸಮಯದಲ್ಲಿ ಕನ್ನಡಕ್ಕೆ ಬರ....ಅಲ್ಲವೇ...
    ಧನ್ಯವಾದಗಳು..ಪ್ರತಿಕ್ರಿಯೆಗೆ...

    ReplyDelete
  7. ಅಭಿಮಾನ ದುರಭಿಮಾನದ ನಡುವಿರುವ ತೆಳುಗೆರೆಯನ್ನು ಚೆನ್ನಾಗಿ ವಿವರಿಸಿದ್ದೀರಿ

    ReplyDelete
  8. ಒಮ್ಮೆ ನಾನು ಹುಬ್ಬಳ್ಳಿಯ ಟ್ರೇನಿನಲ್ಲಿ ಕೂತಾಗ, ಅಲ್ಲಿಯೇ ರೇಲವೇದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ತೆಲಗರವನನ್ನು ನೋಡಿದೆ. ಆತ ಹುಬ್ಬಳ್ಳಿಯಲ್ಲಿದ್ದುಕೊಂಡು
    ಮರಾಠಿ ಭಾಷೆ ಕಲಿತಿದ್ದ, ಆದರೆ ಆತನಿಗೆ ಕನ್ನಡ ಬರುತ್ತಿರಲಿಲ್ಲ!

    ReplyDelete
  9. ಪ್ರಭು ಅಭಿಮಾನಕ್ಕೂ ದುರಭಿಮಾನಕ್ಕೂ ತೆಳುಗೆರೆ ಇರುವುದಂತೂ ದಿಟ. ಇದನ್ನು ಅರಿತು ಭಾಷೆಯನ್ನು ಬೆಳೆಸುವುದು ನಮ್ಮ ಕರ್ತವ್ಯ.
    ಸುನಾಥ್ ಸರ್, ಅದಕೇ ಏನೋ ನಮ್ಮ ಗಡಿನಾಡಲಿ ನಾವು ಅವರಭಾಷೆ ಕಲೀತೇವೆ ಅವರನ್ನು ಕನ್ನಡಕ್ಕೆ ತರುವಲ್ಲಿ ವಿಫಲರಾಗಿದ್ದೇವೆ..ಕೋಲಾರದಲ್ಲಿ ತೆಲುಗು ಮತ್ತು ತಮಿಳು, ರಾಯಚೂರಿನಲ್ಲಿ ತೆಲುಗು, ಬಿಜಾಪುರ ಮರಾಠಿ, ಹೀಗೆ. ನಮ್ಮವರೇ ಪರಸ್ಪರ ಕನ್ನಡದಲ್ಲಿ ವ್ಯವಹರಿಸಿದರೆ ಮೊದಲಿಗೆ...ಕನ್ನಡಾಂಬೆ ಧನ್ಯೆ ಎಂದುಕೊಂಡಿದ್ದೇನೆ.

    ReplyDelete
  10. ತುಂಬಾ ಒಳ್ಳೆಯ ಬರಹ ಆಜಾದ್ ಅವರೆ. ನಿಜ ನಮ್ಮಗಳ ಆತಿಥ್ಯ ಭಾವವನ್ನು ಅನ್ಯಭಾಷಿಗರು ತಮ್ಮ ಗರಿಮೆ ಅಂತ ತಿಳಿದು,ನಮ್ಮ ನಾಡಲ್ಲೆ ಇದ್ದರೂ ನಮ್ಮ ಭಾಷೆ ಕಡೆ ವಿಚಿತ್ರ ತಾತ್ಸಾರ ಬೆಳಸಿಕೊಂಡು ಬಿಡುತ್ತಾರೆ.

    ReplyDelete