Sunday, May 29, 2011

ಚಿತ್ರ ಕೃಪೆ: ಅಂತರ್ಜಾಲ

ಹೆಂಡ್ತಿ – ಪ್ರೇಯಸಿ

ಹೆಂಡ್ತಿ ಟೀವಿ ಇದ್ದಂಗೆ..
ಸ್ಟೇಸನ್ನು ಬತ್ತೈತೆ ಅದ್ರ ಜನ್ಕ ಆಕ್ದಂಗೆ
ಒಂದ್ವಿಸ್ಯ ಯೋಳಾಕೆ ಸುತ್ತು ಬಳ್ಸು
ಮದ್ ಮದ್ಯೆ ಜಾಯೀರಾತು ಹಳ್ಸು
ಅತ್ ನಿಮ್ಸದ್ ಕತೆ ..ಎಳಿತಾನೇ ಇರ್ತಾರೆ
ಅತ್ ವರ್ಸ ಆದ್ರೂ ಮುಗಿಯೊಲ್ಲ ಅಂತಾರೆ

ಆದ್ರೆ ,..ಅವ್ಳು ಪ್ರೇಯ್ಸಿ.. ಬಿಡಿ ಕೇಳ್ ಬ್ಯಾಡಿ!
ಎಂಗಿದ್ರೂ ಏನಂದ್ರೂ ಮಾಡ್ತಾಳೆ ಮೋಡಿ
ಮುಂಚೆ ದುಡ್ಡಿರೋರ್ಗೆ ಸಿಗ್ತಿತ್ತು ಆ ಗತ್ತು
ಈವಾಗ ಎಲ್ಲಾರ್ಗೂ ಮೊಬೈಲ್ ದೇ ಮತ್ತು
ಅವ್ಳೂ ಅಂಗೆಯಾ ಮೊಬೈಲ್ ಇದ್ದಂಗೆ
ನೋಕಿಯಾ, ಎಲ್ಜಿ, ಸಾಮ್ಸಂಗ್ ಎಚ್ ಟಿ ಸಿ ಓಗಿ
ಬೆಳ್ಳಾಗೇ ಆಡ್ಸೋ ಐ ಪೋನ್ ಬಂದಂಗೆ


Monday, May 16, 2011

ಪರದೇಸಿ



ಪರದೇಸಿ
(ಎಕ್ ಪರದೇಸಿ ಮೇರಾ ದಿಲ್ ಲೇಗಯಾ...ಜಾತೆ ಜಾತೆ....ಶೈಲಿ)

ಒಬ್ಬ ಪರದೇಸಿ ನನ್ನ ಹೃದಯ ಕದ್ದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾ ಕೊಟ್ಟನು/೨/
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//

ನನ್ನ ಪರದೇಸಿಯ ಪರಿಯನೆಂತು ಹೇಳಲಿ
ವಜ್ರದಂಥ ದೇಹ ಅವನ್ದು ಮಿಂಚು ಅವನ ಕಣ್ಣಲಿ
ನನ್ನ ಚಿತ್ತ ಬುದ್ಧಿಯನ್ನು ಕೊಂಡು ಹೋದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾ ಕೊಟ್ಟನು
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//

ನಿನ್ನ ಕನಸ ಹೊತ್ತು ಎಷ್ಟೋ ಜನ ಹುಚ್ಚರಾದ್ರು
ಕೊಟ್ಟು ಬಿಡು ದರುಶನ ಬಂದು ಒಮ್ಮೆಯಾದ್ರೂ
ನಯನದ ಪ್ರಕಾಶ ಅವನೇ ಕದ್ದು ಹೋದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾಕೊಟ್ಟನು..
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//

ಕರೆದು ನಿಲಿಸಲೇ ನಿನ್ನ ಕಣ್ಣ ಮುಂದೆ ಅವನಾ
ನಿಲ್ಸಿದರೆ ಮುಂದೆ ನಿನ್ನ ಕೊಡುವೆಯಾ ಬಹುಮಾನ್
ಬಹುಮಾನ ಏನ ಕೊಡಲಿ ಎಲ್ಲಾ ಕದ್ದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾ ಕೊಟ್ಟನು
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//

Sunday, May 1, 2011

ಈ ನನ ಹೃದಯ


ಸ್ನೇಹಿತರೇ, ಈ ದೇವಾನಂದ್ ಹಾಡು ಬಹಳ ಹಿಡಿಸಿದ ಇನ್ನೊಂದು ಗೀತೆ...ಇದರ ಭಾವಾನುವಾದದ ಕರವೋಕೆ..ನಿಮಗಾಗಿ...ನಿಮ್ಮ ಅಭಿಪ್ರಾಯಕ್ಕೆ ಕಾಯ್ತೇನೆ....ಓಕೆ...??!!


ಈ ನನ ಹೃದಯ

ಈ ನನ ಹೃದಯಾ
ತಪ್ಪಿದೆ ಹಳಿಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//

ಚೆಲುವೆಯ ಕಂಡು ಗೆಳೆಯಾ
ನೀಡದೇ ಒಂದೂ ಸುಳಿಯಾ
ತಪ್ಪಿಸಿತದು ಬಡಿತಾ ಎದೆಯಲಿ ತುಡಿತಾ//೨//
ಬಲು ಮುಗ್ಧಾ ಈ ನನ ಹೃದಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//

ಇದೊಂದು ಹುಚ್ಚು ಕುದುರೆ
ಕುಣಿಯುತ್ತೆ ಆಗಿ ಚಿಗುರೆ
ತಾನೇ ಮರೆಯುತಾ ನನ್ನನ್ನೇ ಮರೆಸುತ್ತೆ//೨//
ಈ ಹುಚ್ಚಿಗೆ ಔಷಧಿ ಏನಯ್ಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//

ಮನಸೆಲ್ಲಿ ಕೇಳುತ್ತೆ
ನೋಡಿದ್ದು ಬೇಡುತ್ತೆ
ಕಂಡದ್ದೆಲ್ಲಾ ತನಗೇ ಬೇಕೆಂದು ಬಯಸುತ್ತೆ //೨//
ಮನಸಿನ ಮಾತಾ, ನೀ ಕೇಳಬೇಡಯ್ಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//

ಸೇರಿದ್ರೆ ಎರಡು ಹೃದಯ
ಆಗುತ್ತೆ ಅಲ್ಲೇ ಪ್ರಳಯ
ಇನ್ನೆಲ್ಲಿ ನನ ಹೃದಯ ಹಾಳಾದೆ ಗೆಳೆಯಾ //೨//
ಮನಸಿನ ಮನಸು ಮನಸಿಗೆ ಗೊತ್ತು
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//

Wednesday, April 27, 2011

(ಚಿತ್ರ ಕೃಪೆ: ಇಟ್ಟಿಗೆ ಸಿಮೆಂಟ್)

ಬಾ ಹೂಬನಕೆ ಇನಿಯಾ


ಮುಳ್ಳು ಹರಿತೆಲೆಯ ತಲೆ

ಚುಚ್ಚುವುದು ಬಂದರೆ

ಅನುಮತಿಯಿಲ್ಲದಲೇ

ನಾಜೂಕು ಕಾಂಡ

ಮುಳ್ಳಿದ್ದರೂ ಭ್ರಮರ ಭಂಡ

ನುಸುಳುವುದು ಮಕರಂದಕಾಗಿ

ಹೆದರಿದ ಪತಂಗ ನೋಡುತಿರೆ ಮಂಕಾಗಿ

ಭರ ಭ್ರಮರದ ಸಂಭ್ರಮ,

ನಾಚಿದ ಕೆಂದುಟಿ ತೆರೆದ ಸುಮ

ಇನ್ನೂ ಮುಚ್ಚಿದ ಗರಿ ಬಿಚ್ಚದ ಮೊಗ್ಗು

ನೋಡುತಿದೆ ಅಳೆದಳೆದು

ಕಳೆದುಕೊಂಡರೂ ಗಳಿಸಿದ ತನ್ನಕ್ಕನ

ಗಳಿಸಿದರೂ ಕಳಕೊಂಡ ಭ್ರಮರನ

ನಸುನಕ್ಕು ಅರಿತಂತೆ ಓಲಾಡಿಸಿ ತಲೆ

ಕಾಯುತಿದೆ ಮತ್ತೆ ಬರುವ ರವಿಗಾಗಿ

ರವಿತರುವ ಪುಳಕ ಸುಳಿವ ಋತುಗಾಗಿ

ಆ ಕಿರಣದಾಗಮನ ಭೃಂಗಸಂಗಕಾಗಿ

Thursday, April 14, 2011

ಎರಡು- ಕವನಗಳು

(ಚಿತ್ರ ಕೃಪೆ: ಅಂತರ್ಜಾಲ)

ಅಮ್ಮ


ಅಮ್ಮನಾಗೋ ಆಸೆ ಹೆಣ್ಣಾದ ಎಲ್ಲರಿಗಿರುತ್ತೆ
ಕರುಳ ಬಳ್ಳಿ ಬೆಳಸೋ ಬಯಕೆ ಎಲ್ಲರಿಗಿರುತ್ತೆ
ಅದಕೆ ಚಿಗುರೊಡೆಸೋ, ಆಧರಿಸೋ, ಅದಮ್ಯ
ವಾಂಛೆ, ಮುದ್ದು ಮಳೆಗರೆಯೋ ಮನಸು,
ಬಿದ್ದರೆತ್ತೋ ಕಾಳಜಿ, ಎತ್ತಿ ಮುದ್ದಾಡೋ ಸೊಗಸು,
ನೊಂದರೆ ತಾನಳುವ, ನಕ್ಕರೆ ತಾನಗುವ
ಸಲಹುವಳಲ್ಲ ಸದಾ ತಾಯಿ ತನ್ಮಗುವ?


ನಿರೀಕ್ಷೆ

ನಿರಾಸೆ ಬರಡು ಬಿತ್ತು..ಬೆಳೆಯಲಾಗಲಿಲ್ಲ ತುತ್ತು
ಉಸಿರಾಡುತಿವೆ ಜೀವ ಇದ್ದಂತೆ ಬಿದ್ದಲ್ಲೇ ಸತ್ತು
ಧರೆಗೂ ಬೇಕಿದೆ, ಒಣಗುವ ಬೆಳೆಗೂ ಬೇಕು, ಹನಿ
ಅವಳ ಬಾಳಲೂ ಏಕೋ ಬರಡು, ಇಲ್ಲ ಶಿಶುದನಿ
ಹರಕೆಗಳೆಷ್ಟೋ, ಧಾಮ-ಪುನಸ್ಕಾರಕ್ಕೆ ಕೊನೆಯಿಲ್ಲ
ಎನಿಸತೊಡಗಿದಾಗ ಜೀವನದಿ, ಭರವಸೆ ಇನ್ನಿಲ್ಲ
ಮೋಡ ಕಪ್ಪಿಟ್ಟಿತು, ಭಾರವಾಯಿತು ತಡೆಯಲಾರದೆ
ಹನಿಯಿತು, ಸುರಿಸಿತು, ಧರೆಗಿಳಿಯಿತು ಇನ್ನಿರಲಾಗದೆ.








Saturday, April 2, 2011

ಭಾರತಕ್ಕೆ ವಿಶ್ವಕಪ್ ಕ್ರಿಕೆಟ್ ಕಿರೀಟ

ಭಾರತಕ್ಕೆ ವಿಶ್ವಕಪ್ ಕ್ರಿಕೆಟ್ ಕಿರೀಟ

ಕಪಿಲವಾಹಿನಿಯ ರಭಸ ಅಂದು
ವಿಶ್ವ ಕ್ರಿಕೆಟ್ ಮಕುಟವ ತಂದು
ಇಪ್ಪತ್ತೆಂಟು ವರ್ಷದ ನಂತರ
ದೋಣಿಯ ನಾಯಕ ನಾವಿಕನಾಗಿ
ಭರತದ ಹರುಷ ಮರುಮಕುಟವು ಇಂದು

ಜ಼ಹೀರ ಮುನಾಫರ ಪ್ರಾರಂಭಿಕ ಬಿಗಿತ
ಕರಾರುವಾಕ್ ಭಜ್ಜಿ ಯುವಿ ಎಸೆತ
ಮಾಡಲು ಅಧಿಕ ಲಂಕನ್ನರ ತುಡಿತ
ತಡೆದರು ಫೀಲ್ಡರುಗಳು ಪ್ರತಿ ಹೊಡೆತ
ಏಕಮಾತ್ರ ಜಯವರ್ಧನೆ ಸೆಂಚುರಿ ಜಿಗಿತ

ಇನ್ನೂರ ಎಪ್ಪತ್ತೈದರ ಗುರಿ ಸವಾಲು
ಸೆಹ್ವಾಗ್ ಸಚಿನ್ ಆಗದೆ ರನ್ ಮಾಡಲು
ವಿರಾಟ ತನ್ನಾಟ ಗಂಭೀರನ ಕಮಾಲು
ಸಾಗತೊಡಗಿತು ದೋಣಿ ತೀರ ಸೇರಲು
ಮೆಲ್ಲ ಮೆಲ್ಲನೆ ತನ್ನಂತಿಮ ಗುರಿ ತಲುಪಲು

ವಿರಾಟನಾಟದ ನಂತರ ನಾಯಕನಾಗಮನ
ಶತಕದ ಬಳಿ ಎಡವಿತು ಗಂಭೀರನ ತನನ
ತನ್ನೆಲ್ಲ ಶಕ್ತಿಯ ಮೆರೆದಿದ್ದ ಯುವಿಯಾಗಮನ
ಹೆಜ್ಜೆ ಹೆಜ್ಜೆಗೂ ಪ್ರತಿ ರನ್ನಿಗೂ ಎಂಥ ಸಂಚಲನ
ಸಂಗಕಾರ ತನ್ನವರೊಂದಿಗೆ ನಡೆಸಲು ಚಿಂತನ

೪೬ ರಲ್ಲಿ ಮಾಲಿಂಗ ಕೊಟ್ಟದ್ದು ಕೇವಲ ೩ ರನ್ನು
ಮುರಳಿಗಲ್ಲ ೪೭ ಸಿಕ್ತು ನಮ್ಮವರಿಗೆ ಕುಲಶೇಖರ ಬನ್ನು
ಯುವಿ ಧೋನಿ ಜಡಿದರು ಒಟ್ಟು ೧೧ ಅಮೂಲ್ಯ ರನ್ನು
ಮಾಲಿಂಗನನ್ನೂ ಬಿಡಲಿಲ್ಲ ೪೮ ರಲ್ಲಿ ಮತ್ತೆ ೧೧ ರನ್ನು
ಬೇಕಿತ್ತು ೫ ಧೋನಿ ಬಾರಿಸಿದ ಸಿಕ್ಸು ಗಳಿಸಿತು ವಿಶ್ವಕಪ್ಪನ್ನು

Monday, March 28, 2011

ಚುನಾವಣೆ


ಚುನಾವಣೆ ಬಂತಂದ್ರೆ ಚನ್ಪಟ್ಣ ಜನ ಖುಶೋ ಖುಶ್ಶು

ಮಾರ ಬೀರ ಎಂಕ ಮಂಕ ಬಾರಲ್ಕುಂತ್ರೆ ನೀರೋ ನೀರು

ಅಕ್ಕಮ್ಮ, ರುಕ್ಕಮ್ಮ, ಶಾರದಕ್ಕ ಸುಬ್ಬಿರ ಬೀರೋ ತುಂಬಿ ಸ್ಯಾಲೆ

ಕಂಠಿ, ಬಂಟಿ, ನಾಣಿ, ಶಾರಿ ಓಗ್ತಾರೆ ತೆಗದ್ರೆ ಮೇಷ್ಟ್ರೇ ಬರದ ಶಾಲೆ



ದುಡ್ಡು ಬೇಕು ಮಾಡ್ಕೋ ಬೇಕು ಹ್ಯಾಂಗಾರಾ ಆಗ್ಲಿ

ದುಡ್ಕೋ ಬೇಕು ಸುಲ್ಕೋ ಬೇಕು ಹ್ಯಾಂಗಾರಾ ಆಗ್ಲಿ

ಮ್ಯಾಲ್ಕುಂತವ್ರಿಗೆ ಬ್ಯಾರೆ ಕಡೆ ಗೆಲ್ಬೇಕು ಹ್ಯಾಂಗಾರಾ ಆಗ್ಲಿ

ಎಲ್ಲಾರೂ ಒಂದೇ !! ನ್ಯಾಯ ನೀತಿ ಹಂಗಿರ್ಲಿ ಹ್ಯಾಂಗಾರಾ ಆಗ್ಲಿ



ಜನ ಬೋ ಮುಗ್ದರು ಆರಿಸ್ತಾರೆ ನಾಯ್ಕ ನಮ್ಮನ್ನೆಲ್ಲ ಕಾಯ್ತಾನೆ ಅಂತ

ಗೆದ್ ಮ್ಯಾಲೆ ಬರ್ತಾನೆ ನಮ್ ಸಮಸ್ಯೇನಾ ಕಿವಿ ಕೊಟ್ ಕೇಳ್ತಾನೆ ಅಂತ

ಎಲ್ಲಾ ಖುಶಿ ಪಡ್ತಾರೆ ಬಂದ ನಮ್ ನಾಯ್ಕ ನಮ್ ಅಹ್ವಾಲು ಕೇಳಾಕೆ ಅಂತ

ಜಗ್ಲಿ ಅಜ್ಜ ನಗ್ತಾನೆ ಮೀಸೇಲೇ..ಗೊತ್ತವಂಗೆ ನಾಯ್ಕ ಬಂದಿದ್ದು ಓಟ್ ಕೇಳಾಕಂತ



ನಾಯಕನ್ನ ಗೆಲ್ಸಿದ್ರು ಓದ್ದಪಾ ಕಿತ್ತಾಡ್ಕೊಂಡು ತಮ್ತಮ್ಮಲ್ಲೇ ಜನ

ಮರ್ತೇ ಬಿಡ್ತಾರೆ ಕಿತ್ತಾಡಿದ್ದನ್ನ, ಒಂದಾಗ್ತಾರೆ ನಡೆದೈತೆ ಇಂಗೇ ಜೀವನ

ಕಿತ್ತಾಡಿದ್ದ ಮರೆಯೋಕೆ ಬಿಡೊಲ್ರು ಈ ನಾಯಕ್ರು ಪಾರ್ಟಿ ಬದ್ಲಾಯಿಸೋದು

ತರ್ತಾರೆ ಬೈ ಎಲಕ್ಸನ್ನು ಈವಾಗ ಅಳ್ಳಿಲಿ ಶಾಸ್ವತ ಒಬ್ರನ್ನೊಬ್ರು ಗುರಾಯ್ಸೋದು