Thursday, February 25, 2010

ಒಂದು ತುಂಬಿತು



ಗೆಳೆಯರೇ, ತುಂಬು ಹೃದಯದ ಆಭಾರಗಳನ್ನು ಈ ದಿನ ನನ್ನ ಬ್ಲಾಗ್ ಜಗತ್ತಿನ ಒಂದು ವರ್ಷ ತುಂಬಿದ ಸಮಯದಲ್ಲಿ ಈ ಮೂಲಕ ಅರ್ಪಿಸುವುದು ನನ್ನ ಆದ್ಯ ಕರ್ತವ್ಯ....ಹುಡುಗಿಯಾಗಿ..ಕೆಲವರು ನನ್ನಲ್ಲಿ love ಕಂಡರೆ..ಸ್ನೇಹಿತೆಯಾಗಿ ಕೆಲವರು...ಮಿತ್ರನನ್ನು ಕೆಲವರು ಗುತಿಸಿದರೆ..ಸಹಬ್ಲಾಗಿಯನ್ನು ಮತ್ತೆ ಹಲವರು..ಎಲ್ಲರದೂ ಆಪ್ಯಾಯತೆ, ಅಭಿಮಾನ, ತುಂಬು ಮನಸ್ಸಿನ ಹಾರೈಕೆ, ಆಶೀರ್ವಾದ, ಪ್ರೋತ್ಸಾಹ...ಪದಗಳ ಅಭಾವ ಕಾಡುತ್ತೆ ನಿಮ್ಮ ಆತ್ಮೀಯತೆಯ ಮುಂದೆ.

ನನ್ನನ್ನು ಈ ಲೋಕಕ್ಕೆ ಪರಿಚಯಿಸಿದವರು ನನ್ನ ಸ್ನೇಹಿತೆ-ಸ್ನೇಹಿತ ದಂಪತಿಗಳು, (ಮೃದುಮನಸು-ಸವಿಗನಸು). ಅವರಿಗೆ ಮೊದಲ ನಮನ...ಸವಿಗನಸನ್ನು ಕಾಣಲು ಪುಸಲಾಯಿಸಿದ್ದು ಮೊದಲಿಗೆ ನಾನೇ ಎನ್ನುವುದು ಬೇರೆ ವಿಷಯ...ಹಹಹ...

ಕೆಲವರು ಪ್ರತಿಕ್ರಿಯೆಯಲ್ಲಿ ಮೇಡಮ್ ಜಲನಯನವ್ರೇ ತುಂಬಾ ಚನ್ನಾಗಿ ಬರೀತೀರಿ..ಎಂದಾಗ ...ನಾನು ಮೊದಲಿಗೆ ನಾಟಕದಲ್ಲಿ ಹೆಣ್ಣಿನ ಪಾತ್ರ ಮಾಡಿದ್ದು ನೆನಪಾಗಿ ನಾಚಿಕೊಂಡೆ ಬೆಪ್ಪಾಗಿ...ಹಹಹ...ಆಮೇಲೆ..ನಡೆದದ್ದನ್ನು ಒಂದು ನನ್ನ ಬ್ಲಾಗಿನಲ್ಲಿ ನಿಮಗೆ ತಿಳಿಸಿದ್ದೇನೆ...
ಶಿವು, ಪ್ರಕಾಶ, ಡಾ. ಗುರು, ಸುನಾಥ್ ಸರ್, ಸೀತಾರಾಂ, ದಿನಕರ್ ಮೊಗೇರ್, ಶಿವಪ್ರಕಾಶ್, ಶಿವಶಂಕರ್ ಎಳವತ್ತಿ, ಮಹೇಶ್, ಹೀಗೆ ಇನ್ನೂ ಅತ್ಮೀಯ ಹಲವರು ಆ ಮೊದಲ ದಿನಗಳಿಂದಲೇ ನನ್ನೊಂದಿಗಿದ್ದರೆ..ನನ್ನನ್ನು ಅಣ್ಣನೆಂದು ಕರೆಯುವ ಮಮತೆಯ ತಂಗಿಯರು ಚಿತ್ರಾ, ರಂಜಿತಾ, ವಿದ್ಯಾ(ಇಬ್ಬರಿದ್ದಾರೆ), ರಂಜನಾ, ರೂಪಶ್ರೀ, ಚೇತನ, ...ಹೀಗೇ... ಇನ್ನು ಪ್ರಬುದ್ಧ ಸಲಹೆ-ವಿನಿಮಯಗಳಿಗೆ...ಯಾವಾಗಲೂ ನನ್ನ ಬ್ಲಾಗಿನೊಂದಿಗೆ ಒಂದಾದವರು - ತೇಜಸ್ವಿನಿ, ಚಿತ್ರಾ, ಸುಮ, ಸುಮನ, ಚುಕ್ಕಿಚಿತ್ತಾರ, ರೂಪ, ರೂಪश्री, ಮನಸಾರೆ, ಮಾಲತಿ, ಆಕಾಶ ಬುಟ್ಟಿ, ...ಎಲ್ಲರನ್ನೂ ಹೆಸರಿಸಲು ಆಗ್ತಿಲ್ಲ...ಎಲ್ಲರೂ ಸಮಭಾಗಿಗಳು...


ನನ್ನ ಬ್ಲಾಗ್ ಜೀವನದ ತಿರುವು..ಬಹಳ ಭಾವುಕ ಎನ್ನಬಹುದ್ದಾದ್ದು..ಈಗಾಗಲೇ ಲೇಖನವಾಗಿ ನಿಮಗೆ ತಿಳಿದಿದೆ..ನನ್ನ ಮಂಗಳೂರಿನ ಮತ್ತು ಬೆಂಗಳೂರಿನ ಡಿಸೆಂಬರ್ ಪ್ರವಾಸದ ಸಮಯದಲ್ಲಿ, ದಿನಕರ್ ದಂಪತಿಗಳನ್ನು, ಶಿವು ದಂಪತಿಗಳನ್ನು ಮತ್ತು ಪ್ರಕಾಶ್ (ಅವನ ಮನೆಗೆ ಹೋಗಲಿಲ್ಲವೆಂದು ಅವನ ಕೋಪ ನನ್ನನ್ನು ಬೀಳ್ಕೊಡುವವರೆಗೂ ಇತ್ತು ಅನ್ನಿ..) ಎಲ್ಲರನ್ನೂ ಭೇಟಿ ಮಾಡಿದ್ದು.....


ಈಗ ನಿಮ್ಮೊಂದಿಗೆ ಮಹತ್ತರ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ....




ಹಲವು ಬ್ಲಾಗ್ ಮಿತ್ರರು ಬ್ಲಾಗ್-ಬಳಗದ ಒಂದು ಸಮ್ಮಿಲನ ಏಕೆ ಮಾಡಬಾರದು ಎನ್ನುವುದನ್ನು ಪ್ರಸ್ತಾಪಿಸಿರುವುದು... ನನ್ನ ಎಲ್ಲ ಮಿತ್ರರು ಅವರ ಬ್ಲಾಗ್ ಫಾಲೋಯರ್ಸ್ ಗಳು (ಹಿಂಬಾಲಕರು ಅನ್ನೋದು ಯಾಕೋ ಸರಿ ಕಾಣ್ಲಿಲ್ಲ ಅದಕ್ಕೆ ಅಂಗ್ಲಕ್ಕೆ ಮೊರೆ..ಹಹಹ..ಮೂರ್ಖ ಅನ್ನೋದಕ್ಕಿಂತ fool ಅಂದ್ರೆ ,ಅಷ್ಟಾಗಿ ಮನಸ್ಸಿಗೆ ಹಚ್ಕೊಳ್ಳಲ್ಲ ಅಂತ).


ಜೂನ್ ಅಂತ್ಯದ ಅಥವಾ ಜುಲೈ ಮೊದಲ ವಾರದಲ್ಲಿ ಇದನ್ನು ಆಯೋಜಿಸುವುದರಿಂದ ವಿದೇಶದಲ್ಲಿರುವ ಮಿತ್ರರು ಬರಲೂ ಅನುವಾಗಬಹುದೆಂದು ನನ್ನ ಯೋಚನೆ..ನಿಮ್ಮ ಅನಿಸಿಕೆಗಳನ್ನು ಖಂಡಿತಾ ನನಗೆ ಅಥವಾ ಪ್ರಕಾಶ್ (ಇಟ್ಟಿಗೆ ಸಿಮೆಂಟು) ಗೆ ಮೈಲ್ ಮೂಲಕ ತಿಳಿಸಿ.. ಒಂದು ದಿನದ (ಬೆಳಿಗ್ಗೆ 9 ರಿಂದ ಮದ್ಯಾನ್ಹ 2 ರ ವರೆಗೆ ಮಾಡಿ..ಮದ್ಯಾನ್ಹದ ಊಟದ ನಂತರ ಮುಕ್ತಾಯ) ಕಾರ್ಯಕ್ರಮ ಹೇಗಿರುತ್ತೆ...ನಮ್ಮ ಪರಿಚಯ, ಕೆಲವು ಚರ್ಚೆ, ಒಂದಷ್ಟು ಕವನ-ಕಥೆ ವಿಚಾರ ಹೀಗೆ.


ನಿಮ್ಮೆಲ್ಲರ ಅಭಿಮಾನಕ್ಕೆ ಮತ್ತೊಮ್ಮೆ ವಂದಿಸಿ...ನಮ್ಮ ಬ್ಲಾಗ್-ಸಮೇಳನದ ಬಗ್ಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ.


ನಿಮ್ಮವ......
ಡಾ. ಆಜಾದ್
(ಜಲನಯನ, ಭಾವ-ಮಂಥನ ಮತ್ತು science & share ಬ್ಲಾಗ್ ಗಳ ಒಡೆಯ)
Mails: azadis@hotmail.com; suruaz@gmail.com

Tuesday, February 16, 2010

ಕನಸಿನರಸಿಯನರಸಿ


(ಚಿತ್ರ ಕೃಪೆ: ಅಂತರ್ಜಾಲ)

ಮಿತ್ರರೇ, ನನ್ನ ಆತ್ಮೀಯರು ಕೆಲವರು ನನ್ನಿಂದ ಅಪೇಕ್ಷಿಸಿದಂತಹ ಹೊಸ ಅಲೆ ಇಲ್ಲಿ ಎದ್ದುಬರುವಂತಾಗಿದೆಯೋ ಇಲ್ಲವೋ ತಿಳಿಯದು...ಪ್ರಯತ್ನ ನನ್ನದು..ಪ್ರತಿಕ್ರಿಯೆ ನಿಮ್ಮದು...


ಕನಸಿನರಸಿಯನರಸಿ
ನಿನ್ನೊಲವಿನಲಿವಿನಲಿ
ವಿಲವಿಲವಾಯಿತೆನ್ನೆದೆ
ಲವಲವಿಕೆಯನೆಡಹಿ ಕೆಡಹಿದೆ
ಹುಸಿಮುನಿಸಿನಂದ
ಚಂದವದನವನಾವರಿಸಿ- ಹೆಚ್ಚಿಸಿ
ನಿನ್ನವದನಾರವಿಂದದಂದ
ಚೆಲುವೆ ಸೋಲಿಸಿ ನೋಟದಿ
ಗೆಲುವಿನೋಟದೋರೆಗಣ್ಣು
ಹುಬ್ಬಿನಂಬಿಗೆ ನೋಟ-ಬಾಣ
ಕೆನ್ನೆಯಂಗಳದ ಕುಳಿ
ಚಂದುಟಿ ರಕ್ತದೋಕುಳಿ
ಸಾಕಲ್ಲವೇ ಬೀಳಲು ಜಾರಿ
ನಿನ್ನಂದದ ಮತ್ತೇರಿರಲು...
ಅರಿತಿರುವೆ ಆದರೂ ಕಾಡಿರುವೆ
ತಿಳಿದೂ ...
ಮೊದಲೇ ಮರ್ಕಟ ಮೇಲೆ
ಮದ್ಯದ ಅಮಲೇರಿರಲು
ಮೈಮಾಟದ ಚೇಳನು
ಕುಟುಕಬಿಟ್ಟೇಕೆ ಕಟುವಾದೆ
ತರವಲ್ಲ ನಿನಗೆ, ಕೊಡುವರೇ
ಯಮಯಾತನೆ ಈತರದಿ ?
ಕನಸಿನರಸಿಯನರಸಿ ಬಂದವನಿಗೆ
ಬಂದುಬಿಡು ನನಸಲಿ- ಅಸಲಿ
ಬೇಗೆಯಲಿ ಬೆಂದು ಬಿರಿದಿದೆ ಮನ
ತೊರೆದುಬಿಡು ಗಗನ ಸಂಗ
ಹರಿದುಬಿಡು ಹನಿಯಾಗಿ
ತೊಯ್ದುಬಿಡು ಝರಿಯಾಗಿ
ಬೆಟ್ಟ-ಗುಡ್ಡ ನಿನಗಡ್ಡವೇ?
ನಾನಣಿಯಾಗಿರುವೆ
ತೊಯ್ದು, ಹರಿದು, ಹಂಚಿಹೋಗಲು
ನಿನ್ನೊಡನೆ ಹನಿಯಾಗಿ -ಇನಿದನಿಯಾಗಿ.

Thursday, February 11, 2010

ಹಳ್ಳಿಯಾದರೇನು, ಡೆಲ್ಲಿಯಾದರೇನು ?


(ಚಿತ್ರಕೃಪೆ: ಅಂತರ್ಜಾಲ)
(ನನ್ನ ಮಿತ್ರ ರೆಲ್ಲರಿಗೆ ಶಿವರಾತ್ರಿಯ ಶುಭಕಾಮನೆಗಳು)
ಕ್ಷೀರ ಸಾಗರ ಮಂಥನ, ಎಂಥ ಚಿಂತನ?
ಮನದ ದುಗುಡಗಳ ನಿರಂತರ ಕದನ
ನಿನ್ನ-ಅವಳ, ನಿಮ್ಮ-ಮನೆಯವರ
ನಿನ್ನಮನೆ ಮನಗಳ-ಊರ ಮನದಂಗಳ
ನಿನ್ನ ಧರ್ಮ-ಪರ ಧರ್ಮ ಯಾಕೀ ಕರ್ಮ?
ನಿನ್ನಲ್ಲಿ ನೀನೇ ಹುಟ್ಟಿಸಿ ಬೆಳೆದು
ಎಲ್ಲೆಡೆ ಹರಿಸಿ ಸಲ್ಲ ಜಗವನೇ ಹಳಿದು
ಕೊನೆಯಾಗಲಿ ಚಿರವಾಗಲಿ ಮನು ಧರ್ಮ
ಅಂದು ಸುರಾಸುರ ಮನು ಕಲ್ಯಾಣಕೆ
ಕುಡಿದ ಶಿವ ಹಾಲಾಹಲವ ವಿಷಕಂಠನಾದ
ಬೂಟಾಟಿಕೆ ತೋರುವರು ಶಿವನ ಪೂಜೆ ಮಾಡಿ
ಕಾಟಾಚಾರ, ಢಾಂಬಿಕರು ಸಮಾಜವ ಕಾಡಿ
ಸುಡುವರು ಆಸ್ತಿ, ಕೋಲಾಹಲವೇ ಪೂಜೆ
ತಿಳಿಯದೇ ಕೊನೆಗಿದು ಬಡವನಿಗೇ ಆಗುವ ಸಜೆ?
ಲಯಕ್ಕೆ ಶಿವನ ಹೆಸರು ಕೊಟ್ಟವನು ನೀನಲ್ಲವೇ?
ನಿನಗೆ ಬೇಕು ನೆವ ಅವನ ಹೆಸರಲಿ ಮುಗ್ಧರ ಕಾಡಲಿಲ್ಲವೇ?
ಬಿಡು ಮಾನವ ಸ್ವಾರ್ಥವ, ಕಲಿ ಪಾರಮಾರ್ಥವ
ಮನೆ ಮನ ಸಮಾಜ ದೀನ ದಲಿತಂಗೆ ಆಗು ಪರಮಶಿವ
ಇದಲ್ಲವೇ ನಿನ್ನ ದೇವನೊಲಿಸಿಕೊಳ್ಳುವರೀತಿ?
ಮರೆತು ಕೋಲಾಹಲ, ಕಾದಾಟ ಕಾಡುವ ನೀತಿ.

Monday, February 8, 2010

ಬೇರೆ ನೀತಿ

ಕೇಳ್ಬ್ಯಾಡಿ ನನ್ಹತ್ರ ನನ್ ಕತಿ

ತಿಂಗ್ಳಿಗ್ ಬರೋದ್ಸಂಬ್ಳ ಒಂದೇ ಸತಿ

ಎಲ್ಲಾದಕೂ ಕಾಯ್ಬೇಕ್ರೀ ಅದ್ಕೇನೇ

ಪರಿಹಾರಕ್ಕೆ ಪಾಲಿಸ್ತಾಯಿವ್ನಿ ಬೇರೆ ನೀತಿ.

ಹೆಡ್ಗುಮಾಸ್ತೆ ದೊಡ್ ಕೆಲ್ಸ ಏನಲ್ಲ

ದುಡ್ಗೂನೂ ಒಂದ್ರಸ್ತೆ ಕಂಡೌವ್ನೇ ಬಲ್ಲ

ಸ್ನೇಯಿತ್ರು ಕೇಳಿದ್ರು, ಲೋಕಾಯುಕ್ತ್ರು ಬಂದ್ರಂತೆ

ನಿಮ್ ಸಾಹೇಬ್ರನ್ನ ತಿನ್ನೋವಾಗ್ ಹಿಡ್ದ್ರಂತೆ

ಹೆಂಗಲಾ ಬಚಾವಾದೆ ನೀನು?

ನಿನ್ ಮನೆ, ತ್ವಾಟ ಸೋದ್ನ ಮಾಡಿದ್ರಂತೆ

ನಾನಂದೆ, ಅದ್ಕೇ ಯೋಳೋದು ಅಡ್ಕಸ್ಬೀಗ್ಳೂಂತ

ತಿಂದ್ರೆ ಸಾಲ್ದು ಬಚಾವಾಗೋಕೂ ಕಲೀಬೇಕು ತಂತ್ರ

ಲೋಕಾಯುಕ್ತ್ರಿಗೆ ಇಲ್ವಾ ಹೆಡ್ಗುಮಾಸ್ತ್ರು?

ಅವ್ರಿಗೇ ತಿನ್ನಿಸ್ದೇ ಅವ್ರ್ ಮನೇಲೇ ಅಡಗ್ಸಿಟ್ಟೆ

ಪ್ರಾಣಿ ಪಕ್ಷಿಗ್ಳ ತಂತ್ರ ನಮ್ಮಂತೋರಮುಂದೆ ನಡೆಯೊಲ್ಲ

ಒಬ್ಬನ್ನ ಹಿಡ್ದ್ ಬುಟ್ರೆ ಮಿಕ್ಕೋರು ಮಂಕಾಗೊಲ್ಲ

ಯಾಕಂದ್ರೆ ನಮ್ಮತ್ರ ತಿನ್ನೋರು ಮ್ಯಾಲ್ಕುಂತವ್ರೆ

ಅವರತ್ರ ತಿನ್ನೋಕೆ ಅವ್ರಮ್ಯಾಲ್ನವ್ರು ಕಾದವ್ರೆ

ಲೋಕಾಯುಕ್ತ್ರು ಒಬ್ಬ್ರು, ಕಳ್ಳ ಖದೀಮ್ರು ಕೋಟ್ಯಾಂತ್ರ

ಒಬ್ಬನ್ನ ಹಿಡಿದ್ರೆ ಸಾಕು ಸಾವ್ರ ಹುಟ್ಕಳ್ತಾರೆ

ಲೋಕಾಯುಕ್ತರೂ ಅಸಹಾಯಕ್ರು ಪಾಪ ಏನುಮಾಡ್ತಾರೆ?

ದಿನಾ ಸಾಯೋರ ಸಂತೆ ಇದು ಅಂತ ಸುಮ್ನಾಗ್ತಾರೆ.

Thursday, February 4, 2010

ಹೀಗೇ ಒಮ್ಮೆ.....

ಇತ್ತೀಚೆಗೆ ಯಾವುದೋ ಕಾನ್ಫರೆನ್ಸಿಗೆ ಅಂತ ಮಂಗಳೂರಿಗೆ ಅಂತ ಹೋಗಿದ್ದೆ. ನನ್ನನ್ನು ಬರಮಾಡಿಕೊಳ್ಳಲು ಯಾರಾದ್ರೂ ಕಾಲೇಜಿಂದ ಬಂದಿರ್ತಾರೇನೋ..ಎಂದು ಸ್ಟೇಷನ್ನಿಂದ ಹೊರಬಂದು ಕಾರ್ ಸ್ಟಾಂಡಿನತ್ತ ನೋಡತೊಡಗಿದೆ....

“ಸಾರ್....”
ದನಿ ಬಂದ ಕಡೆ ತಿರುಗಿದೆ.. ಚಿವುಟಿಕೊಂಡೆ...ಯಾಕಂದರೆ..ಗುಂಡನ ಆ ಗೊಗ್ಗರು ದನಿ ಮರೆಯಲು ಸಾಧ್ಯವೇ ಇಲ್ಲ!!. ಗುಂಡ..!! ..yes...!!!! ನನ್ನ ಯೋಚನಾ ಲಹರಿ ಹತ್ತು ವರ್ಷ ಹಿಂದಕ್ಕೆ ಹೋಯಿತು.

ನಾನು ಸುಮಾರು 10 ವರ್ಷ ಕೆಲಸ ಮಾಡಿ central Govt.ನ deputation ಮೂಲಕ ಪ.ಸಂ.ಮೀ. ಮಹಾವಿದ್ಯಾಲಯದಲ್ಲಿ ಪಿ.ಎಚ್.ಡಿ ಗಾಗಿ ಬಂದಿದ್ದಾಗ ಪರಿಚಯವಾದ ಬಹಳ ಪಗಡದಸ್ತ್ ಆಸಾಮಿ., ಆಗಲೇ ಬಿ.ಎಸ್ಸಿ. ಪದವಿಗಾಗಿ ಸೇರಿದ್ದ ಮಂಡ್ಯದ ಬಳಿಯ ಮಲ್ನಾಯಕನ ಕಟ್ಟೆ ಬೆಟ್ಟೇಗೌಡರ ಮಗ ಗುಂಡ..ಅಂದರೆ ..ಎಮ್.ಬಿ. ಗುಂಡ ರಾಜೇಗೌಡನ ಪರಿಚಯವಾಗಿದ್ದು. ನಾನು ಪಿ ಎಚ್ ಡಿ ಗೆ ಸೇರಿದಾಗ ಕಾಲೇಜಿನ ಆಫೀಸ್ ಆವರಣದಲ್ಲಿ ಮೊದಲಿಗೆ ಸಿಕ್ಕ ಸೀನಿಯರ್ student ಇವನೇ ಆಗಿದ್ದ. ಗುಂಡ ಅಂತಿಮ ವರ್ಷ ಬಿ. ಎಸ್ಸಿಯಲ್ಲಿದ್ದ (ಇದು ಗೊತಾಗಿದ್ದು ನಂತರ). ಆ ಕಾರಣಕ್ಕೆ..ಎಮ್. ಎಸ್ಸಿ ಮತ್ತು ಪಿ.ಎಚ್.ಡಿ. ಗೆ ಸೇರಲು ಬಂದಿದ್ದ ಎಲ್ಲ ಹೊಸಬರನ್ನ ಮುಲಾಜಿಲ್ಲದೇ ಕಾಡಲು, ರಾಗಿಂಗಿಗೇ ಇಳಿದಿದ್ದ. ನಾನು ನನ್ನ official formalities ಮುಗಿಸಿ course ಗೆ ಸೇರಲು ಬಂದಾಗ ನನ್ನ ಜೊತೆಯವರೆಲ್ಲಾ admit ಆಗಿಬಿಟ್ಟಿದ್ದರು. ಆಫಿಸಿನಿಂದ ಹೊರಬರುತ್ತಿದ್ದ ನನ್ನನ್ನು..ನೋಡಿ.. “ರೀ..ಏನ್ರೀ.. ಒಂದ್ಸೊಲ್ಪ..ನಿಂತ್ಕಳ್ಳೀ..” ಅಂತ ನಿಲ್ಲಿಸಿ.. “ಏನು ಪಿ.ಎಚ್.ಡೀನಾ..? ಡಾಕ್ಟ್ರು ಅನ್ನಿಸ್ಕೊಂಬೇಕಾ..?? ಎಲ್ಲಿ..ಎಮ್.ಎಸ್ಸಿ. ಮಾಡಿದ್ದು..??, ನ್ಯೂಟನ್ ಪ್ರಕಾರ ಆಕರ್ಷಣೆ ನಾಲ್ಕನೇ ನಿಯಮ..ಏನು ಹೇಳಿ ನೋಡೋಣ..?” ಪಕ್ಕದಲ್ಲಿದ್ದ ಇನ್ನೊಬ್ಬ ಸೀನಿಯರ್ ಹುಡುಗನ್ನ ಕರೆದು

“ಲೇ ಒಂದಿಬ್ಬರು ಮೂವರು ಈವೊತ್ತು ಜಾಯಿನ್ ಆಗ್ತಾವ್ರೆ ಅಂತ ಹೇಳಿ ನಾಲ್ಕೈದುಜನ ಸೀನಿಯರ್ಸ್ ನ ಕರ್ಕೊಂಡ್ಬಾ ಹೋಗು”.....
ನನ್ನ ಮೇಲಿಂದ ಕೆಳಕ್ಕೆ ನೋಡುತ್ತಾ...ನಾನು in-service candidate ಪಿ.ಎಚ್.ಡಿ ಗೆ ಅನ್ನೋ ಕಾರಣಕ್ಕೆ ... ಯಾವುದಕ್ಕೂ ಸಪೋರ್ಟಿಗೆ ಇರಲಿ ಅಂತ ಅನ್ನಿಸಿರಬೇಕು,

ನಾನು “ ಹೌದು ಸಾರ್‍... ಪಿ. ಎಚ್.ಡಿ.ಗೆ ಸೇರಿದ್ದೇನೆ..”

ನೋಡಲು ದಷ್ಠ-ಪುಷ್ಠವಾಗಿದ್ದ, ಬಹಳ ಸೀನಿಯರ್ ಪಿ.ಎಚ್.ಡಿ ಸ್ಕಾಲರ್ ಇರಬೇಕು ಎಂದುಕೊಂಡೆ.

..ಗಾಬರಿಯಲ್ಲಲ್ಲದಿದ್ದರೂ ಸ್ವಲ್ಪ ಗಲಿಬಿಲಿಗೊಂಡಂತೆ..ಉತ್ತರಿಸುವುದರಲ್ಲಿ.. ...

“ಲೋ ಹರೀಶ ....ಎಲ್ಲೆಲ್ಲೋ..ಹುಡ್ಕೋದು ನಿನ್ನ..?? ನೆನ್ನೆನೇ ಬಂದ್ಯಂತೆ..ಮನೆಕಡೆ ಬರೋದಲ್ಲವಾ..?”
ಎನ್ನುತ್ತಾ..ನನ್ನ ಪಿ.ಯು.ಸಿ. ಯಿಂದ ಎಮ್.ಎಸ್ಸಿ ವರೆಗಿನ ಸಹಪಾಠಿ..ಮತ್ತು ತನ್ನ ಉತ್ತಮ ಸಾಧನೆ-ಸಾಮರ್ಥ್ಯಗಳ ಮೂಲಕ ಪ್ರೊಫೆಸರ್ ಆಗಿದ್ದ ಘನಿಷ್ಠ ಗೆಳೆಯ ರೆಡ್ಡಿ ಕಾರಿಡರ್ ಗೆ ಬಂದು ನನ್ನ ಕೈಕುಲುಕಿದ.

“ಇಲ್ಲ ಕಣೋ...., ರವಿ ಸಿಕ್ಕಿದ್ದ..ಅವನ ಜೊತೆ ಹೋಟೆಲಲ್ಲೇ ಇದ್ದೆ..ಈಗ ಬೆಳಿಗ್ಗೆ..class ಶುರು ಆಗಿರಬಹುದು
ಅಂತ..fees ಕಟ್ಟಿ registration ಮಾಡ್ಬೇಕು ಅಂತ ಬೇಗ ಬಂದೆ” ಎಂದೆ.

ಆಗಲೇ ಗೊತ್ತಾಗಿದ್ದು.. ಗುಂಡ ಅಲ್ಲಿಂದ ಮಾಯವಾಗಿದ್ದ ಅಂತ. “ಗೌಡ ಏನೋ ಕೇಳ್ತಾ ಇದ್ದ ನಿನ್ಹತ್ರ.. ಏನಂತೆ?? ಅವನ ತಾಪತ್ರಯ..??” ನಾನು ಆಶ್ಚರ್ಯದಿಂದ ರೆಡ್ಡಿಯನ್ನು ಪ್ರಶ್ನಾರ್ಥಕವಾಗಿ ನೋಡಿದಾಗ..ಗುಂಡ ಬಿ. ಎಸ್ಸಿ ಗಾಗಿ ಏಳನೇ ವರ್ಷವೂ ಪರಿಶ್ರಮ ನಿರತನಾಗಿರುವುದು ರೆಡ್ಡಿ ಮೂಲಕ ತಿಳಿಯಿತು.

ಆನಂತರ ಒಂದೆರಡು ಬಾರಿ ಹಾಸ್ಟೆಲಿನಲ್ಲಿ..ಕಾಲೇಜು ಕಾರಿಡಾರುಳಲ್ಲಿ..ಗುಂಡ ನನ್ನ ಕಣ್ತಪ್ಪಿಸಿ ಓಡಾಡುವುದನ್ನು ಗಮನಿಸಿದ್ದೆ. ಒಂದು ದಿನ ಹಾಸ್ಟಲಿನಲ್ಲಿ ಸ್ವಲ್ಪ ಲೇಟಾದ್ದರಿಂದ ಊಟದ ತಟ್ಟೆಯನ್ನು ಪಡೆದು ಗುಂಡ ಒಬ್ಬನೇ ಕುಳಿತಿದ್ದ ಟೇಬಲ್ಲಿಗೇ ಹೋಗಿ ಕುಳಿತೆ. ಅವನೇ ವಿಷಯವನ್ನು ಸ್ವಲ್ಪ ಹಿಂಜರಿಕೆಯಿಂದಲೇ ಪ್ರಾರಂಭಿಸಿದ. “ಸಾರ್..ನೀವು ರೆಡ್ಡಿ ಸಾರ್ class-mateಉ ಅಂತಾ ಗೊತ್ತಿರಲಿಲ್ಲ.. ಅಲ್ಲದೇ ನಿಮ್ಮನ್ನ ನೋಡಿದರೆ ತುಂಬಾ young ಆಗಿ ಕಾಣ್ತೀರ..ಸಾರಿ ಸಾರ್..” ಎಂದು ಹಲ್ಲು ಗಿಂಜಿದ. “ಪರವಾಗಿಲ್ಲ ಗೌಡರೇ.. ಹೊಸದಾಗಿ ಕಾಲೇಜಿಗೆ ಬರೋವರನ್ನ ಒಂದುರೀತಿ ಚುಡಾಯಿಸೋ ತರಹ ಬರಮಾಡ್ಕೊಳ್ಳೋದು ನಾವೂ ಮಾಡ್ತಿದ್ದದ್ದೇ...ಆದರೆ ಅವರಿಗೆ ಅವಮಾನ-ಹಿಂಸೆ ಆಗೋಥರಾ ನಾವು ಯಾವತ್ತೂ ಮಾಡಿದ್ದಿಲ್ಲ..ಅವರಿಗೆ ಅತಿ ಮುಜಗರ ಅನ್ನಿಸ್ತಾ ಇದೆ ಅಂತ ಗೊತ್ತಾದ್ರೆ..ಸಮಾಧಾನ ಮಾಡಿ ಫ್ರೆಂಡ್ ಮಾಡ್ಕೊತಿದ್ವಿ. ragging ಆನ್ನೋದು ಹೊಸಬರನ್ನು ಕೀಟಲೆ ಮಾಡಲು ಮತ್ತು ಆ ಮೂಲಕ ಪರಿಚಯಿಸಿಕೊಂಡು ಉತ್ತಮ ಮಿತ್ರರಾಗಲು ಮಾಡಿಕೊಂಡ ನಮ್ಮದೇ ಆದ ವ್ಯವಸ್ಥೆ...ಆದ್ರೆ ಅದನ್ನೇ ನಾವು ಗೂಂಡಾಗಿರಿ ಮೆರೆಯಲು, ಕಾಟಕೊಡಲು ಮತ್ತು ಹಿಂಸಿಸಲು ಮಾಡೋದು ಅಪರಾಧ ಅಲ್ಲವೇ ಗುಂಡ ಅವರೇ..?” ಎಂದಾಗ...

“ಹೆ..ಹೆ..ಹೆ..ಏನ್ಸಾರ.? ಎಷ್ಟು ಜೂನಿಯರ್ ನಾನು..?? ನೀವು ತಾವು ಅಂತೀರ..ಗುಂಡ ಅನ್ನಿ ಸರ್..ಪರ್ವಾಗಿಲ್ಲ..” ಅಂತ ಮತ್ತೆ ಹಲ್ಲು ಗಿಂಜಿದ.

“ಹೌದು.. ಗುಂಡೇ ಗೌಡ್ರೆ.., ನಿಮ್ಮದು ಯಾವ ಊರು..?” ಒಮ್ಮೆಲೇ ಏಕವಚನಕ್ಕೆ ಬರೋದು ಕಷ್ಟ ಅನ್ನಿಸ್ತು.

“ಅಂದಹಾಗೆ ನನ್ನ ಪೂರ್ತಿ ಹೆಸರು..ಗುಂಡ ರಾಜೇಗೌಡ ಅಂತ ಸಾರ್.. ನಮ್ಮದು ಮಂಡ್ಯ” ಅಂದ.

ನನಗೆ ಕುತೂಹಲ ಆಯಿತು.. “ಏನು..ಮಂಡ್ಯನೇ..? ನಾನು ಮಂಡ್ಯದ V.C.Farm ನಲ್ಲಿ ಕೆಲ್ಸ ಮಾಡ್ದೆ...ಎಲ್ಲಿ ಯಾವ ಏರಿಯಾ ಮಂಡ್ಯದಲ್ಲಿ..? ”

“ಹೆ..ಹೆ..ಹೆ..ಔದಾ ಸಾರ್..!!?? ಹೆ..ಹೆ.ಹೆ..ಮಂಡ್ಯ ಅಂದ್ರೆ.. ಮಂಡ್ಯ ಅಲ್ಲ ಸಾರ್ ಪಕ್ಕದಲ್ಲಿ ..... ಹಳ್ಳಿ..”

ನಾನು..
“ಅಲ್ಲಪ್ಪ ಯಾಕೆ ಹಳ್ಳಿ ಅನ್ನೋಕೆ ನಾಚ್ಕೇನಾ..? ನಾನೂ ಹಳ್ಳೀಲೇ ಹುಟ್ಟಿದ್ದು ಬೆಳೆದಿದ್ದು..ಅನ್ನಕೊಡೋ ಅನ್ನದಾತರು ನಮ್ಮ ಹಳ್ಳಿ ರೈತರು...ರೈತನ ಮಗ ಅನ್ನೋದು ಹೆಮ್ಮೆ ಪಡೋ ವಿಷಯ...ಅಲ್ಲವಾ?” ..ಈಗ ಏಕವಚನಕ್ಕೆ ಬರೋದು ಕಷ್ಟ ಅನಿಸಲಿಲ್ಲ.
ಮತ್ತೆ ಕೇಳಿದೆ... “ಯಾವ ಹಳ್ಳಿ?”

“ಮಲ್ನಾಯಕನ ಕಟ್ಟೆ..ಅಂತ ಸಾರ್..” ಎಂದ ಮತ್ತೆ ಹಲ್ಲು ತೋರಿಸುತ್ತಾ....

“ಹೌದಾ..?” ಮತ್ತೂ ಅಶ್ಚರ್ಯವಾಯಿತು.
“ಹೌದು ಸಾರ್..ಬೆಟ್ಟೇಗೌಡರು ಗೊತ್ತಿರಬೇಕು ನಿಮಗೆ..ಅವರ ಮಗ ನಾನು.” ಎಂದ.

“ಏನು ಕಟ್ಟೆ ಮನೆ ಬೆಟ್ಟೇ ಗೌಡರ ಮಗಾನೇ..? ..ಚಂದ್ರು ನ ನೋಡಿದ್ದೆ....ನೀ...ನು...”

“ಸಾರ್ ಚಂದ್ರು ನಮ್ಮಣ್ಣ ಸಾರ್...”

“ಹೌದಾ? ಗೌಡ್ರು ಬಹಳ ಸಹಾಯ ಮಾಡಿದ್ರಪ್ಪಾ ನಾನು ಹೊಸದಾಗಿ ವಿ.ಸಿ, ಫಾರಂ ಗೆ ಹೋದಾಗ...
ಹೇಗಿದ್ದಾರೆ ನಿಮ್ಮಪ್ಪ.. ನಿಮ್ಮಣ್ಣ ಎಲ್ಲಾ.....? ನಿಮ್ಮಪ್ಪ ನಮ್ಮ ಸಂಶೋಧನಾ ಕೇಂದ್ರಕ್ಕೆ ಬರ್ತಿದ್ದ ಹೊಸ ಕೃಷಿ ಸಂಶೋಧಕರಿಗೆ ಮನೆ ಬಾಡಿಗೇಗೆ ಸಿಕ್ಕು ಹೊಸವೃತ್ತಿ ಜೀವನ ಪ್ರಾರಂಭಿಸೋ ಸಮಯದಲ್ಲಿ ೧೦-೧೫ ದಿನ ತಮ್ಮ ಕಡೆಯಿಂದ ಊಟದ ವ್ಯವಸ್ಥೆ ಮಾಡಿಸಿ ಅವರ ಬೇಕು ಬೇಡಗಳಿಗೆ ನೆರವಾಗ್ತಿದ್ದವರು...ರೈತ ಅಂದ್ರೆ ಅನ್ನದಾತ ಅನ್ನೋದನ್ನ ಮಾಡಿ ತೋರಿಸಿದವರು. ನಮ್ಮ ಸ್ನೇಹಿತರೆಲ್ಲಾ ರಾಜೇಗೌಡರು ಅಂದ್ರೆ ಬಹಳ ಗೌರವ ಕೊಡೋರು...” ಹಿಂದಿನ ಆ ದಿನಗಳ ನೆನಪಿಸಿಕೊಳ್ಳುತ್ತಾ ಹೇಳಿದೆ.

“ಅಯ್ಯೋ.. ಸಾರ್ ಅದು ಹಳೇ ಕಥೆ....ಯಾವ್ದೋ ..ತೊಂದರೇಗೆ ಸಾಲ ತಂಗಡ ನಮ್ಮಣ್ಣ.., ಬೇಸಾಯ ಕೈಕೊಡ್ತು, ಕಬ್ಬು ಬೆಲೆ ಇಳೀತು, ಹಾಕಿದ್ ಬಂಡವಾಳಾನೂ ಕೈಗತ್ತೋದು ಕಷ್ಟ ಆಗ್ತಿತ್ತು, ಅದ್ಕೆ ನಮ್ಮಪ್ಪ ಗದ್ದೆ ಮಾರ್ಬಿಟ್ಟ..ನಮ್ಮಣ್ಣ ಸರ್ಕಾರಿ ಕಂಟ್ರಾಕ್ಟರು .. ಆಗುವ್ನೆ...ಮೇಲದ್ಕಾರಿಗಳನ್ನ ಸರಿ ಮಾಡ್ಕಂಡವ್ನೆ..ಒಳ್ಳೆ ಆದಾಯ...” ಎಂದ ಗುಂಡ

“ಇದು ತಪ್ಪಲ್ಲವಾ ಗುಂಡ...ಕಂಟ್ರಾಕ್ಟ್ ತಗೊಂಡು ..ಕಳಪೆ ಕೆಲಸ ಮಾಡಿದ್ರೆ ಜನಕ್ಕೆ ತೊಂದರೆ ಅಲ್ಲ್ವಾ?” ನಾನು ಕೇಳಿದೆ.
“ಇಲ್ಲಾ ಸಾರ್ ..ಕೆಲ್ಸ ಚನ್ನಾಗೇ ಮಾಡಿಸ್ತಾನೆ..ಆದ್ರೆ...ಮಾಡಿರೋ ಕೆಲ್ಸಾನೇ ಎರಡು ಸರ್ತಿ ತೋರ್ಸೋ ಅದ್ಕಾರಿಗಳಹತ್ರ ಕಿತ್ಕೋತಾನೆ....ಹಹಹಹ....ಗುಂಡೀಲಿ ಹೋಗೋದು ಬಂಡೀಲಿ ಬರ್ತದೆ...”

ಇದೊಂದು ಸಾಧನೆ ಅನ್ನೋ ರೀತಿಯಲ್ಲಿ ಪೋಸ್ ಮಾಡ್ದ ಗುಂಡ......

ಲಂಚಕೋರ ಅಧಿಕಾರಿಗಳು, ಅವರನ್ನೇ ನಂಬಿ ದುಡ್ಡು ಮಾಡೋ ಪುಢಾರಿಗಳು ವ್ಯವಸ್ಥೆಯ ಮತ್ತು ಬೇಸಾಯದ ಹೊಡೆತ ತಿಂದು ಸೋತು ಸುಣ್ಣವಾಗೋ ರೈತನನ್ನ ಹೇಗೆ ತಪ್ಪು ದಾರಿಗೆ ಎಳೀತಾರಲ್ಲಾ..?! ಎನ್ನುತ್ತಾ ಯೋಚಿಸತೊಡಗಿದೆ. ಸೋತು..ಆತ್ಮಹತ್ಯೆಗೆ ಶರಣಾಗದೇ ನ್ಯಾಯಯುತವಾಗಿ ಬದುಕಲು ಸಾಧ್ಯವೇ? ಎನ್ನುವುದೂ ನನ್ನನ್ನು ಯೋಚನೆಗೆ ತಳ್ಳಿತು.


“ಸಾರ್..ಸಾರ್..”....

ಗಕ್ಕನೆ ಮತ್ತೆ ವಾಸ್ತವಕ್ಕೆ ಬಂದಿದ್ದೆ... “ಹೋ ಗುಂಡ ಹೇಗಿದ್ದೀಯಪ್ಪ..?” ಎಂದೆ ಅವನ ಕೈ ಕುಲುಕುತ್ತಾ..

“ನೆನಪಿದೆಯಲ್ಲ ಸಾರ್...!!!?? ಥ್ಯಾಂಕ್ಸ್... ಚನ್ನಾಗಿದ್ದೀನಿ...ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದೀನಿ ಸರ್...” ಎಂದ...
ಗುಂಡ ಏಳನೇ ವರ್ಷ ಬಿಎಸ್ಸಿಯಲ್ಲಿದ್ದಾಗ..ಅವರಣ್ಣ ತೀರಿಹೋಗಿದ್ದು...ಒಮ್ಮೆಗೇ ಬಿದ್ದ ಜವಾಬ್ದಾರಿಯಿಂದ ತಡವಾಗಿಯಾದರೂ ಎಚ್ಚೆತ್ತುಕೊಂಡದ್ದು..ಛಲದಿಂದ ಅದೇ ವರ್ಷ ಬಿಎಸ್ಸಿ ಮುಗಿಸಿ ಎಂಟ್ರೆಂನ್ಸ್ ಪರೀಕ್ಷೆ ಮೂಲಕ ಫೆಲೋಶಿಪ್ ತಗೊಂಡು ಉತ್ತಮ ದರ್ಜೆಯಲ್ಲಿ ಎಮ್ ಎಸ್ಸಿ ಮುಗಿಸಿ, ಹಾಗೇ ಪಿಎಚ್ ಡಿ ಮಾಡಿ ಕಾಲೇಜಿನ ಲೆಕ್ಛರರ್ ಆದದ್ದು ರೆಡ್ಡಿ ಮೂಲಕ ನನಗೆ ತಿಳಿದಿತ್ತು.