Wednesday, April 21, 2010

ಹುಚ್ಮುಂಡೆ ಮದ್ವೆ..ಉಂಡವನೇ....


ಭಸ್ಮಾಸುರನ ಪವರ್ರು ಶಿವನಿಗೇ ಗೊತ್ತು

ಏನೋ..ಪಾಪ ಭಕ್ತ ಅಂದಿದ್ದೇ ವಿಪತ್ತು

ವರ ಕೊಟ್ಟ, ಬಂತು ಶಿವನ ಅಸ್ತಿತ್ವಕ್ಕೇ ಆಪತ್ತು

ಅದಕ್ಕೇ ನೋಡಿ ಬಿ.ಸಿ.ಸಿ.ಐಗೇ ಬಂದಿದೆ ಕುತ್ತು

ಐಪಿಎಲ್ ಅನ್ನೋ ಅಸುರ ಹುಟ್ಕೊಂಡ

ಹಣ, ಹೆಂಡ ಹುಡ್ಗೀರು, ಬೆಟ್ಟಿಂಗು ಉಂಡ

ಬೆಳೆದ ಅಗಾಧ..ಆಗಿ ಟೆಸ್ಟು-ಒಂಡೇಗೇ ಗಂಡ

ಜನಕ್ಕೆ, ಆಟ ಆಡೋರ್ಗೆ ಅನ್ನಿಸ್ತು ಬೇರೆಲ್ಲಾ ದಂಡ

ನಿಜವಾದ ಆಟ, ನಟರ ನಟನೆ ತೂರಿತ್ತು ಗಾಳಿಗೆ

ಸಿಕ್ಕಿಬಿದ್ರು, ಬೇರೇನೂ ಕಾಣ್ಲಿಲ್ಲ ಐಪಿಎಲ್ ದಾಳಿಗೆ

ಭಾವಿ ಇಂಜನೀಯರೊಬ್ಬ ಬಲಿಯಾದ ಆಸೆಗೆ

ಸಿಡಿಸಿದ್ರು ಬಾಂಬು.. ಸೆಮಿಫೈನಲ್ಲು ಬಾಂಬೆಗೆ

ಈಗ ನೋಡಿ ಮೋದಿ-ಐಪಿಎಲ್ ದೇ ಎಲ್ಲೆಲ್ಲೂ ಮೋಡಿ

ಬರ್ತಾರೆ ದುಡ್ಮಾಡೋಕೆ ವಿದೇಶದಿಂದ ಆಟ್ಗಾರ್ರು ಓಡಿ

ಟಿಕೆಟ್ ದುಡ್ಡು, ಪ್ರೇಕ್ಷಕರ ರಕ್ತ ಹರಿದೈತೆ ಕೋಡಿ

ಹುಚ್ಮುಂಡೆ ಮದ್ವೇಲಿ ಉಂಡವನೇ ಜಾಣ.. ಅದ್ಕೇ ಹೇಳೋದು ನೋಡಿ