Thursday, December 31, 2020

ಪೂಜ್ಯ ರಾಷ್ಟ್ರಕವಿ ಕುವೆಂಪು ರವರ ವಿಚಾರಧಾರೆಗಳು ಅಗಣಿತ...ಆದರೆ ಅನ್ನದಾತನ ಬಗ್ಗೆ ಅವರ ವಿಚಾರ ಮತ್ತು ಅಭಿಪ್ರಾಯಗಳು ಎಲ್ಲ ಕಾಲಕ್ಕೂ ಆದರಣೀಯ, ಮಂಥನೀಯ, ಗಣನೀಯ. 


ರೈತ-ಕೃಷಿ ನುಡಿಗಳು

ಯಾರೂ ಅರಿಯದ ನೇಗಿಲ ಯೋಗಿಯೆ

ಲೋಕಕೆ ಅನ್ನವನೀಯುವನು

ಹೆಸರನು ಬಯಸದೆ ಅತಿಸುಖಕೆಳಸದೆ

ದುಡಿವನು ಗೌರವಕಾಶಿಸದೆ

ನೇಗಿಲಕುಳದೊಳಗಡಗಿದೆ ಕರ್ಮ

ನೇಗಿಲ ಮೇಲಿಯೆ ನಿಂತಿದೆ ಧರ್ಮ

ಕುವೆಂಪು, ನೇಗಿಲಯೋಗಿ, ಕೊಳಲು ಕವನ ಸಂಕಲನ

 

ಕರಿಯರದೊ ಬಿಳಿಯರದೊ ಯಾರದಾದರೆ ಏನು?

ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ

ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲೀಷರೊ?

ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ

ಕತ್ತಿ ಪರದೇಶಿಯಾದರೆ ಮಾತ್ರ ನೋವೆ?

ನಮ್ಮವರೆ ಹದಹಾಕಿ ತಿವಿದರದು ಹೂವೆ?”

ಕುವೆಂಪು, ರೈತನ ದೃಷ್ಟಿ, ಕೋಗಿಲೆ ಮತ್ತು ಸೋವಿಯಟ್ ರಷ್ಯಾ ಕವನ ಸಂಕಲನ

 

ಹಚ್ಚಿಕೊಳ್ಳಿರೊ ಹಚ್ಚಿಕೊಳ್ಳಿ ಪರಿಮಳಗಳಂ

ಗಂಧ ಅತ್ತರು ಪುನುಗು ಕಸ್ತೂರಿ ಇತ್ಯಾದಿ

ತರತರದ ಭೋಗಮಂ! ಇನ್ನೇಸು ದಿನ ತಾನೆ

ಹಚ್ಚಿಕೊಳ್ಳುವಿರದನು ನಾ ಕಣ್ಣಿನಲೆ ಕಾಂಬೆ!

ನಾಮ ಮುದ್ರೆ ವಿಭೂತಿಗಳ ಬಳಿದುಕೊಂಬವರು

ಕತ್ತೆಯಂದದಿ ಗದ್ದೆಯಲಿ ಗೆಯ್ದು ಮೈಬೆವರು

ಸುರಿಸಿ ಗೊಬ್ಬರ ಮಣ್ಣು ಬಳಿದುಕೊಂಬರಿಗಿಂತ

ಮೇಲೆಂಬ ಭಾವ ತಲೆಕೆಳಗಾಗಿ ಹೋಗುತಿದೆ!

ನೇಗಿಲ ಕುಳಂ ದೊರೆಯ ಕತ್ತಿಯನು ಕಿತ್ತೆಸೆದು,

ಮುತ್ತಿನುಂಡೆಯ ಮುಡಿವ ಸಿರಿನೆತ್ತಿಯನ್ನುತ್ತು

ಬತ್ತಮಂ ಬಿತ್ತಿ ಬೆಳೆಯುವ ಉತ್ತಮದ ಹೊತ್ತು

ಹತ್ತಿರಕೆ ಹತ್ತಿರಕೆ ಬರುತಿರುವುದೊತ್ತೊತ್ತಿ!

ಗೊಬ್ಬರಂ ಸಿಂಹಾಸನಕ್ಕೆರಿದಾ ದಿನಂ

ತನ್ನ ಹೊಗಳಿದ ಕಬ್ಬಿಲನ ಕಬ್ಬಿಗನ ಮಾಡಿ

ಮೆರೆಯುವುದು! ಅಂದು ಗೊಬ್ಬರದ ಕಂಪೆಲ್ಲರ್ಗೆ

ಪರಿಮಳದ್ರವ್ಯ ತಾನಾದಪುದು! ಏತಕೆನೆ,

ಸಿರಿವೆರಸು ಶಕ್ತಿಯಿರೆ ಗೊಬ್ಬರವೆ ಪರಿಮಳಂ;

ಇಲ್ಲದಿರೆ ಪುನುಗು ತಾನಾದೊಡಂ ಗೊಬ್ಬರಂ!”

ಕುವೆಂಪು, ಗೊಬ್ಬರ ಕವಿತೆ, ಕೋಗಿಲೆ ಮತ್ತು ಸೋವಿಯಟ್ ರಷ್ಯಾ ಕವನ ಸಂಕಲನ

 

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ

ಬಡತನವ ಬುಡಮುಟ್ಟ ಕೀಳ ಬನ್ನಿಕುವೆಂಪು