Thursday, January 26, 2012



ಜೈ ಭಾರತಾಂಬೆ


ಕೇಸರಿಯ ಶೌರ್ಯವದು,
ಹಸಿರುಟ್ಟ ಹರಿತವದು
ಶಾಂತಿಯಾ ಮಂತ್ರವದು,
ನಡುನೆಡೆವ ಚಕ್ರವದು
ಜೈ ಜೈ ಜೈ ಭಾರತಾಂಬೆ

ಇಲ್ಲುಂಟು ಏನಿಲ್ಲ
ಎಲ್ಲುಂಟು ಏಕಿಲ್ಲ
ನೀರುಂಟು ಇಂಗಿಲ್ಲ
ದಾಹವಿದು ಸತ್ತಿಲ್ಲ
ಜೈ ಜೈ ಜೈ ಭಾರತಾಂಬೆ

ದೇಶವಿದು ಸಿರಿವಂತ
ಸಾವ್ರಾರು ಹಣವಂತ
ಸುಡುವರು ಜೀವಂತ
ಬಡವರದು ಧಾವಂತ
ಜೈ ಜೈ ಜೈ ಭಾರತಾಂಬೆ

ಕಿತ್ತಿಲ್ಲಿ ತಿನ್ನುವವರು
ಹತ್ತಿಲ್ಲಿ ಉರಿಸುವವರು
ಸಾಲದಲಿ ಬೆಳೆವವರು
ಆದರಿಲ್ಲೆಲ್ಲ ಉಳ್ಳವರು
ಜೈ ಜೈ ಜೈ ಭಾರತಾಂಬೆ

ಖಾಕಿಲಿ ನಿಯ್ಯತ್ತೇ ಖಾಲಿ
ಕಾವಿಲಿ ಭಕ್ತಿಯದು ಜೋಲಿ
ಖಾದಿಯಲಿ ಗಾಂಧಿಗೇ ಗೋಲಿ
ಹೊಲವನ್ನೇ ಮೇಯುವುದು ಬೇಲಿ
ಜೈ ಜೈ ಜೈ ಭಾರತಾಂಬೆ

ಉಗ್ರಾಣದಿ ತುಂಬಿ ಹೆಗ್ಗಣ
ಗ್ರಾಮದಲ್ಲೀಗಿಲ್ಲ ದಿಬ್ಬಣ
ಗಣಿನೆಲವ ಮಾರಿ ಕಬ್ಬಿಣ
ರಾಜಕಾರಣಿಯದೀಗ ರಿಂಗಣ
ಜೈ ಜೈ ಜೈ ಭಾರತಾಂಬೆ

ಹೀಗಿದ್ದೂ ದಿಕ್ಕೆಡದಂತೆ ಹರಸು
ಹಿಗ್ಗಿದೆಯ ಕುಗ್ಗದಂತೆ ಬೆಳೆಸು
ಹಸಿರುಸಿರಾಡುವಂತೆ ಉಳಿಸು
ಪ್ರತಿ ರಕ್ತದಲಿ ದೇಶಪ್ರೇಮವ ಬೆರೆಸು
ಜೈ ಜೈ ಜೈ ಭಾರತಾಂಬೆ

Friday, January 20, 2012


ಕಾರ್ಟೂನ್ ಕೃಪೆ: ಕ್ಲಿಪ್ ಆರ್ಟ್.ಕಾಂ (ಅಂತರ್ಜಾಲ)

ಎಸ್ರೇ ಇಲ್ದೋರ್ಪಾಡು
ನನ್ನ ಸ್ನೇ-ಹಿತ ಹೇಳ್ದ
“ಬರೀ ಮಗಾ ನೀನೂ ಕವನಾನ”
ನಾನೂ ಗೀಚ್ದೆ, ಬಿಸಾಕ್ದೆ,
ಗೀಚ್ದೆ ಮಗ್ಚಾಕ್ದೆ, ಕಡೆಗೆ....
“ಸೂಪರ್ ಕಣೋ ಅಂದ ಸ್ನೇ-ಹಿತ”
ಕಳ್ಸು “ಸಂಪದ”ಕ್ಕೆ
ಮೆಲ್ಲಗೆ ’ಮಲ್ಲಿಗೆ’ಗೆ
ಇಲ್ಲ ’ಮಯೂರ’ ಕ್ಕೆ ಅಂದ.
ಕಳಿಸ್ದೆ...ಕಾದೆ..ಕಾದೆ..ಶಬರಿ
ಕಾದ್ಕೊಂಡ್ ಮುದ್ಕಿ ಆದಂಗೆ..
ವಿಶಾದಾನೂ ಇಲ್ಲ..
ಭೇಷ್ವಾದ ನೂ ಇಲ್ಲ...
ಆಮೇಲೇ ಯಾರೋ ಹೇಳಿದ್ರು,
ಓಗ್ಲಿ ಬಿಡೋ ಅವು ಸೇರಿರ್ತಾವೆ-ಕ.ಬು.
ನನ್ನ ಸ್ನೇ-ಹಿತ ಮತ್ತೆ ಹೇಳ್ದ
“ನಿಜಕ್ಕೂ ಚನ್ನಾಗಿ ಬರೀತಿಯ
ಕಳ್ಸು ಇನ್ನೂ ಒಂದಷ್ಟು”
ಬರ್ದೆ, ಕಳಿಸ್ದೆ, ಅವ್ಗಳದೂ ಅದೇ ಪಾಡು
ಸೇರಿದ್ವು ಅವ್ಗಳ ಪೂರ್ವಿಕರಂಗೆ
ನಮ್ಮಂಥವರ ಕವನ ಸೇರೋ ಕಸದ ಗೂಡು.
ಮತ್ತೆ ಹೇಳ್ದ ಸ್ನೇ-ಹಿತ
ಅದ್ಕೆ ನಾನಂದೆ
ಲೋ ನಿಮ್ಮಂಥೋರ್ಗೆ ಲಕ್ಕು
ನಮ್ಮಂತೋರು ಅಳಬೇಕು ಬಿಕ್ಕು
ಕವನ, ಕಥೆ ಎಲ್ಲಾ ಪ್ರಕ್ಟ ಆಗ್ತವೆ
ಏನಾದ್ರೂ ಬರೆದ್ರೆ ನೀವ್ಗಳು
ನಾವರ್ಕಂಡ್ ಬರ್ದ್ರೂ ಕ.ಬು ಸೇರ್ತವೆ
ಏನೇಳ್ಳಿ..ಬುಡು ಇದ್ ನಮ್ಗೋಳು.
ಮತ್ತೆ ಏಳ್ದ ಸ್ನೇ-ಹಿತ..
ಇವ್ನ್ಯಾಕೊ ಬಿಡಂಗಿಲ್ಲ ಅಂತ
ನಾನೇ ಎಲ್ಲಾ ಕವ್ನಾ ಸೇರ್ಸಿ
ಪ್ರಕ್ಟ ಮಾಡ್ಸೇಬಿಟ್ಟೆ ನಂದೇ ಆದ
ಒಂದು ಕವನ ಸಂಕಲ್ನಾ..
ಯತ್ವಾಸ ಒಂದೇಯಾ,,,
ಅವಾಗ್ಕೂ...ಈವಾಕ್ಕೂ..
ಬಿಡ್ಬಿಡ್ಯಾಗೋಗ್ತಿದ್ವು ಕ.ಬು. ಆವಾಗ
ಒಗ್ಗಟ್ಟಾಗಿ ಪುಸ್ತ್ಕಾಗಿ
ಜೊತ್-ಜೊತ್ಯಾಗವೆ ಕ.ಬು.ಲಿ ಈವಾಗ