Friday, May 29, 2009

ಮತ್ತೆ ಶಾಲೆಗೆ


ಬೇಸಿಗೆ ರಜೆಗಳು
ಕಳೆದವು ದಿನಗಳು
ಪುಸ್ತಕವಿಲ್ಲದ ಕ್ಷಣಗಳು
ಮತ್ತೆ ಬಂದೆವು ಶಾಲೆಗೆ

ಅಕ್ಕನ ಊರಲಿ
ಭಾವನ ಜೊತೆಯಲಿ
ಕಳೆದೆವು ರಜೆಗಳು
ಮತ್ತೆ ಬಂದೆವು ಶಾಲೆಗೆ

ಜ಼ೂನಲಿ ಸಿಂಹವು
ಪಿಂಜರ ಬಂಧವು
ಪಕ್ಷಿಧಾಮವ ನೋಡಿ
ಮತ್ತೆ ಬಂದೆವು ಶಾಲೆಗೆ

ಹಳ್ಳಿಗೆ ಹೋದೆವು
ಮಳೆಯಲಿ ನೆಂದೆವು
ನೆಗಡೀಲೂ ನಲಿದೆವು
ಮತ್ತೆ ಬಂದೆವು ಶಾಲೆಗೆ

ಹೋಂ ವರ್ಕ್ ಗೋಜಿಲ್ಲದೆ
ಸ್ಕೂಲ್ ವರ್ಕ್ ತಲೆನೋವಿಲ್ಲದೆ
ಹೇಗೆ ಹೋದವು ದಿನಗಳು ಗೊತ್ತಿಲ್ಲದೆ
ಮತ್ತೆ ಬಂದೆವು ಶಾಲೆಗೆ

ಮತ್ತದೇ ಹತ್ತು ಕೇಜಿ ಭಾರ
ಧೂಳು-ಹೊಗೆ ರಸ್ತೆಗಳು ಘೋರ
ಇಲ್ಲಿ ರಸ್ತೆ ದಾಟಿದವನೇ ಶೂರ
ಅದಕೇ ಮತ್ತೆ ಬಂದೆವು ಶಾಲೆಗೆ

ರಜೆದಿನ ಮುಗಿದ ವ್ಯಥೆಯಿತ್ತು, ಈಗಿಲ್ಲ
ರವಿ, ಶಶಿ, ರಮಾ, ಷಫಿ ಮತ್ತೆ ಸೇರಿ
ಸ್ಕೂಲಿನ ಪಾರ್ಕಿನಲ್ಲಿ ಆಡುವೆವು ಕೂಡಿ
ಅದಕೇ, ಮತ್ತೆ ಬಂದೆವು ಶಾಲೆಗೆ

ರಜೆಗಳು ವಿರಾಮಕೆ
ಮೋಜು ಆರಾಮಕೆ
ಶಾಲೆ-ವಿದ್ಯೆ ಭವಿತಕೆ
ಹೌದು..ಅದಕೇ..ಮತ್ತೆ ಬಂದೆವು ಶಾಲೆಗೆ

Thursday, May 28, 2009

ಅವಳು ಹೊರಟು ನಿಂತಾಗ




ನಿನ್ನನಗಲಿ ಹೇಗಿರಲಿ
ನೀನಿಲ್ಲದೆ ನಾ ಜಾಲಿಯಲಿ
ನಿನ್ನ ನೆನಪು ಸದಾ ಕಾಡುವುದು
ನೀ ಬರುವರೆಗೆ ದಿನ ಓಡುವುದು
ಬೆಳ್ಳಂ ಬೆಳಗೇ ಎಚ್ಚರ ನೀನಿಲ್ಲದೆ
ನೆತ್ತಿಗೆ ರವಿಯಿರೆ ಮಲಗುವೆ ಭಯವಿಲ್ಲದೆ
ನಿನ್ನ ಕೈಯ ರುಚಿ ಕಾಡುವುದು
ಹಲಬಗೆ ಹೊರರುಚಿ ರುಚಿಸುವುದು
ಕೆಲಸಕೆ ಹೊರಟಾಗ ನೀ ಎದುರಾಗುವುದು
ಕೆಲಸದಿ ಆಪ್ತ ಸಹಾಯಕಿ ಕುಲುಕಾಡುವುದು
ಮನೆಗೆ ಬಂದರೆ ನೀನಿಲ್ಲದೆ ಬೋರು
ಮನೆಗೇ ಬರದೆ ಹೊರಗೇ ಪಾರ್ಟಿಜೋರು
ಬಂದರೂ ಮನೆಗೆ ನಿನ್ನ ನೆನಪು ನೂರು
ಮಲಗಿಬಿಡುವೆ ಆದರೂ ಅದು ನಿತ್ಯ ನವ ಸೂರು

ಸೂಚನೆ: ಏಳು (ಪಂಕ್ತಿ ಬಿಟ್ಟು ಪಂಕ್ತಿ) ಅವಳಿಗೆ ಹೊರಟು ನಿಂತಾಗ
ಏಳು (ಪಂಕ್ತಿ ಬಿಟ್ಟು ಪಂಕ್ತಿ) ಬ್ಲಾಗ್ ಪೋಸ್ಟಿಗೆ ಕುಂತಾಗ

ನೆನಪಾಗುವುದು


ಬೇಸಿಗೆ ಬಂದರೆ
ನಗರದಿ ತೊಂದರೆ
ಹಳ್ಳಿಯೆಡೆಗೆ ವಲಸೆಯ ನೆನಪಾಗುವುದು
ಮಾವಿನ ತೋಪಿನ
ತಣ್ಣನೆ ತಂಪಿನ
ಹುಳಿಮಾವಿನ ಸವಿ ನೆನಪಾಗುವುದು
ಅಮ್ಮನು ಕಟ್ಟಿದ ಬುತ್ತಿ
ಕೂಡಿ ತಿಂದೆವು ಭರ್ತಿ
ಮತ್ತೆ ಆಡಿದ ಮರಕೋತಿ ನೆನಪಾಗುವುದು
ನೆಳಲಲಿ ನಿದ್ದೆ
ಹೊಳೆಯಲಿ ಒದ್ದೆ
ಒಡನಾಡಿದ ದಿನಗಳ ನೆನಪಾಗುವುದು
ಆ ಹುಣ್ಣಿಮೆ ರಾತ್ರಿಲಿ
ಶಿವನಳ್ಳಿ ಜಾತ್ರೆಲಿ
ಬತಾಸು-ಚುರುಮುರಿಯ ನೆನಪಾಗುವುದು
ರಾತ್ರಿಯ ಬಯಲಾಟ
ಹನುಮನ ಹುಡುಕಾಟ
ಕೊನೆಗೆ ಸೀತೆಯ ವ್ಯಥೆ ನೆನಪಾಗುವುದು
ಅಜ್ಜ ಸುತ್ತ ಹತ್ತಳ್ಳೀಗೂ ಸಜ್ಜನ
ಊರವರಿಗೆ ಅವನೇ ಯಜಮಾನ
ಅವ ಸತ್ತ ದಿನ ಊರೇ ಅತ್ತದ್ದು ನೆನಪಾಗುವುದು
ಇಲ್ಲದಾಗಿವೆ ಹಸಿರುಗಳು
ಸಂಜೆಗೆ ಮರಳುವ ರಾಸುಗಳು
ನೆನಪುಮಾತ್ರ ಈಗ ನೆನಪಾಗುವುದು

Saturday, May 23, 2009

ಕಪಿಲಾಪುರದ ಕಥೆ



(ಆತ್ಮೀಯರೇ...ನನಗೆ ಬಹಳ ದಿನಗಳಿಂದ ಕಾಡಿಸುತ್ತಿದ್ದ ಒಂದು ವಿ.ವಿ. ಉಪಕುಲಪತಿ ನೇಮಕಾತಿಯ ಹಗರಣವೊಂದನ್ನು ಬಿಂಬಿಸಲು ಭೇತಾಳನ ಕಥೆಯನ್ನು ಆರಿಸಿಕೊಂಡೆ ಪ್ರಸ್ತಾವನಾ ಮಾಧ್ಯಮವಾಗಿ, ನಿಮ್ಮ ಟಿಕೆ ಟಿಪ್ಪಣಿಗಳಿಗೆ ತುಂಬು ಮನಸ್ಸಿನ ಸ್ವಾಗತ)

ಮಹಾನಗರ, ಅಸೆಂಬ್ಲಿ, ಪಾರ್ಲಿಮೆಂಟ್ ಹೀಗೆ ಎಲ್ಲಾ ಚುನಾವಣೇಲೂ ಹಿಗ್ಗಾ ಮುಗ್ಗಾ ಸೋತರೂ ಮತ್ತೆ ಬೈ ಎಲೆಕ್ಷನಿಗೆ ನಿಲ್ಲುವ ಸಾಹಸಮಾಡುವ ಪುಢಾರಿಯಂತೆ ಹಠಬಿಡದ ಶತವಿಕ್ರಮ ಸುಡುಗಾಡಿನ ಬಳಿಯ ಬಿಕೋ ಎನ್ನುವ ಧೂಳುತುಂಬಿದ ಬೀಡಲಿ ಒಂಟಿ ಭೂತದಂತೆ ನಿಂತಿದ್ದ ಮುಳ್ಳುಜಾಲಿ ಮರಕ್ಕೆ ನೇತುಬಿದ್ದಿದ್ದ ಭೇತಾಳನನ್ನು ಹೆಗಲಿಗೇರಿಸಿ ಕ್ರೆಮೆಟೋರಿಯಂನ ವಾಹನದ ಕಡೆ ನಡೆಯುತಿರಲು... ಮಹತ್ವದ ಮೀಟಿಂಗ್ ನಡೆಯುವಾಗ ಎಲ್ಲರನ್ನೂ ಡಿಸ್ಟರ್ಬ್ ಮಾಡುವ ಮೊಬೈಲ್ ರಿಂಗ್ ಟೋನಿನಂತೆ..ನಿರ್ಜೀವ ನಿಶ್ಶಬ್ದವಾಗಿದ್ದ ಭೇತಾಳ ಮಾತನಾಡತೊಡಗಿತು...
"ಎಲೈ ... ಕುರ್ಚಿಸಿಗಲೆಂದು ಆ ಪಕ್ಷದಿಂದ ಈ ಪಕ್ಷ, ಈ ಪಕ್ಷದಿಂದ ಉ ಪಕ್ಷಕ್ಕೆ ನೆಗೆಯುವ ಪುಢಾರಿಯಂತೆ ಏನೂ ನನ್ನಿಂದ ನಿನಗೆ ಸಿಗುವುದು ಆಸಾಧ್ಯವೆಂದು ತಿಳಿದರೂ ನನ್ನ ಬೆನ್ನ ಹಿಂದೆ ಬಿದ್ದಿರುವ ನಿನ್ನ ಸಣಕಲು ದೇಹಕ್ಕೆ ನನ್ನಹೆಣ ಭಾರದ ತೂಕದ ಅರಿವಾಗದಂತೆ ಕಥೆಯೊಂದನ್ನು ಹೇಲುತ್ತೇನೆ ಕೇಳು" ಎಂದಿತು
"ಕಪಿಲಾಪುರದ ಕಪಿಲಭಾಷೆ ಅಭಿವೃದ್ಧಿ, ಭಾಷೆಯ ಬೆಳವಣಿಗೆ ಮತ್ತು ಸಂಶೋಧನೆಗೆಂದೇ ಮೀಸಲಾಗಿದ್ದ ಕಂಪಲಾ ವಿಶ್ವವಿದ್ಯಾನಿಲಯ ಅದರ ಉಪಕುಲಪತಿ ಕಸ್ತೂರಮ್ಮ ತಮ್ಮ ಅಧಿಕಾರಾವಧಿಯಲ್ಲಿ ವಿಶ್ವ ವಿದ್ಯಾಲಯಕ್ಕೆ ಅಮೋಘ ಯಶಸ್ಸು ಮತ್ತು ಹೆಸರನ್ನು ತಂದುಕೊಟ್ಟರು. ಅವರ ಕಾರ್ಯಾವಧಿ ಮುಗಿಯಲು ಆ ಸ್ಥಾನಕ್ಕೆ ಕಂಪಲಾಪುರದ ಪ್ರತಿಭಾನ್ವಿತ ಪ್ರೊ.ನೀಲಾಂಬಿಕೆ ಮತ್ತು ಬತ್ತೊಬ್ಬ ನಾಡಿನ ಪ್ರತಿಭೆ ಡಾ. ಕುಸುಮಕ್ಕ ಬಹು ಚರ್ಚಿತ ಹೆಸರುಗಳಾಗತೊಡಗಿದವು. ಆದರೆ ಕಪಿಲಾಪುರದ ಮು.ಮಂ. ಕನಕಪ್ಪ ಮತ್ತು ಉ.ಮು.ಮಂ. ತಮ್ಮ ಜಾತಿಯವಳೆಂದು ನೀಲಾಂಬಿಕೆಯ ಹೆಸರು ಸೂಚಿಸಿದರೆ ಪಕ್ಷದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ಮುಖಂಡ ತಮ್ಮ ಜಾತಿಗೆ ಸೇರಿದ ಕುಸುಮಕ್ಕನನ್ನೇ ಆ ಸ್ಥಾನಕ್ಕೆ ನಿಯೋಜಿಸಬೇಕೆಂದು ಪಟ್ಟು ಹಿಡಿದುಕುಂತರು. ವಿಷಯವನ್ನು ನಿಷ್ಪಕ್ಷವಾಗಿ ವಿಚಾರಿಸಿ ತಮಗೆನೆಸಿದಂತೆ ನಿರ್ಧಾರ ತೆಗೆದುಕೊಳ್ಳಬಹುದೆಂದು ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿದ್ದ ಸರ್ಕಾರ ಕುಲಪತಿಗಳಿಗೆ ತನ್ನ ಇಂಗಿತವನ್ನು ಸೂಚಿಸಿತು. ಹಾಗೆ ನೋಡಿದರೆ ಇದು ಕುಲಪತಿಯವರ ಸ್ವತಂತ್ರ ಕಾರ್ಯವ್ಯಾಪ್ತಿಯ ವಿಷಯವಾದರೂ ಸರ್ಕಾರದ "ಇಂಗಿತ" ವೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಕಪಿಲಾಪುರದ ಅಲಿಖಿತ ನಿಯಮ. ಹೀಗಾಗಿ ಈಗ ಕುಲಪತಿಗಳಿಗೆ ತಮ್ಮ ಮನಸೇಚ್ಛೆ ಉಪ ಕುಲಪತಿಯನ್ನು ಆರಿಸುವ ಚಾನ್ಸ್ ಸಿಕ್ಕಿದ್ದು..ವೈದ್ಯ ಹೇಳಿದ್ದು ಹಾಲು-ಅನ್ನ ರೋಗಿ ಬಯಸಿದ್ದು ಹಾಲು-ಅನ್ನ ಎನ್ನುವಂತಾಯಿತು. ಸಿಕ್ಕ ಅವಕಾಶವನ್ನು ಚನ್ನಾಗಿಯೇ ಉಪಯೋಗಿಸಿಕೊಂಡ ಪಕ್ಕದ ಪ್ರಾಂತ ಇಂಪಲಾಪುರದವನಾದ ಕುಲಪತಿ ತನ್ನಜಾತಿಯ ಇಂಪು ಭಾಷೆಯ ಪಂಡಿತೆ ಇಂಪಲಾಪುರದ ಪ್ರೊ. ಸಂಪೂರ್ಣೇಶ್ವರಿಯನ್ನು ನೇಮಿಸಿಯೇ ಬಿಟ್ಟರು.
ವಿಷಯ ಕಪಿಲಾಪುರದ ಗಲ್ಲಿ-ಗಲ್ಲಿಗಳಲ್ಲಿ ಗುಲ್ಲೆಬ್ಬಿಸಿ ಕಪಿಲಭಾಷಾ ಜಾಗರಣಾ ಸಮಿತಿ ಹೋರಾಟಕ್ಕಿಳಿದು ಸರ್ಕಾರಕ್ಕೆ ಇರಿಸು-ಮುರಿಸಿಗೆ ಕಾರಣವಾಗತೊಡಗಿತು. ಚಳುವಳಿಯ ತೀವ್ರತೆ ಹೆಚ್ಚಾಗಿ, ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ವಿಚಾರಣೆಗೆ ಬಂದೇ ಬಿಡ್ತು..ನ್ಯಾಯಾಲಯ ಕಪಿಲ ಭಾಷಾ ವಿ.ವಿ.ಗೆ ಇಂಪು ಭಾಷೆಯ ಪ್ರೊಫೆಸರ್ ನೇಮಕಕ್ಕೆ ಆಕ್ಷೇಪಣೆ ಎತ್ತಿಹಿಡಿದು, ಸರ್ಕಾರದ ಕ್ರಮವನ್ನು ಅನೂರ್ಜಿತಗೊಳಿಸಿ, ಕಪಿಲಾಪುರದ ಅರ್ಹ ಪ್ರತಿಭಾವಂತರ ಪಟ್ಟಿಯೋದನ್ನು ಮಾಡಿ ಸರ್ಕಾರಕ್ಕೆ ಸೂಚಿಸಬೇಕೆಂದು ಆ ಕಾರ್ಯಕ್ಕೆಂದು ಆಯೋಗವೊಂದನ್ನು ರಚಿಸಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿ ಅದುವರೆಗೂ ಪೂರ್ವ ಉಪ ಕುಲಪತಿಯವರೇ ಮುಂದುವರೆಯಿವಂತೆ ತೀರ್ಪುಕೊಟ್ಟಿತು".
"ಎಲೈ ಶತ ವಿಕ್ರಮನೇ ನನಗೆ ಕೆಲವು ಸಂದೇಹಗಳಿವೆ...ಮೊದಲನೆಯದಾಗಿ - ಮು.ಮಂ., ಉ.ಮು.ಮಂ., ವಿ.ಪ.ನಾಯಕ ಇವರು ಪರಸ್ಪರ ಲೇವಾದೇವಿಯ (ಎಲ್ಲ ವಿಷಯಗಳಲ್ಲಿ ಮಾಡುವಂತೆ) ಅಧಾರದ ಮೇಲೆ ಯಾರನ್ನಾದರೂ ತಾವೇ ಆರಿಸಬಹುದಿತ್ತಲ್ಲ ಹಾಗೇಕೆ ಮಾಡಲಿಲ್ಲ..? ಎರಡನೇ ಸಂದೇಹ ..ಕುಲಪತಿ ತನ್ನ ಆದೇಶವನ್ನು ಯಾರಾದರೂ ಪ್ರಶ್ನಿಸಬಹುದು ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಉಪಯೋಗಿಸಲಿಲ್ಲವೇಕೆ?....ನಿನ್ನ ಮುತ್ತಾತಂದಿರಂತೇ..ನನ್ನ ಈ ಸಂದೇಹಗಳನ್ನು ತಿಳಿದೂ ಪರಿಹರಿಸದೇ ಹೋದರೆ ನಿನ್ನ ತಲೆ ತಾಲಿಬಾನ್ ಗಳು ಅಂಧ- ಧರ್ಮಾನುಕರಣೆ ಎಂಬ ಸುಳ್ಳು ನೆಪಗಳ ಹೆಸರಿನಲ್ಲಿ ವಿನಾಕಾರಣ ಅಮಾಯಕರ ಹತ್ಯೆಗೆ ಉಪಯೋಗಿಸುವ ಚೀನಾದ ಬಾಂಬಿನಂತೆ ಸಿಡಿದು ಹೋದೀತು, ಎಚ್ಚರಿಕೆ" ಎಂದು ತನ್ನ ಕೊರೆತವನ್ನು ಮುಗಿಸಿತ್ತು ಭೇತಾಳ.
"ಹೇ ತಾಳವಿಲ್ಲದ ಭೇತಾಳನೇ, ನನ್ನ ಇಷ್ಟಾಯಿಷ್ಟದ ಪರಿವೆಯೇ ಇಲ್ಲದೇ lecture ಕೊರೆಯುವ ಪ್ರೊಫೆಸರುಗಳಂತೆ ನಿನ್ನ ತಲೆಬುಡವಿಲ್ಲದ ಕಥೆ ಹೇಳಿ ..ಎಷ್ಟೇ ಮನವಿ ಮಾಡಿಕೊಂಡರೂ ಅರ್ಥವಾಗದೇ ಸಭಾ ಭವನದಲ್ಲೇ ಕಿರಿಚಾಡುವ ವಿರೋಧ ಪಕ್ಷದವರಂತೆ ಅರ್ಥವಿಲ್ಲದ ಮತ್ತು ವಿವೇಚನಾ ವಿಹೀನ ಪ್ರಶ್ನೆಯನ್ನು ಕೇಳಿದ್ದೀಯೆ,,ಪರವಾಗಿಲ್ಲ..ನನ್ನ ಉತ್ತರ ಕೇಳು...
ಮು.ಮಂ., ಉ.ಮು.ಮಂ. ಅಥವಾ ವಿ.ಪ.ನಾಯಕ ಇವರುಗಳಿಗೆ ಇದ್ದದ್ದು ಕಡೆಯ ವರ್ಷ ಹಾಗಾಗಿ..ಮುಂದೆ ಚುನಾಯಿತರಾಗಿ ಬರುವರೋ ಇಲ್ಲವೋ ಎಂಬುದು ಅವರಿಗೇ ಅನುಮಾನವಾಗಿತ್ತು.ಈ ಅಂಶ ನಿನ್ನ ಮಿದುಳಿಲ್ಲದ ಬುರುಡೆಗೆ ಹೇಗೆ ಹತ್ತೀತು..?.ಹೀಗಿರುವಾಗ ತಮ್ಮ ಆಯ್ಕೆಯನ್ನು ಮುಂದಿಟ್ಟಿದ್ದರು.
ಇನ್ನು ನಿನ್ನ ಎರಡನೇ ಸಂದೇಹ ಮೊದಲನೆಯದಕ್ಕಿಂತ ಮೂರ್ಖ ಸಂದೇಹ...ಏಕೆಂದರೆ..ಕಪಿಲಾಪುರದವರು ತಮ್ಮ ನೆಲದಲ್ಲಿ ಇಂಪಲಾಪುರ, ಟೆಂಪಲಾಪುರ ಅಲ್ಲದೇ ಮಂಪಲಾಪುರದವರನ್ನು ಬೇರೂರಲು ಬಿಟ್ಟಿದ್ದರು..ಹೀಗಿರುವಾಗ ಯಾವುದೇ ಪ್ರತಿರೋಧ ಇರುವುದಿಲ್ಲವೆಂದು ಕುಲಪತಿ ಅತಿ ಜಾಣತನ ತೋರಿದ್ದ..."
"ಭಲೇ ಶತವಿಕ್ರಮ ನಿನ್ನ ಬುದ್ಧಿವಂತಿಕೆ ಮೆಚ್ಚುವಂತಹುದು...ಆದರೆ ನೀನು ಮೌನ ಮುರಿದೆ..."
ಎನ್ನುತ್ತಾ ಕರ್ಕಶವಾಗಿ ಊಳಿಡುತ್ತಾ ನಾಯಿಯರೂಪ ಧರಿಸಿ ಶತವಿಕ್ರಮನ ಹೆಗಲಿಂದ ಜಾರಿ ಓಡಿ ಮತ್ತೆ ಜಾಲಿಮರದ ಕೊಂಬೆಗೆ ನೇತಾಡತೊಡಗಿತು.

(ಚಿತ್ರ: ಭೇತಾಳನ ಕಥೆಗಳು ಚಂದಮಾಮ ಪತ್ರಿಕೆ, ಅಂತರ್ಜಾಲ ಕೃಪೆ)

Friday, May 22, 2009

ಅಮ್ಮ


ಬೆಚ್ಚನೆ ಕರುಳಪ್ಪುಗೆ
ಬಳ್ಳಿಗೆ ಒಳಗೆ, ಹೊರಗೆ
ಡವ-ಡವಿಕೆ ಜೋಗುಳ ಒಳಗೆ
ಮೈದಡವಿ ಮಡಿಲಲಿ ಹೊರಗೆ
ಚರಾಚರದ ಸೃಷ್ಠಿಗೆ ಕಾರಣ ದೇವರು
ನನ್ನ ಹೊತ್ತು ಹೆತ್ತವಳು ತಾಯಿ ದೇವರು
ಲಾಲಿಸಿ-ಪಾಲಿಸಿ ಮಗುವ
ಮುದ್ದಿಸಿ ರಕ್ಷಿಸಿ ಬಾಲ್ಯವ
ನೋವಲಿ ‘ಅಮ್ಮಾ‘ ಎನಲು
ಓಡೋಡಿ ಬರುವಳು
ನನ್ನ ಮೇಲಿನ ಅಪ್ಪನ ಕೋಪಕೆ
ಆಡ್ಡಗೋಡೆಯಾಗಿ ನಿಲುವಳು
ನನಗೆ ಬೀಳಬೇಕಾದ ಏಟನು
ತಾನೇ ತಿನುವಳು
ನನ್ನ ನೋವಲಿ ತಾನೊಂದು
ಸಂತೈಸುವಳು
ನನ್ನಲ್ಪ ಗೆಲುವಲೂ
ಜಗಗೆದ್ದಂತೆ ನಲಿವಳು
ಬಾಲ್ಯ..ಶಾಲೆ ಆಗಲೂ ಮಗು
ಕಾಲೇಜು, ಉದ್ಯೋಗ
ಆಗಲೂ ಮಗು
ಮದುವೆಯಾಗಿ ತಂದೆಯಾದರೂ
ಅಪರೂಪಕ್ಕೆ ಹೋದಾಗ ಊರಿಗೆ
ದಢೂತಿದೇಹವ ಬಗ್ಗಿಸಿ ನಮಿಸಲು
ಅನ್ನುವಳಲ್ಲ ‘ಎಷ್ಟು ಸೊರಗಿರುವೆ ಮಗು?‘
ಅವಳಿಗೆ ನಾನು ಈಗಲೂ ಮಗು
ಅಮ್ಮ ಯಾವಾಗಲೂ ಅಮ್ಮ
ಮಗ ತಾತನಾದರೂ
ಅವಳಿಗೆ ಮಗುವೇ.

Tuesday, May 19, 2009

ಬಿಟಿಎಸ್-ಬಸ್ಸಿನಲ್ಲೊಮ್ಮೆ

ಸ್ನೇಹಿತರೇ,
ನನ್ನ ಭಾವ ಮಂಥನ ಬ್ಲಾಗಿನಲ್ಲಿ ಇದನ್ನ ಪೋಸ್ಟ್ ಮಾಡಿದ್ದೆ...ನನಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ, ಅರ್ಥವಾಗಲಿಲ್ಲ...ನನ್ನ ಲೇಖನದಲ್ಲಿ ಉಲ್ಲೇಖಿಸಿದ ವಿಷಯದ ಸಾಕ್ಷಾತ್ಕಾರ ಆಯ್ತೇ..??! ಒಂದು ಕ್ಷಣ ಚಿಂತೆ, ಮತ್ತೊಂದು ದಿನ ಆತಂಕ, ಹೀಗೇ..ಮುಂದುವರಿದು..ನನಗೆ ಏನೇನೋ ಅನುಮಾನಗಳು...ಮನಸ್ಸು ಒಪ್ಪಲಿಲ್ಲ..
ಈಗ ನನಗೆ ಕಾರಣ ಅರ್ಥವಾಗುತ್ತಿದೆ..ನನ್ನ ಈ ಬ್ಲಾಗನ್ನು ನೋಡಿದವರು ಬಹುಶಃ ಭಾವಮಂಥನವನ್ನು ನೋಡಿರಲಿಕ್ಕಿಲ್ಲ ..ಅಥ್ವಾ ನೋಡಿದ್ದರೂ...ಹಿಂದಕ್ಕೆ ಹೋಗಿರಲಿಕ್ಕಿಲ್ಲ ಅಂತ...ಅಥವಾ
ಹಾಗಂತ ಸಮಾಧಾನ ಮಾಡ್ಕೊಂಡು..ಇಲ್ಲಿ ಅದನ್ನೇ ಮತ್ತೆ ..ಗುಜರಾಯಿಸ್ತಾ ಇದ್ದೇನೆ...ಓದಿ..ಪ್ರತಿಕ್ರಿಯೆ ನೀಡಿದರೆ..ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಕನ್ನಡ ಪದಗಳನ್ನು ಕೇಳಿದಷ್ಟೇ ಆನಂದ ಆಗುತ್ತೆ ನನಗೆ....


ಬಹಳ ವರ್ಷಗಳ ನಂತರ ಬಿ.T.ಎಸ್ ನಲ್ಲಿ ಪ್ರಯಾಣ ಮಾಡೋ ಅವಕಾಶ ಕೂಡಿಬಂದಿತ್ತು. ಹಾಗೇ..ಈ ವರೆಗೆ ನನ್ನ ಸ್ನೇಹಿತರು ಹೇಳಿತ್ತಿದ್ದುದು ಅಕ್ಷರಶಃ ಸತ್ಯ ಅನ್ನೋದನ್ನು ತಿಳಿಯೋ ಅವಕಾಶ ಸಹಾ ಸಿಕ್ಕಿತ್ತು.
ಹತ್ತು ವರ್ಷಗಳಿಂದ ದೇಶದ ಪೂರ್ವೋತ್ತರ ಪ್ರಾಂತ್ಯದಲ್ಲಿ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದು ಈಗ ಒಂದು ವಾರದ ಹಿಂದೆ ಮದ್ರಾಸಿಗೆ ವರ್ಗವಾಗಿತ್ತು. ಆ ದಿವಸ ನನ್ನ ಸ್ಕೂಟರ್ ನನ್ನ ಗೆಳೆಯನೊಬ್ಬ ಕೆಲಸನಿಮಿತ್ತ ತೆಗೆದುಕೊಂಡು ಹೋಗಿದ್ದ, ಹಾಗಾಗಿ ಬಿ.ಟಿ.ಎಸ್ ನಲ್ಲಿ ಪ್ರಯಾಣಿಸುವ ಸದವಕಾಶ. ಸರಿ ಮೆಜೆಸ್ಟಿಕ್ಕಿಗೆ ಬಸ್ ಹತ್ತಿದೆ. ವಿಲ್ಸನ್ ಗಾರ್ಡನ್ ಬಳಿ ಬಂದಾಗ ಕಂಡಕ್ಟರಿಗೆ "ಮೆಜೆಸ್ಟಿಕ್" ಅಂತ ಹೇಳಿ ಹತ್ತರ ನೋಟು ಕೊಟ್ಟೆ. ಚಿಲ್ಲರೆ ಜೊತೆ ಟಿಕೆಟ್ ಕೊಟ್ಟರು ಕಂಡಕ್ಟರ್. ನನ್ನ ಮುಂದೆ ನಿಂತಿದ್ದ ಸಹ ಪ್ರಯಾಣಿಕನಿಗೆ ಕೇಳಿದೆ.."ಹಲೋ ಸರ್..ಈ ಬಸ್ಸು ಮಾರ್ಕೆಟ್ ಮಾರ್ಗ ಹೋಗುತ್ತಾ?"...ಆತ ಪಿಳಿ ಪಿಳಿ ಕಣ್ಣು ಬಿಟ್ಟ..ಬಹುಶಃ ಸರಿಯಾಗಿ ಕೇಳ್ಸಿರಲಿಕ್ಕಿಲ್ಲ ಅಂತ ಮತ್ತೆ ಕೇಳಿದೆ, ಮತ್ತದೇ ನಿರ್ಲಿಪ್ತ ಭಾವ...ಮತ್ತೆ..ಇಂಗ್ಲೀಷಿನಲ್ಲಿ ಕೇಳಿದೆ...ತಕ್ಷಣ.."ಯಾ..ಯಾ..ದಿಸ್ ಗೋಸ್ ವಯ ಮಾರ್ಕೆಟ್ ..ಬಟ್ ಯು ನೋ..ಐ ಡೋನ್ಟ್ ನೋ ಕನ್ನಡ" ಎಂದ..ನನಗೆ ಸ್ವಲ್ಪ ರೇಗಿತು..ಅಲ್ಲ ಇಂಗ್ಲೀಷಿನಲ್ಲಿ ಉತ್ತರ ಕೊಟ್ಟ..ಸರಿ..ಆದರೆ ನನಗೆ ಕನ್ನಡ ಬರೋದಿಲ್ಲ ಅಂತ..ರಾಜಾ ರೋಷವಾಗಿ ಅದೇ ಒಂದು qualification ಅನ್ನೋ ತರಹ ಹೇಳ್ತಿದ್ದಾನಲ್ಲ ಅಂತ. "ಮತ್ತೇನು ನೀವು ಇಂಗ್ಲೀಷಿನವರೇ...??" ಕೇಳಿದೆ..."pardon me..??" ನಾನು ಕೇಳಿದ ರೀತಿ ಮತ್ತು ನನ್ನ ಧಾಟಿಯಿಂದ ಅವನಿಗೆ ಅರ್ಥವಾದ್ರೂ ಆಗದವನಂತೆ..ಏನು ಹೇಳಿದ್ರಿ..? ಅನ್ನೋ ತರಹ ಕೇಳಿದ...ನನಗೂ ನನ್ನ ವರ್ತನೆ ಸರಿಯಿಲ್ಲ ಎನ್ನಿಸಿ.."I mean are you from north India..?" ಎಂದೆ. "ನೋ ಐಯಾಮ ಫ್ರಂ ಆಂಧ್ರ" ಎಂದ. "ಓ ಹಾಗೋ...ಎಷ್ಟು ವರ್ಷ ಆಯ್ತು ನೀವು ಬೆಂಗಳೂರಿಗೆ ಬಂದು..?" ಎಂದೆ. ಮತ್ತೆ ಪಿಳಿ..ಪಿಳಿ..ನಾನು ಮತ್ತೆ.."how long you are in Bangalore..?" ಅಂತ ಇಂಗ್ಲಾಂತರಿಸಿದೆ...ಅದಕ್ಕೆ ಆ ಮಹಾಶಯ.." last six years" ಎಂದ. "ಮತ್ತೆ ಅಲ್ಪ ಸ್ವಲ್ಪ ಕನ್ನಡ ಕಲಿತಿರಬೇಕಲ್ವಾ..?"..ಅವ ನನ್ನ ಮುಖ ನೋಡ್ದಾಗ ನನ್ನ ತಪ್ಪಿನ ಅರಿವಾಗಿ.."by now you must have learnt a little bit of Kannada.." ಎಂದೆ. " no..I dont feel it is necessary..every one here speaks English or Hindi" ಎಂದ. "ಎಲಾ ಇವನ..!! ಕನ್ನಡ ನಾಡಿನಲ್ಲಿ ಕನ್ನಡ ಕಲಿಯೋ ಅವಶ್ಯಕತೆ ಇಲ್ಲ ಅಂತ ಎಷ್ಟು ಧೀಟಾಗಿ ಹೇಳ್ತಾ ಇದ್ದಾನೆ..?"...ಎನ್ನಿಸಿ ನಾನು ಇನ್ನೇನೋ ಕೇಳೋ ಮೊದಲೇ..ಅವನ ಪಕ್ಕದಲ್ಲಿದ್ದಾತ (ಅವನ ಸ್ನೇಹಿತ ಅಂತ ಕಾಣುತ್ತೆ) .."ಇತನಿಕೇಮಂಟ ಮನಮು ಕನ್ನಡಂಲೋ ಮಾಟಲಾಡಲೇದನಿ ಕೋಪಮಾ..?"..ಅಂದ...ನನಗೆ ಪಿತ್ತ ನೆತ್ತಿಗೇರಿತ್ತು..."ಕಾದಂಡಿ..ಕರ್ನಾಟಕಮುಲೋ ವಾಸಿಂಚಿ..ಇಕ್ಕಡ ಉದ್ಯೋಗಂ ಚೇಸೇ ಮೀಕು..ಕನ್ನಡಂ ನೇರ್ಚುಕೋವಾಲಿ ಅನಿ ಅನಿಪಿಂಚಲೇದ..?" (ಆಲ್ರೀ..ಕರ್ನಾಟಕದಲ್ಲಿ ವಾಸಿಸಿ ಇಲ್ಲಿ ಉದ್ಯೋಗದಲ್ಲಿರೋ ನಿಮಗೆ ಕನ್ನಡ ಕಲಿಯಬೇಕು ಎನಿಸಿಲ್ಲವೇ..?) ಎಂದೆ. ನನ್ನ ತೆಲಗನ್ನು ಕೇಳಿ ಆತ ದಂಗಾದ ಅಂತ ಕಾಣುತ್ತೆ.." ಮೀಕು ಇಂತ ಬಾಗಾ ತೆಲುಗು ವಸ್ತುಂದೇ,,?? (ನಿಮಗೆ ಇಷ್ಟು ಚನ್ನಾಗಿ ತೆಲುಗು ಬರುತ್ತದಲ್ಲಾ)" ಅಂತ ಹುಬ್ಬೇರಿಸಿದ. ನಾನು ಕನ್ನಡದಲ್ಲೇ "ನಿಮ್ಮ ವಿಜಯವಾಡ ದಲ್ಲಿ ಕೆಲಸದ ಮೇಲೆ ಆರು ತಿಂಗಳು ಇರಬೇಕಾದಾಗ ಕಲಿತಿದ್ದೆ" ಎಂದೆ. ಅವನಿಗೆ ಆಶ್ಚರ್ಯ ವೆಂಬತೆ ಈ ಗ ನಾನು ಹೇಳಿದ್ದು ಅರ್ಥವಾಗಿತ್ತು. ನಮ್ಮ ಮಾತು ಆಲಿಸುತ್ತಿದ್ದ ಇನ್ನೊಬ್ಬ ಹಿರಿಯ ವಯಸ್ಸಿನವರು.."ಅದೇ ಸಾರ್ ನಾವು ಕನ್ನಡಿಗರು ಮಾಡೋ ತಪ್ಪು...ನಾವು ಬೇರೆಡೆ ಹೋದಾಗ ಅಲ್ಲಿನವರ ಜೊತೆ ವ್ಯವಹರಿಸಬೇಕಲ್ಲಾ ಅಂತ ಅವರ ಭಾಷೇನ ಕಲೀತೀವಿ..ಅದೇ ನಮ್ಮ ನಾಡಗೆ ಬರುವ ಬೇರೆ ಭಾಷಿಗರಿಗೆ ಆ ಭಾವನೆ ಬರುವಂತೆ ಮಾಡುವುದರಲ್ಲಿ ವಿಫಲರಾಗುತ್ತೇವೆ...ಈಗ ನಿಮ್ಮನ್ನೇ ತೆಗೆದುಕೊಳ್ಳಿ ...ಆತನಿಗೆ ಬರಲಿಲ್ಲ ಅಂತ ತೆಲಗಲ್ಲಿ ಸಂಭಾಷಿಸಿದಿರಿ...ಇವರಿಗೆ ಕನ್ನಡದ ಅವಶ್ಯಕತೆ ಎಲ್ಲಿ ಬರಬೇಕು ಹೇಳಿ ?..ಹೀಗೇನೇ ನಾವು ಪಂಚಭಾಷಿಗಳಾಗುತ್ತೇವೆ...ಬಹುತೇಕ ಕನ್ನಡಿಗರಿಗೆ ಹೊರಗಿನವನ ಜೊತೆ ಆಗಂತುಕ ಭಾಷೆಯಲ್ಲಿ ಮಾತನಾಡಿಸಿದರೆ ಆತ ಖುಷಿಪಡುತ್ತಾನೆ ಅಂತ ಅವರ ಭಾಷೆಯಲ್ಲೇ ವ್ಯವಹರಿಸುತ್ತೇವೆ, ಕನ್ನಡಿಗರೆಲ್ಲಾ ಹೀಗೇನೇ ಎಂದುಕೊಳ್ಳುವ ಹೊರಗಿನವರೂ ಇಲ್ಲಿಗೆ ಬರುವುದಕ್ಕೆ, ನೆಲಸುವುದಕ್ಕೆ, ವ್ಯವಹರಿಸುವುದಕ್ಕೆ ಹಿಂಜರಿಕೆಯಿರುವುದಿಲ್ಲ ಇದು ಒಂದು ರೀತಿ ಅಂತ್ಯ-ಹೀನ ವರ್ತುಲವಾಗುತ್ತೆ ..ಆ ವರ್ತುಲದಲ್ಲಿ ಕಳೆದು ಹೋಗುವುದು ಕನ್ನಡ...!!! ಇಂತಹ ವಾತಾವರಣದಲ್ಲಿ ಇಲ್ಲದಂತಾಗುವುದು ಕನ್ನಡಿಗರು...!! ಈ ದಿನ ಬೆಂಗಳೂರಿನಲ್ಲಿ ಕನ್ನಡಿಗರು ಶೇ. ೫೦-೬೦ ಮಾತ್ರ, ಅದರಲ್ಲಿ ಕನ್ನಡದಲ್ಲಿ ವ್ಯವಹರಿಸುವುದು ಶೇ. ೪೦-೫೦ ಮಾತ್ರ. ಯಾತಕ್ಕೆ ಹೇಳಿ..? ನಿಮ್ಮಂತಹ ಕನ್ನಡಿಗರೂ ವ್ಯವಹಾರದಲ್ಲಿ, ತಮ್ಮ ಮುಂದಿರುವವನಿಗೆ ಅನುಕೂಲವಾಗಲಿ ಅಂತ ಇತರ ಭಾಷೆನೇ ಬಳಸೋದರಿಂದ.. ಹಾಗಂತ ನಾವು ಕೆಲವು ಇತರ ಭಾಷಿಗರ ತರಹ ದುರಭಿಮಾನಿಗಳಗಬೇಕು ಎನ್ನುತ್ತಿಲ್ಲ.. ಆದರೆ ನಮ್ಮ ಭಾಷೆಯನ್ನು ಇತರರ ಮನಸೊಪ್ಪುವ ರೀತಿ ಅವರಿಗೆ ತೊಂದರೆಯಾಗದಂತೆ ಬೆಳೆಸುವುದರಲ್ಲಿ ತಪ್ಪೇನಿದೆ..? ನಾವು ಇತರ ದೇಶಕ್ಕೆ ಹೋದರೆ ಅಲ್ಲಿ ಅವರ ಭಾಷೆಯ ಪ್ರಾಥಮಿಕ ಹಂತದ ಪರಿಣಿತಿಯನ್ನು ಹೊಂದಬೇಕಂತೆ...ಇಲ್ಲಿ ..ಕಡೇ ಪಕ್ಷ ಕನ್ನಡದಲ್ಲಿ ಸಂಭಾಷಿಸಿದರೆ ಏನು ತಪ್ಪು..? ನಮ್ಮಲ್ಲೇ ಹುಳುಕಿದ್ದು..ಸರ್ಕಾರ..ಮತ್ತು ಇತರ ಭಾಷಿಗರನ್ನು ದೂರುವುದು ನಮಗೆ ಸಲ್ಲದು. ಕನ್ನಡಿಗರು ತಮ್ಮ ತಮ್ಮಲ್ಲಿಯೇ ಕನ್ನಡದಲ್ಲಿ ಮಾತನಾಡಿಕೊಳ್ಳುವರೇ..ಎಂದು ನನಗೆ ಸಂಶಯವಾಗುತ್ತದೆ..ಇನ್ನು ಬೇರೆಯವರನ್ನು ದೂರುವುದು ಸರಿಯಲ್ಲ.." ಹಿರಿಯರ ಈ ಸುದಿರ್ಘ ವಿಮರ್ಷೆ ಹಲವರಿಗೆ ಹಿಡಿಸಿತು..ಚಪ್ಪಾಳೆ ಸದ್ದು ಕೇಳಿ..ಅರೆರೆ..ಅಂದರೆ ಸುಮಾರು ಇಲ್ಲಿರುವ ಎಲ್ಲರಿಗೂ ಕನ್ನಡ ಬರುತ್ತೆ...ಮತ್ತೆ...ನಾನು ನನ್ನ ಸಹ ಪ್ರಯಾಣಿಕನೊಡನೆ ಮಾತನಾಡುವಾಗ ಇವರೆಲ್ಲ ಸುಮ್ಮನೆ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರಲ್ಲಾ..? ಅರ್ಥವಾಗಲಿಲ್ಲ!!!..ಏಕೆ ಕನ್ನಡಿಗರಿಗೆ ಈ ಕೀಳರಿಮೆ...ಎಂದು ಇವರಲ್ಲಿ ಭಾಷಾಭಿಮಾನ ಜಾಗೃತಗೊಳ್ಳುವುದು? ಕೆಲವೊಮ್ಮೆ ಪರಸ್ಪರ ಕನ್ನಡದವರೇ ಎಂದು ಗೊತ್ತಿದ್ದರೂ..ಬೇರೆಯವರ ಎದುರಲ್ಲಿ..ಮೂರನೇ ಭಾಷೆಯಲ್ಲಿ ವ್ಯವಹರಿಸುವುದಕ್ಕೆ ಕನ್ನಡಿಗರ ಈ ಕೀಳರಿಮೆ ಅಥವಾ ಸಂಕೋಚವೇ ಕಾರಣ ಎನ್ನಿಸುತ್ತದೆ. ನಮ್ಮನಮ್ಮಲ್ಲಿ ಹೆಮ್ಮೆಯಿಂದ ಕನ್ನಡದಲ್ಲಿ ವ್ಯವಹರಿಸುವ ಮೊದಲ ಪಾಠವನ್ನು ಕನ್ನಡಿಗರು ಮನನ ಮಾಡಿಕೊಳ್ಳಬೇಕು, ಇತರರೊಡನೆ ಮೊದಲಿಗೆ ಕನ್ನಡದಲ್ಲಿ ವ್ಯವಹರಿಸಿ, ಯಾರಿಗೆ ಗೊತ್ತು ಮುಂದಿರುವವರಿಗೆ ಕನ್ನಡ ಬರಬಹುದೇನೋ?..ಎಲ್ಲರೂ ಇದನ್ನು ಪರಿಪಾಲಿಸಿದರೆ ಬಹುಶಃ ಬೇರೆಭಾಷಿಗರು ಕನ್ನಡ ಕಲಿಯಲು ಮುಂದಾಗಬಹುದು..ಭಾಷೆ ಬೆಳೆಯುವುದು ಹೀಗೆ....

Monday, May 18, 2009

ಗರ್ಭಧಾರಿ ಗಂಡುಗಳು..!!!!








ಗೆಳೆಯರೇ,
ಈ ಬ್ಲಾಗಿನ ಮೂಲಕ ನನ್ನ ಅಧ್ಯಯನ ಕ್ಷೇತ್ರದ ಒಂದು ವಿಸ್ಮಯಕಾರಿ ವಿಷಯವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಈ ಚಿತ್ರ ನೋಡ್ತಿದ್ದೀರಲ್ಲಾ..ಇದು ಸಮುದ್ರ ಕುದುರೆಯದು...ಅರೆ..ಸಮುದ್ರದಲ್ಲಿ ಕುದುರೇನೆ..?? ಸೋಜಿಗ ಅನ್ನಿಸೊಲ್ಲವೇ..? ಹೌದು..ಆದ್ರೂ ನಿಜ...ಆದ್ರೆ ಇದು ಕುದುರೆ ಅಲ್ಲ ..ಒಂದು ಜಾತಿಯ ಮೀನು. ಇದೇ ರೀತಿಯ ಸ್ವಲ್ಪ...ಸ್ವಲ್ಪ ಏನು..ಹೆಚ್ಚೇ ವಿಚಿತ್ರ ಅನ್ನಿಸೋ ಇನ್ನೊಂoದು ಸಮುದ್ರ ಕುದುರೆಯ ಸಂಬಂಧಿ..ಸಮುದ್ರ ದೈತ್ಯ ಅಥವಾ ಸೀ ಡ್ರಾಗನ್. ಇದಕ್ಕೋ ಸಮುದ್ರ ತಲದ ಗಿಡ, ಎಲೆಗಳ ಹಿನ್ನೆಲೆಗೆ ಅನುಗುಣವಾಗಿ ಹೊಂದಿಕೊಂಡು ಗುರುತಿಸಲದಳ ಮೈ ಬಣ್ಣ ಮತ್ತು ವಿನ್ಯಾಸದ ನಿಸರ್ಗದತ್ತ ವರದಾನವಿದೆ. ಈ ಎರಡೂ ಜೀವಿಗಳು ಒಂದೇ ರೀತಿಯ ಜೀವ ಮತ್ತು ಜೀವನ ಶೈಲಿಯನ್ನು ಹೊಂದಿರುತ್ತವೆ.
ಸಮುದ್ರ ಕುದುರೆ ಕಿವಿರುಮೂಲಕ ಕರಗಿದ ಆಮ್ಲಜನಕವನ್ನು ಉಸಿರಾಡುವ ಜೀವಿ. ಇದೇ ರೀತಿಯ ಉಸಿರಾಟ ಮೀನಿನದೂ ಸಹಾ. ಸಮುದ್ರ ಕುದುರೆಗಳಲ್ಲಿ ಸುಮಾರು ೪೦-೫೦ ವಿಧಗಳಿರುತ್ತವೆ. ಸಮುದ್ರ ಕುದುರೆಗಳೂ ಸುಮಾರು ೨ ರಿಂದ ೩೦ ಸೆಂ.ಮೀ. ಎತ್ತರವಿದ್ದು ಸುಮಾರು ೧ ರಿಂದ ೫ ವರ್ಷ ಆಯಸ್ಸನ್ನು ಹೊಂದಿರುತ್ತವೆ.
ಸಮುದ್ರ ಕುದುರೆಯಲ್ಲಿನ ವಿಸ್ಮಯಕಾರಿ ಅಂಶವೆಂದರೆ...ಗರ್ಭಧರಿಸುವ ಗಂಡುಗಳು..!!!!
ಹೌದು, ಗಂಡು ಸಮುದ್ರ ಕುದುರೆ ಹೊಟ್ಟೆಯಭಾಗ ಚೀಲದಂತಹ ಗರ್ಭಕೋಶವನ್ನು ಹೊಂದಿರುತ್ತದೆ. ಹೆಣ್ಣು ಸಮುದ್ರ ಕುದುರೆ ಗಂಡಿನೊಡನೆ ರಸಕ್ರೀಡೆಯಾಡುವಾಗ ತನ್ನ ಅಂಡಕೋಶವನ್ನು ಗಂಡಿನ ಗರ್ಭಚೀಲಕ್ಕೆ ವರ್ಗಾಯಿಸುತ್ತದೆ. ಇಲ್ಲಿ ಗಂಡು ತನ್ನ ರೇತ್ರಾಣುಗಳ ಮೂಲಕ ಅಂಡಗಳನ್ನು ಫಲಗೊಳಿಸಿ ಅಂಡದೊಳಗಿನ ಭ್ರೂಣದ ಬೆಳವಣಿಗೆಗೆ ಬೇಕಾದ ಎಲ್ಲ ಜೀವಸತ್ವ-ರಸಗಳನ್ನು ಪೂರೈಸಿ ಪೂರ್ಣರೂಪದಲ್ಲಿ ಬೆಳವಣಿಗೆಯಾದ ಮರಿ ಸಮುದ್ರ ಕುದುರೆಯನ್ನು ಗಂಡು ಸಮುದ್ರ ಕುದುರೆ ಪ್ರಸವಿಸುತ್ತದೆ.
ಒಮ್ಮೆ ಗರ್ಭ ಧರಿಸಿದ ಗಂಡು ಸುಮಾರು ಸರಾಸರಿ ೫೦-೧೦೦ ಮರಿಗಳನ್ನು ಪ್ರಸವಿಸುತ್ತದೆ. ಗಾತ್ರದಲ್ಲಿ ಚಿಕ್ಕ ಪ್ರಬೇಧಗಳು ೫-೧೦ ಮರಿಕೊಟ್ಟರೆ, ಗಾತ್ರದಲ್ಲಿ ದೊಡ್ದ ಪ್ರಬೇಧಗಳು ೫೦೦ ರ ವರೆಗೂ ಮರಿಗಳನ್ನು ನೀಡುತ್ತವೆ.
ಸಮುದ್ರ ಕುದುರೆ ನೀರಿನಲ್ಲಿನ ಜಲಸಸಿಗಳಿಗೆ ತಮ್ಮ ಬಾಲವನ್ನು ಹೆಣೆದುಕೊಂಡು ಕಾದು ಬೇಟೆಯಾಡುತ್ತವೆ. ಸಣ್ಣ ಹುಳುಗಳು, ಸಿಗಡಿ ಮರಿ ಅಲ್ಲದೇ ಮೀನುಮರಿಗಳನ್ನೂ ತಿನ್ನುತ್ತದೆ. ತನ್ನ ಬೇಟೆ ಹತ್ತಿರ ಬರುತ್ತಿದ್ದಂತೆಯೇ ತನ್ನ ಕೊಳವೆ ರೋಪದ ಬಾಯಿ ಮೂಲಕ ನೀರನ್ನು ಮತ್ತು ಬೇಟೆಯನ್ನು ಹೀರಿಕೊಂಡು ಬಿಡುತ್ತದೆ.
ಸಮುದ್ರ ಕುದುರೆಯನ್ನು ಗಾಜಿನ ಅಂದತೊಟ್ಟಿಗಳಲ್ಲಿ ಅಲಂಕಾರಕ್ಕೆ ಅಕ್ವೇರಿಯಂ ಮೀನನ್ನು ಸಾಕುವಂತೆ ಸಾಕಲಗುತ್ತದೆ. ವಿಶ್ವದ ಕೆಲ ರಾಷ್ಟ್ರಗಳಲ್ಲಿ ಇವುಗಳನ್ನು ಮೀನು ಸಾಕುವಂತೆ ಸಾಕಲಾಗುತ್ತದೆ. ಈ ಸಮುದ್ರ ಜೀವಿಗಳು ವಿಶೇಷ ಔಷಧೀಯ ಗುಣಗಳನ್ನು ಹೊಂದಿವೆಯೆಂದು ತಿಳಿದುಬಂದಿದೆ. ಚೀನಾ ಮತ್ತು ಜಪಾನ್ ರಾಷ್ಟ್ರಗಳಲ್ಲಿ ವಿಶೇಷ ಬೇಡಿಕೆಯಲ್ಲಿರುವ ಸಮುದ್ರ ಜೀವಿಯಿದು.

ಈ ಕೆಳಗಡೆ ಕೊಟ್ಟಿರುವ ಅಂತರಜಾಲದ ಲಿಂಕ್ ಸಮುದ್ರ ಕುದುರೆಯ ಮರಿಹಾಕುವ ಚಲನಚಿತ್ರ-ತುಣುಕಿಗೆ ಕೊಂಡೊಯ್ಯುತ್ತದೆ

http://www.youtube.com/watch?v=iaoLxR9FTwk&eurl=http%3A%2F%2Fvideo%2Egoogle%2Eco%2Euk%2Fvideosearch%3Fq%3Dseahorse%2520giving%2520birth%26hl%3Den%26rlz%3D1R2GGLL%5Fen%26um%3D1%26ie%3DUTF%2D8&feature=player_embedded





Sunday, May 17, 2009

ಆಲದ ಮರ











ಆಲದ ಮರ, ಬೇರುಜಾಲದ ಮರ ಒಂದು ಜಾತಿಯ ಅತ್ತಿ, ಅಂಜೂರಗಳ ಗುಂಪಿನ ಮರ. ಇದನ್ನು ಬನಿಯ-ನ್ ಮರ ಎಂದು ಮೊದಲಿಗೆ ಪೋರ್ಚುಗೀಸರಿಗೆ ಪರಿಚಯವಾದದ್ದು, ಬಹುಶಃ ಅಖಂಡ ಭರತ ಖಂಡದ ಸಮಯದ ನಮ್ಮ ನೆಲಕ್ಕೆ ಸಂಬಂಧಿಸಿದ ಮರ ಎನ್ನಬಹುದು. ಬನಿಯ-ಎಂದರೆ ವ್ಯಾಪಾರಿ ಎಂದು ಗುಜರಾತಿ, ಹಿಂದಿ ಭಾಷಿಗರು ಹೇಳುವುದು ನಮಗೆಲ್ಲಾ ತಿಳಿದದ್ದೇ. ಗುಜರಾತಿಗಳು ಸನಾತನ ಕಾಲದಿಂದಲೂ ವ್ಯಾಪಾರಿಗಳಾಗಿಯೇ ಹೆಚ್ಚು ಪ್ರಸಿದ್ಧರು ಎಂದು ಇತಿಹಾಸ ಹೇಳುತ್ತದೆ.
ಇದು ಮೂಲತಃ ಪರಾವಲಂಬಿ ಸಸ್ಯ. ಇದರ ಹಣ್ಣು ಹಕ್ಕಿ ಪಕ್ಷಿಗಳ ಬಹು ಪ್ರಿಯ ಆಹಾರ, ಇದೇ ಕಾರಣದಿಂದ ಇದರ ಬೀಜ ಪ್ರಸಾರ ಪ್ರಮುಖವಾಗಿ ಪಕ್ಷಿಗಳ ಮೂಲಕ ಆಗುತ್ತದೆ. ಬೀಜಗಳ ಚೆಲ್ಲುವಿಕೆ ಅಥವಾ ಪಕ್ಷಿಗಳ ಮಲದ ಮೂಲಕ (ಬೀಜಗಳು ಬಹುಪಾಲು ಜೀರ್ಣವಾಗದೇ ವಿಸರ್ಜಿತವಾಗುವುದರಿಂದ) ವೃಕ್ಷಗಳ, ಬೆಟ್ಟ ಗುಡ್ಡಗಳ ಮುಂತಾದೆಡೆ ಅಂಕುರಿಸಿ..ಬೆಳೆಯುತ್ತದೆ. ಇತರ ವೃಕ್ಷಗಳ ಕಾಂಡ, ಪೊಟರೆಗಳು ಬೀಜಾಂಕುರ ಮತ್ತು ಸಸಿ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ, ಬೇರುಗಳನ್ನು ಕೆಳಮುಖವಾಗಿ ಹರಡುವ ಈ ಸಸಿ ನಿಧಾನವಾಗಿ ಬೆಳೆದು ಆ ಮೂಲಕ ಹರಡಲಾರಂಭಿಸಿ ಮೂಲ ಆಶ್ರಯ ನೀಡಿದ ಸಸ್ಯ ಅಥವಾ ವೃಕ್ಷ ಕಾಣದಾಗುತ್ತದೆ. ಒಮ್ಮೆ ಬೆಳೆದು ಮರವಾದ ಆಲ, ತನ್ನ ರೆಂಬೆಗಳನ್ನು ಭೂಮಿಗೆ ಸಮಾನಾಂತರವಾಗಿ ಹರಡುತ್ತದೆ, ಆ ರೆಂಬೆಯಿಂದ ಒಂದೆರಡು ಶಾಖೆಕೆಳಮುಖವಾಗಿ ಬೆಳೆಸಿಕೊಂಡು ನೆಲವೂರಿದ ಮೇಲೆ ಬೇರುಬಿಟ್ಟು ಆ ರೆಂಬೆ ಮತ್ತೊಂದು ಮರಕ್ಕೆ ಕಾಂಡವಾಗುತ್ತದೆ, ಕಾಂಡಗಳ ಬೆಳವಣಿಗೆ, ಹರಡುವಿಕೆ, ಮತ್ತೆ ಅವುಗಳಿಂದ ಬೇರುಗಳ ಪಸರುವಿಕೆ ಹೀಗೆ..ಮರ ಹೆಮ್ಮರವಾಗಿ ಹಲವಾರು ಎಕರೆ ಹರಡುತ್ತದೆ. ಆ ಕಾರಣದಿಂದಲೇ ಈ ಮರಕ್ಕೆ ಆಯಸ್ಸು ...ಬಹಳ ಹೆಚ್ಚು....ಚಿರಾಯು ಎಂತಲೇ ಹೇಳಬಹುದು.
ಇಂತಹ ಆಲದ ಮರ ಏಕೆ ಬೀಳುತ್ತದೆ..? ಒಂದು ಸಾಧ್ಯತೆ ಹೊಸ ಕಾಂಡಗಳ ಬೆಳವಣಿಗೆ ಬಲವಂತವಾಗಿ ಅಥವಾ ಇತರೆ ಕಾರಣಗಳಿಂದ ಕುಂಠಿತಗೊಂಡರೆ, ಮೂಲ ಕಾಂಡಗಳ ಶಕ್ತಿ ಕುಸಿಯುತ್ತದೆ (ಹೊಸಕಾಂಡಗಳು ಮೂಡುವುದಿಲ್ಲ), ಮೂಲ ಬೇರುಗಳ ಹರಡುವಿಕೆಯೂ ಕುಸಿಯಿತ್ತದೆ ಹೀಗಾಗಿ ಶಕ್ತಿಗುಂದಿ ಧರೆಗುರುಳಬಹುದು. (ಗುರು- ಬ್ಲಾಗಿನಿಂದ ಪ್ರೇರಿತ, Thanks ಗುರು)




Saturday, May 16, 2009

ನಂಗೊತ್ತಿಲ್ಲ ಮಗು ಕನ್ನಡ-ನುಡಿ ನಮ್ಮದು


(Source: Web)
ಕನ್ನಡ-ನುಡಿ ನಮ್ಮದು
ನುಡಿ ನನ್ನದು .. ನುಡಿ ನಿಮ್ಮದು
ಕರುನಾಡೆಲ್ಲೆಡೆ ಆಡು ಭಾಷೆ ನಮ್ಮದು
ಪಂಪನ ಬನವಾಸಿಯ ಕಂಪು—ಕನ್ನಡ
ರನ್ನನ ಗಧಾಯುದ್ಧದ ಗುಡುಗು-ಕನ್ನಡ,
ಪುಲಿಕೇಶಿ, ವಿಜಯನಗರ, ಮೈಸೂರರಸರ ಸಿರಿ
ನೃಪತುಂಗ, ಹರಿ-ಹರ ರಾಘವಾಂಕರ ರಗಳೆಯ ಗರಿ,
ಮುದ್ದಣ-ಮನೋರಮೆಯರ ಸಲ್ಲಾಪ
ಹರಿಶ್ಚಂದ್ರ ಕಾವ್ಯದ ಚಂದ್ರಮತಿಯ ಪ್ರಲಾಪ
ಸರ್ವಜ್ಞನ ತ್ರಿಪದಿಗಳು, ಶಿಶುನಾಳರ ಉಕ್ತಿಗಳು
ಅಕ್ಕ-ಅಲ್ಲಮ-ಬಸವಣ್ಣರ ವಚನಗಳು
ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ
ಇವರಲ್ಲವೇ ಕನ್ನಡಿಗರ ಅಮೂಲ್ಯ ಆಸ್ತಿ ?!
ಗೋಕಾಕ್, ಕಾರ್ನಾಡ್, ಜೀಎಸ್ಸೆಸ್, ಕಂಬಾರ್,
ಅನಕೃ, ತ್ರಿವೇಣಿ, ಭೈರಪ್ಪರ ಜತೆಗೂಡಿದ ನಿಸಾರ್
ಕಥೆ, ಕವನ, ಕಾದಂಬರಿಗಳ ಸರದಾರರು
ಜ್ಞಾನಪೀಠಗಳ ಹೊಳೆಯನ್ನೇ ಹರಿಸಿದರು
ನಾಟಕಕ್ಕೆ ಕೈಲಾಸಂ ಪರ್ಯಾಯವಾದರೆ
ರಾಜ್ ರಜತ ಪರದೆ ಮರೆಯದ ಧೃವತಾರೆ
ಭಾಷೆ ನಮ್ಮದೆಂಬ ಅಭಿಮಾನವಿರಲಿ
ನವಂಬರ್ ಮಾತ್ರವೇ ಏಕೆ? ವರ್ಷವಿಡೀ ಇರಲಿ
ಉಕ್ಕಲಿ ಭಾಷಾಭಿಮಾನ..ಕಿತ್ತೊಗೆದು ..ಕಳೆ
ಮೊಳಗಲಿ..ಭೋರ್ಗರೆದು ಕನ್ನಡದ ಕಹಳೆ.

ನಂಗೊತ್ತಿಲ್ಲ ಮಗು
ಅಪ್ಪಾ..
ಹೇಳು ಮಗು..
ನವಂಬರ್ ಬಂದ್ರೆ
ಕನ್ನಡದಲ್ಲೇ ಮಾತಾಡೋಣ
ಅಂತಾರಲ್ಲಾ..ನಾಯಕರು?
ಹೌದು ಮಗು..
ಹಂಗಂದ್ರೆ ಬೇರೆ ಹೊತ್ನಲ್ಲಿ ಕನ್ನಡದಲ್ಲಿ
ಮಾತಾಡೊಲ್ಲವೇ ಇವರು?
...ಹ್ಞಾಂ...!! ಗೊತ್ತಿಲ್ಲ ಮಗು.
ಅಪ್ಪಾ....
ಹೇಳು ಮಗು....
ಮುಂಗಾರು ಮಳೆ...ಗಾಳಿಪಟ..
ದಾಖಲೆಗಳ ಧೂಳೀಪಟ..ಅಂತಾರಲ್ಲಾ...??
ಹೌದು ಮಗು..
ಕನ್ನಡದವರೇ..ಒಳ್ಳೊಳ್ಳೆ ಗಾಯಕರಿದ್ರೂ..
ಹಿಂದಿಯವರನ್ನ ಕರಿಸಿ ಹಾಡ್ಸಿದ್ದಕ್ಕಾ???!!
...ಹ್ಞಾಂ...!! ಗೊತ್ತಿಲ್ಲ ಮಗು
ಅಪ್ಪಾ..
ಏನು ಮಗು..?
ಕರ್ನಾಟಕದ ಮಹಿಳಾ ವಿಶ್ವವಿದ್ಯಾಲಯಕ್ಕೆ
ಆಂಧ್ರದ ಮಹಿಳೆಯನ್ನ ಉಪಕುಲಪತಿಗಳನ್ನಾಗಿ
ನೇಮಿಸಿದ್ರಲ್ಲಾ...
ಹೌದುಮಗು....ಗಂಡಸರನ್ನ ಮಾಡ್ಬೇಕಿತ್ತಾ..??
ಹೇ..ಹಂಗಲ್ಲಪ್ಪ..ಕರ್ನಾಟಕದಲ್ಲಿ ಯೋಗ್ಯ ಮಹಿಳೇರೇ
ಇರಲಿಲ್ಲವೇ??
ನಂಗೊತ್ತಿಲ್ಲ ಮಗು

Friday, May 15, 2009

ನಂಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ಕಾಂಗ್ರೇಸ್ ಇತ್ತು
ಈಗಲೂ ಇದೆ ಅನ್ನು..
ಹೌದು ಮಗು,
ಜನತಾ ಅಂತ ಇತ್ತು
ಈಗ, ಆ ಜಪಾ, ಇಜಪಾ, ಉಜಪಾ
ಲೆಫ್ಟು, ರೈಟು, ಫಾರ್ವರ್ಡು ಬ್ಯಾಕ್ ವರ್ಡು
ಪ್ರಥಮ, ದ್ವಿತೀಯ, ತೃತೀಯ ಮತ್ತೆ ಈಗ
ಚತುರ್ಥ ರಂಗ ಅಂತೆ..
ಯಾಕಪ್ಪಾ?
ನಂಗೊತ್ತಿಲ್ಲ ಮಗು

ಅಪ್ಪಾ
ಒಡೆದು ಆಳೋಕೆ
ಸಂಚು ಮಾಡ್ತಾರಂತೆ ಅಲ್ವೇ ಅಪ್ಪಾ..
ಹೌದು ಮಗು..
ಮತ್ತೆ... ಬದ್ಧ ವೈರಿಗಳ ತರಹ ಇದ್ದೋರು
ಯಾರೂ ಶಾಶ್ವತ ಶತೃಗಳಲ್ಲ
ಹಾಗೇ ಶಾಶ್ವತ ಮಿತ್ರರೂ ಅಲ್ಲ ಅಂತಾರಲ್ಲ
ಹೌದು ಮಗು..
ಹಾಗಾದ್ರೆ ಅವರಿಗೋಸ್ಕರ
ಪ್ರಾಣಗಳನ್ನೇ ಕಳಕೊಳ್ಳೋ ನಾವು ಮೂರ್ಖರಲ್ಲವೇ..
ನಂಗೊತ್ತಿಲ್ಲ ಮಗು

ಅಪ್ಪಾ
ಹೇಳು ಮಗು
ನೂರಕ್ಕಿಂತ ಹೆಚ್ಚಿಂದು ದೊಡ್ಡದೋ
ಐವತ್ತಕ್ಕಿಂತ ಕಡಿಮೇದು ದೊಡ್ಡದೋ?
ಸಾರ್ಥಕ ಆಯ್ತು ನಿನ್ಗೆ ಗಣಿತ ಕಲಿಸಿದ್ದಕ್ಕೆ
ನೂರು- ಐವತ್ತಕ್ಕಿಂತ ದೊಡ್ಡದಲ್ಲವೇನೋ..???
ಮತ್ತೆ.. 30-40 ಸೀಟಿರೋ ಪಕ್ಷ
ನೂರಕ್ಕಿಂತ ಹೆಚ್ಚಿರೋ ಪಕ್ಷಾನ ಆಟ ಆಡ್ಸುತ್ತಲ್ಲಾ?
ಅವರಿಗೆ ಗಣಿತ ಗೊತ್ತಿಲ್ವಾ ಅಪ್ಪ??
ನಂಗೊತ್ತಿಲ್ಲ ಮಗು

Thursday, May 14, 2009

ನವಿರು..ಕಚಗುಳಿ

ರಾತ್ರಿ ಕಂಡ ಬಾವಿ
ಬೆರೆತಾಗ ಕಣ್ಣು
ಕರಗುವುದು ಹೆಣ್ಣು.??!!
ಬೆಪ್ಪೇ, ಅದೊಂದು ಹುಣ್ಣು
ಕೆರೆದುಕೊಂಡರೆ ಏನೋ ಹಿತ
ಮರುಳಾಗಬೇಡ
ರಾತ್ರಿಕಂಡ ಬಾವಿಗೆ
ಹಗಲೇ ಬೀಳಬೇಡ

ಪ್ರೀತಿ
ತುಟಿ ಬಿಚ್ಚಲಿಲ್ಲ
ಕಣ್ಣು-ಕಣ್ಣು ಸೇರಿದ್ದವು
ಕಣ್ಣು ಮುಚ್ಚಲಿಲ್ಲ
ಮನಗಳು ಮಾತನಾಡಿದ್ದವು
ಮನ ಹಾಡಿತಲ್ಲ
ಕಣ್ಣು-ತುಟಿ ಸೇರಿರಲು

ವಿಚಿತ್ರ
ಕಣ್ಣು ಮುಚ್ಚಿದರೆ
ಚಿತ್ರ
ಮನಸಕಾಡಿದಳು
ಚಿತ್ರ
ಮನಗೆದ್ದು ಮೂಡಿದ
ಚಿತ್ರ
ಆಗದಾಯಿತು ಇದು ಹತ್ರ
ಅದಕೇ ಇದು ವಿ-
ಚಿತ್ರ

ಕರ್ತವ್ಯ

ನೆನೆಪುಮಾತ್ರದಿ
‘ಚುರ್‘ ಎಂದು ಸುಟ್ಟಾವು
ಅಂಗಾಲು
ಮರಳುಗಾಡೆಂದರೆ
ಸ್ಮೃತಿಯಲಿ ಹಾಯುವುವು
ಒಂಟೆ, ಪಾಪಾಸು ಕಳ್ಳಿ,
ದಳ್ಳುರಿಬಿಸಿಲ ಮರಳ
ಮೇಲಿನ ಬಳ್ಳಿ.
ಆದ್ರೂ ಇಲ್ಲಿ
ತೇಲಾಡುವರು
ಹಣದ ಹೊಳೆಯಲ್ಲಿ
ನೆರಳಿಲ್ಲ ಮರಳಲ್ಲಿ
ಆದರೂ...
ನೋಟುಗಳ ಚಾ-ಮರ
ಕುಡಿನೀರಿಗೆ,
ವಿದ್ಯುತ್ತಿಗೆ, ಸವಲತ್ತಿಗೆ
ಇಲ್ಲ ಬರ ಇಲ್ಲಿ.
ನಮ್ಮಲ್ಲಿ....
ಎಲ್ಲ ಇದೆ
ಪ್ರತಿಭೆ, ರವಿಪ್ರಭೆ
ಹಸಿರು, ಅನ್ನನೀಡೋ ಬಸಿರು,
ಅಗಾಧ ಜಲ
ನಿಧಿಯದಿರಿನ ನೆಲ
ಆದರೂ ಏಕೆ??
ರೈತ ಸುಣ್ಣವಾಗಿರುವ ಸೋತು
ನಿರುದ್ಯೋಗಿ-ಉದ್ಯೋಗಿ
ಬೀಳುವುದು ಕೊಟ್ಟು
ಹಗ್ಗಕೆ ಕೊರಳ ಜೋತು
ದಿನಗಳೆವ-ಕೊಳ್ಳೆ ಹೊಡೆದು
ತುಂಬಿಕೊಳುವ
ಬರಿ ಅಶ್ವಾಸನೆಯ ಪುಢಾರಿಯದು
ಕೇವಲ ಮಾತು.
ಬರಬೇಕು......
ಹೊಣೆಗಾರಿಕೆ
ಮೊದಲು ನಾಡು
ದೇಶದ ಹೆಗ್ಗಳಿಕೆ
ಎಚ್ಚೆತ್ತುಕೋ ಗೆಳೆಯ
ತೆಗೆದು ಹೊರಹಾಕು
ನೊಣವ ಹಾಲಿಂದ
ವಿಷಮಿಸುವವರ
ಬೆರೆಸಿ ಹಾಲಾಹಲವ
ಮೀಸಲಿಸಿ ಧರ್ಮವ
ಮನ, ಮನೆಗಳ ಬೆಳಕಿಗೆ
ಪಸರಿಸಿ ನಿಜ ಕರ್ಮವ
ನಾಡು-ರಾಷ್ಟ್ರದ
ಏಳಿಗೆಗೆ.

Tuesday, May 12, 2009

ಹಾಗೆಯೇ..ಅನಿಸಿದ್ದು

ವ್ಯತ್ಯಾಸ
ನನ್ನಕಣ್ಣಲ್ಲೇ
ಇರುವೆ
ನೀನು ಅಂದಿದ್ದು ತಪ್ಪಾಯ್ತೇನೋ
ಅಲ್ಲಿ ಏನು ಮಾಡುತ್ತಾ
ಇರುವೆ
ಕಣ್ಣೀರು ನಿಂತಿಲ್ಲ

ನಾ(ನಿ)ದಿನಿ
ಮದುವೆಯಾದೆ
ನನ್ನವಳು ಸುಂದರಿ
ಅವಳ ತಂಗಿ ಸಿಂಗಾರಿ
‘ಲೇ‘ ಅಂತ ಕರೆದ್ರೆ ಇವಳನ್ನ
ನಾನಿದೀನಿ
ಅಂತ ಬರಬೇಕೆ ನಾದಿನಿ?

ಅಂತರ
ಸ್ನೇಹಿತರಿಬ್ಬರೂ ನಾವು
ಮದುವೆಯಾದ ನಂತರ ಸಿಕ್ಕೆವು
ಅವನೆಂದ ಲೋ..ಎಷ್ಟು ಚನ್ನಾಗಿ
ಬಿಡಿಸ್ತಾಳೋ ನನ್ಹೆಂಡ್ತಿ ಚಿತ್ರಾನ..
ಕೊಚ್ಚಿಕೊಂಡ
ಹೋಗೋಲೋ..ನನ್ಹೆಂಡ್ತೀಯೇನು ಕಮ್ಮಿ
ಅವಳೂ ಚನ್ನಾಗೇ ಬಿಡಿಸ್ತಾಳೆ ದಿನವೂ
ನನ್ನ ಗ್ರಹಚಾರಾನ

ಗಂಡ ಭೇರುಂಡ
ಲೇ ಗುಂಡ
ಗಂಡ ಭೇರುಂಡ
ಅಂದ್ರೇನ್ಲಾ? ಕೇಳಿದ್ರು ಮೇಷ್ಟ್ರು
ಹೆಂಡ್ತೀನ ಬಿಟ್ಟು ಬೇರೆ
ಉಣ್ಣೋ ಗಂಡನ ಸ್ಥಿತಿಗೆ
ಗಂಡ ಭೇರುಂಡ ಅನ್ತಾರೆ ಸಾ..
ಅನ್ನೋದೇ ಗುಂಡ??!!

ಹೆಣ್ಣು-ಗಂಡು
ಹೆಣ್ಣು...
ಒಲಿದ್ರೆ ನಾರಿ
ಮಿನಿದ್ರೆ ಮಾರಿ
ಗಂಡು...
ಒಲಿದ್ರೆ ಗಂಡ
ಮುನಿದ್ರೆ ದಂಡ

ಕವಿಚ್ಛೆ
ಪ್ರಿಯೆ ನಿನ್ನ
ಕರೆಯಲಿಲ್ಲವೇ
ನನ್ನ ಚಿನ್ನ
ನೀನೇಕೆ ಅನ್ನಲಿಲ್ಲ
ಒಮ್ಮೆಯಾದರೂ ನನ್ನ
ಓ ನನ್ನ ಪಂಪ, ರನ್ನ

Sunday, May 10, 2009

ಪುಟ್ಟಿ


ಪುಟ್ಟಿ
ಪುಟ್ಟ ಕೈ
ಮುದ್ದುಮುಖ
ಮುಚ್ಚಿಕೊಂಡೆ ಏಕೆ?
ಇಟ್ಟ ಮುದ್ದು
ಮೀಸೆಯಂಚು
ಚುಚ್ಚಿತೇನೋ ಹೇಗೆ?
ಕಣ್ಣ ಮುಚ್ಚಿ
ಕಾಡೇ ಗೋಡೇ
ಹುಡುಕೋ ಆಟ ಬೇಕೆ?
ಹೇ ಕಳ್ಳಿ ,,!!
ನೋಡಿತಿರುವಿ
ಬೆರಳ ಸಂದಿಯಲ್ಲಿ
ಹೋಗಿ ಹಿಡಿದು
ಬಿಡುವೆ ಅಕ್ಕನನ್ನು
ಮೂಟೆಸಂದಿಯಲ್ಲಿ
ಅನ್ನ ತಿನಲು ಅಳುವೆ
ಮಣ್ಣ ತಿನಲು ಒಲವೇ?
ಕೇಳಿದ್ದಕ್ಕೆ ನಿನ್ನ ಏಕೆ
ಕಣ್ಣಮುಚ್ಚಿ ಅಳುವೆ?
ಮುದ್ದು ಕೈಯ
ಬಿಡಿಸಿ ನೋಡೆ
ಕಣ್ಣಲಿಲ್ಲ ನೀರು
ಕಣ್ಣ ಹೊಳಪು
ತುಂಟತನ ಕಂಡುನನಗೆ
ಬಂತು ನಗು ಜೋರು (ಶಿವು ರವರ ಛಾಯಾಚಿತ್ರದ ಪ್ರೇರಣೆ)

Monday, May 4, 2009


ವೃಕ್ಷ-ಪ್ರೇಮ
ನೇಪಥ್ಯ ಮುಸುಕು
ಕಂಡಂತೆ ಈ ನಸುಕು
ಬೋಳು ಮರ ನಿಂತಿದೆ
ಆದರೂ ಹೆಮ್ಮೆ ಅದಕೆ
ನಿಂತಿರುವೆನೆಂದು
ಭರವಸೆಯ ಬಿಮ್ಮು
ಚಿಗುರಿ ಹಸಿರ ಹೊದ್ದು
ನಿಲುವೆನೆಂದು
ಇಲ್ಲವೇ ‘ಸಾಥ್‘ ನೀಡಲು
ದೂರ-ದೂರ
ಅಲ್ಲೊಂದು ಇಲ್ಲೊಂದು
ಹೆಸರಿಗೊಂದು ಮರ
ಹಸಿರೇ ಉಸಿರೆಂದು
ಮನಗಾಣಲಿ ಮನು
ಉಸಿರು ನಿಂತರೆ
ಅದು ತನ್ನದೇ ಅಂತ್ಯವೆಂದು
ಬೆಳೆಯಲಿ ಮಕ್ಕಳಲೂ
ಹಸಿರು-ಪ್ರೇಮ
ನಾಂದಿಯಾಗಲಿ ಹುಟ್ಟಲು
ಮಾನವನಲಿ
ವೃಕ್ಷ-ಪ್ರೇಮ
ನಾನು
ನಾನು ಮರ
ನಾನಮರ
ವಿವೇಚನೆಯಿರಲಿ
ಓ ನರ
ಹಾಕೀಯೆ ಕೊಡಲಿ
ನಿನ್ನ ಕಾಲಿಗೆ ನೀನೆ
ನಿನ್ನ ವಿಷದುಸಿರು
ನನಗುಸಿರು, ಈ ಹಸಿರು
ಹೋದರೆ ನಿಲ್ಲುವುದೋ
ಮರುಳೇ ನಿನ್ನುಸಿರು
ಇದುವೇ ನಿಜ
ಕಾಡು, ಕಾನನ ವನ
ಆಗುತಿವೆ ಕುರುಚಲು ಬನ
ಹಸಿರು ಹೊದ್ದು ಮೇರುಗಳು
ಎದ್ದು ಹೋಗಿವೆ
ಆಗಿ ಕೊರಕಲು ಗಣಿಗಳು
ಮಿತಿಯಿರಬೇಕು ಎಲ್ಲದಕೂ
ಇತಿಯರಿತು ಕೆಡಹುವುದಕೂ
ಮರಗಳು ಬಿದ್ದರೆ
ಏಳುವಂತಿರಬೇಕು
ಹೊಸತು,
ಎಚ್ಚೆತ್ತುಕೋ ಮನುಜ
ಹಸಿರೇ ಉಸಿರು
ಇದುವೇ ನಿಜ