Wednesday, July 28, 2010

ಗೊತ್ತಿಲ್ಲ ಮಗು

(ಚಿತ್ರ ಕೃಪೆ : ಅಂತರ್ಜಾಲ)

ಅಪ್ಪಾ..



ಏನು ಮಗು..?


ಮಳೆಗಾಲ..ಕೆಲವುಕಡೆ ಎಡೆಬಿಡದ ಮಳೆ ಅಂತೆ...


ಹೌದು ಕಣೋ ರೈತರಿಗೆ ನಿರಾಳ..


ಆದ್ರೆ ಅಪ್ಪ?


ಏನು ನಿನ್ನ ರಾಗ?


ಪ್ರತಿ ಸಲವೂ ಗೊಬ್ಬರಗಳಿಗೆ ಪರದಾಟ ತಪ್ಪಿದ್ದಲ್ಲ


ಹೌದು ಕಣೋ ಸರ್ಕಾರ ವ್ಯವಸ್ಥೆ ಮಾಡುತ್ತಲ್ಲಾ..


ಅಲ್ಲಪ್ಪ ಅವರ ತಿಪ್ಪೆ ಇವರು ಇವರ ತಿಪ್ಪೆ ಅವರು ಅಗೆಯುತ್ತಿದ್ದಾರಲ್ಲ


ಸರ್ಕಾರದಲ್ಲಿರೋರಿಗೆ ಇದಕ್ಕೆ ಸಮಯ ಸಿಗುತ್ತಾಪ್ಪಾ..?


ಗೊತ್ತಿಲ್ಲ ಮಗು.






ಅಪ್ಪಾ..


ಮತ್ತಿನ್ನೇನೋ..


ದಂಡಿ ಯಾತ್ರೆ ಅಂದ್ರೆ ಏನಪ್ಪಾ..?


ದಂಡಿ ಅಲ್ಲವೋ ದಾಂಡಿ...ಮಹಾತ್ಮ ಗಾಂಧಿ


ಉಪ್ಪಿಗೆ ಹಾಕಿದ್ದ ಶುಲ್ಕ ವಿರೋಧಿಸಿ ಬ್ರಿಟೀಶರ ವಿರುದ್ಧ ನಡೆಸಿದ್ದ ಪಾದ ಯಾತ್ರೆ


ಹಾಗಾದ್ರೆ ಈಗ ನಮ್ಮ ರಾಜಕಾರಣಿಗಳು ಮಾಡ್ತಿರೋದು


ದಂಡ ಯಾತ್ರೆನಾ ಅಪ್ಪಾ..?


ಗೊತ್ತಿಲ್ಲ ಮಗು






ಅಪ್ಪಾ..ಇನ್ನೊಂದೇ..ಡೌಟು...


ಏನಪ್ಪಾ ಅದು, ಕೇಳು...


ತಿರುಪತಿಗೆ ಹೋದವರು ಬುಂಡೆ ಹೊಡಿಸ್ಕೋತಾರಲ್ಲಾ ಯಾಕೆ?


ಅದು ಅವರ ಹರಕೆ ಆಗಿರುತ್ತೆ ನಮ್ಮ ಪಾಪ ತೊಳಿ ದೇವರೇ ಅಂತ


ಮತ್ತೆ ನಮ್ಮ ಮಂತ್ರಿಗಳೊಬ್ಬರ ಪಾಪ ಹೆಚ್ಚಾಗಿತ್ತ


ಟೀವಿಯಲ್ಲಿ ಬುಂಡೆ ತೋರಿಸ್ಕೊಂಡು ಇದ್ರಲ್ಲಾ..?


ನಂಗೊತ್ತಿಲ್ಲ ಮಗು..






ಇದು ನಿಜವಾಗ್ಲೂ ಕಡೇದು


ಹೇಳು...ಯಾಕಂದ್ರೆ ನೀನು ಕೇಳೋದಕ್ಕಿಂತಾ ಹೇಳೋದೇ ಹೆಚ್ಚು


ಅಲ್ಲಪ್ಪ..ಪಾದ ಯಾತ್ರೆ ಪ್ರತಿಭಟನೆ ರೂಪ ಅಂತಾರಲ್ಲಾ?


ಹೌದು... ಅದೇ ಅಲ್ವಾ ಈಗ ನಡೆದಿರೋದು..


ಮತ್ತೆ ಅದನ್ನ ಪ್ರತಿಭಟಿಸೋಕೆ ಸಮಾರಂಭ ಮಾಡ್ತೀವಿ ಅಂತಾರಲ್ಲ


ಗೊತ್ತಿಲ್ಲ ಮಗು.