Saturday, December 25, 2010

Saturday, December 18, 2010

ಇತಿಹಾಸದ ಪುಟದಿಂದ ಮಾನವತೆಗೆ ಒಂದು ಪಾಠ

ಮೊಹರಂ ಬಗ್ಗೆ ಓದುವಾಗ ಒಂದು ಸೈಧ್ದಾಂತಿಕ ವಿಷಯ ತಿಳಿಯಿತು...
(ಇಲ್ಲಿ ಧರ್ಮದ ಬಗ್ಗೆ ಯೋಚಿಸುವುದು ಬೇಡ..).



ಆಗ ಪೈಗಂಬರ್ ಮೊಹಮ್ಮದರ ನಂತರದ ಮುಂದಾಳತ್ವದ ಪ್ರಶ್ನೆ ಬಂತು, ಸ್ವತಃ ಮೊಹಮ್ಮದರ ಪ್ರಕಾರ ಆಗಿನ ಧರ್ಮ ಮತ್ತು ಸರ್ವಮಾನ್ಯರಲ್ಲಿ ಇಮಾಮ್ಅಬೂಬಕ್ರ್ (ಧರ್ಮ ಮುಂದಾಳತ್ವಕ್ಕೆ ಖಲೀಫಾ ಅನ್ನೋ ಪದವಿ ಸಿಕ್ಕಿದ್ದು ಬೇರೆ ವಿಷಯ), ನಂತರ ಇಮಾಮ್ ಉಮರ್, ಆ ನಂತರ ಇಮಾಮ್ ಉತ್ಮಾನ್ ಮತ್ತೆ ನಾಲ್ಕನೆಯವರು ಸ್ವತಃ ಪೈಗಂಬರರ ಅಳಿಯ ಹಜ್ರತ್ ಇಮಾಮ್ ಆಲಿ. ಹಾಗಾಗಿ ಉಮರ್ (ಆ ವೇಳೆಗೆ ಖಲಿಫಾ ಎಂಬ ಪ್ರಭಾವಿ ಒಡೆತನ ಸಿಕ್ಕಿತ್ತು) ನಂತರದ ಖಲೀಫಾ ಪಟ್ಟ ಹಜ್ರತ್ ಆಲಿ ಗೆ ಸಿಕ್ಕಬೇಕಿತ್ತು ಆದ್ರೆ ಅಧಿಕಾರ, ಧನ ಮತ್ತು ಸ್ವಾಭಾವಿಕವಾಗಿ ಧನದ ಹಿಂದೆ ಹೋಗುವ ಜನ ಬೆಂಬಲವಿದ್ದ ಉತ್ಮಾನರ ದಾಯಾದಿ “ಮುಹಾವಿಯಾ” ಖಲಿಫತ್ವ ಕಿತ್ತುಕೊಂಡ.....ಆಗಲೇ ಜಗಳಗಳು ಪ್ರಾರಂಭವಾಗುವ ಲಕ್ಷಣಗಳು ಕಂಡದ್ದು!! ಶಿಯಾ ಮತ್ತು ಸುನ್ನಿ ನಂಬಿಕೆಯ ಶಾಖೆಗಳು ಒಡೆಯಲು ಪ್ರಾರಂಭವಾಗಿದ್ದು ಎನ್ನಬಹುದು. ಹಜ್ರತ್ ಆಲಿಯವರ ಬೆಂಬಲಿಗರು ಅವರ ಬೆಂಬಲಕ್ಕೆ ನಿಂತರು. ಆದರೆ ಎಲ್ಲ ಪ್ರವಾದಿಗಳ ನಂತರ ಆ ಧರ್ಮದ ಮೂಲ ಸಿದ್ಧಾಂತ ಮತ್ತು ವಿಧೇಯತೆ ಕ್ರಮೇಣ ಮಾಯವಾಗಿ ..ಮೋಹ ಮಾಯೆಗಳು ಧರ್ಮದ ತೊಡಕುಗಳಾಗುತ್ತವಂತೆ ಹಾಗೆಯೇ ಅಂದಿನ ಖಲೀಫನ ಧನ, ಜನ ಬಲದ ಮಧ್ಯೆ ಹಜ್ರತ್ ಆಲಿಯರ ಬೆಂಬಲಿಗರು ಮತ್ತು ನಿಜ ಅನುಯಾಯಿಗಳು ಪ್ರಾಣ ಕಳೆದುಕೊಳ್ಳಲಾರಂಭಿಸಿದರು. ಇಂತಹ ಘಳಿಗೆಯೇ ನಿಜ ಮಾನವತೆ ಧರ್ಮ ಸಾರುವ ಪ್ರವಾದಿಗಳ ಸತ್ವ ಪರೀಕ್ಷೆಯ ಸಮಯ. ತನ್ನ ಅನುಯಾಯಿಗಳ ಮತ್ತು ಅಮಾಯಕರ ಮಾರಣಹೋಮ ತಡೆಯಲು ಹಜ್ರತ್ ಆಲಿಯವರು ಮುಹಾವಿಯಾ ಜೊತೆ ಒಪ್ಪಂದಕ್ಕೆ ಬರುತ್ತಾರೆ. ತಾನು ಅವರ ಖಲೀಫತ್ವಕ್ಕೆ ಸವಾಲನ್ನು ಒಡ್ಡದೇ ಇರಬೇಕಾದರೆ ಮುಹಾವಿಯಾ ತನ್ನವರಿಗೆ ಕಿರುಕುಳ ಕೊಡಬಾರದು ಮತ್ತು ರಕ್ತ ಪಾತ ಮಾಡಬಾರದು, ಹಾಗೂ ತನಗೆ ಧರ್ಮರಕ್ಷಣೆಯ ಹೊಣೆಗಾರಿಕೆ ಕೊಡಬೇಕು ಎಂಬ ಶರತ್ತು ವಿಧಿಸುತ್ತಾರೆ. ಮುಹಾವಿಯಾ ಪೈಗಂಬರರ ಮೇಲಿನ ಗೌರವ ಮತ್ತು ಹಜ್ರತ್ ಆಲಿ ಪೈಗಂಬರರ ಅಳಿಯ ಎನ್ನುವ ಕಾರಣದ ಜೊತೆಗೆ ಅವರ ಬೆಳೆಯುತ್ತಿದ್ದ ಬೆಂಬಲದ ಶಕ್ತಿ ಕುಗ್ಗಿಸಲು ಈ ಶರತ್ತಿಗೆ ಒಪ್ಪುತ್ತಾನೆ. ಇದು ಒಂದು ನಿಜ ಮಾನವತೆ ಮೆರೆದ ಪ್ರವಾದಿಯ ಅಳಿಯ ಹಜ್ರತ್ ಆಲಿಯವರ ವಿವೇಚನೆಯ ನಿದರ್ಶನ.



ಆ ಗೌರವಯುತ ಕುಟುಂಬದ ಮೊಮ್ಮಗ ಹಜ್ರತ್ ಆಲಿಯವರ ಮಗ ಹಜ್ರತ್ ಇಮಾಮ್ ಹಸನ್ ಸಮಯದಲ್ಲೂ ಇಂತಹುದೇ ವಿಷಘಳಿಗೆ ಎದುರಾಗುತ್ತದೆ. ’ಮುಹಾವಿಯಾ’ ತೀರಿಕೊಂಡ ಮೇಲೆ ಇಸ್ಲಾಂ ಅನುಯಾಯಿಗಳು ಇಮಾಮ್ ಹುಸೇನರನ್ನು ಖಲೀಫಾ ಮಾಡಲು ಯೋಚಿಸುತ್ತಾರೆ. ಆದರೆ ಆ ವೇಳೆಗಾಗಲೇ ಮದೋನ್ಮತ್ತ, ಸ್ತ್ರೀ ಲೋಲ, ಐಷರಾಮಿ ಮತ್ತು ಮದಿರಾಪ್ರಿಯ ’ಯಜಿದ್’ ಮುಹಾವಿಯಾ ಗದ್ದುಗೆಯನ್ನು ಕಬಳಿಸಿ ಮುಹಾವಿಯಾ ಸತ್ತ ಸುದ್ದಿ ತಿಳಿಯುವುದಕ್ಕೆ ಮುಂಚೆಯೇ ಎಲ್ಲರನ್ನೂ ಧನ-ಜನ ಬಲದಿಂದ ತನ್ನೆಡೆಗೆ ಸೆಳೆದು ಕೊಳ್ಳುತ್ತಾನೆ. ಆದರೆ ಹಿಂದೊಮ್ಮೆ ವಂಚಿತರಾದ ಧರ್ಮ ಸಹಿಷ್ಣು ಮತ್ತು ಹಜ್ರತ್ ಆಲಿಯವರ ಅನುಯಾಯಿಗಳು ಇದನ್ನು ಒಪ್ಪದೇ ಹಜ್ರತ್ ಇಮಾಮ್ ಹಸನ್ ರನ್ನು ಖಲೀಫತ್ವದ ದಾವೇದಾರನೆಂದು ಬಿಂಬಿಸುತ್ತಾರೆ.. ಮೊದಲೇ ಕ್ರೂರಿಯಾದ ಯಜಿದ್ ಎಲ್ಲ ನಂಬಿಕಸ್ಥರ ಮತ್ತು ಆಲಿ-ಹಸನ್ ಪರ ಸಮುದಾಯದ ಮಾರಣ ಹೋಮಕ್ಕೆ ಕೈಹಾಕುತ್ತಾನೆ. ಆಗ ಮತ್ತೊಮ್ಮೆ ಹಜ್ರತ್ ಹಸನ್ ತನ್ನ ತಂದೆಯವರ ಮಾರ್ಗ ಅನುಸರಿಸಿ ತನ್ನವರ ತಂಟೆಗೆ ಬರದೇ ತನ್ನ ಪಾಡಿಗೆ ತನ್ನನ್ನು ಬಿಟ್ಟು ಧರ್ಮದ ಪ್ರಚಾರಕ್ಕೆ ಅಡ್ಡಿಮಾಡದಿದ್ದರೆ ಖಲೀಫತ್ವದ ದಾವೆಯನ್ನು ಹಿಂಪಡೆಯುತ್ತೇನೆ ಎಂದು ರಕ್ತ ಪಾತಕ್ಕೆ ಇತಿಶ್ರೀ ಹಾಡುತ್ತಾರೆ. ಹಜ್ರತ್ ಹಸನ್ ರ ನಂತರ ಅವರ ತಮ್ಮ ಹಜ್ರತ್ ಹುಸೇನರ ಮತ್ತು ಅವರ ಕುಟುಂಬ ಸಹವರ್ತಿಗಳ ಮೇಲೆ ಯಜಿದ್ ನಡೆಸಿದ್ದು ಅತಿ ಕ್ರೂರ ಅಮಾನವೀಯ ನಡವಳಿಕೆ.. ಅದೇ ಕಾರಣಕ್ಕೆ ತೀವ್ರವಾದ ರೂಪದಂತೆ ಶಿಯಾ ಪಂಗಡ ಪ್ರಭಲವಾಗಿದ್ದು,



ಇಲ್ಲಿ ಧರ್ಮ ಸಂಸ್ಥಾಪಕರ ಮತ್ತು ನಿಜ ಮಾನವತೆ ಮೆರವವರ ಆದರ್ಶಗಳು ಇಂದಿನ ಸಮಾಜಕ್ಕೆ ಒಂದು ಪಾಠ. ಅಂದು ನಡೆದದ್ದು ಎದುರು-ಬದುರು ಯುದ್ಧ (ಅತೀವ ಸಂಖ್ಯೆಯ ಯಜಿದ್ ಸೈನ್ಯ ಮಾಡಿದ್ದು ಮಾರಣ ಹೋಮ..) ಆದರೆ ಈಗ ಧರ್ಮದ ಹೆಸರಲ್ಲಿ ನಿರಾಯುಧ, ಅಸಹಾಯಕ, ಅಮಾಯಕ ಮತ್ತು ಮುಗ್ಧರನ್ನು ನಿದ್ದೆಯಲ್ಲಿ ಕೊಲ್ಲುವಂತಹ ಹೇಯ ಕಾರ್ಯ. ಮಾನವತೆ ಮತ್ತು ಮಾನವ ಧರ್ಮದ ಮುಂದೆ ನಾವು ಮಾಡಿಕೊಳ್ಳುವ ಧರ್ಮದ ಕಟ್ಟಳೆಗಳು ಗೌಣ ಅಲ್ಲವೇ...?

Saturday, December 11, 2010

ಮತ್ತೆ ಕೆಲವು ನ್ಯಾನೋಗಳು

ಆಸ್ತಿ
ಮೆದು-ಹುಸಿ ನಗು, ತುಂಟನೋಟ
ಪರ(ಮ) ಗುಲಾಮನಾಗಿಸಲು ಸಾಕು ಆಸ್ತಿ



ಏತಿ-ಪ್ರೇತಿ
ಮದುವೆಹೊಸತರಲ್ಲಿ ಎಲ್ಲದರಲ್ಲೂ ಸೌಂದರ್ಯ ಪ್ರೀತಿ
ಹೊಂದಿಕೆಯಾಗದೆ ನಂತರ ಅವ ಏತಿ ಇವಳು ಪ್ರೇತಿ



ಮಗು
ಜೀವನವಾಗಿದ್ದು ನಿನ್ನಿಂದಲೇ ತಾಯಿಗೆ ಸಾರ್ಥಕ
ಬಂದು ನೀನು ಅಪ್ಪನ ಶ್ರಮವಾಗಲಿಲ್ಲ ನಿರರ್ಥಕ


ಗೊತ್ತೇ ಅಗೊಲ್ಲ
ವಿದೇಶದಿಂದ ಬಂದ ಮಂತ್ರೀನ ಕೇಳಿದ್ರು, ಏನ್ತಂದ್ರಿ?
ಶೇವಿಂಗ್ ಮಾಡೋದು, ಕಟ್ ಮಾಡಿದ್ರೆ ಗೊತ್ತೇ ಆಗಲ್ಲಂತ್ರಿ



ದೊಂಬರಾಟ
ಪಟ್ನದಾಗೈತೆ ಒಬ್ಬೊಬ್ಬರ್ದು ಒಂದೊಂದ್ ಥರ ಆಟ
ಇದಾನ್ ಸೌದ್ದಾಗ್ ನಡೀತೈತಿ ದೊಡ್ದೊಡೋರ್ ದೊಂಬ್ರಾಟ



ಲಂಚ ಅದೆಂಥ ಮಂಚ?
ಕೊಡ್ದಿದ್ರೆ ಸಾಗೊಲ್ಲ, ಹಾಕ್ದಿದ್ರೆ ನಡೆಯೊಲ್ಲ, ಕೊಟ್ರೂನೂ ಉಳಿಯೊಲ್ಲ
ಲಂಚಕೊಟ್ಟೋನು ಕೋಡಂಗಿ, ಈಸ್ಕೊಂಡ್ರೆ
 ಈರ್ಬದ್ರ, ತಲುಪಿದ್ದು ಸುಭದ್ರ


ನ್ಯಾನೋ
ನ್ಯಾನೋ ಹತ್ತಿ ಹೊಂಟಿದ್ರು ಟಾಟಾ..
ರಸ್ತೇಲಿ ಕೈಕೊಟ್ಟೂ ಹೇಳ್ತದು ಬರ್ಲಾ...


ಪ್ರಯತ್ನ
ಬೆಪ್ಪೆ ಬರ್ದಿದ್ದೆಲ್ಲ ಅಗೊಲ್ಲ ಕಣೋ ಕವನ
ಬರ್ದ ಪೇಪರ್ ಎಷ್ಟ್ ಹರಿದಿದ್ದೀಯಾ ನೋಡು ಎನ್ನುತ್ತೆ ಮನ

Saturday, December 4, 2010

ನವಂಬರ್ ಸಂಭ್ರಮ

ಸ್ನೇಹಿತರೇ, ಹಿತರೇ...
ನಮ್ಮ ಬೆಡಗಿನ ನಗರಿ, ರಾಜಧಾನಿ ಬೆಂಗಳೂರಿನಲ್ಲಿ ಮರೆಯಾಗುತ್ತಿರುವ ಕನ್ನಡಪರ ಕಾಳಜಿ ನನಗೆ ಈ ರಚನೆಗೆ ಪ್ರೇರಣೆಯಾಯಿತು....ನಾವು ಕಾಲೇಜಿನಲ್ಲಿದ್ದ ಸಮಯದಲ್ಲಿ ಕಡೇ ಪಕ್ಷ ಅಕ್ಟೋಬರ್ ನಿಂದ ಪ್ರಾರಂಭವಾಗುತ್ತಿದ್ದ ಸಂಭ್ರಮ, ಮಂಟಪ ಮತ್ತು ಕಲಾ ವೇದಿಕೆಗಳು, ಕೆ.ಎಸ್.ಆರ್.ಟಿ.ಸಿ ಸಿಂಗಾರಗಳು ಡಿಸೆಂಬರ್ ಅಂತ್ಯದವರೆಗೂ, ಕ್ರಿಮಸ್ ಸಂಭ್ರದ ಜೊತೆಗೂಡುತ್ತಿದ್ದುದು ನೆನಪಿದೆ...ಆದ್ರೆ ಈಗ ನವಂಬರ್ ತಿಂಗಳ ಕಡೆಯ ವಾರವೇ ಕನ್ನಡ ಎಲ್ಲಿ ಹೋಯ್ತು ಅನ್ನೋನೆ ಯೋಚನೆ ಕಾಡುತ್ತೆ....ನಿಮ್ಮ ಪ್ರತಿಕ್ರಿಯೆ..ಟೀಕೆಗೆ ನಾನು ಸಿದ್ಧ......


ನವಂಬರ್ ಸಂಭ್ರಮ

ನವಂಬರ್ ಬಂದ್ರಾಯ್ತು

ಹರಿಯುತ್ತೆ ಕನ್ನಡದ ಮಹಾಪೂರ

ಎಲ್ಲಿರುತ್ತೋ ಕಟ್ಟೆಯೊಡೆಯುತ್ತೆ

ನುಗ್ಗುತ್ತೆ ಗಲ್ಲಿ ಗಲ್ಲಿ ನಿಲ್ಲೊಲ್ಲ ಅನ್ನುತ್ತೆ

ಕೆಂಪು-ಹಳದಿ ಕಹಳೆ ಮೊಳಗುತ್ತೆ

ದೇಣಿಗೆ ಚಂದಾ ಕೊಡುಗೆ ಕೇಳುತ್ತೆ

ಹಾದಿ ಬೀದಿಲೆಲ್ಲಾ, ಗಂಧದಗುಡಿ,

ಹಚ್ಚೇವು ಕನ್ನಡದ ದೀಪ ಮೊಳಗುತ್ತೆ

ಇಂಗ್ಲೀಷ್ ನಾಮಫಲಕಕ್ಕೆ ಬೀಳುತ್ತೆ ಲತ್ತೆ

ಒಂದೇ, ಎರಡೇ, ಬೆಂಗ್ಳೂರೇ ಕನ್ನಡಮಯ

ಐಟಿ ಬಿಟಿ ಗಲ್ಲಿಗಳು ಬಿಕೋ ಅಗುತ್ವೆ

ಡಿಸೆಂಬರ್ ಬರುತ್ತೆ..

ಚಳಿಗೆ ಬೆಂಗ್ಲೂರ್ ನಡಗುತ್ತೆ
ಕನ್ನಡಾನೂ ನಿಧಾನಕ್ಕೆ ಮರೆಯಾಗುತ್ತೆ

ಗಲ್ಲಿಗಳು ಮತ್ತೆ ತುಂಬ್ಕೋತಾವೆ

ಮತ್ತೆ ಎನ್ನ, ಎವಿಡ, ಎಕ್ಕಡ ವಾಟ್ ಗಳು

ಟಾಕ್ ಎನಿಥಿಂಗ್ ಬಟ್ ನಾಟ್ ಕನ್ನಡ ಗಳು
ಜನವರಿ ತುಂಬಾ ಕೇಕ್ ಗಳು

ಫೆಬ್ರವರಿಲಿ ವ್ಯಾಲಂಟೈನ್ ಡೇಟ್ಸಗಳು

ಮಾರ್ಚ್ ಏಪ್ರಿಲ್ ಎಕ್ಸಾಮ್ ಟೆನ್ಶನ್ ಗಳು

ಜೂನ್ ಜುಲೈ ರೆಸಾರ್ಟ್ ಮಸ್ತಿಗಳು

ಮತ್ತೆ ಇಲ್ಲದ ಮಳೆ ಅಥವ ಅತಿ ಕೊಚ್ಚೆಗಳು

ರಚ್ಚೆ ಹಿಡಿಸೋ ಪೆಚ್ಚು ರಾಜಕೀಯಗಳು

ಮರೆತಹಾಗೆ ಆಗಿರುತ್ತೆ ,,,ಎಲ್ಲಿದೆ.. ಕನ್ನಡ?
ಮತ್ತೆ ಧೂಳು ಕೊಡವಿ ಹೊರಬರೋ ಫ್ಲಾಗ್ಗಳು

ಕನ್ನಡ ಸಿಡಿಗಳು, ಆಡಿಯೋಗಳು

ಯಾಕಂದ್ರೆ ಬಂತಲ್ಲಾ..ನವೆಂಬರ್ರು?

ಮತ್ತದೇ ರಾಜ್ಯೋತ್ಸವ !!!