Monday, February 8, 2010

ಬೇರೆ ನೀತಿ

ಕೇಳ್ಬ್ಯಾಡಿ ನನ್ಹತ್ರ ನನ್ ಕತಿ

ತಿಂಗ್ಳಿಗ್ ಬರೋದ್ಸಂಬ್ಳ ಒಂದೇ ಸತಿ

ಎಲ್ಲಾದಕೂ ಕಾಯ್ಬೇಕ್ರೀ ಅದ್ಕೇನೇ

ಪರಿಹಾರಕ್ಕೆ ಪಾಲಿಸ್ತಾಯಿವ್ನಿ ಬೇರೆ ನೀತಿ.

ಹೆಡ್ಗುಮಾಸ್ತೆ ದೊಡ್ ಕೆಲ್ಸ ಏನಲ್ಲ

ದುಡ್ಗೂನೂ ಒಂದ್ರಸ್ತೆ ಕಂಡೌವ್ನೇ ಬಲ್ಲ

ಸ್ನೇಯಿತ್ರು ಕೇಳಿದ್ರು, ಲೋಕಾಯುಕ್ತ್ರು ಬಂದ್ರಂತೆ

ನಿಮ್ ಸಾಹೇಬ್ರನ್ನ ತಿನ್ನೋವಾಗ್ ಹಿಡ್ದ್ರಂತೆ

ಹೆಂಗಲಾ ಬಚಾವಾದೆ ನೀನು?

ನಿನ್ ಮನೆ, ತ್ವಾಟ ಸೋದ್ನ ಮಾಡಿದ್ರಂತೆ

ನಾನಂದೆ, ಅದ್ಕೇ ಯೋಳೋದು ಅಡ್ಕಸ್ಬೀಗ್ಳೂಂತ

ತಿಂದ್ರೆ ಸಾಲ್ದು ಬಚಾವಾಗೋಕೂ ಕಲೀಬೇಕು ತಂತ್ರ

ಲೋಕಾಯುಕ್ತ್ರಿಗೆ ಇಲ್ವಾ ಹೆಡ್ಗುಮಾಸ್ತ್ರು?

ಅವ್ರಿಗೇ ತಿನ್ನಿಸ್ದೇ ಅವ್ರ್ ಮನೇಲೇ ಅಡಗ್ಸಿಟ್ಟೆ

ಪ್ರಾಣಿ ಪಕ್ಷಿಗ್ಳ ತಂತ್ರ ನಮ್ಮಂತೋರಮುಂದೆ ನಡೆಯೊಲ್ಲ

ಒಬ್ಬನ್ನ ಹಿಡ್ದ್ ಬುಟ್ರೆ ಮಿಕ್ಕೋರು ಮಂಕಾಗೊಲ್ಲ

ಯಾಕಂದ್ರೆ ನಮ್ಮತ್ರ ತಿನ್ನೋರು ಮ್ಯಾಲ್ಕುಂತವ್ರೆ

ಅವರತ್ರ ತಿನ್ನೋಕೆ ಅವ್ರಮ್ಯಾಲ್ನವ್ರು ಕಾದವ್ರೆ

ಲೋಕಾಯುಕ್ತ್ರು ಒಬ್ಬ್ರು, ಕಳ್ಳ ಖದೀಮ್ರು ಕೋಟ್ಯಾಂತ್ರ

ಒಬ್ಬನ್ನ ಹಿಡಿದ್ರೆ ಸಾಕು ಸಾವ್ರ ಹುಟ್ಕಳ್ತಾರೆ

ಲೋಕಾಯುಕ್ತರೂ ಅಸಹಾಯಕ್ರು ಪಾಪ ಏನುಮಾಡ್ತಾರೆ?

ದಿನಾ ಸಾಯೋರ ಸಂತೆ ಇದು ಅಂತ ಸುಮ್ನಾಗ್ತಾರೆ.

Thursday, February 4, 2010

ಹೀಗೇ ಒಮ್ಮೆ.....

ಇತ್ತೀಚೆಗೆ ಯಾವುದೋ ಕಾನ್ಫರೆನ್ಸಿಗೆ ಅಂತ ಮಂಗಳೂರಿಗೆ ಅಂತ ಹೋಗಿದ್ದೆ. ನನ್ನನ್ನು ಬರಮಾಡಿಕೊಳ್ಳಲು ಯಾರಾದ್ರೂ ಕಾಲೇಜಿಂದ ಬಂದಿರ್ತಾರೇನೋ..ಎಂದು ಸ್ಟೇಷನ್ನಿಂದ ಹೊರಬಂದು ಕಾರ್ ಸ್ಟಾಂಡಿನತ್ತ ನೋಡತೊಡಗಿದೆ....

“ಸಾರ್....”
ದನಿ ಬಂದ ಕಡೆ ತಿರುಗಿದೆ.. ಚಿವುಟಿಕೊಂಡೆ...ಯಾಕಂದರೆ..ಗುಂಡನ ಆ ಗೊಗ್ಗರು ದನಿ ಮರೆಯಲು ಸಾಧ್ಯವೇ ಇಲ್ಲ!!. ಗುಂಡ..!! ..yes...!!!! ನನ್ನ ಯೋಚನಾ ಲಹರಿ ಹತ್ತು ವರ್ಷ ಹಿಂದಕ್ಕೆ ಹೋಯಿತು.

ನಾನು ಸುಮಾರು 10 ವರ್ಷ ಕೆಲಸ ಮಾಡಿ central Govt.ನ deputation ಮೂಲಕ ಪ.ಸಂ.ಮೀ. ಮಹಾವಿದ್ಯಾಲಯದಲ್ಲಿ ಪಿ.ಎಚ್.ಡಿ ಗಾಗಿ ಬಂದಿದ್ದಾಗ ಪರಿಚಯವಾದ ಬಹಳ ಪಗಡದಸ್ತ್ ಆಸಾಮಿ., ಆಗಲೇ ಬಿ.ಎಸ್ಸಿ. ಪದವಿಗಾಗಿ ಸೇರಿದ್ದ ಮಂಡ್ಯದ ಬಳಿಯ ಮಲ್ನಾಯಕನ ಕಟ್ಟೆ ಬೆಟ್ಟೇಗೌಡರ ಮಗ ಗುಂಡ..ಅಂದರೆ ..ಎಮ್.ಬಿ. ಗುಂಡ ರಾಜೇಗೌಡನ ಪರಿಚಯವಾಗಿದ್ದು. ನಾನು ಪಿ ಎಚ್ ಡಿ ಗೆ ಸೇರಿದಾಗ ಕಾಲೇಜಿನ ಆಫೀಸ್ ಆವರಣದಲ್ಲಿ ಮೊದಲಿಗೆ ಸಿಕ್ಕ ಸೀನಿಯರ್ student ಇವನೇ ಆಗಿದ್ದ. ಗುಂಡ ಅಂತಿಮ ವರ್ಷ ಬಿ. ಎಸ್ಸಿಯಲ್ಲಿದ್ದ (ಇದು ಗೊತಾಗಿದ್ದು ನಂತರ). ಆ ಕಾರಣಕ್ಕೆ..ಎಮ್. ಎಸ್ಸಿ ಮತ್ತು ಪಿ.ಎಚ್.ಡಿ. ಗೆ ಸೇರಲು ಬಂದಿದ್ದ ಎಲ್ಲ ಹೊಸಬರನ್ನ ಮುಲಾಜಿಲ್ಲದೇ ಕಾಡಲು, ರಾಗಿಂಗಿಗೇ ಇಳಿದಿದ್ದ. ನಾನು ನನ್ನ official formalities ಮುಗಿಸಿ course ಗೆ ಸೇರಲು ಬಂದಾಗ ನನ್ನ ಜೊತೆಯವರೆಲ್ಲಾ admit ಆಗಿಬಿಟ್ಟಿದ್ದರು. ಆಫಿಸಿನಿಂದ ಹೊರಬರುತ್ತಿದ್ದ ನನ್ನನ್ನು..ನೋಡಿ.. “ರೀ..ಏನ್ರೀ.. ಒಂದ್ಸೊಲ್ಪ..ನಿಂತ್ಕಳ್ಳೀ..” ಅಂತ ನಿಲ್ಲಿಸಿ.. “ಏನು ಪಿ.ಎಚ್.ಡೀನಾ..? ಡಾಕ್ಟ್ರು ಅನ್ನಿಸ್ಕೊಂಬೇಕಾ..?? ಎಲ್ಲಿ..ಎಮ್.ಎಸ್ಸಿ. ಮಾಡಿದ್ದು..??, ನ್ಯೂಟನ್ ಪ್ರಕಾರ ಆಕರ್ಷಣೆ ನಾಲ್ಕನೇ ನಿಯಮ..ಏನು ಹೇಳಿ ನೋಡೋಣ..?” ಪಕ್ಕದಲ್ಲಿದ್ದ ಇನ್ನೊಬ್ಬ ಸೀನಿಯರ್ ಹುಡುಗನ್ನ ಕರೆದು

“ಲೇ ಒಂದಿಬ್ಬರು ಮೂವರು ಈವೊತ್ತು ಜಾಯಿನ್ ಆಗ್ತಾವ್ರೆ ಅಂತ ಹೇಳಿ ನಾಲ್ಕೈದುಜನ ಸೀನಿಯರ್ಸ್ ನ ಕರ್ಕೊಂಡ್ಬಾ ಹೋಗು”.....
ನನ್ನ ಮೇಲಿಂದ ಕೆಳಕ್ಕೆ ನೋಡುತ್ತಾ...ನಾನು in-service candidate ಪಿ.ಎಚ್.ಡಿ ಗೆ ಅನ್ನೋ ಕಾರಣಕ್ಕೆ ... ಯಾವುದಕ್ಕೂ ಸಪೋರ್ಟಿಗೆ ಇರಲಿ ಅಂತ ಅನ್ನಿಸಿರಬೇಕು,

ನಾನು “ ಹೌದು ಸಾರ್‍... ಪಿ. ಎಚ್.ಡಿ.ಗೆ ಸೇರಿದ್ದೇನೆ..”

ನೋಡಲು ದಷ್ಠ-ಪುಷ್ಠವಾಗಿದ್ದ, ಬಹಳ ಸೀನಿಯರ್ ಪಿ.ಎಚ್.ಡಿ ಸ್ಕಾಲರ್ ಇರಬೇಕು ಎಂದುಕೊಂಡೆ.

..ಗಾಬರಿಯಲ್ಲಲ್ಲದಿದ್ದರೂ ಸ್ವಲ್ಪ ಗಲಿಬಿಲಿಗೊಂಡಂತೆ..ಉತ್ತರಿಸುವುದರಲ್ಲಿ.. ...

“ಲೋ ಹರೀಶ ....ಎಲ್ಲೆಲ್ಲೋ..ಹುಡ್ಕೋದು ನಿನ್ನ..?? ನೆನ್ನೆನೇ ಬಂದ್ಯಂತೆ..ಮನೆಕಡೆ ಬರೋದಲ್ಲವಾ..?”
ಎನ್ನುತ್ತಾ..ನನ್ನ ಪಿ.ಯು.ಸಿ. ಯಿಂದ ಎಮ್.ಎಸ್ಸಿ ವರೆಗಿನ ಸಹಪಾಠಿ..ಮತ್ತು ತನ್ನ ಉತ್ತಮ ಸಾಧನೆ-ಸಾಮರ್ಥ್ಯಗಳ ಮೂಲಕ ಪ್ರೊಫೆಸರ್ ಆಗಿದ್ದ ಘನಿಷ್ಠ ಗೆಳೆಯ ರೆಡ್ಡಿ ಕಾರಿಡರ್ ಗೆ ಬಂದು ನನ್ನ ಕೈಕುಲುಕಿದ.

“ಇಲ್ಲ ಕಣೋ...., ರವಿ ಸಿಕ್ಕಿದ್ದ..ಅವನ ಜೊತೆ ಹೋಟೆಲಲ್ಲೇ ಇದ್ದೆ..ಈಗ ಬೆಳಿಗ್ಗೆ..class ಶುರು ಆಗಿರಬಹುದು
ಅಂತ..fees ಕಟ್ಟಿ registration ಮಾಡ್ಬೇಕು ಅಂತ ಬೇಗ ಬಂದೆ” ಎಂದೆ.

ಆಗಲೇ ಗೊತ್ತಾಗಿದ್ದು.. ಗುಂಡ ಅಲ್ಲಿಂದ ಮಾಯವಾಗಿದ್ದ ಅಂತ. “ಗೌಡ ಏನೋ ಕೇಳ್ತಾ ಇದ್ದ ನಿನ್ಹತ್ರ.. ಏನಂತೆ?? ಅವನ ತಾಪತ್ರಯ..??” ನಾನು ಆಶ್ಚರ್ಯದಿಂದ ರೆಡ್ಡಿಯನ್ನು ಪ್ರಶ್ನಾರ್ಥಕವಾಗಿ ನೋಡಿದಾಗ..ಗುಂಡ ಬಿ. ಎಸ್ಸಿ ಗಾಗಿ ಏಳನೇ ವರ್ಷವೂ ಪರಿಶ್ರಮ ನಿರತನಾಗಿರುವುದು ರೆಡ್ಡಿ ಮೂಲಕ ತಿಳಿಯಿತು.

ಆನಂತರ ಒಂದೆರಡು ಬಾರಿ ಹಾಸ್ಟೆಲಿನಲ್ಲಿ..ಕಾಲೇಜು ಕಾರಿಡಾರುಳಲ್ಲಿ..ಗುಂಡ ನನ್ನ ಕಣ್ತಪ್ಪಿಸಿ ಓಡಾಡುವುದನ್ನು ಗಮನಿಸಿದ್ದೆ. ಒಂದು ದಿನ ಹಾಸ್ಟಲಿನಲ್ಲಿ ಸ್ವಲ್ಪ ಲೇಟಾದ್ದರಿಂದ ಊಟದ ತಟ್ಟೆಯನ್ನು ಪಡೆದು ಗುಂಡ ಒಬ್ಬನೇ ಕುಳಿತಿದ್ದ ಟೇಬಲ್ಲಿಗೇ ಹೋಗಿ ಕುಳಿತೆ. ಅವನೇ ವಿಷಯವನ್ನು ಸ್ವಲ್ಪ ಹಿಂಜರಿಕೆಯಿಂದಲೇ ಪ್ರಾರಂಭಿಸಿದ. “ಸಾರ್..ನೀವು ರೆಡ್ಡಿ ಸಾರ್ class-mateಉ ಅಂತಾ ಗೊತ್ತಿರಲಿಲ್ಲ.. ಅಲ್ಲದೇ ನಿಮ್ಮನ್ನ ನೋಡಿದರೆ ತುಂಬಾ young ಆಗಿ ಕಾಣ್ತೀರ..ಸಾರಿ ಸಾರ್..” ಎಂದು ಹಲ್ಲು ಗಿಂಜಿದ. “ಪರವಾಗಿಲ್ಲ ಗೌಡರೇ.. ಹೊಸದಾಗಿ ಕಾಲೇಜಿಗೆ ಬರೋವರನ್ನ ಒಂದುರೀತಿ ಚುಡಾಯಿಸೋ ತರಹ ಬರಮಾಡ್ಕೊಳ್ಳೋದು ನಾವೂ ಮಾಡ್ತಿದ್ದದ್ದೇ...ಆದರೆ ಅವರಿಗೆ ಅವಮಾನ-ಹಿಂಸೆ ಆಗೋಥರಾ ನಾವು ಯಾವತ್ತೂ ಮಾಡಿದ್ದಿಲ್ಲ..ಅವರಿಗೆ ಅತಿ ಮುಜಗರ ಅನ್ನಿಸ್ತಾ ಇದೆ ಅಂತ ಗೊತ್ತಾದ್ರೆ..ಸಮಾಧಾನ ಮಾಡಿ ಫ್ರೆಂಡ್ ಮಾಡ್ಕೊತಿದ್ವಿ. ragging ಆನ್ನೋದು ಹೊಸಬರನ್ನು ಕೀಟಲೆ ಮಾಡಲು ಮತ್ತು ಆ ಮೂಲಕ ಪರಿಚಯಿಸಿಕೊಂಡು ಉತ್ತಮ ಮಿತ್ರರಾಗಲು ಮಾಡಿಕೊಂಡ ನಮ್ಮದೇ ಆದ ವ್ಯವಸ್ಥೆ...ಆದ್ರೆ ಅದನ್ನೇ ನಾವು ಗೂಂಡಾಗಿರಿ ಮೆರೆಯಲು, ಕಾಟಕೊಡಲು ಮತ್ತು ಹಿಂಸಿಸಲು ಮಾಡೋದು ಅಪರಾಧ ಅಲ್ಲವೇ ಗುಂಡ ಅವರೇ..?” ಎಂದಾಗ...

“ಹೆ..ಹೆ..ಹೆ..ಏನ್ಸಾರ.? ಎಷ್ಟು ಜೂನಿಯರ್ ನಾನು..?? ನೀವು ತಾವು ಅಂತೀರ..ಗುಂಡ ಅನ್ನಿ ಸರ್..ಪರ್ವಾಗಿಲ್ಲ..” ಅಂತ ಮತ್ತೆ ಹಲ್ಲು ಗಿಂಜಿದ.

“ಹೌದು.. ಗುಂಡೇ ಗೌಡ್ರೆ.., ನಿಮ್ಮದು ಯಾವ ಊರು..?” ಒಮ್ಮೆಲೇ ಏಕವಚನಕ್ಕೆ ಬರೋದು ಕಷ್ಟ ಅನ್ನಿಸ್ತು.

“ಅಂದಹಾಗೆ ನನ್ನ ಪೂರ್ತಿ ಹೆಸರು..ಗುಂಡ ರಾಜೇಗೌಡ ಅಂತ ಸಾರ್.. ನಮ್ಮದು ಮಂಡ್ಯ” ಅಂದ.

ನನಗೆ ಕುತೂಹಲ ಆಯಿತು.. “ಏನು..ಮಂಡ್ಯನೇ..? ನಾನು ಮಂಡ್ಯದ V.C.Farm ನಲ್ಲಿ ಕೆಲ್ಸ ಮಾಡ್ದೆ...ಎಲ್ಲಿ ಯಾವ ಏರಿಯಾ ಮಂಡ್ಯದಲ್ಲಿ..? ”

“ಹೆ..ಹೆ..ಹೆ..ಔದಾ ಸಾರ್..!!?? ಹೆ..ಹೆ.ಹೆ..ಮಂಡ್ಯ ಅಂದ್ರೆ.. ಮಂಡ್ಯ ಅಲ್ಲ ಸಾರ್ ಪಕ್ಕದಲ್ಲಿ ..... ಹಳ್ಳಿ..”

ನಾನು..
“ಅಲ್ಲಪ್ಪ ಯಾಕೆ ಹಳ್ಳಿ ಅನ್ನೋಕೆ ನಾಚ್ಕೇನಾ..? ನಾನೂ ಹಳ್ಳೀಲೇ ಹುಟ್ಟಿದ್ದು ಬೆಳೆದಿದ್ದು..ಅನ್ನಕೊಡೋ ಅನ್ನದಾತರು ನಮ್ಮ ಹಳ್ಳಿ ರೈತರು...ರೈತನ ಮಗ ಅನ್ನೋದು ಹೆಮ್ಮೆ ಪಡೋ ವಿಷಯ...ಅಲ್ಲವಾ?” ..ಈಗ ಏಕವಚನಕ್ಕೆ ಬರೋದು ಕಷ್ಟ ಅನಿಸಲಿಲ್ಲ.
ಮತ್ತೆ ಕೇಳಿದೆ... “ಯಾವ ಹಳ್ಳಿ?”

“ಮಲ್ನಾಯಕನ ಕಟ್ಟೆ..ಅಂತ ಸಾರ್..” ಎಂದ ಮತ್ತೆ ಹಲ್ಲು ತೋರಿಸುತ್ತಾ....

“ಹೌದಾ..?” ಮತ್ತೂ ಅಶ್ಚರ್ಯವಾಯಿತು.
“ಹೌದು ಸಾರ್..ಬೆಟ್ಟೇಗೌಡರು ಗೊತ್ತಿರಬೇಕು ನಿಮಗೆ..ಅವರ ಮಗ ನಾನು.” ಎಂದ.

“ಏನು ಕಟ್ಟೆ ಮನೆ ಬೆಟ್ಟೇ ಗೌಡರ ಮಗಾನೇ..? ..ಚಂದ್ರು ನ ನೋಡಿದ್ದೆ....ನೀ...ನು...”

“ಸಾರ್ ಚಂದ್ರು ನಮ್ಮಣ್ಣ ಸಾರ್...”

“ಹೌದಾ? ಗೌಡ್ರು ಬಹಳ ಸಹಾಯ ಮಾಡಿದ್ರಪ್ಪಾ ನಾನು ಹೊಸದಾಗಿ ವಿ.ಸಿ, ಫಾರಂ ಗೆ ಹೋದಾಗ...
ಹೇಗಿದ್ದಾರೆ ನಿಮ್ಮಪ್ಪ.. ನಿಮ್ಮಣ್ಣ ಎಲ್ಲಾ.....? ನಿಮ್ಮಪ್ಪ ನಮ್ಮ ಸಂಶೋಧನಾ ಕೇಂದ್ರಕ್ಕೆ ಬರ್ತಿದ್ದ ಹೊಸ ಕೃಷಿ ಸಂಶೋಧಕರಿಗೆ ಮನೆ ಬಾಡಿಗೇಗೆ ಸಿಕ್ಕು ಹೊಸವೃತ್ತಿ ಜೀವನ ಪ್ರಾರಂಭಿಸೋ ಸಮಯದಲ್ಲಿ ೧೦-೧೫ ದಿನ ತಮ್ಮ ಕಡೆಯಿಂದ ಊಟದ ವ್ಯವಸ್ಥೆ ಮಾಡಿಸಿ ಅವರ ಬೇಕು ಬೇಡಗಳಿಗೆ ನೆರವಾಗ್ತಿದ್ದವರು...ರೈತ ಅಂದ್ರೆ ಅನ್ನದಾತ ಅನ್ನೋದನ್ನ ಮಾಡಿ ತೋರಿಸಿದವರು. ನಮ್ಮ ಸ್ನೇಹಿತರೆಲ್ಲಾ ರಾಜೇಗೌಡರು ಅಂದ್ರೆ ಬಹಳ ಗೌರವ ಕೊಡೋರು...” ಹಿಂದಿನ ಆ ದಿನಗಳ ನೆನಪಿಸಿಕೊಳ್ಳುತ್ತಾ ಹೇಳಿದೆ.

“ಅಯ್ಯೋ.. ಸಾರ್ ಅದು ಹಳೇ ಕಥೆ....ಯಾವ್ದೋ ..ತೊಂದರೇಗೆ ಸಾಲ ತಂಗಡ ನಮ್ಮಣ್ಣ.., ಬೇಸಾಯ ಕೈಕೊಡ್ತು, ಕಬ್ಬು ಬೆಲೆ ಇಳೀತು, ಹಾಕಿದ್ ಬಂಡವಾಳಾನೂ ಕೈಗತ್ತೋದು ಕಷ್ಟ ಆಗ್ತಿತ್ತು, ಅದ್ಕೆ ನಮ್ಮಪ್ಪ ಗದ್ದೆ ಮಾರ್ಬಿಟ್ಟ..ನಮ್ಮಣ್ಣ ಸರ್ಕಾರಿ ಕಂಟ್ರಾಕ್ಟರು .. ಆಗುವ್ನೆ...ಮೇಲದ್ಕಾರಿಗಳನ್ನ ಸರಿ ಮಾಡ್ಕಂಡವ್ನೆ..ಒಳ್ಳೆ ಆದಾಯ...” ಎಂದ ಗುಂಡ

“ಇದು ತಪ್ಪಲ್ಲವಾ ಗುಂಡ...ಕಂಟ್ರಾಕ್ಟ್ ತಗೊಂಡು ..ಕಳಪೆ ಕೆಲಸ ಮಾಡಿದ್ರೆ ಜನಕ್ಕೆ ತೊಂದರೆ ಅಲ್ಲ್ವಾ?” ನಾನು ಕೇಳಿದೆ.
“ಇಲ್ಲಾ ಸಾರ್ ..ಕೆಲ್ಸ ಚನ್ನಾಗೇ ಮಾಡಿಸ್ತಾನೆ..ಆದ್ರೆ...ಮಾಡಿರೋ ಕೆಲ್ಸಾನೇ ಎರಡು ಸರ್ತಿ ತೋರ್ಸೋ ಅದ್ಕಾರಿಗಳಹತ್ರ ಕಿತ್ಕೋತಾನೆ....ಹಹಹಹ....ಗುಂಡೀಲಿ ಹೋಗೋದು ಬಂಡೀಲಿ ಬರ್ತದೆ...”

ಇದೊಂದು ಸಾಧನೆ ಅನ್ನೋ ರೀತಿಯಲ್ಲಿ ಪೋಸ್ ಮಾಡ್ದ ಗುಂಡ......

ಲಂಚಕೋರ ಅಧಿಕಾರಿಗಳು, ಅವರನ್ನೇ ನಂಬಿ ದುಡ್ಡು ಮಾಡೋ ಪುಢಾರಿಗಳು ವ್ಯವಸ್ಥೆಯ ಮತ್ತು ಬೇಸಾಯದ ಹೊಡೆತ ತಿಂದು ಸೋತು ಸುಣ್ಣವಾಗೋ ರೈತನನ್ನ ಹೇಗೆ ತಪ್ಪು ದಾರಿಗೆ ಎಳೀತಾರಲ್ಲಾ..?! ಎನ್ನುತ್ತಾ ಯೋಚಿಸತೊಡಗಿದೆ. ಸೋತು..ಆತ್ಮಹತ್ಯೆಗೆ ಶರಣಾಗದೇ ನ್ಯಾಯಯುತವಾಗಿ ಬದುಕಲು ಸಾಧ್ಯವೇ? ಎನ್ನುವುದೂ ನನ್ನನ್ನು ಯೋಚನೆಗೆ ತಳ್ಳಿತು.


“ಸಾರ್..ಸಾರ್..”....

ಗಕ್ಕನೆ ಮತ್ತೆ ವಾಸ್ತವಕ್ಕೆ ಬಂದಿದ್ದೆ... “ಹೋ ಗುಂಡ ಹೇಗಿದ್ದೀಯಪ್ಪ..?” ಎಂದೆ ಅವನ ಕೈ ಕುಲುಕುತ್ತಾ..

“ನೆನಪಿದೆಯಲ್ಲ ಸಾರ್...!!!?? ಥ್ಯಾಂಕ್ಸ್... ಚನ್ನಾಗಿದ್ದೀನಿ...ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದೀನಿ ಸರ್...” ಎಂದ...
ಗುಂಡ ಏಳನೇ ವರ್ಷ ಬಿಎಸ್ಸಿಯಲ್ಲಿದ್ದಾಗ..ಅವರಣ್ಣ ತೀರಿಹೋಗಿದ್ದು...ಒಮ್ಮೆಗೇ ಬಿದ್ದ ಜವಾಬ್ದಾರಿಯಿಂದ ತಡವಾಗಿಯಾದರೂ ಎಚ್ಚೆತ್ತುಕೊಂಡದ್ದು..ಛಲದಿಂದ ಅದೇ ವರ್ಷ ಬಿಎಸ್ಸಿ ಮುಗಿಸಿ ಎಂಟ್ರೆಂನ್ಸ್ ಪರೀಕ್ಷೆ ಮೂಲಕ ಫೆಲೋಶಿಪ್ ತಗೊಂಡು ಉತ್ತಮ ದರ್ಜೆಯಲ್ಲಿ ಎಮ್ ಎಸ್ಸಿ ಮುಗಿಸಿ, ಹಾಗೇ ಪಿಎಚ್ ಡಿ ಮಾಡಿ ಕಾಲೇಜಿನ ಲೆಕ್ಛರರ್ ಆದದ್ದು ರೆಡ್ಡಿ ಮೂಲಕ ನನಗೆ ತಿಳಿದಿತ್ತು.

Sunday, January 31, 2010

ಗೊತ್ತಿಲ್ಲ ಮಗು

ವ್ಯತ್ಯಾಸ
ಅಪ್ಪಾ..ಒಂದ್ಮಾತು..
ಏನಪ್ಪ ಮಗ ಹೊಸ ವರ್ಸೆ?
ಮೊನ್ನೆ ಚಿತ್ರ ಕಲಾ ಉದ್ಘಾಟನೆ ನಡೀತು
ಹೌದು, ಟಿ.ವಿ.ಯಲ್ಲೂ ಬಂತಲ್ಲ
ಚಿತ್ರ ಕಲೆಗೂ ಚಲನ ಚಿತ್ರಕ್ಕೂ ವ್ಯತ್ಯಾಸ ಇಲ್ಲವಾ?
ಯಾಕಿಲ್ಲ..ನೀನು, ನಿನ್ನ ಸ್ನೇಹಿತ್ರು
ಮೊನ್ನೆ ಸ್ಕೂಲಲ್ಲಿ ಭಾಗವಹಿಸಿದ್ದರಲ್ಲಾ...??
ಗೊತ್ತಪ್ಪ...ಆದ್ರೆ...ಚಿತ್ರಕಲಾ ಉದ್ಘಾಟನೆ ಮಾಡ್ತಾ
ನಮ್ಮ ಮಾನ್ಯ ಸಚಿವರು ನಮ್ಮ ಚಲನಚಿತ್ರಗಳು
ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡ್ತಿವೆ
ಅಂತೆಲ್ಲಾ ಭಾಷಣ ಮಾಡಿದ್ರಲ್ಲಾ ಕಟ್ಟುಮಸ್ತಾಗಿ..
ಸಚಿವರಿಗೆ ಅಷ್ಟೂ ಗೊತ್ತಾಗಲಿಲ್ಲವಾ
ಚಿತ್ರ ಕಲೆ ಬೇರೆ, ಚಲನ ಚಿತ್ರ ಬೇರೆ ಅಂತ...??
ಗೊತ್ತಿಲ್ಲ ಮಗು.

ಮುಖ ನೋಡಿ ಮಣೆ
ಅಪ್ಪಾ...ಬೆಳ್ಳಾರೀಲಿ ಕಟ್ಟಡ ಉರುಳಿ
ಎಷ್ಟು ಅಮಾಯಕರು ಪ್ರಾಣ ಕಳ್ಕೊಂಡ್ರು..!!
ಹೌದು ನೋಡು...ಎಷ್ಟು ಜೀವ ಹಾನಿ ಅಲ್ಲವಾ?
ಅಕ್ರಮ ಕಟ್ಟಡ ಎಲ್ಲಾ ಒಡೆದು ಕೆಡವಬೇಕು ಅನ್ನುತ್ತಲ್ಲ ಸರ್ಕಾರ?
ಹೌದಲ್ಲ ..? ಪ್ರಾಣ ಹಾನಿ ತಡಿಯಬಹುದಲ್ಲವಾ?
ಅಲ್ಲಪ್ಪ ಮತ್ತೆ ಅಕ್ರಮ ಗಣಿಗಾರಿಕೆಯಿಂದ
ರಾಜ್ಯದ ಸಂಪತ್ತು ಮತ್ತು ಪರಿಸರಕ್ಕೆ
ಹಾನಿಯಾಗ್ತಿದೆಯಲ್ಲ ಅದನ್ನ ಯಾಕೆ ನಿಲ್ಲಿಸ್ತಿಲ್ಲ ಸರ್ಕಾರ?
ಇದು ಮುಖ ನೋಡಿ ಮಣೆ ಹಾಕೋದಲ್ಲವಾ?
ಗೊತ್ತಿಲ್ಲ ಮಗು.

ಶಾಸ್ತ್ರೀಯ ಭಾಷೆ
ಅಪ್ಪಾ...ಕನ್ನಡ ಬಲು ಸಿರಿವಂತ ಭಾಷೆ ಅಲ್ಲವೇನಪ್ಪ?
ಹೌದು..ಮತ್ತೆ..ಬಹು ಪುರಾತನ ಸಹಾ...
ಏಳು ಜ್ಜಾನಪೀಠ ಸಿಕ್ಕಿದೆ..ಯಾವ ಭಾಷೆಗೂ ಸಿಕ್ಕಿಲ್ಲ ಹೀಗೆ..
ಮತ್ತೆ ಶಾಸ್ತ್ರೀಯ ಭಾಷೆ ಪಟ್ಟ ಇನ್ನೂ ಅಧಿಕೃತವಾಗಿಲ್ಲವಲ್ಲ
ಹೌದು ಕಣೋ, ಕೋರ್ಟ್ ನಲ್ಲಿ ಇತ್ಯರ್ಥ ಆಗಬೇಕು
ಅಲ್ಲಪ್ಪ ನಮ್ಮ ಮನೆಯಲ್ಲಿ ನಮ್ಮ ಭಾಷೇನಾ
ಅಧಿಕೃತಗೊಳಿಸಿಕೊಂಡ್ರೆ..ಪಕ್ಕದ್ಮನೆಯೋರ್ಗೆ ಏನು ತೊಂದರೆ?
ಅವರ ಮನೆಯವರು ನಮ್ಮ ಮನೆಯಲ್ಲಿ ಅವರ ಭಾಷೇನೇ
ಅಷ್ಟೊಂದು ಧೀಟಾಗಿ ಮಾತನಾಡೋವಾಗ...?
ಗೊತ್ತಿಲ್ಲ ಮಗು

Tuesday, January 26, 2010

ಒಂದು ಚಾಟ್ ನ ಕನ್ನಡಿಗರ ಇಂಗ್ಲೀಷ್ ಲಿಪ್ಯಾಲಾಪ

(ಕನ್ನಡೀಕೃತಲಿಪಿಯಲ್ಲಿ, ಸೂಚನೆ: ಶಿಫ್ಟ್-ಎಲ್ ಕೀಲಿಯ ಬಗ್ಗೆ ಇಬ್ಬರಿಗೂ ಗೊತ್ತಿರಲಿಲ್ಲ- ಇದು ಎಷ್ಟು ಅಭಾಸಪೂರ್ಣ ಆಗಬಹುದು ಅನ್ನೋದಕ್ಕೆ..)

ಆಕೆ: ಏನ್ರೀ? ಚೆನ್ನಾಗಿದ್ದೀರಾ?

ಆತ: ನೀವು ಹೇಲಿ..ನಾನು ಚೆನ್ನಾಗಿದ್ದೇನೆ...ಹೋದ ಸರ್ತಿ ಏನೋ ಹೇಲಬೇಕು ಅಂದ್ರಿ ..ಹೇಲಲಿಲ್ಲ

ಆಕೆ: ತುಂಬಾ ಹೇಲೋದಿದೆ..ಆದ್ರೆ ಹೇಗೆ ಹೇಲೋದೂ ಅಂತ ಗೊತ್ತಾಗ್ತಿಲ್ಲ..ಕಂಪ್ಯೂಟರ್ ನಲ್ಲಿ ಪೋನ್ ನಲ್ಲಿ ಹೇಲೋದು ಕಷ್ಟ..... ನೀವು ಬಂದ್ರೆ ನಿಮ್ಮ ಮುಂದೆ ಹೇಲ್ತೀನಿ...

ಆತ: ನಾನು ಹೇಲೋದೆಲ್ಲ ಹೇಲಿ ಆಗಿದೆ..ನಿಮಗಿನ್ನೂ ಹೇಲೋದಿದ್ರೆ ನಾನು ಬರ್ತೀನಿ ನನ್ನ ಮುಂದೇನೇ ಹೇಲಿ ಆಗ ನಿಮಗೂ ನಿರಾಳ ನನಗೂ ಸಮಾಧಾನ.

ಆಕೆ: ನಿಮ್ಮಾಕೆನೂ ನಮ್ಮವ್ರ ಹತ್ರ ಹೇಲ್ತಾ ಇದ್ರಂತೆ ಹಂಗಂತ ನಮ್ಮವ್ರು ನನಗೆ ಹೇಲಿದ್ರು, ನಿಮ್ಮಬ್ಬರಿಗೂ ಹೆಚ್ಚಿಗೆ ಹೇಲೋದಿದ್ರೆ ನಾವೆಲ್ಲ ಒಟ್ಟಿಗೆ ಕೂತಾಗ ಹೇಲೋನ...ಎನಂತೀರಿ..?

ಆತ: ಇದು ಸರಿಯಾದ ಸಲಹೆ ಒಟ್ಟಿಗೆ ಎಲ್ಲ ಕೂತು ಹೇಲಿಕೊಂಡ್ರೆ ಎಲ್ರಿಗೂ ಸಮಾಧಾನ

ಆಕೆ: ನಿನ್ನೆ ಮಿನಿಸ್ಟ್ರು ಫೋನ್ ಮಾಡಿದ್ರು..ನಮ್ಮವ್ರಿಗೆ

ಆತ: ಏನು ಹೇಲಿದ್ರು?

ಆಕೆ: ಅವ್ರೆಲ್ಲಿ ಹೇಲ್ತಾರೆ..? ನಿಮ್ಮಮನೆಗೇ ಬರ್ತೀನಲ್ಲ್ಲಾ ನಿಮ್ಮ್ ಮಿಸೆಸ್ ಹತ್ರ ಹೇಲ್ತೀನಿ ಅಂದರಂತೆ

ಆತ: ಬಂದಿದ್ರಾ ನಿಮ್ಮನೇಗೆ? ನಿಮ್ಮ ಹತ್ರ ಹೇಲಿದ್ರಾ?

ಆಕೆ: ಇಲ್ಲಾ ರೀ ..ಅವರ ಮಿಸೆಸ್ ಬಂದಿರ್ಲಿಲ್ಲ ..ಅದಕ್ಕೆ ಹೇಲ್ಲಿಲ್ಲ..!!

ಆತ: ಅಲ್ಲ, ಅವ್ರ ಮಿಸೆಸ್ ಬರ್ದೆಇದ್ರೆ ಹೇಲೋಕೆ ಅವ್ರಿಗೆ ತೊಂದರೆ ಏನಂತೆ?

ಆಕೆ: ಅವ್ರ ಮಿಸೆಸ್ ಹತ್ರ ಸಿ.ಎಮ್. ಏನೋ ಹೇಲಿದ್ರಂತೆ..ಅದನ್ನ ನಮ್ ಮಿಸೆಸ್ ಹತ್ರ ಹೇಲಿಸ್ತೇನೆ ಅಂದ್ರು..ಅದಕ್ಕೆ ನಾನು.. ’ಸಿ.ಎಮ್. ನಿಮ್ಮಾಕೆಹತ್ರ ಹೇಲಿದ್ದು ಏನೇ ಇದ್ರೂ ನೀವು ನಮ್ಮ ಹತ್ರ ಹೇಲ್ಬೇಕೂ ಅನ್ನೋದನ್ನ ಹೇಲಿ ಬಿಡಿ ಸಂಕೋಚ ಯಾಕೆ’ ಅಂತ ಹೇಲ್ದೆ..

ಆತ: ಸರಿ ಬಿಡಿ ನಾಡಿದ್ದು ಸಿ.ಎಮ್ ಮನೇಲಿ ಮೀಟಿಂಗ್ ಇದೆ, ಮಿನಿಸ್ಟ್ರು ಅವ್ರ ಮಿಸೆಸ್ಸು, ಸಿ.ಎಮ್ಮು, ನೀವು ನಾವು ಎಲ್ಲಾ ನಮ್ಮ ನಮ್ಮದು ಹೇಲೋಣ..ಅವ್ರು ಏನು ಹೇಲ್ತಾರೋ ನೋಡೋಣ ಆಮೇಲೆ ಅದನ್ನ ನೋಡಿ ನಿರ್ಧಾರ ತಗಲ್ಲೋಣ..ಏನು ಹೇಲ್ತೀರಿ..?

ಆಕೆ: ಸರಿ ನೀವು ಹೇಲೋ..ಹಾಗೇ ಮಾಡೋಣ.

ಆತ: ಓಕೆ..ಬೈ ಹಾಗಾದ್ರೆ..

ಆಕೆ: ಬೈ...

Wednesday, January 20, 2010

ಎಚ್ಚರ- ಎದ್ದೇಳಿ



ಮನದಾಳದ
ಬೂದಿ
ನಿಟ್ಟುಸಿರಿಗೆ
ಊದಿ
ಮುಚ್ಚಿಟ್ಟ ಕೆಂಡವ
ಕೆಣಕದಿರು
ಕಿಡಿಸಾಕು
ಒಣಹುಲ್ಲ ಹಿಡಿದು
ಕಾದಿರುವ ಶತೃವಿಗೆ
ನಿನ್ನ ಮನ
ನನ್ನ ತನು
ಎಲ್ಲ ಜನ
ಕ್ಷಣಮಾತ್ರದಿ
ಮರೆವರು ನಿನ್ನೆ
ನನಗೆ ನೀನು ರಕ್ತನೀಡಿದ್ದು
ನನ್ನ ತಂಗಿ
ನಿನ್ನ ಮುಂಗೈಗೆ
ರಾಖಿ ಕಟ್ಟಿದ್ದು
ನನ್ನಲ್ಲಿ ಈದ್ ನ
ಶಾವಿಗೆ ಪಾಯಸ
ನಿನ್ನವರುಂಡದ್ದು
ಗಣೇಶನಿಗೆ ನಮಿಸಿ
ಕಡುಬ ನಾವೆಲ್ಲ ಮೆದ್ದದ್ದು
ಅಕ್ಕನ ಕಾಯಲು
ನನ್ನಕ್ಕ ಬುರಖಾ
ಹೊದಿಸಿದ್ದು, ನಿನ್ನಮ್ಮ
ನನ್ನ ತಾಯ ಹಣೆಗೆ
ವಿಭೂತಿ ಹಚ್ಚಿದ್ದು
ಅಬ್ಬೂ-ನಿನ್ನಪ್ಪ
ಜೊತೆಯಾಗಿ ನಮ್ಮನ್ನೆಲ್ಲಾ
ಕಾಪಾಡಿದ್ದು...!!!
ಯಾರದೋ ತೀಟೆ..
ಯಾರಾಗುತ್ತಿರುವುದು ಬೇಟೆ?
ಕುತ್ತಿಗೆಗೆ ಬಂದರೆ ಪ್ರಾಣ
ಮುಳುಗುವವ ಕೇಳುವುದುಂಟೇ?
ಹಗ್ಗ ಎಸೆದದ್ದು ಯಾರೆಂದು..?
ಇಟ್ಟಿಗೆ-ಸಿಮೆಂಟಿನ ರಚನೆ
ನಮಗಲ್ಲ ಹಿರಿದು
ಮನದಲ್ಲಿ - ಮನೆಯಲ್ಲಿ
ಸುಖ-ಸಹಬಾಳ್ವೆ ತೊರೆದು
ಅವರ ಉಳಿವಿಕೆಗೆ
ಪದವಿ, ಅಧಿಕಾರಗಳಿಕೆಗೆ
ತಮ್ಮವರ ಬಲಿನೀಡುವುದ
ನೋಡಿರುವಿರೇನು?
ನನ್ನ-ನಿಮ್ಮ ಏರಿಸಿ ಚಟ್ಟಕೆ
ತನ್ನವರ ಬಲಿಕೊಟ್ಟೆನೆನುವ
ಗೋಸುಂಬೆಗಳ ಮಾತಿಗೆ
ಮರುಳಾಗದಿರಿ, ನಮಗೆ -ನೀವು
ನಿಮಗೆ-ನಾವು, ನಮ್ಮೆಲ್ಲರಿಗೆ ಬೇಕು
ಜನ್ಮ-ಅನ್ನ ನೀಡಿದನಾಡು
ಸೊಪ್ಪು ಹಾಕದಿರಿ,
ತಿರುಗಿಯೂ ನೋಡದಿರಿ
ಇದು ಬಣ್ಣಬದಲಿಸುವವರ ಜಾಡು.

Monday, January 18, 2010

ಮೂರು ಮುತ್ತುಗಳು



ಮೂರು ಮುತ್ತುಗಳು

ಮೈಸೂರಿಗೆ ಬಿತ್ತು ಮತ್ತೊಂದು ಪೆಟ್ಟು

ಕೆ.ಎಸ್. ಅಶ್ವಥ್ ಹೋದರು ನಮ್ಮ ಬಿಟ್ಟು

ಚಾಮಯ್ಯ ಮೇಷ್ಟ್ರನ್ನು ಕಾಡಿತು ಶಿಷ್ಯನ ಅಗಲಿಕೆ

ಬೇಸರಿಸಿ ಇನ್ನೆಲ್ಲಿ ಶಿಷ್ಯ ಪಾಠವ ಕಲಿಯೋಕೆ?

ಕನ್ನಡ ಚಲನಚಿತ್ರ ಮತ್ತು ಕಲೆಗೆ ಅಪಾರ ಹಾನಿ

ಎರಡೇ ತಿಂಗಳಲ್ಲಿ ಮೂರು ಮುತ್ತು ಆದವು ಮೌನಿ

Wednesday, January 13, 2010

ಸಂಕ್ರಾಂತಿ - ತ್ರಿವರ್ಣಕ್ರಾಂತಿ


(ಶುಭಾಷಯಗಳು)
ಹಸಿರುಸಿರಾಡುವ ಹೊಲ ಗದ್ದೆ
ಉಸಿರಾಗಿದ್ದವು, ರೈತನೆಂದ ಗೆದ್ದೆ
ಕೊಳ್ಳುವುದು ಭಾರ, ಮಾರು ಅಗ್ಗ
ಸಾಲಹೊರೆ, ರೈತನ ಕೊರಳಿಗೆ ಹಗ್ಗ
ಬರಲಿ ಅನ್ನದಾತನ ಅನುಕೂಲದ ದಿನ
ತೀರಲಿ ಸಾಲ,ಹಸಿರಾಗಿ ಹೊಲ ಅನುದಿನ
ಬರಲಿ ಸಂಕ್ರಾಂತಿ ಮನೆಗೆ, ಗದ್ದೆಗೆ
ಊರಿಗೆ, ನಾಡಿಗೆ, ರೈತನಿಗೆ ಗದ್ದುಗೆ
ಆಗಲಿ ತ್ರಿವರ್ಣ ಕ್ರಾಂತಿ, ಹಸಿರು ಶಾಂತಿ
ಶ್ವೇತ ಹೈನಿಗೆ, ಮೀನಿಗೆ ನೀಲಕ್ರಾಂತಿ
ಬಾನಲಿ ಹಾರಾಡಿ ತ್ರಿವರ್ಣ ಪಟಪಟ
ತ್ಯಾಗ, ಶೌರ್ಯಕ್ಕಾಗಲಿ ಕೇಸರಿ ದಿಟ
ಸಮೃದ್ಧಿ, ಸಸ್ಯಸಿರಿ ಆಗಲಿ ಹಸಿರು
ಶಾಂತಿಗೆ ಬಿಳಿ, ಮುನ್ನಡೆಗೆ ಚಕ್ರವೇ ಉಸಿರು
ಸಂಭ್ರಮವಾಗಲಿ ಒಂದೆಡೆ ಅನ್ನದಾತನಿಗೆ
ತರಲಿ ಎಳ್ಳು-ಬೆಲ್ಲದ ಸಂಕ್ರಾಂತಿ
ಯೋಧನ ಶೌರ್ಯ, ಮೇಧಾವಿಗಳ ನಾಡಿಗೆ
ನಮಿಸಿ ವಿಶ್ವ ಆಗಲಿ ತ್ರಿವರ್ಣ ಕ್ರಾಂತಿ