Sunday, October 3, 2010

ಆಕಾಶ ಗಂಗೆಯಲ್ಲಿ ಮತ್ತೊಂದು ಭೂಮಿ!!

ಚಿತ್ರ ಕೃಪೆ:ಅಂತರ್ಜಾಲ

“ಗ್ಲೀಜಿ-581 G” ಎಂಬ ಭೂಮಿಯಂತಹ ಗ್ರಹ ಸೌರವ್ಯೂಹದಿಂದ ಸುಮಾರು 20 ಪ್ರಕಾಶವರ್ಷ (ಲೈಟಿಯರ್ಸ್) ದೂರದಲ್ಲಿ ಇದೆಯೆಂದು ದಿನಾಂಕ 29 ಸೆಪ್ಟಂಬರ್ ನ ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನಾಶನಲ್ ಸೈನ್ಸ್ ಫೌಂಡೇಶನ್ ನ ಎಡ್ವರ್ಡ್ ಸೀಡೆಲ್ ಪ್ರಕಾರ ಈ ಗ್ರಹ ಜೀವಿಗಳನ್ನು ಹೊಂದಿದೆ ಎನ್ನುವುದು ತಿಳಿದು ಬಂದರೆ ಮಾನವ ಕಂಡು ಹಿಡಿದ ವೈಜ್ಞಾನಿಕ ವಿಸ್ಮಯಗಳಲ್ಲಿ ಇದು ಪ್ರಮುಖವಾಗುತ್ತದೆ. ಈ ಗ್ರಹ ಭೂಮಿಗಿಂತ ಮೂರು ಅಥವಾ ನಾಲ್ಕು ಪಟ್ಟು ಹೆಚ್ಚು ತೂಕವಿದ್ದು ತನ್ನ ಕಕ್ಷೆಯ ಮೇಲೆ ತಿರುಗುವುದು ಬಹುಶಃ ಅನುಮಾನವಾಗಿದೆ ಹಾಗಾಗಿ ಈ ಗ್ರಹದ ಒಂದು ಭಾಗ ಯಾವಾಗಲೂ ಸೂರ್ಯ (ಅಲ್ಲಿನ ಸೂರ್ಯ..ನಮ್ಮ ಸನ್ ಅಲ್ಲ..ಹಹಹ!!!) ನ ಕಡೆ ಇದ್ದು ಬೆಳಕಿರುತ್ತೆ ಮತ್ತೊಂದು ಪಾರ್ಶ್ವ ಕತ್ತಲಲ್ಲಿ...!! ಇದರಿಂದ ಸೂರ್ಯನೆಡೆಯ ಭಾಗದ ಶಾಖ ಸುಮಾರು 160 ಡಿಗ್ರಿ ಸೆಲ್ಸಿಯಸ್ ಇದ್ದು ಕತ್ತಲ ಭಾಗದಲ್ಲಿ -12 ರಿಂದ 21ಡಿ.ಸೆ. ಇರಬಹುದೆಂದು ಅಂದಾಜಿಸಲಾಗಿದೆ. ಗುರುತ್ವಾಕರ್ಷಣ ಶಕ್ತಿಯಿರುವ ಗ್ರಹವಾಗಿದ್ದು ಇಲ್ಲಿ ಘನಭಾಗವಿದ್ದು ಭೂಮಿಯಂತಿರಬಹುದು ಮತ್ತು ನೀರೂ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದು ಅಂಶ ಗೊತ್ತೆ...ಈ ಭೂಮಿ ತನ್ನ ಸೂರ್ಯನಿಂದ ಬಹು ಹತ್ತಿರವಿದ್ದು ಅದರ ಸುತ್ತ ಪ್ರದಕ್ಷಿಣೆಗೆ ಕೇವಲ 37 ದಿನ ಬೇಕಾಗುತ್ತೆ..!!! ಅಂದರೆ ಆ ಭೂಮಿಯ ಒಂದು ವರ್ಷ ನಮ್ಮ 37 ದಿನಕ್ಕೆ ಸಮ....!!!!



ಈ ಗಾಗಲೇ ನಮ್ಮ ರಾಜ್ಯದ ಹಲವಾರು ಸಹೋದರರು ಅಪ್ಪ-ಮಕ್ಕಳು ತಮ್ಮ ಅಸ್ಟ್ರೋನಾಟ್ ಸೂಟುಗಳನ್ನ ರೆಡಿಮಾಡಿಸ್ಕೋತಾ ಇದ್ದಾರಂತೆ...ಯಾವುದೇ ಭೂ ಕಾಯಿದೆ ಇಲ್ಲ...ಗಣಿ ಕಾಯಿದೆ ಇಲ್ಲ ಎಲ್ಲಾ ಫ್ರೆಶ್ ಫ್ರೆಶ್...ಯಾರಿಗುಂಟು..ಯಾರಿಗಿಲ್ಲ.....ಜೈ-ಗ್ಲೀಜಿ,,,,,

Friday, October 1, 2010

ನನ್ನದೊಂದು ವಿನಂತಿ


ಜಗದ ಜನಕೆ ತೋರಿತೊಂದು ಭಾರತ

ಇತಿಹಾಸವೀಗ ಕನಸಾಗಿತ್ತು ಅವಿರತ

ನಿಸರ್ಗ-ಸಗ್ಗ ಜನಮನವೆನಿಸಿ ಬಹುಹಿತ

ವಿಶ್ವ ಸಕಲಕೆ ಮಾದರಿ ಅಂದು ಭಾರತ



ದಂಡು ಹೊರಟವಂದು ಕಂಡುಕೊಳ್ಳಲು ಮಾರ್ಗ

ಹಿಂಡು ಹಿಂಡಾಯ್ತು ಬಂಡುಕೋರರಿಗೂ ಸ್ವರ್ಗ

ಸಾಗರದಾಟಿ ಬಂದು ಮಾರ್ಗ ಹುಡುಕಲು ಹುಮ್ಮಸ್ಸು

ಅಲೆಯಮೇಲಲೆದು ದಾರಿತಪ್ಪಿದನಂದು ಕೊಲಂಬಸ್ಸು



ಸಿಂಧೂ ಕಣಿವೆಯಲ್ಲಿ ಮೆರೆದಿತ್ತು ನಾಗರೀಕತೆ

ಗಂಗಾತೀರ, ಗೋದಾವರಿ ಕೃಷ್ಣೆ ಕಾವೇರಿ ಗೀತೆ

ಎಲ್ಲೆಲ್ಲೂ ನಾಡರಸರು ತುಂಬಿತ್ತೆಲ್ಲೆಡೆ ಮಂದಹಾಸ

ಜನಮನ ಜೀವನದಲ್ಲಿತ್ತು ಕಂಡರಿಯದ ಸಂತಸ



ಹಿಮಾಲ ಮೆಟ್ಟಿಬಂದ ದಾಳಿಕೋರರು ಹಲವರು

ಬಂದು ನೆಲಸಿ ನಾಡಲೊಂದಾದ ಕೆಲ ಅರಸರು

ಬಂದನಾಗ ದಾರಿತೋರಿ ದಕ್ಕನಿಗೆ ವಾಸ್ಕೋಡಗಾಮ

ವೈಮನಸ್ಯ ಬೀಜ ಬಿತ್ತಿ ನಡೆಸಲು ಮಾರಣಹೋಮ


ನಮ್ಮ-ನಮ್ಮಲ್ಲೇ ಕಿತ್ತಾಟ ತಕ್ಕಡಿ ಹಿಡಿದವಗೆ ಜುಟ್ಟು

ಎತ್ತಿ ಕಟ್ಟಿದವ, ಆಮಿಶಗೊಂಡು ಕೊಟ್ಟೆವವಗೆ ಜುಟ್ಟು

ಐನೂರು ವರ್ಷ ಸತತ ಕೊಳ್ಳೆ, ಬರಿದಾಯ್ತು ತುಂಬು ಕಣಜ

ಸ್ವಾತಂತ್ರ್ಯಕೊಟ್ಟರು ಕಂಡು ಎಲ್ಲೆಡೆ ತಹತಹಿಸುವ ಮನುಜ


ಈಗ ಹಿಡಿದಿಹರು ನಮ್ಮವರೇ ನಮ್ಮ ಜುಟ್ಟು

ನಾಡ ಸಂಪದ ಮಾಡಿ ಸ್ವಂತ ಉಳಿಸಿ ಹೊಟ್ಟು

ಪರಕೀಯರಿಗಿಂತ ಕೀಳು ತಂದಿಡುವರು ನಮ್ಮಲ್ಲೇ

ಮತ-ಜಾತಿ ಗಲಭೆ ಅವರ ಬೇಳೆ ಬೇಯುವುದೂ ಇಲ್ಲೇ



ನ್ಯಾಯಾಲಯ ತೂಗಿಹುದು ಎಲ್ಲರ ಬೇಳೆಯ ಈ ಬಗೆ

ಕೊಟ್ಟು ಬೇಳೆ ಒಬ್ಬಗೆ ಬೇಯಿಸಲು ಇಂಧನ ಮತ್ತೊಬ್ಬಗೆ

ಯುವಜನ-ಜನ ಮೆರೆದಿಹರು ಅಪೂರ್ವ ವಿವೇಚನೆ

ಸೊಪ್ಪು ಹಾಕದೆ ಮನಮುರಿವರ ಮತ್ತೊಂದು ಅಲೋಚನೆ



ಆಶಯ ನನ್ನದು, ಜಗದಲಿ ಮೆರೆವ ಶಕ್ತಿಯ ದೇಶ

ವಿವೇಚನೆ ಮತ್ತೂ ಪ್ರಖರಗೊಳ್ಳಲಿ ಬೆಳಗುಪ್ರಕಾಶ

ಆಗಲೊಂದೇ ಧ್ಯೇಯ ದೇಶದ ಬಹುಮುಖ ಪ್ರಗತಿ

ನಡೆಯಲೊಂದೇ ನ್ಯಾಯ, ಎಲ್ಲರ ಸುಖದ ಭಾರತಿ

Thursday, September 23, 2010

ಅಬ್ಬಬ್ಬಾ ಖಾರ.!!!...ಕಣ್ಣು ಮೂಗಲ್ಲಿ ನೀರು ಸುರಿಸೊಷ್ಟು...!!!!


ಚಿತ್ರ ಕೃಪೆ: 4.bp.blogspot.com

.








.ಸ್.ಸ್....ಅಸ್ಸೋ....ಅಬ್ಬಬ್ಬಾ...ಖಾರ..ಖಾರ.....!!!

ಯಾವುದಾದ್ರೂ ತಿಂಡಿ ಖಾರವಾಗಿದ್ರೆ ಅದು ಸಹಿಸೋಕೂ ಆಗದಷ್ಟು ಅಂದ್ರೆ.....ಮೇಲಿನ ಉದ್ಗಾರ ನಿಮಗೆ ಹೊಸದೇನಲ್ಲ...ನೀವೂ ಅನುಭವಿಸಿರ್ತೀರಾ, ಇಲ್ಲ ಅಪ್ಪಿ ತಪ್ಪಿ ಉಪ್ಪಿಟಿನಲ್ಲೋ ಮತ್ಯಾವುದೋ ತಿಂಡಿಯಲ್ಲೋ ಹಸಿರು ಬಟಾಣಿ ಅಥವಾ ಹಸಿರು ಹುರುಳಿಕಾಯಿ ಅಂತ ಅಂದ್ಕೊಂಡು ಹಚ್ಚಿದ ಮೆಣಸಿನಕಾಯಿಯನ ತಿಂದು ಬಾಯ್ಬಾಬಿ ಬಿಟ್ಟು ನೀರು ಕುಡಿದಿರ್ತೀರ...ಕಣ್ಣೊರೆಸಿರ್ತೀರ...ಮೂಗಲ್ಲಿನ ನೀರು ಬೀಳ್ಸಿರ್ತೀರ...ಅಲ್ವಾ...?!!

ಹೌದು.., ಖಾರ ಅಂದ್ರೆ ತಕ್ಷಣ ಕಣ್ಣಿನ ಮುಂದೆ ನಿಲ್ಲೋದು ಮೆಣಸಿನಕಾಯಿಯ ಚಿತ್ರ.

ಖಾರ...?? ಏನಿದು...?? ಇಂಗ್ಲೀಷರಿಗೆ ಇದನ್ನ ವರ್ಣಿಸೋಕೆ ಆಗದೆ ’ಹಾಟ್’ ಅಂತಾರೆ..!!

ಅಯ್ಯೋ..ಮೂದೇವಿ ಬಿಸಿ ಎಂತದ್ದು..??!! ಖಾರ ಅನ್ನೋಕಾಗಲ್ವಾ ಅಂತ ಊರಿಗೆ ಬಂದಿದ್ದ ನನ್ನ ವಿಲಾಯಿತಿ ಸ್ನೇಹಿತ ಚೋಟು ಮೆಣಸಿನ ಕಾಯಿ ಚೂರನ್ನು ತಪ್ಪಿ ತಿಂದು ಕೆಂಪು ಕೆಂಪು..ಆಗಿ ಬಾಯಿ..ಬಾಯಿ...ಆಂ...ಎನ್ನುತ್ತಾ ಹಾಟ್ ಹಾಟ್ ಎಂದಾಗ ಅಜ್ಜಿ ಎಂತ ಹೇಳುತ್ತೆ ಅದು ? ಎಂದಿದ್ದಕ್ಕೆ ಬಿಸಿ..ಬಿಸಿ ಅಂತ ಯಥಾವತ್ ತರ್ಜುಮೆ ಮಾಡಿದ್ದೆ ...ಆಗ ಹೇಳಿದ್ದು ಅಜ್ಜಿ...

ಹಾಂ ವಿಷಯಕ್ಕೆ ಬರೋಣ...,

ಖಾರ..ಎಲ್ಲಿಂದ ಬರುತ್ತೆ?

ಖಾರ, ಎಲ್ಲರೂ ತಿಳಿದ ಹಾಗೆ ಒಂದು ಸ್ವಾದವಲ್ಲ...ಇದನ್ನು ಟೇಸ್ಟ್ ಎನ್ನಲಾಗದು ...ಕಪ್ಪು ಹೇಗೆ ಒಂದು ವರ್ಣ ಅಲ್ಲವೋ ಹಾಗೆ. ಖಾರದಾಯಕ ಗುಣ “ಕ್ಯಾಪ್ಸಾಸಿನ್” ಎಂಬ ರಾಸಾಯನಿಕ ತತ್ವದಿಂದ ಬರುತ್ತದೆ. ಚರ್ಮ ಮತ್ತು ವಿಶೇಷತಃ ನಾಲಿಗೆಯ ಮೇಲಿನ ’ಶಾಖ’ಕ್ಕೆ ಸ್ಪಂದಿಸುವ ಕೋಶಿಕೆಗಳನ್ನು ಕೆಣಕುವ ಗುಣ ಈ ರಾಸಾಯನಿಕ ಅಂಶಕ್ಕೆ ಇರುತ್ತದೆ ಇದು ಅಂತಹ ಕೋಶಿಕೆ ಮತ್ತು ನರತಂತುಗಳ ಮೂಲಕ ಮಿದುಳಿಗೆ ತಪ್ಪು-ಕಲ್ಪಿತ ಸಂದೇಶವನ್ನು ರವಾನೆ ಮಾಡುವುದರಿಂದ “ಖಾರ” ದ ಸ್ವಾದಾನುಭವವಾಗುತ್ತದೆ. ಇದು ಬೆವರುವಿಕೆ (ಶಾಖದ ಪರಿಣಾಮ)ಯನ್ನು ಪ್ರಚೋದಿಸುತ್ತದೆ ಈ ಕ್ರಿಯೆಗೆ ’ಎಂಡಾರ್ಫಿನ್’ ಎಂಬ ಸ್ರಾವಕ ಕಾರಣವಾಗಿರುತ್ತದೆ. ಹಾಗಾಗಿ ಖಾರ ಉರಿಯನ್ನು ಉಂಟುಮಾಡುವುದಲ್ಲದೇ ಎಂಡಾರ್ಫಿನ್ ಉತ್ಪತ್ತಿ ಮತ್ತು ಬೆವರುವಿಕೆಗೆ ದಾರಿ ಮಾಡುತ್ತದೆ.

ಹಿಂದಿನ ದಿನಗಳಲ್ಲಿ ಖಾರತ್ವ ಅಳೆಯೋಕೆ ಆಸ್ವಾದಕರನ್ನು ಅಥವಾ ಸ್ವಾದ ವಿಶೇಷಜ್ಞರನ್ನ ನೇಮಿಸಿ ಅವರು ಸ್ವಾದ ನೋಡಿ ಎಷ್ಟು ಖಾರ ಎನ್ನುವುದನ್ನು ಅಳತೆಪಟ್ಟಿಯ ಆಧಾರದಲ್ಲಿ, ಅಂದರೆ ಹೋಲಿಕೆ ಆಧಾರ, ಖಾರವಿಲ್ಲ, ಕಡಿಮೆ ಖಾರ, ಸ್ವಲ್ಪ ಖಾರ, ಮಧ್ಯಮ ಖಾರ, ಹೆಚ್ಚು ಖಾರ ಅತಿ ಹೆಚ್ಚು ಖಾರ, ಅಸಹ್ಯ ಖಾರ ಹೀಗೆ ವರ್ಗೀಕರಣದ ಮೂಲಕ ಅಳತೆಪಟ್ಟಿ ತಯಾರಿಸಲಾಗುತ್ತಿತ್ತು. ಕ್ರಿ.ಶ.1912 ರಲ್ಲಿ ವಿಲ್ಬರ್ ಸ್ಕೋವಿಲೆ ಎಂಬ ಅಮೆರಿಕಾ ತಜ್ಞ ಖಾರದಾಯಕ ಗುಣ ’ಕ್ಯಾಪ್ಸಾಸಿನಾಯ್ಡ್ಸ’ ಎಂಬ ಅಂಶ/ಘಟಕದ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆಂದು ಸಾಧಿಸಿದ. ಆ ನಂತರ ಯಾವುದೇ ಸಸ್ಯಜನ್ಯ ಅಥವಾ ’ಕ್ಯಾಪ್ಸಾಸಿನಾಯ್ಡ್ಸ’ ಅಂಶವುಳ್ಳ ತಿಂಡಿ, ಆಹಾರ ಪದಾರ್ಥ, ತರಕಾರಿ ಇತ್ಯಾದಿಗಳ ಖಾರತ್ವವನ್ನು ’ಕ್ಯಾಪ್ಸಾಸಿನಾಯ್ಡ್ಸ’ ಪ್ರಮಾಣದ ಅಧಾರದ ಮೇಲೆ ಸ್ಕೋವಿಲೆ ಖಾರಾಂಶ (ಸ್ಕೋವಿಲೆ ಹೀಟ್ ಯೂನಿಟ್ಸ್, SHU) ಗಳು ಎಂದು ಹೇಳಲಾಗುತ್ತದೆ.

ಇನ್ನು ಮೆಣಸಿನಕಾಯಿ, ಖಾರ ಅಂದ್ರೆ ಮೆಣಸಿನಕಾಯಿಯೇ ಅಲ್ಲವೇ...? ಇದರಲ್ಲಿ ಹಲವಾರು ವಿಧಗಳು, ಬಣ್ಣಗಳು, ರೂಪಗಳು,,,, ಹಸಿಕಾಯಿ, ಒಣಕಾಯಿ, ಬೀಜ, ಇತ್ಯಾದಿ.

ಪ್ರಪಂಚದಲ್ಲಿ ಅತಿ ಖಾರವಾದ ಮೆನಸಿನಕಾಯಿ ಭಾರತದಲ್ಲಿ ಸಿಗುತ್ತದೆಂದರೆ ನಂಬುತ್ತೀರಲ್ಲವೇ...ಆದ್ರೆ ಅದು ಬಿಸಿಲ ತಾಪದ ರಾಜಸ್ಥಾನದಲ್ಲಿಯೋ ಅಥವಾ ಖಾರ ತಿನ್ನೊದಕ್ಕೇ ಹೆಸರಾದ ಕರ್ನಾಟಕದ ಬಳ್ಳಾರಿ, ಬ್ಯಾಡಗಿಯಿಂದಲೋ ದೊರೆಯುವಂಥದಲ್ಲ....ಹಸಿರುಸಿರಾಡುವ ಪೂರ್ವೋತ್ತರ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ ಗಳಲ್ಲಿ ದೊರೆಯುತ್ತವೆ. ಇವುಗಳನ್ನು “ನಾಗಾ ಜೋಲಾಕಿಯ” ಮೆಣಸಿನ ಕಾಯಿ ಎನ್ನುತ್ತಾರೆ. “ಗಿನ್ನೆಸ್ ದಾಖಲೆ ಪುಸ್ತಕ” ದಲ್ಲಿ ಈ ಮೆಣಸಿನಕಾಯನ್ನು ವಿಶ್ವದಲ್ಲೇ ಅತಿ ಹೆಚ್ಚು ಖಾರದ ಮೆಣಸಿನಕಾಯಿ ಎಂದು ಮಾನ್ಯತೆ ನೀಡಲಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಮಾರುವ ’ಇಮಾ’ ಗಳು ಹಿಕ್ಕಳದ ಸಹಾಯದಿಂದ ಅವನ್ನು ಹಿಡಿದು ತೂಕಕ್ಕೆ ಹಾಕುತ್ತಾರೆ. ಅತಿ ಖಾರವನ್ನು ಇಷ್ಟಪಡದ ಮಂದಿ “ನಾಗಾ ಜೋಲಾಕಿಯ” ಮೆಣಸಿನ ಕಾಯಿತೊಟ್ಟಿಗೆ ದಾರಕಟ್ಟಿ ಒಲೆಯ ಮೇಲ್ಭಾಗದಲ್ಲಿ ತೂಗುಬಿಟ್ಟು ಸಾಂಬಾರೊಳಕ್ಕೆ ಕೇವಲ ಮುಳುಗಿಸಿ ಎತ್ತುವುದರಿಂದ ಸಾಕಷ್ಟು ಖಾರ ಸಾಂಬಾರಿಗೆ ಹಾಕಿದಂತಾಗುತ್ತದಂತೆ !!!

ಈಗ ನಮ್ಮ “ನಾಗಾ ಜೋಲಾಕಿಯಾ” ದ ಖಾರತ್ವದ ಸ್ಕೋರು ಎಷ್ಟು ನೋಡೋಣವೇ...???

ಕ್ಯಾಪ್ಸಾಸಿನ್ ಶುದ್ಧ ಪುಡಿ                                            15-16 ದಶ ಲಕ್ಷ ಎಸ್.ಎಚ್.ಯು.

ನಾಗಾ ಬಿಹು ಜೊಲೊಕಿಯಾ                                       0.85 – 1.07 ದಶ ಲಕ್ಷ ಎಸ್.ಎಚ್.ಯು.

ಗುಂಟೂರು, ಜಮೈಕನ್ ಹಾಟ್ ಮೆಣಸಿನಕಾಯಿ              0.10 – 0.35 ದಶ ಲಕ್ಷ ಎಸ್.ಎಚ್.ಯು

ಭಾರತದ ಮತ್ತು ಥಾಯ್ ಮೆಣಸಿನಕಾಯಿ                      0.05 – 0.10 ದಶ ಲಕ್ಷ ಎಸ್.ಎಚ್.ಯು

ಪೆಮಿಂಟೋ ಅಥವಾ ಚೆರ್ರಿ ಮೆಣಸಿನಕಾಯಿ                           100 – 500 ಎಸ್.ಎಚ್.ಯು.

ಕ್ಯಾಪ್ಸಿಕಂ ದಪ್ಪ (ಬೆಲ್) ಮೆಣಸಿನಕಾಯಿ                                  0  ಎಸ್.ಎಚ್.ಯು

Sunday, September 19, 2010

ಮಗು-ಕೊಡು ನಿನ್ನಗು ನಮಗೂ













(ಚಿತ್ರ ಕೃಪೆ : ಪ್ರಕಾಶ -ಇಟ್ಟಿಗೆ ಸಿಮೆಂಟು  

ಕೇವಲ ಒಮ್ಮೆ ನೀ ನಗು

ನೀನಾಗಿಯಲ್ಲ, ಆಗಿ ಮಗು

ತೊಡೆ ಗೆರೆ-ಮುಖದ ಬಿಗು

ಮನತುಂಬಿ ನೀನೊಮ್ಮೆ ನಗು.

ಮತ್ತೆ ಬಂದರೇನು? ಎರಗಿ ಆಪದ

ಗುನುಗುನಿಸು ನಗುವಿನಾಪದ

ಕಣ್ಣಲಿ ಮಿಂಚು ಸುಳಿವಿಗಾಸ್ಪದ

ನಕ್ಕರೆ ಅದೇ ನಿಜ ಸಂಪದ.


ನೀನಕ್ಕರೆ ಮಗು ನಗುವುದು
ಮನ ಅರಳಿ ಕೊಡುವುದಾಮುದು

ಸಂಕಟ ನೂರು ಬರಬಹುದು

ಮಾಡಿಕೋ ನಗು ಆಮದು.


ನಕ್ಕರೆಂದರು ಅದೇ ಸ್ವರ್ಗ
ಈ ನೀಮಕೆ ಬದ್ಧರೆಲ್ಲ ವರ್ಗ

ಮುದಗೊಂಡ ಮನದ ಮಾರ್ಗ

ಕೊಳ್ಳಬೇಕಿಲ್ಲ ದತ್ತ ನಿಸರ್ಗ.

Thursday, September 16, 2010

ಜಲನಯನ - ಗುಬ್ಬಿ ಎಂಜಲಿಗೆ














(ಚಿತ್ರ ನಮ್ಮೊಳಗೊಬ್ಬ ಬಾಲು ಕೃಪೆ)
ನಯನದಾಳಕ್ಕೆ ನಲಿವಿತ್ತ
ಮನದಾಳಕ್ಕೆ ಮುದವಿತ್ತ
ಬ್ಲಾಗ್-ಬ್ಲಾಗೇತರ ಮಿತ್ರರಿಗೆ ಸಲಾಂ.
ತುಂತುರಾಗಿ ಹನಿಸಿ
ಎಲ್ಲವನೂ ನಿರ್ವಹಿಸಿ
ಕನಸ ನನಸಾಗಿಸಿದ ಶಿವುಗೆ ಸಲಾಂ.
ಜೊತೆಬಂದು ಜೊತೆಯಾದ
ಹಿತಮಾತು ಸಹಕಾರ ಎಲ್ಲದಕೂ
ಪರ್ಯಾಯವಾದ
ಸುಗುಣ, ಮಹೇಶ್, ಪ್ರವೀಣ್
ನಿಮ್ಮೆಲ್ಲರಿಗೆ ಆತ್ಮೀಯ ಸಲಾಂ.
ಎಲ್ಲರ ನಗಿಸು ಪ್ರಕಾಶ
ಯುವಸ್ನೇಹಿ ಸಾವಕಾಶ
ಅನಿರಾಘುಶಿಪ್ರನವೀನ್ನಾಗ್ ಗೆ ಸಲಾಂ.
ದೂರದಿಂದ ಬಂದು ಪ್ರೋತ್ಸಾಹಿಸಿದ
ಉದಯ್, ಚೇತು, ಟಿ.ಡಿ.ಕೆ, ಸೀತಾರಾಂ.
ಎಳವತ್ತಿ, ಬಾಲು, ದಿನಕರ್ ಎಲ್ಲರಿಗೂ ಸಲಾಂ
ಪಕ್ಕು, ಶಶಿ, ಸುಮನ, ಶ್ಯಾಮಲ, ನಿಶ,
ಎಸ್ಸೆಸ್ಕೆ, ದಿವ್ಯಾ, ವಿಆರ್ಬಿ, ದಿಲೀಪ್ರಗತಿ
ಗುರು, ಪರಾಂಜಪೆ, ಉಮೇಶ್, ಜಯಕ್ಕ, ಸುಧಿ,
ಸುಘೋಶ್, ಗುಬ್ಬಚ್ಚಿ, ಅಶೋಕ್ ಮತ್ತೆಲ್ಲರ
ಮನದಾಳದ ಪ್ರೋತ್ಸಾಹಕೆ ಸಲಾಂ
ಎಲ್ಲರ ತುಂಬು ಪ್ರೋತ್ಸಾಹಕೆ
ಜಲನಯನದ ಜೊತೆ
ಗುಬ್ಬಿ ಎಂಜಲ ಕಥೆ..
ಮತ್ತೊಮ್ಮೆ ಮಗದೊಮ್ಮೆ
ಸಲಾಂ ...ಸಲಾಂ.

Friday, August 13, 2010

ಜಲನಯನ – ಸಾಫ್ಟಿಂದ ಹಾರ್ಡಿಗೆ,


ಮೀನು - ಜಲಜಾಕ್ಷಿ, ಮೀನಾಕ್ಷಿ ಚಂಚಲಾಕ್ಷಿ ಎಲ್ಲಾ...ಅದರ ಜೊತೆಗೆ ಪ್ರವೃತ್ತಿ ಜೊತೆ ವೃತ್ತಿಯ ಬೆಸುಗೆ..ಇದಕೆ ಸೂಕ್ತ ವೆನಿಸಿದ ಹೆಸರೇ – ಜಲನಯನ. ಮೊದಲಿಗೆ ಬ್ಲಾಗಿನಲ್ಲಿ ಹಲವರು “ಜಲಾನಯನ” ಎಂದೇ ಕಾಮೆಂತಿಸಿದರು...ಕೆಲವರು "ಜಲನಯನ” ಮೇಡಂ ಎಂದರು..ಒಂದು ರೀತಿ ಲಿಂಗ ಪರಿವರ್ತನೆಯನ್ನೂ ಮಾಡಿದರು ಎಂದರೂ ತಪ್ಪಲ್ಲ...!!!



ಕವನ – ನೀಳ್ಗವನ, ಇಡಿಗವನ, ಮಿಡಿಗವನ, ಹನಿಗವನ, ಚುಟುಕ, ನ್ಯಾನೋ ಹೀಗೆ..ಏನೇನೊ ತರ್ಲೆ ಸಹಾ ಮಾಡಿದ್ದುಂಟು ಈ –ಜಲನಯನ. ಅದನ್ನು ಸಾಫ್ಟಲ್ಲಿ ನೋಡಿ..ಬೆನ್ನು ತಟ್ಟಿ ಈಜು ಇನ್ನೂ ದೂರ ದೂರಕೆ ಬೆಳೆಯಲಿ ನಿನ್ನ ಪಯಣ ಎಂದಿರಿ, ಬೆನ್ತಟ್ಟಿದಿರಿ...ಪ್ರೋತ್ಸಾಹಿಸಿದಿರಿ...ಅನಿಸಿದ್ದೂ ಉಂಟು “ಓಹ್ ಕಂಡಿಲ್ಲ ನೋಡಿಲ್ಲ ..ಏನಿದು ನಂಟು..?”



ನನ್ನ ಬ್ಲಾಗ್ ಲೋಕಕ್ಕೆ ವಸ್ತುತಃ ಕೊಂಡು ಬಂದ ಶ್ರೇಯ ಸುಗುಣಾ ಮಹೇಶ್ ಗೆ ಸೇರಬೇಕು.. ಇದು ಒಬ್ಬರೇ..ಇಬ್ಬರೇ..ಇಬ್ಬರಾದ ಒಬ್ಬರೇ..? ಒಬ್ಬರಾದ ಇಬ್ಬರೇ...ಓಫ್ ..ಏನಿದು ಕಂಫ್ಯೂಶನ್?!! ಎನ್ನಬೇಡಿ..ನನಗೂ ಹಾಗೇ ಅನಿಸಿತ್ತು ಆಗ. ಬ್ಲಾಗಲ್ಲಿ ಬ್ಲಾಗಿಸುತ್ತಾ ಸಾಗಿದ ಜಲನಯನಕ್ಕೆ ಜೊತೆಯಾದದ್ದು “ಭಾವಮಂಥನ” ಮತ್ತು “Science & share” ಬ್ಲಾಗ್ ಸೋದರಿಯರು. ಬ್ಲಾಗ್ ಪೋಸ್ಟ್ ಗಳ ಶತಕ ಬಾರಿಸಿದ ’ಜಲನಯನ’ ವನ್ನು ಸಾಫ್ಟ್ ನಿಂದ ಹಾರ್ಡ್ ಗೆ ತರುವ ಯೋಚನೆ ನನಗೆ ಬರಲು ಕಾರಣ ನಮ್ಮ ಮಿತ್ರರಾದ ಪ್ರಕಾಶ್ ಮತ್ತು ಶಿವು. ಅವರ ಪುಸ್ತಕಗಳ ಬಿಡುಗಡೆಯಿಂದ ಪ್ರೇರಿತನಾಗಿ...ಅವರ ಮಟ್ಟದ ಲೇಖಕ-ಬ್ಲಾಗಿ ಅಲ್ಲದಿದ್ದರೂ ಅವರ ಪ್ರೋತ್ಸಾಹದಿಂದ ಜಲನಯನದ ಕವನಗಳ ಸಂಕಲನವನ್ನು ಮುದ್ರಿತ ರೂಪದಲ್ಲಿ ತರಬೇಕೆಂಬ ಹಂಬಲ ಬಲಿಯಿತು. ಪರಿಣಾಮ....ಇದೇ ಆಗಸ್ಟ್ ೨೨ ರಂದು ಕನ್ನಡ ಭವನ (ರವೀಂದ್ರ ಕಲಾಕ್ಷೇತ್ರದ ಬಳಿ) ದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಜಲನಯನ” ಹೆಸರಾಂತ ಸಾಹಿತಿ ಚುಟುಕ ಸಾಮ್ರಾಟ್, ಕೃಷಿ ತಜ್ಞ (ಬೆಂಗಳೂರು ಕೃ.ವಿ.ವಿ. ಯಲ್ಲಿ ೩-೪ ವರ್ಷ ನನಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದವರು) ಎಚ್.ಡುಂಡಿರಾಜ್ ರವರ ಅಮೃತಹಸ್ತದಿಂದ ಬಿಡುಗಡೆಗೊಳ್ಳುತ್ತಿದೆ. ಈ ಮೂಲಕ ನಾನು ಶ್ರೀಎಚ್.ಡುಂಡಿಯವರಿಗೆ ನನ್ನ ಆಭಾರಗಳನ್ನು ವ್ಯಕ್ತಪಡಿಸಿ.. ತಮ್ಮೆಲ್ಲರನ್ನೂ ಈ ಸಮಾರಂಭಕ್ಕೆ ಆಮಂತ್ರಿಸುತ್ತೇನೆ. ನನ್ನ ಜೊತೆಗೆ ನಮ್ಮೆಲ್ಲರ ಮಿತ್ರ ಕೆ.ಶಿವು ಸಹಾ ತಮ್ಮ “ಗುಬ್ಬಿ-ಎಂಜಲು” ಪುಸ್ತಕವನ್ನೂ ಬಿಡುಗಡೆ ಮಾಡುತ್ತಿದ್ದಾರೆ..ಹಾಗಾಗಿ ಜೋಡಿ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಹಾಜರಿ ಮತ್ತು ಪ್ರೋತ್ಸಾಹದ ಬೆಂಬಲ ಕೋರುತ್ತೇವೆ.



ಜಲನಯನಕ್ಕೆ ನಯನ ಮನೋಹರ ಮುಖಪುಟದ ವಿನ್ಯಾಸ ಮಾಡಿಕೊಟ್ಟ ಶ್ರೀಮತಿ ಸುಗುಣಾ ಮಹೇಶ್ (ಕುವೈತ್ ನ ನಮ್ಮ ಕನ್ನಡ ಕೂಟದ ಸಹ ಸದಸ್ಯರು) ರವರಿಗೆ ನನ್ನ ಕೃತಜ್ಞತೆಗಳು. ನಮ್ಮ ಹಸ್ತ ಪ್ರತಿಯನ್ನು ಹಸನುಗೊಳಿಸಿ ಭಾಷೆಯನ್ನು ಸರಿಪಡಿಸಿ..ಕರಡು ಮತ್ತು ಮದ್ರಣ-ಸಿದ್ಧಗೊಳಿಸಿದ್ದೇ ಅಲ್ಲದೇ ಆಕರ್ಷಕ ಬೆನ್ನುಡಿಯನ್ನೂ ಬರೆದ ನಮ್ಮೆಲ್ಲರ ಬ್ಲಾಗ್ ಮಿತ್ರ ಬೆಂಗಳೂರಿನ ಡಾ. ಬಿ.ಆರ್.ಸತ್ಯನಾರಾಣರವರ ಸಹಾಯ ಸಹಕಾರಗಳು ಸ್ತುತ್ಯಾರ್ಹ. ಈ ಪುಸ್ತಕಗಳು ಕೆ.ಶಿವುರವರ “ತುಂತುರು” ಪ್ರಕಾಶನದಡಿ ಪ್ರಕಾಶಿತಗೊಳ್ಳುತ್ತಿರುವಿದು ಇನ್ನೊಂದು ವಿಶೇಷ. ಮುಂದೆ ತಮ್ಮ ಕೃತಿಗಳನ್ನು ಮುದ್ರಿಸಿ ಪ್ರಕಾಶಿಸಲು ಇಚ್ಛಿಸುವ ನಮ್ಮ ಮಿತ್ರರಿಗೆ ಶಿವುರವರ ತುಂತುರು ಪ್ರಕಾಶನ ಸಹಾಯಕವಾಗುವುದರಲ್ಲಿ ಸಂಶಯವಿಲ್ಲ.

ವಿಶೇಷ ಸೂಚನೆ: ನಮ್ಮ ಕಾರ್ಯಕ್ರಮದ ನಂತರ ನಾವು ಕೈಗೊಳ್ಳಬೇಕೆಂದುಕೊಂಡಿದ್ದ ಬ್ಲಾಗಿಗರ ಸಮಾವೇಶದ ಬಗ್ಗೆ ಹಿರಿಯ ಬ್ಲಾಗಿಗರ ಜೊತೆ ನಾವೆಲ್ಲ ಸೇರಿ ಒಂದು ವಿಚಾರ ಮಂಥನದ ಕಾರ್ಯಕ್ರಮದ ಯೋಚನೆಯನ್ನೂ ನಮ್ಮ ಹಿರಿಯ ಬ್ಲಾಗಿಗಳು ಹೊಂದಿದ್ದಾರೆ. ಇದನ್ನು ಗಮನದಲ್ಲಿಟ್ಟು ಹೆಚ್ಚು ಹೆಚ್ಚು ಬ್ಲಾಗಿಗರು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಕೋರಿಕೆ.


Monday, August 2, 2010

ನನ್ನವಳು ನನಗೆ ತಲ್ಲಾಖ್ ಎನ್ನೋ ಸ್ಥಿತಿಗೆ ನನ್ನನ್ನು ತಂದಿದ್ದು ಯಾರು?

"ಟ್ರಿನ್..ಟ್ರಿನ್...ಟ್ರಿನ್..ಟ್ರಿನ್..ಟ್ರಿನ್..ಟ್ರಿನ್.."



ಯಾವ್ದೋ ಲೋಕಲ್ ಫೋನು...ಮಹೇಶ್, ಇಲ್ಲ ಸುಗುಣಾವ್ರೇ ಸಾಮಾನ್ಯವಾಗಿ ಕಾಲ್ ಮಾಡೋದು...ಆದ್ರೆ ಅವ್ರು ನನ್ನ ಲ್ಯಾಂಡ್ ಲೈನಿಗೆ ..ಮಾಡೊಲ್ಲವಲ್ಲ..??..ಅಂತ ಸುಮ್ಮನಾದೆ...ಅಷ್ಟರಲ್ಲಿ ನಿಂತಿತ್ತು ಟಿನ್ ಟ್ರಿನ್,,..ಸರಿ ನಾನು ನನ್ನ ಕೆಲಸ್ದಲ್ಲಿ.......ಅಲ್ಲಲ್ಲ...ಚಾಟ್ ಗೆ ಎಲ್ಲಿದೆ ಸಮಯ...?? ಅಡುಗೆ ಮನೆಯಲ್ಲಿ..!! ಯಾಕೆ ? ಈ ಕೆಲ್ಸ ಯಾವಾಗ್ಲಿಂದ ಅಂದ್ರ...?? ಅಯ್ಯೋ ..ರಜಗಳು ಇಲ್ಲಿ ಜೂನ್ ನಿಂದ, ಫ್ಯಾಮಿಲಿನ ಮದನಪಲ್ಲಿಗೆ ಬಿಟ್ಟು ಬಂದಿದ್ದೆ..... ಇನ್ನು ಕೂಳಿಗೆ ಈ ಮರಳುಗಾಡಿನಲ್ಲಿ?? ಮಾಡಿದ್ದುಣ್ಣೋ ಮಹರಾಯ ಅಂತ ನಾನು ಮಾಡಿದ್ದನ್ನ ನಾನೇ ತಿನ್ನಬೇಕಲ್ಲ? ಅದಕ್ಕೆ..ಈಗ ಹೆಚ್ಚು ಸಮಯ ಕೇರಾಫ್ ಕಿಚನ್.



ಮತ್ತೆ "ಟ್ರಿನ್..ಟ್ರಿನ್.....ಟ್ರಿನ್..ಟ್ರಿನ್......ಟ್ರೀನ್,,ಟ್ರೀನ್..." ಯಾಕೋ ಫೋನಿಗೂ ಕೋಪ ಬಂತಾ ಅನ್ನಿಸ್ತು ಇಲ್ಲ ಅಂದ್ರೆ ಟ್ರಿನ್ ಅನ್ನೋದು ಹೋಗಿ ಟ್ರೀನ್ ಅಂತ ಕಿರ್ಚೋದು ಯಾಕೆ...? ಸರಿ ಹೊಸ ಹ್ಯಾಂಡ್ಸ್-ಫ್ರೀ ತಂದಿದ್ದು ಮತ್ತೆ ಕೋಪ ಮಾಡ್ಕೊಂಡ್ ಕೆಳ್ಗೆ ಬಿದ್ರೆ ಕಷ್ಟ ಅಂತ ಬೇಗ ಬಂದು ಫೋನ್ ಎತ್ತಿದೆ.



"ಹಲೋ..." ಕ್ಯಾ ಕರ್ ರ್ರೈ..?" no doubtಉ ಅಬಿದಾದೇ ಫೋನು...!! ಬಹುಶಃ ನನ್ನ ಮಗಳು- ಸುರು "ಅಬ್ಬ" ಬರೋದ್ರೊಳಗೆ ಬೆಂಗಳೂರಿಗೆ ಹೋಗೋಣ ಅಂತ ಅವ್ರಮ್ಮನ ಹತ್ರ ಹೇಳಿರ್ಬೇಕು ಅದಕ್ಕೆ ಅಬಿದಾ ನನಗೆ ಎಮರ್ಜೆನ್ಸಿ ಕಾಲ್ ....ಹೌದು ..ಅವಳೇ ...ನನ್ನನ್ನ ಮೊದಲಿಗೆ ನೋಡಿದ್ರೆ/ಫೋನಾಯಿಸಿದ್ರೆ "ಸಲಾಂ ಅಲೇಕುಮ್" ಅನ್ತಾ ಇದ್ಲು...??!! ಯಾಕೆ.. ? ಮತ್ತೆ "ಹಲೋ..." ಕ್ಯಾ ಕರ್ ರ್ರೈ..?" ಅಂತ ಕೇಳಿದ್ರಲ್ಲಿ ಕಾಳಜಿಗಿಂತ...ಏನೋ ...ಮಾಡಬಾರದ್ದು ಮಾಡ್ತಿದ್ದೀನಿ ಅನ್ನೋ ಹೆಂಡತಿರಿಗೆ ಇರಬೇಕಾದ ದರ್ಪದಲ್ಲಿ ಕೇಳಿದ್ಲು....



"ಕಿಚನ್ ನಲ್ಲಿದ್ದೀನಿ ಉಪ್ಪಿಟ್ಟು ಮಾಡ್ತಿದೀನಿ.... ಶುಕ್ರವಾರ ಅಲ್ವಾ..ನಮಾಜ್ ಗೆ ಮುಂಚೆ ಮನೆ ಸ್ವಲ್ಪ ಕ್ಲೀನ್ ಮಾಡೋಣ ಅಂತ ಸ್ವಲ್ಪ ಬೇಗಾನೇ ತಿಂಡಿ ರೆಡಿ ಮಾಡ್ತಿದ್ದೀನಿ..." ಅಂದೆ..



"ಯಾಕೆ ಮೋಹಿನಿ ಬರ್ಲಿಲ್ಲವಾ..??"



ಅರೆ..ಇದೇನಪ್ಪಾ...??!! ನನ್ನವಳು ಹೋಗೋಕೆ ಮುಂಚೆ ಯಾರಿಗಾದ್ರೂ ಕೆಲಸದವಳಿಗೆ ಹೇಳಿದ್ಲಾ...ಕೈ ಜಿಗುಟಿಕೊಂಡೆ.."ಆಹ್" ನೋವಾಯ್ತು...ಅಂದ್ರೆ not a dream !! ಎಲ್ಲದಕ್ಕೂ ನನ್ನನ್ನೇ ಕೇಳುತ್ತಾ ತಾನೇ ಯಾವುದೇ ನಿರ್ಧಾರ ತಗೊಳ್ಳದ ಇವ್ಳು..ಕೆಲ್ಸದವಳಿಗೆ ಹೇಳೋದಾ..??!! ಹೇಗೆ ಸಾಧ್ಯ..?? no way..!! ಆದ್ರೂ...



ಆಶ್ಚರ್ಯ..ಸಂತೋಷ ಎರಡೂ ಒಟ್ಟಿಗೆ..



"ಯಾವ ಮೋಹಿನಿ..? ನೀನು ಯಾರ್ಗಾದ್ರೂ ಹೇಳಿದ್ಯಾ.."...ಕೇಳಿದೆ



"ನೀವೇ ಹೇಳಿದ್ದೀರಲ್ಲಾ ಯಾವ್ದೋ ಮಿಟಕಲಾಡೀಗೆ...ಅದಕ್ಕೇನೇನೋ ಕೆಲ್ಸ ಇದೆ... ಬೇಗ ಕುವೈತ್ ಗೆ ಹೋಗಬೇಕು ಅಂತ ....ನಮ್ಮಮಗಳು ’ಸುರು..’ಅಬ್ಬ’ ಇನ್ನೊಂದೆರಡು ದಿನ ಇರಿ” ಅಂದ್ರೂ "ಇಲ್ಲ ಬೇಟ ಕೆಲ್ಸ ಇದೆ ಮತ್ತೆ ಆಗಸ್ಟ್ ನಲ್ಲಿ ಬೇಗ ಬರ್ತೀನಲ್ಲಾ" ..ಅಂತ ಸಬೂಬು ಹೇಳಿ ಬಂದಿದ್ದು..?? ಎಷ್ಟು ದಿನದಿಂದ ನಡೀತಿದೆ ಎಲ್ಲಾ..?? ಇಲ್ಲಾಂದ್ರೆ ಎರಡು ದಿನಕ್ಕೆ ಒಂದು ಸರ್ತಿ..ಫೋನ್ ಮಾಡಿ ಅಬಿದಾ ಆ ಅಡುಗೆ ಹೇಗೆ ಮಾಡೋದು ?..ಈ ಅಡುಗೆ ಹೇಗೆ ಮಾಡೋದು? ಅಂತ ಕೇಳ್ತಿದ್ರಿ...ಈಗ.. ನಾಲ್ಕು ದಿನ ಆದ್ರೂ ಫೋನ್ ಇಲ್ಲ..ಸರಿ ಕೆಲ್ಸದ ಒತ್ತಡ ಮಾಡ್ತಾರೆ ಅಂದ್ಕೊಂಡಿದ್ದೆ.....ಇಂಥಾ ಘನಾಂದಾರಿ ಕೆಲ್ಸ ಅಂತ ಅಂದ್ಕೊಂಡಿರ್ಲಿಲ್ಲ!!."



ಕೋಪ ಅಳು ಎಲ್ಲ ಒಟ್ಟಿಗೆ ಇತ್ತು..ಅವಳ ಧ್ವನಿಯಲ್ಲಿ...ಸಿಕ್ಕಾ ಪಟ್ಟೆ ರಬ್ಬರ್ ಬ್ಯಾಂಡ್ ಚ್ಯೂವಿಂಗ ಗಮ್ ಥರ ಎಳೆಯೋ ಟಿ.ವಿ. ಸೀರಿಯಲ್ ಕಥೆ ಒಂದೇ ಎಪಿಸೋಡಲ್ಲಿ ಮುಗಿಸುವ ಚಾಕ ಚಕ್ಯತೆ ಇತ್ತು ಅವಳ ಆರೋಪದಲ್ಲಿ...ಎಲ್ಲವನ್ನೂ ಸಾರಾ ಸಗಟಾಗಿ ಎಂಥವರ ಕಣ್ಣಿಗೂ (ಕಿವಿಗೇ ಏನು?) ನಾಟುವಂತೆ ಹೇಳಿ..ಬುಸುಗುಡ್ತಾ ಇದ್ಲು..



ನನಗೋ.. ಏಸಿಯಲ್ಲೂ –ಬಿಸಿ ಬೆವರು ಶುರು..!!!



"ಅಲ್ಲ ಮಾರಾಯ್ತೀ...ಯಾವ ಮೋಹಿನಿ...." ನನ್ನ ಮಾತನ್ನ ತುಂಡರಿಸ್ತಾ...



"ಹೆಸರೆತ್ತಬೇಡಿ..,, ಮೋಹಿನಿ ಅಂತೆ..ಮೋಹಿನಿ..!! ಅದೂ ಎಂಥ ಹೆಸ್ರು... ನಿಮಗೇನ್ರೀ ನಾನು ಕಡಿಮೆ ಮಾಡಿದ್ದೆ.?..ಅದೂ ನನ್ನ ಎತ್ತರಕ್ಕೆ ಬೆಳೆದು ನಿಂತಿರೋ ಮಗಳಿರೋವಾಗ...."



ಅವಳ ಮುಸು ಮುಸಿ ಅಳು ಜಾಸ್ತಿಯಾಯ್ತು....ಆ ಕಡೆ ನನ್ನ ಅಕ್ಕ ಮತ್ತೆ ಅಮ್ಮ ಅವಳನ್ನ ಸಮಾಧಾನ ಮಾಡ್ತಿದ್ದದ್ದು ಸ್ಪಷ್ಟವಾಗಿ ಕೇಳ್ತಿತ್ತು..



“ಬೇಟಾ..ಆಜಾದು ಚಿನ್ನದಂತ ಹುಡುಗ ಏನೋ ಗಲತ್ ಆಗಿದೆ" ಅಂತ ನನ್ನಮ್ಮ  "ನಾವು ನಿಧಾನಕ್ಕೆ ಮಾತ್ನಾಡ್ತೀವಿ...ಈಗ ಸುಮ್ಮನಾಗು.....ನನಗೆ ಕೊಡು ಫೋನ್”



ಅಂತ ಅಕ್ಕ ಫೋನ್ ತಗೊಂಡದ್ದು ಗೊತ್ತಾಯಿತು.



"ಅಕ್ಕ ..ಏನಕ್ಕ ಇವಳು ಹೇಳ್ತಿರೋದು...ಯಾರದು ಮೋಹಿನಿ...?" ನನ್ನ ಆತಂಕ ತೋಡಿಕೊಂಡೆ ನನ್ನಕ್ಕನ ಹತ್ರ...



"ನೋಡು ಆಜಾದು, ಈಗ ಮಾತ್ನಾಡೊದು ಬೇಡ..ಅಬಿದಾ ಅಪ್-ಸೆಟ್ ಆಗಿದ್ದಾಳೆ..ನಾನು ಸಮಜಾಯಿಶ್ ಹೇಳ್ತೀನಿ...ನಿನ್ನ ಮಗಳು-ಸುರೂನ ಅವಳ ಚಿಕ್ಕಪ್ಪ ತೋಟಕ್ಕೆ ಕರ್ಕೊಂಡು ಹೋಗಿದ್ದಾನೆ ಅವಳು ಇದ್ದಿದ್ದ್ರೆ ಮಗಳೇ ಸಮಾಧಾನ ಮಾಡ್ತಿದ್ಳು....ನೀನು ವರಿ ಮಾಡ್ಕೋ ಬೇಡ....., ಅಲ್ವೋ, ನೀನು ಕೆಲ್ಸದವಳನ್ನ ಮನೆ ಕೆಲಸಕ್ಕೆ ಹೇಳ್ತೀನಿ ಅಂತ ಅಬಿದಾಗೆ ಒಂದು ಮಾತು ಹೇಳಬಾರ್ದ..?? ಅದೂ..ಎಂಥ ಹೆಸರಿನವಳಿಗೆ ಹೇಳಿದ್ದೀಯಾ ನೋಡು...ಛೀ..ಮೋಹಿನಿ..ಅಂತೆ,,ಮೋಹಿನಿ..."



"ಅಲ್ಲಕ್ಕ ಅದು..." ನಾನು ಮಾತನಾಡೋದಕೂ ಬಿಡ್ಲಿಲ್ಲ...ಅಕ್ಕ



"ನೋಡೋ ಈಗ ಮೊದಲು ಆ ಮೋಹಿನೀನ ಕೆಲಸದಿಂದ ಬಿಡ್ಸು...ನಾನು ಅಬಿದಾ ಹತ್ರ ಮಾತನಾಡ್ತೀನಿ..ಮತ್ತೆ ಎರಡು ದಿನ ಬಿಟ್ಟು ಅವಳಿಗೆ ಫೋನ್ ಮಾಡಿ ಹೇಳು ಯಾರೂ ಇಲ್ಲ..ಅವಳನ್ನ ಕೆಲಸದಿಂದ ಬಿಡಿಸಿದೆ ಅಂತ......ಆಯ್ತಾ..? ಈಗ ನಾನು ಫೋನ್ ಇಡ್ತೀನಿ..."



ಇದೇನಪ್ಪಾ ಇದು...ಬೆಳ್ ಬೆಳಿಗ್ಗೆ....ಉಪ್ಪಿಟ್ಟು ಮಾಡೋಣ ಅಂತ ಇದ್ರೆ ಎಲ್ಲಾ ಚಿತ್ರಾನ್ನ ಆಗಿ ಕೂತಿದೆ...ಹೌದು ಏನಿದು..? ಮೋಹಿನಿ..ಯಾರಿದು ಮೋಹಿನಿ...??.. ತಲೆ ಚಿಟ್ಟು ಹಿಡೀತಿತ್ತು..ಸ್ಟೌವ್ ಆಫ್ ಮಾಡಿ ಬಿಸಿ ಬಿಸಿ ಇನ್ಸ್ಟಾಂಟ್ ಕಾಫಿ ಮಾಡಿ ಹೀರುತ್ತ ಸೋಫಾದಲ್ಲಿ ಧೊಪ್ಪೆಂದು ಕುಂತೆ...ಯೋಚನೆ ನಿಲ್ಲಲಿಲ್ಲ....



"ಅರೆ..!! ಹೌದಲ್ಲಾ..!! ಮೂರು-ನಾಲ್ಕು ದಿನದ ಹಿಂದೆ ಬಜ್ ನಲ್ಲಿ ಹೀಗೇ ತಮಾಶೆ ಮಾಡ್ತಾ..



"ಏನ್ರೀ ಆಜಾದ್ರೇ..ಒಬ್ರೇ ಮನೇಲಿ ಅಂತೀರಾ..ಭಾಭಿನಾ ಬಿಟ್ಟು ಬಂದು.., ರಾತ್ರಿ ಹೆದ್ರಿಕೆ ಆಗೊಲ್ಲವಾ..." ಅಂತ ಯಾರೋ ಕೇಳಿದ್ರು..?"



ಅದಕ್ಕೆ ನಾನು...



"ಬರ್ತಾಳಲ್ಲ ಮೋಹಿನಿ"...ಅಂದಿದ್ದೆ..



ಅವರು..."ದಿನವೂ ಬರ್ತಾಳಾ..?"



"ಹೌದು..ಆ ಗೆಜ್ಜೆ ಆ ಮಧುರ ಕೂಗು...ಬಾ..ರಾ...ಬಾ..ರಾ..." ಅಂತ ನಾನಂದಿದ್ದೆ...



"ಹಾಗಾದ್ರೆ ಅಬಿದಾಗೆ ಫೋನ್ ಮಾಡಿ ಹೇಳ್ತೇನೆ ತಡೀರಿ..." ಅವರು ಹೇಳಿದ್ರು



"ಅವಳಿಗೂ ಗೊತ್ತು ಹೇಳಿ ಪರ್ವಾಗಿಲ್ಲ" ಅಂದಿದ್ದೆ......



ಓಹ್...ಇದು ಇವ್ರದ್ದೇ ಕೆಲ್ಸ....ನನ್ನ ಬಜ್ ನಲ್ಲಿ ನನ್ನ ಇಂಡಿಯಾ ನಂಬರ್ ನೋಡಿ ಫೋನ್ ಮಾಡಿ ತಮಾಶೆ ಮಾಡಿರ್ತಾರೆ..ನಾನು ಆ ಸಿಮ್ ಕಾರ್ಡ್ ಇದ್ದ ಫೋನ್ ಅಬಿದಾಗೆ ಕೊಟ್ಟಿದ್ದೆ..ನಾನು ಸಂಪರ್ಕ ಮಾಡೋಕೆ.....



ಹಾಂ.. ಹೀಗೇ ಆಗಿದೆ..., ಇವರು ವಿಷಯ ಪೂರ್ತಿ ಹೇಳೋಕೆ ಆಗಿಲ್ಲವೋ ಅಥವಾ ಏನೋ ಎಡವಟ್ಟು ಆಗಿದೆ... ನನಗೆ ಎಲ್ಲಾ ಅರ್ಥವಾಗತೊಡಗಿತ್ತು....



ತಕ್ಷಣ ನೆಟ್ ಓಪನ್ ಮಾಡಿ ಆ ದಿನದ ಬಜ್ ನ ಎಲ್ಲ ಸಂಭಾಷಣೇನಾ ವರ್ಡ್ ನಲ್ಲಿ ಪೇಸ್ಟ್ ಮಾಡಿ ಸುರುಗೆ ಮೈಲ್ ಮಾಡಿದೆ.  ಎಡವಟ್ಟು ಏನು ಅಂತ ವಿವರಿಸಿ ನನ್ನ ತಮ್ಮನಿಗೂ ಒಂದು ಕಾಪಿ ಹಾಕಿ...ಸುರುಗೆ ಸಂಜೆ ಫೋನ್ ಮಾಡ್ತೇನೆ ಅಂತ ಮೈಲ್ ನಲ್ಲಿ ತಿಳಿಸಿ ಮೈಲ್ ಮಾಡಿ...ಅರ್ಧ ಸಮಾಧಾನದ ನಿಟ್ಟುಸಿರು ಬಿಟ್ಟೆ...



ಆ ಸಂಜೆ ಮೂರು ಇಪ್ಪತ್ತಾಗಿತ್ತು, ಸಂಜೆ ನಾಲ್ಕೂವರೆಗೆ ಫೋನ ಮಾಡೋಣ ಅಂತ ಚಪಾತಿಗೆ ಹಿಟ್ಟು ಕಲಸಿಡಲು ಕಿಚನ್ ಗೆ ಹೋದೆ..."ಟ್ರಿನ್ ಟ್ರಿನ್..ಟ್ರಿನ್.."



ಏನಿದು ಅಬಿದಾಳದ್ದೇ ಫೋನು...ಹೆದರುತ್ತಾ ಫೋನು ಎತ್ತಿದೆ



"ಅಸ್ಸಲಾಮು ಅಲೇಕುಮ್" ಅಬಿದಾಳ ದ್ವನಿ ..ಮೆದುವಾಗಿತ್ತು... ಧೈರ್ಯ ಬಂತು..



"ವಾಲೈಕುಮ್ ಅಸ್ಸಲಾಮ್ ಡಿಯರ್..." ನಾನು ಇನ್ನೂ ಮುಂದಿನ ಶಬ್ದ ಹೇಳುವುದಕ್ಕೆ ಮುಂಚೆ..."ಮಾಫ್ ಕರೋ ಡಿಯರ್, ನಾನು ನಿಮ್ಮನ್ನ ತಪ್ಪು ತಿಳಿದೆ...ಯಾರೋ ಹೇಳಿದ್ರು ಅಂತ... ನನ್ನದೂ ತಪ್ಪಿದೆ..
ಆ ದಿನ ನಿಮ್ಮ ಫ್ರೆಂಡ್ ಇರ್ಬೇಕು ಅವರು ಫೋನು ಮಾಡಿ "ಭಾಭಿ ತಮಾಷೆ ಗೊತ್ತಾ...? ನಿಮ್ಮವ್ರು ಕುವೈತಲ್ಲಿ ಮೋಹಿನಿ ಅನ್ನೋಳನ್ನ ಕೆಲ್ಸಕ್ಕೆ ಇಟ್ಕೊಂಡಿದ್ದಾರೆ..." ಅನ್ನೋದ್ರಲ್ಲಿ ಫೋನ್ ಕಟ್ ಆಗಿತ್ತು...ನನಗೆ ಹೆಂಗಸಿನ ದ್ವನಿ, ಹೇಳಿದ್ದು ನಿಮ್ಮ ಬಗ್ಗೆ...ಮೋಹಿನಿ ಅನ್ನೋಳನ್ನ ಇಟ್ಕೊಂಡಿದ್ದಾರೆ ... ಇಷ್ಟೇ ಕಿವಿಗೆ ಹೋಗಿದ್ದು....ಕೆಲಸದವಳು ಅನ್ನೋದನ್ನ ಗಮನಿಸಲೇ ಇಲ್ಲ....I am very very sorry..."



ಅಬ್ಬಾ...ಎಂಥ ಹಾಲು ಕುಡಿದ ಅನುಭವ...!! ನಾನೆಂದೆ..



"its Ok dear...misunderstand ಆಗುತ್ತೆ ...ಹೌದೂ.... ನಿನಗೆ ಇದೆಲ್ಲಾ...ಹೇಗೆ ??".



"ಸುರುಗೆ ನೀವು ಕಳ್ಸಿದ ಮೈಲ್ ಸಿಕ್ತು ಅವಳು ಅವಳ ಅತ್ತೆ ಏನೇನೋ ಮಾತನಾಡ್ತಾ ಇದ್ರು..ಆ ಮೇಲೆ ನಿಮ್ಮ ತಮ್ಮನ ಫೋನ್ ಬಂತು...ಮತ್ತೆ ಸುರು ನನ್ನ ಕರೆದು...ನಿಮ್ಮ ಮೈಲ್ ತೋರಿಸಿದಳು....ನನಗೆ ಆಗ್ಲೆ ಅರ್ಥ ಆಗಿದ್ದು ಎಂಥ ಮೂರ್ಖಳು ನಾನು ನಿಮ್ಮನ್ನು ಅಪಾರ್ಥ ಮಾಡ್ಕೊಂಡೆ...sorry" ಎಂದಳು ನಗುತ್ತಾ...



ಅಬ್ಬಾ...ಶುಕ್ರವಾರದ ನಮಾಜ್ ನಲ್ಲಿ ನನ್ನ ಪ್ರಾರ್ಥನೆ ದೇವರಿಗೆ ಮುಟ್ಟಿತು ಎಂದುಕೊಂಡು...ಕೀಟಲೆ ಮಾಡಿದೆ ನನ್ನವಳಿಗೆ..



"ಹಾಗಾದ್ರೆ ಮೋಹಿನೀನ ನಾಳೆಯಿಂದ ಬರೋಕೆ ಹೇಳ್ಲಾ ಮನೇಗೆ..?"



ನಗುತ್ತಾ ಅವಳು.." ಯಾಕೆ? ಈಗ್ಲೇ ಹೇಳಿ.... ರಂಜಾನ್ ಬರ್ತಿದೆ ನಿಮ್ಮ ಉಪವಾಸದ ೭-೮ ದಿನಗಳ ಅಡುಗೆನಾದ್ರು ಮಾಡಿ ಹಾಕ್ತಾಳೆ....ಹಹಹ..."



ಇದು ಒಂದು ಬಜ್.ಚಾಟ್ ಎರಡರ ..ಕಪೋಲ ಕಲ್ಪಿತ..ಇದನ್ನೇ ನೆವಮಾಡಿ ನನ್ನವಳಿಗೆ ಫೋನ್ ಮಾಡೋರಿಗೆ ಎಚ್ಚರಿಕೆ......