Thursday, November 25, 2010

ಚಿತ್ರ ಕೃಪೆ: http://www.funlogg.com/
ಚಂಚಲ ನಯನೆ
(ಚಂದನ್ ಸಾ ಬದನ್ ಚಂಚಲ್ ಚಿತವನ್...ಧಾಟಿ)

ಚಂದನದ ಮನ ಚಂಚಲ ನಯನ
ಮೆಲ್ಲಮೆಲ್ಲನೆ ಮೆರೆವ ಹುಸಿನಗುವು
ಎನ್ನ ದೂಷಿಸಬೇಡಿ ಓ ಜನರೇ
ಮರುಳಾದರೆ ಕಂಡು ಆ ವದನ... II ಚಂದನದ ಮನ II
ಆ ಕಾಮನ ಬಿಲ್ಲು ಈ ಹುಬ್ಬು
ಕೆಣ್ ಎವೆಯ ಅಂಚಿನ ಕಡುಗಪ್ಪು
ಹಣೆಯ ಸಿರಿ ಈ ಸಿಂಧೂರ
ತುಟಿಯಾಗಿವೆ ಸುಡುವ ಕೆಂಡಗಳು
ಸೋಕಿದರೂ ಬರಿ ನಿನನೆರಳು
ಬೆಂಗಾಡಲೂ ಅರಳುವ  ಕುಸುಮಗಳು...II ಚಂದನದ ಮನ II
ತನುವೂ ಸುಂದರ ಮನವೂ ಸುಂದರ
ಸುಂದರತೆಯ ಮೂರುತಿ ಈ ಚೆಲುವೆ
ಬೇರಾರಿಗೋ ಹೇಗೋ ನಾನರಿಯೆ
ನನಗಂತೂ ನಿನ್ನದೇ ಸವಿ ನೆನಪು
ಈಗಾಗಲೇ ಬಹಳ ಕಾದಿರುವೆ
ಇನ್ನೂ ನನ್ನನ್ನು ನೀ ಕಾಡದಿರು...II ಚಂದನದ ಮನII

ಮೂರುದಿನದ ಚೂರು-ಪಾರು
ಹುಟ್ಟು ಸಾವು ಎರಡರ ಮಧ್ಯೆ
ಇವೆಯೆಂದರು ಕೇವಲ ದಿನ ಮೂರು
ಆಗಲೂ ಬಹುದು ಎಂದವರು ಅವು ನೂರು
ಪಡೆದರು ಜೀವನದಿ ಚೂರು-ಪಾರು
ಮೂರೇ ಎಂದವರಿಗೆ ಸಿಕ್ಕಿದ್ದು, ಅನಿಸಿದ್ದು
ಅಲ್ಪ ಸ್ವಲ್ಪ ಚೂರು ಮತ್ತೆ ಸಿಕ್ಕಂತೆ ಪಾರು
ಒಂದೇ ಎಂದವರಿಗೆ ಎಲ್ಲಿಯ ಚೂರು?
ಯಾರದೋ ಪಾಲು ಆಗಿರುವಳು, ಪಾರು

Monday, November 8, 2010

ನಗು ನಗುತಾ ನಲೀ ನಲೀ.....

ನಗು ..ಯಾರಿಗೆ ಬೇಡ..? ಎಲ್ಲರಿಗೂ ಇಷ್ಟವೇ....ಇಲ್ಲ ಎಂದಿರಾ,,,,?? ಓಹ್ ನೀವು ತಮಾಶೆ ಮಾಡ್ತಿದ್ದೀರಾ..ಇಲ್ಲ ಅಲ್ವಾ?? ...ಏನೋ ತುಂಬಾ ಗಂಭೀರ ವಿಷಯ ತಲೆ ತಿನ್ತಾ ಇದೆ...!!!???

ಹೌದು ನಗು ಮುಖದಲ್ಲಿ ಒಂದು ರೀತಿಯ ಕಾಂತಿಯನ್ನು ತರುತ್ತದೆ. ಸ್ನೇಹಿತರನ್ನು ತರುತ್ತದೆ, ಮನೋಲ್ಲಾಸ ತರುತ್ತದೆ. ವ್ಯಕ್ತಿತ್ವ ಆಕರ್ಷಣೆಯಲ್ಲಿ ಹಾಸ್ಯ ಸ್ವಭಾವ ಅಥವಾ ನಗುಮುಖದ ವ್ಯಕ್ತಿತ್ವ ಎಲ್ಲಾ ಗುಣಗಳನ್ನೂ ಹಿಂದೆ ಹಾಕುತ್ತದೆಂದು ಸಮೀಕ್ಷೆಗಳು ತಿಳಿಸುತ್ತವೆ. ನಗು ಬಾಲ್ಯಾವಸ್ಥೆಯ ಬೌದ್ಧಿಕ ಮತ್ತು ತಾರ್ಕಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆಂದು ವೈದ್ಯಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಹಿರಿಯರು ಗಂಭೀರ ಸ್ವಭಾದವರು ಸ್ವಲ್ಪ ಹೆಚ್ಚು ಗಂಭೀರರಾದಾಗ ಮನೆಯ ಮಗುವೊಂದನ್ನು ಅವರ ಬಳಿ ಬಿಡುವುದು ಬಹು ಚಾಣಾಕ್ಷ ಉಪಾಯ. ವಾತಾವರಣ ತಿಳಿಯಾಗುವುದಲ್ಲದೇ ಆ ವ್ಯಕ್ತಿಯ ಸ್ವಭಾವದಲ್ಲೂ ಬೇಗನೆ ಬದಲಾವಣೆಯಾಗುವುದರಲ್ಲಿ ಸಂದೇಹವಿಲ್ಲ.

ಹಾಗಾದರೆ ಏನಿದು..? ನಗು,,? ಹಾಸ್ಯ?

ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಉದಾಹರಣೆಗಳ ಮೂಲಕ ಅಧ್ಯಯನ ಮಾಡಿ ಕೆಲವು ಮಹತ್ತರ ಅಂಶಗಳನ್ನು ಕಂಡುಕೊಳ್ಳಲಾಗಿದೆ. ಈ ಎಲ್ಲ ನಿದರ್ಶನಗಳು ಒಂದು ವಿಷಯವನ್ನು ಹೊರಗೆಡಹಿವೆ. ಮಾನವ ಮಿದುಳು ತರ್ಕಗಳಲ್ಲಿ ವಿನ್ಯಾಸಗಳನ್ನು ಗುರುತಿಸಬಲ್ಲುದು. ಈ ತರ್ಕಗಳು ಒಂದು ಗೊತ್ತಾದ ವಿನ್ಯಾಸಕ್ಕೊಳಪಟ್ಟಿರುತ್ತವೆ. ಬಹುಪಾಲು ಈ ತರ್ಕ ವಿನ್ಯಾಸಗಳು ಪರಿಚಿತವಾಗಿರುತ್ತವೆ. ಇದನ್ನು ಅರ್ಥೈಸಿಕೊಳ್ಳುವ ಶಕ್ತಿ ಅಥವಾ ಬುದ್ಧಿ ಮಿದುಳಿಗೆ ಇರುತ್ತದೆ ಆದರೆ ನಾವು ಊಹಿಸದ ತರ್ಕ ವಿನ್ಯಾಸ ಮಿದುಳಿಗೆ ಪರಿಚಯವಾದಾಗ ಮಿದುಳು ಉಲ್ಲಸಿತಗೊಳ್ಳುತ್ತದೆ. ಇದರ ಪುನರಾವರ್ತನೆ ಈ ಅಲೆಗಳು ಮತ್ತೆ ಮತ್ತೆ ಏಳುವಂತೆ ಮಾಡುತ್ತವೆ...ಇದರ ಬಹು ಸರಳ ಉದಾಹರಣೆ ಮಗುವಿಗೆ ..ಗಿಲಿ ಗಿಲಿ ಗಿಲಿ ಮಾಡಿದಾಗ ಮಗು ಕೇಕೆಹಾಕಿ ನಗುತ್ತದೆ. ಆದರೆ ತರ್ಕವಿನ್ಯಾಸಗಳು ಮಿದುಳಿಗೆ ಪರಿಚಿತವಾಗುವ ಕ್ರಿಯೆ ಬಹುಪಾಲು ಅನಿಯಂತ್ರಿತ ಕ್ರಿಯೆ. ಮಿದುಳಿನ ಪ್ರಿ-ಫ್ರಾಂಟಲ್ ಕಾರ್ಟೆಕ್ಸ್ ಭಾಗದಿಂದ ಸ್ರವಿತ ಎಂಡಾರ್ಫಿನ್ ಎಂಬ ಜೀವರಾಸಾಯನಿಕ ಸಂಯುಕ್ತ ಮನೋಲ್ಲಾಸಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಇದು ಪ್ರಾಣಿ ವಿಕಸನ ಸರಣಿಯ ಬಹು ಮುಖ್ಯ ಬೆಳವಣಿಗೆ. ಇದೇ ಕಾರಣಕ್ಕೆ ಕೇವಲ ಮಾನವ ಜಾತಿ (ಮಂಗ, ಚಿಂಪಾಂಜಿ ಇತ್ಯಾದಿ ಸಹಾ) ನಗುವನ್ನು ಗುರುತಿಸಬಲ್ಲುದು. ಇದೇ ಕಾರಣಕ್ಕೆ ಮಾನವನ ಬುದ್ಧಿ ಶಕ್ತಿ ಎಲ್ಲ ಪ್ರಾಣಿಗಳಿಗಿಂತ ಬಹುಪಾಲು ಹೆಚ್ಚು. ಮಗುವಿನಲ್ಲಿ ಮಾತಿಗೂ ಮುಂಚೆ ನಗು-ತರುವ ವಿಷಯವನ್ನು ಗುರುತಿಸುವ ಶಕ್ತಿ ಬರುತ್ತದೆ. ಅನಿರೀಕ್ಷಿತ ವಿನ್ಯಾಸವನ್ನು ಮಗು ಗಮನಿಸಿದರೆ ಉಲ್ಲಸಿತಗೊಳ್ಳುತ್ತೆ. ಬಹು ಸ್ವಾಭಾವಿಕ ಪ್ರತಿಕ್ರಿಯೆ ಎಂದರೆ ಮಗು ಚಪ್ಪಾಳೆ ಹೊಡೆಯುವುದು...ಅಥವಾ ಮುಖ ಅರಳಿಸುವುದು....ನಿರೀಕ್ಷಿತ ವಿನ್ಯಾಸಕ್ಕೆ ಮಗು ನಗುವುದಿಲ್ಲ ಎನ್ನುವುದನ್ನು ನೀವೂ ಗಮನಿಸಿರಬಹುದು.

ನಗು- ಈ ಕ್ಲಿಷ್ಟ ಸಂಬಂಧಗಳ ಕಾರಣ ವ್ಯಕ್ತಿಯ ಸ್ವಭಾವವನ್ನು ಅವಲಂಬಿಸಿರುತ್ತದೆ. ಒಬ್ಬರಿಗೆ ನಗು ತರಿಸುವುದು ಮತ್ತೊಬ್ಬರಿಗೆ ಗಂಭೀರವಾಗಬಹುದು...ಅದರೆ ಇದು ವಯಸ್ಸು ಮತ್ತು ಅನುಭವ ಹೆಚ್ಚಿದಂತೆ ಬದಲಾಗುತ್ತದೆ. ಹೆಂಗಸರ ನಗು ಸ್ವಾಭಾವಿಕವಾಗಿ ಹಾಡು-ಹಾಡಿದಂತಿದ್ದರೆ ಗಂಡಸರ ನಗು ವಿವಿಧ ಶಬ್ದದೊಂದಿಗೆ ಹೊರಹೊಮ್ಮಬಹುದು. ಹಾಸ್ಯಕ್ಕೆ ಹೆಣ್ಣು ಹೆಚ್ಚು ಪ್ರತಿಕ್ರಿಯಿಸುತ್ತಾಳಂತೆ ಗಂಡಿಗಿಂತ!!. ತಾನು ಮಾತನಾಡುವಾಗ ತನ್ನ ಮುಂದಿನವರು ನಗುವುದಕ್ಕಿಂತ ಹೆಚ್ಚು ಗಂಡು ತಾನೇ ನಗುತ್ತಾನಂತೆ...ಹಹಹ. ಹೆಣ್ಣು ಹೆಚ್ಚು ಪ್ರತಿಕ್ರಿಯಿಸುವ ನಗುವ ಕ್ರಿಯೆಗಳು ಎಂದರೆ ಚೇಷ್ಟೆ ಮತ್ತು ಪ್ರಾಣಿಗಳ ಅಥವಾ ಮಕ್ಕಳ ಹರಕತ್ತುಗಳು. ನಗು ಸರ್ವ ರೋಗ ನಿವಾರಕ ಎಂಬುದು ಅತಿಶಯೋಕ್ತಿ ಅಲ್ಲ. ಹದಿಹರೆಯದ ವರೆಗೆ ಸರಾಸರಿ ದಿನಕ್ಕೆ ೩೦೦ ಬಾರಿ ನಕ್ಕರೆ ವಯಸ್ಕರ ನಗುವ ಸಾಧ್ಯತೆ ಕೇವಲ ಇದರ ಹತ್ತರಷ್ಟು...!!! ನಮ್ಮನ್ನು ನಾವು ಯಾವ ಅತಿ ಪ್ರಯೋಜನಕಾರಿ ಕ್ರಿಯೆಯಿಂದ ದೂರವಿಡುತ್ತಿದ್ದೇವೆ ಗೊತ್ತೆ....??

ನಗು ಮತ್ತು ಹಾಸ್ಯ ಎರಡು ವಿಭಿನ್ನ ಅಂಶಗಳು. ನಗು ಕೇವಲ ಭೌತಿಕ ಕ್ರಿಯೆ..ಶ್ವಾಸಕೋಶದಿಂದ ಜೋರಾಗಿ ಗಾಳಿಯನ್ನು ಹೊರದೂಡುವುದು...ಹ..ಹ..ಹಹಹ್ಹಹ್ಹಹ್ಹ ..ಹಾಹಹ್ಹಾಹಹಾ...ಹೀಗೆ...ಇದನ್ನು ನಾವು ವ್ಯಾಯಾಮದ ಮೂಲಕವು ಮಾಡಬಹುದು. ಆದರೆ ನಗುವೆಂಬ ಸ್ವಾಭಾವಿಕ ಕ್ರಿಯೆಯ ಮೂಲಕ ಮಾಡುವ ಈ ಬೌತಿಕ ಕ್ರಿಯೆ ಹಲವಾರು ಪ್ರಯೋಜನಕಾರಿ ಲಾಭಗಳನ್ನು ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ನೀಡುತ್ತದೆ. ನಗು ಒಂದು ಸಾಂಕ್ರಾಮಿಕ ಅಂದರೆ ಒಬ್ಬರಿಂದ ಒಬ್ಬರಿಗೆ ಹರಡುವ ಉಪಯುಕ್ತ ಗುಣ. ಒಂದು ಹಾಸ್ಯ ಚಟಾಕಿ, ಲೇಖನ ಅಥವಾ ಸನ್ನಿವೇಶದ ವೀಡಿಯೋ ನಾವು ಒಬ್ಬರೇ ಓದುವಾಗ ಅಥವಾ ವೀಕ್ಷಿಸುವಾಗ ಹೆಚ್ಚೆಂದರೆ ಸುಮ್ಮನೆ ಮುಗುಳ್ನಗಬಹುದು ಅಥವಾ ಸ್ವಲ್ಪ ನಗಬಹುದು..ಅದೇ ನಮ್ಮ ಬಂಧು ಬಾಂಧವರ ಜೊತೆಗಿದ್ದಾಗ ಹೆಚ್ಚು ಅನುಭವಿಸಿ ನಗುತ್ತೇವೆ ಕಾರಣ ಇದು ನಿಯಂತ್ರಿತ ಸಾಂಕ್ರಾಮಿಕ ಕ್ರಿಯೆ. ಇನ್ನೊಂದು ಬಹು ಆಶ್ಚರ್ಯಕರ ಅಂಶ ನಾವು ಗಮನಿಸಿರುತ್ತೇವೆ...ಏನು ಗೊತ್ತೆ..?? ನಾವು ನಮ್ಮ ಸ್ನೇಹಿತ/ಸ್ನೇಹಿತೆಯರ ಜೊತೆ ಇದ್ದಾಗ ಅನುಭವಿಸಿ ನಗುವಷ್ಟು ಕೇಕೆ ಹಾಕಿ ನಗುವಷ್ಟು ಬೇರೆ ಸಾಂಗತ್ಯದಲ್ಲಿ ಇರಲ್ಲಿಕ್ಕಿಲ್ಲ ಅಲ್ಲವೇ...??

ನಿರೀಕ್ಷಿತ ಹಾಸ್ಯ ನಗು ತರಲು ವಿಫಲವಾಗುತ್ತೆ ಎನ್ನುವುದಕ್ಕೆ ಪದೇ ಪದೇ ಕೇಳಿದ ಜೋಕ್ ಗಳಿಗೆ ನಮ್ಮ ಪ್ರತಿಕ್ರಿಯೆಯನ್ನು ಉದಹರಿಸಬಹುದು. ಕೆಲವರು ಕಚಗುಳಿ ಇಡುವುದರಿಂದ ಹಾಸ್ಯ ಅಥವಾ ನಗು ಬರುತ್ತೆ ಎನ್ನಬಹುದು...ಆದ್ರೆ ಇದೂ ಪೂರ್ತಿ ನಿಜವಲ್ಲ..ಏಕೆ..?? ನಮಗೆ ನಾವೇ ಕಚಗುಳಿಯಿಟ್ಟುಕೊಂಡರೆ ನಗು ಬರುವುದಿಲ್ಲ,,,,!!! ಬೇರೆಯವರು ಇಟ್ಟಾಗ ಅದು ಅನಿರೀಕ್ಷಿತವಾಗುತ್ತೆ ಹಾಗಾಗಿ ನಗು ಬರುತ್ತೆ. ನಗು ತರುವ ಕಾರಣ ಯಾವ ಪ್ರಕಾರದ್ದೇ ಆದರೂ ನಗುತರುವ ಅಥವಾ ಉಂಟುಮಾಡುವ ಪರಿಣಾಮ ಒಂದೇ ಆಗಿರುತ್ತೆ. ನಾವು ನಕ್ಕಾಗ ಶರೀರಕ್ರಿಯಾ ಸ್ರಾವಕಗಳು ರಕ್ತದೊಳಕ್ಕೆ ಹರಿದುಬರುತ್ತವೆ. ರಕ್ತಪರಿಚಲನೆ ಹೆಚ್ಚಾಗುತ್ತೆ ..ಅದೇ ಕಾರಣಕ್ಕೆ ಕೇಕೆ ಹಾಕಿ ನಕ್ಕಾಗ ಮುಖ ಕೆಂಪಾಗುವುದು...ಮೂಗು, ಕಿವಿ ಕೆಂಪು ಮತ್ತು ಬಿಸಿಯಾಗುತ್ತವೆ. ಶ್ವಾಸ ದೀರ್ಘವಾಗುತ್ತದೆ, ಶ್ವಾಸಕೋಶದ ಆಳದಿಂದ ಗಾಳಿ ಹೊರಬರುತ್ತದೆ ಅಲ್ಲಿನ ಜೀವಕೋಶಗಳಿಗೆ ಪರಿಶುದ್ಧ ಆಮ್ಲಜನಕ ಸಿಗುತ್ತದೆ, ಮಿದುಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯಾಗುತ್ತದೆ. ಮನೋಲ್ಲಾಸ ಮತ್ತು ಆಹ್ಲಾದಕರ ಸ್ಥಿತಿಗೆ ಕಾರಣವಾದ ಶರೀರಸ್ರಾವಕ “ಎಂಡಾರ್ಫಿನ್” ಪ್ರಮಾಣ ಹೆಚ್ಚಾಗುತ್ತದೆ, ಮ್ಲಾನತೆ (ಸ್ಯಾಡ್ ನೆಸ್) ನಿವಾರಕ ಶರೀರಕಿಯಾಸ್ರಾವಕ “ಸೆರಟೋನಿನ” ಹೆಚ್ಚು ಕ್ರಿಯಾಶೀಲವಾಗುತ್ತದೆ. ಈ ಮೂಲಕ ನೂರಾರು ಶರೀರ ಕ್ರಿಯೆಗಳು ನವಚೈತನ್ಯಕ್ಕೆ ಒಳಗಾಗುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.

ಸಹಿದಯಿ ಸದಭಿರುಚಿಯ ನಡವಳಿಕೆ ಹೇಗಿರಬೇಕು ಎನ್ನುವುದಕ್ಕೆ ಕೆಲವು ಸೂತ್ರಗಳನ್ನು ಗುರುತಿಸಲಾಗಿದೆ.

 ಇನ್ನೊಬ್ಬರನ್ನು ಅಭಿನಂದಿಸುವುದು ಮೊದಲಾಗಬೇಕು...ನಂತರ ಸಕ್ಕರೆಯಲ್ಲಿ ಬೆರೆತ ಔಷಧಿಯಂತೆ ಸಲಹೆಯನ್ನು ನೀಡಬಹುದು (ಹಾಗೊಂದು ವೇಳೆ ಆ ವ್ಯಕ್ತಿಯ ಒಳಿತಿಗೆ ಬೇಕೆನಿಸಿದರೆ). ಯಾರನ್ನೇ ಆಗಲಿ ಮೊದಲಿಗೇ ಟೀಕೆ ಮಾಡುವುದು ಸಹಿದಯಿಯ ಲಕ್ಷಣವಲ್ಲ.

 ನಮ್ಮ ನಿಲುವಿನಲ್ಲಿ ಮೃದು ಧೋರಣೆ ತೋರುವುದು, ಅಥವಾ ಕಠಿಣತೆಯ ಅವಶ್ಯಕತೆಯಿದ್ದಾಗ ಅದಕ್ಕೆ ಮೃದು ಪೀಠಿಕೆ ಹಾಕುವುದು...ಇದು ಮುಂದಿನ ಕ್ರಮ ಕಠಿಣವಾದರೂ ಪ್ರತಿರೋಧ ಹೆಚ್ಚಿರುವುದಿಲ್ಲ

 ಆಭಾರ ವ್ಯಕ್ತಪಡಿಸುವಲ್ಲಿ ಜಿಪುಣತೆ ತೋರಬಾರದು ಏಕೆಂದರೆ ಎದ್ದು ತೋರುವ ಇಂತಹ ಘಟನೆಗಳು ಪರಸ್ಪರ ಸಂಬಂಧಗಳನ್ನು ಹೆಚ್ಚು ಸಧೃಡಗೊಳಿಸುತ್ತವೆ.

 ಉದಾರತೆ ಸಾಧ್ಯವಾದಲ್ಲಿ ವ್ಯಕ್ತಪಡಿಸುವುದು ಒಂದು ಐಛ್ಚಿಕ ಗುಣ

 ಕ್ಷಮೆ ಒಂದು ಗುಣವಾಗಲಿ ಏಕೆಂದರೆ ಕ್ಷಮಿಸುವ ಮೂಲಕ ನಿಮ್ಮ ವೈರತ್ವದ ಅಂತ್ಯವಾಗುತ್ತದೆ ಮನ ಶಾಂತವಿರುತ್ತದೆ.

 ಈ ಎಲ್ಲಾ ಗುಣಗಳನ್ನು ಬೆಳೆಸಿಕೊಳ್ಲಬೇಕೆಂದರೆ ಮನೋಲ್ಲಾಸಿತಗೊಂಡಿರಬೇಕು...ಅಂದರೆ ’ಎಂಡಾರ್ಫಿನ್’ ರಕ್ತದಲ್ಲಿ ತುಂಬಿರಬೇಕು,,,ಅಂದರೆ ಮನಸು ನಗುತಿರಬೇಕು....ಬಹುಸುಲಭದ ದೇಹಾರೋಗ್ಯದ ಈ ಮಾರ್ಗ ಅನುಸರಿಸೋಣ....ನಗೋಣ ನಗುತಾ ಬಾಳೋಣ....
ಇಲ್ಲಿ ಡಿ.ವಿ.ಜಿ.ಯವರ ಒಂದು ಕವಿತೆಯ ಸಾಲುಗಳು (ಮನಮುಕ್ತಾ ರ ಸಹಾಯದಿಂದ) ನಿಮ್ಮೆಲ್ಲರಿಗೆ....ನಗುವಿನ ಮಹತ್ವ ಸಾರೋದಕ್ಕೆ..
ನಗುವನ್ನು ಕುರಿತು ಡಿ. ವಿ. ಜಿ.ಯವರ ಕವನ.
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ,
ನಗುವ ಕೇಳುತ ನಗುವುದತಿಶಯದ ಧರ್ಮ,
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳ್ಳೊ- ಮ೦ಕುತಿಮ್ಮ

http://www.youtube.com/watch?v=Fv7CVQ5077Q


Friday, October 22, 2010

ಶತ ವಿಕ್ರಮನ – ಅಸಹಾಯಕತೆ ಯೋ ಅಪ್ರಬುಧ್ಧತೆಯೋ

(ಚಿತ್ರ ಕೃಪೆ: ಚಂದಮಾಮ ಅಂತರ್ಜಾಲ) 

ಕಪಿಲಾಪುರದ ಕಥೆಯಾಕೋ ಈ ಮಧ್ಯೆ ಇಡೀ ಭೂಭಾಗದಲ್ಲಿ ನಗೆಪಾಟಲಾಗತೊಡಗಿತ್ತು...ಪ್ರಜೆಗಳು ಕಪಿಲಾಪುರ ಏಕೆ ಹೀಗೆ ದಿಕ್ಕಿಲ್ಲದೆ ನಡೆಯುತ್ತಿದೆ ? ತಿಳಿಯದಾಗಿತ್ತು. ಭೇತಾಳನ ಬೆನ್ನಹಿಂದೆ ಬಿದ್ದಿದ್ದ ಶತವಿಕ್ರಮ ಯಾಕೋ ಕಿಂಕರ್ತವ್ಯ ಮೂಢನಾಗಿದ್ದಾನೆ...ಪುರಕ್ಕೆ ಹಿಡಿದ ಭೂತವನ್ನು ಬಿಡಿಸೋದೋ..ಪುರವನ್ನು ಕಾಡುತ್ತಿದ್ದ ಪಾಳೆಯಗಾರರನ್ನು ನಿಗ್ರಹಿಸೋದೋ..ಹದಗೆಟ್ಟ ರಸ್ತೆಗಳಲ್ಲಿ ನಾರುವ ಕೊಳೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದೋ..ತನ್ನ ಕೋಟೆಯನ್ನು ಕಾಯುವ ಕೊತ್ವಾಲರ ಸ್ವಯಂಘೋಷಿತ ಸ್ವಾಯತ್ವಕ್ಕೆ ಸವಾಲಾಗಿ ಅವರನ್ನು ನಿಯಂತ್ರಿಸುವುದೋ,,,,ಹೋ,,,!!!  confusionnoo…
ಆದ್ರೂ ಶತ ವಿಕ್ರಮ ಭೇತಾಳನ್ನು ಹುಡುಕಲು ಹೊರಟೇಬಿಟ್ಟ.... ಮರಗಳೇ ಇಲ್ಲವಾಗಿವೆ...ಸರಿಯಾಗಿ ಮಳೆಕಾಣದೆ..ಬೀಡು ಮರಳುಗಾಡಾಗಿದೆ....ಭೂಮಿ ಅಗೆದು ಧೂಳೆಬ್ಬಿಸಿದ ಬಂಡವಾಳಶಾಹಿ ಭೂ ಕೊರೆತ ಧಣಿಗಳು ನಿರಂಕುಶರಾಗಿದ್ದಾರೆ...ಹೆಚ್ಚು ಹೇಳಿದ್ರೆ.. “ಲೋ ದಾಸಯ್ಯ ನಿನ್ನ ಹರಿಕಥೆ ಸುಮ್ನೆ ಮುಂದುವರೆಸ್ತೀಯೋ ಇಲ್ಲ ನಿನ್ನ ಕಾಲಕೆಳಗಿರೋ ಕಂಬಳೀನ ನಿನಗೆ ಕೊಟ್ಟದ್ದನ್ನ ಮತ್ತೆ ಪರಿಶೀಲಿಸಿ ಅದನ್ನ ಎಳೀಯೋದೋ ಹೇಳು” ಅಂತ ಧಮ್ಕಿ ಹಾಕ್ತಾರೆ....

ಶತವಿಕ್ರಮನಿಗೆ ಈಗ ಪೀಕಲಾಟಕ್ಕೆ ಇಟ್ಕೊಳ್ತು...ಅವನ ರಾಜ್ಯದ ಮರಗಳೆಲ್ಲ ಬೋಳಾಗೋಕೆ ಶುರುಹಚ್ಚಿದ್ವು, ಭೂಮಿ ಟೊಳ್ಳಾಗುತ್ತಿತ್ತು, ಬಿಟ್ರೆ ಭೇತಾಳ ಬಂದು ಸಿಂಹಾಸನಾನ ಆವ್ರಿಸ್ಕೊಂಡು ಮುಂದಿನ ಶತವಿಕ್ರಮನಾಗಿಬಿಡ್ತಾನೆ...ಏನು ಮಾಡೋದು..? ಎಲ್ಲಿ ಈ ಭೇತಾಳ....?

ತಾನು ಆಸೆ ಆಮಿಷ ಒಡ್ಡಿ, ಜನರು ತಮ್ಮಲ್ಲೇ ಹೊಡೆದಾಡಿ ಪ್ರಾಣಹಾನಿ ಮಾಡಿಕೊಂಡು ಚುನಾಯಿಸಿ ಕಳುಹಿಸಿದ ವಿರೋಧಪಕ್ಷದವರನ್ನ ರಾಜಿನಾಮೆ ಕೊಡಿಸಿ.....ಅಲ್ಲಿ ಅವನನ್ನೋ ಅಥವಾ ಇನ್ನೊಬ್ಬನ್ನನ್ನೋ ಹಣ ಚೆಲ್ಲಿ ಮತ್ತೆ ಗೆಲ್ಲಿಸಿ ತನ್ನ ಪಕ್ಷದ ಬಲ ಹೆಚ್ಚಿಸ್ಕೊಂಡ್ರೆ......ಈಗ ಪಕ್ಷದವರೇ ಗುಂಪಾಗಿ ಗುಳೆ ಹೋಗಿದ್ದಾರೆ...ನನ್ನ ಆಸ್ಥಾನ ಸೌಧದ ಸುತ್ತ ಮಾಟ ಮಂತ್ರ ನಡೆದಿದೆ...ಇದು ಆ ಭೇತಾಳನ ತಂತ್ರಾನೇ ಇರ್ಬೇಕು...ಎಲ್ಲಿ ಹುಡ್ಕೋದು ಇವನನ್ನ,,,?? ಛೇ...

ಕೊನೆಗೆ, ಲೋಕಪಾಲರ ಅಫೀಸಿನ ಹಳೆಯ ಹಗರಣಗಳ ಧೂಳು ತಿನ್ನುತ್ತಾ ಬಿದ್ದಿದ್ದ ಕಡತಗಳ ಒಂದು ಕೊಠಡಿಯ ಸೀಲಿಂಗ್ ಫ್ಯಾನಿಗೆ ಜೋತು ಬಿದ್ದಿದೆ ಅಂತ ನಂಬಲರ್ಹ ಮೂಲಗಳಿಂದ ತಿಳಿದು ಅಲ್ಲಿಗೆ ಹೋಗಿ ಲೋಕಪಾಲರು ಬರೋಕೆ ಮುಂಚೆ ಅಲ್ಲಿಂದ ಭೇತಾಳನ್ನ ಎತ್ತಿ ಹೆಗಲಿಗೇರಿಸಿ .. ಶಾಶಕರ ಭವನದ ಹಿಂದಿನ ಶವಾಗಾರಕ್ಕೆ ಹೊರಟ....

ರಾಜ್ಯದಲ್ಲಿ ಏನೇ ನಡೆದರೂ ಜಪ್ಪಯ್ಯ ಎನ್ನದ, ಗಣಿ-ಧಣಿ ಎಂಬ ಜೋಡಿ-ಪದ ಕೇಳಿದೊಡನೇ ಕೆರಳಿ ಕೇರಳದ ಸಿಂಹ (ಹಹಹ ಕೇರಳದಲ್ಲಿ...ಸಿಂಹ...ಎಂಥಾ ವಿರೋಧಾಭಾಸ ಎನ್ನಬೇಡಿ...!!) ಆಗುವ ವಿರೋಧ ಪಕ್ಷಗಳಂತೆ ಅಲ್ಲಿವರೆಗೂ ಸುಮ್ಮನಿದ್ದ ಭೇತಾಳ ಮಾತನಾಡತೊಡಗಿತು.

“ಎಲೈ ಶತ ವಿಕ್ರಮ, ...ನಿದ್ದೆ ಮಾಡುತ್ತಿದ್ದ ನಿನಗೆ ಹಾಗೋ ಹೀಗೋ .... ಸಿಂಹಾಸನ ಸಿಕ್ಕಿ ಬಿಡ್ತು....ನಿನ್ನ ಮುತ್ತಜ್ಜ ಇಮ್ಮಡಿ ವಿಕ್ರಮ ಬಹು ಮೇಧಾವಿ ಅವನ ಹೆಸರಿನಿಂದಲೇ ನಿನಗೆ ಈ ಪಟ್ಟವೂ ಹೇಗೋ ಸಿಕ್ತು ..ಆದ್ರೆ ಇದನ್ನು ಉಳಿಸಿಕೊಳ್ಳಲು ಉಳುವವನ ಮನೆ ಬಗ್ಗೆ ಮಾತನಾಡಿ ಈಗ ಅವನ ಬುಡಕ್ಕೇ ನೇಗಿಲು ಹರಿಸಿದ್ದೀಯಾ...ನಿನಗೆ ತರವಲ್ಲ..., ಅಲ್ಲಯ್ಯ ..ರೈತನಿಗೆ ಉಳುವ ಭೂಮಿ ಕೊಡಬೇಕಾದ ನೀನು ಕೊರೆದ ಭೂಮಿ ಕೊಡೋದ್ರಲ್ಲೇ ಇಡೀ ವ್ಯವಸ್ಥೆಯನ್ನ ದಿಕ್ಕಾಪಾಲು ಮಾಡ್ತಿದ್ದೀಯಲ್ಲ ತರವೇ..? ನನಗೆ ಕಥೆ-ಗಿಥೆ ಹೇಳೋ ಮೂಡಿಲ್ಲ... ನಿನ್ನದೇ ಕಥೆಯಿಂದ ಆಯ್ದ ಭಾಗಗಳ ನನ್ನ ಸಂಶಯಗಳ ಕಂತೆಯನ್ನು ನೀನು ನೂರು ಜನ್ಮ ಎತ್ತಿದರೂ ಬಿಡಿಸಲಾರೆ...ಆದ್ರೂ ಕಂತು ಕಂತಿನಲ್ಲೇ ..ಕೇಳು.., ಪ್ರಯತ್ನಿಸು ಉತ್ತರಿಸೋಕೆ....."
ಭೇತಾಳ ವಿರೋಧ ಪಕ್ಷದವರಂತೆ ಸಮಸ್ಯೆ ಬಗೆ ಹರಿಸುವುದರ ಬಗ್ಗೆ ಸಲಹೆ ಕೊಡುವುದನ್ನು ಬಿಟ್ಟು ಪುಃಖಾನು ಪುಃಖ ಪ್ರಶ್ನೆಗಳ ಬಾಣಬಿಡಲಾರಂಭಿಸಿದ.

"ನಿನ್ನ ಕಪಿಲಾಪುರದ ಸಿಂಹಾಸನಾರೂಢನಾಗುವ ಸಮಯದ ನಿನ್ನ ದುಡಿವ ಅನ್ನದಾತನ ಉದ್ಧಾರದ ದೀಕ್ಷೆಗೇಕೆ ತಿಲಾಂಜಲಿ ಕೊಟ್ಟೆ..? ಕಪಿಲಾಪುರದ ಅವ್ಯವಹಾರ ಬಯಲಿಗೆ ತರೋ ಲೋಕಪಾಲನಿಗೆ ಕೇವಲ ಇಲಿ, ಬೆಕ್ಕುಗಳನ್ನು ಹಿಡಿಯುವ ಅಧಿಕಾರ ಕೊಟ್ಟು ತೋಳ ಮತ್ತು ಕಪಟ ನರಿಗಳ ದಂಡಿಸುವ ಹಕ್ಕನ್ನು ಏಕೆ ಕೊಡಲಿಲ್ಲ..? "

"ವಿರೋಧಪಕ್ಷದವರನ್ನು ಆಮಿಷವೊಡ್ಡಿ ನೀನು ಸೆಳೆದದ್ದು ಲೋಕ ನೋಡಿದೆ.., ಅದೇ ಕೆಲಸದ ಕೇವಲ ಒಂದಂಶ ವಿರೋಧಿಗಳು ಮಾಡಿದಾಗ ಏಕೆ ಸಿಡಿಮಿಡಿಯಾದೆ..? ಎಲ್ಲ ದೇವಾನು ದೇವತೆಗಳೂ ಮೀಟಿಂಗ್ ಮಾಡೋ ಮಟ್ಟಕ್ಕೆ ...ದೇವಸ್ಥಾನಗಳ ಸುತ್ತಿಬಿಟ್ಟೆ....??!! ಅಧಿಕಾರ ಹಣಕ್ಕೆ ಆಸೆಪಟ್ಟು ಮತ್ತೆ ಗೆಲ್ಲುವ ಲವಲೇಶವೂ ನಂಬಿಕೆಯೇ ಇರದ ಸದಸ್ಯರನ್ನು ನೀನು ಸೆಳೆದ್ದುದರಲ್ಲಿ ಘನತೆಯೇನೂ ಇಲ್ಲ ..ಆದರೆ ನಿನ್ನವರ ಗುಂಪೊಂದು ಸಿಡಿಯಿತು ಅಂದರೆ ನಿನ್ನ ಆಳ್ವಿಕೆಯಲ್ಲಿ ಏನೋ ಲೋಪವಿದೆಯೆಂದು ಅರಿತರೂ ಮತ್ತೆ ನಿನ್ನ ಹಳೆಯ ಚಾಳಿಗಿಳಿದು...ಈಗಲೇ ನೆಲಕಚ್ಚಿರುವ ನಿನ್ನ ನಾಡಿನ ಘನತೆ ಪ್ರಜೆಗಳ ಆಶಯವನ್ನು ಪಾತಾಳಕ್ಕೆ ತುಳಿಯುವುದು ನ್ಯಾಯವೇ..??......

ಇದನ್ನು ತಿಳಿದೂ ನೀನು ಹೇಳದೇ ಹೋದರೆ ನಿನ್ನ ಪಕ್ಷದವರೆಲ್ಲಾ ಗುಂಪು-ಗುಂಪು ಗುಂಪುಗಾರಿಕೆ ಮಾಡಿ ನಿನ್ನ ಆಸ್ಥಾನವನ್ನ ಅಲ್ಲಾಡಿಸಿಬಿಟ್ಟಾರು ಜೋಕೆ,,,,”

ಶತವಿಕ್ರಮನಿಗೆ ರೇಗಿತು...“ನೀನು ಕೇಳಿದ್ದಕ್ಕೆಲ್ಲಾ ಉತ್ತರಕೊಡೋಕೆ ಜವಾಬ್ದಾರಿಯುತ ಅಧಿಕಾರಿಯಲ್ಲ ...ನನ್ನ ರಾಜ್ಯಾಳ್ವಿಕೆಯನ್ನು ಕಾಪಾಡಿಕೊಳ್ಳೋದು ನನಗೆ ಮೊದಲ ಕರ್ತವ್ಯ ಉಳಿದ ಮಿಕ್ಕಿದ್ದೆಲ್ಲ ಗೌಣ,,,,” ಎಂದಾಗ ...

“ಮೂಢ, ನೀನು ಹೀಗೇ ವಿರೋಧಪಕ್ಷಕ್ಕೂ ಉತ್ತರಕೊಡದೇ ಪ್ರಜೆಗಳ ಸಮಸ್ಯೆಗಳನ್ನೂ ಪರಿಹರಿಸದೇ ಉಡಾಫೆಯಲ್ಲೇ ಕಾಲ ಕಳೆ...!! ಈಗ ನೀನು ಮೌನ ಮುರಿದೆ...ಅದಕ್ಕೆ ಇದೋ ನಾನು ಹೊರಟೆ...” ಎನ್ನುತ್ತಾ ಶತವಿಕ್ರಮನ ಹೆಗಲಿಂದ ಮಾಯವಾಯಿತು.

Monday, October 18, 2010

ವಂಡರ್-ಕಣಯ್ಯಾ...ವಂಡರ್ರು...!!!

.

ವಂಡರ್-ಕಣಯ್ಯಾ...ವಂಡರ್ರು...!!!
ಮಗ ಹೇಳ್ದ...”ಅಲ್ಲಪ್ಪ ವೆಂಡರ್ ಕಣ್ಣು...!! “



ನಾನಂದೆ “ಹೌದಾ... ??”


“ಹೌದು ವೆಂಡರ್ ಅಂದ್ರೆ ಮಾರಾಟಗಾರ ಅಂತಲ್ಲವಾ..?? ಹಂಗಂದ್ರೆ...??!!”


ಅದೇ ಕಣಯ್ಯ ನಮ್ಮ ಮನೆಗೆ ಪೇಪರ್ ಹಾಕೋ ಶಿವು “ಏನೋ ಬರ್ದಿದ್ದೀನಿ..ಒಂದು ಬುಕ್ಕು....ಓದಿ ಸಾ...ಅದನ್ನೇಯ್ಯಾ ಮೊನ್ನೆ ಬಿಡುಗಡೆ ಮಾಡ್ಸಿದ್ದು..ನಿಮ್ಮನ್ನ ಇನ್ವೈಟ್ ಮಾಡಿದ್ದು...” ಅಂತ ಹೇಳಿದ್ದನಲ್ಲಾ...ಆ ಪುಸ್ತಕಾನೇ...ಹೂಂ ಮತ್ತೆ...


ನಾನು ಯೋಚನೆಮಾಡತೊಡಗಿದೆ......


ಅಲೆ ಇವನಾ..ಅಲ್ಲ ಕಣ್ ಕಣ್ ಬಿಟ್ಕೊಂಡ್ ತಿಂಗಳಾ ತಿಂಗಳಾ ಪೇಪರ್ ದುಡ್ಗೆ ಮನೆ ಹತ್ರ ಬರ್ತಿದ್ದೋನಿಗೆ,,,ಫೋಟೋಗ್ರಫಿ ಪ್ರಶಸ್ತಿ ಬಂದೈತೆ ಅಂದಾಗ .”ಏಯ್..ಏನೋ ಬಿಡು ಯಾರೂ ಇರ್ಲಿಲ್ಲವೇನೋ ಒಳ್ಲೆ ಫೋಟೋಗ್ರಾಫರ್ಸು ಕಾಂಪಿಟೆಶನಲ್ಲಿ” ಅಂದ್ಕೊಂಡೆ...ಆವೊತ್ತು...ಮತ್ತೆ ಅದೇ ಶಿವು..ಇಂಗ್ಲೀಷೋರ್ನೂ ಮೆಚ್ಚಿಸೋ ಹಾಗೆ ಫೋಟೋ ತೆಗ್ದು ಮತ್ತೆ ತಗೊಂಡಾಗ ಪ್ರಶಸ್ತೀನಾ..


ಊಂ...ಏನೋ ಐತಪ್ಪ ಈ ಹುಡ್ಗನ ಹತ್ರ ಪ್ರತಿಭೆ ಥರದ್ದು ಅನ್ಸಿತ್ತು...ಮತ್ತೆ ಮತ್ತೆ ಸುಮಾರು ಪ್ರಶಸ್ತಿ ಬಂದಿದ್ದು ..ನೋಡಿ ಹೌದಪ್ಪ ..!! ಒಪ್ಕೋ ಬೇಕಾದ್ದೇ ಅನ್ನಿಸ್ತು....


ಅದೆಲ್ಲ ಸರಿ ಮೊನ್ನೆ ಮೊನ್ನೆ ಬರಿಯೋಕೆ ಶುರು ಮಾಡಿದ್ದಿನಿ ಅಂದಂಗಿತ್ತು...ಮತ್ತೆ ನೋಡಿದ್ರೆ......... ???


ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ], ಧಾರವಾಡ ಇವರು ನೀಡುವ ಬೇಂದ್ರೆ ಗ್ರಂಥ ಬಹುಮಾನ-೨೦೧೦, ಕ್ಕೆ ಕೆ.ಶಿವು ರವರ “ವೆಂಡರ್ ಕಣ್ಣು” ಆಯ್ಕೆಯಾಗಿದೆ


ಅಂತ ಸುದ್ದಿ..ಓದಿ....ಓ...!!!! ತಕಳಪ್ಪಾ...ಇಲ್ಲೂ ಬಾರಿಸ್ಬಿಟ್ಟ ಸಿಕ್ಸರಾ....!!! ಅನ್ಸಿ...ಫೋನಾಯಿಸಿಯೇ ಬಿಟ್ಟೆ...


ನಮಸ್ಕಾರ ಶಿವು (ನನಗೇ ಗೊತ್ತಿಲ್ಲದೇ..ಸ್ವಲ್ಪ ಗಾಂಭೀರ್ಯ ಮತ್ತೆ ಗೌರವ ತುಂಬಿತ್ತು ನನ್ನ ದನಿಯಲ್ಲಿ..!!)..ಅಭಿನಂದನೆಗಳು..ಕಣಪ್ಪಾ.....


ನಮಸ್ಕಾರ ಸಾ...(ಅದೇ ಮುಗ್ಧ ಮುಖ ಕಣ್ಣಮುಂದೆ ಬಂದಿತ್ತು) ಸೈಂಟಿಸ್ಟ್ ರಾಮಣ್ಣನೋರು ಅಲ್ವಾ.. ಎಲ್ಲಾ ನಿಮ್ಮ ಆಶೀರ್ವಾದ ಸಾ...ಏನೋ,, ಬರ್ದೆ..ಅವರಿಗೆ ಇಷ್ಟ ಆಯ್ತು...ಎಲ್ಲಾ ಹಿರಿಯರ ಆಶೀರ್ವಾದ...... ತುಂಬಾ ಥ್ಯಾಂಕ್ಸು ಸಾ ಫೋನ್ ಮಾಡಿದ್ದಕ್ಕೆ ...ನಿಮ್ಮಂತೋರ ಆಶೀರ್ವಾದ ಹೀಗೇ ನಮ್ಮ ಮೇಲೆ ಇರ್ಲಿ ಸಾ...


ಹೌದು..ಸಂಶಯವೇ ಬೇಡ...ಅದೇ..ಶಿವು..ಹಾಗೇ ಇದ್ದಾನೆ...ಅದೇ ವಿನಯ..ಮುಗ್ಧತೆ...ಅನ್ನಿಸಿತು ನನಗೆ ..ಇಲ್ಲಾಂದ್ರೆ..ಒಂದು ಮಾಮೂಲಿ ಬಹುಮಾನ ಬಂದ್ರೆ ಸಾಕು ಈಗಿನ ಯುವಕರ ತಲೆ ಒಂದು ಕಡೆ ನಿಲ್ಲೊಲ್ಲ....


ಆಯ್ತಪ್ಪ..ಶುಭವಾಗಲಿ...ನಿನ್ನ ಕೃಷಿ ಹೀಗೇ ಫಲ ನಿಡ್ತಾ ಇರ್ಲಿ....


ಫೋನಿಟ್ಟೆ.....ಟೇಬಲ್ ಮೇಲೆ ಇಟ್ಟಿದ್ದ ಶಿವು ನ “ವೆಂಡರ್ ಕಣ್ಣು” ಕೈಗೆತ್ತಿಕೊಂಡೆ......


Saturday, October 9, 2010

ತೋರು ನಾಡು ದೇಶ ಏನೆಂದು

ಚಿತ್ರ ಕೃಪೆ: http://www.tailoredtanning.co.uk/vitamind.htm


ನೇಸರನೇರುವತ್ತ ಕತ್ತಲು ಸರಿಯುತಿದೆ
ಎಲ್ಲೋ ಯಾರೋ ಮಲಗಿ ಏಳುವಂತಿದೆ
ಘೋರವರಿತ ಬೆಚ್ಚಿಕನಸ ಕರಗುವಂತಿದೆ
ಎತ್ತಲೆತ್ತಲೋ ಇತ್ತು ಕತ್ತಲುರುಳುವಂತಿದೆ

ಸೂರ್ಯಹೊರಳಲು ಸಾಕು ನರಿ ಊಳಿಡಲು
ತೋಳಗಳ ಹಿಂಡು ಕುರಿದೊಡ್ಡಿಗೆ ನುಸುಳಲು
ನಾಯಿಗಳು ಮಲಗಿವೆ ತಿಂದು ಕವಿದು ಅಮಲು
ತಿಂದ ಧಣಿಗಳು ಮತ್ತೆ ತಿನ್ನಲೆಂದೇ ಬಿಟ್ಟು ಬಿಳಲು

ಕೊಟ್ಟು ಮತ ಆಸೆ ಆಮಿಶವೆಲ್ಲಕೆ ಬಲಿಯಾಗಿ ಅಂದು
ನಿಮ್ಮ ನಿಂತ ನೆಲಕುಸಿಯೆ ಸರಿಯಿಲ್ಲವೇ ಇಂದು?
ವಿದ್ಯೆವಿವೇಕವಿದ್ದೂ ಅವಿವೇಕಿಯ ಗೆಲಲು ಬಿಟ್ಟದ್ದು
ರೈತನ ಕೊಲುವರು ಗಣಿ ಅರಣ್ಯ ದೋಚುವರೆನ್ನುವುದು
ಹೊಣೆಗೇಡಿತನಕ್ಕೆಡೆಯಿಲ್ಲ ಅಳುವುದು ಸಲ್ಲ, ಬಿದ್ದರೆ ಗುದ್ದು

ಏನಿಲ್ಲ ನಮ್ಮಲ್ಲಿ, ಬುದ್ಧಿ, ಶಕ್ತಿ, ನಿಸರ್ಗ ಸಂಪತ್ತು?
ಎಂತಹ ವಿಪತ್ತಿಗೂ ಇದೆ ಎದೆಯೊಡ್ಡುವ ತಾಕತ್ತು
ಎಲ್ಲ ಶಕ್ತಿ ಒಟ್ಟುಗೂಡಿಸುವ ಯೋಜನೆಯೊಂದು ಸಾಕು
ಕತ್ತಲಜೊತೆ ಗುದ್ದಾಟ, ಸಾಕು ನಿರಂತರ ಕಸರತ್ತು
ತಡಬೇಡ ತಿಳಿಯಲಿ ನಾಡು ದೇಶ ಏನೆಂದು ಜಗತ್ತು

Sunday, October 3, 2010

ಆಕಾಶ ಗಂಗೆಯಲ್ಲಿ ಮತ್ತೊಂದು ಭೂಮಿ!!

ಚಿತ್ರ ಕೃಪೆ:ಅಂತರ್ಜಾಲ

“ಗ್ಲೀಜಿ-581 G” ಎಂಬ ಭೂಮಿಯಂತಹ ಗ್ರಹ ಸೌರವ್ಯೂಹದಿಂದ ಸುಮಾರು 20 ಪ್ರಕಾಶವರ್ಷ (ಲೈಟಿಯರ್ಸ್) ದೂರದಲ್ಲಿ ಇದೆಯೆಂದು ದಿನಾಂಕ 29 ಸೆಪ್ಟಂಬರ್ ನ ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನಾಶನಲ್ ಸೈನ್ಸ್ ಫೌಂಡೇಶನ್ ನ ಎಡ್ವರ್ಡ್ ಸೀಡೆಲ್ ಪ್ರಕಾರ ಈ ಗ್ರಹ ಜೀವಿಗಳನ್ನು ಹೊಂದಿದೆ ಎನ್ನುವುದು ತಿಳಿದು ಬಂದರೆ ಮಾನವ ಕಂಡು ಹಿಡಿದ ವೈಜ್ಞಾನಿಕ ವಿಸ್ಮಯಗಳಲ್ಲಿ ಇದು ಪ್ರಮುಖವಾಗುತ್ತದೆ. ಈ ಗ್ರಹ ಭೂಮಿಗಿಂತ ಮೂರು ಅಥವಾ ನಾಲ್ಕು ಪಟ್ಟು ಹೆಚ್ಚು ತೂಕವಿದ್ದು ತನ್ನ ಕಕ್ಷೆಯ ಮೇಲೆ ತಿರುಗುವುದು ಬಹುಶಃ ಅನುಮಾನವಾಗಿದೆ ಹಾಗಾಗಿ ಈ ಗ್ರಹದ ಒಂದು ಭಾಗ ಯಾವಾಗಲೂ ಸೂರ್ಯ (ಅಲ್ಲಿನ ಸೂರ್ಯ..ನಮ್ಮ ಸನ್ ಅಲ್ಲ..ಹಹಹ!!!) ನ ಕಡೆ ಇದ್ದು ಬೆಳಕಿರುತ್ತೆ ಮತ್ತೊಂದು ಪಾರ್ಶ್ವ ಕತ್ತಲಲ್ಲಿ...!! ಇದರಿಂದ ಸೂರ್ಯನೆಡೆಯ ಭಾಗದ ಶಾಖ ಸುಮಾರು 160 ಡಿಗ್ರಿ ಸೆಲ್ಸಿಯಸ್ ಇದ್ದು ಕತ್ತಲ ಭಾಗದಲ್ಲಿ -12 ರಿಂದ 21ಡಿ.ಸೆ. ಇರಬಹುದೆಂದು ಅಂದಾಜಿಸಲಾಗಿದೆ. ಗುರುತ್ವಾಕರ್ಷಣ ಶಕ್ತಿಯಿರುವ ಗ್ರಹವಾಗಿದ್ದು ಇಲ್ಲಿ ಘನಭಾಗವಿದ್ದು ಭೂಮಿಯಂತಿರಬಹುದು ಮತ್ತು ನೀರೂ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದು ಅಂಶ ಗೊತ್ತೆ...ಈ ಭೂಮಿ ತನ್ನ ಸೂರ್ಯನಿಂದ ಬಹು ಹತ್ತಿರವಿದ್ದು ಅದರ ಸುತ್ತ ಪ್ರದಕ್ಷಿಣೆಗೆ ಕೇವಲ 37 ದಿನ ಬೇಕಾಗುತ್ತೆ..!!! ಅಂದರೆ ಆ ಭೂಮಿಯ ಒಂದು ವರ್ಷ ನಮ್ಮ 37 ದಿನಕ್ಕೆ ಸಮ....!!!!



ಈ ಗಾಗಲೇ ನಮ್ಮ ರಾಜ್ಯದ ಹಲವಾರು ಸಹೋದರರು ಅಪ್ಪ-ಮಕ್ಕಳು ತಮ್ಮ ಅಸ್ಟ್ರೋನಾಟ್ ಸೂಟುಗಳನ್ನ ರೆಡಿಮಾಡಿಸ್ಕೋತಾ ಇದ್ದಾರಂತೆ...ಯಾವುದೇ ಭೂ ಕಾಯಿದೆ ಇಲ್ಲ...ಗಣಿ ಕಾಯಿದೆ ಇಲ್ಲ ಎಲ್ಲಾ ಫ್ರೆಶ್ ಫ್ರೆಶ್...ಯಾರಿಗುಂಟು..ಯಾರಿಗಿಲ್ಲ.....ಜೈ-ಗ್ಲೀಜಿ,,,,,