Monday, June 1, 2009

ಹಾಡು..ವಿತ್ ಮ್ಯೂಜ಼ಿಕ್

ತರಬೇತಿ ಶಿಬಿರದ ಕ್ಲಾಸಿನ ಎರಡು ಪಿರಿಯಡ್ ನಂತರ practicalsನ ಒಂದು experiemntಗೆ ತಯಾರಿಯಾಯ್ತು ಸತತ ಮೂರು ಘಂಟೆಯ ಕಾರ್ಯಕ್ರಮದ ನಂತರ ಚಹಾ ಬಂತು lab ಗೆ. ಎಲ್ಲರೂ ಚಹಾ ಮತ್ತು ಬಿಸ್ಕತ್ ಸವಿಯನ್ನು ಸವಿಯುತ್ತಾ ಹರಟೆಗೆ ಕುಂತೆವು. ಶಶಿ, ರಾಜ್, ಮುನೀರ್, ಜೋಸೆಫ್, ಸುಧಾ, ರಮ್ಯಾ, ಶರ್ಮಿಲಾ ಎಲ್ಲ ಉದ್ದನೆಯ lab ಟೇಬಲ್ಲಿನ ಎರಡೂ ಬದಿಯಲ್ಲಿ ಹರಟಲು ಕುಂತೆವು.
“ರಮ್ಯಾ, ರೋಸಿ ಎಲ್ಲೇ..?? ಆಮೇಲೆ ಬಂದು practicals ನಲ್ಲಿ ಏನ್ಮಾಡಿದ್ರಿ?? ಅಂತ ತಲೆ ತಿನ್ತಾಳೆ..ಅವಳಿದ್ದಳಲ್ಲಾ.. ನಮ್ಮ experiemnt preparatory ಯಲ್ಲಿ ??” ಸುಧಾ ಕೇಳಿದಳು ತನ್ನ ರೂಂ ಮೇಟ್ ಬಗ್ಗೆ ರಮ್ಯಾನ ವಿಚಾರಿಸುತ್ತಾ.
“ಇಲ್ಲೇ ಇದ್ದಳಲ್ಲಾ...ಏನೋ ಲಿಬ್ರರೀಲಿ ಕೆಲಸ ಇದೆ ಅಂತ ಹೇಳ್ತಿದ್ದಳು..ಹೋಗಿದ್ದಾಳೆ ಅನ್ಸುತ್ತೆ..”.ಎಂದಳು.
“ಲೋ ಮುನೀರ್ ಸಂಗೀತದ ಜೋಕ್ ಹೇಳ್ದಂತಲ್ಲಾ ರಾತ್ರಿ ರೂಂನಲ್ಲಿ...ಆ ಜೋಕು ಹೇಳೋ..” ಗೋಗರೆದ ಶಶಿ.
ಸುಧಾ, ಶರ್ಮಿಲಾ, ರಾಜ್, ಜೋಸೆಫ್ ಎಲ್ಲ...”ಹೇಳೋ..ಹೇಳೋ..please “ ಅಂತ ಗೋಗರೆದರು.
“ಸ್ವಲ್ಪ ಇರ್ರೋ..ರೋಸೀನೂ ಬರ್ಲಿ...” ಸ್ನೇಹಿತೆ ಪರ ರಮ್ಯಾ ಕೇಳಿಕೊಂಡಳು.
“ನೋಡ್ರೋ..ಜೋಕೊಳಗೆ ಜೋಕು ಬೇಕಂದ್ರೆ...ಅವಳು ಬರೋದಕ್ಕೆ ಮುಂಚೇನೇ ಹೇಳ್ತೀನಿ...ನೀವೇ ನೋಡೀರಂತೆ ಮಜಾನ...” ಅಂತ ಮುನೀರ್ ಜೋಕ್ ಹೇಳೋಕೆ ಶುರು ಮಾಡ್ದ
(ಅವನು ಹೇಳಿದ್ದು ಹೀಗೆ)
ಯಾವುದೋ important ವಿಷಯವನ್ನು ತನ್ನ ಅಣ್ಣನ ಹತ್ರ ಚರ್ಚಿಸೋವಾಗ, ಪಾಪು ತನ್ನ ಅಮ್ಮನಿಗೆ- “ಅಮ್ಮ ನಾನು ಸುಸು ಮಾಡ್ಬೇಕು...ಅಮ್ಮ ನಾನು ಸುಸು ಮಾಡ್ಬೇಕು” ಅಂತ ಒಂದೇ ರಂಪ ಶುರು ಹಚ್ಕೊಂಡ...
“ಲೋ..ಬಂಟಿ ಎಸ್ಟು ಸಲ ಹೇಳಿಲ್ಲ? ನೀನು ದೊಡ್ಡವನಾಗ್ತ ಇದ್ದೀಯ..ಎಲ್ಲರ ಮುಂದೆ ಹಾಗೆ ಸುಸು..ಸುಸು ಅಂತ ಹೇಳ್ಬಾರ್ದು ಅಂತ...” ಗದರಿದಳು ಬಂಟಿ ಅಮ್ಮ
“ಥೂ ಹೋಗಮ್ಮ...ನನಗೆ ಅವಸ್ರ ಆಗಿದೆ..ನೀನು..ನೋಡಿದ್ರೆ ಹಾಗೆ ಹೇಳ್ಬೇಡ ಹೀಗೆ ಹೇಳ್ಬೇಡ ಅಂತೀಯ..ಮೊದಲು ಈ ಚಡ್ಡಿ ಬಿಚ್ಚು ನಾನು ಸುಸು ಮಾಡಿ ಬರ್ತೀನಿ” ಅಂದ..
ಅವನ ಅಮ್ಮ ಚಡ್ಡಿ ಹುಕ್ಸ್ ತೆಗೆದು – “ಹೋಗೋ.ಅವಸ್ರ ಇವನಿಗೆ ..ಎನ್ನುತ್ತಾ ಅವನ ಕುಂಡಿಗೆ ಪ್ರೀತಿಯಿಂದ ತಟ್ಟಿ..”
ಸುಸು ಮಾಡಿ ಬಂದ ಬಂಟಿ “ಈಗ ಹೇಳಮ್ಮಾ” ಎಂದ ವಿಧೇಯನಂತೆ..
“ನೋಡು..ಸುಸು..ಸುಸು ಅಂತ ಎಲ್ಲರ ಎದುರು ಹೇಳ್ಬಾರ್ದು..”
“ಮತ್ತೆ ನನ್ಗೆ ಅವಸ್ರ ಆದ್ರೆ...” ಹುಬ್ಬೇರಿಸಿದ ತನ್ನ ಆತಂಕ ತೋಡಿಕೊಳ್ತಾ..
“ಆಗ ನನಗೆ ಮಾತ್ರ ಗೊತ್ತಗೋ ಹಾಗೆ...’ನಾನು ಹಾಡ್ಬೇಕು..ನಾನು ಹಾಡ್ಬೇಕು’ ಅಂತ ಹೇಳು..” ಎಂದಳು.

ಹೀಗಿರಬೇಕಾದರೆ ಒಂದ್ಸರ್ತಿ ಬಂಟಿಯ ದೂರದ ಚಿಕ್ಕಪ್ಪ ಚಿಕ್ಕಮ್ಮ ಅಜ್ಜ ಅಜ್ಜಿ ಎಲ್ಲರೂ ಮನೆಗೆ ಬಂದಿದ್ದರು. ಎಲ್ಲ ಗಹನವಾದ ವಿಷಯವೊಂದರ ಬಗ್ಗೆ ಮಾತು-ಕತೆಯಲ್ಲಿದ್ದಾಗ ಶುರುವಾಯ್ತು ಬಂಟಿ ಬಡ-ಬಡಿಕೆ...”ಅಮ್ಮಾ..ನಾನು ಹಾಡ್ಬೇಕು..ಅಮ್ಮಾ ನಾನು ಹಾಡ್ಬೇಕು..” ಅಂತ..
“ಲೋ ಸ್ವಲ್ಪ ಇರೋ ಏನೋ ಮಾತ್ನಾಡ್ತಾ ಇದ್ದೀವಿ ನಾವು..” ಅವನ ಅಮ್ಮ ಗದರಿದಳು..
ಬಂಟಿ.. “ಥೂ ಹೋಗಮ್ಮ ನಾನು ಹಾಡ್ಲೇ ಬೇಕು...” ಎನ್ನತೊಡಗಿದ
ಇದನ್ನೇ ಗಮನಿಸುತ್ತಿದ್ದ ಅಜ್ಜ... “ಬಾರಪ್ಪಾ ಪುಟ್ಟ..ನೀನು ನಿಧಾನವಾಗಿ..ನನ್ನ ಕಿವೀಲಿ ಹೇಳು ಬಾ ಹಾಡು...” ಎಲ್ಲ ನಗತೊಡಗಿದಾಗ ರಮ್ಯಾ ನಗುತ್ತಾ..ಹೇಳಿದಳು.. “ಬಂಟಿ ಹಾಡು ಅಜ್ಜನಿಗೆ ಹೇಗನ್ನಿಸ್ತಂತೆ..??”
ಜೋಕನ್ನು ಬೇಕಂತಲೇ ನಿಧಾನವಾಗಿ ಹೇಳಿದ ಮುನೀರ್..ಅದು ಮುಗಿಯುವ ಹೊತ್ತಿಗೆ ರೋಸಿ ಲ್ಯಾಬಿನೊಳಕ್ಕೆ ಬಂದಳು..
ಎಲ್ಲರೂ ನಕ್ಕರು...ನಗುತ್ತಾ ಸುಧಾ ಕೇಳಿದಳು.. “ಲೇ ರೋಸಿ ಎಲ್ಲೇ ಹೋಗಿದ್ದೇ ??”

ಶರ್ಮಿಲಾ ಹೇಳಿದಳು - “ಲೇ..ಅವಳು ಹಾಡು ಹೇಳಿ ಬರ್ತಿದ್ದಾಳೆ....” ಘೊಳ್ ಎಂದು ಎಲ್ಲ ನಗತೊಡಗಿದಾಗ ರೋಸಿಗೆ ರೇಗಿತ್ತು..
“ಯಾಕ್ರೇ..ನನಗೆ ಹಾಡೋಕೆ ಬರೊಲ್ಲ ಅಂದ್ಕೊಂಡಿದ್ದೀರಾ...??”
ಮತ್ತೆ ಜೋರಾಗಿ ನಕ್ಕರು ಎಲ್ಲ...
“ಯಾಕ್ರೋ ..? ಇದ್ರಲ್ಲಿ ನಗೋದೇನಿದೆ..?? ಹಾಡಿ ತೋರಿಸಲಾ ನಾನು...ಎಷ್ಟು ಇಂಪಾಗಿ ಹಾಡ್ತೀನಿ ಗೊತ್ತಾ..ನಮ್ಮೂರ್ನಲ್ಲಿ ಗಣೇಶನ ಹಬ್ಬದಲ್ಲಿ ಸ್ಕೂಲಿನ ಎಲ್ಲ ಸಮಾರಂಭದಲ್ಲಿ ಹಾಡೀದೀನಿ ಗೊತ್ತಾ...??”
ಮತ್ತೆ ಜೋರಾಗಿ ನಗು..
ಮುನೀರ್ ಕೇಳ್ದ ನಗ್ತಾನೇ.. “ರೋಸೀ..ನೀನು ಸೋಲೋ ಹಾಡ್ತಿಯೋ..ಡ್ಯೂಯೆಟ್ಟೋ..??” ಎಲ್ಲರೂ ಮತ್ತೆ ನಗಲಾರಂಭಿಸಿದರು..
“ಯಾಕ್ರೋ ನಗ್ತೀರ ..ನನಗೆ ಸೋಲೋನೇ ಇಷ್ಟ.. ಆದ್ರೆ ಡೂಯೆಟ್ಟ್ಗೆ ಒಳ್ಳೆ ಪಾರ್ಟ್ನರ್ ಸಿಕ್ರೆ ..ಖಂಡಿತಾ ಹಾಡ್ತೇನೆ...” ಮತ್ತೆ ಎಲ್ಲರೂ ಜೋರಾಗಿ ನಗಲಾರಂಭಿಸಿದರು..
“..ಆಗೊಲ್ಲ ಅಂದ್ಕೊಂಡಿದ್ದೀರಾ..?? ನೀವೆಲ್ಲಾ ಬನ್ನಿ ಬೇಕಾದ್ರೆ..ಎಲ್ಲರ ಒಟ್ಟಿಗೂ ಹಾಡಿ ತೋರಿಸ್ತೀನಿ...”
ಹೊಟ್ಟೆ ಹಿಡಿದು ಎಲ್ಲರೂ ನಗಲಾರಂಭಿಸಿದರು...
ಶಶಿ ಹೇಳ್ದ..ನಗ್ತಾ.. “ರೋಸಿ..ಸ್ಟೇಜ್ ಮೇಲೆ ಹಾಡ್ತೀಯಾ..?? Training course closing functionನಲ್ಲಿ ಚಾನ್ಸ್ ಕೊಡ್ಸೋಣ...” ಎಲ್ಲರ ನಗು ನಿಲ್ಲಲೇ ಇಲ್ಲ..ರೋಸಿ ಏನು ಹೇಳಬಹುದೆಂದು ಯೋಚಿಸುತ್ತಾ..
ರೋಸಿ ಹೇಳಿದಳು.. “ಕೊಡ್ಸಿ ಚಾನ್ಸ್ ಹಾಗಾದ್ರೆ..ಆರ್ಕೆಸ್ಟ್ರಾ ..ಮ್ಯೂಜಿಕ್ ಜೊತೆಗೇ ಹಾಡ್ತೀನಿ.. ನಾನು ಹಾಡೊದನ್ನ ನೋಡ್ತಾ ಎಲ್ಲಾ ದಂಗಾಗಬೇಕು..ಹಾಗೆ ಹಾಡ್ತೇನೆ...”.
ಅವಳ ಮಾತು ಸರಿಯಾಗಿ ಕೇಳಿಸಲೂ ಇಲ್ಲ ಅಷ್ಟೊಂದು ನಗು ತುಂಬಿ ಹೋಯ್ತು ಲ್ಯಾಬ್ ತುಂಬಾ...
ರೋಸಿಗೆ ..ಅರ್ಥವಾಗಲಿಲ್ಲ ಎಲ್ಲರೂ ಏಕೆ ಇಷ್ಟೊಂದು ನಗ್ತಾ ಇದ್ದಾರೆ ಅನ್ನೋದು. ಕಡೆಗೆ ಕೋರ್ಸ್ ಮುಗಿದು ಎಲ್ಲ ಹೊರಡುವ ಸಮಯ ಹತ್ತಿರವಾದಾಗ ರೋಸಿಗೆ ರಮ್ಯಾನೇ ಹೇಳಿರಬೇಕು..ಮುನೀರ್ ಹತ್ರ ಬಂದು ರೋಸಿ ಹೇಳಿದಳು ಹುಸಿ ಮುನಿಸು ತೋರಿಸುತ್ತಾ.. ಮುನೀರ್ ಬೆನ್ನಿಗೆ ಗುದ್ದುತ್ತಾ.... “ಮುನೀರ್ ತುಂಬಾ ಘಾಟಿ ಕಣೋ ನೀನು..ಎಲ್ಲ ಸೇರಿ ಫೂಲ್ ಮಾಡಿದ್ರಲ್ಲ ನನ್ನ..ಇರ್ಲಿ ನನಗೂ ಸಿಗುತ್ತೆ ಚಾನ್ಸು...”
“ಖಂಡಿತಾ ಕೊಡಿಸ್ತೀವಮ್ಮಾ ನಿನಗೆ ಹಾಡೋಕೆ ..” ಎಂದ ಮುನೀರ್ ಈಗ ಎಲ್ಲರ ಜೊತೆ ರೋಸೀನೂ ಮನತುಂಬಿ ನಕ್ಕಳು.

Friday, May 29, 2009

ಮತ್ತೆ ಶಾಲೆಗೆ


ಬೇಸಿಗೆ ರಜೆಗಳು
ಕಳೆದವು ದಿನಗಳು
ಪುಸ್ತಕವಿಲ್ಲದ ಕ್ಷಣಗಳು
ಮತ್ತೆ ಬಂದೆವು ಶಾಲೆಗೆ

ಅಕ್ಕನ ಊರಲಿ
ಭಾವನ ಜೊತೆಯಲಿ
ಕಳೆದೆವು ರಜೆಗಳು
ಮತ್ತೆ ಬಂದೆವು ಶಾಲೆಗೆ

ಜ಼ೂನಲಿ ಸಿಂಹವು
ಪಿಂಜರ ಬಂಧವು
ಪಕ್ಷಿಧಾಮವ ನೋಡಿ
ಮತ್ತೆ ಬಂದೆವು ಶಾಲೆಗೆ

ಹಳ್ಳಿಗೆ ಹೋದೆವು
ಮಳೆಯಲಿ ನೆಂದೆವು
ನೆಗಡೀಲೂ ನಲಿದೆವು
ಮತ್ತೆ ಬಂದೆವು ಶಾಲೆಗೆ

ಹೋಂ ವರ್ಕ್ ಗೋಜಿಲ್ಲದೆ
ಸ್ಕೂಲ್ ವರ್ಕ್ ತಲೆನೋವಿಲ್ಲದೆ
ಹೇಗೆ ಹೋದವು ದಿನಗಳು ಗೊತ್ತಿಲ್ಲದೆ
ಮತ್ತೆ ಬಂದೆವು ಶಾಲೆಗೆ

ಮತ್ತದೇ ಹತ್ತು ಕೇಜಿ ಭಾರ
ಧೂಳು-ಹೊಗೆ ರಸ್ತೆಗಳು ಘೋರ
ಇಲ್ಲಿ ರಸ್ತೆ ದಾಟಿದವನೇ ಶೂರ
ಅದಕೇ ಮತ್ತೆ ಬಂದೆವು ಶಾಲೆಗೆ

ರಜೆದಿನ ಮುಗಿದ ವ್ಯಥೆಯಿತ್ತು, ಈಗಿಲ್ಲ
ರವಿ, ಶಶಿ, ರಮಾ, ಷಫಿ ಮತ್ತೆ ಸೇರಿ
ಸ್ಕೂಲಿನ ಪಾರ್ಕಿನಲ್ಲಿ ಆಡುವೆವು ಕೂಡಿ
ಅದಕೇ, ಮತ್ತೆ ಬಂದೆವು ಶಾಲೆಗೆ

ರಜೆಗಳು ವಿರಾಮಕೆ
ಮೋಜು ಆರಾಮಕೆ
ಶಾಲೆ-ವಿದ್ಯೆ ಭವಿತಕೆ
ಹೌದು..ಅದಕೇ..ಮತ್ತೆ ಬಂದೆವು ಶಾಲೆಗೆ

Thursday, May 28, 2009

ಅವಳು ಹೊರಟು ನಿಂತಾಗ




ನಿನ್ನನಗಲಿ ಹೇಗಿರಲಿ
ನೀನಿಲ್ಲದೆ ನಾ ಜಾಲಿಯಲಿ
ನಿನ್ನ ನೆನಪು ಸದಾ ಕಾಡುವುದು
ನೀ ಬರುವರೆಗೆ ದಿನ ಓಡುವುದು
ಬೆಳ್ಳಂ ಬೆಳಗೇ ಎಚ್ಚರ ನೀನಿಲ್ಲದೆ
ನೆತ್ತಿಗೆ ರವಿಯಿರೆ ಮಲಗುವೆ ಭಯವಿಲ್ಲದೆ
ನಿನ್ನ ಕೈಯ ರುಚಿ ಕಾಡುವುದು
ಹಲಬಗೆ ಹೊರರುಚಿ ರುಚಿಸುವುದು
ಕೆಲಸಕೆ ಹೊರಟಾಗ ನೀ ಎದುರಾಗುವುದು
ಕೆಲಸದಿ ಆಪ್ತ ಸಹಾಯಕಿ ಕುಲುಕಾಡುವುದು
ಮನೆಗೆ ಬಂದರೆ ನೀನಿಲ್ಲದೆ ಬೋರು
ಮನೆಗೇ ಬರದೆ ಹೊರಗೇ ಪಾರ್ಟಿಜೋರು
ಬಂದರೂ ಮನೆಗೆ ನಿನ್ನ ನೆನಪು ನೂರು
ಮಲಗಿಬಿಡುವೆ ಆದರೂ ಅದು ನಿತ್ಯ ನವ ಸೂರು

ಸೂಚನೆ: ಏಳು (ಪಂಕ್ತಿ ಬಿಟ್ಟು ಪಂಕ್ತಿ) ಅವಳಿಗೆ ಹೊರಟು ನಿಂತಾಗ
ಏಳು (ಪಂಕ್ತಿ ಬಿಟ್ಟು ಪಂಕ್ತಿ) ಬ್ಲಾಗ್ ಪೋಸ್ಟಿಗೆ ಕುಂತಾಗ

ನೆನಪಾಗುವುದು


ಬೇಸಿಗೆ ಬಂದರೆ
ನಗರದಿ ತೊಂದರೆ
ಹಳ್ಳಿಯೆಡೆಗೆ ವಲಸೆಯ ನೆನಪಾಗುವುದು
ಮಾವಿನ ತೋಪಿನ
ತಣ್ಣನೆ ತಂಪಿನ
ಹುಳಿಮಾವಿನ ಸವಿ ನೆನಪಾಗುವುದು
ಅಮ್ಮನು ಕಟ್ಟಿದ ಬುತ್ತಿ
ಕೂಡಿ ತಿಂದೆವು ಭರ್ತಿ
ಮತ್ತೆ ಆಡಿದ ಮರಕೋತಿ ನೆನಪಾಗುವುದು
ನೆಳಲಲಿ ನಿದ್ದೆ
ಹೊಳೆಯಲಿ ಒದ್ದೆ
ಒಡನಾಡಿದ ದಿನಗಳ ನೆನಪಾಗುವುದು
ಆ ಹುಣ್ಣಿಮೆ ರಾತ್ರಿಲಿ
ಶಿವನಳ್ಳಿ ಜಾತ್ರೆಲಿ
ಬತಾಸು-ಚುರುಮುರಿಯ ನೆನಪಾಗುವುದು
ರಾತ್ರಿಯ ಬಯಲಾಟ
ಹನುಮನ ಹುಡುಕಾಟ
ಕೊನೆಗೆ ಸೀತೆಯ ವ್ಯಥೆ ನೆನಪಾಗುವುದು
ಅಜ್ಜ ಸುತ್ತ ಹತ್ತಳ್ಳೀಗೂ ಸಜ್ಜನ
ಊರವರಿಗೆ ಅವನೇ ಯಜಮಾನ
ಅವ ಸತ್ತ ದಿನ ಊರೇ ಅತ್ತದ್ದು ನೆನಪಾಗುವುದು
ಇಲ್ಲದಾಗಿವೆ ಹಸಿರುಗಳು
ಸಂಜೆಗೆ ಮರಳುವ ರಾಸುಗಳು
ನೆನಪುಮಾತ್ರ ಈಗ ನೆನಪಾಗುವುದು

Saturday, May 23, 2009

ಕಪಿಲಾಪುರದ ಕಥೆ



(ಆತ್ಮೀಯರೇ...ನನಗೆ ಬಹಳ ದಿನಗಳಿಂದ ಕಾಡಿಸುತ್ತಿದ್ದ ಒಂದು ವಿ.ವಿ. ಉಪಕುಲಪತಿ ನೇಮಕಾತಿಯ ಹಗರಣವೊಂದನ್ನು ಬಿಂಬಿಸಲು ಭೇತಾಳನ ಕಥೆಯನ್ನು ಆರಿಸಿಕೊಂಡೆ ಪ್ರಸ್ತಾವನಾ ಮಾಧ್ಯಮವಾಗಿ, ನಿಮ್ಮ ಟಿಕೆ ಟಿಪ್ಪಣಿಗಳಿಗೆ ತುಂಬು ಮನಸ್ಸಿನ ಸ್ವಾಗತ)

ಮಹಾನಗರ, ಅಸೆಂಬ್ಲಿ, ಪಾರ್ಲಿಮೆಂಟ್ ಹೀಗೆ ಎಲ್ಲಾ ಚುನಾವಣೇಲೂ ಹಿಗ್ಗಾ ಮುಗ್ಗಾ ಸೋತರೂ ಮತ್ತೆ ಬೈ ಎಲೆಕ್ಷನಿಗೆ ನಿಲ್ಲುವ ಸಾಹಸಮಾಡುವ ಪುಢಾರಿಯಂತೆ ಹಠಬಿಡದ ಶತವಿಕ್ರಮ ಸುಡುಗಾಡಿನ ಬಳಿಯ ಬಿಕೋ ಎನ್ನುವ ಧೂಳುತುಂಬಿದ ಬೀಡಲಿ ಒಂಟಿ ಭೂತದಂತೆ ನಿಂತಿದ್ದ ಮುಳ್ಳುಜಾಲಿ ಮರಕ್ಕೆ ನೇತುಬಿದ್ದಿದ್ದ ಭೇತಾಳನನ್ನು ಹೆಗಲಿಗೇರಿಸಿ ಕ್ರೆಮೆಟೋರಿಯಂನ ವಾಹನದ ಕಡೆ ನಡೆಯುತಿರಲು... ಮಹತ್ವದ ಮೀಟಿಂಗ್ ನಡೆಯುವಾಗ ಎಲ್ಲರನ್ನೂ ಡಿಸ್ಟರ್ಬ್ ಮಾಡುವ ಮೊಬೈಲ್ ರಿಂಗ್ ಟೋನಿನಂತೆ..ನಿರ್ಜೀವ ನಿಶ್ಶಬ್ದವಾಗಿದ್ದ ಭೇತಾಳ ಮಾತನಾಡತೊಡಗಿತು...
"ಎಲೈ ... ಕುರ್ಚಿಸಿಗಲೆಂದು ಆ ಪಕ್ಷದಿಂದ ಈ ಪಕ್ಷ, ಈ ಪಕ್ಷದಿಂದ ಉ ಪಕ್ಷಕ್ಕೆ ನೆಗೆಯುವ ಪುಢಾರಿಯಂತೆ ಏನೂ ನನ್ನಿಂದ ನಿನಗೆ ಸಿಗುವುದು ಆಸಾಧ್ಯವೆಂದು ತಿಳಿದರೂ ನನ್ನ ಬೆನ್ನ ಹಿಂದೆ ಬಿದ್ದಿರುವ ನಿನ್ನ ಸಣಕಲು ದೇಹಕ್ಕೆ ನನ್ನಹೆಣ ಭಾರದ ತೂಕದ ಅರಿವಾಗದಂತೆ ಕಥೆಯೊಂದನ್ನು ಹೇಲುತ್ತೇನೆ ಕೇಳು" ಎಂದಿತು
"ಕಪಿಲಾಪುರದ ಕಪಿಲಭಾಷೆ ಅಭಿವೃದ್ಧಿ, ಭಾಷೆಯ ಬೆಳವಣಿಗೆ ಮತ್ತು ಸಂಶೋಧನೆಗೆಂದೇ ಮೀಸಲಾಗಿದ್ದ ಕಂಪಲಾ ವಿಶ್ವವಿದ್ಯಾನಿಲಯ ಅದರ ಉಪಕುಲಪತಿ ಕಸ್ತೂರಮ್ಮ ತಮ್ಮ ಅಧಿಕಾರಾವಧಿಯಲ್ಲಿ ವಿಶ್ವ ವಿದ್ಯಾಲಯಕ್ಕೆ ಅಮೋಘ ಯಶಸ್ಸು ಮತ್ತು ಹೆಸರನ್ನು ತಂದುಕೊಟ್ಟರು. ಅವರ ಕಾರ್ಯಾವಧಿ ಮುಗಿಯಲು ಆ ಸ್ಥಾನಕ್ಕೆ ಕಂಪಲಾಪುರದ ಪ್ರತಿಭಾನ್ವಿತ ಪ್ರೊ.ನೀಲಾಂಬಿಕೆ ಮತ್ತು ಬತ್ತೊಬ್ಬ ನಾಡಿನ ಪ್ರತಿಭೆ ಡಾ. ಕುಸುಮಕ್ಕ ಬಹು ಚರ್ಚಿತ ಹೆಸರುಗಳಾಗತೊಡಗಿದವು. ಆದರೆ ಕಪಿಲಾಪುರದ ಮು.ಮಂ. ಕನಕಪ್ಪ ಮತ್ತು ಉ.ಮು.ಮಂ. ತಮ್ಮ ಜಾತಿಯವಳೆಂದು ನೀಲಾಂಬಿಕೆಯ ಹೆಸರು ಸೂಚಿಸಿದರೆ ಪಕ್ಷದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ಮುಖಂಡ ತಮ್ಮ ಜಾತಿಗೆ ಸೇರಿದ ಕುಸುಮಕ್ಕನನ್ನೇ ಆ ಸ್ಥಾನಕ್ಕೆ ನಿಯೋಜಿಸಬೇಕೆಂದು ಪಟ್ಟು ಹಿಡಿದುಕುಂತರು. ವಿಷಯವನ್ನು ನಿಷ್ಪಕ್ಷವಾಗಿ ವಿಚಾರಿಸಿ ತಮಗೆನೆಸಿದಂತೆ ನಿರ್ಧಾರ ತೆಗೆದುಕೊಳ್ಳಬಹುದೆಂದು ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿದ್ದ ಸರ್ಕಾರ ಕುಲಪತಿಗಳಿಗೆ ತನ್ನ ಇಂಗಿತವನ್ನು ಸೂಚಿಸಿತು. ಹಾಗೆ ನೋಡಿದರೆ ಇದು ಕುಲಪತಿಯವರ ಸ್ವತಂತ್ರ ಕಾರ್ಯವ್ಯಾಪ್ತಿಯ ವಿಷಯವಾದರೂ ಸರ್ಕಾರದ "ಇಂಗಿತ" ವೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಕಪಿಲಾಪುರದ ಅಲಿಖಿತ ನಿಯಮ. ಹೀಗಾಗಿ ಈಗ ಕುಲಪತಿಗಳಿಗೆ ತಮ್ಮ ಮನಸೇಚ್ಛೆ ಉಪ ಕುಲಪತಿಯನ್ನು ಆರಿಸುವ ಚಾನ್ಸ್ ಸಿಕ್ಕಿದ್ದು..ವೈದ್ಯ ಹೇಳಿದ್ದು ಹಾಲು-ಅನ್ನ ರೋಗಿ ಬಯಸಿದ್ದು ಹಾಲು-ಅನ್ನ ಎನ್ನುವಂತಾಯಿತು. ಸಿಕ್ಕ ಅವಕಾಶವನ್ನು ಚನ್ನಾಗಿಯೇ ಉಪಯೋಗಿಸಿಕೊಂಡ ಪಕ್ಕದ ಪ್ರಾಂತ ಇಂಪಲಾಪುರದವನಾದ ಕುಲಪತಿ ತನ್ನಜಾತಿಯ ಇಂಪು ಭಾಷೆಯ ಪಂಡಿತೆ ಇಂಪಲಾಪುರದ ಪ್ರೊ. ಸಂಪೂರ್ಣೇಶ್ವರಿಯನ್ನು ನೇಮಿಸಿಯೇ ಬಿಟ್ಟರು.
ವಿಷಯ ಕಪಿಲಾಪುರದ ಗಲ್ಲಿ-ಗಲ್ಲಿಗಳಲ್ಲಿ ಗುಲ್ಲೆಬ್ಬಿಸಿ ಕಪಿಲಭಾಷಾ ಜಾಗರಣಾ ಸಮಿತಿ ಹೋರಾಟಕ್ಕಿಳಿದು ಸರ್ಕಾರಕ್ಕೆ ಇರಿಸು-ಮುರಿಸಿಗೆ ಕಾರಣವಾಗತೊಡಗಿತು. ಚಳುವಳಿಯ ತೀವ್ರತೆ ಹೆಚ್ಚಾಗಿ, ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ವಿಚಾರಣೆಗೆ ಬಂದೇ ಬಿಡ್ತು..ನ್ಯಾಯಾಲಯ ಕಪಿಲ ಭಾಷಾ ವಿ.ವಿ.ಗೆ ಇಂಪು ಭಾಷೆಯ ಪ್ರೊಫೆಸರ್ ನೇಮಕಕ್ಕೆ ಆಕ್ಷೇಪಣೆ ಎತ್ತಿಹಿಡಿದು, ಸರ್ಕಾರದ ಕ್ರಮವನ್ನು ಅನೂರ್ಜಿತಗೊಳಿಸಿ, ಕಪಿಲಾಪುರದ ಅರ್ಹ ಪ್ರತಿಭಾವಂತರ ಪಟ್ಟಿಯೋದನ್ನು ಮಾಡಿ ಸರ್ಕಾರಕ್ಕೆ ಸೂಚಿಸಬೇಕೆಂದು ಆ ಕಾರ್ಯಕ್ಕೆಂದು ಆಯೋಗವೊಂದನ್ನು ರಚಿಸಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿ ಅದುವರೆಗೂ ಪೂರ್ವ ಉಪ ಕುಲಪತಿಯವರೇ ಮುಂದುವರೆಯಿವಂತೆ ತೀರ್ಪುಕೊಟ್ಟಿತು".
"ಎಲೈ ಶತ ವಿಕ್ರಮನೇ ನನಗೆ ಕೆಲವು ಸಂದೇಹಗಳಿವೆ...ಮೊದಲನೆಯದಾಗಿ - ಮು.ಮಂ., ಉ.ಮು.ಮಂ., ವಿ.ಪ.ನಾಯಕ ಇವರು ಪರಸ್ಪರ ಲೇವಾದೇವಿಯ (ಎಲ್ಲ ವಿಷಯಗಳಲ್ಲಿ ಮಾಡುವಂತೆ) ಅಧಾರದ ಮೇಲೆ ಯಾರನ್ನಾದರೂ ತಾವೇ ಆರಿಸಬಹುದಿತ್ತಲ್ಲ ಹಾಗೇಕೆ ಮಾಡಲಿಲ್ಲ..? ಎರಡನೇ ಸಂದೇಹ ..ಕುಲಪತಿ ತನ್ನ ಆದೇಶವನ್ನು ಯಾರಾದರೂ ಪ್ರಶ್ನಿಸಬಹುದು ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಉಪಯೋಗಿಸಲಿಲ್ಲವೇಕೆ?....ನಿನ್ನ ಮುತ್ತಾತಂದಿರಂತೇ..ನನ್ನ ಈ ಸಂದೇಹಗಳನ್ನು ತಿಳಿದೂ ಪರಿಹರಿಸದೇ ಹೋದರೆ ನಿನ್ನ ತಲೆ ತಾಲಿಬಾನ್ ಗಳು ಅಂಧ- ಧರ್ಮಾನುಕರಣೆ ಎಂಬ ಸುಳ್ಳು ನೆಪಗಳ ಹೆಸರಿನಲ್ಲಿ ವಿನಾಕಾರಣ ಅಮಾಯಕರ ಹತ್ಯೆಗೆ ಉಪಯೋಗಿಸುವ ಚೀನಾದ ಬಾಂಬಿನಂತೆ ಸಿಡಿದು ಹೋದೀತು, ಎಚ್ಚರಿಕೆ" ಎಂದು ತನ್ನ ಕೊರೆತವನ್ನು ಮುಗಿಸಿತ್ತು ಭೇತಾಳ.
"ಹೇ ತಾಳವಿಲ್ಲದ ಭೇತಾಳನೇ, ನನ್ನ ಇಷ್ಟಾಯಿಷ್ಟದ ಪರಿವೆಯೇ ಇಲ್ಲದೇ lecture ಕೊರೆಯುವ ಪ್ರೊಫೆಸರುಗಳಂತೆ ನಿನ್ನ ತಲೆಬುಡವಿಲ್ಲದ ಕಥೆ ಹೇಳಿ ..ಎಷ್ಟೇ ಮನವಿ ಮಾಡಿಕೊಂಡರೂ ಅರ್ಥವಾಗದೇ ಸಭಾ ಭವನದಲ್ಲೇ ಕಿರಿಚಾಡುವ ವಿರೋಧ ಪಕ್ಷದವರಂತೆ ಅರ್ಥವಿಲ್ಲದ ಮತ್ತು ವಿವೇಚನಾ ವಿಹೀನ ಪ್ರಶ್ನೆಯನ್ನು ಕೇಳಿದ್ದೀಯೆ,,ಪರವಾಗಿಲ್ಲ..ನನ್ನ ಉತ್ತರ ಕೇಳು...
ಮು.ಮಂ., ಉ.ಮು.ಮಂ. ಅಥವಾ ವಿ.ಪ.ನಾಯಕ ಇವರುಗಳಿಗೆ ಇದ್ದದ್ದು ಕಡೆಯ ವರ್ಷ ಹಾಗಾಗಿ..ಮುಂದೆ ಚುನಾಯಿತರಾಗಿ ಬರುವರೋ ಇಲ್ಲವೋ ಎಂಬುದು ಅವರಿಗೇ ಅನುಮಾನವಾಗಿತ್ತು.ಈ ಅಂಶ ನಿನ್ನ ಮಿದುಳಿಲ್ಲದ ಬುರುಡೆಗೆ ಹೇಗೆ ಹತ್ತೀತು..?.ಹೀಗಿರುವಾಗ ತಮ್ಮ ಆಯ್ಕೆಯನ್ನು ಮುಂದಿಟ್ಟಿದ್ದರು.
ಇನ್ನು ನಿನ್ನ ಎರಡನೇ ಸಂದೇಹ ಮೊದಲನೆಯದಕ್ಕಿಂತ ಮೂರ್ಖ ಸಂದೇಹ...ಏಕೆಂದರೆ..ಕಪಿಲಾಪುರದವರು ತಮ್ಮ ನೆಲದಲ್ಲಿ ಇಂಪಲಾಪುರ, ಟೆಂಪಲಾಪುರ ಅಲ್ಲದೇ ಮಂಪಲಾಪುರದವರನ್ನು ಬೇರೂರಲು ಬಿಟ್ಟಿದ್ದರು..ಹೀಗಿರುವಾಗ ಯಾವುದೇ ಪ್ರತಿರೋಧ ಇರುವುದಿಲ್ಲವೆಂದು ಕುಲಪತಿ ಅತಿ ಜಾಣತನ ತೋರಿದ್ದ..."
"ಭಲೇ ಶತವಿಕ್ರಮ ನಿನ್ನ ಬುದ್ಧಿವಂತಿಕೆ ಮೆಚ್ಚುವಂತಹುದು...ಆದರೆ ನೀನು ಮೌನ ಮುರಿದೆ..."
ಎನ್ನುತ್ತಾ ಕರ್ಕಶವಾಗಿ ಊಳಿಡುತ್ತಾ ನಾಯಿಯರೂಪ ಧರಿಸಿ ಶತವಿಕ್ರಮನ ಹೆಗಲಿಂದ ಜಾರಿ ಓಡಿ ಮತ್ತೆ ಜಾಲಿಮರದ ಕೊಂಬೆಗೆ ನೇತಾಡತೊಡಗಿತು.

(ಚಿತ್ರ: ಭೇತಾಳನ ಕಥೆಗಳು ಚಂದಮಾಮ ಪತ್ರಿಕೆ, ಅಂತರ್ಜಾಲ ಕೃಪೆ)

Friday, May 22, 2009

ಅಮ್ಮ


ಬೆಚ್ಚನೆ ಕರುಳಪ್ಪುಗೆ
ಬಳ್ಳಿಗೆ ಒಳಗೆ, ಹೊರಗೆ
ಡವ-ಡವಿಕೆ ಜೋಗುಳ ಒಳಗೆ
ಮೈದಡವಿ ಮಡಿಲಲಿ ಹೊರಗೆ
ಚರಾಚರದ ಸೃಷ್ಠಿಗೆ ಕಾರಣ ದೇವರು
ನನ್ನ ಹೊತ್ತು ಹೆತ್ತವಳು ತಾಯಿ ದೇವರು
ಲಾಲಿಸಿ-ಪಾಲಿಸಿ ಮಗುವ
ಮುದ್ದಿಸಿ ರಕ್ಷಿಸಿ ಬಾಲ್ಯವ
ನೋವಲಿ ‘ಅಮ್ಮಾ‘ ಎನಲು
ಓಡೋಡಿ ಬರುವಳು
ನನ್ನ ಮೇಲಿನ ಅಪ್ಪನ ಕೋಪಕೆ
ಆಡ್ಡಗೋಡೆಯಾಗಿ ನಿಲುವಳು
ನನಗೆ ಬೀಳಬೇಕಾದ ಏಟನು
ತಾನೇ ತಿನುವಳು
ನನ್ನ ನೋವಲಿ ತಾನೊಂದು
ಸಂತೈಸುವಳು
ನನ್ನಲ್ಪ ಗೆಲುವಲೂ
ಜಗಗೆದ್ದಂತೆ ನಲಿವಳು
ಬಾಲ್ಯ..ಶಾಲೆ ಆಗಲೂ ಮಗು
ಕಾಲೇಜು, ಉದ್ಯೋಗ
ಆಗಲೂ ಮಗು
ಮದುವೆಯಾಗಿ ತಂದೆಯಾದರೂ
ಅಪರೂಪಕ್ಕೆ ಹೋದಾಗ ಊರಿಗೆ
ದಢೂತಿದೇಹವ ಬಗ್ಗಿಸಿ ನಮಿಸಲು
ಅನ್ನುವಳಲ್ಲ ‘ಎಷ್ಟು ಸೊರಗಿರುವೆ ಮಗು?‘
ಅವಳಿಗೆ ನಾನು ಈಗಲೂ ಮಗು
ಅಮ್ಮ ಯಾವಾಗಲೂ ಅಮ್ಮ
ಮಗ ತಾತನಾದರೂ
ಅವಳಿಗೆ ಮಗುವೇ.

Tuesday, May 19, 2009

ಬಿಟಿಎಸ್-ಬಸ್ಸಿನಲ್ಲೊಮ್ಮೆ

ಸ್ನೇಹಿತರೇ,
ನನ್ನ ಭಾವ ಮಂಥನ ಬ್ಲಾಗಿನಲ್ಲಿ ಇದನ್ನ ಪೋಸ್ಟ್ ಮಾಡಿದ್ದೆ...ನನಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ, ಅರ್ಥವಾಗಲಿಲ್ಲ...ನನ್ನ ಲೇಖನದಲ್ಲಿ ಉಲ್ಲೇಖಿಸಿದ ವಿಷಯದ ಸಾಕ್ಷಾತ್ಕಾರ ಆಯ್ತೇ..??! ಒಂದು ಕ್ಷಣ ಚಿಂತೆ, ಮತ್ತೊಂದು ದಿನ ಆತಂಕ, ಹೀಗೇ..ಮುಂದುವರಿದು..ನನಗೆ ಏನೇನೋ ಅನುಮಾನಗಳು...ಮನಸ್ಸು ಒಪ್ಪಲಿಲ್ಲ..
ಈಗ ನನಗೆ ಕಾರಣ ಅರ್ಥವಾಗುತ್ತಿದೆ..ನನ್ನ ಈ ಬ್ಲಾಗನ್ನು ನೋಡಿದವರು ಬಹುಶಃ ಭಾವಮಂಥನವನ್ನು ನೋಡಿರಲಿಕ್ಕಿಲ್ಲ ..ಅಥ್ವಾ ನೋಡಿದ್ದರೂ...ಹಿಂದಕ್ಕೆ ಹೋಗಿರಲಿಕ್ಕಿಲ್ಲ ಅಂತ...ಅಥವಾ
ಹಾಗಂತ ಸಮಾಧಾನ ಮಾಡ್ಕೊಂಡು..ಇಲ್ಲಿ ಅದನ್ನೇ ಮತ್ತೆ ..ಗುಜರಾಯಿಸ್ತಾ ಇದ್ದೇನೆ...ಓದಿ..ಪ್ರತಿಕ್ರಿಯೆ ನೀಡಿದರೆ..ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಕನ್ನಡ ಪದಗಳನ್ನು ಕೇಳಿದಷ್ಟೇ ಆನಂದ ಆಗುತ್ತೆ ನನಗೆ....


ಬಹಳ ವರ್ಷಗಳ ನಂತರ ಬಿ.T.ಎಸ್ ನಲ್ಲಿ ಪ್ರಯಾಣ ಮಾಡೋ ಅವಕಾಶ ಕೂಡಿಬಂದಿತ್ತು. ಹಾಗೇ..ಈ ವರೆಗೆ ನನ್ನ ಸ್ನೇಹಿತರು ಹೇಳಿತ್ತಿದ್ದುದು ಅಕ್ಷರಶಃ ಸತ್ಯ ಅನ್ನೋದನ್ನು ತಿಳಿಯೋ ಅವಕಾಶ ಸಹಾ ಸಿಕ್ಕಿತ್ತು.
ಹತ್ತು ವರ್ಷಗಳಿಂದ ದೇಶದ ಪೂರ್ವೋತ್ತರ ಪ್ರಾಂತ್ಯದಲ್ಲಿ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದು ಈಗ ಒಂದು ವಾರದ ಹಿಂದೆ ಮದ್ರಾಸಿಗೆ ವರ್ಗವಾಗಿತ್ತು. ಆ ದಿವಸ ನನ್ನ ಸ್ಕೂಟರ್ ನನ್ನ ಗೆಳೆಯನೊಬ್ಬ ಕೆಲಸನಿಮಿತ್ತ ತೆಗೆದುಕೊಂಡು ಹೋಗಿದ್ದ, ಹಾಗಾಗಿ ಬಿ.ಟಿ.ಎಸ್ ನಲ್ಲಿ ಪ್ರಯಾಣಿಸುವ ಸದವಕಾಶ. ಸರಿ ಮೆಜೆಸ್ಟಿಕ್ಕಿಗೆ ಬಸ್ ಹತ್ತಿದೆ. ವಿಲ್ಸನ್ ಗಾರ್ಡನ್ ಬಳಿ ಬಂದಾಗ ಕಂಡಕ್ಟರಿಗೆ "ಮೆಜೆಸ್ಟಿಕ್" ಅಂತ ಹೇಳಿ ಹತ್ತರ ನೋಟು ಕೊಟ್ಟೆ. ಚಿಲ್ಲರೆ ಜೊತೆ ಟಿಕೆಟ್ ಕೊಟ್ಟರು ಕಂಡಕ್ಟರ್. ನನ್ನ ಮುಂದೆ ನಿಂತಿದ್ದ ಸಹ ಪ್ರಯಾಣಿಕನಿಗೆ ಕೇಳಿದೆ.."ಹಲೋ ಸರ್..ಈ ಬಸ್ಸು ಮಾರ್ಕೆಟ್ ಮಾರ್ಗ ಹೋಗುತ್ತಾ?"...ಆತ ಪಿಳಿ ಪಿಳಿ ಕಣ್ಣು ಬಿಟ್ಟ..ಬಹುಶಃ ಸರಿಯಾಗಿ ಕೇಳ್ಸಿರಲಿಕ್ಕಿಲ್ಲ ಅಂತ ಮತ್ತೆ ಕೇಳಿದೆ, ಮತ್ತದೇ ನಿರ್ಲಿಪ್ತ ಭಾವ...ಮತ್ತೆ..ಇಂಗ್ಲೀಷಿನಲ್ಲಿ ಕೇಳಿದೆ...ತಕ್ಷಣ.."ಯಾ..ಯಾ..ದಿಸ್ ಗೋಸ್ ವಯ ಮಾರ್ಕೆಟ್ ..ಬಟ್ ಯು ನೋ..ಐ ಡೋನ್ಟ್ ನೋ ಕನ್ನಡ" ಎಂದ..ನನಗೆ ಸ್ವಲ್ಪ ರೇಗಿತು..ಅಲ್ಲ ಇಂಗ್ಲೀಷಿನಲ್ಲಿ ಉತ್ತರ ಕೊಟ್ಟ..ಸರಿ..ಆದರೆ ನನಗೆ ಕನ್ನಡ ಬರೋದಿಲ್ಲ ಅಂತ..ರಾಜಾ ರೋಷವಾಗಿ ಅದೇ ಒಂದು qualification ಅನ್ನೋ ತರಹ ಹೇಳ್ತಿದ್ದಾನಲ್ಲ ಅಂತ. "ಮತ್ತೇನು ನೀವು ಇಂಗ್ಲೀಷಿನವರೇ...??" ಕೇಳಿದೆ..."pardon me..??" ನಾನು ಕೇಳಿದ ರೀತಿ ಮತ್ತು ನನ್ನ ಧಾಟಿಯಿಂದ ಅವನಿಗೆ ಅರ್ಥವಾದ್ರೂ ಆಗದವನಂತೆ..ಏನು ಹೇಳಿದ್ರಿ..? ಅನ್ನೋ ತರಹ ಕೇಳಿದ...ನನಗೂ ನನ್ನ ವರ್ತನೆ ಸರಿಯಿಲ್ಲ ಎನ್ನಿಸಿ.."I mean are you from north India..?" ಎಂದೆ. "ನೋ ಐಯಾಮ ಫ್ರಂ ಆಂಧ್ರ" ಎಂದ. "ಓ ಹಾಗೋ...ಎಷ್ಟು ವರ್ಷ ಆಯ್ತು ನೀವು ಬೆಂಗಳೂರಿಗೆ ಬಂದು..?" ಎಂದೆ. ಮತ್ತೆ ಪಿಳಿ..ಪಿಳಿ..ನಾನು ಮತ್ತೆ.."how long you are in Bangalore..?" ಅಂತ ಇಂಗ್ಲಾಂತರಿಸಿದೆ...ಅದಕ್ಕೆ ಆ ಮಹಾಶಯ.." last six years" ಎಂದ. "ಮತ್ತೆ ಅಲ್ಪ ಸ್ವಲ್ಪ ಕನ್ನಡ ಕಲಿತಿರಬೇಕಲ್ವಾ..?"..ಅವ ನನ್ನ ಮುಖ ನೋಡ್ದಾಗ ನನ್ನ ತಪ್ಪಿನ ಅರಿವಾಗಿ.."by now you must have learnt a little bit of Kannada.." ಎಂದೆ. " no..I dont feel it is necessary..every one here speaks English or Hindi" ಎಂದ. "ಎಲಾ ಇವನ..!! ಕನ್ನಡ ನಾಡಿನಲ್ಲಿ ಕನ್ನಡ ಕಲಿಯೋ ಅವಶ್ಯಕತೆ ಇಲ್ಲ ಅಂತ ಎಷ್ಟು ಧೀಟಾಗಿ ಹೇಳ್ತಾ ಇದ್ದಾನೆ..?"...ಎನ್ನಿಸಿ ನಾನು ಇನ್ನೇನೋ ಕೇಳೋ ಮೊದಲೇ..ಅವನ ಪಕ್ಕದಲ್ಲಿದ್ದಾತ (ಅವನ ಸ್ನೇಹಿತ ಅಂತ ಕಾಣುತ್ತೆ) .."ಇತನಿಕೇಮಂಟ ಮನಮು ಕನ್ನಡಂಲೋ ಮಾಟಲಾಡಲೇದನಿ ಕೋಪಮಾ..?"..ಅಂದ...ನನಗೆ ಪಿತ್ತ ನೆತ್ತಿಗೇರಿತ್ತು..."ಕಾದಂಡಿ..ಕರ್ನಾಟಕಮುಲೋ ವಾಸಿಂಚಿ..ಇಕ್ಕಡ ಉದ್ಯೋಗಂ ಚೇಸೇ ಮೀಕು..ಕನ್ನಡಂ ನೇರ್ಚುಕೋವಾಲಿ ಅನಿ ಅನಿಪಿಂಚಲೇದ..?" (ಆಲ್ರೀ..ಕರ್ನಾಟಕದಲ್ಲಿ ವಾಸಿಸಿ ಇಲ್ಲಿ ಉದ್ಯೋಗದಲ್ಲಿರೋ ನಿಮಗೆ ಕನ್ನಡ ಕಲಿಯಬೇಕು ಎನಿಸಿಲ್ಲವೇ..?) ಎಂದೆ. ನನ್ನ ತೆಲಗನ್ನು ಕೇಳಿ ಆತ ದಂಗಾದ ಅಂತ ಕಾಣುತ್ತೆ.." ಮೀಕು ಇಂತ ಬಾಗಾ ತೆಲುಗು ವಸ್ತುಂದೇ,,?? (ನಿಮಗೆ ಇಷ್ಟು ಚನ್ನಾಗಿ ತೆಲುಗು ಬರುತ್ತದಲ್ಲಾ)" ಅಂತ ಹುಬ್ಬೇರಿಸಿದ. ನಾನು ಕನ್ನಡದಲ್ಲೇ "ನಿಮ್ಮ ವಿಜಯವಾಡ ದಲ್ಲಿ ಕೆಲಸದ ಮೇಲೆ ಆರು ತಿಂಗಳು ಇರಬೇಕಾದಾಗ ಕಲಿತಿದ್ದೆ" ಎಂದೆ. ಅವನಿಗೆ ಆಶ್ಚರ್ಯ ವೆಂಬತೆ ಈ ಗ ನಾನು ಹೇಳಿದ್ದು ಅರ್ಥವಾಗಿತ್ತು. ನಮ್ಮ ಮಾತು ಆಲಿಸುತ್ತಿದ್ದ ಇನ್ನೊಬ್ಬ ಹಿರಿಯ ವಯಸ್ಸಿನವರು.."ಅದೇ ಸಾರ್ ನಾವು ಕನ್ನಡಿಗರು ಮಾಡೋ ತಪ್ಪು...ನಾವು ಬೇರೆಡೆ ಹೋದಾಗ ಅಲ್ಲಿನವರ ಜೊತೆ ವ್ಯವಹರಿಸಬೇಕಲ್ಲಾ ಅಂತ ಅವರ ಭಾಷೇನ ಕಲೀತೀವಿ..ಅದೇ ನಮ್ಮ ನಾಡಗೆ ಬರುವ ಬೇರೆ ಭಾಷಿಗರಿಗೆ ಆ ಭಾವನೆ ಬರುವಂತೆ ಮಾಡುವುದರಲ್ಲಿ ವಿಫಲರಾಗುತ್ತೇವೆ...ಈಗ ನಿಮ್ಮನ್ನೇ ತೆಗೆದುಕೊಳ್ಳಿ ...ಆತನಿಗೆ ಬರಲಿಲ್ಲ ಅಂತ ತೆಲಗಲ್ಲಿ ಸಂಭಾಷಿಸಿದಿರಿ...ಇವರಿಗೆ ಕನ್ನಡದ ಅವಶ್ಯಕತೆ ಎಲ್ಲಿ ಬರಬೇಕು ಹೇಳಿ ?..ಹೀಗೇನೇ ನಾವು ಪಂಚಭಾಷಿಗಳಾಗುತ್ತೇವೆ...ಬಹುತೇಕ ಕನ್ನಡಿಗರಿಗೆ ಹೊರಗಿನವನ ಜೊತೆ ಆಗಂತುಕ ಭಾಷೆಯಲ್ಲಿ ಮಾತನಾಡಿಸಿದರೆ ಆತ ಖುಷಿಪಡುತ್ತಾನೆ ಅಂತ ಅವರ ಭಾಷೆಯಲ್ಲೇ ವ್ಯವಹರಿಸುತ್ತೇವೆ, ಕನ್ನಡಿಗರೆಲ್ಲಾ ಹೀಗೇನೇ ಎಂದುಕೊಳ್ಳುವ ಹೊರಗಿನವರೂ ಇಲ್ಲಿಗೆ ಬರುವುದಕ್ಕೆ, ನೆಲಸುವುದಕ್ಕೆ, ವ್ಯವಹರಿಸುವುದಕ್ಕೆ ಹಿಂಜರಿಕೆಯಿರುವುದಿಲ್ಲ ಇದು ಒಂದು ರೀತಿ ಅಂತ್ಯ-ಹೀನ ವರ್ತುಲವಾಗುತ್ತೆ ..ಆ ವರ್ತುಲದಲ್ಲಿ ಕಳೆದು ಹೋಗುವುದು ಕನ್ನಡ...!!! ಇಂತಹ ವಾತಾವರಣದಲ್ಲಿ ಇಲ್ಲದಂತಾಗುವುದು ಕನ್ನಡಿಗರು...!! ಈ ದಿನ ಬೆಂಗಳೂರಿನಲ್ಲಿ ಕನ್ನಡಿಗರು ಶೇ. ೫೦-೬೦ ಮಾತ್ರ, ಅದರಲ್ಲಿ ಕನ್ನಡದಲ್ಲಿ ವ್ಯವಹರಿಸುವುದು ಶೇ. ೪೦-೫೦ ಮಾತ್ರ. ಯಾತಕ್ಕೆ ಹೇಳಿ..? ನಿಮ್ಮಂತಹ ಕನ್ನಡಿಗರೂ ವ್ಯವಹಾರದಲ್ಲಿ, ತಮ್ಮ ಮುಂದಿರುವವನಿಗೆ ಅನುಕೂಲವಾಗಲಿ ಅಂತ ಇತರ ಭಾಷೆನೇ ಬಳಸೋದರಿಂದ.. ಹಾಗಂತ ನಾವು ಕೆಲವು ಇತರ ಭಾಷಿಗರ ತರಹ ದುರಭಿಮಾನಿಗಳಗಬೇಕು ಎನ್ನುತ್ತಿಲ್ಲ.. ಆದರೆ ನಮ್ಮ ಭಾಷೆಯನ್ನು ಇತರರ ಮನಸೊಪ್ಪುವ ರೀತಿ ಅವರಿಗೆ ತೊಂದರೆಯಾಗದಂತೆ ಬೆಳೆಸುವುದರಲ್ಲಿ ತಪ್ಪೇನಿದೆ..? ನಾವು ಇತರ ದೇಶಕ್ಕೆ ಹೋದರೆ ಅಲ್ಲಿ ಅವರ ಭಾಷೆಯ ಪ್ರಾಥಮಿಕ ಹಂತದ ಪರಿಣಿತಿಯನ್ನು ಹೊಂದಬೇಕಂತೆ...ಇಲ್ಲಿ ..ಕಡೇ ಪಕ್ಷ ಕನ್ನಡದಲ್ಲಿ ಸಂಭಾಷಿಸಿದರೆ ಏನು ತಪ್ಪು..? ನಮ್ಮಲ್ಲೇ ಹುಳುಕಿದ್ದು..ಸರ್ಕಾರ..ಮತ್ತು ಇತರ ಭಾಷಿಗರನ್ನು ದೂರುವುದು ನಮಗೆ ಸಲ್ಲದು. ಕನ್ನಡಿಗರು ತಮ್ಮ ತಮ್ಮಲ್ಲಿಯೇ ಕನ್ನಡದಲ್ಲಿ ಮಾತನಾಡಿಕೊಳ್ಳುವರೇ..ಎಂದು ನನಗೆ ಸಂಶಯವಾಗುತ್ತದೆ..ಇನ್ನು ಬೇರೆಯವರನ್ನು ದೂರುವುದು ಸರಿಯಲ್ಲ.." ಹಿರಿಯರ ಈ ಸುದಿರ್ಘ ವಿಮರ್ಷೆ ಹಲವರಿಗೆ ಹಿಡಿಸಿತು..ಚಪ್ಪಾಳೆ ಸದ್ದು ಕೇಳಿ..ಅರೆರೆ..ಅಂದರೆ ಸುಮಾರು ಇಲ್ಲಿರುವ ಎಲ್ಲರಿಗೂ ಕನ್ನಡ ಬರುತ್ತೆ...ಮತ್ತೆ...ನಾನು ನನ್ನ ಸಹ ಪ್ರಯಾಣಿಕನೊಡನೆ ಮಾತನಾಡುವಾಗ ಇವರೆಲ್ಲ ಸುಮ್ಮನೆ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರಲ್ಲಾ..? ಅರ್ಥವಾಗಲಿಲ್ಲ!!!..ಏಕೆ ಕನ್ನಡಿಗರಿಗೆ ಈ ಕೀಳರಿಮೆ...ಎಂದು ಇವರಲ್ಲಿ ಭಾಷಾಭಿಮಾನ ಜಾಗೃತಗೊಳ್ಳುವುದು? ಕೆಲವೊಮ್ಮೆ ಪರಸ್ಪರ ಕನ್ನಡದವರೇ ಎಂದು ಗೊತ್ತಿದ್ದರೂ..ಬೇರೆಯವರ ಎದುರಲ್ಲಿ..ಮೂರನೇ ಭಾಷೆಯಲ್ಲಿ ವ್ಯವಹರಿಸುವುದಕ್ಕೆ ಕನ್ನಡಿಗರ ಈ ಕೀಳರಿಮೆ ಅಥವಾ ಸಂಕೋಚವೇ ಕಾರಣ ಎನ್ನಿಸುತ್ತದೆ. ನಮ್ಮನಮ್ಮಲ್ಲಿ ಹೆಮ್ಮೆಯಿಂದ ಕನ್ನಡದಲ್ಲಿ ವ್ಯವಹರಿಸುವ ಮೊದಲ ಪಾಠವನ್ನು ಕನ್ನಡಿಗರು ಮನನ ಮಾಡಿಕೊಳ್ಳಬೇಕು, ಇತರರೊಡನೆ ಮೊದಲಿಗೆ ಕನ್ನಡದಲ್ಲಿ ವ್ಯವಹರಿಸಿ, ಯಾರಿಗೆ ಗೊತ್ತು ಮುಂದಿರುವವರಿಗೆ ಕನ್ನಡ ಬರಬಹುದೇನೋ?..ಎಲ್ಲರೂ ಇದನ್ನು ಪರಿಪಾಲಿಸಿದರೆ ಬಹುಶಃ ಬೇರೆಭಾಷಿಗರು ಕನ್ನಡ ಕಲಿಯಲು ಮುಂದಾಗಬಹುದು..ಭಾಷೆ ಬೆಳೆಯುವುದು ಹೀಗೆ....