Friday, June 5, 2009

ಎಚ್ಚೆತ್ಕೋಳಿ ಮುಂಚೇಯ


ಗೆಳೆಯರೇ ಇದು ಚಿತ್ರ ಕವನ ಬ್ಲಾಗ್ ನಲ್ಲಿನ ಚಿತ್ರಕ್ಕೆ ಬರೆದ ಕವಿತೆ

ಎಚ್ಚೆತ್ಕೋಳಿ ಮುಂಚೇಯ
ಇಳಿವಯಸ್ನಾಗ್ ಇವ್ನಿ
ದುಡ್ಯಾಕಾಯ್ತದಾ ನಿಮ್ಮಂಗೆ ?
ನಾನಲ್ಲೇಯವ್ವಾ ಜವ್ನಿ
ಒಟ್ಟೆ-ಬಟ್ಟೆ ಕಟ್ಟೀ ಸಾಕ್ದೆ
ದುಡ್ದು ಮದ್ವಿ ಆಗೋಗಂಟ
ಅಗ್ಲು-ರಾತ್ರೆ ಅನ್ದೇ ತಂದಾಕ್ದೆ
ಸಾಲನೋವಾಲನೋ ಮಾಡಿ
ನೂರ್ ಸುಳ್ಳೇಳಿ ನಿನ್ಮದ್ವೆ ಮಾಡ್ದೆ
ಗಂಡ ಓದ್ಮ್ಯಾಲೆ ನಿನ್ನಣ್ಣನ್ ಓದ್ಗೆ
ಅಡ ಇಟ್ಟ ಬೂಮಿ ಬುಡ್ಸ್ಕಳ್ಳಾಕಾಗ್ದೆ
ಅವನ್ಮದ್ವೇಗೆ ಅಂತ ಮಾರಾಕ್ದೆ
ಅವ್ನೋ ಇದ್ ಮನೆ ಬರ್ಸ್ಕಂಡ
ಇದ್ಬದ್ದ ವಡ್ವೆ ಹೆಂಡ್ತಿಗಂತ ಕಸ್ಕೊಂಡ
ಇಳೀವಯಸ್ನಾಗೆ ಕಲ್ಲೊರ್ತೀನಿ
ಮರ ಚೆಕ್ಕೆ ಮಾರಿ ಒಟ್ಟೆ ಒರ್ಕೋತಿವ್ನಿ
ಕಡೀತಾ ಇಲ್ವೇ ನೀವೂ
ಅಣ್ಣೂ ಅಂಪ್ಲೂ ಕೊಡೋ ಮರಾವ
ಬಗೀತಾ ಇಲ್ವಾ ಅನ್ನಾಕೊಡೋ
ತಾಯಿ ಒಟ್ಟೇಯ....
ಜ್ವಾಕೆ ಕಣ್ರಪ್ಪಾ ಜ್ವಾಕೆ..!!
ಉರಿಸ್ಬ್ಯಾಡಿ ಅಡ್ದ್ ಒಟ್ಟೇಯಾ
ಏನ್ ಆಕ್ಕಂಡೀರಿ ಕಡ್ದ್ ಕಟ್ಟೇಯಾ?
ಅದ್ಕೇ ಏಳ್ತಿವ್ನಿ ಎಚ್ಚೆತ್ಕೊಳ್ಳಿ
ನೀವು ಎತ್ತೋರ್ಗೆ ಬೂತಾಯ್ಗೆ
ಮಾಡ್ದಂಗೆ ನಿಮ್ಮಕ್ಕ್ಳೂ ನಿಮಗೆ
ಮಾಡೋದಕ್ಕೆ ಮುಂಚೇಯಾ

Monday, June 1, 2009

ಹಾಡು..ವಿತ್ ಮ್ಯೂಜ಼ಿಕ್

ತರಬೇತಿ ಶಿಬಿರದ ಕ್ಲಾಸಿನ ಎರಡು ಪಿರಿಯಡ್ ನಂತರ practicalsನ ಒಂದು experiemntಗೆ ತಯಾರಿಯಾಯ್ತು ಸತತ ಮೂರು ಘಂಟೆಯ ಕಾರ್ಯಕ್ರಮದ ನಂತರ ಚಹಾ ಬಂತು lab ಗೆ. ಎಲ್ಲರೂ ಚಹಾ ಮತ್ತು ಬಿಸ್ಕತ್ ಸವಿಯನ್ನು ಸವಿಯುತ್ತಾ ಹರಟೆಗೆ ಕುಂತೆವು. ಶಶಿ, ರಾಜ್, ಮುನೀರ್, ಜೋಸೆಫ್, ಸುಧಾ, ರಮ್ಯಾ, ಶರ್ಮಿಲಾ ಎಲ್ಲ ಉದ್ದನೆಯ lab ಟೇಬಲ್ಲಿನ ಎರಡೂ ಬದಿಯಲ್ಲಿ ಹರಟಲು ಕುಂತೆವು.
“ರಮ್ಯಾ, ರೋಸಿ ಎಲ್ಲೇ..?? ಆಮೇಲೆ ಬಂದು practicals ನಲ್ಲಿ ಏನ್ಮಾಡಿದ್ರಿ?? ಅಂತ ತಲೆ ತಿನ್ತಾಳೆ..ಅವಳಿದ್ದಳಲ್ಲಾ.. ನಮ್ಮ experiemnt preparatory ಯಲ್ಲಿ ??” ಸುಧಾ ಕೇಳಿದಳು ತನ್ನ ರೂಂ ಮೇಟ್ ಬಗ್ಗೆ ರಮ್ಯಾನ ವಿಚಾರಿಸುತ್ತಾ.
“ಇಲ್ಲೇ ಇದ್ದಳಲ್ಲಾ...ಏನೋ ಲಿಬ್ರರೀಲಿ ಕೆಲಸ ಇದೆ ಅಂತ ಹೇಳ್ತಿದ್ದಳು..ಹೋಗಿದ್ದಾಳೆ ಅನ್ಸುತ್ತೆ..”.ಎಂದಳು.
“ಲೋ ಮುನೀರ್ ಸಂಗೀತದ ಜೋಕ್ ಹೇಳ್ದಂತಲ್ಲಾ ರಾತ್ರಿ ರೂಂನಲ್ಲಿ...ಆ ಜೋಕು ಹೇಳೋ..” ಗೋಗರೆದ ಶಶಿ.
ಸುಧಾ, ಶರ್ಮಿಲಾ, ರಾಜ್, ಜೋಸೆಫ್ ಎಲ್ಲ...”ಹೇಳೋ..ಹೇಳೋ..please “ ಅಂತ ಗೋಗರೆದರು.
“ಸ್ವಲ್ಪ ಇರ್ರೋ..ರೋಸೀನೂ ಬರ್ಲಿ...” ಸ್ನೇಹಿತೆ ಪರ ರಮ್ಯಾ ಕೇಳಿಕೊಂಡಳು.
“ನೋಡ್ರೋ..ಜೋಕೊಳಗೆ ಜೋಕು ಬೇಕಂದ್ರೆ...ಅವಳು ಬರೋದಕ್ಕೆ ಮುಂಚೇನೇ ಹೇಳ್ತೀನಿ...ನೀವೇ ನೋಡೀರಂತೆ ಮಜಾನ...” ಅಂತ ಮುನೀರ್ ಜೋಕ್ ಹೇಳೋಕೆ ಶುರು ಮಾಡ್ದ
(ಅವನು ಹೇಳಿದ್ದು ಹೀಗೆ)
ಯಾವುದೋ important ವಿಷಯವನ್ನು ತನ್ನ ಅಣ್ಣನ ಹತ್ರ ಚರ್ಚಿಸೋವಾಗ, ಪಾಪು ತನ್ನ ಅಮ್ಮನಿಗೆ- “ಅಮ್ಮ ನಾನು ಸುಸು ಮಾಡ್ಬೇಕು...ಅಮ್ಮ ನಾನು ಸುಸು ಮಾಡ್ಬೇಕು” ಅಂತ ಒಂದೇ ರಂಪ ಶುರು ಹಚ್ಕೊಂಡ...
“ಲೋ..ಬಂಟಿ ಎಸ್ಟು ಸಲ ಹೇಳಿಲ್ಲ? ನೀನು ದೊಡ್ಡವನಾಗ್ತ ಇದ್ದೀಯ..ಎಲ್ಲರ ಮುಂದೆ ಹಾಗೆ ಸುಸು..ಸುಸು ಅಂತ ಹೇಳ್ಬಾರ್ದು ಅಂತ...” ಗದರಿದಳು ಬಂಟಿ ಅಮ್ಮ
“ಥೂ ಹೋಗಮ್ಮ...ನನಗೆ ಅವಸ್ರ ಆಗಿದೆ..ನೀನು..ನೋಡಿದ್ರೆ ಹಾಗೆ ಹೇಳ್ಬೇಡ ಹೀಗೆ ಹೇಳ್ಬೇಡ ಅಂತೀಯ..ಮೊದಲು ಈ ಚಡ್ಡಿ ಬಿಚ್ಚು ನಾನು ಸುಸು ಮಾಡಿ ಬರ್ತೀನಿ” ಅಂದ..
ಅವನ ಅಮ್ಮ ಚಡ್ಡಿ ಹುಕ್ಸ್ ತೆಗೆದು – “ಹೋಗೋ.ಅವಸ್ರ ಇವನಿಗೆ ..ಎನ್ನುತ್ತಾ ಅವನ ಕುಂಡಿಗೆ ಪ್ರೀತಿಯಿಂದ ತಟ್ಟಿ..”
ಸುಸು ಮಾಡಿ ಬಂದ ಬಂಟಿ “ಈಗ ಹೇಳಮ್ಮಾ” ಎಂದ ವಿಧೇಯನಂತೆ..
“ನೋಡು..ಸುಸು..ಸುಸು ಅಂತ ಎಲ್ಲರ ಎದುರು ಹೇಳ್ಬಾರ್ದು..”
“ಮತ್ತೆ ನನ್ಗೆ ಅವಸ್ರ ಆದ್ರೆ...” ಹುಬ್ಬೇರಿಸಿದ ತನ್ನ ಆತಂಕ ತೋಡಿಕೊಳ್ತಾ..
“ಆಗ ನನಗೆ ಮಾತ್ರ ಗೊತ್ತಗೋ ಹಾಗೆ...’ನಾನು ಹಾಡ್ಬೇಕು..ನಾನು ಹಾಡ್ಬೇಕು’ ಅಂತ ಹೇಳು..” ಎಂದಳು.

ಹೀಗಿರಬೇಕಾದರೆ ಒಂದ್ಸರ್ತಿ ಬಂಟಿಯ ದೂರದ ಚಿಕ್ಕಪ್ಪ ಚಿಕ್ಕಮ್ಮ ಅಜ್ಜ ಅಜ್ಜಿ ಎಲ್ಲರೂ ಮನೆಗೆ ಬಂದಿದ್ದರು. ಎಲ್ಲ ಗಹನವಾದ ವಿಷಯವೊಂದರ ಬಗ್ಗೆ ಮಾತು-ಕತೆಯಲ್ಲಿದ್ದಾಗ ಶುರುವಾಯ್ತು ಬಂಟಿ ಬಡ-ಬಡಿಕೆ...”ಅಮ್ಮಾ..ನಾನು ಹಾಡ್ಬೇಕು..ಅಮ್ಮಾ ನಾನು ಹಾಡ್ಬೇಕು..” ಅಂತ..
“ಲೋ ಸ್ವಲ್ಪ ಇರೋ ಏನೋ ಮಾತ್ನಾಡ್ತಾ ಇದ್ದೀವಿ ನಾವು..” ಅವನ ಅಮ್ಮ ಗದರಿದಳು..
ಬಂಟಿ.. “ಥೂ ಹೋಗಮ್ಮ ನಾನು ಹಾಡ್ಲೇ ಬೇಕು...” ಎನ್ನತೊಡಗಿದ
ಇದನ್ನೇ ಗಮನಿಸುತ್ತಿದ್ದ ಅಜ್ಜ... “ಬಾರಪ್ಪಾ ಪುಟ್ಟ..ನೀನು ನಿಧಾನವಾಗಿ..ನನ್ನ ಕಿವೀಲಿ ಹೇಳು ಬಾ ಹಾಡು...” ಎಲ್ಲ ನಗತೊಡಗಿದಾಗ ರಮ್ಯಾ ನಗುತ್ತಾ..ಹೇಳಿದಳು.. “ಬಂಟಿ ಹಾಡು ಅಜ್ಜನಿಗೆ ಹೇಗನ್ನಿಸ್ತಂತೆ..??”
ಜೋಕನ್ನು ಬೇಕಂತಲೇ ನಿಧಾನವಾಗಿ ಹೇಳಿದ ಮುನೀರ್..ಅದು ಮುಗಿಯುವ ಹೊತ್ತಿಗೆ ರೋಸಿ ಲ್ಯಾಬಿನೊಳಕ್ಕೆ ಬಂದಳು..
ಎಲ್ಲರೂ ನಕ್ಕರು...ನಗುತ್ತಾ ಸುಧಾ ಕೇಳಿದಳು.. “ಲೇ ರೋಸಿ ಎಲ್ಲೇ ಹೋಗಿದ್ದೇ ??”

ಶರ್ಮಿಲಾ ಹೇಳಿದಳು - “ಲೇ..ಅವಳು ಹಾಡು ಹೇಳಿ ಬರ್ತಿದ್ದಾಳೆ....” ಘೊಳ್ ಎಂದು ಎಲ್ಲ ನಗತೊಡಗಿದಾಗ ರೋಸಿಗೆ ರೇಗಿತ್ತು..
“ಯಾಕ್ರೇ..ನನಗೆ ಹಾಡೋಕೆ ಬರೊಲ್ಲ ಅಂದ್ಕೊಂಡಿದ್ದೀರಾ...??”
ಮತ್ತೆ ಜೋರಾಗಿ ನಕ್ಕರು ಎಲ್ಲ...
“ಯಾಕ್ರೋ ..? ಇದ್ರಲ್ಲಿ ನಗೋದೇನಿದೆ..?? ಹಾಡಿ ತೋರಿಸಲಾ ನಾನು...ಎಷ್ಟು ಇಂಪಾಗಿ ಹಾಡ್ತೀನಿ ಗೊತ್ತಾ..ನಮ್ಮೂರ್ನಲ್ಲಿ ಗಣೇಶನ ಹಬ್ಬದಲ್ಲಿ ಸ್ಕೂಲಿನ ಎಲ್ಲ ಸಮಾರಂಭದಲ್ಲಿ ಹಾಡೀದೀನಿ ಗೊತ್ತಾ...??”
ಮತ್ತೆ ಜೋರಾಗಿ ನಗು..
ಮುನೀರ್ ಕೇಳ್ದ ನಗ್ತಾನೇ.. “ರೋಸೀ..ನೀನು ಸೋಲೋ ಹಾಡ್ತಿಯೋ..ಡ್ಯೂಯೆಟ್ಟೋ..??” ಎಲ್ಲರೂ ಮತ್ತೆ ನಗಲಾರಂಭಿಸಿದರು..
“ಯಾಕ್ರೋ ನಗ್ತೀರ ..ನನಗೆ ಸೋಲೋನೇ ಇಷ್ಟ.. ಆದ್ರೆ ಡೂಯೆಟ್ಟ್ಗೆ ಒಳ್ಳೆ ಪಾರ್ಟ್ನರ್ ಸಿಕ್ರೆ ..ಖಂಡಿತಾ ಹಾಡ್ತೇನೆ...” ಮತ್ತೆ ಎಲ್ಲರೂ ಜೋರಾಗಿ ನಗಲಾರಂಭಿಸಿದರು..
“..ಆಗೊಲ್ಲ ಅಂದ್ಕೊಂಡಿದ್ದೀರಾ..?? ನೀವೆಲ್ಲಾ ಬನ್ನಿ ಬೇಕಾದ್ರೆ..ಎಲ್ಲರ ಒಟ್ಟಿಗೂ ಹಾಡಿ ತೋರಿಸ್ತೀನಿ...”
ಹೊಟ್ಟೆ ಹಿಡಿದು ಎಲ್ಲರೂ ನಗಲಾರಂಭಿಸಿದರು...
ಶಶಿ ಹೇಳ್ದ..ನಗ್ತಾ.. “ರೋಸಿ..ಸ್ಟೇಜ್ ಮೇಲೆ ಹಾಡ್ತೀಯಾ..?? Training course closing functionನಲ್ಲಿ ಚಾನ್ಸ್ ಕೊಡ್ಸೋಣ...” ಎಲ್ಲರ ನಗು ನಿಲ್ಲಲೇ ಇಲ್ಲ..ರೋಸಿ ಏನು ಹೇಳಬಹುದೆಂದು ಯೋಚಿಸುತ್ತಾ..
ರೋಸಿ ಹೇಳಿದಳು.. “ಕೊಡ್ಸಿ ಚಾನ್ಸ್ ಹಾಗಾದ್ರೆ..ಆರ್ಕೆಸ್ಟ್ರಾ ..ಮ್ಯೂಜಿಕ್ ಜೊತೆಗೇ ಹಾಡ್ತೀನಿ.. ನಾನು ಹಾಡೊದನ್ನ ನೋಡ್ತಾ ಎಲ್ಲಾ ದಂಗಾಗಬೇಕು..ಹಾಗೆ ಹಾಡ್ತೇನೆ...”.
ಅವಳ ಮಾತು ಸರಿಯಾಗಿ ಕೇಳಿಸಲೂ ಇಲ್ಲ ಅಷ್ಟೊಂದು ನಗು ತುಂಬಿ ಹೋಯ್ತು ಲ್ಯಾಬ್ ತುಂಬಾ...
ರೋಸಿಗೆ ..ಅರ್ಥವಾಗಲಿಲ್ಲ ಎಲ್ಲರೂ ಏಕೆ ಇಷ್ಟೊಂದು ನಗ್ತಾ ಇದ್ದಾರೆ ಅನ್ನೋದು. ಕಡೆಗೆ ಕೋರ್ಸ್ ಮುಗಿದು ಎಲ್ಲ ಹೊರಡುವ ಸಮಯ ಹತ್ತಿರವಾದಾಗ ರೋಸಿಗೆ ರಮ್ಯಾನೇ ಹೇಳಿರಬೇಕು..ಮುನೀರ್ ಹತ್ರ ಬಂದು ರೋಸಿ ಹೇಳಿದಳು ಹುಸಿ ಮುನಿಸು ತೋರಿಸುತ್ತಾ.. ಮುನೀರ್ ಬೆನ್ನಿಗೆ ಗುದ್ದುತ್ತಾ.... “ಮುನೀರ್ ತುಂಬಾ ಘಾಟಿ ಕಣೋ ನೀನು..ಎಲ್ಲ ಸೇರಿ ಫೂಲ್ ಮಾಡಿದ್ರಲ್ಲ ನನ್ನ..ಇರ್ಲಿ ನನಗೂ ಸಿಗುತ್ತೆ ಚಾನ್ಸು...”
“ಖಂಡಿತಾ ಕೊಡಿಸ್ತೀವಮ್ಮಾ ನಿನಗೆ ಹಾಡೋಕೆ ..” ಎಂದ ಮುನೀರ್ ಈಗ ಎಲ್ಲರ ಜೊತೆ ರೋಸೀನೂ ಮನತುಂಬಿ ನಕ್ಕಳು.

Friday, May 29, 2009

ಮತ್ತೆ ಶಾಲೆಗೆ


ಬೇಸಿಗೆ ರಜೆಗಳು
ಕಳೆದವು ದಿನಗಳು
ಪುಸ್ತಕವಿಲ್ಲದ ಕ್ಷಣಗಳು
ಮತ್ತೆ ಬಂದೆವು ಶಾಲೆಗೆ

ಅಕ್ಕನ ಊರಲಿ
ಭಾವನ ಜೊತೆಯಲಿ
ಕಳೆದೆವು ರಜೆಗಳು
ಮತ್ತೆ ಬಂದೆವು ಶಾಲೆಗೆ

ಜ಼ೂನಲಿ ಸಿಂಹವು
ಪಿಂಜರ ಬಂಧವು
ಪಕ್ಷಿಧಾಮವ ನೋಡಿ
ಮತ್ತೆ ಬಂದೆವು ಶಾಲೆಗೆ

ಹಳ್ಳಿಗೆ ಹೋದೆವು
ಮಳೆಯಲಿ ನೆಂದೆವು
ನೆಗಡೀಲೂ ನಲಿದೆವು
ಮತ್ತೆ ಬಂದೆವು ಶಾಲೆಗೆ

ಹೋಂ ವರ್ಕ್ ಗೋಜಿಲ್ಲದೆ
ಸ್ಕೂಲ್ ವರ್ಕ್ ತಲೆನೋವಿಲ್ಲದೆ
ಹೇಗೆ ಹೋದವು ದಿನಗಳು ಗೊತ್ತಿಲ್ಲದೆ
ಮತ್ತೆ ಬಂದೆವು ಶಾಲೆಗೆ

ಮತ್ತದೇ ಹತ್ತು ಕೇಜಿ ಭಾರ
ಧೂಳು-ಹೊಗೆ ರಸ್ತೆಗಳು ಘೋರ
ಇಲ್ಲಿ ರಸ್ತೆ ದಾಟಿದವನೇ ಶೂರ
ಅದಕೇ ಮತ್ತೆ ಬಂದೆವು ಶಾಲೆಗೆ

ರಜೆದಿನ ಮುಗಿದ ವ್ಯಥೆಯಿತ್ತು, ಈಗಿಲ್ಲ
ರವಿ, ಶಶಿ, ರಮಾ, ಷಫಿ ಮತ್ತೆ ಸೇರಿ
ಸ್ಕೂಲಿನ ಪಾರ್ಕಿನಲ್ಲಿ ಆಡುವೆವು ಕೂಡಿ
ಅದಕೇ, ಮತ್ತೆ ಬಂದೆವು ಶಾಲೆಗೆ

ರಜೆಗಳು ವಿರಾಮಕೆ
ಮೋಜು ಆರಾಮಕೆ
ಶಾಲೆ-ವಿದ್ಯೆ ಭವಿತಕೆ
ಹೌದು..ಅದಕೇ..ಮತ್ತೆ ಬಂದೆವು ಶಾಲೆಗೆ

Thursday, May 28, 2009

ಅವಳು ಹೊರಟು ನಿಂತಾಗ




ನಿನ್ನನಗಲಿ ಹೇಗಿರಲಿ
ನೀನಿಲ್ಲದೆ ನಾ ಜಾಲಿಯಲಿ
ನಿನ್ನ ನೆನಪು ಸದಾ ಕಾಡುವುದು
ನೀ ಬರುವರೆಗೆ ದಿನ ಓಡುವುದು
ಬೆಳ್ಳಂ ಬೆಳಗೇ ಎಚ್ಚರ ನೀನಿಲ್ಲದೆ
ನೆತ್ತಿಗೆ ರವಿಯಿರೆ ಮಲಗುವೆ ಭಯವಿಲ್ಲದೆ
ನಿನ್ನ ಕೈಯ ರುಚಿ ಕಾಡುವುದು
ಹಲಬಗೆ ಹೊರರುಚಿ ರುಚಿಸುವುದು
ಕೆಲಸಕೆ ಹೊರಟಾಗ ನೀ ಎದುರಾಗುವುದು
ಕೆಲಸದಿ ಆಪ್ತ ಸಹಾಯಕಿ ಕುಲುಕಾಡುವುದು
ಮನೆಗೆ ಬಂದರೆ ನೀನಿಲ್ಲದೆ ಬೋರು
ಮನೆಗೇ ಬರದೆ ಹೊರಗೇ ಪಾರ್ಟಿಜೋರು
ಬಂದರೂ ಮನೆಗೆ ನಿನ್ನ ನೆನಪು ನೂರು
ಮಲಗಿಬಿಡುವೆ ಆದರೂ ಅದು ನಿತ್ಯ ನವ ಸೂರು

ಸೂಚನೆ: ಏಳು (ಪಂಕ್ತಿ ಬಿಟ್ಟು ಪಂಕ್ತಿ) ಅವಳಿಗೆ ಹೊರಟು ನಿಂತಾಗ
ಏಳು (ಪಂಕ್ತಿ ಬಿಟ್ಟು ಪಂಕ್ತಿ) ಬ್ಲಾಗ್ ಪೋಸ್ಟಿಗೆ ಕುಂತಾಗ

ನೆನಪಾಗುವುದು


ಬೇಸಿಗೆ ಬಂದರೆ
ನಗರದಿ ತೊಂದರೆ
ಹಳ್ಳಿಯೆಡೆಗೆ ವಲಸೆಯ ನೆನಪಾಗುವುದು
ಮಾವಿನ ತೋಪಿನ
ತಣ್ಣನೆ ತಂಪಿನ
ಹುಳಿಮಾವಿನ ಸವಿ ನೆನಪಾಗುವುದು
ಅಮ್ಮನು ಕಟ್ಟಿದ ಬುತ್ತಿ
ಕೂಡಿ ತಿಂದೆವು ಭರ್ತಿ
ಮತ್ತೆ ಆಡಿದ ಮರಕೋತಿ ನೆನಪಾಗುವುದು
ನೆಳಲಲಿ ನಿದ್ದೆ
ಹೊಳೆಯಲಿ ಒದ್ದೆ
ಒಡನಾಡಿದ ದಿನಗಳ ನೆನಪಾಗುವುದು
ಆ ಹುಣ್ಣಿಮೆ ರಾತ್ರಿಲಿ
ಶಿವನಳ್ಳಿ ಜಾತ್ರೆಲಿ
ಬತಾಸು-ಚುರುಮುರಿಯ ನೆನಪಾಗುವುದು
ರಾತ್ರಿಯ ಬಯಲಾಟ
ಹನುಮನ ಹುಡುಕಾಟ
ಕೊನೆಗೆ ಸೀತೆಯ ವ್ಯಥೆ ನೆನಪಾಗುವುದು
ಅಜ್ಜ ಸುತ್ತ ಹತ್ತಳ್ಳೀಗೂ ಸಜ್ಜನ
ಊರವರಿಗೆ ಅವನೇ ಯಜಮಾನ
ಅವ ಸತ್ತ ದಿನ ಊರೇ ಅತ್ತದ್ದು ನೆನಪಾಗುವುದು
ಇಲ್ಲದಾಗಿವೆ ಹಸಿರುಗಳು
ಸಂಜೆಗೆ ಮರಳುವ ರಾಸುಗಳು
ನೆನಪುಮಾತ್ರ ಈಗ ನೆನಪಾಗುವುದು

Saturday, May 23, 2009

ಕಪಿಲಾಪುರದ ಕಥೆ



(ಆತ್ಮೀಯರೇ...ನನಗೆ ಬಹಳ ದಿನಗಳಿಂದ ಕಾಡಿಸುತ್ತಿದ್ದ ಒಂದು ವಿ.ವಿ. ಉಪಕುಲಪತಿ ನೇಮಕಾತಿಯ ಹಗರಣವೊಂದನ್ನು ಬಿಂಬಿಸಲು ಭೇತಾಳನ ಕಥೆಯನ್ನು ಆರಿಸಿಕೊಂಡೆ ಪ್ರಸ್ತಾವನಾ ಮಾಧ್ಯಮವಾಗಿ, ನಿಮ್ಮ ಟಿಕೆ ಟಿಪ್ಪಣಿಗಳಿಗೆ ತುಂಬು ಮನಸ್ಸಿನ ಸ್ವಾಗತ)

ಮಹಾನಗರ, ಅಸೆಂಬ್ಲಿ, ಪಾರ್ಲಿಮೆಂಟ್ ಹೀಗೆ ಎಲ್ಲಾ ಚುನಾವಣೇಲೂ ಹಿಗ್ಗಾ ಮುಗ್ಗಾ ಸೋತರೂ ಮತ್ತೆ ಬೈ ಎಲೆಕ್ಷನಿಗೆ ನಿಲ್ಲುವ ಸಾಹಸಮಾಡುವ ಪುಢಾರಿಯಂತೆ ಹಠಬಿಡದ ಶತವಿಕ್ರಮ ಸುಡುಗಾಡಿನ ಬಳಿಯ ಬಿಕೋ ಎನ್ನುವ ಧೂಳುತುಂಬಿದ ಬೀಡಲಿ ಒಂಟಿ ಭೂತದಂತೆ ನಿಂತಿದ್ದ ಮುಳ್ಳುಜಾಲಿ ಮರಕ್ಕೆ ನೇತುಬಿದ್ದಿದ್ದ ಭೇತಾಳನನ್ನು ಹೆಗಲಿಗೇರಿಸಿ ಕ್ರೆಮೆಟೋರಿಯಂನ ವಾಹನದ ಕಡೆ ನಡೆಯುತಿರಲು... ಮಹತ್ವದ ಮೀಟಿಂಗ್ ನಡೆಯುವಾಗ ಎಲ್ಲರನ್ನೂ ಡಿಸ್ಟರ್ಬ್ ಮಾಡುವ ಮೊಬೈಲ್ ರಿಂಗ್ ಟೋನಿನಂತೆ..ನಿರ್ಜೀವ ನಿಶ್ಶಬ್ದವಾಗಿದ್ದ ಭೇತಾಳ ಮಾತನಾಡತೊಡಗಿತು...
"ಎಲೈ ... ಕುರ್ಚಿಸಿಗಲೆಂದು ಆ ಪಕ್ಷದಿಂದ ಈ ಪಕ್ಷ, ಈ ಪಕ್ಷದಿಂದ ಉ ಪಕ್ಷಕ್ಕೆ ನೆಗೆಯುವ ಪುಢಾರಿಯಂತೆ ಏನೂ ನನ್ನಿಂದ ನಿನಗೆ ಸಿಗುವುದು ಆಸಾಧ್ಯವೆಂದು ತಿಳಿದರೂ ನನ್ನ ಬೆನ್ನ ಹಿಂದೆ ಬಿದ್ದಿರುವ ನಿನ್ನ ಸಣಕಲು ದೇಹಕ್ಕೆ ನನ್ನಹೆಣ ಭಾರದ ತೂಕದ ಅರಿವಾಗದಂತೆ ಕಥೆಯೊಂದನ್ನು ಹೇಲುತ್ತೇನೆ ಕೇಳು" ಎಂದಿತು
"ಕಪಿಲಾಪುರದ ಕಪಿಲಭಾಷೆ ಅಭಿವೃದ್ಧಿ, ಭಾಷೆಯ ಬೆಳವಣಿಗೆ ಮತ್ತು ಸಂಶೋಧನೆಗೆಂದೇ ಮೀಸಲಾಗಿದ್ದ ಕಂಪಲಾ ವಿಶ್ವವಿದ್ಯಾನಿಲಯ ಅದರ ಉಪಕುಲಪತಿ ಕಸ್ತೂರಮ್ಮ ತಮ್ಮ ಅಧಿಕಾರಾವಧಿಯಲ್ಲಿ ವಿಶ್ವ ವಿದ್ಯಾಲಯಕ್ಕೆ ಅಮೋಘ ಯಶಸ್ಸು ಮತ್ತು ಹೆಸರನ್ನು ತಂದುಕೊಟ್ಟರು. ಅವರ ಕಾರ್ಯಾವಧಿ ಮುಗಿಯಲು ಆ ಸ್ಥಾನಕ್ಕೆ ಕಂಪಲಾಪುರದ ಪ್ರತಿಭಾನ್ವಿತ ಪ್ರೊ.ನೀಲಾಂಬಿಕೆ ಮತ್ತು ಬತ್ತೊಬ್ಬ ನಾಡಿನ ಪ್ರತಿಭೆ ಡಾ. ಕುಸುಮಕ್ಕ ಬಹು ಚರ್ಚಿತ ಹೆಸರುಗಳಾಗತೊಡಗಿದವು. ಆದರೆ ಕಪಿಲಾಪುರದ ಮು.ಮಂ. ಕನಕಪ್ಪ ಮತ್ತು ಉ.ಮು.ಮಂ. ತಮ್ಮ ಜಾತಿಯವಳೆಂದು ನೀಲಾಂಬಿಕೆಯ ಹೆಸರು ಸೂಚಿಸಿದರೆ ಪಕ್ಷದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ಮುಖಂಡ ತಮ್ಮ ಜಾತಿಗೆ ಸೇರಿದ ಕುಸುಮಕ್ಕನನ್ನೇ ಆ ಸ್ಥಾನಕ್ಕೆ ನಿಯೋಜಿಸಬೇಕೆಂದು ಪಟ್ಟು ಹಿಡಿದುಕುಂತರು. ವಿಷಯವನ್ನು ನಿಷ್ಪಕ್ಷವಾಗಿ ವಿಚಾರಿಸಿ ತಮಗೆನೆಸಿದಂತೆ ನಿರ್ಧಾರ ತೆಗೆದುಕೊಳ್ಳಬಹುದೆಂದು ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿದ್ದ ಸರ್ಕಾರ ಕುಲಪತಿಗಳಿಗೆ ತನ್ನ ಇಂಗಿತವನ್ನು ಸೂಚಿಸಿತು. ಹಾಗೆ ನೋಡಿದರೆ ಇದು ಕುಲಪತಿಯವರ ಸ್ವತಂತ್ರ ಕಾರ್ಯವ್ಯಾಪ್ತಿಯ ವಿಷಯವಾದರೂ ಸರ್ಕಾರದ "ಇಂಗಿತ" ವೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಕಪಿಲಾಪುರದ ಅಲಿಖಿತ ನಿಯಮ. ಹೀಗಾಗಿ ಈಗ ಕುಲಪತಿಗಳಿಗೆ ತಮ್ಮ ಮನಸೇಚ್ಛೆ ಉಪ ಕುಲಪತಿಯನ್ನು ಆರಿಸುವ ಚಾನ್ಸ್ ಸಿಕ್ಕಿದ್ದು..ವೈದ್ಯ ಹೇಳಿದ್ದು ಹಾಲು-ಅನ್ನ ರೋಗಿ ಬಯಸಿದ್ದು ಹಾಲು-ಅನ್ನ ಎನ್ನುವಂತಾಯಿತು. ಸಿಕ್ಕ ಅವಕಾಶವನ್ನು ಚನ್ನಾಗಿಯೇ ಉಪಯೋಗಿಸಿಕೊಂಡ ಪಕ್ಕದ ಪ್ರಾಂತ ಇಂಪಲಾಪುರದವನಾದ ಕುಲಪತಿ ತನ್ನಜಾತಿಯ ಇಂಪು ಭಾಷೆಯ ಪಂಡಿತೆ ಇಂಪಲಾಪುರದ ಪ್ರೊ. ಸಂಪೂರ್ಣೇಶ್ವರಿಯನ್ನು ನೇಮಿಸಿಯೇ ಬಿಟ್ಟರು.
ವಿಷಯ ಕಪಿಲಾಪುರದ ಗಲ್ಲಿ-ಗಲ್ಲಿಗಳಲ್ಲಿ ಗುಲ್ಲೆಬ್ಬಿಸಿ ಕಪಿಲಭಾಷಾ ಜಾಗರಣಾ ಸಮಿತಿ ಹೋರಾಟಕ್ಕಿಳಿದು ಸರ್ಕಾರಕ್ಕೆ ಇರಿಸು-ಮುರಿಸಿಗೆ ಕಾರಣವಾಗತೊಡಗಿತು. ಚಳುವಳಿಯ ತೀವ್ರತೆ ಹೆಚ್ಚಾಗಿ, ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ವಿಚಾರಣೆಗೆ ಬಂದೇ ಬಿಡ್ತು..ನ್ಯಾಯಾಲಯ ಕಪಿಲ ಭಾಷಾ ವಿ.ವಿ.ಗೆ ಇಂಪು ಭಾಷೆಯ ಪ್ರೊಫೆಸರ್ ನೇಮಕಕ್ಕೆ ಆಕ್ಷೇಪಣೆ ಎತ್ತಿಹಿಡಿದು, ಸರ್ಕಾರದ ಕ್ರಮವನ್ನು ಅನೂರ್ಜಿತಗೊಳಿಸಿ, ಕಪಿಲಾಪುರದ ಅರ್ಹ ಪ್ರತಿಭಾವಂತರ ಪಟ್ಟಿಯೋದನ್ನು ಮಾಡಿ ಸರ್ಕಾರಕ್ಕೆ ಸೂಚಿಸಬೇಕೆಂದು ಆ ಕಾರ್ಯಕ್ಕೆಂದು ಆಯೋಗವೊಂದನ್ನು ರಚಿಸಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿ ಅದುವರೆಗೂ ಪೂರ್ವ ಉಪ ಕುಲಪತಿಯವರೇ ಮುಂದುವರೆಯಿವಂತೆ ತೀರ್ಪುಕೊಟ್ಟಿತು".
"ಎಲೈ ಶತ ವಿಕ್ರಮನೇ ನನಗೆ ಕೆಲವು ಸಂದೇಹಗಳಿವೆ...ಮೊದಲನೆಯದಾಗಿ - ಮು.ಮಂ., ಉ.ಮು.ಮಂ., ವಿ.ಪ.ನಾಯಕ ಇವರು ಪರಸ್ಪರ ಲೇವಾದೇವಿಯ (ಎಲ್ಲ ವಿಷಯಗಳಲ್ಲಿ ಮಾಡುವಂತೆ) ಅಧಾರದ ಮೇಲೆ ಯಾರನ್ನಾದರೂ ತಾವೇ ಆರಿಸಬಹುದಿತ್ತಲ್ಲ ಹಾಗೇಕೆ ಮಾಡಲಿಲ್ಲ..? ಎರಡನೇ ಸಂದೇಹ ..ಕುಲಪತಿ ತನ್ನ ಆದೇಶವನ್ನು ಯಾರಾದರೂ ಪ್ರಶ್ನಿಸಬಹುದು ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಉಪಯೋಗಿಸಲಿಲ್ಲವೇಕೆ?....ನಿನ್ನ ಮುತ್ತಾತಂದಿರಂತೇ..ನನ್ನ ಈ ಸಂದೇಹಗಳನ್ನು ತಿಳಿದೂ ಪರಿಹರಿಸದೇ ಹೋದರೆ ನಿನ್ನ ತಲೆ ತಾಲಿಬಾನ್ ಗಳು ಅಂಧ- ಧರ್ಮಾನುಕರಣೆ ಎಂಬ ಸುಳ್ಳು ನೆಪಗಳ ಹೆಸರಿನಲ್ಲಿ ವಿನಾಕಾರಣ ಅಮಾಯಕರ ಹತ್ಯೆಗೆ ಉಪಯೋಗಿಸುವ ಚೀನಾದ ಬಾಂಬಿನಂತೆ ಸಿಡಿದು ಹೋದೀತು, ಎಚ್ಚರಿಕೆ" ಎಂದು ತನ್ನ ಕೊರೆತವನ್ನು ಮುಗಿಸಿತ್ತು ಭೇತಾಳ.
"ಹೇ ತಾಳವಿಲ್ಲದ ಭೇತಾಳನೇ, ನನ್ನ ಇಷ್ಟಾಯಿಷ್ಟದ ಪರಿವೆಯೇ ಇಲ್ಲದೇ lecture ಕೊರೆಯುವ ಪ್ರೊಫೆಸರುಗಳಂತೆ ನಿನ್ನ ತಲೆಬುಡವಿಲ್ಲದ ಕಥೆ ಹೇಳಿ ..ಎಷ್ಟೇ ಮನವಿ ಮಾಡಿಕೊಂಡರೂ ಅರ್ಥವಾಗದೇ ಸಭಾ ಭವನದಲ್ಲೇ ಕಿರಿಚಾಡುವ ವಿರೋಧ ಪಕ್ಷದವರಂತೆ ಅರ್ಥವಿಲ್ಲದ ಮತ್ತು ವಿವೇಚನಾ ವಿಹೀನ ಪ್ರಶ್ನೆಯನ್ನು ಕೇಳಿದ್ದೀಯೆ,,ಪರವಾಗಿಲ್ಲ..ನನ್ನ ಉತ್ತರ ಕೇಳು...
ಮು.ಮಂ., ಉ.ಮು.ಮಂ. ಅಥವಾ ವಿ.ಪ.ನಾಯಕ ಇವರುಗಳಿಗೆ ಇದ್ದದ್ದು ಕಡೆಯ ವರ್ಷ ಹಾಗಾಗಿ..ಮುಂದೆ ಚುನಾಯಿತರಾಗಿ ಬರುವರೋ ಇಲ್ಲವೋ ಎಂಬುದು ಅವರಿಗೇ ಅನುಮಾನವಾಗಿತ್ತು.ಈ ಅಂಶ ನಿನ್ನ ಮಿದುಳಿಲ್ಲದ ಬುರುಡೆಗೆ ಹೇಗೆ ಹತ್ತೀತು..?.ಹೀಗಿರುವಾಗ ತಮ್ಮ ಆಯ್ಕೆಯನ್ನು ಮುಂದಿಟ್ಟಿದ್ದರು.
ಇನ್ನು ನಿನ್ನ ಎರಡನೇ ಸಂದೇಹ ಮೊದಲನೆಯದಕ್ಕಿಂತ ಮೂರ್ಖ ಸಂದೇಹ...ಏಕೆಂದರೆ..ಕಪಿಲಾಪುರದವರು ತಮ್ಮ ನೆಲದಲ್ಲಿ ಇಂಪಲಾಪುರ, ಟೆಂಪಲಾಪುರ ಅಲ್ಲದೇ ಮಂಪಲಾಪುರದವರನ್ನು ಬೇರೂರಲು ಬಿಟ್ಟಿದ್ದರು..ಹೀಗಿರುವಾಗ ಯಾವುದೇ ಪ್ರತಿರೋಧ ಇರುವುದಿಲ್ಲವೆಂದು ಕುಲಪತಿ ಅತಿ ಜಾಣತನ ತೋರಿದ್ದ..."
"ಭಲೇ ಶತವಿಕ್ರಮ ನಿನ್ನ ಬುದ್ಧಿವಂತಿಕೆ ಮೆಚ್ಚುವಂತಹುದು...ಆದರೆ ನೀನು ಮೌನ ಮುರಿದೆ..."
ಎನ್ನುತ್ತಾ ಕರ್ಕಶವಾಗಿ ಊಳಿಡುತ್ತಾ ನಾಯಿಯರೂಪ ಧರಿಸಿ ಶತವಿಕ್ರಮನ ಹೆಗಲಿಂದ ಜಾರಿ ಓಡಿ ಮತ್ತೆ ಜಾಲಿಮರದ ಕೊಂಬೆಗೆ ನೇತಾಡತೊಡಗಿತು.

(ಚಿತ್ರ: ಭೇತಾಳನ ಕಥೆಗಳು ಚಂದಮಾಮ ಪತ್ರಿಕೆ, ಅಂತರ್ಜಾಲ ಕೃಪೆ)

Friday, May 22, 2009

ಅಮ್ಮ


ಬೆಚ್ಚನೆ ಕರುಳಪ್ಪುಗೆ
ಬಳ್ಳಿಗೆ ಒಳಗೆ, ಹೊರಗೆ
ಡವ-ಡವಿಕೆ ಜೋಗುಳ ಒಳಗೆ
ಮೈದಡವಿ ಮಡಿಲಲಿ ಹೊರಗೆ
ಚರಾಚರದ ಸೃಷ್ಠಿಗೆ ಕಾರಣ ದೇವರು
ನನ್ನ ಹೊತ್ತು ಹೆತ್ತವಳು ತಾಯಿ ದೇವರು
ಲಾಲಿಸಿ-ಪಾಲಿಸಿ ಮಗುವ
ಮುದ್ದಿಸಿ ರಕ್ಷಿಸಿ ಬಾಲ್ಯವ
ನೋವಲಿ ‘ಅಮ್ಮಾ‘ ಎನಲು
ಓಡೋಡಿ ಬರುವಳು
ನನ್ನ ಮೇಲಿನ ಅಪ್ಪನ ಕೋಪಕೆ
ಆಡ್ಡಗೋಡೆಯಾಗಿ ನಿಲುವಳು
ನನಗೆ ಬೀಳಬೇಕಾದ ಏಟನು
ತಾನೇ ತಿನುವಳು
ನನ್ನ ನೋವಲಿ ತಾನೊಂದು
ಸಂತೈಸುವಳು
ನನ್ನಲ್ಪ ಗೆಲುವಲೂ
ಜಗಗೆದ್ದಂತೆ ನಲಿವಳು
ಬಾಲ್ಯ..ಶಾಲೆ ಆಗಲೂ ಮಗು
ಕಾಲೇಜು, ಉದ್ಯೋಗ
ಆಗಲೂ ಮಗು
ಮದುವೆಯಾಗಿ ತಂದೆಯಾದರೂ
ಅಪರೂಪಕ್ಕೆ ಹೋದಾಗ ಊರಿಗೆ
ದಢೂತಿದೇಹವ ಬಗ್ಗಿಸಿ ನಮಿಸಲು
ಅನ್ನುವಳಲ್ಲ ‘ಎಷ್ಟು ಸೊರಗಿರುವೆ ಮಗು?‘
ಅವಳಿಗೆ ನಾನು ಈಗಲೂ ಮಗು
ಅಮ್ಮ ಯಾವಾಗಲೂ ಅಮ್ಮ
ಮಗ ತಾತನಾದರೂ
ಅವಳಿಗೆ ಮಗುವೇ.