Tuesday, February 22, 2011

ಮತ್ತೊಂದು ಕರವೋಕೆ..ಪ್ರಿಯರಿಗೆ...



ನನ್ನ ಆ ಹುಡುಗಿ


(ದಿಲ್ ಕೆ ಝರೋಕೋಂ ಮೆ ತುಝ್ ಕೋ ಬಿಠಾಕರ್)


ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ
ವಧುವಂತೆ ನಿನ್ನ ನೆನಪನ್ನು ಸಿಂಗರಿಸಿ
ಬಚ್ಚಿಟ್ಟುಕೊಳ್ಳುವೆನೇ, ಹುಡುಗಿ
ಹೃದಯದಲಿ ಮನದನ್ನೆ//೨//


ನಾಳೆ ನನಗೆ ನೀನು ಪರಕೀಯಳಾದ್ರೂ
ನಿನರೂಪ ಮನಸಿಂದ ಹೋಗದು ಎಂದೂ
ಹೂ ಪಲ್ಲಕಿಯಲಿ ನಿನ್ನ ಬೀಳ್ಕೊಟ್ರೂ
ನಿನ್ನ ನೆನಪು ಈ ಮನಬಿಟ್ಟು ಬರದು// ನಾಳೆ ನನಗೆ...//೨//
ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ.....//ಪ//


ನಿನ್ನ ಅಧರದ್ವಯ ಮಧುಪಾತ್ರೆ ಬಾಲೆ
ಈಗಲೂ ನನಗದು ನಶೆಯ ಮಧುಶಾಲೆ
ನಿನ್ನಯ ಮುಂಗುರುಳ ಘನಛಾಯೆ ಇನ್ನೂ
ನನ್ನನ್ನು ಕಾಡುವ ಬಲು ಮೋಹ ಮಾಯೆ// ನಿನ್ನ ಅಧರದ್ವಯ ಮಧುಪಾತ್ರೆಬಾಲೆ//೨//

ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ.....//ಪ//


ನೀನನ್ನ ಪ್ರೀತಿಯ ಧಿಕ್ಕರಿಸಿದೆಯಾದ್ರೂ
ಅದಕಾಗಿ ನಿನಮೇಲೆ ಆಕ್ಷೇಪವಿರದು
ಕಣ್ಣಲಿ ನಿನ್ನಯ ಪ್ರತಿಬಿಂಬ ತುಂಬಿ
ಜಪಿಸುವೆ ನಿನ ನಾಮ ಜೀವನ ಪೂರ್ತಿ//ನೀ ನನ್ನ ಪ್ರೀತಿಯ ಧಿಕ್ಕರಿಸಿದೆಯಾದ್ರೂ//೨//


ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ
ವಧುವಂತೆ ನಿನ್ನ ನೆನಪನ್ನು ಸಿಂಗರಿಸಿ
ಬಚ್ಚಿಟ್ಟುಕೊಳ್ಳುವೆನೇ, ಹುಡುಗಿ
ಹೃದಯದಲಿ ಮನದನ್ನೆ//೨//

Monday, February 14, 2011


(ಚಿತ್ರ ಕೃಪೆ: ಅಂತರ್ಜಾಲ, web foto)

ಪ್ರೀತಿಯೋ ಪ್ರೇಮವೋ.?
ಬಿಟ್ಟ ಕಣ್ಣ ಹೊಳಪ
ನಕ್ಕು ಬಾಯಲಿ ಬಳಪ
ಚೊಕ್ಕ ಚೋಲಿಯ ಸೆಳೆತ
ಆಗಿದ್ದು ನಮ್ಮ ಕಣ್ಣ ಮಿಳಿತ
ಅದು ಮುಗ್ಧ ಬಾಲ್ಯದ ಭಾವ
ಪ್ರೀತಿಯೋ ಪ್ರೇಮವೋ ಯಾವುದು..?

ಬೆಳೆದಂತೆ ಮಗದೊಂದು ಮಿಡಿತ
ಅವಳತ್ತಳು ಬಿದ್ದರೆ ನನಗೆ ಹೊಡೆತ
ಕಾಣದಾಗೆ ಒಂದಿನ ಏನೋ ತುಡಿತ
ಹೀಗೂ ನಡೆದಿದ್ದು ಕಿಶೋರ ದಿನ
ಅರ್ಥವಿತ್ತೇ ಅದಕ್ಕೂ ಆದಿನ
ಪ್ರೀತಿಯೋ ಪ್ರೇಮವೋ ಅದು..?

ನಮಗೆ ಮರೆಯದ ಅದೊಂದು ಘಟ್ಟ
ಇಬ್ಬರೂ ಬೆಳೆದು ನಿಂತು ಎದೆಮಟ್ಟ
ಸಫಲಿಸದೆ ವಿದ್ಯೆ, ಇದ್ದಲ್ಲೇ ನಿಂತಳು
ಗೆದ್ದರೂ ತೇವಗೊಂಡವು ನನ್ನ ಕಂಗಳು
ಅನಿಸತೊಡಗಿತ್ತು ಅರ್ಥವಾಗದ್ದು ಏಕೆ ಹೀಗೆ?
ಪ್ರೀತಿಯೋ ಪ್ರೇಮವೋ ಇದು..?

ಕಳೆದು ಹತ್ತಾರು ವರುಷ, ಸಿಕ್ಕಳಂದು ಷಮಾ
ಕಣ್ಣು ಸೇರಿದ್ದು, ಗುರುತಿಸಿದ್ದು ನೆನಪುಗಳ ಜಮಾ
ಯಾವುದೋ ಹೊಲದ, ಎಲ್ಲೋ ಹೊಸೆದ, ಬತ್ತಿಯ ಹೊತ್ತು
ಅಪ್ಪ-ಅಮ್ಮನ ಮಾಡಿದ ಗಾಜ ಬುರುಡೆಯ ಸುತ್ತು
ಷಮಾಳ ಆಸೆಗಳಿಗೆ ಕಿಡಿ, ನೆನಪಿಗೆ ಹತ್ತಿ ಧೂಳು
ಆಗಿ ಬಾಲ, ಕಿಶೋರ, ಪ್ರೌಢ ಮನಸುಗಳ ಹೋಳು
ಪ್ರೀತಿಯೋ, ಪ್ರೇಮವೋ ..ಅಂದು...?

ಧಾರೆ ಜೀವನದಿ ಹಿರಿಯರಾಣತಿ ಹರಿವಿನೊಂದಿಗೆ ತಾನು
ಅರಿಯದ, ಅರಿವಾದ ಅರಿತರೇನೂ ಮಾಡಲಾಗದ ನಾನು
ಮಾಲ್ ನ ಜಂಗುಳಿಯಲಿ ನಿಂತಂತೆ ಮರುಕಳಿಸಿ ನೆನಪು
ಬಂದರು ಷಮಾಳ ಅವರು, ಜೊತೆಗೆ ಬೆಳೆದ ಮಕ್ಕಳಿಬ್ಬರು
ನನ್ನವಳು ತನ್ನೆತ್ತರಕೆ ಬೆಳೆದ ಮಗಳ ಜತೆಗೆ ನಾವು ಮೂವರು
ಇದಲ್ಲವೇ ಜೀವನ? ವಿರೋಧಗಳ ನಡುವೆಯೂ ಬಾಳು ?
ಸಹನಾತೀತ ಕ್ಷಣ, ಕಳೆದರೆ- ಅನಿಸದು ಹಿಂದಿನದು ಗೋಳು.
ಇದಲ್ಲವೇ ಪ್ರೀತಿ ಪ್ರೇಮ ಎಂದೂ ಎಂದೆಂದೂ..?

Friday, February 11, 2011

(Photo: web pages)

ಅಳ್ಳಿ-ವರಸೆ

ಗದ್ದೆ ಕೆಸ್ರು, ಮಂಡೀಗಂಟ ಏರ್ಸ್ಕೋಂಡು ಸೀರೆ
ಎದೆಮ್ಯಾಲಿನ್ ಸೆರ್ಗು ಜಾರ್ತೈತೆ ಜ್ವಾಕೆ ನೀರೆ
ಪಡ್ಡೆ ಐಕ್ಳು ನಾಟಿ ಗೇಯ್ಮೆ ಮಾಡೋದ್ ಕಮ್ಮಿ
ಬಡ್ಡಿ ಮಕ್ಳು ಕಳ್ನೋಟ ಆಕ್ತಾವ್ರೆ ಉಸಾರ್ಕಣಮ್ಮಿ

ಸುಬ್ಬಿ ಅಂದ್ರೆ ಅಳ್ಳಿಯೋಳ್ಗೆ ಗಂಡಸ್ರು
ಎಂಡ್ತೀರ್ ನೋಡ್ದೇಟ್ಗೆ ಆಕ್ತಾರೆ ನಿಟ್ಟುಸ್ರು
ನಮ್ಮ ಗೌಡ ಕುಂತಿದ್ರೂ ಜಗ್ಲಿ ಮ್ಯಾಲೆ
ಕುಣೀತಾವೆ ಮೀಸೆ ಮಾಡ್ತಾವೆ ಬ್ಯಾಲೆ

ಸಾಕಮ್ಮನ್ಗಾಗಿತ್ತು ಎಲ್ರಂಗೇ ಡೌಟು
ಸುಬ್ಬಿ ಶೆಟ್ರಂಗ್ಡಿಗೋದ್ರೆ ಕಮ್ಮಿಯಾಕೆ ರೇಟು?
ಕೊಸ್ರೋಕೋದ್ರೆ ಸುಬ್ಬಿ ಕೈಜೊತೆ ಆಗ್ತಿತ್ತು ಫೈಟು
ಶೆಟ್ರಿಗೆ ಕಾದಿತ್ತು..!! ಬಂತು ಸಾಕಮ್ಮನ್ಕೈಗೆ ಸೌಟು.

Wednesday, February 2, 2011

ಬೇಲಿ, ಮಾಲಿ ಮತ್ತು ಹೊಲ
ಶತವಿಕ್ರಮನ ತಲೆ ಗಿರ್ ಎನ್ನುತ್ತಿತ್ತು. ಕಪಿಲಾಪುರದ ರಾಜಕತೆ ಆರಾಜಕತೆಯಾಗುತ್ತಿದೆ... ತಾನು  ತನ್ನ  ತಾತನ  ಚಕ್ರಾಧಿಪತ್ಯದ  ಕಾಲದ ಸುವರ್ಣ ಯುಗದ ಬಗ್ಗೆ ಕೇಳಿದ್ದ, ತಂದೆ ಕಾಲದ ಉನ್ನತ ಪ್ರಜಾಪಾಲನೆಯ ಬಗ್ಗೆ ಓದಿದ್ದ..ತಾನೂ ಎಲ್ಲ ಮೆಚ್ಚುವ ಹಾಗೆ ರಾಜ್ಯಭಾರ ಮಾಡಿದ್ದ. ಈ ರಾಜ ವಂಶಕ್ಕೆ ವರವಾಗಿದ್ದ ದೀರ್ಘಾಯುಷ್ಯ ಶತವಿಕ್ರಮನನ್ನು ಕಾಡತೊಡಗಿತ್ತು. ಭೇತಾಳನ ವಶಪಡಿಸಿಕೊಂಡು ಅವನ ನಾಮಾವಶೇಷ ಅಳಿಸಿದರೆ ಮಾತ್ರ ಆತನ ಕುಲಕ್ಕೆ ಮುಕ್ತಿಯ ಸಾಧ್ಯತೆಯಿತ್ತು ಹಾಗಾಗಿ ಜಹಗೀರು ಮತ್ತು ಸ್ವಾಯತ್ತತೆ ಪಡೆದು ಈ ಆಧಿನಿಕ ಯುಗದಲ್ಲೂ ಭೇತಾಳನನ್ನು ಸೋಲಿಸುವುದರಲ್ಲೇ ಕಾಲ ಕಳೆಯುತ್ತಿದ್ದ. ಇಲ್ಲಿ ಇವರಿಬ್ಬರ ಮಧ್ಯದ ಈ ಕಿತ್ತಾಟ ಕೇವಲ ಅವರಿಬ್ಬರಿಗೆ ಮತ್ತು ಅದರ ರನ್ನಿಂಗ್ ಕಾಮೆಂಟರಿ ಕೊಡುವ ನನಗೆ ಮಾತ್ರ ಸಾಧ್ಯ.
ಏನು...?? ಮಹಾಭಾರತದ ಆಗುಹೋಗುಗಳನ್ನು ದೃತರಾಷ್ಟ್ರನಿಗೆ ಸಂಜಯನು ಹೇಳುತ್ತಿದ್ದ ರೀತಿನೇ..ಎಂದಿರಾ...?? ಹೌದು. ಇದಕ್ಕೆ ಕಾರಣವೂ ಇಲ್ಲದಿಲ್ಲ, ತ್ರಿವಿಕ್ರಮನ ಕಾಲದಿಂದ ಈ ಕಥೆಗಳನ್ನು ಹೇಳುತ್ತಿದ್ದ ಕಾರಣ ನನಗೂ ಒಂದು ರೀತಿಯ ಶಾಪವೇ ತಟ್ಟಿತ್ತು ಅಂದು. ಸಾವಿರಾರು ಬಾರಿ ಜನ್ಮತಾಳಿ ಈ ಶೃಂಖಲೆಯ ಪ್ರತಿಕೊಂಡಿಯ ವಿವರ ಪ್ರಜಾಜನಕ್ಕೆ ತಲುಪಿಸುವ ಹೊಣೆಗಾರಿಕೆ ನನ್ನದಾಗಿದೆ...ಅದಕ್ಕೇ ಇದೆಲ್ಲಾ ಅನಿವಾರ್ಯ,,..

ಏನು.. ?? “ಹರಿಕಥೆ ಬೇಡ ..ನಮ್ಮ ಎಮ್ಮೆಲ್ಲೆ, ಮಂತ್ರಿ, ಮು.ಮಂತ್ರಿಗಳ ತರಹ ಪ್ರಜಾಪಾಲನೆ ಮತ್ತು ಸಮಾಜ ಕಲ್ಯಾಣ ಬಿಟ್ಟು ಮತ್ತೆಲ್ಲ ಕಲ್ಯಾಣಕಾರ್ಯ ಮಾಡೋಹಾಗೆ ..ನೀನು ಮಾಡಬೇಡ”
ಅಂತೀರಾ.... ಸರಿ ಸರಿ...ಸಾರಿ ರೀ.


ಕಥೆಗೆ ಬರ್ತೀನಿ. ಎಂದಿನಂತೆ ಶತ ವಿಕ್ರಮ ತನ್ನ ಕಂಪ್ಯೂಟರ್ ನ ಗೂಗಲ್ ನಲ್ಲಿ ’ಭೇತಾಳ’ ಅಂತ ಹಾಕಿ ಹುಡುಕಿದ್ರೆ.. ಎಲ್ಲಾ ತನ್ನದೇ ಹಳೇ ವಿಫಲ ಕಥೆಯ ಸರ್ಚ್ ರಿಸಲ್ಟ್ ಬರ್ತಿದ್ದನ್ನೇ ನೋಡಿ ಬೇಸರಗೊಂಡು...”ಛೇ” ಎನ್ನುತ್ತಾ ಹಾಗೇ ಕೀಲಿ ಮಣೆಯನ್ನ ತಬಲ ಎಂದುಕೊಂಡು ಬಡಿದ.. ಅರೆ..!! ಏನಿದು??!! ಗೂಗಲ್ ಸ್ಕಾಲರ್ ಓಪನ್ ಆಗಿ...ಭೇತಾಳನ ಹೊಸ ಅಡ್ಡಾ-ದ ವಿವರ ಸಿಕ್ಕೇಬಿಡ್ತು.... ಭೇತಾಳ ಶತವಿಕ್ರಮನ ಕೈಗೆ ಸಿಗಲೇಬಾರದು ಎಂದು ಉಚ್ಛಾಟಿತ ನಿರ್ದಲೀಯ ಎಮ್ಮೆಲ್ಲೆಗಳ ಶಾಶಕಭವನದ ಅಪಾರ್ಟ್ ಮೆಂಟಿನ ಫ್ಯಾನಿಗೆ ನೇತಾಡುತ್ತಾ ಇತ್ತು. ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋತರಹ ಮತ್ತೆ ತನ್ನನ್ನು ಫ್ಯಾನಿಂದ ಬಿಡಿಸಿ ಕೆಳಗಿಳಿಸಿ ಕ್ರಿಮೆಟೋರಿಯಂ ನತ್ತ ನಡೆದ ಶತ ವಿಕ್ರಮನ ಶ್ರಮಕ್ಕೆ ನಗುತ್ತಾ...ಹೇಳಿತು.


ಅಯ್ಯಾ ಶತವಿಕ್ರಮ ಕಪಿಲಾಪುರದ ಕಥೆಯಲ್ಲಾ ನಿನಗೆ ತಿಳಿದದ್ದೇ... ಇಲ್ಲಿಯ ರಾಜ ಚಿವಿಂಗ್ಗಮ್ ಹಾಕಿ ಮೆತ್ತಿಸಿಕೊಂಡಂತೆ ನೂರಾರು ಆರೋಪಗಳು ಬಂದರೂ ತನ್ನ ಕುರ್ಚಿಗೆ ಅಂಟಿರುವುದು ನೋಡಿದರೆ ಉದಾತ್ತ ವಿಚಾರಗಳ ಅತಿ ಸೌಮ್ಯ ಮತ್ತು ಅತಿ ಚಾಣಾಕ್ಷ ಭರತದೊರೆ ಬದದ್ದೂರ್ ಶಾಸ್ತ್ರಿಯ ನೆನಪಾಗುತ್ತದೆ. ಅಂತಹ ಮೌಲ್ಯಾಧಾರಿತ ರಾಜಕಾರಣದ ಧುರೀಣರನ್ನು ಕೊಟ್ಟ ಭರತ ಭೂಮಿ ಇಂದು ಏಕೆ ಹೀಗೆ ತನ್ನ ಜನತೆಯ ರಕ್ತ ಹೀರುವ ರಕ್ತ ಪೀಪಾಸು ರಾಜಕೀಯ ಅರಾಜಕಾರಣಿಗಳನ್ನು ನೀಡುತ್ತಿದೆ..? ಎನ್ನುವುದು ಅರ್ಥವಾಗುತ್ತಿಲ್ಲ. ನಮ್ಮ ಕಪಿಲಾಪುರವನ್ನೇ ತೆಗೆದುಕೋ ಇಲ್ಲಿನ ನಮ್ಮ ರಾಜ್ಯ ಯಜಮಾನನನ್ನು ನೋಡಿ ಹುಡುಗರೂ ತಮ್ಮ ಹಾಡುಗಳನ್ನು ಬದಲಾಯಿಸಿ... “ಥರ..ಥರ..ಥರ...ಥರ..ನಿಂಥರ ಇಲ್ಲಿ ಯಾರೂ ಇಲ್ಲ ಕಣ್ರೀ ನಿಮ್ ಥರ”
ಅಂತ ಹಾಡ್ತಿದ್ದಾರೆ. ಕೊಲೆ ಸುಲಿಗೆ ದರೋಡೆ ಕಳ್ಳರು ರಾತ್ರಿಹೊತ್ತು ಮತ್ತು ನಮ್ಮ ರಾಜಕಾರಣಿಗಳು ಹಾಡ ಹಗಲೇ ಎಲ್ಲರಿಗೆ ಕಾಣುವಂತೆ ಕೋಟ್ಯಾಂತರ ದೋಚುತ್ತಿದ್ದಾರೆ. ಇನ್ನು ವ್ಯವಸ್ಥೆಯ ವ್ಯವಸ್ಥಾಪಕ ಎಲ್ಲ ನಿಗ್ರಹಿಸುವ ಭರದಲ್ಲಿ ತನ್ನ ಬಾಲದ ಕೆರೆತವನ್ನು ತಾನೇ ಕಚ್ಚಿ ನಿವಾರಿಸಿಕೊಳ್ಳಲು ಗಿರ ಗಿರ ಸುತ್ತುವ ನಾಯಿಯಂತೆ ಸುತ್ತುತ್ತಾ ಬಸವಳಿಯುತ್ತಿದ್ದಾನೆ. ತನ್ನ ಬಾಲಕ್ಕೇ ರಕ್ಷಣೆ ಇಲ್ಲ ರಕ್ಷಣೆ ಕೊಡಿ ಅಂತ ಪೇಚು ಪೇಚಾಗಿ ಪೇಚಾಡುತ್ತಿದ್ದಾನೆ. ಇವುಗಳ ಪರಿವಾರವೇನು...? ಇದನ್ನು ತಿಳಿದೂ ಹೇಳದೇ ಹೋದರೆ ಪ್ರತಿಪಕ್ಷದಿಂದ ಆಡಳಿತಪಕ್ಷಕ್ಕೆ ಬಂದು ಆಳುವವನ ಪಕ್ಕೆ ಸದಾಚುಚ್ಚುವ ಮುಳ್ಳಿನಂತೆ ನಿನ್ನನ್ನು ಪದೇ ಪದೇ ಚುಚ್ಚುತ್ತೇನೆ...ಇಂತಹ ಸಾಮಾನ್ಯ ಸಮಸ್ಯೆಗಳ ಉತ್ತರ ನೀಡದೇ ಇದ್ದರೆ ಸಮಸ್ಯೆಗಳ ಸಾಗರವೇ ಆದ ಈ ಭೇತಾಳನನ್ನು ನಿರ್ನಾಮ ಮಾಡುವ ಕನಸನ್ನು ಬಿಟ್ಟುಬಿಡು.
ಎಂದಿತು.


ಇದಕ್ಕೆ ಶತ ವಿಕ್ರಮ..
”ಎಲೈ ಭೇತಾಳ..ತಾಳತಪ್ಪಿ ಹಾಡುವುದು ನಿನ್ನ ಜಾಯಮಾನವೇ ಬಿಡು, ಮೌಲ್ಯಗಳು ದಿನೇ ದಿನೇ ಹದಗೆಟ್ಟಿರುವುದು ಕಾಲದ ಮಹಿಮೆ..ಆಗ ಶಾಸ್ತ್ರಿ ಈಗ ಹೆಸರಿಗಾದರೂ ಒಬ್ಬರು ಅಟಲರು ಇಲ್ಲವೇ?? ಅದಿರಲಿ... ಸಮಸ್ಯೆಗಳು ಸ್ವಯಂ ಚುನಾಯಿತ ಎನ್ನುವುದು ನಿನ್ನ ಮಿದುಳಿಲ್ಲದ ಬುರುಡೆಗೆ ಹೇಗೆ ತಿಳಿದೀತು...? ವ್ಯವಸ್ಥೆಯನ್ನು ದೂರುವುದೇ ಸ್ವಭಾವವಾಗಿರುವ ಬುದ್ಧಿಜೀವಿಗಳು, ರಾಜಕಾರಣಿಗಳನ್ನು ಸದಾ ದೂರುವ ಜನ-ಮತದಾರರು ಆರಿಸುವುದು ಯಾರನ್ನು.?? ಅಥವಾ ಬುದ್ಧಿಜೀವಿಗಳು ತಾವೇ ಮಹಾ ಬುದ್ಧಿವಂತರೆಂದು ಮತಹಾಕದೇ ಇರುವುದರಿಂದ ಬೆಳೆಯುವುದು ಇಂಥ ಗೋಸುಂಬೆಗಳೇ..ಅಲ್ಲವೇ..? ? ಐದು ವರ್ಷಕ್ಕೊಮ್ಮೆ ಚುನಾಯಿಸುವ ಹಕ್ಕು ಸಿಕ್ಕಾಗ ಸಮರ್ಥರನ್ನು ಆರಿಸುವ ಮತ್ತು ಮತ ಚಲಾವಣೆ ಮಾತ್ರವಲ್ಲ ಅದಕ್ಕೆ ಲಾಯಕ್ಕಾದ ಪ್ರಜಾ ಪ್ರತಿನಿಧಿಗಳನ್ನು ಮುಂದೆ ತರುವುದೇ ಮತದಾರನ ಕರ್ತವ್ಯ...ಬದಲಾವಣೆ ಅವನಿಂದಲೇ ಸಾಧ್ಯ.... ಅಮೂಲಾಗ್ರ ಬುದ್ಧಿಮಂಥನ ಕ್ರಾಂತಿಯೇ ಆಗಬೇಕು.. ಆಗಲೇ ನಿಜವಾಗಿಯೂ ಸಿರಿವಂತನಾಡು .. ಸುಭಿಕ್ಷ ದೇಶ ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗುವುದು ನಾಡು ಎಲ್ಲರಿಗೂ ಗೋಚರಿಸುವುದು”
ಎಂದ ಕೂಡಲೇ....


“ಹಹಹಹಹ...ನೀನು ಮೌನ ಮುರಿದೆ...ಇಗೋ ನಾನು ಹೊರಟೆ” ಎಂದು ಹಾರುತ್ತಾ ಭೇತಾಳ ಮತ್ತೊಂದು ನೇತಾಡುವ ಜಾಗವನ್ನು ಅರಸಿ ಮಾಯವಾಯಿತು.

Thursday, January 27, 2011

ಜಾಣ ಮೀನು

ಸ್ನೇಹಿತರೆ 
ಜಲನಯನದ ಮೊದಲ ಪುಟದ ಮೊದಲ ಪ್ರಸ್ತುತಿ ಕೆಲ ಮಾರ್ಪಾಡುಗಳ ಕವನ ನಿಮ್ಮ ಮುಂದೆ... ಇಂದಿನ ಪ್ರಸ್ತುತ ರಾಜ-ಅಕಾರಣಗಳ ವಿಪರ್ಯಾಸಗಳಲ್ಲಿ ನಲ್ಗುತ್ತಿರುವುದು  ಅಮಾಯಕ ಜನತೆ, ಅವರ ಆಶೋತ್ತರಗಳನ್ನು ತಮ್ಮ ಸ್ವಾರ್ಥದ ಬೆಳವಣಿಗೆಗೆ ಬಳಸುತ್ತಿರುವ ಜನ ಪ್ರತಿನಿಧಿಗಳು, ಬೇಕಾಗಿಯೋ, ಬೇಡದೆಯೋ, ಸಂದರ್ಭಕ್ಕೆ ಕೊಗೊಮ್ಬೇಯಾದೆಯೆಂಬ ಮರೀಚಿಕೆಗೊಳಗಾಗಿಯೋ ವರ್ತಿಸುವ ಅಧಿಕಾರಿಗಳು ಒಟ್ಟಿನಲ್ಲಿ ನಾಡು ದೇಶ ಸಿರಿಯಿಂದ ಕೂಡಿದ್ದೂ ಬಡತೆಯ ನೆತ್ತಿ ಪಟ್ಟಿ ..ಎಲ್ಲವನ್ನು ಸೂಚ್ಯವಾಗಿಸುವ ಪ್ರಯತ್ನ.  
ಜಾಣ ಮೀನು
ಅಲೆಮೇಲೆ ಅಲೆಯೋ
ಅಲೆಮಾರಿ ಮೀನು
ನೆಲೆ ಕಂಡ ಸೆಲೆಯಲಿ
ಮೆಲ್ಲನೆ ನುಸುಳಿತು ಬೋನು
ಕಂಡರಿಯದ ಬಲೆಯದು
ತಿಳಿಯದ ಕೆಲ ಮೀನು
ಅರಿಯದೆ ಸಿಕ್ಕಿಕೊಂಡವು ಹಲವು
ಅಡಗಿ ಕುಳಿತಿತ್ತು ಅಲ್ಲೇ ಸಾವು
ಅಲ್ಲೇ ಇದ್ದವು ಜಾಣ ಮೀನು
ಸಿಕ್ಕ ಮೀನ ತಿಂದವು 
ಕೊಂಡೂ ಹೋದವು
ಇನ್ನೂ ಕೆಲ ಸ್ವತಂತ್ರ ಮೀನ
ಚೂಪುಹಲ್ಲು ಬಲೆಯ ಹರಿದವು
ಜಿಗಿದವು ಜೊತೆ ಜೊತೆ
ಬಲೆಗಾರಗೆ ಸಿಕ್ಕಿ ಬಿದ್ದದ್ದು  
ತಿಂದು ಮೈಮರೆತ ದೊಡ್ಡ ಮೀನು
ದಿಕ್ಕುತೋಚದ ಕಂಗೆಟ್ಟ ಪುಟ್ಟ ಮೀನು


Wednesday, January 19, 2011

ಕರವೋಕೆ,,,,,,ಪ್ರಿಯರಿಗೆ....

ಕೊಂದೆ ಕಣ್ಣಲ್ಲೇ ನನ್ನ (ಲೇಕೆ ಪಹಲಾ ಪಹಲಾ ಪ್ಯಾರ್ ಶೈಲಿ)


ಕೊಂದೆ ಕಣ್ಣಲ್ಲೇ ನನ್ನ
ಬಿಟ್ಟು ನೋಟದ ಹೂಬಾಣ
ಕದ್ದೆ ಮನಸನ್ನು ಚಲುವಾ
ನಾ ಬಿಡಿಸುವೆ ಬಿಂಕಾನಾ//೨//
ಓ ನನ್ನ ಕನಸಲು ನೀನೇನೇ
ನನ್ನ ಮನಸಿನರಾಣೀನೆ
ಬಂದು ನನಸಲ್ಲೂ ನೆಲಸು
ನಾ ಮುಡಿಸುವೆ ಹೂವನ್ನ//ಕೊಂದೆ ಕಣ್ಣಲ್ಲೆ//

ಮುಂಗುರುಳ ಉರುಳ ನೀ
ಹಾಕಬೇಡ ಚಂಚಲೇ
ಕೊಲ್ಲಬೇಡ ನನ್ನನು
ಸಾಯುವ ಮೊದಲೇ// ಮುಂಗುರುಳ ಉರುಳ ನೀ// ೨//
ಹಾಯ್ ..ನಿನ್ನೀ ನಯನದ ಹೂ ಬಾಣ
ತೆಗೆದರೆ ನನ್ನಯ ಈ ಪ್ರಾಣ
ಮತ್ತೆ ಹುಟ್ಟಿ ಬರುವೆ ನಾ ನಿನಗಾಗಿ ಓ ಚಿನ್ನಾ// ಕೊಂದೆ ಕಣ್ಣಲ್ಲೇ ನನ್ನ//೨//

ಕಣ್ಣಲ್ಲೇ ತುಂಬಿಕೊಂಡೆ
ಕಾಣಲೆಂದೇ ಕನಸನ್ನ
ನನಸಲ್ಲಿ ಬಂದು ನೀನು
ನಿಜ ಮಾಡು ಕನಸನ್ನ//ಕಣ್ಣಲ್ಲೇ ತುಂಬಿಕೊಂಡೆ//೨//
ಹಾಯ್...ಕೋಪ ಮಾಡಿದರೂ ಚನ್ನಾ
ಅದರುವ ತುಟಿಗಳು ಬಲು ಚನ್ನ
ನಿನ್ನಕೆಂಪಾದ ಕೆನ್ನೆಯೂ ಕರೆದಿದೆ ಇನಿಯನ್ನ//ಕೊಂದೆ ಕಣ್ಣಲ್ಲೆ ನನ್ನ// ೨//

ಮುಸಿ ಮುಸಿ ನಗುತಾಳೆ
ಕೇಳಿ ಸವಿ ಮಾತನ್ನೇ
ತಡೆಯಲಾಗದಂತೆ ನಗು
ತುಟಿ ತಡೆದು ಮನದನ್ನೆ//ಮುಸಿ ಮುಸಿ ನಗುತಾಳೆ//೨//
ಹಾಯ್...ಮನಸಲಿ ಮಂಡಿಗೆ ನೀ ತಿಂದು
ಮೊಗದಲಿ ಹುಸಿ ಮುನಿಸು ಬಂದು
ಕಡೆಗೆ ನಕ್ಕೇ ಬಿಡುತಾಳೆ ನನ್ನವಳೋ ಇವಳು//ಕೊಂದೆ ಕಣ್ಣಲ್ಲೆ ನನ್ನ//೨//
ಮೂಲ ಹಾಡು ಇಲ್ಲಿದೆ ನೋಡಿ
http://www.youtube.com/watch?v=SFqGQ54WT9Y


Thursday, January 13, 2011

ಮತ್ತೆ ಕೆಲವು ನ್ಯಾನೋಗಳು

ಮೆಳ್ಳ-ಗಣ್ಣು
ಲುಕಿಂಗ್ ಅಟ್ ಲಂಡನ್ ಟಾಕಿಂಗ್ ಅಟ್ ಟೋಕಿಯೋ ಅಂತಾರೆ
ಬಾಯಲ್ಲಿ ಬೆಣ್ಣೆ ಕಂಕ್ಳಲ್ಲಿ ದೊಣ್ಣೆಯ ಛಂದಗಣ್ಣಿಗಿಂತ ನನ್ನದೇ ಖರೆ


ಕುಳ್ಳ
ಕಳ್ಳನ್ನ ನಂಬಿದ್ರೂ ಕುಳ್ಲನ್ನ ನಂಬಬ್ಯಾಡಿ ಅನ್ನೋ ಮಂದಿಗ್ ಪ್ರಶ್ನೆ ನಂದು
ಎತ್ರೆತ್ರ ಕುರ್ಚಿ ಭರ್ತಿ ಚುನಾಯಿಸಿ ಬರೋ ತಾಯ್ಗಂಡ್ರನ್ನ ಕೇಳಿ ಇಂದು


ಮಕಮಲ್ ಟೋಪಿ
ಹೇಳ್ತೀರಲ್ಲಾ ?ಗಾರುಡಿಗ  ಹಾಕ್ತಾನೆ ಹುಷಾರ್ ಎಲ್ಲಾರ್ಗೂ ಮಕಮಲ್ ಟೋಪಿ
ನಾನು ಹೆಚ್ಚಂದ್ರೆ ಹತ್ತು, ಕೋಟ್ಯಾಂತರ ದೋಚಲ್ವೆ ಹಾಕ್ಕೊಂಡು ಗಾಂಧಿ ಟೋಪಿ


ತಿಗಣೆ
ತಾನು ಬದುಕೋಕೆ ಸ್ವಲ್ಪ ಹೀರ್ಕೊಂಡ್ರೆ ರಕ್ತ, ಸಾಯ್ಸೇ ಬಿಡ್ತೀರಾ!!, ಛೀ ತಿಗಣೆ
ಜೀವನ ಪೂರ್ತಿ ನೌಕ್ರಿ ಮಾಡಿ ಪೆನ್ಶನ್ಗೆ ಸತಾಯ್ಸೋವಾಗ ಕಾಣೊಲ್ವೇ ಆ ಬವಣೆ?


ಏನಂತೀರಾ?
ಕಣ್ಕಾಣ್ದೆ ಇದ್ರೆ ಕುರುಡ ಅಂತೀರ, ಕಿವಿ ಕೇಳದೆ ಇದ್ರೆ ಕಿವುಡ
ಎಲ್ಲಾರೆದ್ರುಗೇ ದೋಚೋರ್ನ ಕಂಡೂ ಸುಮ್ನಿರೋನು ಮೂಢ